ಪ್ರಧಾನ ಮಂತ್ರಿಯವರ ಕಛೇರಿ

​​​​​​​ಬಸ್ತಿ ಜಿಲ್ಲೆಯಲ್ಲಿ 2022-23ನೇ ಸಾಲಿನ ಸಾನ್ಸದ್ ಖೇಲ್ ಮಹಾಕುಂಭದ ಎರಡನೇ ಹಂತವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಪ್ರಧಾನಿಮಂತ್ರಿಗಳು


"ಯಶಸ್ವಿ ಕ್ರೀಡಾ ಪಟುಗಳು ತಮ್ಮ ಗುರಿಯ ಮೇಲೆ ಗಮನವನ್ನು ಕೇಂದ್ರೀಕರಿಸಿ, ಅವರ ಹಾದಿಯಲ್ಲಿರುವ ಪ್ರತಿಯೊಂದು ಅಡೆತಡೆಗಳನ್ನು ನಿವಾರಿಸುತ್ತಾರೆ"

"ಖೇಲ್ ಮಹಾಕುಂಭದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಸಂಸದರು ಹೊಸ ಪೀಳಿಗೆಯ ಭವಿಷ್ಯವನ್ನು ರೂಪಿಸುತ್ತಿದ್ದಾರೆ"

"ಪ್ರಾದೇಶಿಕ ಪ್ರತಿಭೆಗಳನ್ನು ಶೋಧಿಸಿ ಅವರನ್ನು ಬಳಸಿಕೊಳ್ಳುವಲ್ಲಿ ಸಾನ್ಸದ್ ಖೇಲ್ ಮಹಾಕುಂಭವು ಪ್ರಮುಖ ಪಾತ್ರ ವಹಿಸುತ್ತದೆ"

"ಕ್ರೀಡೆಯು ಸಮಾಜದಲ್ಲಿ ಸೂಕ್ತ ಗೌರವವನ್ನು ಪಡೆಯುತ್ತಿದೆ"

"ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ ಸುಮಾರು 500 ಒಲಿಂಪಿಕ್ಸ್ ಸಂಭಾವ್ಯರನ್ನು ಸಜ್ಜುಗೊಳಿಸಲಾಗುತ್ತಿದೆ"

"ಸ್ಥಳೀಯ ಮಟ್ಟದಲ್ಲಿ ರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ"

"ಯೋಗದಿಂದ, ನಿಮ್ಮ ದೇಹ ಆರೋಗ್ಯಕರ ಮತ್ತು ನಿಮ್ಮ ಮನಸ್ಸು ಜಾಗೃತವಾಗಿರುತ್ತದೆ"

Posted On: 18 JAN 2023 2:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಾನ್ಸದ್ ಖೇಲ್ ಮಹಾಕುಂಭ 2022-23ರ ಎರಡನೇ ಹಂತವನ್ನು ಉದ್ಘಾಟಿಸಿದರು. ಸಾನ್ಸದ್ ಖೇಲ್ ಮಹಾಕುಂಭವನ್ನು 2021ರಿಂದ ಬಸ್ತಿ ಜಿಲ್ಲೆಯ ಸಂಸದ ಶ್ರೀ ಹರೀಶ್ ದ್ವಿವೇದಿಯವರು ಬಸ್ತಿ ಜಿಲ್ಲೆಯಲ್ಲಿ ಆಯೋಜಿಸುತ್ತಿದ್ದಾರೆ. ಖೇಲ್ ಮಹಾಕುಂಭವು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಖೋ ಖೋ, ಬ್ಯಾಸ್ಕೆಟ್ ಬಾಲ್, ಫುಟ್ಬಾಲ್, ಹಾಕಿ, ವಾಲಿಬಾಲ್, ಹ್ಯಾಂಡ್ ಬಾಲ್, ಚೆಸ್, ಕೇರಂ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮುಂತಾದ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಇದಲ್ಲದೆ, ಖೇಲ್ ಮಹಾಕುಂಭದಲ್ಲಿ ಪ್ರಬಂಧ ಬರೆಯುವುದು, ಚಿತ್ರಕಲೆ, ರಂಗೋಲಿ ಬಿಡಿಸುವುದು ಮುಂತಾದ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿತ್ತು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಬಸ್ತಿಯು ಮಹರ್ಷಿ ವಸಿಷ್ಠರ ಪವಿತ್ರ ಭೂಮಿಯಾಗಿದ್ದು, ಇದು ಶ್ರಮ ಮತ್ತು ಧ್ಯಾನ, ತಪಸ್ಸು ಮತ್ತು ತ್ಯಾಗದಿಂದ ಕೂಡಿದೆ ಎಂದು ಹೇಳಿದರು. ಧ್ಯಾನ ಮತ್ತು ತಪಸ್ಸಿನಿಂದ ತುಂಬಿದ ಕ್ರೀಡಾ ಪಟುವಿನ ಜೀವನಕ್ಕೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಯಶಸ್ವಿ ಕ್ರೀಡಾ ಪಟುಗಳು ತಮ್ಮ ಗುರಿಯತ್ತ ಗಮನ ಹರಿಸಿ ತಮ್ಮ ಹಾದಿಯಲ್ಲಿರುವ ಪ್ರತಿಯೊಂದು ಅಡೆತಡೆಗಳನ್ನು ನಿವಾರಿಸುತ್ತಾರೆ ಎಂದು ಹೇಳಿದರು.

ಖೇಲ್ ಮಹಾಕುಂಭದ ಶ್ರೇಣಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಕ್ರೀಡೆಯಲ್ಲಿ ಭಾರತದ ಸಾಂಪ್ರದಾಯಿಕ ಪರಿಣತಿಯು ಇಂತಹ ಕಾರ್ಯಕ್ರಮಗಳ ಮೂಲಕ ಹೊಸ ಉನ್ನತಿಯನ್ನು ಪಡೆಯುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಸುಮಾರು 200 ಸಂಸದರು ತಮ್ಮ ಕ್ಷೇತ್ರಗಳಲ್ಲಿ ಇಂತಹ ಖೇಲ್ ಮಹಾಕುಂಭವನ್ನು ಆಯೋಜಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಕಾಶಿಯ ಸಂಸತ್ ಸದಸ್ಯರಾಗಿ ಶ್ರೀ ಮೋದಿಯವರು ವಾರಣಾಸಿಯಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು. "ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಸದರು ಹೊಸ ತಲೆಮಾರಿನ ಭವಿಷ್ಯವನ್ನು ರೂಪಿಸುತ್ತಿದ್ದಾರೆ" ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

ಈ ಕ್ರೀಡಾಕೂಟಗಳ ಮೂಲಕ ಪ್ರದರ್ಶನ ನೀಡುವ ಕ್ರೀಡಾಪಟುಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ ಹೆಚ್ಚಿನ ತರಬೇತಿಗಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಖೇಲ್ ಮಹಾಕುಂಭ ಮೇಳದಲ್ಲಿ ಸುಮಾರು 40,000 ಕ್ರೀಡಾಪಟುಗಳು, ಅಂದರೆ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿರುವುದಕ್ಕೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. 

ಖೋ ಖೋ ಆಟವನ್ನು ವೀಕ್ಷಿಸಿದ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ನಮ್ಮ ನೆಲದ ಹೆಣ್ಣುಮಕ್ಕಳು ಉತ್ತಮ ಕೌಶಲ್ಯ, ಚತುರತೆ ಮತ್ತು ತಂಡದ ಮನೋಭಾವದಿಂದ ಈ ಆಟವನ್ನು ಆಡಿದರು. ಆಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಅವರ ಸಾಧನೆಗೆ ಶುಭ ಹಾರೈಸಿದರು.

ಸಾನ್ಸದ್ ಖೇಲ್ ಮಹಾಕುಂಭದಲ್ಲಿ ಬಾಲಕಿಯರ ಭಾಗವಹಿಸುವಿಕೆಯ ಪ್ರಮುಖ ಅಂಶವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಬಸ್ತಿ, ಪೂರ್ವಾಂಚಲ, ಉತ್ತರ ಪ್ರದೇಶ ಮತ್ತು ಭಾರತದಾದ್ಯಂತದ ಹೆಣ್ಣುಮಕ್ಕಳು ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮಹಿಳಾ ಅಂಡರ್-19 ಟಿ-20 ಕ್ರಿಕೆಟ್ ವಿಶ್ವಕಪ್ ಅನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ತಂಡದ ನಾಯಕಿ ಕುಮಾರಿ ಶೆಫಾಲಿ ವರ್ಮಾ ಅವರು ಸತತ ಐದು ಬೌಂಡರಿಗಳನ್ನು ಬಾರಿಸಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಒಂದು ಓವರ್ ನಲ್ಲಿ 26 ರನ್ ಗಳಿಸಿದ ಅದ್ಭುತ ಸಾಧನೆಯನ್ನು ಶ್ಲಾಘಿಸಿದರು. ಇಂತಹ ಪ್ರತಿಭೆಗಳು ದೇಶದ ಮೂಲೆ ಮೂಲೆಗಳಲ್ಲಿಯೂ ದೊರೆಯುತ್ತಾರೆ. ಸಾನ್ಸದ್ ಖೇಲ್ ಮಹಾಕುಂಭವು ಅವರನ್ನು ಹುಡುಕಿ ಬಳಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಕ್ರೀಡೆಯನ್ನು 'ಪಠ್ಯೇತರ' ಚಟುವಟಿಕೆ ಎಂದು ಪರಿಗಣಿಸಿ, ಹೆಚ್ಚಿನ ಮೌಲ್ಯವಿಲ್ಲದ ಹವ್ಯಾಸ ಅಥವಾ ಚಟುವಟಿಕೆ ಎಂದು ಕಡೆಗಣಿಸಿದ ಸಮಯವನ್ನು ಪ್ರಧಾನಿ ನೆನಪಿಸಿಕೊಂಡರು. ಈ ಮನಸ್ಥಿತಿಯು ದೇಶಕ್ಕೆ ಬಹಳ ಹಾನಿಕಾರಕವಾಗಿದ್ದು, ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಹೊರಗೆಡುಹದಿರಲು ಕಾರಣವಾಯಿತು. ಕಳೆದ 8-9 ವರ್ಷಗಳಲ್ಲಿ, ದೇಶವು ಈ ನ್ಯೂನತೆಯನ್ನು ನಿವಾರಿಸಿ, ಕ್ರೀಡೆಗಳಿಗೆ ಉತ್ತಮ ವಾತಾವರಣವನ್ನು ಸೃಷ್ಟಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಇದು ಅನೇಕ ಯುವಕರು ಕ್ರೀಡೆಯನ್ನು ಇಂದು ವೃತ್ತಿಯಾಗಿ ತೆಗೆದುಕೊಳ್ಳಲು ಕಾರಣವಾಗಿದೆ. ಇದು ಸಾರ್ವಜನಿಕರಲ್ಲಿ ಫಿಟ್ನೆಸ್, ಆರೋಗ್ಯ, ತಂಡದ ಏಕತೆ, ಉದ್ವೇಗ ನಿವಾರಣೆ, ವೃತ್ತಿಪರ ಯಶಸ್ಸು ಮತ್ತು ವೈಯಕ್ತಿಕ ಸುಧಾರಣೆಯಂತಹ ಪ್ರಯೋಜನಗಳಿಗೆ ಕಾರಣವಾಗಿದೆ.

ಕ್ರೀಡೆಗೆ ಸಂಬಂಧಿಸಿದಂತೆ ಜನರಲ್ಲಿ ಇರುವ ಆಲೋಚನಾ ಪ್ರಕ್ರಿಯೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಬದಲಾವಣೆಯ ಪರಿಣಾಮಗಳನ್ನು ದೇಶದ ಕ್ರೀಡಾ ಸಾಧನೆಗಳ ಮೂಲಕ ನೋಡಬಹುದು ಎಂದರು. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ರಾಷ್ಟ್ರದ ಐತಿಹಾಸಿಕ ಸಾಧನೆಯ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಭಾರತದ ಸಾಧನೆಯು ವಿಶ್ವದಲ್ಲಿ ಚರ್ಚೆಯ ವಿಷಯವಾಗುತ್ತಿದೆ ಎಂದರು. ಕ್ರೀಡೆಗೆ ಸಮಾಜದಲ್ಲಿ ಸೂಕ್ತ ಗೌರವ ಸಿಗುತ್ತಿದೆ, ಇದು ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಮತ್ತು ಇತರ ಸ್ಪರ್ಧೆಗಳಲ್ಲಿ ಅಭೂತಪೂರ್ವ ಸಾಧನೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.

"ಇದು ಕೇವಲ ಆರಂಭ, ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ," ಎಂದ ಪ್ರಧಾನಿಯವರು ಮುಂದುವರಿಸಿ, "ಕ್ರೀಡೆ ಎಂದರೆ ಕೌಶಲ್ಯ ಮತ್ತು ಚಾರಿತ್ರ್ಯ, ಇದು ಪ್ರತಿಭೆ ಮತ್ತು ಸಂಕಲ್ಪ" ಎಂದು ಹೇಳಿದರು. ಕ್ರೀಡೆಗಳ ಅಭಿವೃದ್ಧಿಯಲ್ಲಿ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಆಟಗಾರರಿಗೆ ತಮ್ಮ ತರಬೇತಿಯನ್ನು ಪರೀಕ್ಷಿಸಲು ಕ್ರೀಡಾ ಸ್ಪರ್ಧೆಗಳಲ್ಲಿ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು. ವಿವಿಧ ಹಂತಗಳು ಮತ್ತು ಪ್ರದೇಶಗಳಲ್ಲಿ ನಡೆಯುವ ಕ್ರೀಡಾ ಸ್ಪರ್ಧೆಗಳು ಆಟಗಾರರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿ, ಆ ಮೂಲಕ ತಮ್ಮದೇ ಆದ ತಂತ್ರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಹಾಗೂ ನ್ಯೂನತೆಗಳನ್ನು ಗುರುತಿಸಿ ಸುಧಾರಣೆಗೆ ಅವಕಾಶವನ್ನು ಒದಗಿಸಲು ತರಬೇತುದಾರರಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ವಿವರಿಸಿದರು. ಯುವ ಜನತೆ, ಯೂನಿವರ್ಸಿಟಿ ಮತ್ತು ಚಳಿಗಾಲದ ಆಟಗಳು ಕ್ರೀಡಾಪಟುಗಳಿಗೆ ಸುಧಾರಿಸಲು ಅನೇಕ ಅವಕಾಶಗಳನ್ನು ನೀಡುತ್ತಿವೆ. ಖೇಲೋ ಇಂಡಿಯಾದ ಮೂಲಕ 2500 ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂ.ಗಳಂತೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ಅಡಿಯಲ್ಲಿ ಸುಮಾರು 500 ಒಲಿಂಪಿಕ್ಸ್ ಸಂಭಾವ್ಯರನ್ನು ಸಜ್ಜುಗೊಳಿಸಲಾಗುತ್ತಿದೆ. ಅಂತರರಾಷ್ಟ್ರೀಯ ತರಬೇತಿಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಕೆಲವು ಆಟಗಾರರು 2.5 ಕೋಟಿಯಿಂದ 7 ಕೋಟಿಯವರೆಗೆ ನೆರವು ಪಡೆದಿದ್ದಾರೆ.

ಕ್ರೀಡಾ ವಲಯ ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸುವಲ್ಲಿ ಕೇಂದ್ರ ಸರ್ಕಾರದ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಮ್ಮ ಆಟಗಾರರ ಆಯ್ಕೆಯಲ್ಲಿ ಸಾಕಷ್ಟು ಸಂಪನ್ಮೂಲಗಳು, ತರಬೇತಿ, ತಾಂತ್ರಿಕ ಜ್ಞಾನ, ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದರು. ಈ ಪ್ರದೇಶದಲ್ಲಿ ಕ್ರೀಡಾ ಮೂಲಸೌಕರ್ಯಗಳಲ್ಲಿನ ಸುಧಾರಣೆಗಳನ್ನು ಗಮನಿಸಿದ ಪ್ರಧಾನಮಂತ್ರಿಯವರು, ಬಸ್ತಿ ಮತ್ತು ಮತ್ತಿತರ ಜಿಲ್ಲೆಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ತರಬೇತುದಾರರನ್ನು ಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ದೇಶಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಖೇಲೋ ಇಂಡಿಯಾ ಜಿಲ್ಲಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಪೈಕಿ 750 ಕ್ಕೂ ಹೆಚ್ಚು ಕೇಂದ್ರಗಳು ಈಗಾಗಲೆ ಪೂರ್ಣಗೊಂಡಿವೆ ಎಂದು ಅವರು ಹೇಳಿದರು. ಆಟಗಾರರು ತರಬೇತಿ ಪಡೆಯಲು ಯಾವುದೇ ಸಮಸ್ಯೆಗಳನ್ನು ಎದುರಾಗದಂತೆ ದೇಶಾದ್ಯಂತದ ಎಲ್ಲ ಆಟದ ಮೈದಾನಗಳ ಜಿಯೋ-ಟ್ಯಾಗಿಂಗ್ ಅನ್ನು ಸಹ ಮಾಡಲಾಗುತ್ತಿದೆ. ಈಶಾನ್ಯದ ಯುವಕರಿಗಾಗಿ ಮಣಿಪುರದಲ್ಲಿ ಸರ್ಕಾರವು ಕ್ರೀಡಾ ವಿಶ್ವವಿದ್ಯಾಲಯವನ್ನು ಕೂಡಾ ನಿರ್ಮಿಸಿದೆ ಮತ್ತು ಉತ್ತರ ಪ್ರದೇಶದ ಮೀರತ್ ನಲ್ಲಿ ಮತ್ತೊಂದು ಕ್ರೀಡಾ ವಿಶ್ವವಿದ್ಯಾಲಯವನ್ನು ಸಹ ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಕ್ರೀಡೆಯನ್ನು ಉತ್ತೇಜಿಸಲು ಉತ್ತರ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಹಾಸ್ಟೆಲ್ ಗಳನ್ನು ಸಹ ನಡೆಸಲಾಗುತ್ತಿದೆ ಎಂದರು. "ಸ್ಥಳೀಯ ಮಟ್ಟದಲ್ಲಿ ರಾಷ್ಟ್ರಮಟ್ಟದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ" ಎಂದು ಶ್ರೀ ಮೋದಿ ಹೇಳಿದರು.

ಫಿಟ್ ಇಂಡಿಯಾ ಆಂದೋಲನದ ಮಹತ್ವದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಪ್ರತಿಯೊಬ್ಬ ಆಟಗಾರನಿಗೂ ಫಿಟ್ನೆಸ್ ನ ಮಹತ್ವ ತಿಳಿದಿದೆ ಎಂದರು. ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ ಪ್ರಧಾನಮಂತ್ರಿಯವರು, "ಯೋಗದೊಂದಿಗೆ, ನಿಮ್ಮ ದೇಹವೂ ಆರೋಗ್ಯಕರವಾಗಿರುತ್ತದೆ ಮತ್ತು ನಿಮ್ಮ ಮನಸ್ಸು ಜಾಗೃತವಾಗಿರುತ್ತದೆ. ನಿಮ್ಮ ಆಟದಲ್ಲಿ ನೀವು ಇದರ ಲಾಭವನ್ನು ಸಹ ಪಡೆಯುವಿರಿ" ಎಂದು ಕಿವಿಮಾತು ಹೇಳಿದರು. 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸಿರಿಧಾನ್ಯಗಳು ಕ್ರೀಡಾಪಟುಗಳ ಪೋಷಣೆಯಲ್ಲಿ ವಹಿಸಬಲ್ಲ ದೊಡ್ಡ ಪಾತ್ರವನ್ನು ಉಲ್ಲೇಖಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ನಮ್ಮ ಯುವಕರು ಕ್ರೀಡೆಗಳಿಂದ ಕಲಿತು ದೇಶಕ್ಕೆ ಶಕ್ತಿ ತುಂಬುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಸಂಸತ್ ಸದಸ್ಯ ಶ್ರೀ ಹರೀಶ್ ದ್ವಿವೇದಿ ಅವರು ಈ ಸಂದರ್ಭದಲ್ಲಿ ಇತರರೊಂದಿಗೆ ಉಪಸ್ಥಿತರಿದ್ದರು.

ಹಿನ್ನೆಲೆ:
ಖೇಲ್ ಮಹಾಕುಂಭದ ಮೊದಲ ಹಂತವನ್ನು 2022ರ ಡಿಸೆಂಬರ್ 10ರಿಂದ 16ರವರೆಗೆ ನಡೆಸಿದ್ದು, ಎರಡನೇ ಹಂತವನ್ನು 2023ರ ಜನವರಿ 18ರಿಂದ 28ರವರೆಗೆ ನಡೆಸಲು ನಿಗದಿಪಡಿಸಲಾಗಿದೆ.

ಖೇಲ್ ಮಹಾಕುಂಭವು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಖೋ ಖೋ, ಬ್ಯಾಸ್ಕೆಟ್ ಬಾಲ್, ಫುಟ್ಬಾಲ್, ಹಾಕಿ, ವಾಲಿಬಾಲ್, ಹ್ಯಾಂಡ್ ಬಾಲ್, ಚೆಸ್, ಕೇರಂ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮುಂತಾದ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಇದಲ್ಲದೆ, ಖೇಲ್ ಮಹಾಕುಂಭದಲ್ಲಿ ಪ್ರಬಂಧ ಬರೆಯುವುದು, ಚಿತ್ರಕಲೆ, ರಂಗೋಲಿ ಬಿಡಿಸುವುದು ಮುಂತಾದ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತದೆ.

ಖೇಲ್ ಮಹಾಕುಂಭವು ಒಂದು ನವೀನ ಉಪಕ್ರಮವಾಗಿದ್ದು, ಇದು ಬಸ್ತಿ ಜಿಲ್ಲೆ ಮತ್ತು ನೆರೆಹೊರೆಯ ಪ್ರದೇಶಗಳ ಯುವಕರಿಗೆ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮತ್ತು ವೇದಿಕೆಯನ್ನು ಒದಗಿಸುತ್ತದೆ. ಕ್ರೀಡೆಯನ್ನು ವೃತ್ತಿಜೀವನದ ಆಯ್ಕೆಯಾಗಿ ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸುತ್ತದೆ. ಇದು ಈ ಪ್ರದೇಶದ ಯುವಕರಲ್ಲಿ ಶಿಸ್ತು, ತಂಡದ ಸಮನ್ವಯ, ಆರೋಗ್ಯಕರ ಸ್ಪರ್ಧೆ, ಆತ್ಮವಿಶ್ವಾಸ ಮತ್ತು ರಾಷ್ಟ್ರೀಯತೆಯ ಮನೋಭಾವವನ್ನು ಬೆಳೆಸಲು ನೆರವಾಗುತ್ತದೆ.

*****



(Release ID: 1891990) Visitor Counter : 187