ಹಣಕಾಸು ಸಚಿವಾಲಯ
azadi ka amrit mahotsav

‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನವು ಹಕ್ಕು ಪಡೆಯದ ಆಸ್ತಿಗಳ ಇತ್ಯರ್ಥದ ವೇಗವನ್ನು ಇನ್ನೂ ತೀವ್ರಗೊಳಿಸಿದೆ


ಜಾಗೃತಿ, ಲಭ್ಯತೆ, ಪ್ರವೇಶಸಾಧ್ಯತೆ ಮತ್ತು ಕ್ರಿಯೆಯ 3ಎ ಚೌಕಟ್ಟಿನ ಮಾರ್ಗದರ್ಶನದಲ್ಲಿ, ಅಕ್ಟೋಬರ್ 4 ರಿಂದ ಡಿಸೆಂಬರ್ 5, 2025 ರವರೆಗೆ ದೇಶಾದ್ಯಂತ 477 ಜಿಲ್ಲೆಗಳಲ್ಲಿ ಶಿಬಿರಗಳನ್ನು ನಡೆಸಲಾಗಿದೆ

ಪ್ರಕಟಣಾ ದಿನಾಂಕ: 09 DEC 2025 5:52PM by PIB Bengaluru

ಬ್ಯಾಂಕ್ ಠೇವಣಿಗಳು, ವಿಮೆ, ಲಾಭಾಂಶಗಳು, ಷೇರುಗಳು, ಮ್ಯೂಚುವಲ್ ಫಂಡ್ ಮತ್ತು ಪಿಂಚಣಿ ಸೇರಿದಂತೆ ಹಕ್ಕು ಪಡೆಯದ ಹಣಕಾಸು ಸ್ವತ್ತುಗಳನ್ನು ಅವರ ಕಾನೂನುಬದ್ಧ ಹಕ್ಕುದಾರರಿಗೆ ಇತ್ಯರ್ಥಪಡಿಸಲು ಅನುಕೂಲವಾಗುವಂತೆ ಭಾರತ ಸರ್ಕಾರವು “ನಿಮ್ಮ ಹಣ, ನಿಮ್ಮ ಹಕ್ಕು (ಆಪಕಿ ಪೂಜಾಂಜಿ, ಆಪಕಾ ಅಧಿಕಾರ್) ” ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ.

2025ರ ಅಕ್ಟೋಬರ್ 4 ರಂದು ಪ್ರಾರಂಭಿಸಲಾದ ಅಭಿಯಾನವು 3ಎ ಚೌಕಟ್ಟಿನ ಮೇಲೆ ನಿರ್ಮಿಸಲಾಗಿದೆ - ಅರಿವು, ಲಭ್ಯತೆ ಪ್ರವೇಶಸಾಧ್ಯತೆ ಮತ್ತು ಕ್ರಿಯೆ. ಈ ಮೂರು ತಿಂಗಳ ಅಭಿಯಾನವನ್ನು (ಅಕ್ಟೋಬರ್–ಡಿಸೆಂಬರ್ 2025) ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ತರಲಾಗಿದೆ.  ಅಕ್ಟೋಬರ್ ನಿಂದ ಡಿಸೆಂಬರ್ 5, 2025 ರವರೆಗೆ, 477 ಜಿಲ್ಲೆಗಳಲ್ಲಿ ಸಾರ್ವಜನಿಕ ಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಭಾಗವಹಿಸುವಿಕೆಯೊಂದಿಗೆ ಶಿಬಿರಗಳನ್ನು ನಡೆಸಲಾಗಿದೆ.

ಅಭಿಯಾನದ ಸಮಯದಲ್ಲಿ ಜನರನ್ನು ತಲುಪಲು, ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು (ಎಸ್ .ಒ.ಪಿ.ಗಳು), ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್.ಎ.ಕ್ಯೂ.ಗಳು), ಮತ್ತು ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಜಾಗೃತಿ ಸಾಮಗ್ರಿಗಳನ್ನು - ಕಿರು ವೀಡಿಯೊ ಸಂದೇಶಗಳೊಂದಿಗೆ - ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಜಿಲ್ಲಾ ಮಟ್ಟದ ಶಿಬಿರಗಳನ್ನು ಆನ್-ಗ್ರೌಂಡ್ ಡಿಜಿಟಲ್ ಪ್ರದರ್ಶನಗಳು, ಸಹಾಯವಾಣಿಗಳು ಮತ್ತು ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸಲು ಮಾರ್ಗದರ್ಶಿ ಬೆಂಬಲದೊಂದಿಗೆ ಆಯೋಜಿಸಲಾಗಿದೆ.

ಈ ಅಭಿಯಾನವು ಎಲ್ಲಾ ಪ್ರಮುಖ ಹಣಕಾಸು ವಲಯದ ನಿಧಿ ನಿಯಂತ್ರಕಗಳಾದ - ಭಾರತೀಯ ರಿಸರ್ವ್ ಬ್ಯಾಂಕ್ (ಅರ್.ಬಿ.ಐ.), ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ (ಸೆಬಿ), ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ.ಆರ್.ಡಿ.ಐ), ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪೆರ್ಡಾ) ಮತ್ತು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ (ಐ.ಇ.ಪಿ.ಎಪ್.ಎ) ಮುಂತಾದ ಸಂಸ್ಥೆಗಳ ಸಹಯೋಗದ ಸಕ್ರಿಯ ಭಾಗವಹಿಸುವಿಕೆಯನ್ನು ಒಳಗೊಂಡಿದೆ.  ಅರ್.ಬಿ.ಐ.ಯ ಯುಡಿಜಿಎಎಂ (ಹಕ್ಕು ಪಡೆಯದ ಬ್ಯಾಂಕ್ ಠೇವಣಿಗಳಿಗಾಗಿ), ಐ.ಆರ್.ಡಿ.ಐ ಯ ಬಿಮಾ ಭರೋಸಾ (ಹಕ್ಕು ಪಡೆಯದ ವಿಮಾ ಆದಾಯಕ್ಕಾಗಿ) ಮತ್ತು ಸೆಬಿ ಯ ಮಿತ್ರ (ಹಕ್ಕು ಪಡೆಯದ ಮ್ಯೂಚುವಲ್ ಫಂಡ್‌ ಗಳಿಗಾಗಿ) ನಂತಹ ಅಸ್ತಿತ್ವದಲ್ಲಿರುವ ವೇದಿಕೆಗಳು ನಾಗರಿಕರು ತಮ್ಮ ಹಕ್ಕು ಪಡೆಯದ ಸ್ವತ್ತುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಅಧಿಕಾರ ನೀಡಿವೆ. ಅಭಿಯಾನದ ಮೊದಲ ಎರಡು ತಿಂಗಳುಗಳಲ್ಲಿ, ಸುಮಾರು ₹ 2,000 ಕೋಟಿ ಮೊತ್ತದ ಹಕ್ಕು ಪಡೆಯದ ಹಣವನ್ನು ಅವುಗಳ ಹಕ್ಕು ಹೊಂದಿರುವ ಮಾಲೀಕರು ಹಕ್ಕು ಪಡೆದಿದ್ದಾರೆ.

ಈ ಮಾಹಿತಿಯನ್ನು ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಪಂಕಜ್ ಚೌಧರಿ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2201175) ವಿಸಿಟರ್ ಕೌಂಟರ್ : 49
ಪ್ರಕಟಣೆಯನ್ನು ಇದರಲ್ಲಿ ಓದಿ: Punjabi , English , Urdu , हिन्दी