ನೀತಿ ಆಯೋಗ
azadi ka amrit mahotsav

ಮೇ 24 ರಂದು ನವದೆಹಲಿಯಲ್ಲಿ ನಡೆಯಲಿರುವ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಗೆ ಪ್ರಧಾನಮಂತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ


ಥೀಮ್: 2047ರ ವಿಕಸಿತ ಭಾರತಕ್ಕಾಗಿ ವಿಕಸಿತ ರಾಜ್ಯ

Posted On: 23 MAY 2025 7:03PM by PIB Bengaluru

ವಿಕಸಿತ ಭಾರತಕ್ಕಾಗಿ ಎಲ್ಲಾ ರಾಜ್ಯಗಳನ್ನು 'ಟೀಮ್ ಇಂಡಿಯಾ'ವಾಗಿ ಒಗ್ಗೂಡಿಸಿ ಮುನ್ನಡೆಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 24, 2025 ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಲಿರುವ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವರ್ಷದ ಸಭೆಯ ಮುಖ್ಯ ಧ್ಯೇಯವು '2047ರ ವಿಕಸಿತ ಭಾರತಕ್ಕಾಗಿ ವಿಕಸಿತ ರಾಜ್ಯ' (Viksit Rajya for Viksit Bharat@2047) ಎಂಬುದಾಗಿದ್ದು, ರಾಜ್ಯಗಳ ಮೇಲೆ ಪ್ರಮುಖವಾಗಿ ಗಮನ ಕೇಂದ್ರೀಕರಿಸಿ, ಆ ಮೂಲಕ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವುದಾಗಿದೆ. ಈ ಆಡಳಿತ ಮಂಡಳಿ ಸಭೆಯು 'ವಿಕಸಿತ ಭಾರತ @2047 ಕ್ಕಾಗಿ ವಿಕಸಿತ ರಾಜ್ಯ' ಎಂಬ ಗುರಿಯನ್ನು ಸಾಧಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸಲಿದೆ.

ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ರೂಪುಗೊಳ್ಳುತ್ತಿರುವ ಈ ಹಂತದಲ್ಲಿ, ರಾಜ್ಯಗಳು ತಮ್ಮ ವಿಶಿಷ್ಟ ಶಕ್ತಿಗಳನ್ನು ಸರಿಯಾಗಿ ಬಳಸಿಕೊಂಡು ತಳಮಟ್ಟದಲ್ಲಿ ಪರಿವರ್ತನಾತ್ಮಕ ಬದಲಾವಣೆಗಳನ್ನು ತರುವುದು ಅತ್ಯಗತ್ಯವಾಗಿದೆ. 140 ಕೋಟಿ ನಾಗರಿಕರ ಆಶೋತ್ತರಗಳು ನೆಲಮಟ್ಟದಲ್ಲಿ ನೈಜ ಫಲಿತಾಂಶಗಳಾಗಿ ಮೂಡಿಬರಬೇಕು. 'ವಿಕಸಿತ ರಾಜ್ಯದಿಂದ ವಿಕಸಿತ ಭಾರತ' ಎಂಬ ಚಿಂತನೆಯು, ರಾಜ್ಯಗಳು ರಾಷ್ಟ್ರೀಯ ಆದ್ಯತೆಗಳೊಂದಿಗೆ ಸಮನ್ವಯ ಸಾಧಿಸುವ, ಆದರೆ ಸ್ಥಳೀಯ ವಾಸ್ತವಗಳನ್ನು ಆಧರಿಸಿದ ದಿಟ್ಟ, ದೀರ್ಘಕಾಲೀನ ಮತ್ತು ಎಲ್ಲರನ್ನೂ ಒಳಗೊಳ್ಳುವ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕೆಂಬ ಕರೆ ನೀಡುತ್ತದೆ. ಈ ಯೋಜನೆಗಳು ನಿರ್ದಿಷ್ಟ ಕಾಲಮಿತಿಯ ಗುರಿಗಳನ್ನು ಹೊಂದಿರಬೇಕು. ರಾಜ್ಯಗಳು ತಮ್ಮ ವಿಶಿಷ್ಟ ಭೌಗೋಳಿಕ ಮತ್ತು ಜನಸಂಖ್ಯಾ ಅನುಕೂಲಗಳನ್ನು ಬಳಸಿಕೊಳ್ಳುವುದರ ಜೊತೆಗೆ ಮಾನವ ಅಭಿವೃದ್ಧಿ, ಆರ್ಥಿಕ ಪ್ರಗತಿ, ಸುಸ್ಥಿರತೆ, ತಂತ್ರಜ್ಞಾನ ಮತ್ತು ಆಡಳಿತ ಸುಧಾರಣೆಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ದತ್ತಾಂಶ-ಆಧಾರಿತ ಪ್ರಕ್ರಿಯೆಗಳು ಮತ್ತು ಫಲಿತಾಂಶ-ಕೇಂದ್ರಿತ ಪರಿವರ್ತನೆಗೆ ಒತ್ತು ನೀಡಬೇಕು. ಇದಕ್ಕೆ ಪೂರಕವಾಗಿ, ಜವಾಬ್ದಾರಿಯುತೆಯನ್ನು ಖಾತ್ರಿಪಡಿಸಲು ಮತ್ತು ಮಧ್ಯಂತರದಲ್ಲಿ ಅವಶ್ಯಕ ತಿದ್ದುಪಡಿಗಳನ್ನು ಕೈಗೊಳ್ಳಲು ಯೋಜನಾ ಮೇಲ್ವಿಚಾರಣಾ ಘಟಕಗಳು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಆಧಾರಿತ ಮೂಲಸೌಕರ್ಯ ಹಾಗೂ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಘಟಕಗಳ ಬೆಂಬಲ ಅತ್ಯಗತ್ಯವಾಗಿರುತ್ತದೆ.

10ನೇ ಆಡಳಿತ ಮಂಡಳಿ ಸಭೆಯು, ರಾಷ್ಟ್ರವು ಎದುರಿಸುತ್ತಿರುವ ಅಭಿವೃದ್ಧಿ ಸವಾಲುಗಳ ಕುರಿತು ವಿಮರ್ಶಿಸಲು ಹಾಗೂ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ರಾಜ್ಯಗಳು ಹೇಗೆ ಅಡಿಗಲ್ಲುಗಳಾಗಬಲ್ಲವು (ಅಂದರೆ, 'ವಿಕಸಿತ ಭಾರತಕ್ಕಾಗಿ ವಿಕಸಿತ ರಾಜ್ಯ' ಎಂಬ ಆಶಯದಂತೆ) ಎಂಬುದರ ಕುರಿತು ಒಮ್ಮತ ಮೂಡಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ. ದೇಶದಾದ್ಯಂತ ಉದ್ಯಮಶೀಲತೆಯನ್ನು ಉತ್ತೇಜಿಸುವ, ಕೌಶಲ್ಯಗಳನ್ನು ಹೆಚ್ಚಿಸುವ ಮತ್ತು ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ರಮಗಳ ಕುರಿತೂ ಸಹ ಈ ಸಭೆಯಲ್ಲಿ ಚರ್ಚಿಸಲಾಗುವುದು.

ನೀತಿ ಆಯೋಗದ ಆಡಳಿತ ಮಂಡಳಿಯು, ಡಿಸೆಂಬರ್ 13 ರಿಂದ 15, 2024 ರವರೆಗೆ ನಡೆದ ನಾಲ್ಕನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದ ವಿಷಯಗಳ ಕುರಿತು ಒಮ್ಮತ ಮೂಡಿಸುವತ್ತಲೂ ಗಮನಹರಿಸಲಿದೆ. 'ವಿಕಸಿತ ಭಾರತ@2047'ರ ಕಾರ್ಯಸೂಚಿಗಾಗಿ ರೂಪುರೇಷೆಗಳನ್ನು ನಿರ್ಧರಿಸುವ ಮತ್ತು ಸಲಹೆಗಳನ್ನು ನೀಡುವ ಸಮಾಲೋಚನಾ ಪ್ರಕ್ರಿಯೆಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಭಾಗಿಯಾಗಿದ್ದರು. ನಾಲ್ಕನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ, 'ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯವನ್ನು ಉತ್ತೇಜಿಸುವುದು- ಜನಸಂಖ್ಯಾ ಲಾಭಾಂಶದ ಸದ್ಬಳಕೆ' ಎಂಬ ಪ್ರಧಾನ ವಿಷಯದ ಅಡಿಯಲ್ಲಿ, ಈ ಕೆಳಗಿನ ಆರು ಪ್ರಮುಖ ವಿಷಯಗಳ ಕುರಿತು ಶಿಫಾರಸುಗಳನ್ನು ಮಾಡಲಾಗಿತ್ತು:

1.    ಸಶಕ್ತ ಪರಿಸರ ವ್ಯವಸ್ಥೆಯನ್ನು ರಚಿಸುವುದು - ದ್ವಿತೀಯ ಮತ್ತು ತೃತೀಯ ಶ್ರೇಣಿಯ ನಗರಗಳ ಮೇಲೆ ಗಮನ: ಉತ್ಪಾದನೆ; 

2.    ಸಶಕ್ತ ಪರಿಸರ ವ್ಯವಸ್ಥೆಯನ್ನು ರಚಿಸುವುದು - ದ್ವಿತೀಯ ಮತ್ತು ತೃತೀಯ ಶ್ರೇಣಿಯ ನಗರಗಳ ಮೇಲೆ ಗಮನ: ಸೇವೆಗಳು; 

3.    MSME ಗಳು ಮತ್ತು ಅನೌಪಚಾರಿಕ ಉದ್ಯೋಗ: ಗ್ರಾಮೀಣ ಕೃಷಿಯೇತರ; 

4.    MSME ಗಳು ಮತ್ತು ಅನೌಪಚಾರಿಕ ಉದ್ಯೋಗ: ನಗರ; 

5.    ಹಸಿರು ಆರ್ಥಿಕತೆಯಲ್ಲಿನ ಅವಕಾಶಗಳು: ನವೀಕರಿಸಬಹುದಾದ ಶಕ್ತಿ; ಮತ್ತು 

6.    ಹಸಿರು ಆರ್ಥಿಕತೆಯಲ್ಲಿನ ಅವಕಾಶಗಳು: ವೃತ್ತಾಕಾರದ ಆರ್ಥಿಕತೆ

10ನೇ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳು, ಕೇಂದ್ರ ಸಚಿವರು ಮತ್ತು ನೀತಿ ಆಯೋಗದ ಉಪಾಧ್ಯಕ್ಷರು, ಸದಸ್ಯರು ಮತ್ತು ಸಿಇಒ ಭಾಗವಹಿಸಲಿದ್ದಾರೆ.

 

*****
 


(Release ID: 2131046)