ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಮಧ್ಯಪ್ರದೇಶದ ಸತ್ನಾದಲ್ಲಿ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಿದರು.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ನಾಗರಿಕನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆರೋಗ್ಯ ಕ್ಷೇತ್ರಕ್ಕೆ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ, ಅವರು ಸ್ವಚ್ಚತಾ ಅಭಿಯಾನ, ಉಜ್ವಲ ಯೋಜನೆ, ಯೋಗ, ಫಿಟ್ ಇಂಡಿಯಾ ಆಂದೋಲನ, ಖೇಲೋ ಇಂಡಿಯಾ ಆಂದೋಲನ, ಆಯುಷ್ಮಾನ್ ಭಾರತ್, ಜನೌಷಧಿ ಕೇಂದ್ರಗಳಿಗೆ  ನೀಲನಕ್ಷೆಯನ್ನು ಸಿದ್ಧಪಡಿಸಿದ್ದಾರೆ ಮಾತ್ರವಲ್ಲ ಪ್ರತೀ ಜಿಲ್ಲೆಗೂ ವೈದ್ಯಕೀಯ ಕಾಲೇಜು ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಿದ್ದಾರೆ.

ಹಿಂದಿನ ವರ್ಷದ 94,452 ಕೋಟಿ ರೂ.ಗಳಿಗೆ ಹೋಲಿಸಿದರೆ ಈ ಬಜೆಟ್ ನಲ್ಲಿ 2 ಲಕ್ಷ 30 ಸಾವಿರ ಕೋಟಿ ರೂ.ಗಳ ಹೆಚ್ಚಳವು ಶ್ರೀ ಮೋದಿ ಅವರು ಆರೋಗ್ಯ ಕ್ಷೇತ್ರಕ್ಕೆ ಎಷ್ಟು ಆದ್ಯತೆ ನೀಡುತ್ತಾರೆ ಎಂಬುದನ್ನು ತೋರಿಸುತ್ತದೆ.

ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಕಾಲೇಜು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಗಲಿದೆ

ಮೋದಿ ಸರ್ಕಾರದ ಕೇಂದ್ರ ಪ್ರಾಯೋಜಿತ ಯೋಜನೆಯಡಿ ಮಧ್ಯಪ್ರದೇಶದಲ್ಲಿ ಅನೇಕ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು, ಅದರ ನಂತರ ಮಧ್ಯಪ್ರದೇಶದ ಒಂದೇ ಒಂದು ಮಗು ವೈದ್ಯಕೀಯ ಶಿಕ್ಷಣಕ್ಕಾಗಿ ಹೊರಗೆ ಹೋಗಬೇಕಾಗಿಲ್ಲ

ಮಧ್ಯಪ್ರದೇಶವು ಆರೋಗ್ಯ ಕ್ಷೇತ್ರದಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ, ಇಂದು ಅದು 38 ವೈದ್ಯಕೀಯ ಕಾಲೇಜುಗಳು, 2055 ಎಂಬಿಬಿಎಸ್ ಸೀಟುಗಳನ್ನು ಹೊಂದಿದೆ, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯ ನಂತರ ಈ ಸಂಖ್ಯೆ 3700 ಕ್ಕಿಂತ ಹೆಚ್ಚಾಗುತ್ತದೆ.

ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯುತ್ತಿದೆ, ರಕ್ಷಣೆ, ಆಂತರಿಕ ಭದ್ರತೆ, ಆರ್ಥಿಕತೆ, ಮೂಲಸೌಕರ್ಯ, ರಫ್ತು ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ದೇಶ ಗಮನಾರ್ಹ ಪ್ರಗತಿ ಸಾಧಿಸಿದೆ.

Posted On: 24 FEB 2023 8:49PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮಧ್ಯಪ್ರದೇಶದ ಸತ್ನಾದಲ್ಲಿ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು, ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಕಾಲೇಜು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಆಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸತ್ನಾದಲ್ಲಿನ ಈ ವೈದ್ಯಕೀಯ ಕಾಲೇಜಿನ ನಂತರ  ಮೂರನೇ ಹಂತದಲ್ಲಿ ರಾಜ್ ಗಢ, ಮಾಂಡ್ಲಾ, ನೀಮುಚ್, ಮಂದಸೌರ್, ಶಿಯೋಪುರ್ ಮತ್ತು ಸಿಮ್ರಗುಲಿಯಲ್ಲಿ 60 ರಿಂದ 40 ರ ಅನುಪಾತದಲ್ಲಿ ಭಾರತ ಸರ್ಕಾರದ ಕೇಂದ್ರ ಪ್ರಾಯೋಜಿತ ಯೋಜನೆಯಡಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದೂ ಅವರು ಹೇಳಿದರು. ಯೋಜನೆಯ ಅನುಷ್ಠಾನದ ನಂತರ, ಒಂದೇ ಒಂದು ಮಗುವೂ ವೈದ್ಯಕೀಯ ಶಿಕ್ಷಣಕ್ಕಾಗಿ ಮಧ್ಯಪ್ರದೇಶದಿಂದ ಹೊರಗೆ ಹೋಗಬೇಕಾಗಿಲ್ಲ. ಮೊದಲ ಹಂತಕ್ಕೆ 300 ಕೋಟಿ ರೂ., ಎರಡನೇ ಹಂತಕ್ಕೆ 250 ಕೋಟಿ ರೂ. ಸೇರಿದಂತೆ ಒಟ್ಟು 550 ಕೋಟಿ ರೂ.ಗಳನ್ನು ಸರಕಾರ ಖರ್ಚು ಮಾಡಲಿದೆ ಎಂದೂ ಅವರು ವಿವರಿಸಿದರು. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ನಾಗರಿಕನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆರೋಗ್ಯ ಕ್ಷೇತ್ರಕ್ಕೆ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸ್ವಚ್ಛತಾ ಅಭಿಯಾನ, ಉಜ್ವಲ ಯೋಜನೆ, ಯೋಗ, ಫಿಟ್ ಇಂಡಿಯಾ ಆಂದೋಲನ, ಖೇಲೋ ಇಂಡಿಯಾ ಆಂದೋಲನ, ಆಯುಷ್ಮಾನ್ ಭಾರತ್ ಮತ್ತು ಜನೌಷಧಿ ಕೇಂದ್ರಗಳ ನೀಲನಕ್ಷೆಯನ್ನು ಅವರು ಸಿದ್ಧಪಡಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲು ಅವರು ಪ್ರಾರಂಭಿಸಿದ್ದಾರೆ. ಕೊರೋನಾ ಜಾಗತಿಕ  ಸಾಂಕ್ರಾಮಿಕ ರೋಗದ ನಂತರ, ಪ್ರಧಾನಿ ಮೋದಿ ಅವರು 60 ಸಾವಿರ ಕೋಟಿ ರೂ.ಗಳ ಹಂಚಿಕೆಯ ಮೂಲಕ ಇಡೀ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಿದರು. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಕ್ಷೇಮ ಕೇಂದ್ರಗಳನ್ನು ತೆರೆದಿದ್ದಾರೆ. ಹಿಂದಿನ ವರ್ಷದ 94,452 ಕೋಟಿ ರೂ.ಗಳಿಗೆ ಹೋಲಿಸಿದರೆ ಈ ಬಜೆಟ್ ನಲ್ಲಿ 2 ಲಕ್ಷ 30 ಸಾವಿರ ಕೋಟಿ ರೂ.ಗಳ ಹೆಚ್ಚಳವು ಶ್ರೀ ಮೋದಿ ಅವರು ಆರೋಗ್ಯ ಕ್ಷೇತ್ರಕ್ಕೆ ಎಷ್ಟು ಆದ್ಯತೆ ನೀಡುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದೂ ಶ್ರೀ ಅಮಿತ್ ಶಾ ಅವರು ಹೇಳಿದರು.

ಮಧ್ಯಪ್ರದೇಶ ಒಂದರಲ್ಲೇ ಪ್ರಸ್ತುತ 38 ವೈದ್ಯಕೀಯ ಕಾಲೇಜುಗಳಿವೆ ಮತ್ತು ಇದು ದೊಡ್ಡ ಸಾಧನೆ ಎಂದು ಶ್ರೀ ಅಮಿತ್ ಶಾ ಬಣ್ಣಿಸಿದರು. 2013-14ರ ಮೊದಲು ಇಡೀ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 2021-22ರ ವೇಳೆಗೆ ಈ ಸಂಖ್ಯೆ 596 ಕ್ಕೆ ಏರಿದೆ ಎಂದು ಅವರು ಹೇಳಿದರು. 2013-14 ರ ಮೊದಲು, ಎಂಬಿಬಿಎಸ್ ಸೀಟುಗಳ ಸಂಖ್ಯೆ 51,300 ಆಗಿತ್ತು, ಇದು 2021-22 ರ ವೇಳೆಗೆ ಕಳೆದ 8 ವರ್ಷಗಳಲ್ಲಿ ಸುಮಾರು 90,000 ಸೀಟುಗಳಿಗೆ ಏರಿದೆ. ಇದರೊಂದಿಗೆ, ಸುಮಾರು 31 ಸಾವಿರದಷ್ಟಿದ್ದ ಸ್ನಾತಕೋತ್ತರ ಪದವಿ (ಪಿಜಿ) ಸೀಟುಗಳ ಸಂಖ್ಯೆ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ 60,000 ಕ್ಕೂ ಹೆಚ್ಚಾಗಿದೆ. ದೇಶಾದ್ಯಂತ 22 ಹೊಸ ಎ.ಐ.ಐ.ಎಂ.ಎಸ್.(ಏಮ್ಸ್) ಗಳನ್ನು ಸ್ಥಾಪಿಸಲಾಗುತ್ತಿದೆ. ಮಧ್ಯಪ್ರದೇಶದಲ್ಲಿಯೂ ಆರೋಗ್ಯ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳನ್ನು ಸಾಧಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಮಧ್ಯಪ್ರದೇಶ ಒಂದರಲ್ಲೇ 2,055 ಎಂಬಿಬಿಎಸ್ ಸೀಟುಗಳಿದ್ದು, ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣದ ನಂತರ ಇದು 3,700 ಕ್ಕೂ ಹೆಚ್ಚಾಗುತ್ತದೆ. ಇಂದೋರ್, ಗ್ವಾಲಿಯರ್, ಜಬಲ್ಪುರ್ ಮತ್ತು ರೇವಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗಿದೆ ಎಂದೂ ಅವರು ವಿವರಿಸಿದರು. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2047 ರಲ್ಲಿ ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷದಲ್ಲಿ ನಮ್ಮ ದೇಶವು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಅಗ್ರಸ್ಥಾನದಲ್ಲಿರಬೇಕು  ಎಂಬ ಗುರಿಯನ್ನು ಭಾರತೀಯರಿಗೆ ನಿಗದಿಪಡಿಸಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 9 ವರ್ಷಗಳಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದೂ ಅವರು ನುಡಿದರು. .

****



(Release ID: 1902314) Visitor Counter : 123


Read this release in: English , Hindi , Gujarati