ಪ್ರಧಾನ ಮಂತ್ರಿಯವರ ಕಛೇರಿ
ಉದ್ಯೋಗ ಸೃಷ್ಟಿಗೆ ಉತ್ತೇಜನ - ಜನರು, ಆರ್ಥಿಕತೆ ಮತ್ತು ನಾವೀನ್ಯತೆಯಲ್ಲಿ ಹೂಡಿಕೆ ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು
ಈ ವರ್ಷದ ಕೇಂದ್ರ ಬಜೆಟ್ ಬಲವಾದ ಕಾರ್ಮಿಕಪಡೆ ಮತ್ತು ಬೆಳೆಯುತ್ತಿರುವ ಆರ್ಥಿಕತೆಗೆ ದಾರಿ ಮಾಡಿಕೊಡುತ್ತದೆ: ಪ್ರಧಾನಮಂತ್ರಿ
ಹೂಡಿಕೆಯಲ್ಲಿ ಮೂಲಸೌಕರ್ಯ ಮತ್ತು ಕೈಗಾರಿಕೆಗಳಂತೆಯೇ ಜನರು, ಆರ್ಥಿಕತೆ ಮತ್ತು ನಾವೀನ್ಯತೆಗೂ ನಾವು ಆದ್ಯತೆ ನೀಡಿದ್ದೇವೆ: ಪ್ರಧಾನಮಂತ್ರಿ
ಜನರಲ್ಲಿ ಹೂಡಿಕೆಯ ದೃಷ್ಟಿಕೋನವು ಶಿಕ್ಷಣ, ಕೌಶಲ್ಯ ಮತ್ತು ಆರೋಗ್ಯ ರಕ್ಷಣೆ ಎಂಬ ಮೂರು ಸ್ತಂಭಗಳನ್ನು ಆಧರಿಸಿದೆ!: ಪ್ರಧಾನಮಂತ್ರಿ
ಇಂದು ನಾವು ಹಲವಾರು ದಶಕಗಳ ನಂತರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಪರಿವರ್ತನೆಯನ್ನು ಕಾಣುತ್ತಿದ್ದೇವೆ: ಪ್ರಧಾನಮಂತ್ರಿ
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ: ಪ್ರಧಾನಮಂತ್ರಿ
ಡೇ-ಕೇರ್ ಕ್ಯಾನ್ಸರ್ ಕೇಂದ್ರಗಳು ಮತ್ತು ಡಿಜಿಟಲ್ ಆರೋಗ್ಯ ರಕ್ಷಣೆ ಮೂಲಸೌಕರ್ಯದ ಮೂಲಕ, ನಾವು ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಕೊನೆಯ ಮೈಲಿಗೆ ಕೊಂಡೊಯ್ಯಲು ಬಯಸುತ್ತೇವೆ: ಪ್ರಧಾನಮಂತ್ರಿ
ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಬಜೆಟ್ ನಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ: ಪ್ರಧಾನಮಂತ್ರಿ
ಪ್ರವಾಸೋದ್ಯಮವನ್ನು ಕೇಂದ್ರೀಕರಿಸಿ ದೇಶಾದ್ಯಂತ 50 ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು: ಪ್ರಧಾನಮಂತ್ರಿ
ಈ ತಾಣಗಳಲ್ಲಿನ ಹೋಟೆಲ್ ಗಳಿಗೆ ಮೂಲಸೌಕರ್ಯ ಸ್ಥಾನಮಾನವನ್ನು ನೀಡುವುದರಿಂದ ಪ್ರವಾಸೋದ್ಯಮದ ಸುಲಭತೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಉದ್ಯೋಗವನ್ನು ಹೆಚ್ಚಿಸುತ್ತದೆ: ಪ್ರಧಾನಮಂತ್ರಿ
ಎಐ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಭಾರತವು ರಾಷ್ಟ್ರೀಯ ಲಾರ್ಜ್ ಲಾಂಗ್ವೇಜ್ ಮಾಡೆಲ್ ಸ್ಥಾಪಿಸುತ್ತದೆ: ಪ್ರಧಾನಮಂತ್ರಿ
ಈ ದಿಕ್ಕಿನಲ್ಲಿ, ನಮ್ಮ ಖಾಸಗಿ ವಲಯವೂ ವಿಶ್ವಕ್ಕಿಂತ ಒಂದು ಹೆಜ್ಜೆ ಮುಂದಿರಬೇಕು: ಪ್ರಧಾನಮಂತ್ರಿ
ಎಐ ನಲ್ಲಿ ಆರ್ಥಿಕ ಪರಿಹಾರಗಳನ್ನು ಒದಗಿಸಬಲ್ಲ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಪ್ರಜಾಪ್ರಭುತ್ವ ದೇಶಕ್ಕಾಗಿ ಜಗತ್ತು ಕಾಯುತ್ತಿದೆ: ಪ್ರಧಾನಮಂತ್ರಿ
ನವೋದ್ಯಮಗಳನ್ನು ಉತ್ತೇಜಿಸಲು ಸರ್ಕಾರ ಈ ಬಜೆಟ್ ನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು 1 ಲಕ್ಷ ಕೋಟಿ ರೂ.ಗಳ ಕಾರ್ಪಸ್ ನಿಧಿಯನ್ನು ಅನುಮೋದಿಸಲಾಗಿದೆ: ಪ್ರಧಾನಮಂತ್ರಿ
ಇದು ಡೀಪ್ ಟೆಕ್ ಫಂಡ್ ಆಫ್ ಫಂಡ್ ಗಳೊಂದಿಗೆ ಉದಯೋನ್ಮುಖ ವಲಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತದೆ: ಪ್ರಧಾನಮಂತ್ರಿ
ಜ್ಞಾನ ಭಾರತಂ ಮಿಷನ್ ಮೂಲಕ ಭಾರತದ ಶ್ರೀಮಂತ ಹಸ್ತಪ್ರತಿ ಪರಂಪರೆಯನ್ನು ಸಂರಕ್ಷಿಸುವ ಘೋಷಣೆಯು ಬಹಳ ಮುಖ್ಯವಾಗಿದೆ: ಪ್ರಧಾನಮಂತ್ರಿ
ಈ ಮಿಷನ್ ಮೂಲಕ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಲಾಗುವುದು: ಪ್ರಧಾನಮಂತ್ರಿ
Posted On:
05 MAR 2025 2:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಯೋಗ ಕುರಿತ ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಕಸಿತ ಭಾರತದ ಮಾರ್ಗಸೂಚಿಯನ್ನು ವ್ಯಾಖ್ಯಾನಿಸುವ "ಜನರು, ಆರ್ಥಿಕತೆ ಮತ್ತು ನಾವೀನ್ಯತೆಯಲ್ಲಿ ಹೂಡಿಕೆ" ಎಂಬ ವೆಬಿನಾರ್ ನ ವಿಷಯದ ಮಹತ್ವವನ್ನು ಎತ್ತಿ ತೋರಿಸಿದರು. ಈ ವರ್ಷದ ಬಜೆಟ್ ಈ ವಿಷಯವನ್ನು ದೊಡ್ಡ ಪ್ರಮಾಣದಲ್ಲಿ ಪ್ರತಿಬಿಂಬಿಸುತ್ತದೆ ಮತ್ತು ಭಾರತದ ಭವಿಷ್ಯದ ನೀಲನಕ್ಷೆಯಾಗಿದೆ ಎಂದು ಅವರು ಹೇಳಿದರು. ಮೂಲಸೌಕರ್ಯ, ಕೈಗಾರಿಕೆಗಳು, ಜನರು, ಆರ್ಥಿಕತೆ ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆಗಳಿಗೆ ಸಮಾನ ಆದ್ಯತೆ ನೀಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಸಾಮರ್ಥ್ಯ ವೃದ್ಧಿ ಮತ್ತು ಪ್ರತಿಭೆಗಳ ಪೋಷಣೆ ರಾಷ್ಟ್ರದ ಪ್ರಗತಿಗೆ ಅಡಿಪಾಯವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಮುಂದಿನ ಹಂತದ ಅಭಿವೃದ್ಧಿಗೆ ಅಗತ್ಯವಿರುವುದರಿಂದ ಎಲ್ಲಾ ಪಾಲುದಾರರು ಮುಂದೆ ಬಂದು ಈ ಕ್ಷೇತ್ರಗಳಲ್ಲಿ ಹೆಚ್ಚು ಹೂಡಿಕೆ ಮಾಡಬೇಕೆಂದು ಒತ್ತಾಯಿಸಿದರು. ದೇಶದ ಆರ್ಥಿಕ ಯಶಸ್ಸಿಗೆ ಇದು ಅತ್ಯಗತ್ಯ ಮತ್ತು ಪ್ರತಿಯೊಂದು ಸಂಸ್ಥೆಯ ಯಶಸ್ಸಿಗೆ ಆಧಾರವಾಗಿದೆ ಎಂದು ಅವರು ಒತ್ತಿ ಹೇಳಿದರು.
"ಜನರ ಮೇಲೆ ಹೂಡಿಕೆ ಮಾಡುವ ದೃಷ್ಟಿಕೋನವು ಶಿಕ್ಷಣ, ಕೌಶಲ್ಯ ಮತ್ತು ಆರೋಗ್ಯ ರಕ್ಷಣೆ ಎಂಬ ಮೂರು ಸ್ತಂಭಗಳ ಮೇಲೆ ನಿಂತಿದೆ" ಎಂದು ಶ್ರೀ ಮೋದಿ ಹೇಳಿದರು, ಭಾರತದ ಶಿಕ್ಷಣ ವ್ಯವಸ್ಥೆಯು ಹಲವಾರು ದಶಕಗಳ ನಂತರ ಗಮನಾರ್ಹ ಪರಿವರ್ತನೆಗೆ ಒಳಗಾಗುತ್ತಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ, ಐಐಟಿಗಳ ವಿಸ್ತರಣೆ, ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಏಕೀಕರಣ ಮತ್ತು ಕೃತಕ ಬುದ್ಧಿಮತ್ತೆಯ ಸಂಪೂರ್ಣ ಸಾಮರ್ಥ್ಯದ ಬಳಕೆಯಂತಹ ಪ್ರಮುಖ ಉಪಕ್ರಮಗಳನ್ನು ಅವರು ಒತ್ತಿ ಹೇಳಿದರು. ಪಠ್ಯಪುಸ್ತಕಗಳ ಡಿಜಿಟಲೀಕರಣ ಮತ್ತು 22 ಭಾರತೀಯ ಭಾಷೆಗಳಲ್ಲಿ ಕಲಿಕಾ ಸಾಮಗ್ರಿಗಳ ಲಭ್ಯತೆಯಂತಹ ಪ್ರಯತ್ನಗಳನ್ನು ವಿವರಿಸಿದ ಪ್ರಧಾನಿ, "ಈ ಮಿಷನ್-ಮೋಡ್ ಪ್ರಯತ್ನಗಳು ಭಾರತದ ಶಿಕ್ಷಣ ವ್ಯವಸ್ಥೆಯನ್ನು 21 ನೇ ಶತಮಾನದ ಪ್ರಪಂಚದ ಅಗತ್ಯತೆಗಳು ಮತ್ತು ನಿಯತಾಂಕಗಳೊಂದಿಗೆ ಜೋಡಿಸಲು ಅನುವು ಮಾಡಿಕೊಟ್ಟಿವೆ" ಎಂದು ಹೇಳಿದರು.
2014 ರಿಂದ ಸರ್ಕಾರವು 3 ಕೋಟಿಗೂ ಹೆಚ್ಚು ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡಿದೆ ಎಂದು ಒತ್ತಿ ಹೇಳಿದ ಪ್ರಧಾನಿ, 1,000 ಐಟಿಐಗಳ ಮೇಲ್ದರ್ಜೆಗೇರಿಸುವಿಕೆ ಮತ್ತು 5 ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿದರು. ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸುವ ತರಬೇತಿಯೊಂದಿಗೆ ಯುವಕರನ್ನು ಸಜ್ಜುಗೊಳಿಸುವ ಗುರಿಯನ್ನು ಅವರು ಒತ್ತಿ ಹೇಳಿದರು. ಜಾಗತಿಕ ತಜ್ಞರ ಸಹಾಯದಿಂದ, ಭಾರತೀಯ ಯುವನತೆಯು ವಿಶ್ವ ಮಟ್ಟದಲ್ಲಿ ಸ್ಪರ್ಧಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಈ ಉಪಕ್ರಮಗಳಲ್ಲಿ ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರದ ನಿರ್ಣಾಯಕ ಪಾತ್ರವನ್ನು ಶ್ರೀ ಮೋದಿ ಒತ್ತಿ ಹೇಳಿದರು ಮತ್ತು ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಪರಸ್ಪರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಪೂರೈಸಬೇಕು, ಯುವಕರಿಗೆ ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಅವಕಾಶಗಳು ಮತ್ತು ಪ್ರಾಯೋಗಿಕ ಕಲಿಕೆಗೆ ವೇದಿಕೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಯುವಜನರಿಗೆ ಹೊಸ ಅವಕಾಶಗಳು ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಒದಗಿಸಲು ಪಿಎಂ-ಇಂಟರ್ನ್ಶಿಪ್ ಯೋಜನೆ ಪ್ರಾರಂಭಿಸುವುದನ್ನು ಎತ್ತಿ ತೋರಿಸಿದ ಅವರು, ಈ ಉಪಕ್ರಮದಲ್ಲಿ ಪ್ರತಿಯೊಂದು ಹಂತದಲ್ಲೂ ಗರಿಷ್ಠ ಉದ್ಯಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.
ವೈದ್ಯಕೀಯ ಕ್ಷೇತ್ರದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಈ ಬಜೆಟ್ ನಲ್ಲಿ 10,000 ಹೊಸ ವೈದ್ಯಕೀಯ ಸೀಟುಗಳ ಸೇರ್ಪಡೆಯ ಬಗ್ಗೆ ಪ್ರಸ್ತಾಪಿಸಿದರು ಮತ್ತು ಮುಂದಿನ ಐದು ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ 75,000 ಸೀಟುಗಳನ್ನು ಸೇರಿಸುವ ಗುರಿಯನ್ನು ನಿಗದಿಪಡಿಸಲಾಗಿದೆ ಎಂದರು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್ ಸೌಲಭ್ಯಗಳ ವಿಸ್ತರಣೆಯ ಬಗ್ಗೆ ಅವರು ಗಮನ ಸೆಳೆದರು. ಗುಣಮಟ್ಟದ ಆರೋಗ್ಯ ಸೇವೆ ಕೊನೆಯ ಮೈಲಿವರೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಡೇಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ ಮತ್ತು ಡಿಜಿಟಲ್ ಆರೋಗ್ಯ ರಕ್ಷಣಾ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಅವರು ಒತ್ತಿ ಹೇಳಿದರು. ಈ ಉಪಕ್ರಮಗಳು ಜನರ ಜೀವನದ ಮೇಲೆ ಪರಿವರ್ತನಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು. ಈ ಪ್ರಯತ್ನಗಳು ಯುವಕರಿಗೆ ಹಲವು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದು ಪ್ರಧಾನಿ ಹೇಳಿದರು. ಬಜೆಟ್ ಘೋಷಣೆಗಳ ಪ್ರಯೋಜನಗಳು ಗರಿಷ್ಠ ಜನರನ್ನು ತಲುಪುವಂತೆ, ಈ ಉಪಕ್ರಮಗಳ ಅನುಷ್ಠಾನಕ್ಕೆ ತ್ವರಿತವಾಗಿ ಕೆಲಸ ಮಾಡುವಂತೆ ಅವರು ಭಾಗೀದಾರರನ್ನು ಒತ್ತಾಯಿಸಿದರು.
ಕಳೆದ ದಶಕದಲ್ಲಿ ಆರ್ಥಿಕತೆಯಲ್ಲಿ ಹೂಡಿಕೆಯು ಭವಿಷ್ಯದ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಪ್ರಧಾನಮಂತ್ರಿ ಹೇಳಿದರು. 2047 ರ ವೇಳೆಗೆ ಭಾರತದ ನಗರ ಜನಸಂಖ್ಯೆಯು ಸುಮಾರು 90 ಕೋಟಿಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ, ಇದಕ್ಕೆ ಯೋಜಿತ ನಗರೀಕರಣದ ಅಗತ್ಯವಿದೆ ಎಂದು ಅವರು ಹೇಳಿದರು. ₹1 ಲಕ್ಷ ಕೋಟಿ ಅರ್ಬನ್ ಚಾಲೆಂಜ್ ಫಂಡ್ ಅನ್ನು ಸ್ಥಾಪಿಸುವ ಉಪಕ್ರಮವನ್ನು ಅವರು ಘೋಷಿಸಿದರು, ಇದು ಆಡಳಿತ, ಮೂಲಸೌಕರ್ಯ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಖಾಸಗಿ ಹೂಡಿಕೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. "ಸುಸ್ಥಿರ ನಗರ ಚಲನಶೀಲತೆ, ಡಿಜಿಟಲ್ ಏಕೀಕರಣ ಮತ್ತು ಹವಾಮಾನ ತಾಳಿಕೆ ಯೋಜನೆಗಳಿಗಾಗಿ ಭಾರತೀಯ ನಗರಗಳನ್ನು ಗುರುತಿಸಲಾಗುವುದು" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಖಾಸಗಿ ವಲಯ, ವಿಶೇಷವಾಗಿ ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ವಲಯಗಳು, ಯೋಜಿತ ನಗರೀಕರಣಕ್ಕೆ ಆದ್ಯತೆ ನೀಡಬೇಕು ಮತ್ತು ಮುನ್ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಅಮೃತ್ 2.0 ಮತ್ತು ಜಲ ಜೀವನ್ ಮಿಷನ್ ನಂತಹ ಉಪಕ್ರಮಗಳನ್ನು ಮುಂದಕ್ಕೆ ಕೊಂಡೊಯ್ಯಲು ಸಹಯೋಗದ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಆರ್ಥಿಕತೆಯಲ್ಲಿ ಹೂಡಿಕೆಗಳ ಕುರಿತು ಮಾತನಾಡಿದ ಶ್ರೀ ಮೋದಿ, ಪ್ರವಾಸೋದ್ಯಮ ಕ್ಷೇತ್ರದ ಸಾಮರ್ಥ್ಯದ ಮೇಲೆ ಗಮನಹರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಪ್ರವಾಸೋದ್ಯಮ ವಲಯವು ಭಾರತದ ಜಿಡಿಪಿಯ ಶೇ.10 ವರೆಗೆ ಕೊಡುಗೆ ನೀಡುವ ಮತ್ತು ಕೋಟ್ಯಂತರ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಜೆಟ್ ನಲ್ಲಿನ ಹಲವಾರು ಕ್ರಮಗಳನ್ನು ಅವರು ಉಲ್ಲೇಖಿಸಿದರು. "ಪ್ರವಾಸೋದ್ಯಮವನ್ನು ಕೇಂದ್ರೀಕರಿಸಿ ದೇಶಾದ್ಯಂತ 50 ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು" ಎಂದು ಪ್ರಧಾನಿ ಹೇಳಿದರು, ಈ ತಾಣಗಳಲ್ಲಿನ ಹೋಟೆಲ್ ಗಳಿಗೆ ಮೂಲಸೌಕರ್ಯ ಸ್ಥಾನಮಾನವನ್ನು ನೀಡುವುದರಿಂದ ಪ್ರವಾಸೋದ್ಯಮವನ್ನು ಸುಲಭಗೊಳಿಸುತ್ತದೆ ಮತ್ತು ಸ್ಥಳೀಯ ಉದ್ಯೋಗ ಹೆಚ್ಚಾಗುತ್ತದೆ ಎಂದು ಹೇಳಿದರು. ಹೋಂಸ್ಟೇಗಳನ್ನು ಬೆಂಬಲಿಸಲು ಮುದ್ರಾ ಯೋಜನೆಯ ವಿಸ್ತರಣೆಯನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಜಾಗತಿಕ ಪ್ರವಾಸಿಗರನ್ನು ಆಕರ್ಷಿಸಲು 'ಭಾರತದಲ್ಲಿ ಗುಣಪಡಿಸು (ಹೀಲ್ ಇನ್ ಇಂಡಿಯಾ)' ಮತ್ತು 'ಬುದ್ಧನ ಭೂಮಿ' ಯಂತಹ ಉಪಕ್ರಮಗಳನ್ನು ಒತ್ತಿ ಹೇಳಿದರು. "ಭಾರತವನ್ನು ಜಾಗತಿಕ ಪ್ರವಾಸೋದ್ಯಮ ಮತ್ತು ಸ್ವಾಸ್ಥ್ಯ ಕೇಂದ್ರವಾಗಿ ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ" ಎಂದು ಅವರು ಹೇಳಿದರು.
ಪ್ರವಾಸೋದ್ಯಮವು ಹೋಟೆಲ್ ಮತ್ತು ಸಾರಿಗೆ ಉದ್ಯಮಗಳನ್ನು ಮೀರಿ ಇತರ ವಲಯಗಳಿಗೂ ಅವಕಾಶಗಳನ್ನು ನೀಡುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ, ಆರೋಗ್ಯ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಹೂಡಿಕೆ ಮಾಡುವಂತೆ ಆರೋಗ್ಯ ವಲಯದ ಭಾಗೀದಾರರನ್ನು ಒತ್ತಾಯಿಸಿದರು. ಯೋಗ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು, ಶಿಕ್ಷಣ ಪ್ರವಾಸೋದ್ಯಮದ ಬೆಳವಣಿಗೆಗೆ ಗಮನಾರ್ಹ ಅವಕಾಶವಿದೆ ಎಂದು ಹೇಳಿದರು. ಈ ದಿಕ್ಕಿನಲ್ಲಿ ವಿವರವಾದ ಚರ್ಚೆಗಳು ನಡೆಯಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು ಮತ್ತು ಈ ಉಪಕ್ರಮಗಳನ್ನು ಮುನ್ನಡೆಸಲು ಬಲವಾದ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಕರೆ ನೀಡಿದರು.
"ದೇಶದ ಭವಿಷ್ಯವನ್ನು ನಾವೀನ್ಯತೆಯ ಮೇಲಿನ ಹೂಡಿಕೆಗಳಿಂದ ನಿರ್ಧರಿಸಲಾಗುತ್ತದೆ" ಎಂದು ಶ್ರೀ ಮೋದಿ ಹೇಳಿದರು, ಕೃತಕ ಬುದ್ಧಿಮತ್ತೆಯು ಭಾರತದ ಆರ್ಥಿಕತೆಗೆ ಹಲವಾರು ಲಕ್ಷ ಕೋಟಿ ರೂಪಾಯಿಗಳನ್ನು ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಒತ್ತಿ ಹೇಳಿದರು, ಈ ದಿಕ್ಕಿನಲ್ಲಿ ತ್ವರಿತ ಪ್ರಗತಿಯ ಅಗತ್ಯವನ್ನು ಒತ್ತಿ ಹೇಳಿದರು. ಎಐ-ಚಾಲಿತ ಶಿಕ್ಷಣ ಮತ್ತು ಸಂಶೋಧನೆಗಾಗಿ ಬಜೆಟ್ ನಲ್ಲಿ ₹500 ಕೋಟಿ ಹಂಚಿಕೆಯನ್ನು ಅವರು ಉಲ್ಲೇಖಿಸಿದರು. ಭಾರತದಲ್ಲಿ ಎಐ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಲಾರ್ಜ್ ಲಾಂಗವೇಜ್ ಮಾಡೆಲ್ ಸ್ಥಾಪಿಸುವ ಯೋಜನೆಯನ್ನು ಉಲ್ಲೇಖಿಸಿದ ಪ್ರಧಾನಿ, ಈ ಕ್ಷೇತ್ರದಲ್ಲಿ ಜಗತ್ತಿಗಿಂತ ಮುಂದೆ ಇರಬೇಕೆಂದು ಖಾಸಗಿ ವಲಯವನ್ನು ಒತ್ತಾಯಿಸಿದರು. "ಆರ್ಥಿಕ ಎಐ ಪರಿಹಾರಗಳನ್ನು ಒದಗಿಸಬಲ್ಲ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರಕ್ಕಾಗಿ ಜಗತ್ತು ಕಾಯುತ್ತಿದೆ" ಎಂದು ಅವರು ಹೇಳಿದರು, ಇಂದು ಈ ವಲಯದಲ್ಲಿ ಮಾಡಿದ ಹೂಡಿಕೆಗಳು ಭವಿಷ್ಯದಲ್ಲಿ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತವೆ ಎಂದು ಒತ್ತಿ ಹೇಳಿದರು.
"ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪೂರಕ ವ್ಯವಸ್ಥೆಯಾಗಿದೆ" ಎಂದು ಪ್ರಧಾನಿ ಹೇಳಿದರು, ನವೋದ್ಯಮಗಳನ್ನು ಉತ್ತೇಜಿಸಲು ಈ ಬಜೆಟ್ ನಲ್ಲಿ ಹಲವಾರು ಕ್ರಮಗಳನ್ನು ಪರಿಚಯಿಸಲಾಗಿದೆ ಎಂದು ಹೇಳಿದರು. ಸಂಶೋಧನೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ₹1 ಲಕ್ಷ ಕೋಟಿ ಕಾರ್ಪಸ್ ನಿಧಿಯ ಅನುಮೋದನೆಯನ್ನು ಅವರು ಉಲ್ಲೇಖಿಸಿದರು. ಇದು 'ಡೀಪ್ ಟೆಕ್ ಫಂಡ್ ಆಫ್ ಫಂಡ್ಸ್' ಮೂಲಕ ಉದಯೋನ್ಮುಖ ವಲಯಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಐಐಟಿಗಳು ಮತ್ತು ಐ ಐ ಎಸ್ ಸಿ ಯಲ್ಲಿ 10,000 ಸಂಶೋಧನಾ ಫೆಲೋಶಿಪ್ ಗಳನ್ನು ಒದಗಿಸುವ ಬಗ್ಗೆ ಅವರು ಪ್ರಸ್ತಾಪಿಸಿದರು. ಇದು ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರತಿಭಾವಂತ ಯುವಕರಿಗೆ ಅವಕಾಶಗಳನ್ನು ಒದಗಿಸುತ್ತದೆ. ನಾವೀನ್ಯತೆಯನ್ನು ವೇಗಗೊಳಿಸುವಲ್ಲಿ ರಾಷ್ಟ್ರೀಯ ಜಿಯೋಸ್ಪೇಷಿಯಲ್ ಮಿಷನ್ ಮತ್ತು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಪಾತ್ರವನ್ನು ಪ್ರಧಾನಿ ಎತ್ತಿ ತೋರಿಸಿದರು. ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಏರಿಸಲು ಎಲ್ಲಾ ಹಂತಗಳಲ್ಲಿ ಸಾಮೂಹಿಕ ಪ್ರಯತ್ನಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಭಾರತದ ಶ್ರೀಮಂತ ಹಸ್ತಪ್ರತಿ ಪರಂಪರೆಯನ್ನು ಸಂರಕ್ಷಿಸುವಲ್ಲಿ ಜ್ಞಾನ ಭಾರತಂ ಮಿಷನ್ ನ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ಈ ಮಿಷನ್ ಅಡಿಯಲ್ಲಿ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಘೋಷಿಸಿದರು, ಇದು ರಾಷ್ಟ್ರೀಯ ಡಿಜಿಟಲ್ ಭಂಡಾರದ ರಚನೆಗೆ ಕಾರಣವಾಗುತ್ತದೆ. ಈ ಭಂಡಾರವು ವಿಶ್ವಾದ್ಯಂತ ವಿದ್ವಾಂಸರು ಮತ್ತು ಸಂಶೋಧಕರಿಗೆ ಭಾರತದ ಐತಿಹಾಸಿಕ, ಸಾಂಪ್ರದಾಯಿಕ ಜ್ಞಾನ ಮತ್ತು ಬುದ್ಧಿಮತ್ತೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಭಾರತದ ಸಸ್ಯ ತಳಿ ಸಂಪನ್ಮೂಲಗಳನ್ನು ಸಂರಕ್ಷಿಸಲು ರಾಷ್ಟ್ರೀಯ ಜೀನ್ ಬ್ಯಾಂಕ್ ಸ್ಥಾಪನೆಯ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಭವಿಷ್ಯದ ಪೀಳಿಗೆಗೆ ತಳಿ ಸಂಪನ್ಮೂಲಗಳು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸುವುದು ಈ ಉಪಕ್ರಮದ ಗುರಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಅಂತಹ ಪ್ರಯತ್ನಗಳನ್ನು ವಿಸ್ತರಿಸುವಂತೆ ಅವರು ಒತ್ತಾಯಿಸಿದರು ಮತ್ತು ವಿವಿಧ ಸಂಸ್ಥೆಗಳು ಮತ್ತು ವಲಯಗಳು ಈ ಉಪಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಫೆಬ್ರವರಿ 2025 ರಲ್ಲಿ ಭಾರತದ ಆರ್ಥಿಕತೆಯ ಕುರಿತು ಐಎಂಎಫ್ ಮಾಡಿದ ಗಮನಾರ್ಹ ಅವಲೋಕನಗಳನ್ನು ಉಲ್ಲೇಖಿಸಿದ ಶ್ರೀ ಮೋದಿ, 2015 ಮತ್ತು 2025 ರ ನಡುವೆ ಭಾರತದ ಆರ್ಥಿಕತೆಯು ಶೇ.66 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು 3.8 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಿದೆ ಎಂದು ಹೇಳಿದರು. ಈ ಬೆಳವಣಿಗೆಯು ಹಲವಾರು ಪ್ರಮುಖ ಆರ್ಥಿಕತೆಗಳನ್ನು ಮೀರಿಸುತ್ತದೆ ಮತ್ತು ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ದಿನ ದೂರವಿಲ್ಲ ಎಂದು ಅವರು ಒತ್ತಿ ಹೇಳಿದರು. ಆರ್ಥಿಕತೆ ವಿಸ್ತರಿಸುವುದನ್ನು ಮುಂದುವರಿಸಲು ಸರಿಯಾದ ದಿಕ್ಕಿನಲ್ಲಿ ಸರಿಯಾದ ಹೂಡಿಕೆಗಳನ್ನು ಮಾಡುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಈ ದೃಷ್ಟಿಕೋನವನ್ನು ಸಾಧಿಸುವಲ್ಲಿ ಬಜೆಟ್ ಘೋಷಣೆಗಳನ್ನು ಅನುಷ್ಠಾನಗೊಳಿಸುವ ನಿರ್ಣಾಯಕ ಪಾತ್ರವನ್ನು ಅವರು ಒತ್ತಿ ಹೇಳಿದರು ಮತ್ತು ಎಲ್ಲಾ ಪಾಲುದಾರರ ಮಹತ್ವದ ಕೊಡುಗೆಗಳನ್ನು ಒಪ್ಪಿಕೊಂಡರು. ಮುಚ್ಚುಮರೆಯಲ್ಲಿ ಕೆಲಸ ಮಾಡುವ ಸಂಪ್ರದಾಯವನ್ನು ಮುರಿಯಲಾಗಿದೆ ಮತ್ತು ಈಗ ಸರ್ಕಾರವು ಯೋಜನೆಗಳು ಮತ್ತು ಉಪಕ್ರಮಗಳ ಉತ್ತಮ ಅನುಷ್ಠಾನಕ್ಕಾಗಿ ಪಾಲುದಾರರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆಗಳು ಮತ್ತು ಬಜೆಟ್ ನಂತರದ ಚರ್ಚೆಗಳನ್ನು ಹೊಂದಿದೆ ಎಂದು ಅವರು ಹೇಳಿದರು, 'ಜನ-ಭಾಗೀದಾರಿ' ಮಾದರಿಯನ್ನು ಅವರು ಎತ್ತಿ ತೋರಿಸಿದರು. ವೆಬಿನಾರ್ ನ ಫಲಪ್ರದ ಚರ್ಚೆಗಳು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತವೆ ಎಂಬ ಭರವಸೆಯನ್ನು ವ್ಯಕ್ತಪಡಿಸುವ ಮೂಲಕ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು.
ಹಿನ್ನೆಲೆ
ಉದ್ಯೋಗ ಸೃಷ್ಟಿ ಸರ್ಕಾರದ ಪ್ರಮುಖ ಗಮನ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಧಾನ ಮಂತ್ರಿಯವರ ದೂರದೃಷ್ಟಿಯಿಂದ ಪ್ರೇರಿತವಾಗಿ, ಸರ್ಕಾರವು ಉದ್ಯೋಗ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಈ ವೆಬಿನಾರ್ ಸರ್ಕಾರ, ಉದ್ಯಮ, ಶೈಕ್ಷಣಿಕ ವಲಯ ಮತ್ತು ನಾಗರಿಕರ ನಡುವೆ ಸಹಯೋಗವನ್ನು ಬೆಳೆಸುತ್ತದೆ, ಪರಿವರ್ತನಾತ್ಮಕ ಬಜೆಟ್ ಘೋಷಣೆಗಳನ್ನು ಪರಿಣಾಮಕಾರಿ ಫಲಿತಾಂಶಗಳಾಗಿಸಲು ಚರ್ಚೆಗಳನ್ನು ಪ್ರೋತ್ಸಾಹಿಸುತ್ತದೆ. ನಾಗರಿಕರ ಸಬಲೀಕರಣ, ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ನಾವೀನ್ಯತೆಯನ್ನು ಬೆಳೆಸುವತ್ತ ಪ್ರಮುಖ ಗಮನ ಹರಿಸುವ ಈ ಚರ್ಚೆಗಳು, ತಂತ್ರಜ್ಞಾನ ಮತ್ತು ಇತರ ವಲಯಗಳಲ್ಲಿ ನಾಯಕತ್ವ ಮತ್ತು 2047 ರ ವೇಳೆಗೆ ವಿಕಸಿತ ಭಾರತದ ಗುರಿಯನ್ನು ಸಾಧಿಸುವತ್ತ ಕೆಲಸ ಮಾಡುವ ಕೌಶಲ್ಯಪೂರ್ಣ, ಆರೋಗ್ಯಕರ ಕಾರ್ಯಪಡೆಯೊಂದಿಗೆ ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ದಾರಿ ಮಾಡಿಕೊಡುವ ಗುರಿಯನ್ನು ಹೊಂದಿವೆ.
*****
(Release ID: 2109378)
Visitor Counter : 11
Read this release in:
Malayalam
,
Odia
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Tamil