ಪ್ರಧಾನ ಮಂತ್ರಿಯವರ ಕಛೇರಿ

ತಮಿಳುನಾಡಿನ ತೂತುಕುಡಿಯಲ್ಲಿ ರೂ. 17,300 ಕೋಟಿಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು


ವಿ.ಒ.ಚಿದಂಬರನಾರ್ ಬಂದರಿನಲ್ಲಿ ಔಟರ್ ಹಾರ್ಬರ್ ಕಂಟೈನರ್ ಟರ್ಮಿನಲ್ ಗೆ ಪ್ರಧಾನಮಂತ್ರಿಯವರು  ಅಡಿಗಲ್ಲು ಹಾಕಿದರು

10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 75 ಲೈಟ್ ಹೌಸ್ ಗಳಲ್ಲಿ ನೂತನ ಪ್ರವಾಸಿ ಸೌಲಭ್ಯಗಳನ್ನು ಪ್ರಧಾನಮಂತ್ರಿಯವರು  ರಾಷ್ಟ್ರಕ್ಕೆ ಸಮರ್ಪಿಸಿದರು

ಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಇಂಧನ ಕೋಶದ ಒಳನಾಡಿನ ಜಲಮಾರ್ಗ ನೌಕೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು

ವಿವಿಧ ರೈಲು ಮತ್ತು ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿಯವರು  ರಾಷ್ಟ್ರಕ್ಕೆ ಸಮರ್ಪಿಸಿದರು

"ತೂತುಕುಡಿಯಲ್ಲಿ ತಮಿಳುನಾಡು ತನ್ನ ಪ್ರಗತಿಯ ಹೊಸ ಅಧ್ಯಾಯ ಬರೆಯುತ್ತಿದೆ"

"ಇಂದು, ದೇಶವು 'ಸಂಪೂರ್ಣ  ಸರ್ಕಾರದ' ವಿಧಾನದೊಂದಿಗೆ ಕೆಲಸ ಮಾಡುತ್ತಿದೆ"

"ಸಂಪರ್ಕವನ್ನು ಸುಧಾರಿಸಲು ಕೇಂದ್ರ ಸರ್ಕಾರದ ಪ್ರಯತ್ನಗಳು ಜನರ ಜೀವನ ಸೌಕರ್ಯವನ್ನು ಹೆಚ್ಚಿಸುತ್ತಿವೆ"

"ಸಾಗರ ವಲಯದ ಅಭಿವೃದ್ಧಿ ಎಂದರೆ ತಮಿಳುನಾಡಿನಂತಹ ರಾಜ್ಯದ ಅಭಿವೃದ್ಧಿ"

"ಏಕಕಾಲದಲ್ಲಿ 75 ಸ್ಥಳಗಳಲ್ಲಿ ಅಭಿವೃದ್ಧಿ, ಇದು ನವ ಭಾರತ"

Posted On: 28 FEB 2024 11:20AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ತೂತುಕುಡಿಯಲ್ಲಿ ರೂ. 17,300 ಕೋಟಿಗೂ ಹೆಚ್ಚಿನ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಧಾನಮಂತ್ರಿಯವರು ವಿ.ಒ. ಚಿದಂಬರನಾರ್ ಬಂದರಿನಲ್ಲಿ ಔಟರ್ ಹಾರ್ಬರ್ ಕಂಟೈನರ್ ಟರ್ಮಿನಲ್ ಗೆ ಶಂಕುಸ್ಥಾಪನೆ ಮಾಡಿದರು. ಹರಿತ್ ನೌಕಾ ಉಪಕ್ರಮದ ಅಡಿಯಲ್ಲಿ ಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಇಂಧನ ಕೋಶ ಒಳನಾಡಿನ ಜಲಮಾರ್ಗ ನೌಕೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು.  10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ಲೈಟ್ ಹೌಸ್ ಗಳಲ್ಲಿ ಪ್ರವಾಸಿ ಸೌಲಭ್ಯಗಳನ್ನು ಸಮರ್ಪಿಸಿದರು. ವಂಚಿ ಮಣಿಯಾಚ್ಚಿ - ತಿರುನಲ್ವೇಲಿ ವಿಭಾಗ ಮತ್ತು ಮೆಲಪ್ಪಾಲಯಂ - ಅರಲ್ವಾಯ್ಮೊಳಿ ವಿಭಾಗವನ್ನು ಒಳಗೊಂಡಂತೆ ವಂಚಿ ಮಣಿಯಾಚ್ಚಿ - ನಾಗರ್ಕೋಯಿಲ್ ರೈಲು ಮಾರ್ಗವನ್ನು ದ್ವಿಗುಣಗೊಳಿಸುವ ರೈಲು ಯೋಜನೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ತಮಿಳುನಾಡಿನಲ್ಲಿ ಒಟ್ಟು 4,586 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನಾಲ್ಕು ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ಅಭಿವೃದ್ಧಿ ಹೊಂದಿದ ಭಾರತದ ಮಾರ್ಗಸೂಚಿಯತ್ತ ಬಹುವಿಧದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆಯಾಗುತ್ತಿದ್ದಂತೆ ತೂತುಕುಡಿಯಲ್ಲಿ ತಮಿಳುನಾಡು ಪ್ರಗತಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ” ಎಂದು ಹೇಳಿದರು. “ಇಂದಿನ ಅಭಿವೃದ್ಧಿ ಯೋಜನೆಗಳಲ್ಲಿ ಒಂದು ಭಾರತ ಶ್ರೇಷ್ಠ ಭಾರತ (ಏಕ್ ಭಾರತ್ ಶ್ರೇಷ್ಠ ಭಾರತ್) ಎಂಬ ಮನೋಭಾವವನ್ನು ಕಣ್ತುಂಬಿಕೊಳ್ಳಬಹುದು” ಎಂದರು. “ಯೋಜನೆಗಳು ತೂತುಕುಡಿಯಲ್ಲಿದ್ದರೂ, ಇದು ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ವಿಕಸಿತ ಭಾರತದ ಪ್ರಯಾಣ ಮತ್ತು ಅದರಲ್ಲಿ ತಮಿಳುನಾಡಿನ ಪಾತ್ರವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಅವರು 2 ವರ್ಷಗಳ ಹಿಂದೆ ಚಿದಂಬರನಾರ್ ಬಂದರಿನ ಸಾಮರ್ಥ್ಯದ ವಿಸ್ತರಣೆಗಾಗಿ ಅನೇಕ ಯೋಜನೆಗಳಿಗೆ ಚಾಲನೆ ನೀಡಿದಾಗ ಮತ್ತು ಅದನ್ನು ಹಡಗು ಸಾಗಣೆಯ ಪ್ರಮುಖ ಕೇಂದ್ರವನ್ನಾಗಿ ಮಾಡುವ ಭರವಸೆಯನ್ನು ನೀಡಿದ್ದ ಅಂದಿನ ಅವರ ಭೇಟಿಯನ್ನು ಮಗದೊಮ್ಮೆ ನೆನಪಿಸಿಕೊಂಡರು. "ಆ ಭರವಸೆ ಇಂದು ಈಡೇರುತ್ತಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ವಿ.ಒ.ಚಿದಂಬರನಾರ್ ಬಂದರಿನಲ್ಲಿ ಬಂದರಿನ ಹೊರವಲಯದ ಕಂಟೈನರ್ ಟರ್ಮಿನಲ್ ನ ಶಂಕುಸ್ಥಾಪನೆ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, “ಈ ಯೋಜನೆಯು 7,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಹೊಂದಿರುತ್ತದೆ” ಎಂದು ತಿಳಿಸಿದರು. “ಇಂದು 900 ಕೋಟಿ ರೂಪಾಯಿಗಳ ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ ಮತ್ತು 13 ಬಂದರುಗಳಲ್ಲಿ 2500 ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗಳು ತಮಿಳುನಾಡಿಗೆ ಪ್ರಯೋಜನವನ್ನು ನೀಡುತ್ತವೆ ಮತ್ತು ರಾಜ್ಯದಲ್ಲಿ ಉದ್ಯೋಗದ ವಿವಿಧ ಮಾರ್ಗಗಳನ್ನು ಸೃಷ್ಟಿಸುತ್ತವೆ” ಎಂದು ಅವರು ಹೇಳಿದರು.

“ಇಂದಿನ ಕೇಂದ್ರ ಸರ್ಕಾರವು ಜನರ ಬೇಡಿಕೆಗಳಂತೆ ಇಂದಿನ – ಮುಂದಿನ ಅಗತ್ಯಗಳ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಿವೆ, ಹಿಂದಿನ ಸರ್ಕಾರಗಳು ಎಂದಿಗೂ ಅವುಗಳ ಬಗ್ಗೆ ಗಮನ ಹರಿಸಿಲ್ಲ” ಎಂದು ಪ್ರಧಾನಮಂತ್ರಿ ನೆನಪಿಸಿದರು. "ನಾನು ತಮಿಳುನಾಡಿಗೆ ಭೂಮಿ ಸೇವೆಗಾಗಿ ಮತ್ತು ಅದರ ಭವಿಷ್ಯವನ್ನು ಬದಲಾಯಿಸಲು ಬಂದಿದ್ದೇನೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.

ಹಸಿರು ನೌಖೆ (ಹರಿತ್ ನೌಕಾ) ಉಪಕ್ರಮದ ಅಡಿಯಲ್ಲಿ ಭಾರತದ ಮೊದಲ ಹೈಡ್ರೋಜನ್ ಇಂಧನ ಕೋಶದ ಒಳನಾಡಿನ ಜಲಮಾರ್ಗದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, “ಇದು ತಮಿಳುನಾಡಿನ ಜನರು ಕಾಶಿಗಾಗಿ ನೀಡಿದ ಕೊಡುಗೆಯಾಗಿದೆ.  ಕಾಶಿ ತಮಿಳು ಸಂಗಮದಲ್ಲಿ ತಮಿಳುನಾಡಿನ ಜನರ ಉತ್ಸಾಹ, ವಾತ್ಸಲ್ಯವನ್ನು ಕಣ್ಣಾರೆ ಕಂಡಿದ್ದೇನೆ.” ಎಂದು ಹೇಳಿದರು. ವಿ.ಒ.ಚಿದಂಬರನಾರ್ ಬಂದರನ್ನು ದೇಶದ ಮೊದಲ ಗ್ರೀನ್ ಹೈಡ್ರೋಜನ್ ಹಬ್ ಬಂದರು ಮಾಡುವ ಗುರಿಯನ್ನು ಹೊಂದಿರುವ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಈ ಯೋಜನೆಗಳು ಖನಿಜ ದ್ರವ ಬೇರ್ಪಡಿಸುವ ( ನಿರ್ಲವಣೀಕರಣ ) ಘಟಕ, ಜಲಜನಕ ಉತ್ಪಾದನೆ ಮತ್ತು ಬಂಕರ್ ಸೌಲಭ್ಯವನ್ನು ಒಳಗೊಂಡಿವೆ. "ಜಗತ್ತು ಇಂದು ಅನ್ವೇಷಿಸುತ್ತಿರುವ ಪರ್ಯಾಯಗಳಿಗೆ ಸಂಬಂಧಿಸಿದಂತೆ ತಮಿಳುನಾಡು ಬಹಳ ದೂರ ಸಾಗಲಿದೆ" ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ಇಂದಿನ ರೈಲು ಮತ್ತು ರಸ್ತೆ ಅಭಿವೃದ್ಧಿ ಯೋಜನೆಗಳನ್ನು ವಿವರಿಸಿದರು ಮತ್ತು “ರೈಲು ಮಾರ್ಗಗಳ ವಿದ್ಯುದೀಕರಣ ಮತ್ತು ದ್ವಿಗುಣಗೊಳಿಸುವಿಕೆಯು ದಕ್ಷಿಣ ತಮಿಳುನಾಡು ಮತ್ತು ಕೇರಳ ನಡುವಿನ ಸಂಪರ್ಕವನ್ನು ಇನ್ನಷ್ಟು ಸುಧಾರಿಸುತ್ತದೆ ಮತ್ತು ತಿರುನಲ್ವೇಲಿ ಮತ್ತು ನಾಗರ್ಕೋಯಿಲ್ ವಲಯಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ” ಎಂದು ಹೇಳಿದರು. ತಮಿಳುನಾಡಿನಲ್ಲಿ 4,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರಸ್ತೆಗಳ ಆಧುನೀಕರಣದ ನಾಲ್ಕು ಪ್ರಮುಖ ಯೋಜನೆಗಳನ್ನು ಅವರು ಇಂದು ಚಾಲನೆಗೊಳಿಸಿದರು. “ಇದು ಸಂಪರ್ಕಕ್ಕೆ ಉತ್ತೇಜನ ನೀಡುತ್ತದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ರಾಜ್ಯದಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ನವಭಾರತದ ಸಂಪೂರ್ಣ-ಸರ್ಕಾರದ ವಿಧಾನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, “ತಮಿಳುನಾಡಿನಲ್ಲಿ ಉತ್ತಮ ಸಂಪರ್ಕ ಮತ್ತು ಉತ್ತಮ ಅವಕಾಶಗಳನ್ನು ಸೃಷ್ಟಿಸಲು ಕೇಂದ್ರ ರಸ್ತೆ ಮಾರ್ಗಗಳು, ಹೆದ್ದಾರಿಗಳು ಮತ್ತು ಜಲಮಾರ್ಗ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ” ಎಂದು ಹೇಳಿದರು. “ಆದ್ದರಿಂದ, ರೈಲ್ವೆ, ರಸ್ತೆಗಳು ಮತ್ತು ಕಡಲ ಯೋಜನೆಗಳನ್ನು ಒಟ್ಟಿಗೆ ಪ್ರಾರಂಭಿಸಲಾಗುತ್ತಿದೆ. ಬಹು ಮಾದರಿಯ ವಿಧಾನವು ರಾಜ್ಯದ ಅಭಿವೃದ್ಧಿಗೆ ಹೊಸ ವೇಗವನ್ನು ನೀಡುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ಮನ್ ಕಿ ಬಾತ್ ನ ಸಂಚಿಕೆಯಲ್ಲಿ ದೇಶದ ಪ್ರಧಾನ ಲೈಟ್ ಹೌಸ್ ಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ತಮ್ಮ ಸಲಹೆಯನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು ಮತ್ತು 10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ 75 ಲೈಟ್ ಹೌಸ್ ಗಳಲ್ಲಿ ಪ್ರವಾಸಿ ಸೌಲಭ್ಯಗಳನ್ನು ರೂಪಿಸಿ ದೇಶಕ್ಕೆ ಸಮರ್ಪಿಸುತ್ತಿರುವ ಬಗ್ಗೆ ಪ್ರಧಾನಮಂತ್ರಿಯವರು ಹೆಮ್ಮೆ ವ್ಯಕ್ತಪಡಿಸಿದರು. 

"ಏಕಕಾಲದಲ್ಲಿ 75 ಸ್ಥಳಗಳಲ್ಲಿ ಅಭಿವೃದ್ಧಿ, ಇದು ನವ ಭಾರತ" ಎಂದು ಪ್ರಧಾನಮಂತ್ರಿ ಶ್ರೀ ನರೆಂದ್ರ ಮೋದಿಯವರು ಹೇಳಿದರು ಮತ್ತು “ಮುಂಬರುವ ದಿನಗಳಲ್ಲಿ ಈ 75 ಸ್ಥಳಗಳು ಬೃಹತ್ ಪ್ರವಾಸಿ ಕೇಂದ್ರಗಳಾಗಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಉಪಕ್ರಮಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, “ಕಳೆದ 10 ವರ್ಷಗಳಲ್ಲಿ ತಮಿಳುನಾಡಿನಲ್ಲಿ 1300 ಕಿಮೀ ಉದ್ದದ ರೈಲು ಯೋಜನೆಗಳನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದರು. “2000 ಕಿಮೀ ರೈಲ್ವೆ ವಿದ್ಯುದ್ದೀಕರಣವನ್ನು ಸಾಧಿಸಲಾಯಿತು, ಮೇಲ್ಸೇತುವೆ ಮತ್ತು ಕೆಳಸೇತುವೆಗಳ ರಚನೆ ಮತ್ತು ಅನೇಕ ರೈಲು ನಿಲ್ದಾಣಗಳ ಉನ್ನತೀಕರಣವನ್ನು ಮಾಡಲಾಯಿತು. ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸುವ 5 ವಂದೇ ಭಾರತ್ ರೈಲುಗಳು ರಾಜ್ಯದಲ್ಲಿ ಓಡುತ್ತಿವೆ” ಎಂದು ಹೇಳಿದರು. “ಭಾರತ ಸರ್ಕಾರವು ತಮಿಳುನಾಡಿನ ರಸ್ತೆ ಮೂಲಸೌಕರ್ಯದಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಸಂಪರ್ಕವನ್ನು ಸುಧಾರಿಸಲು ಕೇಂದ್ರ ಸರ್ಕಾರದ ಪ್ರಯತ್ನಗಳು ಜನಸಾಮಾನ್ಯರ ಜೀವನ ವ್ಯವಸ್ಥೆ-ಸೌಕರ್ಯವನ್ನು ಹೆಚ್ಚಿಸುತ್ತಿವೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.

ದಶಕಗಳಿಂದ ಭಾರತದ ಜಲಮಾರ್ಗಗಳು ಮತ್ತು ಸಮುದ್ರ ವಲಯದೊಂದಿಗಿನ ಮಹತ್ತರವಾದ ನಿರೀಕ್ಷೆಗಳನ್ನು ಪ್ರಧಾನಮಂತ್ರಿಯವರು ವಿವರಿಸಿದರು ಮತ್ತು “ಈ ಕ್ಷೇತ್ರಗಳು ಇಂದು ವಿಕಸಿತ ಭಾರತದ ಅಡಿಪಾಯವಾಗುತ್ತಿವೆ ಮತ್ತು ಇಡೀ ದಕ್ಷಿಣ ಭಾರತದೊಂದಿಗೆ ತಮಿಳುನಾಡು ಹಾಗೂ ಇಲ್ಲಿನ ಪ್ರಜೆಗಳು ಇದರ ದೊಡ್ಡ ಫಲಾನುಭವಿಗಳಾಗಿದ್ದಾರೆ” ಎಂದು ಹೇಳಿದರು. ಪ್ರಧಾನಮಂತ್ರಿಯವರು ತಮಿಳುನಾಡಿನ ಮೂರು ಪ್ರಮುಖ ಬಂದರುಗಳು ಮತ್ತು 12 ಕ್ಕೂ ಹೆಚ್ಚು ಸಣ್ಣ ಬಂದರುಗಳನ್ನು ಮತ್ತು ಎಲ್ಲಾ ದಕ್ಷಿಣದ ರಾಜ್ಯಗಳ ಸಾಧ್ಯತೆಗಳನ್ನು ಮಾಹಿತಿ ವಿವರವಾಗಿ ವಿವರಿಸಿದರು. ಕಳೆದ ದಶಕದಲ್ಲಿ ವಿ.ಒ.ಚಿದಂಬರನಾರ್ ಬಂದರಿನಲ್ಲಿ 35 ಪ್ರತಿಶತದಷ್ಟು ಸಂಚಾರ ದಟ್ಟಣೆಯ ಬೆಳವಣಿಗೆಯ ಬಗ್ಗೆ ತಿಳಿಸುತ್ತಾ, "ಸಾಗರ ವಲಯದ ಅಭಿವೃದ್ಧಿ ಎಂದರೆ ತಮಿಳುನಾಡಿನಂತಹ ರಾಜ್ಯದ ಅಭಿವೃದ್ಧಿ" ಎಂದು ಹೇಳಿದರು. “ಬಂದರು ಕಳೆದ ವರ್ಷ 38 ಮಿಲಿಯನ್ ಟನ್ ಗಳನ್ನು ನಿರ್ವಹಿಸಿದೆ ಮತ್ತು 11 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ” ಎಂದು ಅವರು ಹೇಳಿದರು. ಸಾಗರಮಾಲಾದಂತಹ ಯೋಜನೆಗಳ ಪಾತ್ರವನ್ನು ಮನ್ನಣೆ ನೀಡುತ್ತಾ, "ದೇಶದ ಇತರ ಪ್ರಮುಖ ಬಂದರುಗಳಲ್ಲಿ ಇದೇ ರೀತಿಯ ಫಲಿತಾಂಶಗಳನ್ನು ಕಾಣಬಹುದು" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು, 

ಭಾರತವು ಜಲಮಾರ್ಗಗಳು ಮತ್ತು ಸಮುದ್ರ ವಲಯಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸುತ್ತಾ “ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತವು 38ನೇ ಸ್ಥಾನಕ್ಕೆ ಜಿಗಿತವನ್ನು ಗಮನಿಸಿದರು ಮತ್ತು ಒಂದು ದಶಕದಲ್ಲಿ ಬಂದರು ಸಾಮರ್ಥ್ಯವು ದ್ವಿಗುಣಗೊಂಡಿದೆ. ಈ ಅವಧಿಯಲ್ಲಿ ರಾಷ್ಟ್ರೀಯ ಜಲಮಾರ್ಗಗಳಲ್ಲಿ ಎಂಟು ಪಟ್ಟು ಹೆಚ್ಚಳವಾಗಿದೆ ಮತ್ತು ಕ್ರೂಸ್ ಪ್ರಯಾಣಿಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಈ ದಾಪುಗಾಲುಗಳು ತಮಿಳುನಾಡಿಗೆ ಮತ್ತು ನಮ್ಮ ಯುವಕರಿಗೆ ಪ್ರಯೋಜನಕಾರಿಯಾಗಲಿವೆ” ಎಂದು ಹೇಳಿದರು. "ತಮಿಳುನಾಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತದೆ ಎಂದು ನನಗೆ ಮನವರಿಕೆಯಾಗಿದೆ ಮತ್ತು ರಾಷ್ಟ್ರವು ಮೂರನೇ ಬಾರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿದಾಗ ನಾನು ಹೊಸ ಉತ್ಸಾಹದಿಂದ ನಿಮ್ಮ ಸೇವೆ ಮಾಡುತ್ತೇನೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ." ಎಂದು ಹೇಳಿದರು.

ತಮ್ಮ ಪ್ರಸ್ತುತ ಭೇಟಿಯಲ್ಲಿ ತಮಿಳುನಾಡಿನ ವಿವಿಧ ಪ್ರದೇಶಗಳ ಜನರ ಪ್ರೀತಿ, ವಾತ್ಸಲ್ಯ, ಉತ್ಸಾಹ ಮತ್ತು ಆಶೀರ್ವಾದದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸಿದರು ಮತ್ತು ರಾಜ್ಯದ ಅಭಿವೃದ್ಧಿಯೊಂದಿಗೆ ಜನರ ಪ್ರತಿಯೊಂದು ಪ್ರೀತಿಯನ್ನು ಹೊಂದಿಸುವುದಾಗಿ ಹೇಳಿದರು.

ಸಮಾರೋಪದಲ್ಲಿ, ಪ್ರತಿಯೊಬ್ಬರೂ ತಮ್ಮ ಫೋನ್ ನಲ್ಲಿ ಬೆಳಕು/ದೀಪ(ಲೈಟ್)ಗಳನ್ನು ಸ್ವಿಚ್ ಆನ್ ಮಾಡಲು ಮತ್ತು ತಮಿಳುನಾಡು ಮತ್ತು ಭಾರತ ಸರ್ಕಾರವು ಅಭಿವೃದ್ಧಿಯ ಹಬ್ಬವನ್ನು ಆಚರಿಸುತ್ತಿದೆ ಎಂದು ಸೂಚಿಸಲು ಪ್ರಧಾನಮಂತ್ರಿಯವರು ಕೇಳಿಕೊಂಡರು.

ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್. ಎನ್. ರವಿ, ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವ ಡಾ ಎಲ್ ಮುರುಗನ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ವಿ.ಒ.ಚಿದಂಬರನಾರ್ ಬಂದರಿನಲ್ಲಿ ಔಟರ್ ಹಾರ್ಬರ್ ಕಂಟೈನರ್ ಟರ್ಮಿನಲ್ ಗೆ ಶಂಕುಸ್ಥಾಪನೆ ಮಾಡಿದರು. ಈ ಕಂಟೈನರ್ ಟರ್ಮಿನಲ್ ವಿ.ಒ.ಚಿದಂಬರನಾರ್ ಬಂದರನ್ನು ಪೂರ್ವ ಕರಾವಳಿಯ ಟ್ರಾನ್ಸ್ ಶಿಪ್ಮೆಂಟ್ ಹಬ್ ಆಗಿ ಪರಿವರ್ತಿಸುವತ್ತ ಒಂದು ಹೆಜ್ಜೆಯಾಗಿದೆ. ಈ ಯೋಜನೆಯು ಭಾರತದ ದೀರ್ಘ ಕರಾವಳಿ ಮತ್ತು ಅನುಕೂಲಕರ ಭೌಗೋಳಿಕ ಸ್ಥಳವನ್ನು ಹತೋಟಿಗೆ ತರಲು ಮತ್ತು ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಪ್ರಮುಖ ಮೂಲಸೌಕರ್ಯ ಯೋಜನೆಯು ಈ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಹ ಸೃಷ್ಟಿಸುತ್ತದೆ. ವಿ.ಒ.ಚಿದಂಬರನಾರ್ ಬಂದರನ್ನು ದೇಶದ ಮೊದಲ ಗ್ರೀನ್ ಹೈಡ್ರೋಜನ್ ಹಬ್ ಬಂದರು ಮಾಡುವ ಗುರಿಯನ್ನು ಹೊಂದಿರುವ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಈ ಯೋಜನೆಗಳು ದ್ರವ ಖನಿಜ ಬೇರ್ಪಡಿಸುವ ಘಟಕ, ಹೈಡ್ರೋಜನ್ ಉತ್ಪಾದನೆ, ಬಂಕರ್ ಸೌಲಭ್ಯ ಇತ್ಯಾದಿಗಳನ್ನು ಒಳಗೊಂಡಿವೆ.

ಪ್ರಧಾನಮಂತ್ರಿಯವರು ಹಸಿರು ನೌಕಾ ಉಪಕ್ರಮದ ಅಡಿಯಲ್ಲಿ ಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಇಂಧನ ಕೋಶ ಒಳನಾಡಿನ ಜಲಮಾರ್ಗ ನೌಕೆಯನ್ನು ಪ್ರಾರಂಭಿಸಿದರು. ಈ ಹಡಗನ್ನು ಕೊಚ್ಚಿನ್ ಶಿಪ್ಯಾರ್ಡ್ ತಯಾರಿಸಿದೆ ಮತ್ತು ಶುದ್ಧ ಇಂಧನ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಮತ್ತು ರಾಷ್ಟ್ರದ ನಿವ್ವಳ-ಶೂನ್ಯ ಬದ್ಧತೆಗಳೊಂದಿಗೆ ಹೊಂದಾಣಿಕೆ ಮಾಡಲು ಪ್ರವರ್ತಕ ಹೆಜ್ಜೆಯನ್ನು ಒತ್ತಿಹೇಳುತ್ತದೆ. ಪ್ರಧಾನಮಂತ್ರಿಯವರು 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಾದ್ಯಂತ 75 ಲೈಟ್ ಹೌಸ್ ಗಳಲ್ಲಿ ಪ್ರವಾಸಿ ಸೌಲಭ್ಯಗಳನ್ನು ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ವಂಚಿ ಮಣಿಯಾಚ್ಚಿ-ತಿರುನೆಲ್ವೇಲಿ ವಿಭಾಗ ಮತ್ತು ಮೆಲಪ್ಪಾಲಯಂ-ಅರಲ್ವಾಯ್ಮೊಳಿ ವಿಭಾಗ ಸೇರಿದಂತೆ ವಂಚಿ ಮಣಿಯಾಚ್ಚಿ - ನಾಗರ್ಕೋಯಿಲ್ ರೈಲು ಮಾರ್ಗವನ್ನು ದ್ವಿಗುಣಗೊಳಿಸುವ ರೈಲು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಸುಮಾರು 1,477 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ದ್ವಿಗುಣ ಯೋಜನೆಯು ಕನ್ಯಾಕುಮಾರಿ, ನಾಗರ್ ಕೋಯಿಲ್ ಮತ್ತು ತಿರುನಲ್ವೇಲಿಯಿಂದ ಚೆನ್ನೈ ಕಡೆಗೆ ಹೋಗುವ ರೈಲುಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಮಿಳುನಾಡಿನಲ್ಲಿ ಒಟ್ಟು 4,586 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನಾಲ್ಕು ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಿದರು. ಈ ಯೋಜನೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ-844ರ ಜಿಟ್ಟಂಡಹಳ್ಳಿ-ಧರ್ಮಪುರಿ ವಿಭಾಗದ ಚತುಷ್ಪಥ, ರಾಷ್ಟ್ರೀಯ ಹೆದ್ದಾರಿ-81ರ ಮೀನ್ಸುರುಟ್ಟಿ-ಚಿದಂಬರಂ ವಿಭಾಗದ ಸುಸಜ್ಜಿತ ಭುಜಗಳೊಂದಿಗೆ ದ್ವಿಪಥ, ರಾಷ್ಟ್ರೀಯ ಹೆದ್ದಾರಿ-83 ರ ಒಡ್ಡಂಚತ್ರಂ-ಮಡತುಕುಲಂ ವಿಭಾಗದ ನಾಲ್ಕು-ಪಥಗಳು ಮತ್ತು ರಾಷ್ಟ್ರೀಯ ಹೆದ್ದಾರಿ-83 ರ ನಾಗಪಟ್ಟಿಣಂ-ತಂಜಾವೂರು ವಿಭಾಗದ ಸುಸಜ್ಜಿತ  ದ್ವಿಪಥ ಹೊಂದಿರುತ್ತವೆ. ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸಲು, ಪ್ರಯಾಣದ ಸಮಯವನ್ನು ಕಡಿಮೆ ಮಾಡಲು, ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಈ ಪ್ರದೇಶದಲ್ಲಿ ತೀರ್ಥಯಾತ್ರೆಗೆ ಭೇಟಿ ನೀಡಲು ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿವೆ.

***



(Release ID: 2010036) Visitor Counter : 46