ರಕ್ಷಣಾ ಸಚಿವಾಲಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಲಡಾಖ್ ನಲ್ಲಿ ಕಾರ್ಗಿಲ್ ವಿಜಯ ದಿವಸ ಮತ್ತು ಶ್ರದ್ಧಾಂಜಲಿ ಸಮಾರೋಹದಲ್ಲಿ ಪಾಲ್ಗೊಂಡು ಶೌರ್ಯಶಾಲಿಗಳಿಗೆ ಗೌರವ ಸಲ್ಲಿಸಿದರು


ವ್ಯೂಹಾತ್ಮಕ ʻಶಿಂಕುನ್ ಲಾʼ ಸುರಂಗ ಯೋಜನೆಯ ಮೊದಲ ಸ್ಫೋಟಕ್ಕೆ ಪ್ರಧಾನ ಮಂತ್ರಗಳು ಸಾಕ್ಷಿಯಾದರು

"ರಾಷ್ಟ್ರಕ್ಕಾಗಿ ಮಾಡಿದ ತ್ಯಾಗಗಳು ಅಮರವಾಗಿವೆ ಎಂದು ʻಕಾರ್ಗಿಲ್ ವಿಜಯ ದಿನʼವು ನಮಗೆ ನೆನಪು ಮಾಡುತ್ತದೆ"

 "ಕಾರ್ಗಿಲ್ ನಲ್ಲಿ, ನಾವು ಯುದ್ಧವನ್ನು ಗೆದ್ದಿರುವುದು ಮಾತ್ರವಲ್ಲ, ನಾವು ಸತ್ಯ, ಸಂಯಮ ಮತ್ತು ನಮ್ಮ ಶಕ್ತಿಯ ಅದ್ಭುತ ಉದಾಹರಣೆಯನ್ನು ಮುಂದಿಟ್ಟಿದ್ದೇವೆ

 "ಇಂದು ಜಮ್ಮು ಮತ್ತು ಕಾಶ್ಮೀರವು ಹೊಸ ಭವಿಷ್ಯದ ಬಗ್ಗೆ ಮಾತನಾಡುತ್ತಿದೆ, ದೊಡ್ಡ ಕನಸುಗಳ ಬಗ್ಗೆ ಮಾತನಾಡುತ್ತಿದೆ"

 "ಶಿಂಕುನ್ ಲಾ ಸುರಂಗವು ಲಡಾಖ್‌ನ ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯಕ್ಕೆ ಹೊಸ ಸಾಧ್ಯತೆಗಳ ಬಾಗಿಲುಗಳನ್ನು ತೆರೆಯಲಿದೆ"

"ಕಳೆದ 5 ವರ್ಷಗಳಲ್ಲಿ, ಲಡಾಖ್‌ನ ಬಜೆಟ್ 1,100 ಕೋಟಿ ರೂ.ನಿಂದ 6,000 ಕೋಟಿ ರೂ.ಗೆ ಏರಿದೆ"

"ಸೇನಾ ಪಡೆಗಳ ಯುವಶಕ್ತಿಯನ್ನು ಕಾಯ್ದುಕೊಳ್ಳುವುದು ಮತ್ತು ಅವುಗಳನ್ನು ನಿರಂತರವಾಗಿ ಯುದ್ಧ ಸನ್ನದ್ಧವಾಗಿಡುವುದು ʻಅಗ್ನಿಪಥ್ʼ ಯೋಜನೆಯ ಉದ್ದೇಶವಾಗಿದೆ"

 ವಾಸ್ತವವೆಂದರೆ, ʻಅಗ್ನಿಪಥ್ʼ ಯೋಜನೆಯು ದೇಶದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಶವು ಸಮರ್ಥ ಯುವಕರನ್ನು ಪಡೆಯುತ್ತದೆ"

ಕಾರ್ಗಿಲ್ ಗೆಲುವು ಯಾವುದೇ ಸರ್ಕಾರ ಅಥವಾ ಯಾವುದೇ ಪಕ್ಷದ ವಿಜಯವಲ್ಲ. ಈ ಗೆಲುವು ದೇಶಕ್ಕೆ ಸೇರಿದ್ದು

ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ವೀರರಿಗೆ ಪುಷ್ಪಗುಚ್ಛವನ್ನು ಅರ್ಪಿಸಿ ಗೌರವ ಸಲ್ಲಿಸಿದರು

"ಕಾರ್ಗಿಲ್ ಯುದ್ಧವೀರರ ಶೌರ್ಯ ಮತ್ತು ದೇಶಭಕ್ತಿಯು ಭಾರತವು ಸುರಕ್ಷಿತ ಮತ್ತು ಸುಭದ್ರವಾಗಿ ಉಳಿಯುವಂತೆ ಮಾಡಿದೆ"

"ಸೇವೆ ಮತ್ತು ತ್ಯಾಗವು ಪ್ರತಿ ಭಾರತೀಯ ಮತ್ತು ಭವಿಷ್ಯದ ಪೀಳಿಗೆಯನ್ನು ಪ್ರೇರೇಪಿಸುತ್ತದೆ"

Posted On: 26 JUL 2024 12:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಡಾಖ್‌ನಲ್ಲಿ ನಡೆದ 25ನೇ ʻಕಾರ್ಗಿಲ್ ವಿಜಯ ದಿನʼದ ಸಂದರ್ಭದಲ್ಲಿ ಕರ್ತವ್ಯದ ವೇಳೆ ಪರಮೋಚ್ಚ ತ್ಯಾಗ ಮಾಡಿದ ವೀರ ಕಲಿಗಳಿಗೆ ಗೌರವ ನಮನ ಸಲ್ಲಿಸಿದರು. ಕಾರ್ಗಿಲ್‌ ವೀರ ಯೋಧರ ಶ್ರದ್ಧಾಂಜಲಿ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಿದರು. ಕಾರ್ಗಿಲ್ ಯುದ್ಧದ ಬಗ್ಗೆ ʻಎನ್‌ಸಿಓʼಗಳ ಸಂಕ್ಷಿಪ್ತ ವಿವರಣೆಯಾದ ʻಗೌರವ್ ಗಾಥಾʼವನ್ನು ಪ್ರಧಾನಮಂತ್ರಿಯವರು ಆಲಿಸಿದರು. ಅಲ್ಲದೆ, ʻಅಮರ್ ಸಂಸ್ಮರಣ್: ನೆನಪಿನ ಗುಡಿಸಲುʼ ಹಾಗೂ  ʻವೀರ ಭೂಮಿʼಗೂ ಅವರು ಭೇಟಿ ನೀಡಿದರು.

ಲಡಾಖ್‌ನ ʻಶಿಂಕುನ್ ಲಾʼ ಸುರಂಗ ಯೋಜನೆಯ ʻಮೊದಲ ಸ್ಫೋಟʼಕ್ಕೂ ಪ್ರಧಾನಮಂತ್ರಿಯವರು ಇಂದು ವರ್ಚುವಲ್ ಮೂಲಕ ಸಾಕ್ಷಿಯಾದರು. ʻಶಿಂಕುನ್ ಲಾʼ ಸುರಂಗ ಯೋಜನೆಯು 4.1 ಕಿ.ಮೀ ಉದ್ದದ ಅವಳಿ-ಟ್ಯೂಬ್ ಸುರಂಗವನ್ನು ಒಳಗೊಂಡಿದ್ದು, ಲೇಹ್‌ಗೆ ಸರ್ವಋಉತು ಸಂಪರ್ಕವನ್ನು ಒದಗಿಸಲಿದೆ. ಈ ಸುರಂಗವನ್ನು ʻನಿಮು - ಪಡುಮ್ – ದರ್ಚಾʼ ರಸ್ತೆಯಲ್ಲಿ ಸುಮಾರು 15,800 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು. ಒಮ್ಮೆ ಪೂರ್ಣಗೊಂಡರೆ, ಇದು ವಿಶ್ವದ ಅತಿ ಎತ್ತರದ ಸುರಂಗವಾಗಲಿದೆ. ಶಿಂಕುನ್ ಲಾ ಸುರಂಗವು ನಮ್ಮ ಸಶಸ್ತ್ರ ಪಡೆಗಳು ಮತ್ತು ಸಲಕರಣೆಗಳ ತ್ವರಿತ ಮತ್ತು ಪರಿಣಾಮಕಾರಿ ಚಲನೆಯನ್ನು ಖಚಿತಪಡಿಸುವುದು ಮಾತ್ರವಲ್ಲದೆ ಲಡಾಖ್ ನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ

ಶ್ರದ್ಧಾಂಜಲಿ ಸಮಾರಂಭವನ್ನು ಉದ್ದೇಸಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಲಡಾಖ್‌ನ ವೈಭವಯುತ ಭೂಮಿಯು ʻಕಾರ್ಗಿಲ್ ವಿಜಯ ದಿನʼದ 25ನೇ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾಗಿದೆ ಎಂದರು. "ಕಾರ್ಗಿಲ್ ವಿಜಯ ದಿನವು ದೇಶಕ್ಕಾಗಿ ಮಾಡಿದ ತ್ಯಾಗಗಳು ಅಮರವಾಗಿವೆ ಎಂದು ನಮಗೆ ನೆನಪಿಸುತ್ತದೆ," ಎಂದು ಪ್ರಧಾನಿ ಮೋದಿ ಹೇಳಿದರು. ತಿಂಗಳುಗಳು, ವರ್ಷಗಳು, ದಶಕಗಳು ಮತ್ತು ಶತಮಾನಗಳು ಕಳೆದರೂ, ರಾಷ್ಟ್ರದ ಗಡಿಗಳನ್ನು ರಕ್ಷಿಸಲು ಮುಡಿಪಾಗಿಟ್ಟ ಜೀವಗಳನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. "ನಮ್ಮ ಸಶಸ್ತ್ರ ಪಡೆಗಳ ಸೂಪರ್ ಹೀರೋಗಳಿಗೆ ರಾಷ್ಟ್ರವು ಎಂದೆಂದಿಗೂ ಋಣಿಯಾಗಿದೆ ಮತ್ತು ಆಳವಾಗಿ ಕೃತಜ್ಞವಾಗಿರುತ್ತದೆ," ಎಂದು ಪ್ರಧಾನಿ ಮೋದಿ ಹೇಳಿದರು.

ಕಾರ್ಗಿಲ್ ಯುದ್ಧದ ದಿನಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಆಗ ಸೈನಿಕರ ನಡುವೆ ಇರುವಂತಹ ಅವಕಾಶ ದೊರೆತ ತಾವು ಅದೃಷ್ಟಶಾಲಿ ಎಂದು ಹೇಳಿದರು. ಇಷ್ಟು ಎತ್ತರದಲ್ಲಿ ನಮ್ಮ ಸೈನಿಕರು ಹೇಗೆ ಕಠಿಣ ಕಾರ್ಯಾಚರಣೆ ನಡೆಸಿದರು ಎಂಬುದನ್ನು ತಾವು ಇನ್ನೂ ನೆನಪಿಸಿಕೊಳ್ಳುವುದಾಗಿ ಹೇಳಿದರು. "ತಾಯ್ನಾಡನ್ನು ರಕ್ಷಿಸಲು ಪರಮೋಚ್ಛ ತ್ಯಾಗ ಮಾಡಿದ ದೇಶದ ವೀರ ಪುತ್ರರಿಗೆ ನಾನು ನಮಸ್ಕರಿಸುತ್ತೇನೆ," ಎಂದು ಶ್ರೀ ಮೋದಿ ಹೇಳಿದರು.

"ಕಾರ್ಗಿಲ್‌ನಲ್ಲಿ, ನಾವು ಯುದ್ಧವನ್ನು ಗೆದ್ದಿರುವುದು ಮಾತ್ರವಲ್ಲ, ನಾವು 'ಸತ್ಯ, ಸಂಯಮ ಮತ್ತು ಶಕ್ತಿಯ' ಅದ್ಭುತ ಉದಾಹರಣೆಯನ್ನು ಪ್ರಸ್ತುತಪಡಿಸಿದ್ದೇವೆ," ಎಂದು ಪ್ರಧಾನಿ ಮೋದಿ ಹೇಳಿದರು. ಶಾಂತಿಯನ್ನು ಕಾಪಾಡಲು ಭಾರತದ ಸರ್ವ ಪ್ರಯತ್ನಗಳ ನಡುವೆ ಪಾಕಿಸ್ತಾನದ ವಂಚನೆ ಬಗ್ಗೆ ಪ್ರಧಾನಿ ಬೆಳಕು ಚೆಲ್ಲಿದರು. "ಸತ್ಯವು ಸುಳ್ಳು ಮತ್ತು ಭಯೋತ್ಪಾದನೆಯನ್ನು ಮಣಿಸಿ, ಮೊಣಕಾಲುಗಳ ಮೇಲೆ ನಿಲ್ಲಿಸಿತು," ಎಂದು ಪ್ರಧಾನಿ ಹೇಳಿದರು.

ಭಯೋತ್ಪಾದನೆಯನ್ನು ಖಂಡಿಸಿದ ಪ್ರಧಾನಮಂತ್ರಿಯವರು, ಪಾಕಿಸ್ತಾನವು ಈ ಹಿಂದೆಯೂ ಸದಾ ಸೋಲನ್ನು ಎದುರಿಸಿದೆ ಎಂದರು. "ಪಾಕಿಸ್ತಾನವು ತನ್ನ ಗತದಿಂದ ಏನನ್ನೂ ಕಲಿತಿಲ್ಲ. ಅಲ್ಲದೆ, ಸದಾ ಚಾಲ್ತಿಯಲ್ಲಿರಲು ಭಯೋತ್ಪಾದನೆ ಮತ್ತು ಪರೋಕ್ಷ ಯುದ್ಧಗಳ ಸೋಗಿನಲ್ಲಿ ಯುದ್ಧವನ್ನು ಮುಂದುವರಿಸಿದೆ," ಎಂದು ಶ್ರೀ ಮೋದಿ ಟೀಕಿಸಿದರು. ಭಯೋತ್ಪಾದಕರ ದುಷ್ಟ ಉದ್ದೇಶಗಳು ಎಂದಿಗೂ ಈಡೇರುವುದಿಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದರು. "ನಮ್ಮ ಕೆಚ್ಚೆದೆಯ ವೀರರು ಎಲ್ಲಾ ಭಯೋತ್ಪಾದಕ ಪ್ರಯತ್ನಗಳನ್ನು ಹೊಸಕಿ ಹಾಕುತ್ತಾರೆ," ಎಂದು ಅವರು ಹೇಳಿದರು.

"ಲಡಾಖ್ ಆಗಿರಲಿ ಅಥವಾ ಜಮ್ಮು-ಕಾಶ್ಮೀರವಾಗಿರಲಿ, ಅಭಿವೃದ್ಧಿಯ ಹಾದಿಯಲ್ಲಿ ಬರುವ ಎಲ್ಲಾ ಸವಾಲುಗಳನ್ನು ಭಾರತ ಜಯಿಸುತ್ತದೆ," ಎಂದು ಪ್ರಧಾನಿ ಪುನರುಚ್ಚರಿಸಿದರು. ಇನ್ನು ಕೆಲವೇ ದಿನಗಳಲ್ಲಿ, ಆಗಸ್ಟ್ 5ಕ್ಕೆ, 370ನೇ ವಿಧಿಯನ್ನು ರದ್ದುಪಡಿಸಿ  5 ವರ್ಷಗಳು ಪೂರ್ಣಗೊಳ್ಳಲಿವೆ. ಇಂದಿನ ಜಮ್ಮು-ಕಾಶ್ಮೀರವು ಕನಸುಗಳಿಂದ ತುಂಬಿದ ಹೊಸ ಭವಿಷ್ಯದ ಬಗ್ಗೆ ಮಾತನಾಡುತ್ತಿದೆ ಎಂದು ಅವರು ನೆನಪಿಸಿದರು. ಜಮ್ಮು-ಕಾಶ್ಮೀರದಲ್ಲಿ ಪ್ರಗತಿಯ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿ, ಈ ಕೇಂದ್ರಾಡಳಿತ ಪ್ರದೇಶದಲ್ಲಿ ʻಜಿ-20ʼ ಸಭೆಗಳನ್ನು ನಡೆಸುವುದು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಮೇಲೆ ಸರ್ಕಾರದ ಗಮನ, ಸಿನೆಮಾ ಹಾಲ್‌ಗಳನ್ನು ತೆರೆಯುವುದು ಮತ್ತು ಮೂರೂವರೆ ದಶಕಗಳ ನಂತರ ತಾಜಿಯಾ ಮೆರವಣಿಗೆಯನ್ನು ಪ್ರಾರಂಭಿಸುತ್ತಿರುವುದನ್ನು ಉಲ್ಲೇಖಿಸಿದರು. "ಭೂಮಿಯ ಮೇಲಿನ ಈ ಸ್ವರ್ಗವು ಶಾಂತಿ ಮತ್ತು ಸಮೃದ್ಧಿಯ ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿದೆ," ಎಂದು ಪ್ರಧಾನಿ ಬಣ್ಣಿಸಿದರು.

ಲಡಾಖ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ʻಶಿಂಕುನ್ ಲಾʼ ಸುರಂಗದ ಮೂಲಕ ಕೇಂದ್ರಾಡಳಿತ ಪ್ರದೇಶವು ವರ್ಷವಿಡೀ, ಎಲ್ಲಾ ಋತುಗಳಲ್ಲೂ ಇಡೀ ದೇಶದೊಂದಿಗೆ ಸಂಪರ್ಕ ಹೊಂದಿರುತ್ತದೆ ಎಂದರು. ಈ ಸುರಂಗವು ಲಡಾಖ್‌ನ ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಹೊಸ ಸಾಧ್ಯತೆಗಳ ಬಾಗಿಲು ತೆರೆಯುತ್ತದೆ ಎಂದು ಹೇಳಿದರು. ಲಡಾಖ್ ಜನರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಈ ಸುರಂಗವು ಅವರ ಜೀವನವನ್ನು ಮತ್ತಷ್ಟು ಸುಗಮಗೊಳಿಸತ್ತದೆ, ಏಕೆಂದರೆ ಈ ಪ್ರದೇಶದ ತೀವ್ರ ತೆರನಾದ ಹವಾಮಾನ ಪರಿಸ್ಥಿತಿಗಳಿಂದ ಸ್ಥಳೀಯರು ಎದುರಿಸುತ್ತಿರುವ ಹಲವಾರು ಕಷ್ಟಗಳನ್ನು ನಿವಾರಿಸುತ್ತದೆ ಎಂದು ಹೇಳಿದರು.

ಲಡಾಖ್ ಜನರ ಬಗ್ಗೆ ಸರ್ಕಾರದ ಆದ್ಯತೆಗಳನ್ನು ಪ್ರಧಾನಿ ಎತ್ತಿ ತೋರಿದರು ಮತ್ತು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಕಾರ್ಗಿಲ್ ಪ್ರದೇಶದ ನಾಗರಿಕರನ್ನು ಇರಾನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಖುದ್ದಾಗಿ ತಾವು ಮಾಡಿದ ಪ್ರಯತ್ನಗಳನ್ನು ಉಲ್ಲೇಖಿಸಿದರು. ಜೈಸಲ್ಮೇರ್‌ನಲ್ಲಿ ಕ್ವಾರಂಟೈನ್ ವಲಯವನ್ನು ಸ್ಥಾಪಿಸಿದ್ದನ್ನು ಹಾಗೂ ಲಡಾಖ್‌ಗೆ ಕಳುಹಿಸುವ ಮೊದಲು ಅವರನ್ನು ಅಲ್ಲಿ ಪರೀಕ್ಷೆಗೆ ಒಳಪಡಿಸಿದ್ದನ್ನು ಸ್ಮರಿಸಿದರು. ಲಡಾಖ್ ಜನರ ಜೀವನವನ್ನು ಸುಗಮಗೊಳಿಸುವ ಮತ್ತು ಹೆಚ್ಚಿನ ಸೇವೆಗಳನ್ನು ಅವರಿಗೆ ಒದಗಿಸುವ ಸರ್ಕಾರದ ಪ್ರಯತ್ನಗಳನ್ನು ಒತ್ತಿಹೇಳಿದ ಪ್ರಧಾನಿ, ಕಳೆದ 5 ವರ್ಷಗಳಲ್ಲಿ ಬಜೆಟ್ ಅನ್ನು ಅಂದಾಜು ಆರು ಪಟ್ಟು ಅಂದರೆ, 1100 ಕೋಟಿ ರೂ.ಗಳಿಂದ 6000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಉಲ್ಲೇಖಿಸಿದರು. "ರಸ್ತೆಗಳು, ವಿದ್ಯುತ್, ನೀರು, ಶಿಕ್ಷಣ, ಉದ್ಯೋಗ ಹೀಗೆ ಲಡಾಖ್‌ನ ಪ್ರತಿಯೊಂದು ವಲಯವೂ ರೂಪಾಂತರಗೊಳ್ಳುತ್ತಿದೆ," ಎಂದು ಪ್ರಧಾನಿ ಮೋದಿ ಹೇಳಿದರು. ʻಜಲ ಜೀವನ್ ಮಿಷನ್‌ʼ ಯೋಜನೆಯ ಅಡಿಯಲ್ಲಿ ಲಡಾಖ್‌ನ ಶೇಕಡಾ 90ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಲಡಾಖ್ ಯುವಕರಿಗೆ ಗುಣಮಟ್ಟದ ಉನ್ನತ ಶಿಕ್ಷಣಕ್ಕಾಗಿ ಉದ್ದೇಶಿತ ʻಸಿಂಧು ಕೇಂದ್ರೀಯ ವಿಶ್ವವಿದ್ಯಾಲಯʼ, ಇಡೀ ಲಡಾಖ್ ಪ್ರದೇಶದಲ್ಲಿ 4 ಜಿ ನೆಟ್‌ವರ್ಕ್‌ ಸ್ಥಾಪಿಸುವ ಕೆಲಸ ಮತ್ತು ರಾಷ್ಟ್ರೀಯ ಹೆದ್ದಾರಿ-1ರಲ್ಲಿ ಸರ್ವ ಋತು ಸಂಪರ್ಕಕ್ಕಾಗಿ 13 ಕಿಲೋಮೀಟರ್ ಉದ್ದದ ʻಜೋಜಿಲಾ ಸುರಂಗʼಕ್ಕಾಗಿ ನಡೆಯುತ್ತಿರುವ ಕಾಮಗಾರಿಗಳ ಉದಾಹರಣೆಗಳನ್ನು ಪ್ರಧಾನಿಯವರು ನೀಡಿದರು.

ಗಡಿ ಪ್ರದೇಶಗಳ ಮಹತ್ವಾಕಾಂಕ್ಷೆಯ ಗುರಿಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ʻಗಡಿ ರಸ್ತೆ ಸಂಸ್ಥೆʼಯು(ಬಿಆರ್‌ಒ) ʻಸೆಲಾ ಸುರಂಗʼ ಸೇರಿದಂತೆ 330ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದೆ, ಇದು ʻನವ ಭಾರತʼದ ಸಾಮರ್ಥ್ಯ ಮತ್ತು ದಿಸೆಯನ್ನು ತೋರಿಸುತ್ತದೆ ಎಂದು ಮಾಹಿತಿ ನೀಡಿದರು.

ಮಿಲಿಟರಿ ತಂತ್ರಜ್ಞಾನಗಳನ್ನು ಮೇಲ್ದರ್ಜೆಗೇರಿಸುವ ಮಹತ್ವವನ್ನು ಪ್ರಧಾನಿಯವರು ಒತ್ತಿ ಹೇಳಿದರು. ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳಲ್ಲಿ, ನಮ್ಮ ರಕ್ಷಣಾ ಪಡೆಗೆ ಆಧುನಿಕ ಕಾರ್ಯಶೈಲಿ ಮತ್ತು ವ್ಯವಸ್ಥೆಗಳ ಜೊತೆಗೆ ಇತ್ತೀಚಿನ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಅಗತ್ಯವಿದೆ ಎಂದರು. ಈ ಹಿಂದೆಯೂ ಪಡೆಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವನ್ನು ರಕ್ಷಣಾ ವಲಯವು ಮನಗಂಡಿತ್ತು, ಆದರೆ ದುರದೃಷ್ಟವಶಾತ್, ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿರಲಿಲ್ಲ ಎಂದು ಶ್ರೀ ಮೋದಿ ಹೇಳಿದರು. ಆದಾಗ್ಯೂ, ಕಳೆದ 10 ವರ್ಷಗಳಲ್ಲಿ, ರಕ್ಷಣಾ ಸುಧಾರಣೆಗಳಿಗೆ ಆದ್ಯತೆ ನೀಡಲಾಗಿದೆ, ಇದು ನಮ್ಮ ಪಡೆಗಳನ್ನು ಹೆಚ್ಚು ಸಮರ್ಥ ಮತ್ತು ಸ್ವಾವಲಂಬಿಯನ್ನಾಗಿ ಮಾಡಿದೆ ಎಂದು ಅವರು ಹೇಳಿದರು. ಇಂದು ರಕ್ಷಣಾ ಸಲಕರಣೆಗಳ ಖರೀದಿಯಲ್ಲಿ ಪ್ರಮುಖ ಪಾಲನ್ನು ಭಾರತೀಯ ರಕ್ಷಣಾ ಉದ್ಯಮಕ್ಕೆ ನೀಡಲಾಗುತ್ತಿದೆ. ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಬಜೆಟ್‌ನಲ್ಲಿ ಶೇಕಡಾ 25 ರಷ್ಟು ಖಾಸಗಿ ವಲಯಕ್ಕೆ ಕಾಯ್ದಿರಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ಪ್ರಯತ್ನಗಳ ಪರಿಣಾಮವಾಗಿ, ಭಾರತದ ರಕ್ಷಣಾ ಉತ್ಪಾದನೆ 1.5 ಲಕ್ಷ ಕೋಟಿ ರೂ. ದಾಟಿದೆ. ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶವೆಂದು ಭಾರತವನ್ನು ಪರಿಗಣಿಸಲಾಗಿತ್ತು. ಆದರೆ, ಇಂದು   ತನ್ನ ಹಿಂದಿನ ಚಿತ್ರಣಕ್ಕೆ ವ್ಯತಿರಿಕ್ತವಾಗಿ ಭಾರತವು ಶಸ್ತ್ರಾಸ್ತ್ರ ರಫ್ತುದಾರನಾಗಿಯೂ ತನ್ನ ಛಾಪು ಮೂಡಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ಪಡೆಗಳು ಈಗ 5000ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ನಿರ್ಧರಿಸಿವೆ ಎಂದು ಶ್ರೀ ಮೋದಿ ಸಂತೋಷ ವ್ಯಕ್ತಪಡಿಸಿದರು.

ರಕ್ಷಣಾ ಕ್ಷೇತ್ರದಲ್ಲಿನ ಸುಧಾರಣೆಗಳಿಗಾಗಿ ರಕ್ಷಣಾ ಪಡೆಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ʻಅಗ್ನಿಪಥ್ʼ ಯೋಜನೆಯು ನಿರ್ಣಾಯಕ ಸುಧಾರಣೆಗಳಲ್ಲಿ ಒಂದಾಗಿದೆ ಎಂದರು. ಈ ಬಗ್ಗೆ ಸುದೀರ್ಘವಾಗಿ ಅವರು ಮಾತನಾಡಿದರು. ಭಾರತದ ಯೋಧರ ಸರಾಸರಿ ವಯಸ್ಸು ಜಾಗತಿಕ ಸರಾಸರಿಗಿಂತಲೂ ಹೆಚ್ಚಾಗಿದೆ ಎಂಬ ದೀರ್ಘಕಾಲದ ಕಳವಳವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಹಿಂದೆ ಈ ನಿರ್ಣಾಯಕ ಸವಾಲನ್ನು ಎದುರಿಸಲು ಇಚ್ಛಾಶಕ್ತಿ ಕೊರತೆಯಿತ್ತು ಎಂದರು. ಇದನ್ನು ಈಗ ʻಅಗ್ನಿಪಥ್ʼ ಯೋಜನೆಯ ಮೂಲಕ ಪರಿಹರಿಸಲಾಗುತ್ತಿದೆ ಎಂದು ತಿಳಿಸಿದರು. "ಸೇನಾಪಡೆಗಳ ಯುವಶಕ್ತಿಯನ್ನು ಕಾಯ್ದುಕೊಳ್ಳುವುದು ಮತ್ತು ಅವುಗಳನ್ನು ಸದಾ ಯುದ್ಧ ಸನ್ನದ್ಧವಾಗಿರಿಸುವುದು ʻಅಗ್ನಿಪಥ್ʼ ಯೋಜನೆಯ ಉದ್ದೇಶವಾಗಿದೆ," ಎಂದು ಪ್ರತಿಪಾದಿಸಿದ ಪ್ರಧಾನಿ, ಈ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಹಿಂದಿನ ಹಗರಣಗಳು ಹಾಗೂ ವಾಯುಪಡೆಯ ಆಧುನೀಕರಣಕ್ಕೆ ಹಿಂದೆ ಇದ್ದ ಇಚ್ಛಾಶಕ್ತಿ ಕೊರತೆಯನ್ನು ಅವರು ಟೀಕಿಸಿದರು. "ಸತ್ಯವಾದ ಸಂಗತಿಯೆಂದರೆ, ʻಅಗ್ನಿಪಥ್ʼ ಯೋಜನೆಯು ದೇಶದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಶವು ಸಮರ್ಥ ಯುವಕರನ್ನು ಸಹ ಪಡೆಯುತ್ತದೆ. ಖಾಸಗಿ ವಲಯ ಮತ್ತು ಅರೆಸೈನಿಕ ಪಡೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗಿದೆ," ಎಂದು ಅವರು ಹೇಳಿದರು.

ಪಿಂಚಣಿ ಹೊರೆಯನ್ನು ಉಳಿಸುವುದೇ ʻಅಗ್ನಿಪಥ್ʼ ಯೋಜನೆ ಹಿಂದಿನ ಮುಖ್ಯ ಉದ್ದೇಶ ಎಂಬ ಆರೋಪವನ್ನು ತಿರಸ್ಕರಿಸಿದ ಪ್ರಧಾನಿಯವರು, ಇಂದು ನೇಮಕಗೊಳ್ಳುತ್ತಿರುವ ಸೈನಿಕರ ಪಿಂಚಣಿ ಹೊರೆ 30 ವರ್ಷಗಳ ನಂತರ ಬರಲಿದೆ, ಆದ್ದರಿಂದ ಇದು ಈ ಯೋಜನೆಯ ಹಿಂದಿನ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು. "ಸಶಸ್ತ್ರ ಪಡೆಗಳು ಕೈಗೊಂಡ ಈ ನಿರ್ಧಾರವನ್ನು ನಾವು ಗೌರವಿಸಿದ್ದೇವೆ, ಏಕೆಂದರೆ ನಮಗೆ ರಾಜಕೀಯಕ್ಕಿಂತ ದೇಶದ ಭದ್ರತೆ ಮುಖ್ಯವಾಗಿದೆ," ಎಂದು ಅವರು ಹೇಳಿದರು.

ಇಂದು ರಾಷ್ಟ್ರದ ಯುವಕರನ್ನು ದಾರಿ ತಪ್ಪಿಸುತ್ತಿರುವವರಿಗೆ, ಈ ಹಿಂದೆ ಸಶಸ್ತ್ರ ಪಡೆಗಳ ಬಗ್ಗೆ ಯಾವುದೇ ಗೌರವವಿರಲಿಲ್ಲ ಎಂದು ಪ್ರಧಾನಿ ಗಮನಸೆಳೆದರು. ʻಸಮಾನ ಶ್ರೇಣಿ, ಸಮಾನ ಪಿಂಚಣಿʼ ಕುರಿತು ಹಿಂದಿನ ಸರ್ಕಾರಗಳು ನೀಡಿದ ಸುಳ್ಳು ಭರವಸೆಗಳನ್ನು ಸ್ಮರಿಸಿದ ಪ್ರಧಾನಿ, ಮಾಜಿ ಸೈನಿಕರಿಗೆ 1.25 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ನೀಡುವ ಯೋಜನೆಯನ್ನು ಪ್ರಸ್ತುತ ಸರ್ಕಾರ ಜಾರಿಗೆ ತಂದಿದೆ ಎಂದು ಒತ್ತಿ ಹೇಳಿದರು. "ಸ್ವಾತಂತ್ರ್ಯದ 7 ದಶಕಗಳ ನಂತರವೂ ಹುತಾತ್ಮರಿಗೆ ಯುದ್ಧ ಸ್ಮಾರಕವನ್ನು ನಿರ್ಮಿಸದ, ಗಡಿಯಲ್ಲಿ ನಿಯೋಜಿಸಲಾದ ನಮ್ಮ ಸೈನಿಕರಿಗೆ ಸಾಕಷ್ಟು ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಒದಗಿಸದ ಮತ್ತು ʻಕಾರ್ಗಿಲ್ ವಿಜಯ ದಿನʼವನ್ನು ನಿರ್ಲಕ್ಷಿಸಿದ ಆ ಜನರು ಇವರೇ," ಎಂದು ಪ್ರಧಾನಿ ಹೇಳಿದರು.

ತಮ್ಮ ಭಾಷಣದ ಮುಗಿಸುವ ಮುನ್ನ ಪ್ರಧಾನ ಮಂತ್ರಿಯವರು, "ಕಾರ್ಗಿಲ್ ವಿಜಯವು ಯಾವುದೇ ಸರ್ಕಾರ ಅಥವಾ ಯಾವುದೇ ಪಕ್ಷದ ವಿಜಯವಲ್ಲ. ಈ ಗೆಲುವು ಇಡೀ ದೇಶಕ್ಕೆ ಸೇರಿದ್ದು, ಈ ಗೆಲುವು ದೇಶದ ಪರಂಪರೆಯಾಗಿದೆ. ಇದು ದೇಶದ ಹೆಮ್ಮೆ ಮತ್ತು ಸ್ವಾಭಿಮಾನದ ಹಬ್ಬವಾಗಿದೆ,ʼʼ ಎಂದು ಹೇಳಿದರು. ಇಡೀ ದೇಶದ ಪರವಾಗಿ ವೀರ ಯೋಧರಿಗೆ ನಮಸ್ಕರಿಸಿದರು ಮತ್ತು ಕಾರ್ಗಿಲ್ ವಿಜಯದ 25ನೇ ವರ್ಷಾಚರಣೆಯ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಇರಿಸಿ  ವೀರ ಯೋಧರಿಗೆ ನಮನ ಸಲ್ಲಿಸಿದರು. ಮೂರು ರಕ್ಷಣಾಸೇವೆಗಳ ಉಪ ಮುಖ್ಯಸ್ಥರು ಮತ್ತು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಟು ದಿ ಚೇರ್ಮನ್ ಚೀಫ್ಸ್ ಆಫ್ ಸ್ಟಾಫ್ ಕಮಿಟಿ (ಸಿಐಎಸ್ಸಿ)ಯ ಮುಖ್ಯಸ್ಥರು  ಅವರ ಜೊತೆಗಿದ್ದರು.

ಎಕ್ಸ್ ನಲ್ಲಿ ಮತ್ತೊಂದು ಪೋಸ್ಟ್ನ ಮೂಲಕ, ರಕ್ಷಣಾ ಮಂತ್ರಿಯವರು ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ವೀರ ಸೈನಿಕರ ಅದಮ್ಯ ಮನೋಭಾವ ಮತ್ತು ಧೈರ್ಯವನ್ನು ನೆನಪಿಸಿಕೊಂಡರು, ಅವರ ಅಚಲವಾದ ಬದ್ಧತೆ, ಶೌರ್ಯ ಮತ್ತು ದೇಶಭಕ್ತಿ ಭಾರತವು ಸುರಕ್ಷಿತ ಮತ್ತು ಸುಭದ್ರವಾಗಿರುವುದನ್ನು ಖಚಿತಪಡಿಸಿದೆ ಎಂದು ಹೇಳಿರುವರು. ಸೈನಿಕರ ಸೇವೆ ಮತ್ತು ತ್ಯಾಗವು  ಭಾರತೀಯರಿಗೆ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.

ಕಾರ್ಗಿಲ್ ವಿಜಯ್ ದಿವಸ ವನ್ನು, ದ್ರಾಸ್ನಲ್ಲಿ ಪ್ರಧಾನ ಮಂತ್ರಿಯವರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.    ಈ ಕಾರ್ಯಕ್ರಮದಲ್ಲಿ ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಬ್ರಿಗ್ (ಡಾ) ಬಿ ಡಿ ಶರ್ಮಾ (ನಿವೃತ್ತ), ರಕ್ಷಣಾ ರಾಜ್ಯ ಮಂತ್ರಿ ಶ್ರೀ ಸಂಜಯ್ ಸೇಠ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್,  ಮೂರೂ ರಕ್ಷಣಾ ಸೇವೆಯ ಮುಖ್ಯಸ್ಥರು ಮುಖ್ಯಸ್ಥರು, ನಿವೃತ್ತ ಯೋಧರು  ಮತ್ತು ವೀರ ನಾರಿಗಳು ಸಹ ಭಾಗವಹಿಸಿದ್ದರು. 

 

*****

 



(Release ID: 2037608) Visitor Counter : 30