ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಮೀನುಗಾರಿಕೆ ಮೌಲ್ಯ ಸರಪಳಿಗಳನ್ನು ಬಲಪಡಿಸಲು ಮತ್ತು ಭಾರತದ ಜಾಗತಿಕ ಕಡಲ ಆಹಾರ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ವಿಶಾಖಪಟ್ಟಣಂನಲ್ಲಿ ಕಡಲ ಆಹಾರ ರಫ್ತು ಕುರಿತು ರಾಷ್ಟ್ರೀಯ ಕಾರ್ಯಾಗಾರ ಆಯೋಜನೆ
ಪತ್ತೆಹಚ್ಚುವಿಕೆ, ಸುಸ್ಥಿರ ಪ್ರಮಾಣೀಕರಣ, ಮೌಲ್ಯವರ್ಧನೆ, ರಫ್ತು ವೈವಿಧ್ಯೀಕರಣ ಮತ್ತು ಹೆಚ್ಚಿನ ಮೌಲ್ಯದ ಆಳ ಕಡಲ ಸಂಪನ್ಮೂಲಗಳ ಬಳಕೆಯ ಕುರಿತು ತಾಂತ್ರಿಕ ಗೋಷ್ಠಿಗಳಲ್ಲಿ ಚರ್ಚೆ
प्रविष्टि तिथि:
07 JUN 2026 4:21PM by PIB Bengaluru
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ, ಮೀನುಗಾರಿಕೆ ಇಲಾಖೆಯು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಹಯೋಗದೊಂದಿಗೆ ಹಾಗೂ ಆಂಧ್ರಪ್ರದೇಶ ಸರ್ಕಾರದ ಬೆಂಬಲದೊಂದಿಗೆ 2026ರ ಜೂನ್ 5 ಮತ್ತು 6 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕಡಲ ಆಹಾರ ರಫ್ತು ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಕಾರ್ಯಾಗಾರದ ಮೊದಲ ದಿನದಂದು ಆಂಧ್ರಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ನಾರಾ ಚಂದ್ರಬಾಬು ನಾಯ್ಡು; ಗೌರವಾನ್ವಿತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್; ಗೌರವಾನ್ವಿತ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್; ಭಾರತ ಸರ್ಕಾರದ ಗೌರವಾನ್ವಿತ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ಮತ್ತು ಭಾರತ ಸರ್ಕಾರದ ಗೌರವಾನ್ವಿತ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರು ಉಪಸ್ಥಿತರಿದ್ದರು.

ಈ ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕಡಲ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (MPEDA), ರಫ್ತು ತಪಾಸಣೆ ಮಂಡಳಿ (EIC), ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (NFDB), ನಬಾರ್ಡ್ (NABARD), ಎನ್ಸಿಡಿಸಿ (NCDC), ಎನ್ಸಿಇಎಲ್ (NCEL), ಎಸ್ಎಫ್ಎಸಿ (SFAC) ಮತ್ತು ಇನ್ವೆಸ್ಟ್ ಇಂಡಿಯಾ ಸೇರಿದಂತೆ ಪ್ರಮುಖ ರಾಷ್ಟ್ರೀಯ ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡಿದ್ದವು. ಕಡಲ ಆಹಾರ ರಫ್ತು ಪರಿಸರ ವ್ಯವಸ್ಥೆಯ ಸಮಗ್ರ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಕಡಲ ಆಹಾರ ರಫ್ತುದಾರರು, ಉದ್ಯಮ ಸಂಘಗಳು, ಸಂಸ್ಕಾರಕರು, ನವೋದ್ಯಮಗಳು (Start-ups) ಮತ್ತು ಮೌಲ್ಯ ಸರಪಳಿಯ ಇತರ ಪಾಲುದಾರರು ಸಹ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಕಡಲ ಆಹಾರ ರಫ್ತು ಮಾಡುವ ರಾಷ್ಟ್ರವನ್ನಾಗಿ ರೂಪಿಸುವ ಕುರಿತು ಚರ್ಚೆಗಳಲ್ಲಿ ಒತ್ತು ನೀಡಲಾಯಿತು. ಭಾರತದ ಜಾಗತಿಕ ಕಡಲ ಆಹಾರ ಬ್ರಾಂಡ್ ಅನ್ನು ಬಲಪಡಿಸಲು ಕೇವಲ ಪ್ರಮಾಣ-ಆಧಾರಿತ ರಫ್ತಿನಿಂದ ಮೌಲ್ಯವರ್ಧಿತ, ಉತ್ತಮ ಗುಣಮಟ್ಟದ ಉತ್ಪನ್ನಗಳ ಕಡೆಗೆ ಪರಿವರ್ತನೆ ಹೊಂದುವುದು, ಜೊತೆಗೆ ನಾವೀನ್ಯತೆ, ಸುಧಾರಿತ ತಂತ್ರಜ್ಞಾನಗಳು ಮತ್ತು ದೃಢವಾದ ಪತ್ತೆಹಚ್ಚುವಿಕೆ ವ್ಯವಸ್ಥೆಗಳನ್ನು ಉತ್ತೇಜಿಸುವ ಪ್ರಮುಖ ಕ್ಷೇತ್ರಗಳನ್ನು ಇದರಲ್ಲಿ ಒಳಗೊಳ್ಳಲಾಗಿತ್ತು. ದಕ್ಷ ಮತ್ತು ನಿಯಮಬದ್ಧ ವ್ಯಾಪಾರವನ್ನು ಖಚಿತಪಡಿಸಿಕೊಳ್ಳಲು ಕೋಲ್ಡ್ ಚೈನ್, ಏರ್ ಕಾರ್ಗೋ ಮತ್ತು ಕ್ವಾರಂಟೈನ್ ಸೌಲಭ್ಯಗಳು ಸೇರಿದಂತೆ ರಫ್ತು ಮೂಲಸೌಕರ್ಯ ಹಾಗೂ ಲಾಜಿಸ್ಟಿಕ್ಸ್ ಅನ್ನು ವಿಸ್ತರಿಸುವ ಅಗತ್ಯತೆಯನ್ನೂ ಚರ್ಚೆಗಳು ಹೈಲೈಟ್ ಮಾಡಿದವು.
ಒಟ್ಟು ಉತ್ಪಾದನೆಗೆ ಗಮನಾರ್ಹ ಕೊಡುಗೆ ನೀಡುವ ಒಳನಾಡು ಮೀನುಗಾರಿಕೆಯಿಂದ ರಫ್ತನ್ನು ಹೆಚ್ಚಿಸುವ ಮಹತ್ವ ಮತ್ತು 'ರೆಡಿ ಟು ಈಟ್' (ಬಳಕೆಗೆ ಸಿದ್ಧವಿರುವ) ಉತ್ಪನ್ನಗಳು ಹಾಗೂ ಹೆಚ್ಚಿನ ಮೌಲ್ಯದ ತಳಿಗಳಂತಹ ಉದಯೋನ್ಮುಖ ವಿಭಾಗಗಳಲ್ಲಿನ ಅಪ್ರತಿಮ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಒತ್ತಿಹೇಳಲಾಯಿತು. ಸಚಿವರು ಸುಸ್ಥಿರತೆ, ಗುಣಮಟ್ಟದ ಭರವಸೆ ಮತ್ತು ನಿಯಂತ್ರಕ ನಿಯಮಗಳ ಪಾಲನೆ ಹಾಗೂ ಸಂಸ್ಕರಣಾ ಸಾಮರ್ಥ್ಯ ಮತ್ತು ಮೌಲ್ಯ ಸರಪಳಿಗಳನ್ನು ಬಲಪಡಿಸುವ ಬಗ್ಗೆ ಒತ್ತು ನೀಡಿದರು. ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಸಿದ್ಧವಿರುವ ಕಡಲ ಆಹಾರ ರಫ್ತು ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಇಡೀ ಸರ್ಕಾರದ ವ್ಯವಸ್ಥಿತ ವಿಧಾನವನ್ನು ಅಳವಡಿಸಿಕೊಳ್ಳುವುದು, ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಅನ್ನು ಸುಧಾರಿಸುವುದು ಮತ್ತು ಹೂಡಿಕೆ, ನಾವೀನ್ಯತೆ ಹಾಗೂ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಬಲವಾದ ಉತ್ತೇಜನವನ್ನು ನೀಡಲಾಯಿತು.

ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ಸಾಗರ್ ಮೆಹ್ರಾ ಅವರು ಉತ್ಪಾದನೆಯನ್ನು ಹೆಚ್ಚಿಸುವುದು, ಪತ್ತೆಹಚ್ಚುವಿಕೆ ಮತ್ತು ಪ್ರಮಾಣೀಕರಣ ಚೌಕಟ್ಟುಗಳನ್ನು ಬಲಪಡಿಸುವುದು ಹಾಗೂ ಪ್ರಸ್ತುತ ಸುಧಾರಣೆಗಳು ಮತ್ತು ಪ್ರಮುಖ ಯೋಜನೆಗಳ ಮೂಲಕ ಆಳ ಸಮುದ್ರ ಮತ್ತು ಇಇಜೆಡ್ (EEZ) ಸಂಪನ್ಮೂಲಗಳಲ್ಲಿನ ಬಳಕೆಯಾಗದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಬಗ್ಗೆ ಒತ್ತು ನೀಡಿದರು. ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಜಯ್ ಭಾದೂ ಅವರು ಭಾರತದ ರಫ್ತು ಕಾರ್ಯಕ್ಷಮತೆ, ಬದಲಾಗುತ್ತಿರುವ ಜಾಗತಿಕ ಮಾರುಕಟ್ಟೆಯ ಚಲನಶೀಲತೆ ಮತ್ತು ಕಡಲ ಆಹಾರ ರಫ್ತನ್ನು ವಿಸ್ತರಿಸುವಲ್ಲಿ ಮುಕ್ತ ವ್ಯಾಪಾರ ಒಪ್ಪಂದಗಳ (FTAs) ಪಾತ್ರ, ಮಾರುಕಟ್ಟೆ ವೈವಿಧ್ಯೀಕರಣ ಮತ್ತು ವರ್ಧಿತ ಸ್ಪರ್ಧಾತ್ಮಕತೆಯನ್ನು ವಿವರಿಸಿದರು. ಆಹಾರ ಸಂಸ್ಕಾರಕ ಕೈಗಾರಿಕೆಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಡಿ. ಪ್ರವೀಣ್ ಅವರು ಸಂಸ್ಕರಣೆ ಮತ್ತು ಮೌಲ್ಯವರ್ಧನೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿಹೇಳಿದರು, ಜಾಗತಿಕ ಮಾನದಂಡಗಳಿಗೆ ಹೋಲಿಸಿದರೆ ಇರುವ ಕೊರತೆಗಳನ್ನು ಎತ್ತಿ ತೋರಿಸಿದರು ಮತ್ತು ರಫ್ತು ಮೌಲ್ಯದ ಸಾಕ್ಷಾತ್ಕಾರವನ್ನು ಸುಧಾರಿಸಲು ಕೋಲ್ಡ್ ಚೈನ್ ಅಭಿವೃದ್ಧಿ, ಸಂಸ್ಕರಣಾ ಮೂಲಸೌಕರ್ಯ ಮತ್ತು ಮೌಲ್ಯ ಸರಪಳಿ ಏಕೀಕರಣವನ್ನು ಬೆಂಬಲಿಸುವ ಪ್ರಮುಖ ಯೋಜನೆಗಳನ್ನು ವಿವರಿಸಿದರು.
ಮಧ್ಯಪ್ರದೇಶ ಸರ್ಕಾರದ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಶ್ರೀ ಸ್ವತಂತ್ರ ಕುಮಾರ್ ಸಿಂಗ್ ಅವರು ರೈತರ ಆದಾಯ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಪಂಜರ ಕೃಷಿ ಮೀನು ಸಾಕಾಣೆ, ಜಲಾಶಯ ಆಧಾರಿತ ಜಲಚರ ಸಾಕಣೆ ಮತ್ತು ಮುತ್ತು ಕೃಷಿಯಂತಹ ಹೆಚ್ಚಿನ ಮೌಲ್ಯದ ಚಟುವಟಿಕೆಗಳತ್ತ ವೈವಿಧ್ಯೀಕರಣದ ಮೇಲೆ ಗಮನ ಹರಿಸುವ ಮೂಲಕ ಒಳನಾಡು ಮೀನುಗಾರಿಕೆಯ ರಫ್ತು ಸಾಮರ್ಥ್ಯವನ್ನು ಒತ್ತಿಹೇಳಿದರು. ರಫ್ತು ತಪಾಸಣೆ ಮಂಡಳಿಯ ಅಧಿಕಾರಿಗಳು ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸಲು ಪ್ರಮಾಣೀಕರಣ ಮತ್ತು ತಪಾಸಣೆ ಕಾರ್ಯವಿಧಾನಗಳನ್ನು ಬಲಪಡಿಸುವುದರ ಜೊತೆಗೆ, ರಾಸಾಯನಿಕ ಶೇಷ ನಿಯಂತ್ರಣ ಆಂಟಿಮೈಕ್ರೋಬಿಯಲ್ ಮಾನದಂಡಗಳು ಮತ್ತು ಡಿಜಿಟಲ್ ಟ್ರೇಸ್ ಎಬಿಲಿಟಿ ಸೇರಿದಂತೆ ಅಂತರರಾಷ್ಟ್ರೀಯ ನಿಯಂತ್ರಕ ಅಗತ್ಯತೆಗಳ ಅನುಸರಣೆ ಮತ್ತು ದೃಢವಾದ ಗುಣಮಟ್ಟದ ಭರವಸೆ ವ್ಯವಸ್ಥೆಗಳ ಮಹತ್ವವನ್ನು ಎತ್ತಿ ತೋರಿಸಿದರು. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (DPIIT), ಭಾರತೀಯ ಕಡಲ ಆಹಾರ ರಫ್ತುದಾರರ ಸಂಘ (SEAI), ಇಂಡಿಯನ್ ಫಿಶ್ಮೀಲ್ ಮತ್ತು ಫಿಶ್ ಆಯಿಲ್ ರಫ್ತುದಾರರ ಸಂಘ (IFAFEA) ಮತ್ತು ಇಂಡಿಯನ್ ಮೆರೈನ್ ಇಂಗ್ರಿಡಿಯಂಟ್ಸ್ ಅಸೋಸಿಯೇಷನ್ (IMIA) ನಂತಹ ಉದ್ಯಮ ಸಂಸ್ಥೆಗಳೊಂದಿಗೆ ಮಾರುಕಟ್ಟೆ ಅವಕಾಶಗಳು, ಸ್ಪರ್ಧಾತ್ಮಕತೆ, ಸುಸ್ಥಿರತೆ ಮತ್ತು ಕಡಲ ಆಹಾರ ರಫ್ತಿನ ಮೇಲಾಗುವ ಪ್ರಮುಖ ಸವಾಲುಗಳ ಕುರಿತು ಪಾಲುದಾರರ ದೃಷ್ಟಿಕೋನಗಳನ್ನು ಹಂಚಿಕೊಂಡಿತು.
ಚರ್ಚೆಯ ಸಂದರ್ಭದಲ್ಲಿ, ಪಾಲುದಾರರು ಕಡಲ ಆಹಾರ ರಫ್ತು ಮೌಲ್ಯ ಸರಪಳಿಯಾದ್ಯಂತ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಎತ್ತಿ ತೋರಿಸಿದರು, ಇದರಲ್ಲಿ ರೋಗ ನಿರ್ವಹಣೆ, ಹೆಚ್ಚುತ್ತಿರುವ ಹೂಡಿಕೆ ವೆಚ್ಚಗಳು, ಗುಣಮಟ್ಟದ ಬೀಜಗಳು ಮತ್ತು ಕ್ವಾರಂಟೈನ್ ಸೌಲಭ್ಯಗಳ ಸೀಮಿತ ಪ್ರವೇಶ ಹಾಗೂ ಲಾಜಿಸ್ಟಿಕ್ಸ್, ಕೋಲ್ಡ್ ಚೈನ್ ಮತ್ತು ಸಂಸ್ಕರಣಾ ಮೂಲಸೌಕರ್ಯಗಳಲ್ಲಿನ ಕೊರತೆಗಳು ಸೇರಿವೆ. ಕಟ್ಟುನಿಟ್ಟಾದ ಪ್ರಮಾಣೀಕರಣ ಅಗತ್ಯತೆಗಳು, ಆಂಟಿಬಯೋಟಿಕ್ ಅನುಸರಣೆ, ಪತ್ತೆಹಚ್ಚುವಿಕೆ ಮತ್ತು ಒಳನಾಡು ಮೀನುಗಾರಿಕೆಯಿಂದ ಕಡಿಮೆ ರಫ್ತು ಕೊಡುಗೆಯ ಬಗ್ಗೆಯೂ ಕಳವಳಗಳನ್ನು ವ್ಯಕ್ತಪಡಿಸಲಾಯಿತು, ಜೊತೆಗೆ ಹೆಚ್ಚಿನ ಮೌಲ್ಯದ ತಳಿಗಳು ಮತ್ತು ಮಾರುಕಟ್ಟೆಗಳತ್ತ ವೈವಿಧ್ಯೀಕರಣಗೊಳ್ಳುವ ಅಗತ್ಯತೆಯನ್ನು ಚರ್ಚಿಸಲಾಯಿತು.
2026 ರ ಜೂನ್ 6 ರಂದು, ಕಾರ್ಯಾಗಾರವು ಭಾರತದ ಕಡಲ ಆಹಾರ ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಕಡಲ ಆಹಾರ ರಫ್ತಿನಲ್ಲಿ ₹1 ಲಕ್ಷ ಕೋಟಿ ಮೀರಿದ ರಾಷ್ಟ್ರೀಯ ಗುರಿಯನ್ನು ಸಾಧಿಸಲು ಅಗತ್ಯವಿರುವ ಕಾರ್ಯತಂತ್ರದ ಮಧ್ಯಸ್ಥಿಕೆಗಳ ಮೇಲೆ ಗಮನ ಹರಿಸುವ ಎರಡು ವಿಷಯಾಧಾರಿತ ತಾಂತ್ರಿಕ ಗೋಷ್ಠಿಗಳನ್ನು ಒಳಗೊಂಡಿತ್ತು. ಈ ಗೋಷ್ಠಿಗಳು ಮೀನುಗಾರಿಕೆ ವಲಯದಲ್ಲಿ ಪ್ರಮಾಣೀಕರಣ, ಪತ್ತೆಹಚ್ಚುವಿಕೆ, ಮೌಲ್ಯವರ್ಧನೆ, ಸುಸ್ಥಿರತೆ ಮತ್ತು ಉದಯೋನ್ಮುಖ ರಫ್ತು ಅವಕಾಶಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ನೀತಿ ನಿರೂಪಕರು, ರಫ್ತುದಾರರು, ಉದ್ಯಮದ ಮುಖಂಡರು, ಸಂಶೋಧಕರು, ನವೋದ್ಯಮಗಳು, ಎಂಎಸ್ಎಂಇಗಳು ಮತ್ತು ಇತರ ಪಾಲುದಾರರನ್ನು ಒಂದೆಡೆ ಸೇರಿಸಿದವು.
“ಕಡಲ ಆಹಾರ ರಫ್ತಿನ ಪ್ರಗತಿ: ಮೌಲ್ಯವರ್ಧನೆ, ಪ್ರಮಾಣೀಕರಣ ಮತ್ತು ಪತ್ತೆಹಚ್ಚುವಿಕೆಯ ಸದುಪಯೋಗ” ಎಂಬ ಶೀರ್ಷಿಕೆಯ ಮೊದಲ ತಾಂತ್ರಿಕ ಗೋಷ್ಠಿಯ ಅಧ್ಯಕ್ಷತೆಯನ್ನು ಒಡಿಶಾ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಡಿ. ವಿ. ಸ್ವಾಮಿ ವಹಿಸಿದ್ದರು, ಮತ್ತು ಎಂಪೆಡಾ (MPEDA) ಅಧ್ಯಕ್ಷ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಪಿ. ಜವಾಹರ್ ಸಹ-ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಈ ಗೋಷ್ಠಿಯು ಮೂರು ಪ್ರಮುಖ ವಿಷಯಾಧಾರಿತ ಚರ್ಚೆಗಳ ಮೂಲಕ ಭಾರತದ ರಫ್ತು ಸ್ಪರ್ಧಾತ್ಮಕತೆಯನ್ನು ಬಲಪಡಿಸುವತ್ತ ಗಮನ ಹರಿಸಿತು: (i) ರಫ್ತು ಮಾರುಕಟ್ಟೆಗಳಿಗೆ ಹಿಡಿದ ಮೀನಿನ ಪ್ರಮಾಣೀಕರಣವನ್ನು (Catch Certification) ದೃಢಪಡಿಸಲು ಪತ್ತೆಹಚ್ಚುವಿಕೆಯ ವ್ಯವಸ್ಥೆಗಳು, (ii) ಜಲಚರ ಸಾಕಣೆ ಮತ್ತು ಕ್ಯಾಪ್ಚರ್ ಮೀನುಗಾರಿಕೆಯಲ್ಲಿ ಸುಸ್ಥಿರ ಪ್ರಮಾಣೀಕರಣ, ಮತ್ತು (iii) ಕಡಲ ಆಹಾರ ವಲಯಕ್ಕಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (PLI) ಚೌಕಟ್ಟನ್ನು ಅನ್ವೇಷಿಸುವುದು.

ಬದಲಾಗುತ್ತಿರುವ ಅಂತಾರಾಷ್ಟ್ರೀಯ ಮಾರುಕಟ್ಟೆಯ ಅಗತ್ಯತೆಗಳನ್ನು ಪೂರೈಸಲು, ವಿಶೇಷವಾಗಿ ಪ್ರಮುಖ ರಫ್ತು ಸ್ಥಳಗಳಲ್ಲಿ ಹಿಡಿದ ಮೀನಿನ ಪ್ರಮಾಣೀಕರಣದ ಮಾನದಂಡಗಳನ್ನು ಪೂರೈಸಲು ಜಲಚರ ಸಾಕಣೆ ಮತ್ತು ಕ್ಯಾಪ್ಚರ್ ಮೀನುಗಾರಿಕೆ ಎರಡರಲ್ಲೂ ಟ್ರೇಸ್ ಎಬಿಲಿಟಿ ವ್ಯವಸ್ಥೆಗಳ ಬೆಳೆಯುತ್ತಿರುವ ಮಹತ್ವವನ್ನು ಚರ್ಚೆಗಳು ಉಲ್ಲೇಖಿಸಿದವು. ಪಾರದರ್ಶಕತೆ, ಅನುಸರಣೆ ಮತ್ತು ಮಾರುಕಟ್ಟೆ ಪ್ರವೇಶವನ್ನು ಸುಧಾರಿಸಲು ದೃಢವಾದ ಡಿಜಿಟಲ್ ಟ್ರೇಸ್ ಎಬಿಲಿಟಿ ವ್ಯವಸ್ಥೆಗಳು, ವರ್ಧಿತ ಪಾಲುದಾರರ ಸಮನ್ವಯ ಮತ್ತು ಮೌಲ್ಯ ಸರಪಳಿಯಾದ್ಯಂತ ಹೆಚ್ಚಿನ ಏಕೀಕರಣದ ಅಗತ್ಯವನ್ನು ಚರ್ಚೆಗಳು ಒತ್ತಿಹೇಳಿದವು. ಈ ಗೋಷ್ಠಿಯು ಮಾರುಕಟ್ಟೆ ಪ್ರವೇಶ ಮತ್ತು ಗ್ರಾಹಕರ ವಿಶ್ವಾಸದ ನಿರ್ಣಾಯಕ ಸಕ್ರಿಯಗೊಳಿಸುವಿಕೆಗಳಾಗಿ ಸುಸ್ಥಿರ ಪ್ರಮಾಣೀಕರಣ ಚೌಕಟ್ಟುಗಳು ಮತ್ತು ಜವಾಬ್ದಾರಿಯುತ ಉತ್ಪಾದನಾ ಪದ್ಧತಿಗಳನ್ನು ಸಹ ಪರಿಶೀಲಿಸಿತು. ಭಾಗಿಗಳು ಭಾರತೀಯ ಪ್ರಮಾಣೀಕರಣ ವ್ಯವಸ್ಥೆಗಳನ್ನು ಉತ್ತೇಜಿಸುವುದು, ಸುಸ್ಥಿರತೆಯ ಉಪಕ್ರಮಗಳನ್ನು ಬಲಪಡಿಸುವುದು ಮತ್ತು ಭಾರತೀಯ ಕಡಲ ಆಹಾರ ಉತ್ಪನ್ನಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಕುರಿತು ಚರ್ಚಿಸಿದರು. ಕಡಲ ಆಹಾರ ವಲಯಕ್ಕೆ ಸಂಭಾವ್ಯ ಪಿಎಲ್ಐ (PLI) ಚೌಕಟ್ಟಿನ ಕುರಿತಾದ ಚರ್ಚೆಗಳು ಮೌಲ್ಯವರ್ಧಿತ ರಫ್ತುಗಳನ್ನು ಉತ್ತೇಜಿಸುವುದು, ಎಂಎಸ್ಎಂಇಗಳನ್ನು ಬೆಂಬಲಿಸುವುದು, ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ಉದ್ದೇಶಿತ ನೀತಿ ಬೆಂಬಲ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಜಾಗತಿಕ ಕಡಲ ಆಹಾರ ಮೌಲ್ಯ ಸರಪಳಿಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವತ್ತ ಗಮನ ಹರಿಸಿದವು.
“ಕಡಲ ಆಹಾರ ರಫ್ತಿನ ಪ್ರಗತಿಯಲ್ಲಿ ಮೀನುಗಾರಿಕೆ ಮತ್ತು ಜಲಚರ ಸಾಕಣೆ ನವೋದ್ಯಮಗಳು ಮತ್ತು ಎಂಎಸ್ಎಂಇಗಳು” ಎಂಬ ಶೀರ್ಷಿಕೆಯ ಎರಡನೇ ತಾಂತ್ರಿಕ ಗೋಷ್ಠಿಯ ಸಹ-ಅಧ್ಯಕ್ಷತೆಯನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ, ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿ (ಒಳನಾಡು ಮೀನುಗಾರಿಕೆ) ಶ್ರೀ ಸಾಗರ್ ಮೆಹ್ರಾ; ಐಸಿಎಆರ್ (ICAR) ನ ಡಿಡಿಜಿ (ಮೀನುಗಾರಿಕೆ) ಡಾ. ಜೆ. ಕೆ. ಜೆನಾ; ಎನ್ಎಫ್ಡಿಬಿ (NFDB) ಯ ಮುಖ್ಯ ಕಾರ್ಯನಿರ್ವಾಹಕ ಡಾ. ಬಿ. ಕೆ. ಬೆಹೆರಾ ಮತ್ತು ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿ (ಕಡಲ) ಡಾ. ಸುರಭಿ ರಾಯ್ ವಹಿಸಿದ್ದರು. ಈ ಗೋಷ್ಠಿಯು ನಾವೀನ್ಯತೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವೈವಿಧ್ಯೀಕರಣದ ಮೂಲಕ ಕಡಲ ಆಹಾರ ರಫ್ತನ್ನು ಮುನ್ನಡೆಸುವಲ್ಲಿ ನವೋದ್ಯಮಗಳು, ಉದ್ಯಮಿಗಳು ಮತ್ತು ಎಂಎಸ್ಎಂಇಗಳ ಪಾತ್ರವನ್ನು ಪರಿಶೀಲಿಸಿತು. ಚರ್ಚೆಗಳನ್ನು ಮೂರು ಪ್ರಮುಖ ಉಪ-ವಿಷಯಗಳ ಸುತ್ತ ಆಯೋಜಿಸಲಾಗಿತ್ತು: (i) ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜನ, (ii) ಹೆಚ್ಚಿನ ಮೌಲ್ಯದ ಆಳ ಸಮುದ್ರದ ಸಂಪನ್ಮೂಲಗಳ ಬಳಕೆ, ಮತ್ತು (iii) ರಫ್ತು ಅವಕಾಶಗಳ ವೈವಿಧ್ಯೀಕರಣ.

ಮೀನುಗಾರಿಕೆ ವಲಯದಲ್ಲಿ ನಾವೀನ್ಯತೆ, ಮೌಲ್ಯವರ್ಧನೆ ಮತ್ತು ರಫ್ತು ವೈವಿಧ್ಯೀಕರಣವನ್ನು ಉತ್ತೇಜಿಸಲು ನವೋದ್ಯಮಗಳು (Start-ups) ಮತ್ತು ಎಂಎಸ್ಎಂಇಗಳಿಗಾಗಿ (MSMEs) ರೋಮಾಂಚಕ ಪರಿಸರ ವ್ಯವಸ್ಥೆಯನ್ನು ಪೋಷಿಸುವ ಮಹತ್ವವನ್ನು ಚರ್ಚೆಗಳು ಒತ್ತಿಹೇಳಿದವು. ಸಂಸ್ಕರಣೆ ಮತ್ತು ಕೊಯ್ಲಿನ ನಂತರದ ಮೂಲಸೌಕರ್ಯಗಳನ್ನು ಬಲಪಡಿಸುವುದು, ಹೆಚ್ಚಿನ ಮೌಲ್ಯದ ಮತ್ತು ವಿಶಿಷ್ಟವಾದ ಕಡಲ ಆಹಾರ ಉತ್ಪನ್ನಗಳನ್ನು ಉತ್ತೇಜಿಸುವುದು, ಟ್ಯೂನಾದಂತಹ ಆಳ ಸಮುದ್ರದ ಸಂಪನ್ಮೂಲಗಳ ಬಳಕೆಯಾಗದ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಮತ್ತು ಕಡಲಕಳೆ (Seaweed) ಕೃಷಿ, ಒಳಾಂಗಣ/ಅಲಂಕಾರಿಕ ಮೀನುಗಾರಿಕೆ (Ornamental fisheries), ಮುತ್ತು ಕೃಷಿ ಹಾಗೂ ಶೀತಲ ನೀರಿನ ಮೀನುಗಾರಿಕೆ ಸೇರಿದಂತೆ ಉದಯೋನ್ಮುಖ ವಲಯಗಳ ಮೂಲಕ ರಫ್ತು ಅವಕಾಶಗಳನ್ನು ವಿಸ್ತರಿಸುವತ್ತ ಚರ್ಚೆಗಳು ಗಮನ ಹರಿಸಿದವು. ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಕಡಲ ಆಹಾರ ರಫ್ತಿನಲ್ಲಿ ಸುಸ್ಥಿರ ಬೆಳವಣಿಗೆಯನ್ನು ವೇಗಗೊಳಿಸಲು ಪೂರಕ ನೀತಿ ಮಧ್ಯಸ್ಥಿಕೆಗಳು, ತಂತ್ರಜ್ಞಾನದ ಅಳವಡಿಕೆ, ಕೌಶಲ್ಯ ಅಭಿವೃದ್ಧಿ, ಪ್ರಮಾಣೀಕರಣ, ಬ್ರಾಂಡಿಂಗ್ ಮತ್ತು ಸುಧಾರಿತ ಮಾರುಕಟ್ಟೆ ಸಂಪರ್ಕಗಳ ಅಗತ್ಯವನ್ನು ಭಾಗವಹಿಸಿದವರು ಬಲವಾಗಿ ಪ್ರತಿಪಾದಿಸಿದರು.


ಭಾರತದ ಕಡಲ ಆಹಾರ ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಉದ್ಯಮದ ಪಾಲುದಾರರು, ರಫ್ತುದಾರರು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮಿಗಳ ನಡುವೆ ಒಟ್ಟಾಗಿ ಕೆಲಸ ಮಾಡುವ ಜಂಟಿ ಬದ್ಧತೆಯೊಂದಿಗೆ ಕಾರ್ಯಾಗಾರವು ಮುಕ್ತಾಯಗೊಂಡಿತು. ಈ ಚರ್ಚೆಗಳು ಸುಸ್ಥಿರ ಉತ್ಪಾದನೆ, ಮೌಲ್ಯವರ್ಧನೆ, ಪತ್ತೆಹಚ್ಚುವಿಕೆ, ಪ್ರಮಾಣೀಕರಣ, ಮೂಲಸೌಕರ್ಯ ಅಭಿವೃದ್ಧಿ, ನಾವೀನ್ಯತೆ ಮತ್ತು ಮಾರುಕಟ್ಟೆ ವೈವಿಧ್ಯೀಕರಣವನ್ನು ಒಳಗೊಂಡ ಸಮನ್ವಯದ ವಿಧಾನದ ಅಗತ್ಯವನ್ನು ಉಲ್ಲೇಖಿಸಿದವು. ಕಾರ್ಯಾಗಾರದಿಂದ ಹೊರಹೊಮ್ಮುವ ಈ ಶಿಫಾರಸುಗಳು ನೀತಿ ನಿರೂಪಣೆಗೆ ಮತ್ತು ಕಡಲ ಆಹಾರ ರಫ್ತಿನಲ್ಲಿ ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉದ್ದೇಶಿತ ಮಧ್ಯಸ್ಥಿಕೆಗಳಿಗೆ ಕೊಡುಗೆ ನೀಡುವ ನಿರೀಕ್ಷೆಯಿದೆ.
ಕಡಲ ಆಹಾರ ರಫ್ತು ಈಗಾಗಲೇ ಬಲವಾದ ಬೆಳವಣಿಗೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತಿರುವುದರಿಂದ, ಇಡೀ ಸರ್ಕಾರದ ವ್ಯವಸ್ಥಿತ ವಿಧಾನದ ಮೂಲಕ ಮೀನುಗಾರಿಕೆ ವಲಯದ ಸಂಪೂರ್ಣ ಸಾಮರ್ಥ್ಯವನ್ನು ಮುಕ್ತಗೊಳಿಸುವ ಸರ್ಕಾರದ ಬದ್ಧತೆಯನ್ನು ಕಾರ್ಯಾಗಾರವು ಪುನರುಚ್ಚರಿಸಿತು. ಈ ಕಾರ್ಯಾಗಾರದ ಫಲಿತಾಂಶಗಳು ಕಡಲ ಆಹಾರ ರಫ್ತಿನಲ್ಲಿ ₹1 ಲಕ್ಷ ಕೋಟಿ ಮೀರುವ ಗುರಿಯನ್ನು ಸಾಧಿಸುವ ಕಡೆಗಿನ ಭಾರತದ ಪಯಣಕ್ಕೆ ಬೆಂಬಲ ನೀಡುವ ನಿರೀಕ್ಷೆಯಿದೆ. ಇದರೊಂದಿಗೆ ಮೀನುಗಾರರು, ರೈತರು, ಸಂಸ್ಕಾರಕರು, ನವೋದ್ಯಮಗಳು ಮತ್ತು ಎಂಎಸ್ಎಂಇಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಗುಣಮಟ್ಟದ, ಸುಸ್ಥಿರ ಕಡಲ ಆಹಾರದ ವಿಶ್ವಾಸಾರ್ಹ ಪೂರೈಕೆದಾರನಾಗಿ ಭಾರತದ ಸ್ಥಾನವನ್ನು ಬಲಪಡಿಸಲು ಇದು ಸಹಕಾರಿಯಾಗಲಿದೆ.
*****
(रिलीज़ आईडी: 2270091)
आगंतुक पटल : 10