ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು
ಹನ್ನೊಂದು ವರ್ಷಗಳ ನಂತರ, ಯೋಗವು ಪ್ರಪಂಚದಾದ್ಯಂತ ಕೋಟ್ಯಂತರ ಜನರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ: ಪ್ರಧಾನಮಂತ್ರಿ
"ಯೋಗವು ಗಡಿಗಳನ್ನು ಮೀರಿ, ಹಿನ್ನೆಲೆಯನ್ನು ಲೆಕ್ಕಿಸದೇ, ವಯಸ್ಸು ಅಥವಾ ಸಾಮರ್ಥ್ಯದ ಮಿತಿ ಇಲ್ಲದೇ ಎಲ್ಲರಿಗಾಗಿಯೂ ಇದೆ"
"ಯೋಗವು ತೀವ್ರವಾದ ವೈಯಕ್ತಿಕ ಶಿಸ್ತು, ಹಾಗೆಯೇ ಒಂದು ಸಾಮೂಹಿಕ ವ್ಯವಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತದೆ - ವ್ಯಕ್ತಿಗಳನ್ನು ʼನಾನುʼ ಎಂಬುದರಿಂದ ʼನಾವುʼ ಎಂಬುದರ ಕಡೆಗೆ ಪರಿವರ್ತಿಸುತ್ತದೆ"
"ಭಾರತವು "ಸರ್ವೇ ಭವಂತು ಸುಖಿನಃ" - ಎಲ್ಲರ ಸಂತೋಷ ಮತ್ತು ಯೋಗಕ್ಷೇಮವು ಪವಿತ್ರ ಜವಾಬ್ದಾರಿಯಾಗಿದೆ- ಎಂಬ ಮೌಲ್ಯವನ್ನು ಕಲಿಸುತ್ತದೆ "
"ಯೋಗವು ಜಗತ್ತನ್ನು ಸಂಘರ್ಷದಿಂದ ಸಹಕಾರದೆಡೆಗೆ ಮತ್ತು ಉದ್ವಿಗ್ನತೆಯಿಂದ ಪರಿಹಾರದತ್ತ ಕರೆದೊಯ್ಯಬೇಕು"
ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು ನವದೆಹಲಿಯ ಕರ್ತವ್ಯ ಪಥದಲ್ಲಿ ಸಾಮೂಹಿಕ ಯೋಗ ಪ್ರದರ್ಶನದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮುನ್ನಡೆಸಿದರು
2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತಮ್ಮ ಭಾಷಣದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು ಪ್ರತಿ ವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲು ಪ್ರಸ್ತಾಪಿಸಿದ್ದರು. ಇದನ್ನು 170 ಕ್ಕೂ ಹೆಚ್ಚು ದೇಶಗಳು ಬೆಂಬಲಿಸಿದವು: ಶ್ರೀ ಜೆ.ಪಿ. ನಡ್ಡಾ
“2015 ರಿಂದ, ಯೋಗವು ಆರೋಗ್ಯದ ಸಮಗ್ರ ವಿಧಾನವಾಗಿ ಜಾಗತಿಕ ಸ್ವೀಕಾರವನ್ನು ಗಳಿಸಿದೆ”
“ಯೋಗವು ಜನರ ಆರೋಗ್ಯ ಮತ್ತು ಸದೃಢತೆ (ಫಿಟ್ನೆಸ್) ಯನ್ನು ಸುಧಾರಿಸುವುದಲ್ಲದೆ, ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ನಿಯಂತ್ರಣವನ್ನು ಹೆಚ್ಚಿಸುತ್ತದೆ, ಹೆಚ್ಚು ಸಮತೋಲಿತ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಕೊಡುಗೆ ನೀಡುತ್ತದೆ”
Posted On:
21 JUN 2025 9:55AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತ ಮತ್ತು ವಿಶ್ವದಾದ್ಯಂತದ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು ಮತ್ತು ಯೋಗ ಅಧಿವೇಶನದಲ್ಲಿ ಭಾಗವಹಿಸಿದರು. "ಹನ್ನೊಂದು ವರ್ಷಗಳ ನಂತರ, ಯೋಗವು ಪ್ರಪಂಚದಾದ್ಯಂತ ಕೋಟ್ಯಂತರ ಜನರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ" ಎಂದು ಅವರು ಹೇಳಿದರು.


ದೃಷ್ಟಿ ಕಳೆದುಕೊಂಡವರು (ದಿವ್ಯಾಂಗರು) ಬ್ರೈಲ್ ಲಿಪಿಯಲ್ಲಿ ಯೋಗ ಗ್ರಂಥಗಳನ್ನು ಓದುವುದನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತೋಷ ವ್ಯಕ್ತಪಡಿಸಿದರು ಮತ್ತು ಬಾಹ್ಯಾಕಾಶದಲ್ಲಿಯೂ ಯೋಗಾಭ್ಯಾಸ ಮಾಡುತ್ತಿರುವ ವಿಜ್ಞಾನಿಗಳನ್ನು ಶ್ಲಾಘಿಸಿದರು. ಯೋಗ ಒಲಿಂಪಿಯಾಡ್ ನಲ್ಲಿ ಗ್ರಾಮೀಣ ಪ್ರದೇಶದ ಯುವಜನತೆಯ ಸಕ್ರಿಯ ಭಾಗವಹಿಸುವಿಕೆಯನ್ನು ಅವರು ಪ್ರಶಂಸಿಸಿದರು ಮತ್ತು ಸಿಡ್ನಿ ಒಪೇರಾ ಹೌಸ್ ನಂತಹ ಪ್ರತಿಷ್ಠಿತ ಸ್ಥಳಗಳಿಂದ ಹಿಡಿದು ಮೌಂಟ್ ಎವರೆಸ್ಟ್ ಶಿಖರ ಮತ್ತು ವಿಶಾಲ ಸಾಗರದವರೆಗೆ, “ಗಡಿಗಳನ್ನು ಮೀರಿ, ಹಿನ್ನೆಲೆಯನ್ನು ಲೆಕ್ಕಿಸದೇ, ವಯಸ್ಸು ಅಥವಾ ಸಾಮರ್ಥ್ಯದ ಮಿತಿ ಇಲ್ಲದೇ ಒಂದು ಸಂದೇಶ ಪ್ರತಿಧ್ವನಿಸುತ್ತಿದೆ ಅದುವೇ ಎಲ್ಲರಿಗೂ ಯೋಗ" ಎಂದು ಅವರು ಒತ್ತಿ ಹೇಳಿದರು.

ಯೋಗಾಂಧ್ರ ಅಭಿಯಾನದಲ್ಲಿ ಎರಡು ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು, ಇದು ಸಾರ್ವಜನಿಕರ ಭಾಗವಹಿಸುವಿಕೆಯ ರೋಮಾಂಚಕ ಪ್ರದರ್ಶನ ಎಂದು ಅವರು ಬಣ್ಣಿಸಿದರು. ಅಂತಹ ಉತ್ಸಾಹಭರಿತ ನಾಗರಿಕರ ಭಾಗವಹಿಸುವಿಕೆಯು ವಿಕಸಿತ ಭಾರತದ ಮೂಲಾಧಾರವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಜನರು ಒಂದು ಉದ್ದೇಶಕ್ಕಾಗಿ ಉಪಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡಾಗ, ಯಾವುದೇ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯವಾದ "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ" ಕುರಿತು ಮಾತನಾಡಿದ ಪ್ರಧಾನಿ, ಇದು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಯೋಗಕ್ಷೇಮವು ಪರಸ್ಪರ ಸಂಬಂಧ ಹೊಂದಿದೆ ಎಂಬ ಮೂಲಭೂತ ಸತ್ಯವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದರು. ಮಾನವನ ಆರೋಗ್ಯವು ಮಣ್ಣಿನ ಗುಣಮಟ್ಟ, ನೀರಿನ ಶುದ್ಧತೆ, ಪ್ರಾಣಿಗಳ ಯೋಗಕ್ಷೇಮ ಮತ್ತು ಸಸ್ಯಗಳಿಂದ ನಾವು ಪಡೆಯುವ ಪೋಷಣೆಗೆ ಸಂಬಂಧಿಸಿದೆ ಎಂದು ಅವರು ವಿವರಿಸಿದರು. ಈ ಆಳವಾದ ಸಂಪರ್ಕದ ಬಗ್ಗೆ ನಮಗೆ ಅರಿವು ಮೂಡಿಸಲು ಯೋಗ ಸಹಾಯ ಮಾಡುತ್ತದೆ ಮತ್ತು ಪ್ರಪಂಚದೊಂದಿಗೆ ಏಕತೆಯೆಡೆಗಿನ ಪಯಣದಲ್ಲಿ ನಮ್ಮನ್ನು ಮುನ್ನಡೆಸುತ್ತದೆ ಎಂದು ಅವರು ಹೇಳಿದರು. "ನಾವು ಪ್ರತ್ಯೇಕ ವ್ಯಕ್ತಿಗಳಲ್ಲ, ಪ್ರಕೃತಿಯ ಅವಿಭಾಜ್ಯ ಅಂಗಗಳು ಎಂಬುದನ್ನು ಯೋಗ ನಮಗೆ ಕಲಿಸುತ್ತದೆ. ಆರಂಭದಲ್ಲಿ, ನಾವು ನಮ್ಮ ಸ್ವಂತ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಲು ಕಲಿಯುತ್ತೇವೆ, ಆದರೆ ಕ್ರಮೇಣ, ಈ ಕಾಳಜಿ ನಮ್ಮ ಪರಿಸರ, ಸಮಾಜ ಮತ್ತು ಗ್ರಹದವರೆಗೆ ವಿಸ್ತರಿಸುತ್ತದೆ. ಯೋಗವು ತೀವ್ರವಾದ ವೈಯಕ್ತಿಕ ಶಿಸ್ತು, ಅದೇ ಸಮಯದಲ್ಲಿ ಸಾಮೂಹಿಕ ವ್ಯವಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತದೆ - ವ್ಯಕ್ತಿಗಳನ್ನು ನಾನು ಎಂಬುದರಿಂದ ನಾವು ಎಂಬುದರ ಕಡೆಗೆ ಪರಿವರ್ತಿಸುತ್ತದೆ, ”ಎಂದು ಅವರು ಹೇಳಿದರು.
ನಾನು ಎಂಬುದರಿಂದ ನಾವು' ಎಂಬ ಮನೋಭಾವವು ಭಾರತದ ಆತ್ಮವನ್ನೇ ಆವರಿಸಿಕೊಂಡಿದೆ ಮತ್ತು ವ್ಯಕ್ತಿಗಳು ವೈಯಕ್ತಿಕ ಹಿತಾಸಕ್ತಿಗಳನ್ನು ಮೀರಿ ಎಲ್ಲರ ಕಲ್ಯಾಣವನ್ನು ಪ್ರೋತ್ಸಾಹಿಸುವ ಭಾರತೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಸಾಂಸ್ಕೃತಿಕ ಮೌಲ್ಯಗಳನ್ನು ಉಲ್ಲೇಖಿಸಿದ ಪ್ರಧಾನಿಯವರು, ಭಾರತವು "ಸರ್ವೇ ಭವಂತು ಸುಖಿನಃ" - ಎಲ್ಲರ ಸಂತೋಷ ಮತ್ತು ಯೋಗಕ್ಷೇಮವು ಪವಿತ್ರ ಜವಾಬ್ದಾರಿಯಾಗಿದೆ ಎಂಬ ಮೌಲ್ಯವನ್ನು ಕಲಿಸುತ್ತದೆ ಎಂದು ಹೇಳಿದರು. ಈ ತತ್ವವು ಸೇವೆ, ನಿಸ್ವಾರ್ಥತೆ ಮತ್ತು ಸಾಮರಸ್ಯಕ್ಕೆ ಅಡಿಪಾಯವಾಗಿದೆ ಎಂದು ಅವರು ಹೇಳಿದರು.
ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಉದ್ವಿಗ್ನತೆ, ಅಸ್ಥಿರತೆ ಮತ್ತು ಸಂಘರ್ಷಗಳ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದರು. "ಯೋಗವು ಮಾನವಕುಲಕ್ಕೆ ಉಸಿರಾಡಲು, ಸಮತೋಲನವನ್ನು ಸಾಧಿಸಲು, ಮತ್ತೆ ಪರಿಪೂರ್ಣವಾಗಲು ಅಗತ್ಯವಿರುವ ವಿರಾಮ ನಿಲುಗಡೆಯಾಗಿದೆ" ಎಂದು ಹೇಳುವ ಮೂಲಕ ಅವರು ಯೋಗವನ್ನು ಪರಿಹಾರವಾಗಿ ತೋರಿಸಿದರು. "ಈ ಯೋಗ ದಿನವು ಮಾನವೀಯತೆಗಾಗಿ ಯೋಗ 2.0 ರ ಆರಂಭವನ್ನು ಸೂಚಿಸುತ್ತದೆ, ಅಲ್ಲಿ ಆಂತರಿಕ ಶಾಂತಿ ಜಾಗತಿಕ ನೀತಿಯಾಗುತ್ತದೆ" ಎಂದು ಪ್ರಸ್ತಾಪಿಸಿದ ಅವರು ಜಾಗತಿಕ ಸಮುದಾಯಕ್ಕೆ ಹೃತ್ಪೂರ್ವಕ ಮನವಿ ಮಾಡಿದರು. ಯೋಗವನ್ನು ಕೇವಲ ವೈಯಕ್ತಿಕ ದಿನಚರಿಗಿಂತ ಹೆಚ್ಚಾಗಿ ಮಾಡುವ ಮಹತ್ವವನ್ನು ಒತ್ತಿ ಹೇಳಿದ ಅವರು, ಅದು ಜಾಗತಿಕ ಪಾಲುದಾರಿಕೆಗಳಿಗೆ ವೇಗವರ್ಧಕವಾಗಬೇಕು ಎಂದರು. ಹೆಚ್ಚು ಶಾಂತಿಯುತ, ಸಮತೋಲಿತ ಮತ್ತು ಸುಸ್ಥಿರ ಗ್ರಹವನ್ನು ನಿರ್ಮಿಸುವ ಒಗ್ಗಟ್ಟಿನ ಪ್ರಯತ್ನಕ್ಕಾಗಿ ತಮ್ಮ ದೃಷ್ಟಿಕೋನವನ್ನು ವಿವರಿಸಿದ ಅವರು, ದೈನಂದಿನ ಜೀವನ ಮತ್ತು ಸಾರ್ವಜನಿಕ ನೀತಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಲು ಎಲ್ಲಾ ದೇಶಗಳು ಮತ್ತು ಸಮಾಜಗಳಿಗೆ ಕರೆ ನೀಡಿದರು. "ಯೋಗವು ಜಗತ್ತನ್ನು ಸಂಘರ್ಷದಿಂದ ಸಹಕಾರದೆಡೆಗೆ ಮತ್ತು ಒತ್ತಡದಿಂದ ಪರಿಹಾರಗಳತ್ತ ಕರೆದೊಯ್ಯಬೇಕು ಮಾಡಬೇಕು" ಎಂದು ಹೇಳಿದರು.
ಬೊಜ್ಜಿನ ಜಾಗತಿಕ ಸವಾಲಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಮಂತ್ರಿಯವರು ತಮ್ಮ ಹಿಂದಿನ ಮನ್ ಕಿ ಬಾತ್ ಭಾಷಣದಲ್ಲಿ ದಿನಕ್ಕೆ ಶೇ. 10 ರಷ್ಟು ತೈಲ ಬಳಕೆಯನ್ನು ಕಡಿಮೆ ಮಾಡುವ ಅಭಿಯಾನವನ್ನು ಪ್ರಾರಂಭಿಸಿದ್ದನ್ನು ನೆನಪಿಸಿಕೊಂಡರು. ಭಾರತ ಮತ್ತು ಪ್ರಪಂಚದಾದ್ಯಂತದ ಜನರು ಈ ಉಪಕ್ರಮದಲ್ಲಿ ಭಾಗವಹಿಸುವಂತೆ ಅವರು ತಮ್ಮ ಮನವಿಯನ್ನು ಪುನರುಚ್ಚರಿಸಿದರು. ಉತ್ತಮ ಆರೋಗ್ಯಕ್ಕಾಗಿ ತೈಲ ಸೇವನೆಯನ್ನು ಕಡಿಮೆ ಮಾಡುವುದು, ಹಾನಿಕಾರಕ ಆಹಾರ ಪದ್ಧತಿಗಳನ್ನು ತಪ್ಪಿಸುವುದು ಮತ್ತು ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಶ್ರೀ ಮೋದಿ ಒತ್ತಿ ಹೇಳಿದರು.


ಎಲ್ಲರೂ ಯೋಗವನ್ನು ಜನಾಂದೋಲನವನ್ನಾಗಿ ಮಾಡುವಂತೆ ಪ್ರಧಾನಿ ಒತ್ತಾಯಿಸಿದರು. ಯೋಗದ ಶಕ್ತಿಯಿಂದ ಜಾಗತಿಕ ಶಾಂತಿ, ಆರೋಗ್ಯ ಮತ್ತು ಸಾಮರಸ್ಯದ ಅಲೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ವೈಯಕ್ತಿಕ ಜೀವನದ ಸಮತೋಲನಕ್ಕಾಗಿ ಜನರು ಪ್ರತಿದಿನವನ್ನು ಯೋಗದೊಂದಿಗೆ ಪ್ರಾರಂಭಿಸುವಂತೆ ಅವರು ಪ್ರೋತ್ಸಾಹಿಸಿದರು ಮತ್ತು ಸಾಮೂಹಿಕ ಒತ್ತಡವನ್ನು ಕಡಿಮೆ ಮಾಡಲು ಸಮಾಜವು ಯೋಗವನ್ನು ಸ್ವೀಕರಿಸುವಂತೆ ಕರೆ ನೀಡಿದರು. "ಯೋಗವು ಮಾನವೀಯತೆಯನ್ನು ಒಗ್ಗೂಡಿಸುವ ಎಳೆಯಾಗಿ ಕಾರ್ಯನಿರ್ವಹಿಸಬೇಕು, ಯೋಗವು ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಜಾಗತಿಕ ಸಂಕಲ್ಪವಾಗಬೇಕು." ಎಂದು ಪ್ರಧಾನಿ ಹೇಳಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ನವದೆಹಲಿಯ ಕರ್ತವ್ಯ ಪಥದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ ಸಾಮೂಹಿಕ ಯೋಗ ಪ್ರದರ್ಶನದ ನೇತೃತ್ವ ವಹಿಸುವ ಮೂಲಕ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನಡ್ಡಾ, "ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತಮ್ಮ ಭಾಷಣದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರು ಪ್ರತಿ ವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಬೇಕೆಂದು ಪ್ರಸ್ತಾಪಿಸಿದ್ದರು, ಇದಕ್ಕೆ 170ಕ್ಕೂ ಹೆಚ್ಚು ದೇಶಗಳು ಬೆಂಬಲ ನೀಡಿದವು" ಎಂದು ಹೇಳಿದರು.

"2015 ರಿಂದ, ಯೋಗವು ಆರೋಗ್ಯಕ್ಕೆ ಸಮಗ್ರ ವಿಧಾನವಾಗಿ ಜಾಗತಿಕವಾಗಿ ಸ್ವೀಕಾರಾರ್ಹತೆಯನ್ನು ಗಳಿಸಿದೆ. ಯೋಗವು ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವುದಲ್ಲದೆ, ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ನಿಯಂತ್ರಣವನ್ನು ಹೆಚ್ಚಿಸುತ್ತದೆ, ಜೀವನವನ್ನು ಹೆಚ್ಚು ಸಮತೋಲಿತ ಮತ್ತು ತೃಪ್ತಿಕರವಾಗಿಸಲು ಕೊಡುಗೆ ನೀಡುತ್ತದೆ" ಎಂದು ಶ್ರೀ ನಡ್ಡಾ ಹೇಳಿದರು.
11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತದಾದ್ಯಂತ ಲಕ್ಷಾಂತರ ಸ್ಥಳಗಳಿಂದ ಕೋಟ್ಯಂತರ ಜನರು ಯೋಗ ಪ್ರದರ್ಶನ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. "ಈ ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಆಚರಿಸಲು, ಈ ಪ್ರಕ್ರಿಯೆಯಲ್ಲಿ ನಮ್ಮ ದೇಹ ಮತ್ತು ಮನಸ್ಸನ್ನು ಸುಧಾರಿಸಲು ಮತ್ತು ಯೋಗದ ಮೂಲಕ ನಮ್ಮನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾವೆಲ್ಲರೂ ಇಲ್ಲಿ ಒಟ್ಟುಗೂಡಿರುವುದು ಹೆಮ್ಮೆಯ ಕ್ಷಣವಾಗಿದೆ" ಎಂದು ಅವರು ಹೇಳಿದರು.


ಆರೋಗ್ಯ ರಕ್ಷಣೆಗೆ ಹೆಚ್ಚು ಸಮಗ್ರ ಮತ್ತು ಸುಲಭವಾಗಿ ಲಭ್ಯವಾಗುವ ವಿಧಾನವನ್ನು ಒದಗಿಸಲು ರಾಷ್ಟ್ರೀಯ ಆರೋಗ್ಯ ನೀತಿ 2017 ರಲ್ಲಿ ಯೋಗವನ್ನು ಸೇರಿಸಲಾಗಿದೆ ಎಂದು ಶ್ರೀ ನಡ್ಡಾ ಒತ್ತಿ ಹೇಳಿದರು. ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಯೋಗ ಮತ್ತು ಆಧುನಿಕ ಔಷಧಿಗಳಂತಹ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳನ್ನು ಒಳಗೊಂಡ ಸಮಗ್ರ ಪರಿಹಾರಗಳನ್ನು ಒದಗಿಸಲು ದೆಹಲಿಯ ಏಮ್ಸ್ನಲ್ಲಿ ಹೊಸ ಸಮಗ್ರ ಔಷಧ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭಾಗವಹಿಸಿದ ಎಲ್ಲರೂ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಲು ಮತ್ತು ಆರೋಗ್ಯಕರ ರಾಷ್ಟ್ರಕ್ಕಾಗಿ ಕೆಲಸ ಮಾಡಲು ಪ್ರೋತ್ಸಾಹಿಸುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
"ಯೋಗವು ಭಾರತದ ಆತ್ಮದಿಂದ ಹೊರಹೊಮ್ಮಿದ ಸಾರ್ವತ್ರಿಕ ಪ್ರಜ್ಞೆಯ ಆಚರಣೆಯಾಗಿದೆ ಮತ್ತು ಇದು ಲಕ್ಷಾಂತರ ಜೀವಗಳನ್ನು ತಲುಪಿರುವುದು ಮಾತ್ರವಲ್ಲದೆ ಜಾಗತಿಕ ಆರೋಗ್ಯ ಮತ್ತು ಸಾಮೂಹಿಕ ಶಾಂತಿಗೆ ಶಾಶ್ವತ ಮಾರ್ಗವನ್ನು ಸುಗಮಗೊಳಿಸಿದೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಪ್ರತಾಪ್ರಾವ್ ಜಾಧವ್ ಹೇಳಿದರು.
"ಕಳೆದ ಹತ್ತು ವರ್ಷಗಳಲ್ಲಿ, ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಭಾರತವು ಯೋಗವನ್ನು ಕೇವಲ 'ವ್ಯಾಯಾಮ' ಅಥವಾ 'ಪರ್ಯಾಯ ಔಷಧ'ವಾಗಿ ಮಾತ್ರವಲ್ಲದೆ ಜೀವನ ವಿಧಾನವಾಗಿಯೂ ಅಳವಡಿಸಿದೆ. ಇದು ಯೋಗದ ಆಧ್ಯಾತ್ಮಿಕ ಆಳ, ವೈಜ್ಞಾನಿಕ ದೃಢೀಕರಣ ಮತ್ತು ಸಾಮಾಜಿಕ ಸಾಮರಸ್ಯವನ್ನು ಸಂಯೋಜಿಸುವ ಮೂಲಕ ಮುಂದುವರಿಯುವ ಯುಗವಾಗಿದೆ" ಎಂದು ಅವರು ಒತ್ತಿ ಹೇಳಿದರು.
"ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ಇದು ಇಡೀ ಜಗತ್ತಿಗೆ ಆರೋಗ್ಯಕರ ಜೀವನವನ್ನು ನಡೆಸಲು ನಿರ್ದೇಶನ ನೀಡಿದೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಅನುಪ್ರಿಯಾ ಸಿಂಗ್ ಪಟೇಲ್ ಹೇಳಿದರು. "ಇದು ದೇಹ, ಮನಸ್ಸು ಮತ್ತು ಆತ್ಮವನ್ನು ಬೆಸೆಯುವ ಅದ್ಭುತ ವಿಜ್ಞಾನವಾಗಿದೆ" ಎಂದು ಅವರು ಹೇಳಿದರು.
*****
(Release ID: 2138372)