ಪ್ರಧಾನ ಮಂತ್ರಿಯವರ ಕಛೇರಿ

18ನೇ ಲೋಕಸಭೆಯ ಚೊಚ್ಚಲ ಅಧಿವೇಶನದ ಕಲಾಪ ಆರಂಭಕ್ಕೆ ಮುನ್ನ ಮಾಧ್ಯಮ ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ


“ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಂದು ಹೆಮ್ಮೆಯ ದಿನ, ಇದು ವೈಭವದ ದಿನ. ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ನಮ್ಮ ಹೊಸ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಲಾಗುತ್ತಿದೆ

“ನಾಳೆ ಜೂನ್ 25. 50 ವರ್ಷಗಳ ಹಿಂದೆ ಇದೇ ದಿನ ಸಂವಿಧಾನಕ್ಕೆ ಕಪ್ಪು ಚುಕ್ಕೆ ಹಾಕಲಾಗಿತ್ತು. ಅಂತಹ ಕಳಂಕ ದೇಶಕ್ಕೆ ಬರದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ

“ಸ್ವಾತಂತ್ರ್ಯಾ ನಂತರ 2ನೇ ಬಾರಿ ಸತತ 3ನೇ ಬಾರಿಗೆ ದೇಶಕ್ಕಾಗಿ ಸೇವೆ ಮಾಡುವ ಅವಕಾಶ ಸರ್ಕಾರಕ್ಕೆ ಸಿಕ್ಕಿದೆ. 60 ಸುದೀರ್ಘ ವರ್ಷಗಳ ನಂತರ ಈ ಸದವಕಾಶ ಬಂದಿದೆ

"ಸರ್ಕಾರ ಮುನ್ನಡೆಸಲು ಬಹುಮತದ ಅಗತ್ಯವಿದೆ ಎಂದು ನಾವು ನಂಬುತ್ತೇವೆ, ಆದರೆ ದೇಶವನ್ನು ಸನ್ಮಾರ್ಗದಲ್ಲಿ ಮುಂದಕ್ಕೆ ಕೊಂಡೊಯ್ಯಲು ಒಮ್ಮತವು ಬಹಳ ಮುಖ್ಯ"

"ನಮ್ಮ 3ನೇ ಅವಧಿಯಲ್ಲಿ ನಾವು 3 ಪಟ್ಟು ಹೆಚ್ಚು ಶ್ರಮಿಸುತ್ತೇವೆ, 3 ಪಟ್ಟು ಫಲಿತಾಂಶ ಸಾಧಿಸುತ್ತೇವೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ"

“ದೇಶಕ್ಕೆ ಘೋಷಣೆಗಳ ಅಗತ್ಯವಿಲ್ಲ, ಅದಕ್ಕೆ ಸತ್ವ ಬೇಕು. ದೇಶಕ್ಕೆ ಉತ್ತಮ ಪ್ರತಿಪಕ್ಷ, ಜವಾಬ್ದಾರಿಯುತ ಪ್ರತಿಪಕ್ಷ ಬೇಕು

Posted On: 24 JUN 2024 12:40PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 18ನೇ ಲೋಕಸಭೆಯ ಚೊಚ್ಚಲ ಅಧಿವೇಶನದ ಕಲಾಪ ಆರಂಭಕ್ಕೂ ಮುನ್ನ ಮಾಧ್ಯಮ ಉದ್ದೇಶಿಸಿ ಮಾತನಾಡಿದರು.

ಪ್ರಧಾನ ಮಂತ್ರಿ ಅವರು ಇಂದಿನ ಸಂದರ್ಭವನ್ನು ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೆಮ್ಮೆಯ ಮತ್ತು ವೈಭವದ ದಿನ ಎಂದು ಬಣ್ಣಿ, ತಮ್ಮ ಮಾತು ಆರಂಭಿಸಿದರು. ಏಕೆಂದರೆ ಸ್ವಾತಂತ್ರ್ಯಾ ನಂತರ ಇದು ಮೊದಲ ಬಾರಿಗೆ ಹೊಸ ಸಂಸತ್ತಿನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ. "ಈ ಮಹತ್ವದ ದಿನದಂದು, ಹೊಸದಾಗಿ ಆಯ್ಕೆಯಾದ ಎಲ್ಲ ಸಂಸದರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ, ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.

ಈ ಸಂಸತ್ತಿನ ರಚನೆಯು ಭಾರತದ ಬಡವರ, ಶ್ರೀಸಾಮಾನ್ಯ ನಿರ್ಣಯ, ಆಶೋತ್ತರಗಳನ್ನು ಪೂರೈಸುವ ಪ್ರಮುಖ ಸಾಧನವಾಗಿದೆ ಎಂದು ಬಣ್ಣಿಸಿದ ಪ್ರಧಾನಿ, ಹೊಸ ಉತ್ಸಾಹದಿಂದ ಹೊಸ ವೇಗ ಮತ್ತು ಹೊಸ ಎತ್ತರ ಸಾಧಿಸಲು ಇದು ಒಂದು ನಿರ್ಣಾಯಕ ಅವಕಾಶವಾಗಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮಹತ್ವದ ಗುರಿ ಸಾಕಾರಗೊಳಿಸಲು 18ನೇ ಲೋಕಸಭೆಯು ಇಂದಿನಿಂದ ವಿಧ್ಯುಕ್ತವಾಗಿ ಆರಂಭವಾಗುತ್ತಿದೆ. ವಿಶ್ವದ ಅತಿದೊಡ್ಡ ಚುನಾವಣೆಯನ್ನು ಅದ್ಧೂರಿಯಾಗಿ ನಡೆಸುವುದು 140 ಕೋಟಿ ನಾಗರಿಕರಿಗೆ ಹೆಮ್ಮೆಯ ವಿಷಯವಾಗಿದೆ. 65 ಕೋಟಿಗೂ ಹೆಚ್ಚು ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಸ್ವಾತಂತ್ರ್ಯಾ ನಂತರ 2ನೇ ಬಾರಿಗೆ 3ನೇ ಅವಧಿಗೆ ಸೇವೆ ಸಲ್ಲಿಸಲು ದೇಶವು ತನ್ನ ಜನಾದೇಶ ನೀಡಿದೆ. "60 ವರ್ಷಗಳ ನಂತರ ಈ ಅವಕಾಶ ಬಂದಿದೆ, ಇದು ನಿಜಕ್ಕೂ ಹೆಮ್ಮೆಯ ಘಟನೆಯಾಗಿದೆ" ಎಂದು ಅವರು ಹೇಳಿದರು.

3ನೇ ಅವಧಿಗೆ ಸರ್ಕಾರ ಆಯ್ಕೆ ಮಾಡಿದ್ದಕ್ಕಾಗಿ ದೇಶದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ, ಇದು ಸರ್ಕಾರದ ಉದ್ದೇಶಗಳು, ನೀತಿಗಳು ಮತ್ತು ಜನರ ಬಗೆಗಿನ ಸಂಪೂರ್ಣ ಸಮರ್ಪಣೆಗೆ ಅನುಮೋದನೆಯ ಮುದ್ರೆ ಹಾಕಿದೆ. "ಕಳೆದ 10 ವರ್ಷಗಳಲ್ಲಿ, ನಾವು ಒಂದು ಸತ್ಸಂಪ್ರದಾಯ ಸ್ಥಾಪಿಸಲು ಪ್ರಯತ್ನಿಸಿದ್ದೇವೆ. ಏಕೆಂದರೆ ಸರ್ಕಾರ ಮುನ್ನಡೆಸಲು ಬಹುಮತದ ಅಗತ್ಯವಿದ, ಆದರೆ ದೇಶವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಒಮ್ಮತವು ಸಹ ಅತ್ಯಂತ ಮುಖ್ಯವಾಗಿದೆ ಎಂದು ನಾವು ನಂಬುತ್ತೇವೆ". 140 ಕೋಟಿ ನಾಗರಿಕರ ಆಶಯ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಒಮ್ಮತ ಸಾಧಿಸುವ ಮೂಲಕ ಮತ್ತು ಎಲ್ಲರನ್ನೂ ಜತೆ ಜತೆಗೆ ಕರೆದೊಯ್ಯುವ ಮೂಲಕ ಭಾರತೆ ಮಾತೆಗೆ ಸೇವೆ ಸಲ್ಲಿಸುವುದು ಸರ್ಕಾರದ ನಿರಂತರ ಪ್ರಯತ್ನವಾಗಿದೆ ಎಂದು ಪ್ರಧಾನಿ ಹೇಳಿದರು.

ಭಾರತದ ಸಂವಿಧಾನ ವ್ಯಾಪ್ತಿಯಲ್ಲಿ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ನಿರ್ಧಾರ ಕೈಗೊಳ್ಳುವ ವೇಗ ಹೆಚ್ಚಿಸುವ ಅಗತ್ಯವಿದೆ. 18ನೇ ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿರುವ ಯುವ ಸಂಸದರ ಸಂಖ್ಯೆ ಹೆಚ್ಚಿರುವುದು ಸಂತಸ ತಂದಿದೆ. ಭಾರತೀಯ ಸಂಪ್ರದಾಯಗಳ ಪ್ರಕಾರ, ಸಂಖ್ಯೆ 18ರ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಅವರು, ಗೀತೆಯು ಕರ್ಮ, ಕರ್ತವ್ಯ ಮತ್ತು ಕರುಣೆಯ ಸಂದೇಶವನ್ನು ಒದಗಿಸುವ 18 ಅಧ್ಯಾಯಗಳನ್ನು ಹೊಂದಿದೆ. ಪುರಾಣಗಳು ಮತ್ತು ಉಪ್ಪೂರಣಗಳ ಸಂಖ್ಯೆ 18. 18ರ ಮೂಲ ಸಂಖ್ಯೆ 9 ಆಗಿದೆ. ಇದು ಪರಿಪೂರ್ಣತೆಯನ್ನು ಸಂಕೇತಿಸುತ್ತದೆ. ಭಾರತದ ಕಾನೂನುಬದ್ಧ ಮತದಾನದ ವಯಸ್ಸು 18 ವರ್ಷ. “18ನೇ ಲೋಕಸಭೆಯು ಭಾರತದ ಅಮೃತ ಕಾಲವಾಗಿದೆ. ಈ ಲೋಕಸಭೆಯ ರಚನೆಯೂ ಒಂದು ಶುಭ ಸಂಕೇತವಾಗಿದೆ’ ಎಂದು ಶ್ರೀ ಮೋದಿ ಹೇಳಿದರು.

ತುರ್ತು ಪರಿಸ್ಥಿತಿ ಜಾರಿಗೆ ಬಂದು ನಾಳೆ ಅಂದರೆ ಜೂನ್ 25ರಂದು 50 ವರ್ಷಗಳನ್ನು ಪೂರೈಸುತ್ತಿದೆ. ಇದು ಭಾರತೀಯ ಪ್ರಜಾಪ್ರಭುತ್ವದ ಮೇಲೆ ಕಪ್ಪು ಚುಕ್ಕೆಯನ್ನು ಪ್ರತಿನಿಧಿಸುತ್ತಿದೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಮೂಲಕ ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಮತ್ತು ದೇಶವನ್ನು ಜೈಲಿನಂತೆ ಪರಿವರ್ತಿಸಿದ ಆ ದಿನಗಳನ್ನು ಭಾರತದ ಹೊಸ ಪೀಳಿಗೆ ಎಂದಿಗೂ ಮರೆಯುವುದಿಲ್ಲ. ಇಂತಹ ಘಟನೆ ಮುಂದೆಂದೂ ಸಂಭವಿಸದಂತೆ ಭಾರತದ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ರಕ್ಷಿಸುವ ಸಂಕಲ್ಪವನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ದೇಶದ ನಾಗರಿಕರಿಗೆ ಸಲಹೆ ನೀಡಿದರು. "ನಾವು ರೋಮಾಂಚಕ ಪ್ರಜಾಪ್ರಭುತ್ವದ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ, ಭಾರತದ ಸಂವಿಧಾನದ ಪ್ರಕಾರ, ಸಾಮಾನ್ಯ ಜನರ ಕನಸುಗಳನ್ನು ಈಡೇರಿಸುತ್ತೇವೆ" ಎಂದು ಪ್ರಧಾನಿ ಹೇಳಿದರು.

ಜನರು 3ನೇ ಅವಧಿಗೆ ಸರ್ಕಾರವನ್ನು ಆಯ್ಕೆ ಮಾಡಿರುವುದರಿಂದ ಸರ್ಕಾರದ ಜವಾಬ್ದಾರಿ 3 ಪಟ್ಟು ಹೆಚ್ಚಾಗಿದೆ. ಸರ್ಕಾರವು ಮೊದಲಿಗಿಂತ 3 ಪಟ್ಟು ಹೆಚ್ಚು ಶ್ರಮಿಸುತ್ತದೆ, 3 ಪಟ್ಟು ಹೆಚ್ಚಿನ ಫಲಿತಾಂಶ ತರುತ್ತದೆ ಎಂದು ಅವರು ನಾಗರಿಕರಿಗೆ ಭರವಸೆ ನೀಡಿದರು.

ಹೊಸದಾಗಿ ಚುನಾಯಿತರಾದ ಸಂಸತ್ ಸದಸ್ಯರಿಂದ ದೇಶದ ನಿರೀಕ್ಷೆಗಳು ಹೆಚ್ಚಿವೆ. ಎಲ್ಲಾ ಸಂಸದರು ಈ ಅವಕಾಶವನ್ನು ಸಾರ್ವಜನಿಕ ಕಲ್ಯಾಣ ಮತ್ತು ಸೇವೆಗಾಗಿ ಬಳಸಿಕೊಳ್ಳುವಂತೆ, ಸಾರ್ವಜನಿಕ ಹಿತಾಸಕ್ತಿಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದರು. ಪ್ರತಿಪಕ್ಷಗಳ ಸಕ್ರಿಯ ಪಾತ್ರವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಘನತೆ ಕಾಪಾಡಿಕೊಂಡು ತಮ್ಮ ಪಾತ್ರವನ್ನು ಪೂರ್ಣವಾಗಿ ನಿರ್ವಹಿಸಬೇಕೆಂದು ದೇಶದ ಜನರು ನಿರೀಕ್ಷಿಸುತ್ತಾರೆ. "ಪ್ರತಿಪಕ್ಷಗಳು ಅದನ್ನು ಪೂರೈಸುತ್ತವೆ ಎಂದು ನಾನು ಭಾವಿಸುತ್ತೇನೆ". ಜನರು ಘೋಷಣೆಗಳ ಬದಲು ಕ್ರಿಯೆ ಅಥವಾ ವಸ್ತುವನ್ನು ಬಯಸುತ್ತಾರೆ. ಸಂಸದರು ಸಾಮಾನ್ಯ ನಾಗರಿಕರ ಆ ನಿರೀಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾರೆ ಎಂಬ ಭರವಸೆ ತಮಗಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಮೂಹಿಕವಾಗಿ ಪೂರೈಸುವ ಮತ್ತು ಜನರ ವಿಶ್ವಾಸವನ್ನು ಬಲಪಡಿಸುವ ಜವಾಬ್ದಾರಿ ಎಲ್ಲಾ ಸಂಸತ್ ಸದಸ್ಯರ ಮೇಲಿದೆ. ಬಡತನದಿಂದ ಹೊರಬರುವ 25 ಕೋಟಿ ನಾಗರಿಕರು ಭಾರತ ಯಶಸ್ವಿಯಾಗಬಹುದು ಮತ್ತು ಬಡತನವನ್ನು ಶೀಘ್ರವಾಗಿ ತೊಡೆದುಹಾಕಬಹುದು ಎಂಬ ಹೊಸ ನಂಬಿಕೆ ಸೃಷ್ಟಿಸುತ್ತಾರೆ. “ನಮ್ಮ ದೇಶದ ಜನರು, 140 ಕೋಟಿ ನಾಗರಿಕರು, ಕಷ್ಟಪಟ್ಟು ಕೆಲಸ ಮಾಡಲು ಹಿಂಜರಿಯುವುದಿಲ್ಲ. ನಾವು ಅವರಿಗೆ ಗರಿಷ್ಠ ಅವಕಾಶಗಳನ್ನು ಒದಗಿಸಬೇಕು”. ಈ ಸದನವು ನಿರ್ಣಯಗಳ ಸದನವಾಗಲಿದೆ. 18ನೇ ಲೋಕಸಭೆಯು ಸಾಮಾನ್ಯ ನಾಗರಿಕರ ಕನಸುಗಳನ್ನು ನನಸಾಗಿಸುತ್ತದೆ. ಸಂಸತ್ ಸದಸ್ಯರನ್ನು ಅಭಿನಂದಿಸಿ ತಮ್ಮ ಹೊಸ ಜವಾಬ್ದಾರಿಯನ್ನು ಅತ್ಯಂತ ಸಮರ್ಪಣಾ ಭಾವದಿಂದ ಪೂರೈಸುವಂತೆ ಒತ್ತಾಯಿಸಿದ ಪ್ರಧಾನಿ ಅವರು, ತಮ್ಮ ಮಾತು ಮುಕ್ತಾಯಗೊಳಿಸಿದರು.

 

 

*****



(Release ID: 2028402) Visitor Counter : 21