ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಪ್ರಧಾನ ಮಂತ್ರಿ ʻಸ್ವನಿಧಿʼ ಯೋಜನೆ ವಿಸ್ತರಣೆ 

Posted On: 08 DEC 2022 2:45PM by PIB Bengaluru

ಭಾರತ ಸರಕಾರವು ಈ ಕೆಳಗಿನ ನಿಬಂಧನೆಗಳೊಂದಿಗೆ ʻಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿʼ(ಪಿಎಂ ಸ್ವನಿಧಿ) ಯೋಜನೆಯನ್ನು ಮಾರ್ಚ್, 2022ರ ನಂತರವೂ ವಿಸ್ತರಿಸಿದೆ:

 1. ಸಾಲ ನೀಡುವ ಅವಧಿಯನ್ನು ಡಿಸೆಂಬರ್ 2024 ರವರೆಗೆ ವಿಸ್ತರಿಸುವುದು; 
2. ಕ್ರಮವಾಗಿ 10,000 ರೂ.ನ ಮೊದಲ ಮತ್ತು 20,000 ರೂ.ನ 2ನೇ ಸಾಲಗಳ ಜೊತೆಗೆ ₹ 50,000 ವರೆಗಿನ ಮೂರನೇ ಸಾಲ ಸೌಲಭ್ಯದ ಪರಿಚಯ.
3. ದೇಶಾದ್ಯಂತ ʻಪಿಎಂ ಸ್ವನಿಧಿʼ ಯೋಜನೆಯ ಎಲ್ಲ ಫಲಾನುಭವಿಗಳಿಗೆ 'ಸ್ವನಿಧಿ ಸೇ ಸಮೃದ್ಧಿ' ಯೋಜನೆಯನ್ನು ವಿಸ್ತರಿಸುವುದು; 

ನವೆಂಬರ್ 30, 2022ರವರೆಗೆ, 31.73 ಲಕ್ಷ ಮಂದಿ ಬೀದಿ ಬದಿ ವ್ಯಾಪಾರಿಗಳು 10,000 ರೂ. ಮೊತ್ತದ ಮೊದಲ ಸಾಲದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ; ಈ ಪೈಕಿ 5.81 ಲಕ್ಷ ಜನರು ₹ 20,000 ಸಾಲದ ಎರಡನೇ ಸಾಲದ ಪ್ರಯೋಜನ ಪಡೆದಿದ್ದಾರೆ. 2ನೇ ಸಾಲ ಪಡೆದವರಲ್ಲಿ 6,926 ಬೀದಿ ಬದಿ ವ್ಯಾಪಾರಿಗಳು ₹ 50,000 ಮೂರನೇ ಸಾಲದ ಪ್ರಯೋಜನ ಪಡೆದಿದ್ದಾರೆ. 

ಮಾರಾಟ ವಲಯ ರಚನೆಗೆ ಸಂಬಂಧಿಸಿದ ವಿಷಯವು ʻಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿ ಮಾರಾಟದ ನಿಯಂತ್ರಣ) ಕಾಯ್ದೆ-2014ʼರ ವ್ಯಾಪ್ತಿಗೆ ಬರುತ್ತದೆ, ಇದನ್ನು ಆಯಾ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿರುವಂತೆ, ಇಲ್ಲಿಯವರೆಗೆ ಒಟ್ಟು 13,403 ಮಾರಾಟ ವಲಯಗಳನ್ನು ಗುರುತಿಸಲಾಗಿದೆ. 

2024ರ ಡಿಸೆಂಬರ್ ವೇಳೆಗೆ 42 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ʻಪಿಎಂ ಸ್ವನಿಧಿʼ ಯೋಜನೆಯಡಿ ಪ್ರಯೋಜನಗಳನ್ನು ಒದಗಿಸಲಾಗುವುದು. 
ವಸತಿ ಮತ್ತು ನಗರ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ಕೌಶಲ್ ಕಿಶೋರ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು. 

*****



(Release ID: 1881881) Visitor Counter : 212


Read this release in: English , Urdu , Tamil