ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಭಾರತೀಯ ಭಾಷೆಗಳಲ್ಲಿ ರಾಷ್ಟ್ರಮಟ್ಟದ ಬರವಣಿಗೆ ಸ್ಪರ್ಧೆಗೆ ವೇದಿಕೆ ಅಭಿವೃದ್ಧಿಪಡಿಸುವ ಕುರಿತು ಶ್ರೀ ಸಂಜಯ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ

Posted On: 03 JUL 2024 4:11PM by PIB Bengaluru

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಒಎಸ್ಇಎಲ್) ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಅವರು 2024 ರ ಜೂನ್ 28 ರಂದು ಮಧ್ಯಸ್ಥಗಾರರ/ಭಾಗೀದಾರರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಭಾಷೆಗಳಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬರವಣಿಗೆ ಸ್ಪರ್ಧೆಗಳನ್ನು ಆಯೋಜಿಸಲು ವೇದಿಕೆಯನ್ನು ರಚಿಸುವ ಬಗ್ಗೆ ಅವರು ಚರ್ಚಿಸಿದರು. ಡಿಒಎಸ್ಇಎಲ್, ಸಿಬಿಎಸ್ಇ, ಎನ್ಬಿಟಿ, ಎನ್ ಸಿಇಆರ್ಟಿ, ನವೋದಯ ವಿದ್ಯಾಲಯ ಸಮಿತಿ (ಎನ್ವಿಎಸ್), ಎಸ್ಸಿಇಆರ್ಟಿಗಳ ಅಧಿಕಾರಿಗಳು ಮತ್ತು 9 ರಾಜ್ಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಹಯೋಗ ಮತ್ತು ಮುನ್ನಡೆ

ಶ್ರೀ ಸಂಜಯ್ ಕುಮಾರ್ ಅವರು ವಿವಿಧ ಭಾಗೀದಾರರು/ಮಧ್ಯಸ್ಥಗಾರರೊಂದಿಗೆ ಸಹಯೋಗದ ಮೂಲಕ  ಈ ಪ್ರಯತ್ನಗಳನ್ನು ರಚನಾತ್ಮಕ ಚೌಕಟ್ಟಿನಲ್ಲಿ ಸಂಯೋಜಿಸುವ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಎಸ್ಸಿಇಆರ್ಟಿಗಳ ಬೆಂಬಲವನ್ನು ಪಡೆಯುವ ಮೂಲಕ ಭಾಷಾ ತಜ್ಞರು ಮತ್ತು ಸಿಬಿಎಸ್ಇಯನ್ನು ಒಳಗೊಳ್ಳುವ ಮೂಲಕ ಡಿಒಎಸ್ಇ ಮತ್ತು ಎಲ್ ಬಹುಭಾಷಾವಾದದ ಉದ್ದೇಶವನ್ನು ಪೂರೈಸುತ್ತದೆ ಎಂದು ಅವರು ಹೇಳಿದರು. ಶಾಲೆಗಳು ರಾಜ್ಯ / ಜಿಲ್ಲಾ ಮಟ್ಟದಲ್ಲಿ ವಿವಿಧ ಭಾಷೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತವೆ, ಸಿಬಿಎಸ್ಇ ಆಯೋಜಿಸುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಭಾಗವಹಿಸುವವರನ್ನು ಪಟ್ಟಿ (ಶಾರ್ಟ್ಲಿಸ್ಟ್) ಮಾಡುತ್ತವೆ ಎಂದು ಅವರು ಹೇಳಿದರು. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಕ್ಕಾಗಿ ಜನಪ್ರಿಯ ಪ್ರಾದೇಶಿಕ ಭಾಷಾ ಪುಸ್ತಕಗಳನ್ನು ಗುರುತಿಸಲು ಮತ್ತು ಅಳವಡಿಸಿಕೊಳ್ಳಲು (ಆನ್ಬೋರ್ಡ್ ಮಾಡಲು) ಎಸ್ಸಿಇಆರ್ಟಿಗಳು ಮತ್ತು ನ್ಯಾಷನಲ್ ಬುಕ್ ಟ್ರಸ್ಟ್ (ಎನ್ಬಿಟಿ) ನಡುವಿನ ಸಹಯೋಗಕ್ಕೆ  ಶ್ರೀ ಸಂಜಯ್ ಕುಮಾರ್ ಆಗ್ರಹಿಸಿದರು.

ಓದು ಮತ್ತು ಬರವಣಿಗೆಗೆ ಸಂಬಂಧಿಸಿದಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡಿರುವ ಪ್ರಯತ್ನಗಳು ಮತ್ತು ಉಪಕ್ರಮಗಳು 2024 ರ ಜುಲೈ ಮಧ್ಯದಲ್ಲಿ ನಿಗದಿಯಾಗಿರುವ ಮುಂಬರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯ ಪ್ರಮುಖ ವಿಷಯವಾಗಲಿದೆ ಎಂದು ಜೆಎಸ್ (ಐ &ಟಿ) ಶ್ರೀಮತಿ ಪ್ರಾಚಿ ಪಾಂಡೆ ಮಾಹಿತಿ ನೀಡಿದರು. ಭಾಗೀದಾರರ/ಮಧ್ಯಸ್ಥಗಾರರ ಸಮಾಲೋಚನೆಯು ಎಲ್ಲಾ ಹಂತಗಳಲ್ಲಿ ಡಿಒಎಸ್ಇಎಲ್ ಮತ್ತು ವಿವಿಧ ಭಾಗೀದಾರರು ಹಾಗು ಮಧ್ಯಸ್ಥಗಾರರ ನಡುವೆ ಭಾರತೀಯ ಭಾಷೆಗಳಲ್ಲಿ ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಪೋಷಿಸಲು ಸಮಗ್ರ ವೇದಿಕೆಯನ್ನು ರಚಿಸಲು ಸಹಯೋಗದ ಪ್ರಯತ್ನವನ್ನು ಸೂಚಿಸುತ್ತದೆ.

ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಹೆಚ್ಚಿಸುವುದು

ಈ ಉಪಕ್ರಮವು ವೈವಿಧ್ಯಮಯ ಭಾಷೆಗಳಲ್ಲಿ ವಿದ್ಯಾರ್ಥಿಗಳ ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಉತ್ತೇಜಿಸುವ ವಿಧಾನವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ, ಅದು ಬಹುಭಾಷೀಯತೆಯನ್ನು ಬೆಳೆಸುತ್ತದೆ ಮತ್ತು ಮಕ್ಕಳು ತಮ್ಮ ಸ್ಥಳೀಯ ಭಾಷೆಯಲ್ಲಿ ತಮ್ಮನ್ನು ಅಭಿವ್ಯಕ್ತಪಡಿಸಲು ಪ್ರೋತ್ಸಾಹಿಸುತ್ತದೆ. ವಯಸ್ಸಿನ ಗುಂಪುಗಳು, ಭಾಗವಹಿಸುವ ಭಾಷೆಗಳು ಮತ್ತು ಪ್ರೋತ್ಸಾಹಿಸಬೇಕಾದ ಬರವಣಿಗೆಯ ಕೌಶಲ್ಯಗಳ ಪ್ರಕಾರಗಳಂತಹ ಪ್ರಮುಖ ಅಂಶಗಳ ಬಗ್ಗೆ ಚರ್ಚೆಗಳು ನಡೆದವು.

ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದು

ಸಿಬಿಎಸ್ಇ ಮತ್ತು ವಿವಿಧ ರಾಜ್ಯಗಳ ಪ್ರತಿನಿಧಿಗಳು ತಮ್ಮಲ್ಲಿ ಅಸ್ತಿತ್ವದಲ್ಲಿರುವ ಬರವಣಿಗೆ ಸ್ಪರ್ಧೆಗಳು ಮತ್ತು ಓದುವ ಉಪಕ್ರಮಗಳನ್ನು ಪ್ರದರ್ಶಿಸುವ ಪ್ರಸ್ತುತಿಗಳನ್ನು ನೀಡಿದರು. ಪ್ರಮುಖ ಉದಾಹರಣೆಗಳಲ್ಲಿ ಈ ಕೆಳಗಿನವು  ಸೇರಿವೆ:
* ಸಿಬಿಎಸ್ಇಯ ಅಭಿವ್ಯಕ್ತಿ ಸರಣಿ: ಸಿಬಿಎಸ್ಇ ವಿದ್ಯಾರ್ಥಿಗಳಿಗೆ ತ್ರೈಮಾಸಿಕ ಚಟುವಟಿಕೆ, ತ್ರೈಮಾಸಿಕದಲ್ಲಿ ಸುಮಾರು 5 ಲಕ್ಷ ಭಾಗೀದಾರರನ್ನು ಆಕರ್ಷಿಸುತ್ತದೆ;
* ಆಂಧ್ರಪ್ರದೇಶದ ಸ್ಪೆಲ್ ಬೀ ಕಾರ್ಯಕ್ರಮ: ಆಯ್ದ ರಾಜ್ಯಗಳಲ್ಲಿ ಮಂಡಲ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಸಲಾಗುತ್ತದೆ;
* ಛತ್ತೀಸ್ಗಢದ ಸಿದ್ಧಿ ಕಾರ್ಯಕ್ರಮ: ಮುಖ್ಯವಾಗಿ ನಾಲ್ಕು ಬುಡಕಟ್ಟು ಭಾಷೆಗಳಲ್ಲಿ ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಉತ್ತೇಜಿಸುವತ್ತ ಗಮನ ಹರಿಸುತ್ತದೆ: ಅವುಗಳೆಂದರೆ ಹಲ್ಬಿ, ಭದ್ರಿ, ಛತ್ತೀಸ್ಗಢಿ ಮತ್ತು ಗೊಂಡಿ;
* ಅಸ್ಸಾಂನ ಗುಣೋತ್ಸವ: ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಒಂದು ಉಪಕ್ರಮ, ಓದುವಿಕೆ, ಬರವಣಿಗೆ ಮತ್ತು ಗಣಿತ ಕಲಿಕೆಯ ಮಟ್ಟಗಳನ್ನು ನಿರ್ಣಯಿಸುವ ಮತ್ತು ಸುಧಾರಿಸುವತ್ತ ಗಮನ ಹರಿಸುತ್ತದೆ;
* ಉತ್ತರ ಪ್ರದೇಶದ "ಕಹಾನಿ ಸುನಾನೆ ಕಿ ಪ್ರತಿಯೋಗಿತಾ": ಪುರುಷ ಮತ್ತು ಮಹಿಳಾ ಶಿಕ್ಷಕರಿಗಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಥೆ ಹೇಳುವ ಸ್ಪರ್ಧೆ;
* ತಮಿಳುನಾಡಿನ ಇಲಾಮ್-ಥೆಡಿ ಕಲ್ವಿ: ಗೂಗಲ್ ಸಹಯೋಗದೊಂದಿಗೆ 3 ರಿಂದ 9 ನೇ ತರಗತಿಗಳಿಗೆ ಎರಡು ವಾರಗಳ ಓದುವ ಮ್ಯಾರಥಾನ್ ಮತ್ತು
* ಕರ್ನಾಟಕದ ನಲಿ ಕಲಿ ಕಾರ್ಯಕ್ರಮ: 1 ರಿಂದ 3 ನೇ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ಮೂಲಭೂತ ಸಾಕ್ಷರತೆಯತ್ತ ಆದ್ಯ ಗಮನ  ಮತ್ತು ಮಕ್ಕಳ ಗ್ರಂಥಾಲಯಗಳನ್ನು ಸ್ಥಾಪಿಸುವುದು.

 

*****



(Release ID: 2030556) Visitor Counter : 5