ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2025ರ ಬ್ಯಾಚ್ ನ ಐ ಎಫ್ ಎಸ್ ತರಬೇತಿ ನಿರತ ಅಧಿಕಾರಿಗಳಿಂದ ಪ್ರಧಾನಮಂತ್ರಿ ಭೇಟಿ


ತಮ್ಮ ನಿಯೋಜಿತ ದೇಶಗಳಲ್ಲಿ ತಳಮಟ್ಟದ ಬಲವಾದ ಸಂಪರ್ಕವನ್ನು ಸಾಧಿಸಲು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಭಾರತದ ಬಾಂಧವ್ಯವನ್ನು ಆಳವಾಗಿಸಲು ಯುವ ರಾಜತಾಂತ್ರಿಕರಿಗೆ ಪ್ರಧಾನಮಂತ್ರಿ ಕರೆ

ವಿಶ್ವದೊಂದಿಗೆ ಭಾರತದ ಆರ್ಥಿಕ ತೊಡಗಿಸಿಕೊಳ್ಳುವಿಕೆಗೆ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸಲು ತರಬೇತಿ ನಿರತ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಸೂಚನೆ

ಭಾರತೀಯ ದೂತಾವಾಸಗಳ ಡಿಜಿಟಲ್ ಉಪಸ್ಥಿತಿಯನ್ನು ಬಲಪಡಿಸುವ ಮಹತ್ವವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು

ಭಾರತದ ನಾಗರಿಕ, ಸಾಂಸ್ಕೃತಿಕ ಮತ್ತು ಭೌಗೋಳಿಕ ಶಕ್ತಿಗಳನ್ನು ಪ್ರದರ್ಶಿಸುವ ಮೂಲಕ ಭಾರತವನ್ನು ಜಾಗತಿಕವಾಗಿ ಮತ್ತಷ್ಟು ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಲು ಶ್ರಮಿಸುವಂತೆ ತರಬೇತಿ ನಿರತ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಆಗ್ರಹ

प्रविष्टि तिथि: 24 AUG 2026 7:13PM by PIB Bengaluru

ಭಾರತೀಯ ವಿದೇಶಾಂಗ ಸೇವೆಯ (ಐ ಎಫ್ ಎಸ್) 2025ರ ಬ್ಯಾಚ್ ನ ತರಬೇತಿ ನಿರತ ಅಧಿಕಾರಿಗಳು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು 'ಸೇವಾ ತೀರ್ಥ'ದಲ್ಲಿ ಭೇಟಿಯಾದರು. ಈ ತಂಡವು ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 50 ಐಎಫ್ ಎಸ್ ತರಬೇತಿ ನಿರತ ಅಧಿಕಾರಿಗಳನ್ನು ಒಳಗೊಂಡಿತ್ತು.

ಮಾತುಕತೆಯ ಸಮಯದಲ್ಲಿ, ಪ್ರಧಾನಮಂತ್ರಿಯವರು ಯುವ ರಾಜತಾಂತ್ರಿಕರಿಗೆ ತಾವು ನಿಯೋಜನೆಗೊಳ್ಳುವ ದೇಶಗಳಲ್ಲಿ ತಳಮಟ್ಟದ ಬಲವಾದ ಸಂಪರ್ಕವನ್ನು ಸಾಧಿಸಲು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಭಾರತದ ಬಾಂಧವ್ಯವನ್ನು ಆಳವಾಗಿಸಲು ಕರೆ ನೀಡಿದರು. ಭಾರತೀಯ ದೂತಾವಾಸಗಳು ಕೇವಲ ಸರ್ಕಾರಗಳು ಮತ್ತು ಸಂಸ್ಥೆಗಳೊಂದಿಗೆ ಮಾತ್ರವಲ್ಲದೆ, ಸಮುದಾಯ ಮಟ್ಟದಲ್ಲಿ ಜನರೊಂದಿಗೂ ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಒತ್ತು ನೀಡಿದರು. ಸಾಂಪ್ರದಾಯಿಕ ರಾಜತಾಂತ್ರಿಕ ವಲಯಗಳನ್ನು ಮೀರಿ ತಮ್ಮ ಜಾಲವನ್ನು ವಿಸ್ತರಿಸಲು ಮತ್ತು ಜನರೊಂದಿಗೆ ತೊಡಗಿಸಿಕೊಳ್ಳುವಿಕೆಯನ್ನು ಆಳವಾಗಿಸಲು ಅವರು ತರಬೇತಿ ನಿರತ ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು. ಭಾರತದ ಜಾಗತಿಕ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸಲು ಭಾರತದ ನಾಗರಿಕ ಶಕ್ತಿಯನ್ನು ತಂತ್ರಜ್ಞಾನ, ನಾವೀನ್ಯತೆ ಮತ್ತು ಪರಿಣಾಮಕಾರಿ ಸಂವಹನದೊಂದಿಗೆ ಸಂಯೋಜಿಸಲು ಪ್ರಧಾನಮಂತ್ರಿಯವರು ಅವರಿಗೆ ಕರೆ ನೀಡಿದರು.

ವಿಶ್ವದೊಂದಿಗೆ ಭಾರತದ ಆರ್ಥಿಕ ತೊಡಗಿಸಿಕೊಳ್ಳುವಿಕೆಗೆ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸಲು ಪ್ರಧಾನಿಯವರು ತರಬೇತಿ ನಿರತ ಅಧಿಕಾರಿಗಳಿಗೆ ಕರೆ ನೀಡಿದರು. ಭಾರತೀಯ ದೂತಾವಾಸಗಳ ಡಿಜಿಟಲ್ ಉಪಸ್ಥಿತಿಯನ್ನು ಬಲಪಡಿಸುವ ಮಹತ್ವವನ್ನು ಅವರು ಒತ್ತುಕೊಟ್ಟು ಹೇಳಿದರು. ಜಾ;ಲತಾಣ , ವೆಬ್ ಸೈಟ್ ಎಂಬುದು ಹೆಚ್ಚಾಗಿ ಜನರು ಒಂದು ಸಂಸ್ಥೆಯೊಂದಿಗೆ ಸಂವಹನ ನಡೆಸುವ ಮೊದಲ ದ್ವಾರವಾಗಿರುತ್ತದೆ ಎಂದು ಅವರು ಹೇಳಿದರು ಮತ್ತು ರಾಜತಾಂತ್ರಿಕ ಹಾಗೂ ಇತರ ಸೇವೆಗಳ ವಿತರಣೆಯನ್ನು ಹೆಚ್ಚು ಸುಲಭ, ಸ್ಪಂದನಾತ್ಮಕ ಮತ್ತು ನಾಗರಿಕ ಕೇಂದ್ರಿತವಾಗಿಸಲು ತಂತ್ರಜ್ಞಾನದ ಹೆಚ್ಚಿನ ಬಳಕೆಗೆ ಕರೆ ನೀಡಿದರು.

ಭಾರತದ ನಾಗರಿಕ, ಸಾಂಸ್ಕೃತಿಕ ಮತ್ತು ಭೌಗೋಳಿಕ ಶಕ್ತಿಗಳನ್ನು ಪ್ರದರ್ಶಿಸುವ ಮೂಲಕ ಭಾರತವನ್ನು ಜಾಗತಿಕವಾಗಿ ಮತ್ತಷ್ಟು ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಲು ಶ್ರಮಿಸುವಂತೆ ಪ್ರಧಾನಮಂತ್ರಿಯವರು ತರಬೇತಿ ನಿರತ ಅಧಿಕಾರಿಗಳಿಗೆ ಆಗ್ರಹಿಸಿದರು. ವಿಶ್ವದಾದ್ಯಂತ ಯುವಜನರಲ್ಲಿ ಭಾರತದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸಲು "ಭಾರತ್ ಕೊ ಜಾನಿಯೇ" (ಭಾರತವನ್ನು ತಿಳಿಯಿರಿ) ರಸಪ್ರಶ್ನೆಯನ್ನು ಬಳಸಿಕೊಳ್ಳಲು ಅವರು ಸಲಹೆ ನೀಡಿದರು ಮತ್ತು ಇಂತಹ ಉಪಕ್ರಮಗಳನ್ನು ಹೆಚ್ಚು ಆಕರ್ಷಕವಾಗಿಸಲು ಕೃತಕ ಬುದ್ಧಿಮತ್ತೆ  ಮತ್ತು ಗೇಮಿಂಗ್ ಬಳಕೆಯನ್ನು ಪ್ರೋತ್ಸಾಹಿಸಿದರು.

ತರಬೇತಿ ನಿರತ ಅಧಿಕಾರಿಗಳು ತಮ್ಮ ತರಬೇತಿ ಮತ್ತು 'ಭಾರತ ದರ್ಶನ'ದ ಅನುಭವಗಳನ್ನು ಹಂಚಿಕೊಂಡರು. ವಿಶ್ವದೊಂದಿಗಿನ ಭಾರತದ ನಾಗರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಅರಿತುಕೊಳ್ಳುವ ಮಹತ್ವದ ಬಗ್ಗೆಯೂ ಅವರು ಮಾತನಾಡಿದರು.

 

*****


(रिलीज़ आईडी: 2302929) आगंतुक पटल : 10
इस विज्ञप्ति को इन भाषाओं में पढ़ें: Malayalam , Marathi , हिन्दी , Gujarati , Tamil , Assamese , English , Urdu , Telugu