ಪ್ರಧಾನ ಮಂತ್ರಿಯವರ ಕಛೇರಿ
ಇಟಲಿ ಪ್ರಧಾನಮಂತ್ರಿ ಜತೆ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
ಪ್ರಕಟಣಾ ದಿನಾಂಕ:
20 MAY 2026 7:37PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಮೆಲೋನಿ,
ಎರಡೂ ದೇಶಗಳ ಪ್ರತಿನಿಧಿಗಳೆ,
ಮಾಧ್ಯಮದ ಸ್ನೇಹಿತರೆ,
ಶುಭಾಶಯಗಳು!
ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಭವ್ಯ ಸ್ವಾಗತಕ್ಕಾಗಿ ನಾನು ಪ್ರಧಾನಮಂತ್ರಿ ಮೆಲೋನಿ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ರೋಮ್ ಅನ್ನು ವಿಶ್ವಾದ್ಯಂತ ಚಿರಂತನ ಅಥವಾ ಸನಾತನ ನಗರ ಎಂದು ಕರೆಯಲಾಗುತ್ತದೆ. ಭಾರತದಲ್ಲಿ, ನನ್ನ ಲೋಕಸಭಾ ಕ್ಷೇತ್ರವಾದ ವಾರಾಣಸಿಯನ್ನು ಸಹ ಸನಾತನ ಮತ್ತು ಕಾಲಾತೀತ ನಗರವೆಂದು ಪರಿಗಣಿಸಲಾಗುತ್ತದೆ. ಎರಡು ನಾಗರಿಕತೆಗಳು ಒಟ್ಟಿಗೆ ಸೇರಿದಾಗ, ಸಂಭಾಷಣೆ ಕೇವಲ ಒಂದು ಕಾರ್ಯಸೂಚಿಗೆ ಸೀಮಿತವಾಗಿರುವುದಿಲ್ಲ. ಇದು ಇತಿಹಾಸದ ಆಳ, ಭವಿಷ್ಯದ ದೃಷ್ಟಿಕೋನ ಮತ್ತು ಸ್ನೇಹದ ಸ್ವಾಭಾವಿಕ ಆಶಯವನ್ನು ಪ್ರತಿಬಿಂಬಿಸುತ್ತದೆ - ಎಲ್ಲವೂ ಏಕಕಾಲದಲ್ಲಿ.
ಸ್ನೇಹಿತರೆ,
ಕಳೆದ ಸುಮಾರು ಮೂರೂವರೆ ವರ್ಷಗಳಲ್ಲಿ ಪ್ರಧಾನಮಂತ್ರಿ ಮೆಲೋನಿ ಅವರನ್ನು ಭೇಟಿ ಮಾಡಲು ನನಗೆ ಹಲವಾರು ಅವಕಾಶಗಳು ಸಿಕ್ಕಿವೆ. ಇದು ಭಾರತ ಮತ್ತು ಇಟಲಿ ನಡುವಿನ ನಿಕಟ ಸಹಕಾರ ಮತ್ತು ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಅವರ ನಾಯಕತ್ವದಲ್ಲಿ, ನಮ್ಮ ಸಂಬಂಧಗಳು ಹೊಸ ಆವೇಗ, ಹೊಸ ದಿಕ್ಕು ಮತ್ತು ನವೀಕೃತ ವಿಶ್ವಾಸವನ್ನು ಪಡೆದುಕೊಂಡಿವೆ. ನಾವು ನಮ್ಮ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಂತೆ, ನಾವು ವಿಶೇಷ ಕಾರ್ಯತಂತ್ರ ಪಾಲುದಾರಿಕೆಯನ್ನು ಘೋಷಿಸುತ್ತಿದ್ದೇವೆ ಎಂಬುದರಿಂದ ನನಗೆ ಸಂತೋಷವಾಗಿದೆ.
ಸ್ನೇಹಿತರೆ,
ಇಂದಿನ ಸಭೆಯಲ್ಲಿ ನಮ್ಮ ಭವಿಷ್ಯದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ನಾವು ವ್ಯಾಪಕ ಚರ್ಚೆಗಳನ್ನು ನಡೆಸಿದ್ದೇವೆ. ಭಾರತ-ಇಟಲಿ ಜಂಟಿ ಕಾರ್ಯತಂತ್ರ ಕ್ರಿಯಾಯೋಜನೆ 2025–29 ನಮ್ಮ ಪಾಲುದಾರಿಕೆಗೆ ಪ್ರಾಯೋಗಿಕ ಮತ್ತು ಭವಿಷ್ಯದ ಮಾರ್ಗಸೂಚಿ ಒದಗಿಸುತ್ತದೆ, ನಾವು ಅದರ ಮೇಲೆ ಸಮಯಕ್ಕೆ ಅನುಗುಣವಾಗಿ ಮುಂದುವರಿಯುತ್ತಿದ್ದೇವೆ. ನಮ್ಮ ಹಂಚಿಕೆಯ ಪ್ರಯತ್ನಗಳ ಮೂಲಕ, ದ್ವಿಪಕ್ಷೀಯ ವ್ಯಾಪಾರವು 20 ಶತಕೋಟಿ ಯುರೋಗಳ ಗುರಿಯತ್ತ ವೇಗವಾಗಿ ಸಾಗುತ್ತಿದೆ.
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ 800ಕ್ಕೂ ಹೆಚ್ಚು ಇಟಲಿಯ ಕಂಪನಿಗಳು ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ಸಕ್ರಿಯ ಪಾಲುದಾರರಾಗುತ್ತಿವೆ. ಇಂದು ನಡೆಯುತ್ತಿರುವ ವ್ಯಾಪಾರ ವೇದಿಕೆಯು ಎರಡೂ ದೇಶಗಳ ವ್ಯಾಪಾರ ನಾಯಕರಲ್ಲಿ ಹೊಸ ಉತ್ಸಾಹ, ನವೀಕೃತ ವಿಶ್ವಾಸ ಮತ್ತು ಹೆಚ್ಚಿನ ಮಹತ್ವಾಕಾಂಕ್ಷೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಇಟಲಿ ವಿನ್ಯಾಸ ಮತ್ತು ನಿಖರತೆಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಭಾರತವು ಪ್ರಮಾಣ, ಪ್ರತಿಭೆ ಮತ್ತು ಕೈಗೆಟುಕುವ ನಾವೀನ್ಯತೆಯ ಶಕ್ತಿಕೇಂದ್ರವೆಂದು ಗುರುತಿಸಲ್ಪಟ್ಟಿದೆ. ಆದ್ದರಿಂದ ನಾವು "ಭಾರತ ಮತ್ತು ಇಟಲಿಯಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿ, ಮತ್ತು ವಿಶ್ವಕ್ಕಾಗಿ ತಲುಪಿಸಿ" ಎಂಬ ತತ್ವದ ಮೇಲೆ ಮುಂದುವರಿಯುತ್ತೇವೆ. ಫ್ಯಾಷನ್ನಿಂದ ಹಣಕಾಸು ತಂತ್ರಜ್ಞಾನದವರೆಗೆ, ಚರ್ಮದಿಂದ ಸರಕು ಸಾಗಣೆವರೆಗೆ, ಮತ್ತು ಚಲನಶೀಲತೆಯಿಂದ ಉತ್ಪಾದನೆಯವರೆಗೆ, ನಾವು ಪ್ರತಿಯೊಂದು ವಲಯದಲ್ಲಿ ನಮ್ಮ ಸಾಮರ್ಥ್ಯಗಳನ್ನು ಸಂಯೋಜಿಸುತ್ತೇವೆ ಮತ್ತು ಒಟ್ಟಾರೆಯಾಗಿ ಮಾನವತೆಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇವೆ.
ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಳ್ಳಲು ಇಟಲಿ ನೀಡಿದ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಮೆಲೋನಿಗೆ ನಾನು ನನ್ನ ವಿಶೇಷ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಎರಡೂ ಕಡೆಯ ವ್ಯಾಪಾರ ಸಮುದಾಯಗಳು ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಸಾಧ್ಯವಾದಷ್ಟು ಬೇಗ ಅನುಷ್ಠಾನಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.
ಸ್ನೇಹಿತರೆ,
ತಂತ್ರಜ್ಞಾನ ಮತ್ತು ನಾವೀನ್ಯತೆ ನಮ್ಮ ಪಾಲುದಾರಿಕೆಯ ಎಂಜಿನ್ಗಳಾಗಿವೆ. ಎಐ, ಕ್ವಾಂಟಮ್ ತಂತ್ರಜ್ಞಾನಗಳು, ಬಾಹ್ಯಾಕಾಶ ಮತ್ತು ನಾಗರಿಕ ಪರಮಾಣು ಶಕ್ತಿಯಂತಹ ಕ್ಷೇತ್ರಗಳಲ್ಲಿ ನಮ್ಮ ನಡುವೆ ಸಹಕಾರಕ್ಕೆ ಅಪಾರ ಸಾಧ್ಯತೆಗಳಿವೆ. ಎರಡೂ ದೇಶಗಳ ಸ್ಟಾರ್ಟಪ್ಗಳು, ಸಂಶೋಧನಾ ಕೇಂದ್ರಗಳು ಮತ್ತು ಕೈಗಾರಿಕೆಗಳನ್ನು ಸಂಪರ್ಕಿಸಲು, ನಾವು ಭಾರತ-ಇಟಲಿ ನಾವೀನ್ಯತಾ ಕೇಂದ್ರವನ್ನು ಸ್ಥಾಪಿಸುವ ಕೆಲಸ ಮಾಡುತ್ತಿದ್ದೇವೆ.
ಸ್ನೇಹಿತರೆ,
ರಕ್ಷಣಾ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ನಿಕಟ ಸಹಕಾರವು ನಮ್ಮ ನಡುವಿನ ಆಳವಾದ ಪರಸ್ಪರ ನಂಬಿಕೆಯ ಪ್ರತಿಬಿಂಬವಾಗಿದೆ. ನಮ್ಮ ಸಶಸ್ತ್ರ ಪಡೆಗಳ ನಡುವೆ ಮಾತ್ರವಲ್ಲದೆ, ಎರಡೂ ದೇಶಗಳ ರಕ್ಷಣಾ ಕೈಗಾರಿಕೆಗಳ ನಡುವೆಯೂ ಸಹಕಾರವು ವಿಸ್ತರಿಸುತ್ತಿದೆ. ನಮ್ಮ ರಕ್ಷಣಾ ಕೈಗಾರಿಕಾ ಮಾರ್ಗಸೂಚಿಯು ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ದಾರಿ ಮಾಡಿಕೊಟ್ಟಿದೆ. ಕಡಲ ಶಕ್ತಿಗಳಾಗಿ, ಸಂಪರ್ಕ ಕ್ಷೇತ್ರದಲ್ಲಿ ಭಾರತ ಮತ್ತು ಇಟಲಿ ನಡುವಿನ ನಿಕಟ ಸಹಕಾರವು ಕೇವಲ ಸ್ವಾಭಾವಿಕವಾಗಿದೆ. ನಾವು ಹಡಗು ಸಾಗಣೆ, ಬಂದರು ಆಧುನೀಕರಣ, ಸರಕು ಸಾಗಣೆ ಮತ್ತು ನೀಲಿ ಆರ್ಥಿಕತೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ.
ನಮ್ಮ ಗೆಲುವು-ಗೆಲುವಿನ ಪಾಲುದಾರಿಕೆಯನ್ನು 3ನೇ ದೇಶಗಳಿಗೆ ವಿಸ್ತರಿಸುವ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಈ ದಿಕ್ಕಿನಲ್ಲಿ ಮುಂದುವರಿಯುತ್ತಾ, ಆಫ್ರಿಕಾದಲ್ಲಿ ಸಂಕೀರ್ಣ ಯೋಜನೆಗಳಲ್ಲಿ ಕೆಲಸ ಮಾಡಲು ನಾವು ಒಪ್ಪಿಕೊಂಡಿದ್ದೇವೆ.
ಸ್ನೇಹಿತರೆ,
ಭಯೋತ್ಪಾದನೆ ಮಾನವತೆಗೆ ಗಂಭೀರ ಸವಾಲು ಒಡ್ಡುತ್ತಿದೆ ಎಂಬ ದೃಷ್ಟಿಕೋನದಲ್ಲಿ ಭಾರತ ಮತ್ತು ಇಟಲಿ ಒಂದಾಗಿವೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ನಮ್ಮ ಜಂಟಿ ಉಪಕ್ರಮಗಳು ಜಗತ್ತಿನ ಮುಂದೆ ಒಂದು ಪ್ರಮುಖ ಉದಾಹರಣೆಯನ್ನು ನೀಡಿವೆ. ಜವಾಬ್ದಾರಿಯುತ ಪ್ರಜಾಪ್ರಭುತ್ವಗಳು ಭಯೋತ್ಪಾದನೆಯನ್ನು ಖಂಡಿಸುವುದಲ್ಲದೆ, ಅದರ ಹಣಕಾಸು ಜಾಲಗಳನ್ನು ನಿರ್ನಾಮ ಮಾಡಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂಬ ಸ್ಪಷ್ಟ ಸಂದೇಶವನ್ನು ಭಾರತ ಮತ್ತು ಇಟಲಿ ರವಾನಿಸಿವೆ. ಉಕ್ರೇನ್, ಪಶ್ಚಿಮ ಏಷ್ಯಾ ಮತ್ತು ಇತರ ಜಾಗತಿಕ ಉದ್ವಿಗ್ನತೆಗಳಿಗೆ ಸಂಬಂಧಿಸಿದಂತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತದ ನಿಲುವು ಸ್ಪಷ್ಟವಾಗಿದೆ, ಎಲ್ಲಾ ಸಮಸ್ಯೆಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು.
ಸ್ನೇಹಿತರೆ,
ನಮ್ಮ ಐತಿಹಾಸಿಕ ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ ಇರುವ ಸಂಬಂಧಗಳ ಪ್ರತಿಬಿಂಬವನ್ನು ಎರಡೂ ದೇಶಗಳಲ್ಲಿ ಪ್ರತಿ ಹಂತದಲ್ಲೂ ಕಾಣಬಹುದು. ಭಾರತೀಯ ಕಲೆ, ಯೋಗ, ಆಯುರ್ವೇದ ಮತ್ತು ಪಾಕ ಪದ್ಧತಿಯ ಬಗ್ಗೆ ಇಟಲಿಯಲ್ಲಿ ಆಸಕ್ತಿ ಸ್ಥಿರವಾಗಿ ಬೆಳೆಯುತ್ತಿದೆ. ಸಂಸ್ಕೃತ ಮತ್ತು ಲ್ಯಾಟಿನ್ನಂತಹ ಪ್ರಾಚೀನ ಭಾಷೆಗಳು ಒಂದೇ ಭಾಷಾ ಕುಟುಂಬಕ್ಕೆ ಸೇರಿವೆ. ಇದು ನಮ್ಮ ಸಂಬಂಧವು ಕೇವಲ ರಾಜತಾಂತ್ರಿಕತೆಯಲ್ಲ, ಆದರೆ ಹಂಚಿಕೆಯ ಪರಂಪರೆಯಾಗಿದೆ ಎಂಬುದನ್ನು ತೋರಿಸುತ್ತದೆ.
ಮುಂದಿನ ವರ್ಷ, ಭಾರತ ಮತ್ತು ಇಟಲಿ ನಡುವಿನ ಸಂಬಂಧಗಳ 80ನೇ ವಾರ್ಷಿಕೋತ್ಸವ ಆಚರಿಸುವ ಸಂದರ್ಭದಲ್ಲಿ, ಸಂಸ್ಕೃತಿ ವರ್ಷ ಆಚರಿಸಲಾಗುವುದು. ಇದು ನಮ್ಮ ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಇಟಲಿಯಲ್ಲಿ ವಾಸಿಸುವ ದೊಡ್ಡ ಭಾರತೀಯ ಮೂಲದ ಸಮುದಾಯವು ನಮ್ಮ 2 ರಾಷ್ಟ್ರಗಳ ನಡುವಿನ ರೋಮಾಂಚಕ ಕೊಂಡಿಯಾಗಿ ಕಾರ್ಯನಿ ರ್ವಹಿಸುತ್ತದೆ. ಪ್ರಧಾನಮಂತ್ರಿ ಮೆಲೋನಿ ಮತ್ತು ಇಟಲಿಯ ಜನರು ಅವರ ಬಗ್ಗೆ ಅವರ ಕಾಳಜಿ ಮತ್ತು ಬೆಂಬಲ ಹೊಂದಿರುವುದಕ್ಕೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
3 ವರ್ಷಗಳ ಹಿಂದೆ ಮುಕ್ತಾಯಗೊಂಡ ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದವು ಎರಡೂ ದೇಶಗಳ ನಡುವಿನ ಜನರ ಸಂಚಾರವನ್ನು ಹೆಚ್ಚಿಸಿದೆ.
ಗೌರವಾನ್ವಿತರೆ,
ಹೆಚ್ಚಿನ ಉತ್ಪಾದಕತೆ ಹೊಂದಿರುವ ಇಂದಿನ ಸಭೆ ಮತ್ತು ನಿಮ್ಮ ಸ್ನೇಹಕ್ಕಾಗಿ ನಾನು ಮತ್ತೊಮ್ಮೆ ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. 1.4 ಶತಕೋಟಿ ಭಾರತೀಯರ ಪರವಾಗಿ ನಾನು ಮತ್ತೊಮ್ಮೆ ನಿಮಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡುತ್ತೇನೆ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2264112)
ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Telugu
,
Malayalam