ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ನ್ಯಾಯಸಮ್ಮತ ವ್ಯಾಪಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು 'ಮೇಕ್ ಇನ್ ಇಂಡಿಯಾ'ವನ್ನು ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಕರೆ
ಒಂಬತ್ತು ಮುಕ್ತ ವ್ಯಾಪಾರ ಒಪ್ಪಂದಗಳು ಭಾರತೀಯ ಉದ್ಯಮ ಮತ್ತು ವ್ಯವಹಾರಗಳಿಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ತೆರೆಯುತ್ತವೆ: ಶ್ರೀ ಗೋಯಲ್
2047ರ ವೇಳೆಗೆ ಭಾರತದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಆಶಯವು ವ್ಯವಹಾರೋದ್ಯಮಗಳಿಗೆ ಪ್ರಮುಖ ಅವಕಾಶಗಳನ್ನು ಒದಗಿಸುತ್ತದೆ: ಶ್ರೀ ಗೋಯಲ್
प्रविष्टि तिथि:
12 AUG 2026 2:26PM by PIB Bengaluru
ಭಾರತೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಈ ಹೊತ್ತಿನಲ್ಲಿ, ನ್ಯಾಯಸಮ್ಮತ ವ್ಯಾಪಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ, ಮರುಬಳಕೆಯನ್ನು ಉತ್ತೇಜಿಸುವಂತೆ ಮತ್ತು ಆವರ್ತಕ ಆರ್ಥಿಕತೆಯನ್ನು ಪ್ರೋತ್ಸಾಹಿಸುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಭಾರತೀಯ ಉದ್ಯಮಗಳು ಮತ್ತು ನಾಗರಿಕರನ್ನು ಒತ್ತಾಯಿಸಿದರು.
ನವದೆಹಲಿಯ 'ಭಾರತ್ ಮಂಟಪ'ದಲ್ಲಿ ನಡೆದ ‘ಭಾರತೀಯ ವ್ಯಾಪಾರ ಮಹೋತ್ಸವ’ದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗೋಯಲ್, ಬೆಳೆಯುತ್ತಿರುವ ಭಾರತದ ಜಾಗತಿಕ ಆರ್ಥಿಕ ಪಾಲ್ಗೊಳ್ಳುವಿಕೆಯನ್ನು ಎತ್ತಿತೋರಿಸಿದರು. ಇದೇವೇಳೆ, ಒಂಬತ್ತು ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಭಾರತೀಯ ಕೈಗಾರಿಕೆ ಮತ್ತು ವ್ಯವಹಾರಗಳಿಗೆ ಮಾರುಕಟ್ಟೆಗಳನ್ನು ತೆರೆಯಲಾಗಿದೆ ಎಂದು ಗಮನಸೆಳೆದರು. ಅಂತರರಾಷ್ಟ್ರೀಯ ವ್ಯಾಪಾರವು ಈಗ ಭಾರತಕ್ಕೆ ಆದ್ಯತೆಯ ಪ್ರವೇಶವನ್ನು ಒದಗಿಸುತ್ತದೆ ಎಂದು ಹೇಳಿದ ಅವರು, ಭಾರತೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುವಲ್ಲಿ ಭಾರತೀಯ 'ಎಂಎಸ್ಎಂಇ'ಗಳು, ಉದ್ಯೋಗಿಗಳು, ಮೀನುಗಾರರು, ರೈತರು, ಉದ್ಯಮಿಗಳು ಮತ್ತು ಸೇವಾ ವಲಯದ ಕೊಡುಗೆಯನ್ನು ಶ್ಲಾಘಿಸಿದರು.
ಭಾರತದ ಗುಣಮಟ್ಟ, ವಿನ್ಯಾಸ ಸಾಮರ್ಥ್ಯಗಳು ಮತ್ತು ಬ್ರ್ಯಾಂಡ್ ಅನ್ನು ಗೌರವಿಸುವ ಮೂಲಕ 'ಮೇಕ್ ಇನ್ ಇಂಡಿಯಾ' ಬ್ರ್ಯಾಂಡ್ ಅನ್ನು ಬಲಪಡಿಸಲು ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ ಎಂದು ಶ್ರೀ ಗೋಯಲ್ ಕರೆ ನೀಡಿದರು. ದೇಶವು 2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಆಶಯದತ್ತ ಸಾಗುತ್ತಿರುವಾಗ, ಪ್ರಸ್ತುತ ಭಾರತದ ಸುಮಾರು 4 ಟ್ರಿಲಿಯನ್ ಡಾಲರ್ ಆರ್ಥಿಕ ಗಾತ್ರವು ದೊಡ್ಡ ಅವಕಾಶವನ್ನು ಪ್ರಸ್ತುತಪಡಿಸುತ್ತದೆ ಎಂದು ಅವರು ಹೇಳಿದರು. ಇಡೀ ಪ್ರಪಂಚವು ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಬಯಸುತ್ತಿದೆ ಎಂದ ಅವರು,ಅಂತಹ ದೊಡ್ಡ ಬೆಳವಣಿಗೆಯ ಅವಕಾಶಕ್ಕೆ ಉದ್ಯಮಗಳು, ಉದ್ಯಮಿಗಳು ಮತ್ತು ನಾಗರಿಕರ ಸಾಮೂಹಿಕ ಭಾಗವಹಿಸುವಿಕೆ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಭಾರತದ ರಫ್ತು ಬೆಳವಣಿಗೆಯ ಬಗ್ಗೆ ಗಮನ ಸೆಳೆದ ಸಚಿವರು, ಕಳೆದ ವರ್ಷ ಸರಕು ಮತ್ತು ಸೇವೆಗಳ ರಫ್ತು 863 ಟ್ರಿಲಿಯನ್ ಡಾಲರ್ಗಳ ದಾಖಲೆಯ ಮಟ್ಟವನ್ನು ತಲುಪಿದೆ, ಇದರಲ್ಲಿ 442 ಟ್ರಿಲಿಯನ್ ಡಾಲರ್ಗಳ ಸರಕು ರಫ್ತು ಮತ್ತು 421 ಟ್ರಿಲಿಯನ್ ಡಾಲರ್ಗಳ ಸೇವಾ ರಫ್ತು ಸೇರಿದೆ ಎಂದು ಹೇಳಿದರು. ಕಳೆದ ಆರು ವರ್ಷಗಳಲ್ಲಿ ರಫ್ತುಗಳು ಸುಮಾರು 73 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿವೆ ಮತ್ತು ಪ್ರಸಕ್ತ ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ರಫ್ತು ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು. ಪ್ರಸಕ್ತ ವರ್ಷದ ಏಪ್ರಿಲ್ನಿಂದ ಜುಲೈವರೆಗಿನ ಮೊದಲ ನಾಲ್ಕು ತಿಂಗಳುಗಳಲ್ಲಿ ರಫ್ತುಗಳು ಶೇಕಡಾ 15 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ ಎಂದು ಅವರು ಮಾಹಿತಿ ನೀಡಿದರು.
ಸ್ವಾವಲಂಬನೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಜೊತೆಜೊತೆಯಾಗಿ ಸಾಗುತ್ತವೆ ಎಂದು ಶ್ರೀ ಗೋಯಲ್ ಒತ್ತಿ ಹೇಳಿದರು. ನಾಗರಿಕರು ಸ್ವತಃ ಬದಲಾವಣೆಯ ಭಾಗವಾಗಬೇಕು ಮತ್ತು ದೇಶದ ಸ್ವಾವಲಂಬನೆಯ ಪಯಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು. 'ಡಿಜಿಟಲ್ ಇಂಡಿಯಾ’, 'ಸ್ಟಾರ್ಟ್ಅಪ್ ಇಂಡಿಯಾ’, 'ಸ್ಟ್ಯಾಂಡ್-ಅಪ್ ಇಂಡಿಯಾ' ಮತ್ತು ಬೃಹತ್ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ 2014ರಿಂದ ಈಚೆಗೆ ಕೈಗೊಂಡ ವಿವಿಧ ಉಪಕ್ರಮಗಳನ್ನು ಅವರು ಎತ್ತಿ ತೋರಿಸಿದರು, ಇವು ಕೈಗಾರಿಕೆ ಮತ್ತು ವ್ಯವಹಾರವನ್ನು ಬಲಪಡಿಸಲು ಮತ್ತು ಯುವಕರಿಗೆ ಅವಕಾಶಗಳನ್ನು ಸೃಷ್ಟಿಸಲು ಕೊಡುಗೆ ನೀಡಿವೆ ಎಂದರು.
'ಸ್ವದೇಶಿ' ಭಾರತೀಯ ನಾಗರಿಕರ ರಕ್ತ, ಬೆವರು ಮತ್ತು ಕಣ್ಣೀರಿನಿಂದ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು. ಸ್ಥಳೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ಸೀಮಿತ ಮಾರುಕಟ್ಟೆಗಳನ್ನು ಮೀರಿ ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುವಂತೆ ಅವರು ಭಾರತೀಯ ಉದ್ಯಮಗಳಿಗೆ ಕರೆ ನೀಡಿದರು. ಭಾರತೀಯ ಉತ್ಪನ್ನಗಳಲ್ಲಿ ಭಾರತೀಯ ಗ್ರಾಹಕರ ಹೆಚ್ಚಿನ ಭಾಗವಹಿಸುವಿಕೆಯು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ಉತ್ಪಾದನೆ ಮತ್ತು ವ್ಯಾಪಾರವನ್ನು ಹೆಚ್ಚಿಸುತ್ತದೆ, ಆರ್ಥಿಕತೆಯ ಪ್ರಮಾಣವನ್ನು ಸಕ್ರಿಯಗೊಳಿಸುತ್ತದೆ ಮತ್ತು ಭಾರತೀಯ ವ್ಯವಹಾರಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುತ್ತದೆ ಎಂದು ಅವರು ಹೇಳಿದರು.
ಭಾರತದ ಜನರು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಮತ್ತು ಬಲವಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಸಚಿವರು ಹೇಳಿದರು. ಪ್ರಯಾಣಿಕರು, ಎಂಎಸ್ಎಂಇಗಳು, ನವೋದ್ಯಮಗಳು, ರೈತರು, ಮೀನುಗಾರರು, ಕಾರ್ಮಿಕರು ಮತ್ತು ಉದ್ಯಮಿಗಳ ಸಾಮೂಹಿಕ ಶಕ್ತಿಯನ್ನು ಅವರು ಎತ್ತಿ ತೋರಿಸಿದರು. ಈ ಶಕ್ತಿಯು ಭಾರತವು ತನ್ನ ಉತ್ಪನ್ನಗಳು ಮತ್ತು ಸೇವೆಗಳನ್ನು ಜಗತ್ತಿಗೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ದೇಶದ ಅಭಿವೃದ್ಧಿ ಪಯಣದಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಕರೆ ನೀಡಿದ ಶ್ರೀ ಗೋಯಲ್, ಸುಧಾರಣಾ ಪ್ರಕ್ರಿಯೆಯು ಸುಧಾರಣೆ, ರೂಪಾಂತರ ಮತ್ತು ಕಾರ್ಯಕ್ಷಮತೆಯನ್ನು ಒಳಗೊಂಡಿರುತ್ತದೆ ಮತ್ತು ಎಲ್ಲಾ ಪಾಲುದಾರರು ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಮತ್ತು ತಮ್ಮ ಕೆಲಸದ ಮೂಲಕ ಭಾರತವನ್ನು ಜಗತ್ತಿಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಹೇಳಿದರು.
ವ್ಯವಹಾರಗಳು ಮತ್ತು ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸಲು, ಉತ್ತಮ ಉತ್ಪಾದನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ನ್ಯಾಯಸಮ್ಮತ ವ್ಯಾಪಾರ ಪದ್ಧತಿಗಳನ್ನು ಅನುಸರಿಸಲು ಶ್ರೀ ಗೋಯಲ್ ಕರೆ ನೀಡಿದರು. ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಸುಸ್ಥಿರತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು ಮತ್ತು ಮರುಬಳಕೆ, ಮರುಪಯೋಗ ಮತ್ತು ಆವರ್ತಕ ಆರ್ಥಿಕತೆಯ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಕರೆ ನೀಡಿದರು.
ಭಾರತದ ಪಯಣವು 'ಮೇಕ್ ಇನ್ ಇಂಡಿಯಾ'ಗೆ ಕೇವಲ ಲೇಬಲ್ ನೀಡುವುದಷ್ಟೇ ಅಲ್ಲ, ಬದಲಿಗೆ ಭಾರತದ ಗುಣಮಟ್ಟ, ವಿನ್ಯಾಸ ಸಾಮರ್ಥ್ಯಗಳು ಮತ್ತು ಬ್ರ್ಯಾಂಡ್ಗೆ ಗೌರವವನ್ನು ತಂದುಕೊಡಬೇಕು ಎಂದು ಸಚಿವರು ಹೇಳಿದರು. ಈ ಸಾಮೂಹಿಕ ಪ್ರಯತ್ನಗಳ ಮೂಲಕ ಭಾರತೀಯ ಉತ್ಪನ್ನಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳು ಜಾಗತಿಕವಾಗಿ ವಿಶ್ವಾಸಗಳಿಸುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
'ಜಿಡಿಪಿ'ಯ ಬೆಳವಣಿಗೆಯು ನೈಸರ್ಗಿಕವಾಗಿ ಹೆಚ್ಚಿನ ಉತ್ಪಾದನೆಗೆ ಕಾರಣವಾಗುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಶ್ರೀ ಗೋಯಲ್ ಹೇಳಿದರು. ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಮೂಲಕ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಅಥವಾ ಹೊಸ ಕೌಶಲ್ಯಗಳನ್ನು ಪಡೆದುಕೊಂಡ ನಂತರ ಭಾರತಕ್ಕೆ ಮರಳುವ ಯುವಕರು ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಹೊಸ ಪರಿಹಾರಗಳನ್ನು ತರುತ್ತಾರೆ ಎಂದು ಅವರು ಗಮನ ಸೆಳೆದರು.
ಭಾರತೀಯ ಉದ್ಯಮಗಳು, ಉದ್ಯಮಿಗಳು, ಎಂಎಸ್ಎಂಇಗಳು, ರೈತರು, ಮೀನುಗಾರರು ಮತ್ತು ಕಾರ್ಮಿಕರ ಸಾಮೂಹಿಕ ಪ್ರಯತ್ನಗಳು ದೇಶದ ಬೆಳವಣಿಗೆಗೆ ಕೊಡುಗೆ ನೀಡುತ್ತವೆ; ಜೊತೆಗೆ ಜಾಗತಿಕ ಆರ್ಥಿಕತೆಯಲ್ಲಿ ಭಾರತವು ಬಲವಾದ ಪಾಲುದಾರನಾಗಿ ಹೊರಹೊಮ್ಮಲು ಸಹಾಯ ಮಾಡುತ್ತವೆ ಎಂದು ಅವರು ಒತ್ತಿ ಹೇಳಿದರು.
*****
(रिलीज़ आईडी: 2298213)
आगंतुक पटल : 16