ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಸೇವೆಯಾಗಿ ತಂತ್ರಾಂಶ (SaaS) ಮತ್ತು ಉದ್ಯಮ ಸೇವೆಗಳ ಮೇಲೆ ಎಐ ಏಜೆಂಟ್ ಗಳ ಪ್ರಭಾವದ ಬಗ್ಗೆ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಉದ್ದಿಮೆ ಮುಖಂಡರ ಚರ್ಚೆ
ಉದ್ದಿಮೆ ಮಾದರಿಗಳ ವಿಕಸನ, ಉದ್ಯಮ ಸಿದ್ಧತೆ ಮತ್ತು ಗ್ರಾಹಕ-ಕೇಂದ್ರಿತ ಎಐ ಅಳವಡಿಕೆಯ ಬಗ್ಗೆ ಸಮಿತಿಯ ವಿವರಣೆ
ವ್ಯವಹಾರ ಮತ್ತು ಕಾರ್ಯಾಚರಣಾ ಮಾದರಿಗಳನ್ನು ಮರುರೂಪಿಸುವ ಎಐ ಏಜೆಂಟ್ ; ಚುರುಕುತನ ಮತ್ತು ಗ್ರಾಹಕ-ಕೇಂದ್ರಿತ ನಾವೀನ್ಯತೆಯೇ ಎಐ ಯುಗದಲ್ಲಿ ಯಶಸ್ಸಿನ ಕೀಲಿಕೈ
ಪ್ರಕಟಣಾ ದಿನಾಂಕ:
20 FEB 2026 8:51PM by PIB Bengaluru
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ, ಇನ್ಫೋಸಿಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲೀಲ್ ಪರೇಖ್; ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕೃತಿವಾಸನ್; ಎಚ್ ಸಿ ಎಲ್ ಟೆಕ್ನಾಲಜೀಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಿ ವಿಜಯಕುಮಾರ್; ಮತ್ತು ಸೇಲ್ಸ್ ಫೋರ್ಸ್ ಇಂಡಿಯಾದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಂಧತಿ ಭಟ್ಟಾಚಾರ್ಯ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯು, ಎಐ ಏಜೆಂಟ್ ಗಳು ಸಾಂಪ್ರದಾಯಿಕ ಸೇವೆಯಾಗಿ ತಂತ್ರಾಂಶ (SaaS) ಮಾದರಿಯನ್ನು ಮೂಲಭೂತವಾಗಿ ಅಡ್ಡಿಪಡಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಿತು. ಚರ್ಚೆಯನ್ನು ಅಮಿತಾಬ್ ಕಾಂತ್ ನಿರ್ವಹಿಸಿದರು.

SaaS ನ ಭವಿಷ್ಯದ ಬಗ್ಗೆ ಊಹಾಪೋಹಗಳು ಸೇರಿದಂತೆ ತೀಕ್ಷ್ಣವಾದ ಮಾರುಕಟ್ಟೆ ಪ್ರತಿಕ್ರಿಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅರುಂಧತಿ ಭಟ್ಟಾಚಾರ್ಯ ಅವರು, ಅತಿ ಸರಳೀಕರಣದ ವಿರುದ್ಧ ಎಚ್ಚರಿಕೆ ನೀಡಿದರು. "ಮಾರುಕಟ್ಟೆಗಳು ಹೂಡಿಕೆ, ಏರಿಳಿತಗಳ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳುತ್ತವೆ, ಆದರೆ ಎಲ್ಲವೂ ನಿಜವಾಗುವುದಿಲ್ಲ" ಎಂದು ಅವರು ತಿಳಿಸಿದರು. "ನೀವು SaaS ಮಾದರಿಯ ಬಗ್ಗೆ ಮಾತನಾಡುವಾಗ, ಅದು ವೈಬ್ ಕೋಡಿಂಗ್ ಅಥವಾ ಅಪ್ಲಿಕೇಶನ್ ಸೃಜನೆಯ ಬಗ್ಗೆ ಮಾತ್ರವಲ್ಲ, ಅದು ಕೆಲಸದ ಕಾರ್ಯವಿಧಾನಗಳ ಬಗ್ಗೆ ಅರ್ಥಮಾಡಿಕೊಳ್ಳುವುದು, ಗ್ರಾಹಕರ ಸಮಸ್ಯೆಗಳ ಅಂಶಗಳನ್ನು ಗುರುತಿಸುವುದು ಮತ್ತು ಅವುಗಳನ್ನು ನೀವು ಪರಿಹರಿಸುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಇದು ವೀಕ್ಷಣೆ, ಆಡಳಿತ, ಲೆಕ್ಕಪರಿಶೋಧನೆ ಮತ್ತು ಅಳವಡಿಕೆಯ ಬಗ್ಗೆಯಾಗಿದೆ." ಕೆಲಸ ಮಾಡುವ ವಿಧಾನಗಳು ವಿಕಸನಗೊಳ್ಳುತ್ತವೆಯಾದರೂ, ದೀರ್ಘಕಾಲೀನ ಸುಸ್ಥಿರತೆಯು ನಿಜವಾದ ಗ್ರಾಹಕ ಮೌಲ್ಯವನ್ನು ತಲುಪಿಸುವುದರ ಮೇಲೆ ಅವಲಂಬಿತವಾಗಿರಲಿದೆ ಎಂದು ಅವರು ಒತ್ತಿ ಹೇಳಿದರು.

ಕೆ. ಕೃತಿವಾಸನ್ ಅವರು ಸೇವೆಗಳ ಮುನ್ನೋಟದೊಂದಿಗೆ ಎಂಜಿನಿಯರ್ ಗಳ ಪಾತ್ರದಲ್ಲಿನ ಮೂಲಭೂತ ಬದಲಾವಣೆಯನ್ನು ವಿವರಿಸಿದರು. "ಸಾಫ್ಟ್ ವೇರ್ ಎಂಜಿನಿಯರ್ ಪಾತ್ರವು ಉನ್ನತ ಮಟ್ಟದ ವಾಸ್ತುಶಿಲ್ಪ ಮತ್ತು ಕಠಿಣ ಮೌಲ್ಯೀಕರಣದ ಕಡೆಗೆ ಬದಲಾಗುತ್ತಿರುವ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಕೃತಕ ಬುದ್ಧಿಮತ್ತೆಯು (ಎಐ) ಅಪಾರ ಉತ್ಪಾದಕತೆಯ ಲಾಭದ ಭರವಸೆ ನೀಡಿದರೆ, ಉದ್ಯಮ ಅಳವಡಿಕೆಗೆ ದತ್ತಾಂಶ ತರ್ಕಬದ್ಧಗೊಳಿಸುವಿಕೆಯಿಂದ ಬಳಕೆಯ ಆಧುನೀಕರಣದವರೆಗೆ ಗಮನಾರ್ಹ ವಾಸ್ತವ ಕಾರ್ಯದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಸಂಕುಚಿತದ ಬದಲು, ವಿಸ್ತರಣೆಯ ಮುನ್ನೋಟ ನೀಡುತ್ತಾ ಅವರು, "ನಾವು ವಲಯದ ಕುಗ್ಗುವಿಕೆಯನ್ನು ಊಹಿಸುವುದಿಲ್ಲ, ಬದಲಿಗೆ ಉತ್ಪಾದನಾ ಪ್ರಮಾಣದಲ್ಲಿ ಹೆಚ್ಚಳ ಮತ್ತು ನಾವು ಪರಿಹರಿಸಬಹುದಾದ ಸಮಸ್ಯೆಗಳ ಸಂಕೀರ್ಣತೆಯಲ್ಲಿ ಬೃಹತ್ ಏರಿಕೆ ನಿರೀಕ್ಷಿಸುತ್ತೇವೆ." ಎಂದು ಅವರು ವಿವರಿಸಿದರು.

ಉದ್ಯಮ ಎಐ ಅಳವಡಿಕೆಯು ಸಾಮಾನ್ಯ ಮಾದರಿಗಳಿಗಿಂತ ಹೆಚ್ಚಿನದನ್ನು ಬಯಸುತ್ತದೆ ಎಂಬ ಅಭಿಪ್ರಾಯವನ್ನು ಸಿ ವಿಜಯಕುಮಾರ್ ಪ್ರತಿಧ್ವನಿಸಿದರು. "ದೊಡ್ಡ ಭಾಷಾ ಮಾದರಿಗಳು ಮತ್ತು ಅಡಿಪಾಯ ಮಾದರಿಗಳನ್ನು ಉದ್ಯಮ ಬಳಕೆಯ ಪ್ರಕರಣಗಳಿಗೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಅನ್ವಯಿಸಲು ಸಾಧ್ಯವಾಗಿಲ್ಲ" ಎಂದು ಹೇಳಿದ ಅವರು, ಮೂಲಭೂತ ಸಾಮರ್ಥ್ಯಗಳು ಮತ್ತು ಉದ್ಯಮ-ದರ್ಜೆಯ ಕಾರ್ಯಕ್ಷಮತೆಯ ನಡುವಿನ ನಿರಂತರ ಅಂತರವನ್ನು ಗಮನಿಸಿದರು. ಎಚ್ ಸಿ ಎಲ್ ಟೆಕ್ನಾಲಜೀಸ್, ಈ ಅಂತರವನ್ನು ಕಡಿಮೆ ಮಾಡಲು ಮತ್ತು ಅಳವಡಿಕೆ ಪ್ರಮಾಣ ಹೆಚ್ಚಿಸಲು, ಅಸ್ತಿತ್ವದಲ್ಲಿರುವ ವ್ಯವಹಾರ ಮಾರ್ಗಗಳ ಪೂರ್ವಭಾವಿ ವಿಕಸನ ಎಂದು ಅರ್ಥೈಸಲ್ಪಟ್ಟರೂ ಸಹ, ಭೌತಿಕ ಎಐ ಮತ್ತು ಏಜೆಂಟ್ ಎಐ ಸೇರಿದಂತೆ ಬೌದ್ಧಿಕ ಆಸ್ತಿ ಮತ್ತು ವಿಶೇಷ ಸೇವೆಗಳನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು.

ಸಲೀಲ್ ಪರೇಖ್ ಮುಂಬರುವ ಅವಕಾಶಗಳ ಪ್ರಮಾಣವನ್ನು ಒತ್ತಿ ಹೇಳಿದರು. "ಎಐ 'ಅಸಾಧ್ಯ'ವನ್ನು ಆರ್ಥಿಕವಾಗಿ ಕಾರ್ಯಸಾಧ್ಯವಾಗಿಸುವ ಮೂಲಕ $300 ದಶಲಕ್ಷ ಸೇವೆಗಳ ಅವಕಾಶವನ್ನು ಸೃಜಿಸುತ್ತಿದೆ" ಎಂದು ಹೇಳಿದ ಅವರು, ಪರಂಪರೆಯ ಆಧುನೀಕರಣವನ್ನು ಪ್ರಮುಖ ಉದಾಹರಣೆಯಾಗಿ ನೀಡಿದರು. ಇನ್ಫೋಸಿಸ್ನ ಆರ್ಕೆಸ್ಟ್ರೇಶನ್ ಪ್ಲಾಟ್ ಫಾರಂಗಳ ಮೂಲಕ, ಮಾಪನ ಮಾಡಬಹುದಾದ ವ್ಯವಹಾರ ಮೌಲ್ಯ ತೆರೆಯಲು ವಿಶೇಷ ಏಜೆಂಟ್ ರೊಂದಿಗೆ ಮೂಲ ಮಾದರಿಗಳನ್ನು ಉದ್ಯಮಗಳು ಸಂಯೋಜಿಸಬಹುದು ಎಂದು ಅವರು ವಿವರಿಸಿದರು.

ಒಟ್ಟಾರೆಯಾಗಿ, ಸಮಿತಿಯು ಸ್ಪಷ್ಟ ಸಂದೇಶ ನೀಡಿದೆ: ಎಐ ಏಜೆಂಟ್ಗಳು ಉದ್ಯಮ ಮತ್ತು ಕಾರ್ಯಾಚರಣಾ ಮಾದರಿಗಳನ್ನು ಮರುರೂಪಿಸಲಿವೆಯಾದರೂ, ಅವುಗಳನ್ನು ರಾತ್ರೋರಾತ್ರಿ ಬಳಕೆಯಲ್ಲಿಲ್ಲದಂತೆ ಮಾಡುವುದಿಲ್ಲ. ಎಐ ಯುಗದಲ್ಲಿ ಯಶಸ್ಸು ಚುರುಕುತನ, ಉದ್ಯಮ ಸಿದ್ಧತೆ, ಸಂಯೋಜನೆಗೆ ಮೇಲೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ಹೆಚ್ಚು ಸಂಕೀರ್ಣವಾದ ಡಿಜಿಟಲ್ ಪರಿಸರ ವ್ಯವಸ್ಥೆಗಳಲ್ಲಿ ಗ್ರಾಹಕರ ನೈಜ ಸಮಸ್ಯೆಗಳನ್ನು ನಿರಂತರವಾಗಿ ಪರಿಹರಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.
*****
(ಪ್ರಕಟಣೆ ಐ.ಡಿ.: 2231117)
ವಿಸಿಟರ್ ಕೌಂಟರ್ : 2