ಆಯುಷ್

9 ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಮತ್ತು ಆರೋಗ್ಯ ಎಕ್ಸ್ಪೋ 2022 ಗೋವಾದಲ್ಲಿ ಉದ್ಘಾಟನೆ


ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಡಿಸೆಂಬರ್ 11 ರಂದು ವಿಶ್ವ ಆಯುರ್ವೇದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ

Posted On: 08 DEC 2022 2:37PM by PIB Bengaluru

9 ನೇ ವಿಶ್ವ ಆಯುರ್ವೇದ ಕಾಂಗ್ರೆಸ್ (ಡಬ್ಲ್ಯುಎಸಿ) ಗೋವಾದ ಪಣಜಿಯಲ್ಲಿ ಇಂದು ಕೇಂದ್ರ ಪ್ರವಾಸೋದ್ಯಮ ಮತ್ತು ಹಡಗು, ಬಂದರು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀಪಾದ್ ನಾಯಕ್, ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. 9ನೇ ವಿಶ್ವ ಆಯುರ್ವೇದ ಸಮಾವೇಶ ಜಾಗತಿಕ ಮಟ್ಟದಲ್ಲಿ ಆಯುಷ್ ಔಷಧ ವ್ಯವಸ್ಥೆಗಳ ಉಪಯುಕ್ತತೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

 

ಕೇಂದ್ರ ಪ್ರವಾಸೋದ್ಯಮ ಮತ್ತು ಹಡಗು, ಬಂದರು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀಪಾದ್ ನಾಯಕ್ ತಮ್ಮ ಭಾಷಣದಲ್ಲಿ ಆಯುರ್ವೇದದ ವಿಶ್ವಾದ್ಯಂತ ವಿಸ್ತರಣೆಯನ್ನು ಭಾರತ ಸರ್ಕಾರವು 2014 ರಲ್ಲಿ ಪ್ರತ್ಯೇಕ ಆಯುಷ್ ಸಚಿವಾಲಯವನ್ನು ಸ್ಥಾಪಿಸುವ ಮೂಲಕ ಸುಗಮಗೊಳಿಸಿದೆ ಎಂದು ಹೇಳಿದರು. ಇಂದು ಆಯುಷ್ ವೇಗವಾಗಿ ಸಾಗುತ್ತಿರುವ ರೀತಿಯನ್ನು ನೋಡಿದರೆ, ಈ ಬೆಳವಣಿಗೆಯ ಆರಂಭವು ಆ ನಿರ್ಧಾರದಲ್ಲಿದೆ ಎಂಬುದನ್ನು ನೆನಪಿನಲ್ಲಿಡಬೇಕು." ನಮ್ಮ ಪೂರ್ವಜರು ಆಯುರ್ವೇದವನ್ನು ಪ್ರಪಂಚಕ್ಕೆ ತಂದರು. 'ವಸುಧೈವ ಕುಟುಂಬಕಂ' ಎನ್ನುವುದು ಮೊದಲಿನಿಂದಲೂ ಭಾರತದ ಸ್ಫೂರ್ತಿಯಾಗಿದೆ. 2015ರಲ್ಲಿ, ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ನಿರ್ಧರಿಸಿತು. ಈಗ ಇದು ಪ್ರಪಂಚದಾದ್ಯಂತ ಜನರಿಗೆ ಪ್ರಯೋಜನವನ್ನು ನೀಡುತ್ತಿದೆ. ಆಯುರ್ವೇದ ಕಾಂಗ್ರೆಸ್ನ ಚಟುವಟಿಕೆಗಳು ಇಂತಹ ಸಾಂಪ್ರದಾಯಿಕ ಚಿಕಿತ್ಸೆ ಮತ್ತು ಯೋಗಕ್ಷೇಮದ ಪದ್ದತಿಯನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿವೆ." ಎಂದು ಶ್ರೀ ನಾಯಕ್  ಹೇಳಿದರು.

 

ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಗೋವಾದಲ್ಲಿ ವಿಶ್ವ ಆಯುರ್ವೇದ ಕಾಂಗ್ರೆಸ್ ಮತ್ತು ಆರೋಗ್ಯ ಎಕ್ಸ್ಪೋದ ಈ ಆವೃತ್ತಿಯನ್ನು ಆಯೋಜಿಸಲು ಅವಕಾಶ ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಆಯುಷ್ ಚಿಕಿತ್ಸೆಗಾಗಿ ಆಯುಷ್ ವೀಸಾವನ್ನು ಪರಿಚಯಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಡಾ.ಸಾವಂತ್ ಹೇಳಿದರು. ಗೋವಾದಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಮುಂಬರುವ ಉಪಗ್ರಹ ಕೇಂದ್ರವು ರಾಜ್ಯದಲ್ಲಿ ಆಯುರ್ವೇದ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. ಸಂಸ್ಥೆಯಲ್ಲಿ ವಿವಿಧ ಕೋರ್ಸ್ ಗಳಿಗೆ ಗೋವಾದ ವಿದ್ಯಾರ್ಥಿಗಳು ಶೇ.50ರಷ್ಟು ಮೀಸಲಾತಿ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

 

ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರು, ಕಳೆದ 8 ವರ್ಷಗಳಲ್ಲಿ ಆಯುಷ್ ಅದ್ಭುತವಾಗಿ ಬೆಳೆದಿದೆ ಮತ್ತು 2022 ರ ಅಂತ್ಯದ ವೇಳೆಗೆ ಆಯುಷ್ ವಲಯವು 10 ಶತಕೋಟಿ ಡಾಲರ್ಗೆ ತಲುಪಲಿದೆ ಎಂದು ಹೇಳಿದರು. ದೇಶದ ಕೋವಿಡ್ -19 ಸಾಂಕ್ರಾಮಿಕ ನಿರ್ವಹಣೆಯಲ್ಲಿ ಆಯುಷ್‌ ನ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಆಯುಷ್ ಸಚಿವಾಲಯವು ಪರಿಣಾಮ ಮೌಲ್ಯಮಾಪನ ಅಧ್ಯಯನವನ್ನು ನಡೆಸಿದೆ ಮತ್ತು ಶೇ.89.9ರಷ್ಟು ಭಾರತೀಯ ಜನಸಂಖ್ಯೆಯು ಕೋವಿಡ್-19 ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ  ಆಯುಷ್ ಅನ್ನು ಅವಲಂಬಿಸಿದೆ ಎಂದು ಅವರು ತಿಳಿಸಿದರು.

 

ಈ ಸಂದರ್ಭದಲ್ಲಿ ‘ಆಯುಷ್ಮಾನ್’ ಕಾಮಿಕ್ ಪುಸ್ತಕ ಸರಣಿಯ ಮೂರನೇ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಾಯಿತು. ಹಾಗೆಯೇ ಸಾಂಪ್ರದಾಯಿಕ ಭಾರತೀಯ ಔಷಧ ವ್ಯವಸ್ಥೆಗಳಲ್ಲಿ ಮುಂದುವರಿದ ಅಧ್ಯಯನಕ್ಕೆ ಅನುಕೂಲವಾಗುವಂತೆ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) ಮತ್ತು ಜರ್ಮನಿಯ ರೋಸೆನ್‌ ಬರ್ಗ್‌ ನ ಯುರೋಪಿಯನ್ ಅಕಾಡೆಮಿ ಆಫ್ ಆಯುರ್ವೇದ ನಡುವೆ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.

 

 ಪ್ರಮುಖ ಉದ್ದಿಮೆದಾರರು, ವೈದ್ಯರು, ಸಾಂಪ್ರದಾಯಿಕ ವೈದ್ಯರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಔಷಧಿ ತಯಾರಕರು, ಔಷಧೀಯ ಸಸ್ಯಗಳ ಬೆಳೆಗಾರರು ಸೇರಿದಂತೆ ಎಲ್ಲ ಪಾಲುದಾರರಿಗೆ ಜಾಗತಿಕ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಸಸ್ಯಗಳು ಮತ್ತು ಮಾರುಕಟ್ಟೆ ತಂತ್ರಜ್ಞರು, ಆಯುರ್ವೇದ ವಲಯವನ್ನು ಬಲಪಡಿಸಲು, ಅದರ ಭವಿಷ್ಯವನ್ನು ರೂಪಿಸಲು ಮತ್ತು ಆಯುರ್ವೇದ ವಾಣಿಜ್ಯವನ್ನು ಹೆಚ್ಚಿಸಲು ವೃತ್ತಿಪರರು ಮತ್ತು ಗ್ರಾಹಕರ ನಡುವೆ ಪರಸ್ಪರ ಕ್ರಿಯೆಯನ್ನು ಸುಗಮಗೊಳಿಸಲು ನೆಟ್ವರ್ಕಿಂಗ್ ಮತ್ತು ಬೌದ್ಧಿಕ ವಿನಿಮಯದಲ್ಲಿ ತೊಡಗಿಸಿಕೊಳ್ಳಲು 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಮತ್ತು ಆರೋಗ್ಯ ಎಕ್ಸ್ಪೋ 2022 ಅನ್ನು ಡಿಸೆಂಬರ್ 8 ರಿಂದ 11 ರವರೆಗೆ ಗೋವಾದಲ್ಲಿ ಆಯೋಜಿಸಲಾಗಿದೆ. ದೇಶದಲ್ಲಿ ಆಯುಷ್ (ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ವಲಯದ ಮಾರುಕಟ್ಟೆ ಗಾತ್ರವು 2014 ರಲ್ಲಿ 3 ಬಿಲಿಯನ್ ಡಾಲರ್ ನಿಂದ ಈಗ 18 ಶತಕೋಟಿ ಡಾಲರ್ಗೆ ಬೆಳೆದಿದೆ, ಇದು ಆರು ಪಟ್ಟು ಅಸಾಧಾರಣ ಬೆಳವಣಿಗೆಯಾಗಿದೆ. 2014-2020ರ ಅವಧಿಯಲ್ಲಿ, ಆಯುಷ್ ಉದ್ಯಮವು ವರ್ಷದಿಂದ ವರ್ಷಕ್ಕೆ 17 ಪ್ರತಿಶತದಷ್ಟು ಬೆಳೆದಿದ್ದು ಆಯುರ್ವೇದ ಮಾರುಕಟ್ಟೆಯು 2021-2026 ರಿಂದ 15 ಪ್ರತಿಶತ ಸಿಎಜಿಆರ್ ನಲ್ಲಿ ಬೆಳೆಯುವ ನಿರೀಕ್ಷೆಯಿದೆ. 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಮತ್ತು ಆರೋಗ್ಯ ಎಕ್ಸ್ಪೋದಲ್ಲಿ 53 ದೇಶಗಳ 400 ಪ್ರತಿನಿಧಿಗಳು ಸೇರಿದಂತೆ ಪ್ರಪಂಚದಾದ್ಯಂತದ 4500 ಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ಆರೋಗ್ಯ ಎಕ್ಸ್ಪೋವು 215 ಕ್ಕೂ ಹೆಚ್ಚು ಕಂಪನಿಗಳು, ಪ್ರಮುಖ ಆಯುರ್ವೇದ ಬ್ರ್ಯಾಂಡ್ಗಳು, ಔಷಧ ತಯಾರಕರು ಮತ್ತು ಆಯುರ್ವೇದ ಸಂಬಂಧಿತ ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಡಿಸೆಂಬರ್ 11 ರಂದು ವಿಶ್ವ ಆಯುರ್ವೇದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

****



(Release ID: 1881874) Visitor Counter : 203