ಉಪರಾಷ್ಟ್ರಪತಿಗಳ ಕಾರ್ಯಾಲಯ

ಐಐಎಂ ಬೆಂಗಳೂರಿನಲ್ಲಿ ಉಪ ರಾಷ್ಟ್ರಪತಿಯವರ ಭಾಷಣದ ಪಠ್ಯ  (ಆಯ್ದ ಭಾಗಗಳು)

Posted On: 01 MAR 2023 7:35PM by PIB Bengaluru

ಐಐಎಂ ಬೆಂಗಳೂರಿನ ಹಳೆಯ ವಿದ್ಯಾರ್ಥಿ ಹಾಗೂ 1991 ನೇ ತಂಡದ ಐಎಎಸ್ ಅಧಿಕಾರಿ ರಾಜ್ಯಸಭೆಯ ಕಾರ್ಯದರ್ಶಿಯಾಗಿರುವುದು ನಮ್ಮ ಅದೃಷ್ಟವಾಗಿದೆ. ಅವರು ಇದಕ್ಕೆಲ್ಲಾ ಸಿದ್ಧವಾಗಿಲ್ಲ, ಅವರು ಮುಜುಗರಕ್ಕೊಳಗಾಗುತ್ತಾರೆ ಎಂದು ನನಗೆ ಗೊತ್ತಿದೆ. ಆದರೆ ಅವರು ಒಂದು ಬದಲಾವಣೆಯನ್ನು ಮಾಡಿದ್ದಾರೆ. ರಾಜ್ಯಸಭೆಯ ಕಲಾಪದಲ್ಲಿ ವ್ಯವಹರಿಸುವ ನನ್ನ ದೃಷ್ಟಿಕೋನದಲ್ಲಿ ಅವರು ಭಾರಿ ಬದಲಾವಣೆಯನ್ನು ಮಾಡಿದ್ದಾರೆ ಮತ್ತು ಆ ಬದಲಾವಣೆಯು ಗುಣಾತ್ಮಕವಾಗಿ ಬಹಳ ಫಲಪ್ರದವಾಗಿದೆ. ಆದ್ದರಿಂದ, ಮೇಲ್ಮನೆಗೆ ಪ್ರಯೋಜನ ನೀಡಿದ ಈ ಸಂಸ್ಥೆಗೆ ನನ್ನ ಮನದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ನಾನು ನಿಮ್ಮೊಂದಿಗೆ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ನಿಮ್ಮಲ್ಲಿ ಒಬ್ಬ. ಏಕೆಂದರೆ, ನಾನು ಶಿಕ್ಷಣದ ಫಲಾನುಭವಿ. ನಾನು ವಿದ್ಯುತ್ ಇಲ್ಲದ, ರಸ್ತೆ ಇಲ್ಲದ ಪುಟ್ಟ ಹಳ್ಳಿಯಲ್ಲಿದ್ದೆ. ನಾನು ಐದನೇ ತರಗತಿಯಲ್ಲಿದ್ದಾಗ ವಿದ್ಯಾರ್ಥಿವೇತನ ಪಡೆದ ಅದೃಷ್ಟಶಾಲಿಯಾಗಿದ್ದೆ ಮತ್ತು ಚಿತ್ತೋರ್‌ಗಢದ ಸೈನಿಕ ಶಾಲೆಗೆ ಹೋದೆ, ಅದು ನನ್ನ ಜೀವನವನ್ನು ಬದಲಾಯಿಸಿತು.

ನನ್ನ ಅನುಭವಗಳ ಆಧಾರದ ಮೇಲೆ ನನ್ನ ಒಂದು ಸಲಹೆಯೆಂದರೆ - ಎಂದಿಗೂ ಉದ್ವೇಗಗೊಳ್ಳಬೇಡಿ, ಒತ್ತಡಕ್ಕೊಳಗಾಗಬೇಡಿ ಮತ್ತು ತಪ್ಪು ಮಾಡಲು ಎಂದಿಗೂ ಭಯಪಡಬೇಡಿ. ನೀವು ತಪ್ಪು ಮಾಡಲು ಭಯಪಟ್ಟರೆ, ನೀವು ಉದ್ಯಮಶೀಲರಾಗಿರುವುದಿಲ್ಲ. ಐತಿಹಾಸಿಕವಾಗಿ, ಸಮಾಜದಲ್ಲಿ ಮತ್ತು ಮನುಕುಲದಲ್ಲಿ ಒಳ್ಳೆಯ ವಿಷಯಗಳನ್ನು ರೂಪಿಸಿದ ಎಲ್ಲಾ ಬೆಳವಣಿಗೆಗಳನ್ನು ನೀವು ನೋಡಿದರೆ, ಅದು ಎಂದಿಗೂ ಮೊದಲ ಪ್ರಯತ್ನದಲ್ಲಿ ಆಗಿರುವುದಿಲ್ಲ.

ಎರಡನೆಯದಾಗಿ, ನಾವು ಮನುಕುಲಕ್ಕೆ ಮಾಡುವ ದೊಡ್ಡ ಅನ್ಯಾಯವೆಂದರೆ, ಅದ್ಭುತವಾದ ಆಲೋಚನೆಯನ್ನು ಹೊಂದಿರುವುದು ಆದರೆ ಅದರ ಬಗ್ಗೆ ಮಾತನಾಡದಿರುವುದು ಮತ್ತು ಅದ್ಭುತವಾದ ಆಲೋಚನೆಯನ್ನು ಹೊಂದಿರುವುದು, ಅದರ ಬಗ್ಗೆ ಮಾತನಾಡುವುದು ಆದರೆ ಅದನ್ನು ಕಾರ್ಯಗತಗೊಳಿಸದೇ ಇರುವುದು.

ನಮ್ಮ ಪ್ರಧಾನಿಯವರನ್ನು ನೋಡಿ, ಇನ್ನೆರಡು ವರ್ಷಗಳಲ್ಲಿ ಹೊಸ ಸಂಸತ್‌ ಭವನ ಬರಲಿದೆ. ಈಗಿರುವ ಸಂಸತ್ತಿನ ಕಟ್ಟಡವನ್ನು ನಿರ್ಮಿಸಲು ಎಷ್ಟು ಸಮಯ ತೆಗೆದುಕೊಳ್ಳಲಾಯಿತು ಎಂಬುದನ್ನು ನೀವು ಎಂದಾದರೂ ಊಹಿಸಬಹುದೇ? ಗೌರವಾನ್ವಿತ ಪ್ರಧಾನಿಯವರಿಗೆ ನಮಗೆ ಹೊಸ ಸಂಸತ್ತು ಬೇಕು ಎಂಬ ಮನಸ್ಸಾಯಿತು.

ನಾನು 1989 ರಲ್ಲಿ ಸಂಸತ್ತಿಗೆ ಆಯ್ಕೆಯಾದೆ. ನಾನು 1989 ರಲ್ಲಿ ಕೇಂದ್ರ ಸಚಿವನಾಗಿದ್ದೆ. ನನ್ನ ಅಧಿಕಾರದಲ್ಲಿ ಎರಡು ವಿಷಯಗಳಿದ್ದವು - ನಾನು 50 ಅಡುಗೆ ಅನಿಲ ಸಂಪರ್ಕಗಳನ್ನು ಯಾರಿಗಾದರೂ ನೀಡಬಹುದಿತ್ತು. ಅತಿ ದೊಡ್ಡ ಪ್ರಜಾಪ್ರಭುತ್ವದ ತಾಯಿಯಾದ ಭಾರತದಲ್ಲಿ ಒಂದು ವರ್ಷದಲ್ಲಿ 50 ಅಡುಗೆ ಅನಿಲ ಸಂಪರ್ಕಗಳನ್ನು ನೀಡುವುದಕ್ಕೆ ಹೆಮ್ಮೆ ಪಡುವ ಸಂಸದರ ಶಕ್ತಿಯನ್ನು ಊಹಿಸಿಕೊಳ್ಳಿ. ಈಗ ಪ್ರಸ್ತುತ ವಿತರಣೆಯನ್ನು ನೋಡಿ. ಅಗತ್ಯವಿರುವ ಕುಟುಂಬಗಳಿಗೆ 170 ಮಿಲಿಯನ್ ಅಡುಗೆ ಅನಿಲ ಸಂಪರ್ಕಗಳನ್ನು ಉಚಿತವಾಗಿ ನೀಡಲಾಗಿದೆ. ಇದು ಮನಸ್ಸಿಗೆ ಮುದ ನೀಡುವುದಿಲ್ಲವೇ?

ಕೋವಿಡ್ ಸಮಯದಲ್ಲಿ ಪ್ರಧಾನಿಯವರು ಮೂರು ಕ್ರಮಗಳನ್ನು ಕೈಗೊಂಡರು. ಒಂದು, ಜನತಾ ಕರ್ಫ್ಯೂ, ಇದು ಅತ್ಯಂತ ಮುಂಚಿನ ಅತ್ಯಂತ ನವೀನ ಕಾರ್ಯವಿಧಾನವಾಗಿತ್ತು, ರಾಜ್ಯಪಾಲನಾಗಿ ನಾನು ಅದರ ಭಾಗವಾಗಿದ್ದೆ. ಕೆಲವರು ವ್ಯಂಗ್ಯವಾಡಿದರು, ಇದು ಏನು? ಈ ಹುಚ್ಚು ಕಲ್ಪನೆಯನ್ನು ಅವರಿಗೆ ಎಲ್ಲಿಂದ ಬಂತು ಎಂದು. ಆದರೆ ನಂತರ ಇದು ವಿಶ್ವದ ಅತ್ಯಂತ ಮಹತ್ವದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವೆಂದು ಸಾಬೀತಾಯಿತು. ಜನರು ಅದನ್ನು ಸ್ವೀಕರಿಸಿದರು. ಅದು ಅದ್ಭುತವಾಗಿತ್ತು. ನಮಗೆ ಅಪಾಯವಿದೆ ಎಂದು ಪ್ರಧಾನಿ ನಮಗೆ ಅರಿವು ಮೂಡಿಸಿದರು. ಕೋವಿಡ್‌ ಸಾಂಕ್ರಾಮಿಕವು ಮನುಕುಲದ ಮೇಲೆ ಪರಿಣಾಮ ಬೀರಿದೆ. ನಾವೀನ್ಯತೆಯು ಏಕೈಕ ಮಾರ್ಗವಾಗಿದೆ ಎಂದು ಪ್ರಧಾನಿ ಭಾವಿಸಿದರು. ಇದನ್ನು ಅಪಹಾಸ್ಯ ಮಾಡಲಾಯಿತು.

ಇಲ್ಲಿರುವ ಯುವ ಮನಸ್ಸುಗಳೇ, ಈಗ ಯೋಚಿಸಿ. ಏಕೆಂದರೆ ನೀವೇ ಭವಿಷ್ಯ. ನೀವು ಈ ದೇಶದ ಜವಾಬ್ದಾರಿಯನ್ನು ಹೊರಲು ಬಯಸುತ್ತಿದ್ದೀರಿ. ನೀವು 2047 ರ ಯೋಧರು. 2047 ರಲ್ಲಿ ಭಾರತ ಏನಾಗಬೇಕು ಎಂಬುದನ್ನು ನಿಮ್ಮ ಪ್ರಯತ್ನದಿಂದ ನಿರ್ಧರಿಸಲಾಗುತ್ತದೆ, ಆದ್ದರಿಂದ ಇದನ್ನು ಗಮನಿಸಿ. ಮೊದಲ ಪ್ರತಿಕ್ರಿಯೆ ಏನೆಂದರೆ, ಕೋವಿಡ್ ಎಲ್ಲಿದೆ? ಇದೆಲ್ಲ ರಾಜಕೀಯ. ಆದರೆ ಕೋವಿಡ್ ಬಂದಿತು. ನೀವು ಹೊರಗಿನಿಂದ ಲಸಿಕೆಗಳನ್ನು ಏಕೆ ಪಡೆಯಬಾರದು? ನೀವೇಕೆ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳುತ್ತೀರಿ? ಎಂದರು. ನಿಮ್ಮ ಬುದ್ಧಿವಂತಿಕೆ, ನಿಮ್ಮ ಪ್ರತಿಭೆಯನ್ನು ನಂಬದಿರುವುದು ಮತ್ತು ಬೇರೆಯವರ ಪ್ರತಿಭೆಗೆ ದಾಸರಾಗುವುದು ಮೂರ್ಖತನವಾಗಿದೆ. ಅವರು ಹೇಳಿದರು ಇಲ್ಲ, ಈ ಲಸಿಕೆ ಯಶಸ್ವಿಯಾಗದಿದ್ದರೆ ಮತ್ತೊಂದು ಲಸಿಕೆ ಇದೆ ಮತ್ತು ಆ ಲಸಿಕೆ ಜಾಗತಿಕವಾಗಿ ಉತ್ತಮವಾಗಿ ಸ್ವೀಕೃತವಾಗುತ್ತದೆ. ಅಂತಿಮವಾಗಿ, ನಾವು ಎಲ್ಲಿದ್ದೇವೆ? 1.4 ಶತಕೋಟಿ ಜನರು ಕೋವಿಡ್‌ ಅನ್ನು ಹೇಗೆ ಎದುರಿಸಿದರು? 220 ಕೋಟಿ ಡೋಸ್‌ಗಳನ್ನು ಹೇಗೆ ನೀಡಲಾಯಿತು ಎಂದು ಜಗತ್ತು ನಮ್ಮತ್ತ ನೋಡುತ್ತಿದೆ. ಇದೆಲ್ಲವನ್ನೂ ಡಿಜಿಟಲ್ ಮ್ಯಾಪ್ ಮಾಡಲಾಗಿದೆ. ಜಗತ್ತಿನ ಯಾವ ದೇಶಕ್ಕೂ ಇದನ್ನು ಮಾಡಲು ಸಾಧ್ಯವಾಗಿಲ್ಲ.

ನಾನು ಮೊದಲ ಬಾರಿಗೆ ವಿದೇಶಕ್ಕೆ ಭೇಟಿ ನೀಡಿದಾಗ, ನನ್ನ ದೇಶದಲ್ಲಿ, ನಾಯಕತ್ವವು ಕಾಗದದ ಉದ್ಯಮದ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ನಾನು ಲಘುವಾಗಿ ಹೇಳಿದೆ. ನನ್ನನ್ನು ನೋಡುತ್ತಿದ್ದ ವ್ಯಕ್ತಿಗೆ ಸ್ವಲ್ಪ ಆಶ್ಚರ್ಯವಾಯಿತು. ಅದರರ್ಥ ಏನು? ಎಂದರು. ನಾವು ಕಾಗದದ ಪ್ರಮಾಣ ಪತ್ರಗಳನ್ನು ನೀಡಿದ್ದರೆ ಕಾಗದದ ಉದ್ಯಮವು ಅಭಿವೃದ್ಧಿ ಹೊಂದುತ್ತಿತ್ತು ಎಂದು ನಾನು ಹೇಳಿದೆ. 220 ಕೋಟಿ ಪ್ರಮಾಣಪತ್ರಗಳು ಕಾಗದದ ಮೇಲೆ ಹಲವಾರು ಬಾರಿ ವಹಿವಾಟು ನಡೆಸುತ್ತಿದ್ದವು.  ಕಾಗದದ ಉದ್ಯಮವು ಏಳಿಗೆಯಾಗುತ್ತಿತ್ತು. ನಾವು ಅದರ ಬಗ್ಗೆ ಕಾಳಜಿ ವಹಿಸಲಿಲ್ಲ, ನಾವು ತಂತ್ರಜ್ಞಾನದ ಬಗ್ಗೆ ಕಾಳಜಿ ವಹಿಸಿದೆವು.

ನಮ್ಮ ಕೋವಿಡ್‌ ನಿರ್ವಹಣೆಯನ್ನು ಜಾಗತಿಕವಾಗಿ ಗೌರವಿಸಲಾಗುತ್ತದೆ. ಅದಕ್ಕೆ ಕಾರಣ ನಮ್ಮ ಕೋವಿಡ್ ಯೋಧರು.

ಪ್ರಧಾನಿಯವರ ಕರೆಯ ಮೇರೆಗೆ ನಾನು ಕೋವಿಡ್ ಸಮಯದಲ್ಲಿ ಗಂಟೆ ಬಾರಿಸಿದೆ. ನಮ್ಮ ಪ್ರಾಣವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ತ್ಯಾಗ ಮಾಡುವವರಿಗಾಗಿ ನಾನು ಅದನ್ನು ಮಾಡಿದೆ. ಅದೊಂದು ದೊಡ್ಡ ಗೌರವದ ಸಂಕೇತವಾಗಿತ್ತು. ನಾವು ಈ ದೇಶದಲ್ಲಿ ಏನನ್ನು ಸಾಧಿಸಿದ್ದೇವೆ ಎಂಬುದನ್ನು ನಾನು ಸಂಕ್ಷಿಪ್ತವಾಗಿ ಹೇಳುತ್ತೇನೆ. ಒಂದು, ಆರ್ಥಿಕತೆ, ಸೆಪ್ಟೆಂಬರ್ 2022 ರಲ್ಲಿ ನಾವು ಒಂದು ಮೈಲಿಗಲ್ಲು ಸಾಧಿಸಿದ್ದೇವೆ. ಅದೆಂದರೆ ನಾವು ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿದ್ದೇವೆ. ಇದೊಂದು ಮಹತ್ವದ ಸಾಧನೆಯಾಗಿದೆ: ಹೆಚ್ಚು ಮಹತ್ವದ್ದಾಗಿದೆ, ನಾವು ನಮ್ಮ ಹಿಂದಿನ ವಸಾಹತುಶಾಹಿ ಆಡಳಿತಗಾರರನ್ನು ಹಿಂದಿಕ್ಕಿದ್ದೇವೆ.

ನಿಮ್ಮಲ್ಲಿ ಬಹುತೇಕ ಮಂದಿ ಹೆಚ್ಚು ತಿಳುವಳಿಕೆಯುಳ್ಳವರು ಮತ್ತು ನನಗಿಂತ ಹೆಚ್ಚು ತಿಳುವಳಿಕೆಯುಳ್ಳವರು. ಈ ದಶಕದ ಅಂತ್ಯದ ವೇಳೆಗೆ ನಾವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ. ಇದು ಹೇಗಾಗುತ್ತದೆ? ಇದು ಸ್ಥಾಪಿತ ಕೈಗಾರಿಕೋದ್ಯಮಿಗಳಿಂದ ಅಲ್ಲ, ಇದು ಪ್ರಾರಂಭವಾದದ್ದು ನಿಮ್ಮಂತಹವರು ಸ್ಟಾರ್ಟಪ್‌ಗಳ ದೊಡ್ಡ ಜಗತ್ತಿನಲ್ಲಿ ಕಾಲಿಟ್ಟಿರುವ ಕಾರಣ ಮತ್ತು ಅವುಗಳು ಅಭಿವೃದ್ಧಿಯ ಮೇಲೆ ಭಾರಿ ಪರಿಣಾಮ ಬೀರಿವೆ. ಅದಕ್ಕಾಗಿಯೇ ನಮ್ಮ ಸ್ಟಾರ್ಟ್‌ಅಪ್‌ಗಳು ಉದ್ಯಮದಲ್ಲಿನ ದೈತ್ಯರಿಂದ ಹೂಡಿಕೆಯನ್ನು ಆಕರ್ಷಿಸುತ್ತಿವೆ ಮತ್ತು ಹೌದು ಆ ಸ್ಟಾರ್ಟಪ್‌ನಲ್ಲಿ ಉನ್ನತ ಕೈಗಾರಿಕೋದ್ಯಮಿ ಹೂಡಿಕೆ ಮಾಡಿದ್ದಾರೆ ಎಂದು ಪ್ರಚಾರವನ್ನು ಪಡೆಯುತ್ತಿವೆ,

ಸರ್ಕಾರದ ದೃಢವಾದ ನೀತಿಗಳಿಂದಾಗಿ ನಾವು ಒಂದು ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ನೀವು ಈಗ ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಮರ್ಥರಾಗಿದ್ದೀರಿ. ಹಣವು ಇದಕ್ಕೆ ಅಡೆತಡೆಯಲ್ಲ. ನಿಮ್ಮೊಂದಿಗೆ ಇಲ್ಲಿ ಮಾತನಾಡುತ್ತಿರುವ ನಾನು ವಕೀಲನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದವನು. ಜನರು ಅದನ್ನು ಯಶಸ್ವಿ ವೃತ್ತಿಜೀವನವೆಂದು ಹೇಳುತ್ತಾರೆ. ನೀವು ಚೌಕಟ್ಟಿನ ಹೊರಗೆ ಯೋಚಿಸಬೇಕು ಮತ್ತು ನಿಮ್ಮ ಹಿಂದೆ ಐಐಎಂ ಬೆಂಗಳೂರಿನ ಖ್ಯಾತಿಯ ಮುದ್ರೆಯಿದೆ.

ಎರಡನೆಯದಾಗಿ, ದಯವಿಟ್ಟು ಯಾವಾಗಲೂ ನಿಮ್ಮ ರಾಷ್ಟ್ರವನ್ನು ಮೊದಲ ಸ್ಥಾನದಲ್ಲಿ ಇರಿಸಿ. ನಾವು ಹೆಮ್ಮೆಯ ಭಾರತೀಯರು ನಮ್ಮ ಸಾಧನೆಗಳು ಮತ್ತು ಗೆಲುವುಗಳ ಬಗ್ಗೆ ಹೆಮ್ಮೆ ಪಡುತ್ತೇವೆ. ನಾವು ಯಾವುದೇ ಕಾರಣಕ್ಕೂ ಹಿಂದುಳಿಯಬಾರದು. ಬೆಂಬಲಿಗರನ್ನು, ಫಲಾನುಭವಿಗಳನ್ನು, ಹಣಕಾಸಿನ ಬೆಂಬಲವನ್ನು, ಸ್ಲೀಪರ್ ಸೆಲ್‌ಗಳನ್ನು ಹೊಂದಿರುವ ಹೊರಗಿನ ಯಾರಾದರೂ, ನನ್ನ ದೇಶದ ಹೆಸರಿಡಿದು ಕರೆದರೆ ನಾವು ಸುಮ್ಮನಿರಬೇಕೇ? ಇಲ್ಲ, ನಾನು ಸುಮ್ಮನಿರುವುದಿಲ್ಲ.

ನಮ್ಮ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಪ್ರಶ್ನಿಸುವ ಅರ್ಹತೆ ಜಗತ್ತಿನಲ್ಲಿ ಯಾರಿಗೂ ಇಲ್ಲ. ಯಾವುದೇ ದೇಶವು ವಿಶೇಷವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ನಮ್ಮಷ್ಟು ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರವಲ್ಲ. ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸುವ ಸುಪ್ರೀಂ ಕೋರ್ಟ್ ಅನ್ನು ನೀವು ಜಗತ್ತಿನಲ್ಲಿ ಬೇರೆಲ್ಲಿ ಕಾಣುತ್ತೀರಿ? ಜಗತ್ತಿನಲ್ಲಿ ಎಲ್ಲಿ ಬೃಹತ್ತಾದುದನ್ನು ಕಾರ್ಯಗತಗೊಳಿಸುವ ಸರ್ಕಾರವನ್ನು ನೀವು ಬೇರೆಲ್ಲಿ ಕಾಣುತ್ತೀರಿ?

ನಮ್ಮಲ್ಲಿ ವಂದೇ ಭಾರತ ರೈಲುಗಳಿವೆ. ಆದರೆ ನಮ್ಮ ಪತ್ರಕರ್ತ ಮಿತ್ರರ ಕಾರಣದಿಂದ ನಮಗೆ ಸಿಗುವ ಸುದ್ದಿಯೆಂದರೆ ಅವುಗಳ ಉದ್ಘಾಟನೆ ಅಥವಾ ಅವುಗಳ ಮೇಲೆ ಕಲ್ಲು ತೂರಾಟ. ಏನಾಗುತ್ತಿದೆ ಎಂದು ನೀವು ಸುತ್ತಲೂ ಒಮ್ಮೆ ನೋಡಿ.

ಜಗತ್ತೇ ನಿಬ್ಬೆರಗಾಗುವಂಥ ಸಾಧನೆಗಳು ಹಲವಾರು ಇವೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಗಳನ್ನು ನೋಡಿ, ಅವೆಲ್ಲವೂ ನಮ್ಮ ಆರ್ಥಿಕತೆಗಿಂತ ಕಡಿಮೆ ವೇಗದಲ್ಲಿ ಬೆಳೆಯುತ್ತಿವೆ. ಕೆಟ್ಟ ಮಾದರಿಯ ರಾಜಕೀಯದ ಬಗ್ಗೆ ನಾವು ಅತ್ಯಂತ ಜಾಗರೂಕರಾಗಿರಬೇಕು. ನಮ್ಮ ಆಡಳಿತ, ಪ್ರಜಾಸತ್ತಾತ್ಮಕ ರಾಜಕೀಯ ಮತ್ತು ಸಂಸ್ಥೆಗಳ ನ್ಯಾಯಯುತ ಹೆಸರನ್ನು ಹಾಳುಮಾಡಲು ಮತ್ತು ಅವುಗಳಿಗೆ ಕಳಂಕ ತರಲು ದೇಶದ ಒಳಗೆ ಮತ್ತು ಹೊರಗೆ ಪ್ರಯತ್ನಿಸಲಾಗುತ್ತದೆ.

ಒಂದು ತನಿಖೆ ಎರಡು ದಶಕಗಳಿಂದ ನಡೆದಿರುವುದನ್ನು ಜಗತ್ತಿನಲ್ಲಿ ಯಾವಾಗ ನೋಡಿದ್ದೀರಿ ಹೇಳಿ? ದೇಶದ ಸರ್ವೋಚ್ಛ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ. ವಿಚಾರಣಾ ನ್ಯಾಯಾಲಯ, ಹೈಕೋರ್ಟ್, ಎಸ್‌ಐಟಿ, ಸುಪ್ರೀಂ ಕೋರ್ಟ್‌ ಹೀಗೆ ಎಲ್ಲ ಹಂತದ ನಂತರ 20 ವರ್ಷಗಳ ತನಿಖೆಯು 2022 ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಕೊನೆಗೊಂಡಿತು. ಒಂದು ಸಾಕ್ಷ್ಯಚಿತ್ರವು 20 ವರ್ಷಗಳಿಂದ ಪ್ರಸ್ತುತವಾಗಿದೆ ಎಂದು ಅವರು ಭಾವಿಸಲಿಲ್ಲವೇ? ಇಲ್ಲ, ದೇಶದ ಅತ್ಯುನ್ನತ ನ್ಯಾಯಾಲಯದ ತೀರ್ಪಿನ ನಂತರ, ದೇಶದ ಸ್ವತಂತ್ರ ನ್ಯಾಯಾಲಯದ ಕಾರ್ಯವಿಧಾನವು 2022 ರಲ್ಲಿ ದೃಢವಾದ ತೀರ್ಮಾನಕ್ಕೆ ಬಂದ ನಂತರವೂ 20 ವರ್ಷಗಳು ಅವರಿಗೆ ಪ್ರಸ್ತುತವಲ್ಲ. ನೀವು ಬೇರೆ ರೀತಿಯಲ್ಲಿ ರಾಜಕೀಯವನ್ನು ಮಾಡಲು ಯೋಜಿಸುತ್ತೀರಿ ಮತ್ತು ರಾಷ್ಟ್ರೀಯತೆಯಲ್ಲಿ ನಂಬಿಕೆ ಇಟ್ಟಿರುವ ದೇಶದ ಪ್ರಜೆಯು ಸುಮ್ಮನಿರಬೇಕೆಂದು ನೀವು ಬಯಸುತ್ತೀರಾ?

ನೀವು ನಿಮಗೆ ಬೇಕಾದ ರೀತಿಯಲ್ಲಿ ಕಥೆಗಳನ್ನು ಹೇಳಬಹುದೇ? ನೀವು ಇಷ್ಟಪಡುವ ಮಾಹಿತಿಯನ್ನು ಈ ದೇಶದಲ್ಲಿ ಡಂಪ್ ಮಾಡಬಹುದೇ ಮತ್ತು ಅದನ್ನು ಎದುರಿಸುವ ಸ್ಥಿತಿಯಲ್ಲಿ ನಾವು ಇರುವುದಿಲ್ಲವೇ? ಆಂಟಿ ಡಂಪಿಂಗ್‌ನ ಹಿಂದಿನ ಕಾರಣ ಉದ್ಯಮಕ್ಕೆ ತಿಳಿದಿದೆ ಎಂದು ನನಗೆ ಖಾತ್ರಿಯಿದೆ. ಆಂಟಿ ಡಂಪಿಂಗ್ ಎನ್ನುವುದು ಅರ್ಥಶಾಸ್ತ್ರದಲ್ಲಿ ಒಂದು ಕಾರ್ಯವಿಧಾನವಾಗಿದ್ದು, ವಿಶ್ವದ ದೊಡ್ಡ ಕೈಗಾರಿಕಾ ಸಂಸ್ಥೆಯು ಡಂಪಿಂಗ್ ಮಾಡುವ ಮೂಲಕ ನಿರ್ದಿಷ್ಟ ದೇಶದಲ್ಲಿ ವಲಯದ ಬೆಳವಣಿಗೆಯನ್ನು ಮೊಳಕೆಯಲ್ಲೇ ತಡೆಯಲು ಬಯಸುತ್ತದೆ. ಆ ಸಮಯದಲ್ಲಿ 200,000 ಕಾರುಗಳನ್ನು ಕಡಿಮೆ ಬೆಲೆಯಲ್ಲಿ ಡಂಪಿಂಗ್ ಮಾಡಿದ್ದರೆ ಬಹುಶಃ ಮಾರುತಿ ಯಶಸ್ವಿಯಾಗುತ್ತಿರಲಿಲ್ಲ. ಅಂತೆಯೇ ಮಾಹಿತಿಯ ಡಂಪಿಂಗ್. ನಾವು ಅದನ್ನು ಸರಿ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ಸರಳವಾಗಿ ಹೇಳುವುದಾದರೆ, ಭೂತವು ಧರ್ಮಗ್ರಂಥಗಳ ಸಹಾಯವನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ನಮಗೆ ಹಾನಿ ಮಾಡುವ ನಿಮ್ಮ ಕೆಲಸಗಳಿಂದ ನಮ್ಮನ್ನು ಸಂಪೂರ್ಣವಾಗಿ ಮೂರ್ಖರಾಗಿಸಬಹುದು ಎಂದು ನೀವು ನಮ್ಮ ಬುದ್ಧಿಗೆ ಸವಾಲು ಹಾಕುತ್ತಿದ್ದೀರಿ, ಯುವ ಮನಸ್ಸುಗಳು ಇದರ ಬಗ್ಗೆ ಯೋಚಿಸಬೇಕೆಂದು, ಇದರತ್ತ ಗಮನ ಹರಿಸಬೇಕೆಂದು ನಾನು ಬಯಸುತ್ತೇನೆ.

ಒಬ್ಬ ಸಂಭಾವಿತ ವ್ಯಕ್ತಿ ಇದ್ದಾರೆ, ಅವರ ಪ್ರಕಾರ ಹಣವೇ ಖ್ಯಾತಿ; ಖ್ಯಾತಿಯ ಬಗ್ಗೆ ಅವರ ಎರಡನೆಯ ವಾದವೆಂದರೆ, ಆ ಹಣವನ್ನು ಆತ ಬಳಸುತ್ತಾರೆ. ಬ್ಯಾಂಕಿಂಗ್‌ನಂತಹ ಕೇಂದ್ರೀಯ ಸಂಸ್ಥೆಗಳನ್ನು ಎದುರಿಸಲು ಅವರು ಈ ಹಣವನ್ನು ಯಶಸ್ವಿಯಾಗಿ ಬಳಸುತ್ತಾರೆ ಎಂಬುದು ಅವರ ಖ್ಯಾತಿಯ ಬಗೆಗಿನ ಮೂರನೇ ವಾದ. ಅವರು ಭಾರತವು ಪ್ರಜಾಪ್ರಭುತ್ವದ ತಾಯಿ, ಅತಿದೊಡ್ಡ ಪ್ರಜಾಪ್ರಭುತ್ವ ಎಂಬುದನ್ನು ಮರೆಯುತ್ತಾರೆ. ಅದರ ಬಗ್ಗೆ ಯೋಚಿಸಲು ಅವರಿಗೆ ಎಷ್ಟು ಧೈರ್ಯವಿರಬೇಕು. ಅವರ ಬೆಂಬಲಿಗರು, ಅವರ ಫಲಾನುಭವಿಗಳು, ಅವರ ಹಣಕಾಸಿನ ಬೆಂಬಲಿಗರು ಅಥವಾ ಅವರ ಸ್ಲೀಪರ್ ಸೆಲ್‌ಗಳು ಇವೆಲ್ಲವನ್ನೂ ಬಹಿರಂಗಪಡಿಸಲು ನಮಗೆ ಸಂಪೂರ್ಣ ಬೆಂಬಲ ಬೇಕು.

ನಾನು ರಾಜಸಭೆಯ ಸಭಾಪತಿಯಾಗಿರುವ ಕಾರಣಕ್ಕಾಗಿ ನನಗಿಂತ ಹೆಚ್ಚು ಯಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಂಬಿಕೆ ಇರುವುದಿಲ್ಲ. ರಾಜ್ಯಸಭೆಯ ಪ್ರತಿಯೊಬ್ಬ ಸದಸ್ಯರಿಗೂ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ ದೊರೆಯುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಪ್ರಧಾನ ಬಾಧ್ಯತೆಯಾಗಿದೆ, ನಮ್ಮ ಸಂವಿಧಾನ ಅದನ್ನು ಖಾತರಿಪಡಿಸುತ್ತದೆ. 105 ನೇ ವಿಧಿಯು ಸಂಸತ್ತಿನ ಸದಸ್ಯರು ಸದನದಲ್ಲಿ ಏನು ಹೇಳಿದರೂ, ಯಾವುದೇ ಸಿವಿಲ್ ಕ್ರಮ ಅಥವಾ ಕ್ರಿಮಿನಲ್ ಕ್ರಮ ಜರುಗಿಸುವಂತಿಲ್ಲ ಎಂದು ಹೇಳುತ್ತದೆ. ಅವರು ಸಂಪೂರ್ಣ ರಕ್ಷಣೆ ಹೊಂದಿದ್ದಾರೆ ಮತ್ತು ಇದು ಒಂದು ದೊಡ್ಡ ಸವಲತ್ತು. 140 ಕೋಟಿ ಜನರಲ್ಲಿ ಒಬ್ಬರು ಅಥವಾ ಅನೇಕರು ಸದನದಲ್ಲಿ ಮಾಡಿದ ಸಂಸದರ ಹೇಳಿಕೆಯನ್ನು ಕೇಳಿದ್ದರೂ ಸಹ. ಅವರು ಅಸಹಾಯಕರು. ಸಂಸದರಿಗೆ ಸಾಂವಿಧಾನಿಕ ರಕ್ಷಣೆ ಇರುವುದರಿಂದ ಜನರು ನ್ಯಾಯಾಲಯದ ಮೊರೆ ಹೋಗುವಂತಿಲ್ಲ.

ನಿಮ್ಮ ಬಗ್ಗೆ, ನಿಮ್ಮ ಸಂಸ್ಥೆಯ ಬಗ್ಗೆ, ವ್ಯಕ್ತಿಯ ಬಗ್ಗೆ, ಉದ್ಯಮದ ಬಗ್ಗೆ ಪರಿಶೀಲಿಸದ ಮತ್ತು ದೃಢೀಕರಿಸದ ಯಾವುದೇ ಹೇಳಿಕೆ ನೀಡಲು ಆ ರಕ್ಷಣೆಯ ಅಡಿಯಲ್ಲಿ ಯಾರಿಗಾದರೂ ನಾನು ಅನುಮತಿ ನೀಡಬಹುದೇ.

ಅಪಪ್ರಚಾರದ ಭಾಗವಾಗಿದ್ದೀರಾ ಅಥವಾ ಹುರುಳಿಲ್ಲದ ಕತೆಯನ್ನು ಹೇಳುತ್ತಿದ್ದೀರಾ? ಇಲ್ಲ. ಈ ರಕ್ಷಣೆಯು ಒಂದು ದೊಡ್ಡ ಜವಾಬ್ದಾರಿ ಮತ್ತು ಹೊಣೆಗಾರಿಕೆಯೊಂದಿಗೆ ಇರುತ್ತದೆ. ರಾಜ್ಯಸಭೆಯು ಯಾರ ವಿರುದ್ಧವೂ ಆರೋಪಗಳನ್ನು ಮಾಡುವ ಅಖಾಡಾ ಆಗಲು ನಾನು ಬಿಡುವುದಿಲ್ಲ. ನೀವು ಯಾವುದೇ ಹೇಳಿಕೆಯನ್ನು ನೀಡಲು ಅರ್ಹರಾಗಿದ್ದೀರಿ, ಆದರೆ ಅದನ್ನು ದೃಢೀಕರಿಸಿ, ಅದರ ಬಗ್ಗೆ ಜವಾಬ್ದಾರರಾಗಿರಿ.

ಈಗ ನಾನು ಹಾಗೆ ಮಾಡಿದರೆ ಕೆಲವು ಖ್ಯಾತ ಪತ್ರಿಕೆಗಳು ಉಪರಾಷ್ಟ್ರಪತಿಯವರು ಬಾಯಿಮುಚ್ಚಿಸುತ್ತಿದ್ದಾರೆ ಎಂಬ ಸಂಪಾದಕೀಯಗಳನ್ನು ಬರೆಯುತ್ತವೆ.  ನೀವು ಅದರ ಬಗ್ಗೆ ಯೋಚಿಸಬೇಕೆಂದು ನಾನು ಬಯಸುತ್ತೇನೆ. ದೇಶದ ಅಥವಾ ನಿಮ್ಮಂತಹ ಒಂದು ಸಂಸ್ಥೆಯ/ವ್ಯಕ್ತಿಯ ಖ್ಯಾತಿಯನ್ನು ಹಾಳುಮಾಡಲು ಯಾವುದೇ ದೃಢೀಕರಣವಿಲ್ಲದ ಆರೋಪವನ್ನು ಮಾಡಲು ನಾನು ಅನುಮತಿಸಬೇಕೇ? ನಿರ್ದೇಶಕರು ಬೇರೆಯವರ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದಾರೆ ಮತ್ತು ಬೇರೆ ಯಾವುದಾದರೂ ಏಜೆನ್ಸಿಯವರು ಇದನ್ನು ಮಾಡುತ್ತಿದ್ದಾರೆ ಎಂದು ಯಾರಾದರೂ ಹೇಳಿದರೆ, ನಾನು ಅದಕ್ಕೆ ಅವಕಾಶ ನೀಡುತ್ತೇನೆಯೇ? ಮೊದಲು ಅದನ್ನು ಪ್ರಮಾಣೀಕರಿಸು ಎಂದು ಹೇಳುತ್ತೇನೆ. ಅದನ್ನು ದೃಢೀಕರಿಸದಿದ್ದಲ್ಲಿ, ಹಕ್ಕುಚ್ಯುತಿಯಾಗುತ್ತದೆ, ಎಂದರೆ ಆ ವ್ಯಕ್ತಿ ತನ್ನ ಸದಸ್ಯತ್ವವನ್ನು ಕಳೆದುಕೊಳ್ಳಬಹುದು.

ಮಾಧ್ಯಮಗಳು ಮತ್ತು ಬುದ್ಧಿಜೀವಿಗಳು ನನ್ನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ನಾನು ಸಭಾಪತಿಯಾಗಿ 140 ಕೋಟಿ ಜನರ ಹಿತಾಸಕ್ತಿಯನ್ನು ಮತ್ತು ಸಂಸದರಿಗೆ ನೀಡಿದ ಅಗಾಧ ಸಾಂವಿಧಾನಿಕ ಅಧಿಕಾರವನ್ನು ಸಮತೋಲನದಲ್ಲಿ ನೋಡಬೇಕಾಗಿದೆ.  2047 ರಲ್ಲಿ ನಾವು ಇಲ್ಲದಿರಬಹುದು, ಆದರೆ ನಿಮ್ಮ ಬುದ್ಧಿಶಕ್ತಿ, ಬದ್ಧತೆ ಮತ್ತು ನಿರ್ದೇಶನದಿಂದ ಭಾರತವು ಉತ್ತುಂಗದಲ್ಲಿರುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದ್ದರಿಂದ ನೀವು ಒಂದು ಹಂತದಲ್ಲಿ ನಿಮ್ಮ ಮನಸ್ಸನ್ನು ಸಕ್ರಿಯಗೊಳಿಸಬೇಕೆಂದು ನಾನು ಬಯಸುತ್ತೇನೆ.

ನಾವು ಶ್ರೇಷ್ಠ ಸಂವಿಧಾನವನ್ನು ಪಡೆದಿದ್ದೇವೆ. ಸಂವಿಧಾನ ಸಭೆ ಮೂರು ವರ್ಷಗಳ ಕಾಲ ವಿಭಜಿತ ಸಮಸ್ಯೆಗಳು, ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚೆ ನಡೆಸಿತು. ಆದರೆ ಒಂದೇ ಒಂದು ಅಡಚಣೆ ಅಥವಾ ಅಡ್ಡಿ ಇರಲಿಲ್ಲ; ಯಾವುದೇ ಕೂಗು ಇರಲಿಲ್ಲ, ಯಾವುದೇ ಫಲಕಗಳ ಪ್ರದರ್ಶನ ಇರಲಿಲ್ಲ; ಸದನದ ಬಾವಿಗೆ ಯಾರೂ ಬರಲಿಲ್ಲ. ಈಗ ನಾನು ರಾಜ್ಯಸಭಾ ಅಧ್ಯಕ್ಷನಾಗಿ, ಸಂಸದರಿಗೆ ಹೇಳುವುದಿಷ್ಟ, ಸರ್, ಪ್ರಜಾಪ್ರಭುತ್ವದ ಶ್ರೇಷ್ಠತೆ ಮತ್ತು ಪ್ರಜ್ಞೆಯನ್ನು ಹಾಳುಗೆಡವಬೇಡಿ. ಇದು ಪ್ರಜಾಪ್ರಭುತ್ವದ ದೇವಾಲಯ. ಇದು ಚರ್ಚೆ, ಸಂವಾದ, ಮಾತುಕತೆ ಮತ್ತು ಸಮಾಲೋಚನೆಗಾಗಿ ಇರುವುದು. ನಾನು ಅದನ್ನು ಅಡ್ಡಿ ಅಥವಾ ಅಡಚಣೆಯ ಅಖಾಡವನ್ನಾಗಿ ಮಾಡಬಹುದೇ? ಇಲ್ಲ ರಾಜ್ಯಸಭೆಯಲ್ಲಿ ಪ್ರತಿ ನಿಮಿಷವೂ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ನಿಮ್ಮ ಸಂಸ್ಥೆಯಲ್ಲಿ ಖರ್ಚು ಮಾಡುವ ಪ್ರತಿಯೊಂದು ಪೈಸೆಯೂ ರಾಷ್ಟ್ರ ಕಲ್ಯಾಣಕ್ಕಾಗಿ ಹೋಗುತ್ತದೆ, ಹಾಗೆಯೇ ರಾಜ್ಯಸಭೆಯಲ್ಲಿ ಪ್ರತಿ ಪೈಸೆಯೂ ಸಹ ರಾಷ್ಟ್ರೀಯ ಕಲ್ಯಾಣಕ್ಕಾಗಿ ಹೋಗಬೇಕು. ಆದರೆ ಜನರು ಇದನ್ನು “ಇವತ್ತು ಸದನದ ಕಲಾಪ ಇಲ್ಲ, ಗದ್ದಲವಾಯಿತು, ಘೋಷಣೆಗಳು ಮೊಳಗಿದವು” ಎಂದು ವಾಡಿಕೆಯಂತೆ ತೆಗೆದುಕೊಳ್ಳುತ್ತಾರೆ.

ಇಂತಹ ನಿರಾಶಾದಾಯಕ ಸನ್ನಿವೇಶವನ್ನು ತರುವವರ, ನಮ್ಮ ಪ್ರಜಾಪ್ರಭುತ್ವದ ದೇವಾಲಯಗಳನ್ನು ಕಲುಷಿತಗೊಳಿಸುತ್ತಿರುವವರ ಹೆಸರು ಯಾಕೆ ಹೇಳಬಾರದು. ಸದನದ ಕಲಾಪಗಳಿಗೆ ಅಡ್ಡಿಪಡಿಸಲು ನಾನು ಎಲ್ಲರಿಗೂ ಅವಕಾಶ ನೀಡಬೇಕು ಎಂದು ನೀವು ಭಾವಿಸಿದರೆ, ನಾನು ನಿಮಗೆ ಮತ್ತು ನಿಮ್ಮ ಆದೇಶಕ್ಕೆ ವಂದಿಸುತ್ತೇನೆ, ಆದರೆ ದೊಡ್ಡ ಪ್ರಜಾಪ್ರಭುತ್ವವು ಉತ್ಪಾದಕ ಸಮಯದಲ್ಲಿ ಸಂಸದೀಯ ವ್ಯವಹಾರಗಳನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಲು ಅರ್ಹವಾಗಿದೆ ಎಂದು ನಾವು ಬೇರೆ ರೀತಿಯಲ್ಲಿ ಯೋಚಿಸಬೇಕು.

ನಾನು ನಿಮ್ಮೊಂದಿಗೆ ಒಂದು ರಹಸ್ಯವನ್ನು ಹಂಚಿಕೊಳ್ಳುತ್ತೇನೆ, ನಾನು 1989 ರಲ್ಲಿ ಸಂಸದೀಯ ವ್ಯವಹಾರಗಳ ಸಚಿವನಾಗಿದ್ದೆ. ಸದನದಲ್ಲಿ ಯಾವುದೇ ಅಡಚಣೆ ಉಂಟಾದರೆ ಸರ್ಕಾರಗಳು ತುಂಬಾ ಸಂತೋಷಪಡುತ್ತವೆ, ಅಧ್ಯಯನದಲ್ಲಿ ನಂಬಿಕೆಯಿಲ್ಲದ ವಿದ್ಯಾರ್ಥಿಗಳು ಮುಷ್ಕರ ಮಾಡಿದರೆ ತುಂಬಾ ಸಂತೋಷಪಡುತ್ತಾರಲ್ಲ ಹಾಗೆ. ಅವರು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿಲ್ಲ, ಅವರು ಆ ಚರ್ಚೆಗೆ ಉತ್ತರಿಸಬೇಕಾಗಿಲ್ಲ. ಆದರೆ ನಾನು ಸರ್ಕಾರ ಅಥವಾ ಯಾವುದೇ ವಿರೋಧ ಪಕ್ಷದ ಪಾಲುದಾರನಲ್ಲ, ನಾನು ಅಲ್ಲಿ ನಿಮ್ಮನ್ನು ಪ್ರತಿನಿಧಿಸುತ್ತೇನೆ. ನಿಮ್ಮ ಭವಿಷ್ಯದಲ್ಲಿ ನಾನು ಪಾಲುದಾರನಾಗಿದ್ದೇನೆ. ನಾನು ನನ್ನ ಸ್ವಂತ ಜೀವನವನ್ನು ಉದಾಹರಣೆಯಾಗಿ ನೋಡುತ್ತೇನೆ, ನಾನು ಶಾಲೆಗೆ ಆರೇಳು ಕಿಲೋಮೀಟರ್ ನಡೆದು ಹೋಗುತ್ತಿದ್ದೆ.

ಆದುದರಿಂದ, ಕೆಲವರು ಸಭಾಪತಿಯವರು ವರ್ತನೆಯ ಬಗ್ಗೆ ಆಕ್ಷೇಪಿಸುತ್ತಾರೆ ಎಂದು ನನ್ನ ಸಾಂವಿಧಾನಿಕ ಕರ್ತವ್ಯಗಳನ್ನು ತ್ಯಜಿಸಲು ಸಾಧ್ಯವಿಲ್ಲ. ಆದರೆ ಈಗ ನನ್ನ ಕೆಲಸ ಸುಲಭವಾಗಿದೆ. ನಾನು ನಿಮಗೆ ಮನವರಿಕೆ ಮಾಡಲು ಬಯಸುದೆಂದರೆ, ಎಲ್ಲರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಪರಿಸರ ವ್ಯವಸ್ಥೆಯನ್ನು ರಚಿಸಲು ಈಗ ನಿಮ್ಮ ಕೈಯಲ್ಲಿಯೇ ಸಾಧನವಿದೆ.

ಸದನದಲ್ಲಿ ಅಡ್ಡಿ ಮಾಡುವವರು ನಮಗೆ ಬೇಡ. ಪ್ರಜಾಪ್ರಭುತ್ವದ ದೇವಾಲಯಗಳಲ್ಲಿ ಸಂವಾದ ಮತ್ತು ಚರ್ಚೆಯಲ್ಲಿ ತೊಡಗದ ಜನರು ನಮಗೆ ಬೇಡ. ಹಾಗಾಗಿ ನಿಮ್ಮಲ್ಲಿ ನನ್ನ ಮನವಿ ಏನೆಂದರೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು. ಆದ್ದರಿಂದ ಆರೋಗ್ಯಕರ ಸನ್ನಿವೇಶವು ಪ್ರೋತ್ಸಾಹ ಪಡೆಯುತ್ತದೆ.

ಐಐಎಂನ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ನಾನು ಒಂದು ಸಲಹೆಯನ್ನು ನೀಡುತ್ತೇನೆ. ಹಳೆಯ ವಿದ್ಯಾರ್ಥಿಗಳು ಬೆನ್ನೆಲುಬು ಇದ್ದಂತೆ. ಅವರು ಸಂಸ್ಥೆಯು ವಿಕಸನ ಹೊಂದಲು ಸಹಾಯ ಮಾಡುತ್ತಾರೆ; ಸಂಸ್ಥೆಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹುಡುಕಲು ಸಹಾಯ ಮಾಡುವುದು ಮಾತ್ರವಲ್ಲ; ಸಂಸ್ಥೆಯ ಖ್ಯಾತಿಯನ್ನು ಹೊರಗೆ ಪ್ರಚುರಪಡಿಸಲು ಸಹಾಯ ಮಾಡುವುದು ಮಾತ್ರವಲ್ಲ; ಅವರು ದೊಡ್ಡ ರಾಷ್ಟ್ರೀಯ ಹಿತಾಸಕ್ತಿಯನ್ನೂ ಸಹ ಪೂರೈಸುತ್ತಾರೆ. ಹಾಗಾಗಿ ಈಗ ಹಳೆಯ ವಿದ್ಯಾರ್ಥಿಗಳ ಸಂಸ್ಕೃತಿಯು ಎಲ್ಲಾ ಸಂಸ್ಥೆಗಳಿಂದ ಪ್ರಾರಂಭವಾಗಬೇಕು ಎಂಬುದು ನನ್ನ ಸಲಹೆ. ಪ್ರಧಾನ ಸಂಸ್ಥೆಗಳು ಹಳೆಯ ವಿದ್ಯಾರ್ಥಿಗಳ ಒಕ್ಕೂಟವನ್ನು ಹೊಂದಿರಬೇಕು, ಅದು ಜಗತ್ತಿನಲ್ಲಿ ಅಪ್ರತಿಮವಾದ ಚಿಂತಕರ ಚಾವಡಿಯಾಗಿರುತ್ತದೆ. ನಾವು ಹಳೆಯ ವಿದ್ಯಾರ್ಥಿಗಳ ಸಂಘಗಳ ಒಕ್ಕೂಟವನ್ನು ಹೊಂದಿರಬೇಕು. ಇದು ಎರಡು ಉದ್ದೇಶಕ್ಕೆ ಸಹಾಯ ಮಾಡುತ್ತದೆ (1) ಅವರು ತಮ್ಮ ಆಲೋಚನೆಗಳನ್ನು ಹೇಳಲು ಮತ್ತು ಕೆಲವು ತೀರ್ಮಾನಗಳಿಗೆ ಬರಲು ಸಾಧ್ಯವಾಗುತ್ತದೆ ಮತ್ತು (2), ಅವರು ಇತರರನ್ನು ಅದೇ ರೀತಿ ಮಾಡಲು ಪ್ರೇರೇಪಿಸುತ್ತಾರೆ.

ನನ್ನ ಮಾತುಗಳನ್ನು ಮುಗಿಸುವ ಮೊದಲು, ನನ್ನ ಬಳಿ ಒಂದು ಸಾಧಾರಣ ಆಲೋಚನೆ ಇದೆ ಮತ್ತು ಅದನ್ನು ಕಾರ್ಯಗತಗೊಳಿಸುವ ರಾಜ್ಯಸಭೆಯ ಕಾರ್ಯದರ್ಶಿಯೂ ಇದ್ದಾರೆ. ನಿಮ್ಮಂತಹ ಸಂಸ್ಥೆಗಳ ನಿರ್ದೇಶಕರು ಆಯ್ಕೆ ಮಾಡಿದ ವಿದ್ಯಾರ್ಥಿಗಳನ್ನು ನಾವು ರಾಜ್ಯಸಭೆಗೆ (ಸಂಸತ್ತು) ಭೇಟಿ ನೀಡಲು ಮತ್ತು ಎರಡು ದಿನಗಳು ಅಥವಾ ಮೂರು ದಿನಗಳ ಕಾಲ ಚರ್ಚೆಗಳನ್ನು ನೋಡಲು ಆಹ್ವಾನಿಸುತ್ತೇವೆ. ನಿಮ್ಮ ವಾಸ್ತವ್ಯವನ್ನು ಸಾಧ್ಯವಾದಷ್ಟು ಆರಾಮದಾಯಕವಾಗಿಸಲು ಪ್ರಯತ್ನಿಸುತ್ತೇವೆ. ತದನಂತರ ನೀವು ನಿರ್ಣಾಯಕ ಪಾತ್ರವನ್ನು ವಹಿಸಲು ಸಾಧ್ಯವಾಗುತ್ತದೆ. ನಾನು ಏಕೆ ಹೇಳುತ್ತೇನೆ ಎಂದರೆ ನಿಮ್ಮ ನಿರೀಕ್ಷೆಗಳು ತುಂಬಾ ದೊಡ್ಡದಾಗಿವೆ ಮತ್ತು ಆ ಸನ್ನಿವೇಶವು ಕುಸಿಯುತ್ತಿದೆ ಎಂದು ನೀವು ಕಂಡುಕೊಂಡಾಗ ಅತಿದೊಡ್ಡ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವದ ತಾಯಿಯು, ಜನರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ನನಸಾಗಿಸುವ ಸಂಸತ್ತನ್ನು ಹೊಂದಿದೆ ಮತ್ತು ನೀವು ಅವರ ಯೋಧರಾಗಿರಬೇಕು ಎಂಬ ಕ್ಷಣವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.

ಈ ಉತ್ತಮ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ನಿರ್ದೇಶಕರಿಗೆ ಕೃತಜ್ಞನಾಗಿದ್ದೇನೆ ಮತ್ತು ಈ ಕಾರ್ಯಕ್ರಮದ ಫಲಿತಾಂಶ ಉತ್ತಮವಾಗಿದೆ, ಇದನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ ಎಂಬ ವಿಶ್ವಾಸವಿದೆ. ನಿಮಗೆ ಶುಭವಾಗಲಿ. ಧನ್ಯವಾದ

ಜೈ ಹಿಂದ್!

****



(Release ID: 1903510) Visitor Counter : 113


Read this release in: English , Urdu , Hindi