ಪ್ರಧಾನ ಮಂತ್ರಿಯವರ ಕಛೇರಿ
ಉಜ್ಬೇಕಿಸ್ತಾನ್ ಮತ್ತು ಕಿರ್ಗಿಸ್ ಗಣರಾಜ್ಯದ ಭೇಟಿಗೆ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
ಪ್ರಕಟಣಾ ದಿನಾಂಕ:
29 AUG 2026 8:45AM by PIB Bengaluru
ನಾನು 2026ರ ಆಗಸ್ಟ್ 29ರಿಂದ ಸೆಪ್ಟೆಂಬರ್ 1 ರವರೆಗೆ ಉಜ್ಬೇಕಿಸ್ತಾನ್ ಗಣರಾಜ್ಯ ಮತ್ತು ಕಿರ್ಗಿಸ್ತಾನ ಗಣರಾಜ್ಯಕ್ಕೆ ಭೇಟಿ ನೀಡುತ್ತಿದ್ದೇನೆ.
ಅಧ್ಯಕ್ಷರಾದ ಶವ್ಕತ್ ಮಿರ್ಜಿಯೋಯೆವ್ ಅವರ ಆಹ್ವಾನದ ಮೇರೆಗೆ, ನಾನು ಆಗಸ್ಟ್ 29-30ರಂದು ತಾಷ್ಕೆಂಟ್ ಗೆ ಭೇಟಿ ನೀಡಲಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ, ಭಾರತ-ಉಜ್ಬೇಕಿಸ್ತಾನ್ ವ್ಯೂಹಾತ್ಮಕ ಪಾಲುದಾರಿಕೆಯು ಗಮನಾರ್ಹ ಪ್ರಗತಿಯನ್ನು ಕಂಡಿದೆ. ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಸಂಪರ್ಕ, ರಕ್ಷಣೆ, ಇಂಧನ ಮತ್ತು ವಿಕಸಿತ ಭಾರತ ಮತ್ತು ಯಾಂಗಿ ಉಜ್ಬೇಕಿಸ್ತಾನದ ನಮ್ಮ ಹಂಚಿಕೆಯ ದೃಷ್ಟಿಕೋನಗಳನ್ನು ಮುನ್ನಡೆಸುವ ಕುರಿತು ಅಧ್ಯಕ್ಷ ಮಿರ್ಜಿಯೋಯೆವ್ ಅವರೊಂದಿಗಿನ ನನ್ನ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಎರಡು ದೇಶಗಳನ್ನು ಬೆಸೆಯುವ ನಿಕಟ ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳಿಗೆ ಗೌರವ ಸಲ್ಲಿಸಲು ನಾನು ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯಂಟಲ್ ಸ್ಟಡೀಸ್ ನಲ್ಲಿರುವ ಶಾಸ್ತ್ರಿ ಸ್ಮಾರಕ ಮತ್ತು ಮಹಾತ್ಮ ಗಾಂಧಿ ಕೇಂದ್ರಕ್ಕೆ ಭೇಟಿ ನೀಡುತ್ತೇನೆ.
ಕಿರ್ಗಿಸ್ತಾನ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಸಾದಿರ್ ಝಪರೋವ್ ಅವರ ಆಹ್ವಾನದ ಮೇರೆಗೆ, ಈ ಮಹತ್ವದ ಸಂಘಟನೆಯ 25ನೇ ವರ್ಷಾಚರಣೆಯ ಅಂಗವಾಗಿ ನಡೆಯಲಿರುವ 26ನೇ ಎಸ್.ಸಿ.ಒ. ಶೃಂಗಸಭೆಯಲ್ಲಿ ಭಾಗವಹಿಸಲು ತಾಷ್ಕೆಂಟ್ ನಿಂದ ನಾನು ಬಿಷ್ಕೆಕ್ ಗೆ ಪ್ರಯಾಣಿಸಲಿದ್ದೇನೆ. ಭಾರತವು 2017ರಿಂದ ಎಸ್.ಸಿ.ಒ.ದ ಸಕ್ರಿಯ ಮತ್ತು ರಚನಾತ್ಮಕ ಸದಸ್ಯ ರಾಷ್ಟ್ರವಾಗಿದೆ. ಭದ್ರತೆ, ಸಂಪರ್ಕ ಮತ್ತು ಅವಕಾಶಗಳಲ್ಲಿ ನೆಲೆಯಾಗಿರುವ ಈ ಪ್ರದೇಶದ ಬಗ್ಗೆ ಭಾರತದ ದೃಷ್ಟಿಕೋನವನ್ನು ಮುನ್ನಡೆಸಲು ಮತ್ತು ನಮ್ಮ ನೆರೆಹೊರೆಯಲ್ಲಿ ಮತ್ತು ಅದರಾಚೆಗೆ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ ಹಾಕುತ್ತಿರುವ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದದಿಂದ ಮುಕ್ತವಾದ ಪ್ರದೇಶಕ್ಕಾಗಿ ಸಹ ಸದಸ್ಯರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಧ್ಯಕ್ಷರಾದ ಝಪರೋವ್ ಮತ್ತು ಇತರ ಎಸ್ ಸಿ ಒ ನಾಯಕರನ್ನು ಭೇಟಿ ಮಾಡಲು ಮತ್ತು ಭಾರತವು ಅಪಾರ ಗೌರವದಿಂದ ಹೊಂದಿರುವ ಮಧ್ಯ ಏಷ್ಯಾದ ಶ್ರೀಮಂತ ಜೀವಂತ ಪರಂಪರೆಯ ಆಚರಣೆಯಾದ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ನಾನು ಎದುರು ನೋಡುತ್ತಿದ್ದೇನೆ.
ಈ ಭೇಟಿಯು ಮಧ್ಯ ಏಷ್ಯಾದಲ್ಲಿ ಭಾರತದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸುತ್ತದೆ. ಈ ಪ್ರದೇಶದೊಂದಿಗಿನ ನಮ್ಮ ನಾಗರಿಕತೆಯ ಸಂಪರ್ಕವನ್ನು ಗಾಢವಾಗಿಸುತ್ತದೆ ಮತ್ತು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ನಮ್ಮ ಹಂಚಿಕೆಯ ಅನ್ವೇಷಣೆಯನ್ನು ಮುನ್ನಡೆಸುತ್ತದೆ ಎಂದು ನನಗೆ ವಿಶ್ವಾಸವಿದೆ.
*****
(ಪ್ರಕಟಣೆ ಐ.ಡಿ.: 2304516)
ವಿಸಿಟರ್ ಕೌಂಟರ್ : 6