ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

2030ರ ವೇಳೆಗೆ 500 ಜಿ.ಡಬ್ಲ್ಯೂ. ಸಾಧಿಸಲು ಮೀಸಲಾದ ಕಾರ್ಯಪಡೆ ರಚನೆಯಾಗಬೇಕು: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ


ಒಡಿಶಾದ ಭುವನೇಶ್ವರದಲ್ಲಿ ಎಂಎನ್‌ಆರ್‌ಇ ಆಯೋಜಿಸಿದ ಎರಡು ದಿನಗಳ ಚಿಂತನ ಶಿಬಿರ ಸಮಾರೋಪಗೊಂಡಿತು

ಆರ್‌.ಇ. ವಲಯದಲ್ಲಿ ಸ್ಟಾರ್ಟ್‌ಅಪ್‌ ಗಳಿಗಾಗಿ ಹ್ಯಾಕಥಾನ್‌ ಗಳನ್ನು ಆಯೋಜಿಸಲಿರುವ ಎಂಎನ್‌ಆರ್‌ಇ : ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ

ಕೇಂದ್ರ ಇಂಧನ ಸಚಿವಾಲಯದ ಸಮನ್ವಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಷಯದಲ್ಲಿ ಶ್ರೇಷ್ಠ ಕೇಂದ್ರ ಸ್ಥಾಪನೆ: ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ

Posted On: 15 NOV 2024 7:35PM by PIB Bengaluru

2030ರ ವೇಳೆಗೆ 500 ಜಿ.ಡಬ್ಲ್ಯೂ. ಗುರಿಯನ್ನು ಸಾಧಿಸಲು ಕೇಂದ್ರ ವಿದ್ಯುತ್ ಸಚಿವಾಲಯದ ಸಹಯೋಗದೊಂದಿಗೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ಎಲ್ಲಾ ಪಾಲುದಾರರೊಂದಿಗೆ ಮೀಸಲಾದ ನೂತನ ಕಾರ್ಯಪಡೆಯನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು  ಹೇಳಿದರು. ಒಡಿಶಾದ ಭುವನೇಶ್ವರದಲ್ಲಿ ಎಂಎನ್‌ಆರ್‌ಇ ಆಯೋಜಿಸಿದ್ದ ಎರಡು ದಿನಗಳ ಚಿಂತನ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಸಚಿವರು ಭಾಷಣ ಮಾಡಿದರು.

ಮುಂದಿನ ಆರು ವರ್ಷಗಳಲ್ಲಿ 288 ಜಿ.ಡಬ್ಲ್ಯೂ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸುವ ಅಗತ್ಯವನ್ನು ಈ ಸಂದರ್ಭದಲ್ಲಿ ಕೇಂದ್ರ ಸಚಿವರು ವಿವರಿಸಿ ಹೇಳಿದರು, ಪ್ರಸರಣ ಮೂಲಸೌಕರ್ಯ ಸೇರಿದಂತೆ ಒಟ್ಟಾರೆ ವ್ಯವಸ್ಥೆ ಗಳಿಗಾಗಿ ₹ 42 ಲಕ್ಷ ಕೋಟಿಗಳ ಗಣನೀಯ ಪ್ರಮಾಣದ ಹೂಡಿಕೆಯ ಅಗತ್ಯವಿದೆ.  ಆರ್‌.ಇ ವಲಯದಲ್ಲಿನ ವಿವಿಧ ಸವಾಲುಗಳನ್ನು ಪರಿಹರಿಸಲು ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಹೇಳಿದರು.

ಈ ಶಿಬಿರ ಮೂಲಕ 12 ಪ್ರಮುಖ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ರಾಜ್ಯಗಳ ಭಾಗವಹಿಸುವಿಕೆಯೊಂದಿಗೆ ಸುಮಾರು 117 ಉದ್ಯಮ ನಾಯಕರು ಮತ್ತು ವಿವಿಧ ರಾಜ್ಯಗಳ ಪ್ರತಿನಿಧಿಗಳು ಮತ್ತು ಪಿಎಸ್‌ಯುಗಳಿಂದ 67 ಪ್ರತಿನಿಧಿಗಳನ್ನು ಒಟ್ಟುಗೂಡಿಸಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು  ಹೇಳಿದರು.  ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ "ಪಂಚಾಮೃತ" ಗುರಿಗಳಿಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವರು, ನವೀಕರಿಸಬಹುದಾದ ಇಂಧನ ಸಾಮರ್ಥ್ಯದ 500 ಜಿ.ಡಬ್ಲ್ಯೂ ಸಾಧಿಸುವ 2030 ರ ಗುರಿಯನ್ನು ಸಭಿಕರಲ್ಲಿ ಮಗದೊಮ್ಮೆ ನೆನಪಿಸಿದರು.

ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳು ಮತ್ತು ಸಮಸ್ಯೆಗಳಿಗೆ ಪರಿಹಾರಗಳ ಸ್ವದೇಶೀಕರಣವನ್ನು ಉತ್ತೇಜಿಸಲು ಖಚಿತವಾದ ಪ್ರಾರಂಭಿಕ ಅವಕಾಶವನ್ನು ಸೃಷ್ಟಿಸಲು ಆರ್.ಇ. ವಲಯದಲ್ಲಿನ ಸ್ಟಾರ್ಟ್‌ಅಪ್‌ ಗಳಿಗಾಗಿ ಎಂಎನ್‌ಆರ್‌ಇ ವಿಶೇಷ ಹ್ಯಾಕಥಾನ್‌ ಗಳನ್ನು ಆಯೋಜಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.  

ಆರ್‌.ಇ ವಲಯದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಉತ್ತೇಜಿಸಲು ಕೇಂದ್ರ ವಿದ್ಯುತ್ ಸಚಿವಾಲಯದ ಸಹಯೋಗದೊಂದಿಗೆ ಆರ್ & ಡಿ ಗಾಗಿ ಹೊಸ ಜಂಟಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲಾಗುವುದು. ನವೀಕರಿಸಬಹುದಾದ ಇಂಧನ ಯೋಜನೆಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಖರೀದಿ ಒಪ್ಪಂದಗಳನ್ನು (ಪಿಪಿಎ) ಶೀಘ್ರವಾಗಿ ಅಂತಿಮಗೊಳಿಸಬೇಕು ಮತ್ತು ನವೀಕರಿಸಬಹುದಾದ ಖರೀದಿ ಬಾಧ್ಯತೆಗಳನ್ನು (ಆರ್‌ಪಿಒ) ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸಚಿವರು ಕರೆ ನೀಡಿದರು.
 
ಒಡಿಶಾದ ಅಗಾಧವಾದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಗಮನಿಸಿದ ಕೇಂದ್ರ ಸಚಿವರಾದ ಶ್ರೀ ಜೋಶಿ ಅವರು, ಒಡಿಶಾದ ಸುದೀರ್ಘ ಕರಾವಳಿ ವಲಯ ಮತ್ತು ಬಂದರುಗಳ ಉತ್ತಮ ಮೂಲಸೌಕರ್ಯದಿಂದಾಗಿ 140 ಜಿ.ಡಬ್ಲ್ಯೂ ಸೌರ ಸಾಮರ್ಥ್ಯ ಮತ್ತು ಹಸಿರು ಹೈಡ್ರೋಜನ್‌ ನಲ್ಲಿ ಇಂಧನ ಉತ್ಪಾದನೆಗೆ ಗಮನಾರ್ಹ ಅವಕಾಶಗಳಿವೆ ಎಂದು ಹೇಳಿದರು.

ಒಡಿಶಾವನ್ನು ನವೀಕರಿಸಬಹುದಾದ ಶಕ್ತಿಯ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮತ್ತು ರಾಜ್ಯದಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆಯ ವ್ಯಾಪ್ತಿಯನ್ನು ಇನ್ನೂ ಉತ್ತಮ ರೀತಿಯಲ್ಲಿ ಅನ್ವೇಷಿಸಲು ಕೇಂದ್ರ ಸರ್ಕಾರವು ವಿಶೇಷ ಗುರಿಯನ್ನು ಹೊಂದಿದೆ. ಒಡಿಶಾದಲ್ಲಿ ತೇಲುವ ಸೌರ ಕೋಶ ಹಾಳೆಗಳ ಸಾಮರ್ಥ್ಯವನ್ನು ಸಹ ಅನ್ವೇಷಿಸಲಾಗುವುದು.  ಒಡಿಶಾದ ಧೆಂಕನಲ್ ಜಿಲ್ಲೆಯಲ್ಲಿ ಸೌರ ಘಟಕಗಳು, ಸೌರ ಕೋಶಗಳು ಮತ್ತು ಇಂಗೋಟ್-ವೇಫರ್ ಉತ್ಪಾದನೆಗೆ 6,000 ಎಂ.ಡಬ್ಲ್ಯೂ ಉತ್ಪಾದನಾ ಸಾಮರ್ಥ್ಯಕ್ಕಾಗಿ ಸುಮಾರು ರೂ. 9,000 ಕೋಟಿ ಹೂಡಲಾಗುವುದು. ಇನ್ಫೋವಾಲಿ-II, ಖೋರ್ಡಾ, ಭುವನೇಶ್ವರ, ಒಡಿಶಾದಲ್ಲಿ ಸೋಲಾರ್ ಮಾಡ್ಯೂಲ್‌ಗಳು ಮತ್ತು ಕೋಶಗಳ ಉತ್ಪಾದನೆಗೆ ಮತ್ತೊಂದು ಸಂಸ್ಥೆಗಳಿಂದ ಸುಮಾರು ರೂ. 730 ಕೋಟಿ ವೆಚ್ಚದಲ್ಲಿ 1,000 ಎಂ.ಡಬ್ಲ್ಯೂ ಉತ್ಪಾದನಾ ಸಾಮರ್ಥ್ಯವನ್ನು ಕೂಡ ಸ್ಥಾಪಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಶ್ರೀ ಜೋಶಿ ಅವರು ಹೇಳಿದರು.

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯು ನವೆಂಬರ್ 2024 ರ ಅಂತ್ಯದ ವೇಳೆಗೆ 5 ಲಕ್ಷ ಘಟಕಗಳ ಗುರಿಯನ್ನು ಸಾಧಿಸಲಿದೆ. ಸೌರ ಮಾಡ್ಯೂಲ್‌ಗಳು ಮತ್ತು ಕೋಶಗಳ ದೇಶೀಯ ಉತ್ಪಾದನೆಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ವಿಸ್ತರಿಸುವ ಸಲಹೆಗಳನ್ನು ಕೂಡ ಪರಿಗಣಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. 

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಕೇಂದ್ರ ಸಚಿವರು "ನಾವು ಈ ಶಿಬಿರದ ನಿರ್ಣಯಗಳ ಸಮಗ್ರ ಮಾರ್ಗಸೂಚಿಯೊಂದಿಗೆ ಮಾಹಿತಿ ಬಿಡುಗಡೆ ಮಾಡುತ್ತೇವೆ" ಎಂದು ಹೇಳಿದರು.

ಒಡಿಶಾದ ಉಪಮುಖ್ಯಮಂತ್ರಿ ಶ್ರೀ ಕನಕ್ ವರ್ಧನ್ ಸಿಂಗ್ ದೇವ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಗದಿಪಡಿಸಿದ ‘ಪಂಚಾಮೃತ’ ಗುರಿಗಳನ್ನು ಪೂರೈಸುವಲ್ಲಿ ಒಡಿಶಾ ಸರ್ಕಾರವು ಕೇಂದ್ರ ಸರ್ಕಾರದ ಜೊತೆ ನಿಂತಿದೆ ಎಂದು ಹೇಳಿದರು 

ಎಂಎನ್‌ಆರ್‌ಇ ಕಾರ್ಯದರ್ಶಿ  ಶ್ರೀ ಪ್ರಶಾಂತ್ ಕುಮಾರ್ ಸಿಂಗ್ ಅವರು ಚಿಂತನ ಶಿಬಿರವು ವಿಚಾರಗಳ ಯಶಸ್ವಿ ವಿನಿಮಯಗೊಳಿಸಿದೆ, ಮತ್ತು ಸಂವಹನ ಸಕ್ರಿಯಗೊಳಿಸಿದೆ. ವಲಯದಲ್ಲಿನ ವಿವಿಧ ಸವಾಲುಗಳನ್ನು ಪರಿಹರಿಸಲು ಸಚಿವಾಲಯವು ಬಲವಾದ ಅಂತರ-ಸಚಿವಾಲಯಗಳ ಸಮನ್ವಯಕ್ಕೆ ಬದ್ಧವಾಗಿದೆ ಎಂದು ಹೇಳಿದರು.  ಒಡಿಶಾ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಶ್ರೀ ವಿಶಾಲ್ ಕುಮಾರ್ ದೇವ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.  ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುದೀಪ್ ಜೈನ್ ಅವರು ಅಧಿವೇಶನದಲ್ಲಿ ಭಾಗವಹಿಸಿದ ಎಲ್ಲಾ ಪಾಲುದಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ನವೆಂಬರ್ 14, 2024 ರಂದು ಒಡಿಶಾದ ಭುವನೇಶ್ವರದಲ್ಲಿ ಎರಡು ದಿನಗಳ ಚಿಂತನ ಶಿಬಿರ 2024  ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಯಿತು. ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ವಿವರಿಸಿದಂತೆ ಆರ್.ಇ. ವಲಯದಲ್ಲಿನ ನಿರ್ಣಾಯಕ ಸವಾಲುಗಳನ್ನು ಚರ್ಚಿಸಲಾಯಿತು.  ಎರಡು ದಿನಗಳಲ್ಲಿ,  ಪಳೆಯುಳಿಕೆ ರಹಿತ ಇಂಧನ ಶಕ್ತಿಯ ಮಹತ್ವಾಕಾಂಕ್ಷೆಯ 2030 ರ ವೇಳೆಗೆ 500 ಜಿ.ಡಬ್ಲ್ಯೂ ಗುರಿಯನ್ನು ಸಾಧಿಸಲು ಸೌರ ಮತ್ತು ಪವನ ಶಕ್ತಿ ನಿಯೋಜನೆ, ಹಸಿರು ಜಲಜನಕ, ಶಕ್ತಿ ಸಂಗ್ರಹಣೆ, ಭೂಮಿ ಸ್ಥಳಾಂತರಿಸುವಿಕೆ ಮತ್ತು ಪ್ರಸರಣ ಯೋಜನೆ ಮತ್ತು ನೀತಿ ಅಭಿವೃದ್ಧಿಯಂತಹ ನಿರ್ಣಾಯಕ ವಿಷಯಗಳ ವ್ಯಾಪ್ತಿಯನ್ನು ಒಳಗೊಂಡ 17 ಕಿರು ಅವಧಿಗಳ ಅಧಿವೇಶನಗಳನ್ನು ನಡೆಸಲಾಯಿತು.  

ಈ ಅಧಿವೇಶನಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರು, ಹಣಕಾಸು ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು  ನವೀಕರಿಸಬಹುದಾದ ಇಂಧನ  ಕ್ಷೇತ್ರದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.

 

 *****


(Release ID: 2073806)
Read this release in: Odia , Urdu , English , Hindi