ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ 19,100 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ


ಸಮರ್ಪಿತ ಸರಕು ಸಾಗಣೆ ಕಾರಿಡಾರ್‌ನಲ್ಲಿ ಹೊಸ ಖುರ್ಜಾ - ರೇವಾರಿ ನಡುವೆ 173 ಕಿಮೀ ಉದ್ದದ ಡಬಲ್ ಲೈನ್ ವಿದ್ಯುದ್ದೀಕರಿಸಿದ ರೈಲು ವಿಭಾಗದ  ಲೋಕಾರ್ಪಣೆ

ಮಥುರಾ - ಪಲ್ವಾಲ್ ವಿಭಾಗ ಮತ್ತು ಚಿಪಿಯಾನ ಬುಜುರ್ಗ್ - ದಾದ್ರಿ ವಿಭಾಗ  ಸಂಪರ್ಕಿಸುವ 4ನೇ ರೈಲು ಮಾರ್ಗವನ್ನು ಸಮರ್ಪಣೆ

ಬಹು ರಸ್ತೆ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ

ಇಂಡಿಯನ್ ಆಯಿಲ್‌ನ ತುಂಡ್ಲಾ-ಗವಾರಿಯಾ ಪೈಪ್‌ಲೈನ್ ಉದ್ಘಾಟನೆ

'ಗ್ರೇಟರ್ ನೋಯ್ಡಾದಲ್ಲಿ ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ಟೌನ್‌ಶಿಪ್' (ಐಐಟಿಜಿಎನ್) ಸಮರ್ಪಣೆ

ನವೀಕೃತ ಮಥುರಾ ಒಳಚರಂಡಿ ಯೋಜನೆ ಉದ್ಘಾಟನೆ

"ಕಲ್ಯಾಣ್ ಸಿಂಗ್ ತಮ್ಮ ಇಡೀ ಜೀವನವನ್ನು ರಾಮ ಮತ್ತು ರಾಷ್ಟ್ರದ ಎರಡು ಕಾರಣಗಳಿಗಾಗಿ ಅರ್ಪಿಸಿದ್ದಾರೆ"

ಉತ್ತರ ಪ್ರದೇಶದ ತ್ವರಿತ ಅಭಿವೃದ್ಧಿಯಿಲ್ಲದೆ ಅಭಿವೃದ್ಧಿ ಹೊಂದಿದ ಭಾರತ  ನಿರ್ಮಿಸುವುದು ಅಸಾಧ್ಯ

"ರೈತರು ಮತ್ತು ಬಡವರ ಜೀವನವನ್ನು ಸದೃಢ ಮಾಡುವುದು ಡಬಲ್ ಎಂಜಿನ್ ಸರ್ಕಾರದ ಆದ್ಯತೆಯಾಗಿದೆ"

“ಸರ್ಕಾರದ ಯೋಜನೆಗಳ ಲಾಭ ಪ್ರತಿಯೊಬ್ಬ ನಾಗರಿಕರಿಗೂ ಸಿಗುತ್ತದೆ ಎಂಬುದೇ ಮೋದಿ ಅವರ ಭರವಸೆ. ಇಂದು ರಾಷ್ಟ್ರವು ಮೋದಿ ಅವರ ಗ್ಯಾರಂಟಿಯನ್ನು ಯಾವುದೇ ಗ್ಯಾರಂಟಿ ಪೂರೈಸುವ ನಿಜವಾದ ಭರವಸೆ ಎಂದು ಪರಿಗಣಿಸುತ್ತಿದೆ

Posted On: 25 JAN 2024 3:29PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿಂದು 19,100 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಈ ಎಲ್ಲಾ ಯೋಜನೆಗಳು ರೈಲು, ರಸ್ತೆ, ತೈಲ ಮತ್ತು ಅನಿಲ, ನಗರಾಭಿವೃದ್ಧಿ, ವಸತಿ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿವೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಬುಲಂದ್‌ಶಹರ್‌ನ ಜನರು, ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ತಾಯಂದಿರು ಮತ್ತು ಸಹೋದರಿಯರು ತೋರಿದ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಜನವರಿ 22ರಂದು ಭಗವಾನ್ ಶ್ರೀರಾಮನ ದರ್ಶನಕ್ಕೆ ಆಗಮಿಸಿದ್ದ ಅಪಾರ ಸಂಖ್ಯೆಯ ಜನರು ಮತ್ತು ಇವತ್ತು ಉತ್ತರ ಪ್ರದೇಶದ ಜನರು ಇಲ್ಲಿಗೆ ಆಗಮಿಸಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ರೈಲ್ವೆ, ಹೆದ್ದಾರಿ, ಪೆಟ್ರೋಲಿಯಂ ಪೈಪ್‌ಲೈನ್, ನೀರು, ಒಳಚರಂಡಿ, ವೈದ್ಯಕೀಯ ಕಾಲೇಜು ಮತ್ತು ಕೈಗಾರಿಕಾ ಟೌನ್‌ಶಿಪ್ ಕ್ಷೇತ್ರಗಳಲ್ಲಿ 19,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗಾಗಿ ಬುಲಂದ್‌ಶಹರ್ ಮತ್ತು ಇಡೀ ಪಶ್ಚಿಮ ಉತ್ತರ ಪ್ರದೇಶದ ಜನರನ್ನು ಅಭಿನಂದಿಸುತ್ತೇನೆ. ಯಮುನಾ ಮತ್ತು ರಾಮಗಂಗಾ ನದಿಗಳ ಸ್ವಚ್ಛತಾ ಅಭಿಯಾನಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಇಂದು ಉದ್ಘಾಟನೆ ನೆರವೇರಿಸಲಾಗುತ್ತಿದೆ ಎಂದರು.

ಶ್ರೀರಾಮ ಮತ್ತು ರಾಷ್ಟ್ರ(ರಾಮನ ಕೆಲಸ ಮತ್ತು ರಾಷ್ಟ್ರದ ಕೆಲಸ) ಈ ಎರಡು ಕಾರಣ ಅಥವಾ ಕಾರ್ಯಗಳಿಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಕಲ್ಯಾಣ್ ಸಿಂಗ್ ಅವರಂತಹ ಪುತ್ರನನ್ನು ಈ ಪ್ರದೇಶವು ದೇಶಕ್ಕೆ ನೀಡಿದೆ. ಅಯೋಧ್ಯಾ ಧಾಮದಲ್ಲಿ ಶ್ರೀ ಕಲ್ಯಾಣ್ ಸಿಂಗ್ ಮತ್ತು ಅವರಂತಹ ಜನರ ಕನಸನ್ನು ದೇಶವು ಈಡೇರಿಸಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಿ, "ಸದೃಢ ರಾಷ್ಟ್ರ ಮತ್ತು ನಿಜವಾದ ಸಾಮಾಜಿಕ ನ್ಯಾಯದ ಅವರ ಕನಸನ್ನು ನನಸಾಗಿಸಲು ನಾವು ಮತ್ತಷ್ಟು ವೇಗ ನೀಡಬೇಕಾಗಿದೆ" ಎಂದರು.

 

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಸಮಾರಂಭ ಯಶಸ್ವಿಯಾಗಿ ಪೂರ್ಣಗೊಂಡಿತು, ಹಾಗೆಯೇ, ‘ರಾಷ್ಟ್ರ ಪ್ರತಿಷ್ಠೆ’ಗೆ ಆದ್ಯತೆ ನೀಡಿ ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದು ಪ್ರಧಾನಿ ಒತ್ತು ನೀಡಿದರು. 2047ರ ವೇಳೆಗೆ ಭಾರತವನ್ನು ವಿಕ್ಷಿತ್ ಭಾರತವನ್ನಾಗಿ ಪರಿವರ್ತಿಸುವ ಸರ್ಕಾರದ ಸಂಕಲ್ಪಕ್ಕೆ ಒತ್ತು ನೀಡಿದ ಶ್ರೀ ಮೋದಿ ಅವರು, “ದೇವನಿಂದ ದೇಶ ಮತ್ತು ರಾಮನಿಂದ ರಾಷ್ಟ್ರ ನಿರ್ಮಾಣದ ಸಬ್ಕಾ ಪ್ರಯಾಸ್ ನ ಸನ್ಮಾರ್ಗಕ್ಕೆ ಕೊಂಡೊಯ್ಯಬೇಕು.. "ವಿಕ್ಷಿತ್ ಭಾರತ್ ನಿರ್ಮಾಣಕ್ಕೆ ಉತ್ತರ ಪ್ರದೇಶದ ವೇಗದ ಅಭಿವೃದ್ಧಿ ಅತ್ಯಗತ್ಯ". ಕೃಷಿ, ವಿಜ್ಞಾನ, ಶಿಕ್ಷಣ, ಕೈಗಾರಿಕೆ ಮತ್ತು ಉದ್ಯಮ ಇತರ ಕ್ಷೇತ್ರಗಳನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ. "ಇಂದಿನ ಸುಸಂದರ್ಭವು ಈ ದಿಕ್ಕಿನಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ" ಎಂದರು.

ಸ್ವಾತಂತ್ರ್ಯೋತ್ತರ ಭಾರತದ ಅಭಿವೃದ್ಧಿಯ ಪ್ರಾದೇಶಿಕ ಅಸಮತೋಲನ  ಉಲ್ಲೇಖಿಸಿದ ಪ್ರಧಾನಿ, ಗರಿಷ್ಠ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವನ್ನು ನಿರ್ಲಕ್ಷಿಸಲಾಗಿದೆ. ಇದು ‘ಆಡಳಿತಗಾರ’ರ ಮನಸ್ಥಿತಿಯನ್ನು ತೋರುತ್ತಿದೆ. ಹಿಂದೆ ಅಧಿಕಾರಕ್ಕಾಗಿ ಸಮಾಜ ಒಡೆಯುವುದನ್ನು ಪ್ರಚೋದಿಸಿದರು. ಇದರಿಂದ ರಾಜ್ಯ ಮತ್ತು ದೇಶಕ್ಕೆ ಭಾರಿ ನಷ್ಟ ಉಂಟುಮಾಡಿದರು. "ದೇಶದ ಅತಿದೊಡ್ಡ ರಾಜ್ಯ ದುರ್ಬಲವಾಗಿದ್ದರೆ, ರಾಷ್ಟ್ರವು ಹೇಗೆ ಬಲಿಷ್ಠವಾಗಲು ಸಾಧ್ಯ" ಎಂದು ಪ್ರಧಾನಿ ಪ್ರಶ್ನಿಸಿದರು.

2017ರಲ್ಲಿ ಉತ್ತರ ಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದಾಗ, ಹಳೆಯ ಸವಾಲುಗಳನ್ನು ಎದುರಿಸಲು ರಾಜ್ಯವು ಹೊಸ ಮಾರ್ಗಗಳನ್ನು ಕಂಡುಕೊಂಡಿತು. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಿತು. ಇಂದಿನ ಸಂದರ್ಭವು ಸರ್ಕಾರದ ಬದ್ಧತೆಗೆ ಪುರಾವೆಯಾಗಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದ ಇತ್ತೀಚಿನ ಬೆಳವಣಿಗೆಗಳ ಉದಾಹರಣೆ ನೀಡಿದ ಪ್ರಧಾನಿ, ಭಾರತದ 2 ರಕ್ಷಣಾ ಕಾರಿಡಾರ್‌ಗಳಲ್ಲಿ ಒಂದರ ಅಭಿವೃದ್ಧಿ ಮತ್ತು ಹಲವಾರು ಹೊಸ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವನ್ನು ಪ್ರಧಾನಿ ಪ್ರಸ್ತಾಪಿಸಿದರು. ಆಧುನಿಕ ಎಕ್ಸ್‌ಪ್ರೆಸ್‌ವೇಗಳ ಮೂಲಕ ಉತ್ತರ ಪ್ರದೇಶದ ಎಲ್ಲಾ ಭಾಗಗಳಿಗೆ ಸಂಪರ್ಕ ಹೆಚ್ಚಿಸುವುದು, ಮೊದಲ ನಮೋ ಭಾರತ್ ರೈಲು ಯೋಜನೆಯ ಪ್ರಾರಂಭ, ಹಲವಾರು ನಗರಗಳಲ್ಲಿ ಮೆಟ್ರೊ ಸಂಪರ್ಕ , ರಾಜ್ಯದ ಪೂರ್ವ ಮತ್ತು ಪಶ್ಚಿಮ ಭಾಗದ ಸಮರ್ಪಿತ ಸರಕು ಸಾಗಣೆ ಕಾರಿಡಾರ್‌ಗಳ ಕೇಂದ್ರವಾಗುವುದಕ್ಕೆ ಸರ್ಕಾರ ಒತ್ತು ನೀಡಿದೆ ಎಂದರು. "ಈ ಅಭಿವೃದ್ಧಿ ಯೋಜನೆಗಳು ಮುಂಬರುವ ಶತಮಾನಗಳವರೆಗೆ ಪ್ರಭಾವಶಾಲಿಯಾಗಿ ಉಳಿಯುತ್ತವೆ". ಜೇವರ್ ವಿಮಾನ ನಿಲ್ದಾಣ ಪೂರ್ಣ ಆಗುವುದರೊಂದಿಗೆ ಈ ಪ್ರದೇಶವು ವೈಮಾನಿಕ ಹಾರಾಟದ ಹೊಸ ಶಕ್ತಿ ಕಂಡುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

"ಸರ್ಕಾರದ ಪ್ರಯತ್ನದಿಂದ ಇಂದು ಉತ್ತರ ಪ್ರದೇಶದ ಪಶ್ಚಿಮ ಭಾಗವು ದೇಶದ ಪ್ರಮುಖ ಉದ್ಯೋಗ ಒದಗಿಸುವ ಪ್ರದೇಶಗಳಲ್ಲಿ ಒಂದಾಗುತ್ತಿದೆ". ಸರ್ಕಾರವು 4 ವಿಶ್ವದರ್ಜೆಯ ಕೈಗಾರಿಕಾ ಸ್ಮಾರ್ಟ್ ಸಿಟಿಗಳಲ್ಲಿ ಕೆಲಸ ಮಾಡುತ್ತಿದೆ. ಇವುಗಳಲ್ಲಿ ಒಂದು ನಗರವು ಪಶ್ಚಿಮ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿದೆ ಎಂದರು. ಪ್ರಧಾನಿ ಅವರು ಇಂದು ಈ ಪ್ರಮುಖ ಟೌನ್‌ಶಿಪ್ ಉದ್ಘಾಟಿಸಿದರು. ಇದು ಉದ್ಯಮಕ್ಕೆ ಮತ್ತು ಈ ಪ್ರದೇಶದ ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಪ್ರಯೋಜನ ನೀಡುತ್ತದೆ. ಟೌನ್‌ಶಿಪ್ ಕೃಷಿ ಆಧಾರಿತ ಉದ್ಯಮಕ್ಕೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ಸ್ಥಳೀಯ ರೈತರು ಮತ್ತು ಕಾರ್ಮಿಕರಿಗೆ ಅಪಾರ ಪ್ರಯೋಜನ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

 

ಹಿಂದಿನ ಕಾಲದಲ್ಲಿ ಕೃಷಿಯ ಮೇಲೆ ಸಂಪರ್ಕ ಕೊರತೆಯಿಂದ ಆದ ವ್ಯತಿರಿಕ್ತ ಪರಿಣಾಮಗಳನ್ನು ಪ್ರಸ್ತಾಪಿಸಿದ ಅವರು, ಹೊಸ ವಿಮಾನ ನಿಲ್ದಾಣ ಮತ್ತು ಹೊಸ ಮೀಸಲಾದ ಸರಕು ಸಾಗಣೆ ಕಾರಿಡಾರ್‌ನಲ್ಲಿ ಪರಿಹಾರ ಕಾಣಬಹುದು. ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ ಮತ್ತು ಮಂಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಿದ ನಂತರ ರೈತರ ಖಾತೆಗಳಿಗೆ ನೇರವಾಗಿ ಪಾವತಿ ಖಚಿತಪಡಿಸಿಕೊಳ್ಳಲು ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ. ಅಂತೆಯೇ, ಎಥೆನಾಲ್ ಉತ್ಪಾದನೆ ಮೇಲೆ ಗಮನ ಕೇಂದ್ರೀಕರಿಸಲಾಗಿದ್ದು, ಇದೀಗ ಕಬ್ಬು ರೈತರಿಗೆ ಲಾಭದಾಯಕವಾಗಿದೆ ಎಂಬುದು ಸಾಬೀತಾಗಿದೆ ಎಂದರು.

"ರೈತರ ಕಲ್ಯಾಣವು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ". ಸರ್ಕಾರವು ರೈತರಿಗೆ ರಕ್ಷಣಾತ್ಮಕ ಕವಚ ನಿರ್ಮಿಸಲು ಪ್ರಯತ್ನಿಸುತ್ತಿದೆ. ದೇಶದ ರೈತರಿಗೆ ಕಡಿಮೆ ಬೆಲೆಯ ರಸಗೊಬ್ಬರಗಳು ಲಭ್ಯವಾಗುವಂತೆ ಮಾಡಲು ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಭಾರತದ ಹೊರಗೆ 3,000 ರೂಪಾಯಿ ಬೆಲೆ ಇರುವ ಯೂರಿಯಾ ಚೀಲವನ್ನು 300 ರೂ.ಗಿಂತ ಕಡಿಮೆ ಬೆಲೆಗೆ ರೈತರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಸಣ್ಣ ಬಾಟಲಿಯಲ್ಲಿ ರಸಗೊಬ್ಬರ ಪೂರೈಸುವ ನ್ಯಾನೊ ಯೂರಿಯಾ ಉತ್ಪಾದಿಸಲಾಗುತ್ತಿದೆ. ಇದರಿಂದ ಹಣದ ಉಳಿತಾಯವಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸರ್ಕಾರವು ರೈತರ ಬ್ಯಾಂಕ್ ಖಾತೆಗಳಿಗೆ 2.75 ಲಕ್ಷ ಕೋಟಿ ರೂಪಾಯಿ ವರ್ಗಾಯಿಸಿದೆ ಎಂದು ಶ್ರೀ ಮೋದಿ ತಿಳಿಸಿದರು.

ಕೃಷಿ ಮತ್ತು ಕೃಷಿ ಸಂಬಂಧಿತ ಆರ್ಥಿಕತೆಯಲ್ಲಿ ರೈತರ ಕೊಡುಗೆ ಅಪಾರ. ಸಹಕಾರಿ ಸಂಸ್ಥೆಗಳ ವ್ಯಾಪ್ತಿಯ ನಿರಂತರ ವಿಸ್ತರಣೆ ಮಾಡಲಾಗುತ್ತಿದೆ. ಸಣ್ಣ ರೈತರನ್ನು ಬಲಪಡಿಸುವ ಕ್ರಮಗಳಾಗಿ ಪಿಎಸಿಗಳು, ಸಹಕಾರ ಸಂಘಗಳು ಮತ್ತು ಎಫ್ ಪಿಒ ಗಳನ್ನು ಸ್ಥಾಪಿಸಲಾಗಿದೆ. ಸಹಕಾರ ಸಂಸ್ಥೆಗಳನ್ನು ಮಾರಾಟ, ಖರೀದಿ, ಸಾಲ, ಆಹಾರ ಸಂಸ್ಕರಣೆ ಅಥವಾ ರಫ್ತಿಗೆ ಉತ್ತೇಜಿಸಲಾಗುತ್ತಿದೆ. ಇಡೀ ದೇಶದಲ್ಲಿ ಶೀಥಲೀಕರಣ ಘಟಕ ಅಥವಾ ಕೋಲ್ಡ್ ಸ್ಟೋರೇಜ್ ಜಾಲ ನಿರ್ಮಿಸಲಾಗುತ್ತಿದ್ದು, ಇದು ವಿಶ್ವದ ಅತಿದೊಡ್ಡ ಶೇಖರಣಾ-ಸಂಬಂಧಿತ ಯೋಜನೆಯಾಗಿದೆ ಎಂದು ಮೋದಿ ತಿಳಿಸಿದರು.

ಕೃಷಿ ಕ್ಷೇತ್ರವನ್ನು ಆಧುನೀಕರಿಸಲು ಸರ್ಕಾರ ಉತ್ತೇಜನ ನೀಡಿದೆ. ನಾರಿ ಶಕ್ತಿ ಇದಕ್ಕೆ ಒಂದು ದೊಡ್ಡ ಮಾಧ್ಯಮವಾಗಿದೆ. ಡ್ರೋನ್ ಪೈಲಟ್ ಆಗಲು ಮಹಿಳಾ ಸ್ವಸಹಾಯ ಗುಂಪುಗಳಿಗೆ ನಮೋ ಡ್ರೋನ್ ದೀದಿ ಯೋಜನೆ  ಮೂಲಕ ತರಬೇತಿ ನೀಡಲಾಗುತ್ತಿದೆ.  "ನಮೋ ಡ್ರೋನ್ ದೀದಿ ಭವಿಷ್ಯದಲ್ಲಿ ಗ್ರಾಮೀಣ ಆರ್ಥಿಕತೆ ಮತ್ತು ಕೃಷಿಗೆ ದೊಡ್ಡ ಶಕ್ತಿಯಾಗಲಿದೆ" ಎಂದು ಅವರು ಹೇಳಿದರು.

ಸಣ್ಣ ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಕಳೆದ 10 ವರ್ಷಗಳಲ್ಲಿ ಕೈಗೊಂಡ ಸಾರ್ವಜನಿಕ ಕಲ್ಯಾಣ ಯೋಜನೆಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಕೋಟಿಗಟ್ಟಲೆ ಪಕ್ಕಾ ಮನೆಗಳನ್ನು ನಿರ್ಮಿಸುವುದು, ಶೌಚಾಲಯಗಳು, ನಲ್ಲಿ ನೀರಿನ ಸಂಪರ್ಕಗಳು, ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ ಸೌಲಭ್ಯಗಳು, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬೆಳೆ ವೈಫಲ್ಯ, ಉಚಿತ ಪಡಿತರ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ರೈತರಿಗೆ 1.5 ಲಕ್ಷ ಕೋಟಿ ರೂ. ಸೌಲಭ್ಯ ಕಲ್ಪಿಸಲಾಗಿದೆ. "ಯಾವುದೇ ಫಲಾನುಭವಿಯು ಸರ್ಕಾರದ ಯೋಜನೆಯಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಪ್ರಯತ್ನವಾಗಿದೆ, ಇದಕ್ಕಾಗಿ ಮೋದಿ ಕಿ ಗ್ಯಾರಂಟಿ ವಾಹನಗಳು ಪ್ರತಿ ಹಳ್ಳಿಯನ್ನು ತಲುಪುತ್ತಿವೆ, ಉತ್ತರ ಪ್ರದೇಶದ ಲಕ್ಷಾಂತರ ಜನರ ನೋಂದಣಿ ಮಾಡುತ್ತಿವೆ" ಎಂದು ಮೋದಿ ಹೇಳಿದರು.

“ಸರ್ಕಾರದ ಯೋಜನೆಗಳ ಲಾಭ ಪ್ರತಿಯೊಬ್ಬ ನಾಗರಿಕರಿಗೂ ಸಿಗುತ್ತದೆ ಎಂಬುದೇ ಮೋದಿ ಅವರ ಭರವಸೆ. ಇಂದು ರಾಷ್ಟ್ರವು ಮೋದಿ ಅವರ ಗ್ಯಾರಂಟಿಯನ್ನು ಯಾವುದೇ ಗ್ಯಾರಂಟಿ ಪೂರೈಸುವ ಭರವಸೆ ಎಂದು ಪರಿಗಣಿಸುತ್ತದೆ”. “ಸರ್ಕಾರದ ಯೋಜನೆಯ ಪ್ರಯೋಜನಗಳು ಪ್ರತಿಯೊಬ್ಬ ಫಲಾನುಭವಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಇಂದು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅದಕ್ಕೇ ಮೋದಿ ಸ್ಯಾಚುರೇಶನ್ ಗ್ಯಾರಂಟಿ. 100ರಷ್ಟು ಫಲಾನುಭವಿಗಳನ್ನು ತಲುಪಲು ಮೋದಿ ಒತ್ತು ನೀಡುತ್ತಿದ್ದಾರೆ”. ಇದು ಯಾವುದೇ ತಾರತಮ್ಯ ಅಥವಾ ಭ್ರಷ್ಟಾಚಾರದ ಸಾಧ್ಯತೆಯನ್ನು ತೊಡೆದುಹಾಕುತ್ತದೆ. "ಇದೇ ನಿಜವಾದ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯ". ರೈತರು, ಮಹಿಳೆಯರು, ಬಡವರು ಮತ್ತು ಯುವಕರ ಕನಸುಗಳು ಪ್ರತಿಯೊಂದು ಸಮಾಜದಲ್ಲೂ ಒಂದೇ ಆಗಿರುತ್ತವೆ. ಸರಕಾರದ ಪ್ರಾಮಾಣಿಕ ಪ್ರಯತ್ನದಿಂದಾಗಿ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ ಎಂದರು.

“ನನಗೆ ನೀವು ನನ್ನ ಕುಟುಂಬ ಸದಸ್ಯರಿದ್ದಂತೆ. ನಿಮ್ಮ ಕನಸು ನನಸು ಮಾಡುವುದೇ ನನ್ನ ಸಂಕಲ್ಪವಾಗಿದೆ.” ರಾಷ್ಟ್ರದ ಸಾಮಾನ್ಯ ಕುಟುಂಬಗಳ ಸಬಲೀಕರಣದೊಂದಿಗೆ ಮೋದಿ ಅವರ ಸಂಪತ್ತು ಉಳಿದಿದೆ. ಹಳ್ಳಿಗಳಿರಲಿ, ಬಡವರಿರಲಿ, ಯುವಕರಿರಲಿ, ಮಹಿಳೆಯರಿರಲಿ, ರೈತರಿರಲಿ ಎಲ್ಲರನ್ನೂ ಸಬಲೀಕರಣಗೊಳಿಸುವ ಅಭಿಯಾನ ಮುಂದುವರಿಯಲಿದೆ ಎಂದು ಮೋದಿ ಭರವಸೆ ನೀಡಿದರು.

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಶ್ರೀ ಬ್ರಜೇಶ್ ಪಾಠಕ್ ಮತ್ತು ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ ಕೆ ಸಿಂಗ್ ಹಾಗೂ ಇತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಮೀಸಲಾದ ಸರಕು ಸಾಗಣೆ ಕಾರಿಡಾರ್‌ನಲ್ಲಿ(ಡಿಎಫ್‌ಸಿ) ಹೊಸ ಖುರ್ಜಾ - ರೇವಾರಿ ನಡುವಿನ 173 ಕಿಮೀ ಉದ್ದದ ಡಬಲ್ ಲೈನ್ ವಿದ್ಯುದೀಕೃತ ಮಾರ್ಗವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 2 ನಿಲ್ದಾಣಗಳಿಂದ ಸರಕು ರೈಲುಗಳಿಗೆ ಹಸಿರುನಿಶಾನೆ ತೋರುವ ಮೂಲಕ ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಪಾಶ್ಚಿಮಾತ್ಯ ಮತ್ತು ಪೂರ್ವ ಡಿಎಫ್‌ಸಿಗಳ ನಡುವೆ ನಿರ್ಣಾಯಕ ಸಂಪರ್ಕ ಕಲ್ಪಿಸಿರುವ ಈ ಹೊಸ ಡಿಎಫ್‌ಸಿ ವಿಭಾಗವು ಮುಖ್ಯವಾಗಿದೆ. ಇದಲ್ಲದೆ, ಈ ವಿಭಾಗವು ಎಂಜಿನಿಯರಿಂಗ್‌ನ ಗಮನಾರ್ಹ ಸಾಧನೆಗೆ ಹೆಸರುವಾಸಿಯಾಗಿದೆ. ಇದು 'ಒಂದು ಕಿಲೋಮೀಟರ್ ಉದ್ದದ ಡಬಲ್ ಲೈನ್ ರೈಲು ಸುರಂಗ ಹೊಂದಿದೆ, ಇದು ಎತ್ತರಿಸಿದ ವಿದ್ಯುದೀಕರಿಸಿದ  ವಿಶ್ವದಲ್ಲೇ ಮೊದಲ ರೈಲು ಮಾರ್ಗ ಇದಾಗಿದೆ. ಡಬಲ್-ಸ್ಟಾಕ್ ಕಂಟೈನರ್ ರೈಲುಗಳನ್ನು ದಕ್ಷತೆಯಿಂದ ನಿರ್ವಹಿಸಲು ಈ ಸುರಂಗ ನಿರ್ಮಿಸಲಾಗಿದೆ. ಈ ಹೊಸ ಡಿಎಫ್‌ಸಿ ವಿಭಾಗವು ಡಿಎಫ್‌ಸಿ ಟ್ರ್ಯಾಕ್‌ನಲ್ಲಿ ಸರಕು ರೈಲುಗಳ ಸ್ಥಳಾಂತರದಿಂದಾಗಿ ಪ್ರಯಾಣಿಕ ರೈಲುಗಳ ಕಾರ್ಯಾಚರಣೆ ಸುಧಾರಿಸಲು ಸಹಾಯ ಮಾಡುತ್ತದೆ.

ಮಥುರಾ - ಪಲ್ವಾಲ್ ವಿಭಾಗ ಮತ್ತು ಚಿಪಿಯಾನ ಬುಜುರ್ಗ್ - ದಾದ್ರಿ ವಿಭಾಗವನ್ನು ಸಂಪರ್ಕಿಸುವ 4ನೇ ಮಾರ್ಗವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಹೊಸ ಮಾರ್ಗಗಳು ರಾಷ್ಟ್ರೀಯ ರಾಜಧಾನಿಯ ದಕ್ಷಿಣ ಪಶ್ಚಿಮ ಮತ್ತು ಪೂರ್ವ ಭಾರತಕ್ಕೆ ರೈಲು ಸಂಪರ್ಕ ಸುಧಾರಿಸುತ್ತದೆ.

ಪ್ರಧಾನ ಮಂತ್ರಿ ಅವರು ಅನೇಕ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಯೋಜನೆಗಳು ಅಲಿಘರ್‌ನಿಂದ ಭದ್ವಾಸ್‌ಗೆ ಚತುಷ್ಪಥದ ಕಾಮಗಾರಿ ಪ್ಯಾಕೇಜ್-1 (ಎನ್‌ಎಚ್-34 ರ ಅಲಿಗಢ-ಕಾನ್ಪುರ್ ವಿಭಾಗದ ಭಾಗ), ಶಾಮ್ಲಿ (ಎನ್ಎಚ್-709ಎ) ಮೂಲಕ ಮೀರತ್‌ನಿಂದ ಕರ್ನಾಲ್ ಗಡಿಗೆ ವಿಸ್ತರಣೆ, ಎನ್ಎಚ್-709 ಎಡಿ ಪ್ಯಾಕೇಜ್-IIರ ಶಾಮ್ಲಿ-ಮುಜಾಫರ್‌ನಗರ ವಿಭಾಗದ 4 ಲೇನಿಂಗ್. ರಸ್ತೆ ಯೋಜನೆಗಳಾಗಿವೆ. ಒಟ್ಟು 5,000 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ರಸ್ತೆ ಯೋಜನೆಗಳು ಸಂಪರ್ಕ ಸುಧಾರಿಸುತ್ತದೆ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತವೆ.

 

ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಇಂಡಿಯನ್ ಆಯಿಲ್‌ನ ತುಂಡ್ಲಾ-ಗವಾರಿಯಾ ಪೈಪ್‌ಲೈನ್ ಉದ್ಘಾಟಿಸಿದರು. ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 255 ಕಿ.ಮೀ. ಉದ್ದದ ಪೈಪ್ ಲೈನ್ ಯೋಜನೆಯು ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಪೂರ್ಣಗೊಂಡಿದೆ. ಮಥುರಾ ಮತ್ತು ತುಂಡ್ಲಾದಲ್ಲಿ ಪಂಪಿಂಗ್ ಸೌಲಭ್ಯಗಳು ಮತ್ತು ತುಂಡ್ಲಾ, ಲಕ್ನೋ ಮತ್ತು ಕಾನ್ಪುರದಲ್ಲಿ ವಿತರಣಾ ಸೌಲಭ್ಯಗಳೊಂದಿಗೆ ಬರೌನಿ-ಕಾನ್ಪುರ್ ಪೈಪ್‌ಲೈನ್‌ನ ಗವಾರಿಯಾ ಟಿ-ಪಾಯಿಂಟ್‌ಗೆ ತುಂಡ್ಲಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲು ಈ ಯೋಜನೆಯು ಸಹಾಯ ಮಾಡುತ್ತದೆ.

ಪ್ರಧಾನ ಮಂತ್ರಿ ಅವರು ‘ಗ್ರೇಟರ್ ನೋಯ್ಡಾದಲ್ಲಿ ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ಟೌನ್‌ಶಿಪ್’ (ಐಐಟಿಜಿಎನ್) ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಧಾನ ಮಂತ್ರಿ ಅವರ ಸಮಗ್ರ ಯೋಜನೆ ಮತ್ತು ಪ್ರಧಾನಮಂತ್ರಿ-ಗತಿಶಕ್ತಿ ಅಡಿ ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಂಘಟಿತ ಅನುಷ್ಠಾನದ ದೃಷ್ಟಿಗೆ ಅನುಗುಣವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. 1,714 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಯೋಜನೆಯು 747 ಎಕರೆ ಪ್ರದೇಶದಲ್ಲಿ ಹರಡಿದೆ. ಪೂರ್ವ ಮತ್ತು ಪಶ್ಚಿಮ ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳ ಛೇದನದ ಬಳಿ ದಕ್ಷಿಣಕ್ಕೆ ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಮತ್ತು ಪೂರ್ವಕ್ಕೆ ದೆಹಲಿ-ಹೌರಾ ಬ್ರಾಡ್ ಗೇಜ್ ರೈಲು ಮಾರ್ಗವಿದೆ. ಐಐಟಿಜಿಎನ್ ಕಾರ್ಯತಂತ್ರ ಸ್ಥಳವು ಸರಿಸಾಟಿಯಿಲ್ಲದ ಸಂಪರ್ಕ ಖಾತ್ರಿಗೊಳಿಸುತ್ತದೆ.  ಏಕೆಂದರೆ ಬಹು-ಮಾದರಿ ಸಂಪರ್ಕಕ್ಕಾಗಿ ಇತರೆ ಮೂಲಸೌಕರ್ಯಗಳು ಈ ಯೋಜನೆಯ ಸಮೀಪದಲ್ಲಿವೆ. ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ (5 ಕಿಮೀ), ಯಮುನಾ ಎಕ್ಸ್‌ಪ್ರೆಸ್‌ವೇ (10 ಕಿಮೀ), ದೆಹಲಿ ವಿಮಾನ ನಿಲ್ದಾಣ (60 ಕಿಮೀ), ಜೇವರ್ ವಿಮಾನ ನಿಲ್ದಾಣ (40 ಕಿಮೀ), ಅಜೈಬ್‌ಪುರ ರೈಲು ನಿಲ್ದಾಣ (0.5 ಕಿಮೀ) ಮತ್ತು ನ್ಯೂ ದಾದ್ರಿ ಡಿಎಫ್‌ಸಿಸಿ ನಿಲ್ದಾಣ (10 ಕಿಮೀ). ಈ ಯೋಜನೆಯು ಈ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ, ಆರ್ಥಿಕ ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಕಾರ್ಯಕ್ರಮದಲ್ಲಿ ಸುಮಾರು 460 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣ ಸೇರಿದಂತೆ ನವೀಕರಿಸಿದ ಮಥುರಾ ಒಳಚರಂಡಿ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು. ಈ ಕೆಲಸವು ಮಸಾನಿಯಲ್ಲಿ 30 ಎಂಎಲ್ಡಿ ಎಸ್ಟಿಪಿ ನಿರ್ಮಾಣ, ಟ್ರಾನ್ಸ್ ಯಮುನಾದಲ್ಲಿ ಅಸ್ತಿತ್ವದಲ್ಲಿರುವ 30 ಎಂಎಲ್ಡಿ ಪುನರ್ವಸತಿ ಮತ್ತು ಮಸಾನಿಯಲ್ಲಿ 6.8 ಎಂಎಲ್ಡಿ ಎಸ್ಟಿಪಿ ಮತ್ತು 20 ಎಂಎಲ್ಡಿ ಟಿಟಿಆರ್ ಒ ಸ್ಥಾವರ (ತೃತೀಯ ಚಿಕಿತ್ಸೆ ಮತ್ತು ರಿವರ್ಸ್ ಆಸ್ಮೋಸಿಸ್ ಪ್ಲಾಂಟ್) ನಿರ್ಮಾಣವನ್ನು ಸಹ ಒಳಗೊಂಡಿದೆ. ಪ್ರಧಾನಿ ಅವರು ಮೊರಾದಾಬಾದ್ (ರಾಮಗಂಗಾ) ಒಳಚರಂಡಿ ವ್ಯವಸ್ಥೆ ಮತ್ತು ಎಸ್ಟಿಪಿ ಕಾಮಗಾರಿ(ಹಂತ I) ಉದ್ಘಾಟಿಸಿದರು. ಸುಮಾರು 330 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು 58 ಎಂಎಲ್ಡಿ ಎಸ್ಟಿಪಿ, ಸುಮಾರು 264 ಕಿಮೀ ಒಳಚರಂಡಿ ಜಾಲ ಮತ್ತು ಮೊರಾದಾಬಾದ್‌ನಲ್ಲಿ ರಾಮಗಂಗಾ ನದಿಯ ಮಾಲಿನ್ಯ ಕಡಿಮೆ ಮಾಡಲು 9 ಒಳಚರಂಡಿ ಪಂಪಿಂಗ್ ಕೇಂದ್ರಗಳನ್ನು ಒಳಗೊಂಡಿದೆ.

 

***

 



(Release ID: 2000285) Visitor Counter : 49