ಪ್ರಧಾನ ಮಂತ್ರಿಯವರ ಕಛೇರಿ

ಕಾನೂನು ಸಚಿವರು ಹಾಗೂ ಕಾನೂನು ಕಾರ್ಯದರ್ಶಿಗಳ ಅಖಿಲ ಭಾರತ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಭಾಷಣ

Posted On: 15 OCT 2022 11:30AM by PIB Bengaluru

ಇಂದಿನ ಮಹತ್ವದ ಸಮ್ಮೇಳನದಲ್ಲಿ ಉಪಸ್ಥಿತರಿರುವ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರೇ, ರಾಜ್ಯ ಖಾತೆ ಸಚಿವರಾದ ಎಸ್‌.ಪಿ. ಸಿಂಗ್‌ ಬಘೇಲ್‌ರವರೇ, ಎಲ್ಲ ರಾಜ್ಯಗಳ ಕಾನೂನು ಸಚಿವರೇ, ಕಾನೂನು ಕಾರ್ಯದರ್ಶಿಗಳೇ, ಇತರೆ ಗಣ್ಯರೇ, ಮಹಿಳೆಯರೇ, ಮಹನೀಯರೇ!

ಎಲ್ಲ ರಾಜ್ಯಗಳ ಕಾನೂನು ಸಚಿವರು ಹಾಗೂ ಕಾನೂನು ಕಾರ್ಯದರ್ಶಿಗಳ ಮಹತ್ವದ ಸಭೆಯು ರಾಷ್ಟ್ರದ ಪ್ರತಿಷ್ಠಿತ ಏಕತಾ ಪ್ರತಿಮೆಯಿರುವ ನಗರದಲ್ಲಿ ನಡೆಯುತ್ತಿರುವುದು ಅದರ ಹಿರಿಮೆಯನ್ನು ಹೆಚ್ಚಿಸಿದೆ. ರಾಷ್ಟ್ರವು ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಸರ್ದಾರ್‌ ಪಟೇಲ್‌ ಅವರ ಸಾರ್ಜಜನಿಕ ಹಿತಾಸಕ್ತಿಯ ಸ್ಫೂರ್ತಿಯು ನಮ್ಮನ್ನು ಸರಿದಾರಿಯಲ್ಲಿ ಕರೆದೊಯ್ಯುವುದು ಮಾತ್ರವಲ್ಲದೆ, ನಮ್ಮ ಗುರಿಗಳನ್ನು ತಲುಪಲು ಸಹಕಾರಿಯಾಗಲಿದೆ.

ಸ್ನೇಹಿತರೇ,

ಪ್ರತಿಯೊಂದು ಸಮಾಜದಲ್ಲೂ ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ನ್ಯಾಯಾಂಗ ವ್ಯವಸ್ಥೆ, ನಾನಾ ಪ್ರಕ್ರಿಯೆಗಳು ಹಾಗೂ ಸಂಪ್ರದಾಯಗಳು ಬೆಳೆದು ಬಂದಿರುತ್ತದೆ. ಆರೋಗ್ಯಕರ ಸಮಾಜ, ಆತ್ಮವಿಶ್ವಾಸದ ಸಮಾಜಕ್ಕೆ ವಿಶ್ವಾಸಾರ್ಹ ಹಾಗೂ ತ್ವರಿತ ನ್ಯಾಯದಾನ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದ್ದು, ದೇಶದ ಅಭಿವೃದ್ಧಿಗೂ ಸಹಕಾರಿಯಾಗಿರುತ್ತದೆ. ನ್ಯಾಯ ದಾನ ವಿಧಾನದ ಆಧಾರದ ಮೇಲೆ ದೇಶದ ಜನರಿಗೆ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆ ಬಲಗೊಳ್ಳುತ್ತದೆ. ಸಕಾಲದಲ್ಲಿ ಸೂಕ್ತ ನ್ಯಾಯ ಸಿಕ್ಕಾಗಷ್ಟೇ ದೇಶದ ಸಾಮಾನ್ಯ ಜನರ ಆತ್ಮವಿಶ್ವಾಸವು ಸಮಾನವಾಗಿ ಬೆಳೆಯುತ್ತದೆ.  ಹಾಗಾಗಿ, ಈ ಎಲ್ಲ ಅಂಶಗಳು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ನಿರಂತರ ಸುಧಾರಣೆಗೆ ಬಹಳ ಮಹತ್ವದ್ದೆನಿಸಿವೆ.

ಸ್ನೇಹಿತರೇ,

ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜದ ಬೆಳೆದು ಬಂದಿದೆ. ಸಾಕಷ್ಟು ಸವಾಲುಗಳ ನಡುವೆಯೂ, ಭಾರತೀಯ ಸಮಾಜವು ಭದ್ರವಾಗಿ ನೆಲೆಯೂರುವ ಜತೆಗೆ ನಿರಂತರತೆಯನ್ನು ಕಾಯ್ದುಕೊಂಡಿದೆ. ನೈತಿಕತೆ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳ ಪಾಲನೆಯು ನಮ್ಮ ಸಮಾಜವನ್ನು ಶ್ರೀಮಂತಗೊಳಿಸಿವೆ. ಪ್ರಗತಿಯ ಪಥದಲ್ಲಿ ಸಾಗುವ ಮಾರ್ಗದಲ್ಲಿ ನಮ್ಮ ಸಮಾಜವು ಸ್ವಯಂಪ್ರೇರಿತವಾಗಿ ಸುಧಾರಣೆ ಕಾಣುತ್ತಾ ಬಂದಿರುವುದು ಅದರ ಪ್ರಮುಖ ಗುಣ ಲಕ್ಷಣವಾಗಿದೆ. ಅಪ್ರಸ್ತುತವೆನಿಸಿದ ಕಾನೂನು ಹಾಗೂ ಆಚರಣೆಗಳನ್ನು ನಮ್ಮ ಸಮಾಜ ಕೈಬಿಡುತ್ತಾ ಸಾಗಿ ಬಂದಿದೆ. ಇಲ್ಲದಿದ್ದರೆ, ಯಾವುದೇ ಸಂಪ್ರದಾಯವು ರೂಢಿ ಎಂಬಂತೆ ಪಾಲನೆಯಾಗುತ್ತಾ ಬಂದರೆ ಅದು ಹೊರೆಯಾಗಿ ಪರಿಣಮಿಸುವ ಜತೆಗೆ ಕ್ರಮೇಣ ಸಮಾಜವೂ ಆ ಹೊರೆಯಲ್ಲೇ ಹೂತು ಹೋಗುವುದನ್ನು ಕಂಡಿದ್ದೇವೆ. ಹಾಗಾಗಿ, ಪ್ರತಿಯೊಂದು ವ್ಯವಸ್ಥೆಯಲ್ಲೂ ನಿರಂತರ ಬದಲಾವಣೆ ಅನಿವಾರ್ಯ. ಅದೇ ಕಾರಣಕ್ಕೆ ದೇಶದ ಜನರಲ್ಲಿ ಎಂದಿಗೂ ಸರಕಾರದ ಅನುಪಸ್ಥಿತಿಯ ಭಾವನೆ ಮೂಡಬಾರದು ಹಾಗೂ ಸರಕಾರದ ಒತ್ತಡ ತಟ್ಟುವಂತಿರಬಾರದು ಎಂದು ನಾನಾ ಆಗಾಗ್ಗೆ ಒತ್ತಿ ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅನಗತ್ಯ ಕಾನೂನುಗಳು ಸರಕಾರದ ಆಡಳಿತದಲ್ಲಿ ಅನಗತ್ಯ ಒತ್ತಡ ಸೃಷ್ಟಿಗೆ ಕಾರಣವಾಗುತ್ತವೆ. ದೇಶದ ಜನರಿಗೆ ಸರಕಾರದ ಅನಗತ್ಯ ಒತ್ತಡವನ್ನು ತಗ್ಗಿಸುವ ಕಾರ್ಯಕ್ಕೆ ಕಳೆದ ಎಂಟು ವರ್ಷಗಳಲ್ಲಿ ವಿಶೇಷ ಒತ್ತು ನೀಡಲಾಗಿದೆ. ನಿಮಗೆಲ್ಲಾ ತಿಳಿದಿರುವಂತೆ, ದೇಶದಲ್ಲಿ 1,500ಕ್ಕೂ ಹೆಚ್ಚು ಹಳೆಯ ಹಾಗೂ ಅಪ್ರಸ್ತುತ ಕಾನೂನುಗಳನ್ನು ರದ್ದುಪಡಿಸಲಾಗಿದೆ. ಅದರಲ್ಲಿ ಬಹುತೇಕ ಕಾನೂನುಗಳು ಗುಲಾಮಗಿರಿ ಕಾಲದಿಂದ ಜಾರಿಯಲ್ಲಿದ್ದ ಕಾನೂನುಗಳಾಗಿವೆ. ಅನ್ವೇಷಕ ಹಾಗೂ ಸುಗಮ ಜೀವನ ವಿಧಾನ ವ್ಯವಸ್ಥೆ ಕಲ್ಪಿಸುವ ಹಾದಿಗೆ ಅಡ್ಡಲಾಗಿದ್ದ ಕಾನೂನು ತೊಡಕುಗಳನ್ನು ನಿವಾರಿಸಿ 32,000ಕ್ಕೂ ಹೆಚ್ಚು ಅನುಸರಣೆಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಬದಲಾವಣೆಗಳು ಸಾರ್ವಜನಿಕರಿಗೆ ಅನುಕೂಲಕರ ಪ್ರಯತ್ನ ಮಾತ್ರವಾಗಿರದೆ, ಕಾಲಕ್ಕೆ ತಕ್ಕಂತೆ ಮಾರ್ಪಾಡಿಗೆ ಪೂರಕವಾಗಿದೆ. ಪ್ರಾಚೀನ ಗುಲಾಮಗಿರಿ ಕಾಲದ ಕಾನೂನುಗಳು ಇಂದಿಗೂ ರಾಜ್ಯಗಳಲ್ಲಿ ಜಾರಿಯಲ್ಲಿರುವುದು ನಮಗೆಲ್ಲಾ ತಿಳಿದಿದೆ. ಹಾಗಾಗಿ ಗುಲಾಮಗಿರಿ ಕಾಲದಿಂದ ಅನೂಚಾನಾಗಿ ಪಾಲನೆಯಾಗುತ್ತಾ ಬಂದಿರುವ ಕಾನೂನುಗಳನ್ನು ರದ್ದುಪಡಿಸುವ ಜತೆಗೆ ಸ್ವಾತಂತ್ರ‍್ಯದ ಅಮೃತ ಕಾಲಕ್ಕೆ ಪೂರಕವಾದ ಹೊಸ ಕಾನೂನುಗಳನ್ನು ರೂಪಿಸುವುದು ಅತ್ಯವಶ್ಯಕವಾಗಿದೆ. ಅಂತಹ ಅಪ್ರಸ್ತುತ ಕಾನೂನನ್ನು ರದ್ದಪಡಿಸುವ ಬಗ್ಗೆ ಇದೇ ಸಮ್ಮೇಳನದಲ್ಲಿ ತೀರ್ಮಾನಿಸುವಂತೆ ನಾನು ಒತ್ತಾಯಿಸುತ್ತೇನೆ. ಇದರ ಜೊತೆಗೆ, ಸದ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಪ್ರಸ್ತುತ ಕಾನೂನುಗಳ ಪುನರ್‌ಪರಿಶೀಲನೆಯೂ ಉಪಯುಕ್ತವೆನಿಸಿದೆ. ಸುಗಮ ಜೀವನ ವ್ಯವಸ್ಥೆ ಹಾಗೂ ಸುಗಮ ನ್ಯಾಯ ವ್ಯವಸ್ಥೆಯು ಈ ಪುನರ್‌ಪರಿಶೀಲನೆಯ ಕೇಂದ್ರಬಿಂದುವಾಗಿರಬೇಕು.

ಸ್ನೇಹಿತರೇ,

ವಿಳಂಬ ನ್ಯಾಯವು ದೇಶದ ಜನರು ಎದುರಿಸುತ್ತಿರುವ ಬಂದಿರುವ ಬಹುದೊಡ್ಡ ಸವಾಲಾಗಿದೆ. ಆ ಸವಾಲನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ನಮ್ಮ ನ್ಯಾಯಾಂಗ ಗಂಭೀರ ಪ್ರಯತ್ನ ನಡೆಸುತ್ತಿದೆ. ನಾವು ಈ ʼಅಮೃತ ಕಾಲʼ ಘಟ್ಟದಲ್ಲೇ ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಿದೆ. ರಾಜ್ಯ ಸರ್ಕಾರಗಳ ಮಟ್ಟದಲ್ಲಿ ವಿವಾದ ಇತ್ಯರ್ಥ ಪರ್ಯಾಯ ವ್ಯವಸ್ಥೆಗಳನ್ನು ಉತ್ತೇಜಿಸಬಹುದಾಗಿದೆ. ಭಾರತದ ಹಳ್ಳಿಗಳಲ್ಲಿ ಬಹಳ ಹಿಂದಿನಿಂದ ನಡೆದು ಬಂದಿರುವ ಪರ್ಯಾಯ ವಿವಾದ ಇತ್ಯರ್ಥ ಪದ್ಧತಿಗಳನ್ನೂ ಪರಿಶೀಲಿಸಬಹುದಾಗಿದೆ. ಅವು ತಮ್ಮದೇ ಆದ ರೀತಿಯ ವಿವಾದ ಇತ್ಯರ್ಥ ವ್ಯವಸ್ಥೆಗಳಾಗಿದ್ದು, ಉದ್ದೇಶ ಒಂದೇ ಆಗಿರುತ್ತದೆ. ಹಾಗಾಗಿ ರಾಜ್ಯಗಳಲ್ಲಿ ಕೆಳ ಹಂತದಲ್ಲಿನ ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ನಂತರ ಅದನ್ನು ಕಾನೂನು ವ್ಯವಸ್ಥೆಯಲ್ಲಿ ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಚಿಂತಿಸಬಹುದು. ಈ ಸಂದರ್ಭದಲ್ಲಿ ನಾನು ಹಿಂದೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಸಂಜೆ ನ್ಯಾಯಾಲಯಗಳನ್ನು ಆರಂಭಿಸಿದ್ದನ್ನು ನೆನಪಿಸಿಕೊಳ್ಳುತ್ತೇನೆ. ದೇಶದ ಪ್ರಥಮ ಸಂಜೆ ನ್ಯಾಯಾಲಯ ಪ್ರಾರಂಭವಾಗಿದ್ದು ಗುಜರಾತ್‌ನಲ್ಲಿ.  ಸಂಜೆ ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತಿದ್ದ ಬಹುತೇಕ ಪ್ರಕರಣಗಳು ಗಂಭೀರ ಸ್ವರೂಪವಲ್ಲದ ಪ್ರಕರಣಗಳಾಗಿರುತ್ತವೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿದ ತರುವಾಯ ಈ ಸಂಜೆ ನ್ಯಾಯಾಲಯ ಸೇವೆ ಪಡೆಯಲು ಅನುಕೂಲವಾಗುತ್ತಿತ್ತು. ಇದರಿಂದ ಜನರ ಸಮಯ ಉಳಿತಾಯ ಮಾಡುವುದಷ್ಟೇ ಅಲ್ಲದೆ, ಅವರ ಪ್ರಕರಣಗಳ ವಿಚಾರಣೆಯೂ ತ್ವರಿತವಾಗಿ ನಡೆಯುತ್ತದೆ. ಸಂಜೆ ನ್ಯಾಯಾಲಯಗಳಿಂದಾಗಿ ಗುಜರಾತ್‌ನಲ್ಲಿ ಕಳೆದ ಕೆಲ ವರ್ಷಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ. ಹಾಗೆಯೇ ದೇಶದಲ್ಲಿ ಮತ್ತೊಂದು ತ್ವರಿತ ನ್ಯಾಯ ದಾನ ವ್ಯವಸ್ಥೆಯಾಗಿ ಲೋಕ ಅದಾಲತ್‌ ರೂಪುಗೊಂಡಿರುವುದನ್ನು ನಾವು ಕಾಣಬಹುದು. ಲೋಕ ಅದಾಲತ್‌ ವಿಚಾರದಲ್ಲಿ ಬಹಳಷ್ಟು ರಾಜ್ಯಗಳು ಗಮನಾರ್ಹ ಸಾಧನೆ ಮಾಡಿವೆ. ದೇಶದಲ್ಲಿ ಕೆಲ ವರ್ಷಗಳಲ್ಲಿ ಲೋಕ ಅದಾಲತ್‌ ಮೂಲಕ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗಿವೆ. ಲೋಕ ಅದಾಲತ್‌ಗಳು ನ್ಯಾಯಾಲಯಗಳ ಮೇಲಿನ ಹೊರೆಯನ್ನು ತಗ್ಗಿಸುವ ಜತೆಗೆ ಬಡ ಜನರಿಗೆ ಸುಲಭವಾಗಿ ನ್ಯಾಯ ಒದಗಿಸುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವವರೆಗೆ ಹೆಚ್ಚಿನ ಅನುಕೂಲವಾಗುತ್ತಿದೆ.

ಸ್ನೇಹಿತರೇ,

ಬಹಳಷ್ಟು ಮಂದಿ ಸಂಸದೀಯ ವ್ಯವಹಾರ ಖಾತೆಯ ಜವಾಬ್ದಾರಿಯನ್ನೂ ಹೊಂದಿದ್ದೀರಿ. ಹಾಗಾಗಿ ನೀವೆಲ್ಲಾ ಕಾನೂನು ರಚನೆ ಪ್ರಕ್ರಿಯೆಯನ್ನು ತೀರಾ ಹತ್ತಿರದಿಂದ ಕಂಡಿರುತ್ತೀರಿ. ಆಶಯ ಎಷ್ಟೇ ಉದಾತ್ತವಾಗಿದ್ದರೂ ಕಾನೂನಿನಲ್ಲೇ ಗೊಂದಲ, ಸ್ಪಷ್ಟತೆಯ ಕೊರತೆಯಿದ್ದರೆ ಭವಿಷ್ಯದಲ್ಲಿ ಸಾಮಾನ್ಯ ಜನ ಆ ಕಾನೂನಿನ ಹೊರೆಯನ್ನು ಅನುಭವಿಸಬೇಕಾಗುತ್ತದೆ. ಕಾನೂನಿನ ಭಾಷೆ ಸಂಕೀರ್ಣವಾಗಿದ್ದರೆ ಸಾಮಾನ್ಯ ಜನರು ಹೆಚ್ಚು ಹಣ ವ್ಯಯ ಮಾಡುವ ಜತೆಗೆ ನ್ಯಾಯ ಪಡೆಯಲು ಅಲೆದಾಡಬೇಕಾಗುತ್ತದೆ. ಹಾಗಾಗಿ ಸಾಮಾನ್ಯ ಜನರೂ ಕಾನೂನನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವಂತಿದ್ದಾಗಷ್ಟೇ ಅದರ ಆಶಯ ಈಡೇರಿಕೆಗೆ ನೆರವಾಗುತ್ತದೆ. ಆದ್ದರಿಂದ, ಕೆಲ ದೇಶಗಳ ಸಂಸತ್ತು ಅಥವಾ ಶಾಸಕಸಭೆಗಳಲ್ಲಿ ಕಾನೂನು ರೂಪಿಸುವ ಸಂದರ್ಭದಲ್ಲೇ ಎರಡು ಮುಖ್ಯ ಅಂಶಗಳಿಗೆ ಗಮನ ನೀಡುತ್ತಾರೆ. ಒಂದನೆಯದಾಗಿ, ಕಾನೂನಿನ ವ್ಯಾಖ್ಯಾನದಲ್ಲಿರುವ ತಾಂತ್ರಿಕ ಪದಗಳ ಬಗ್ಗೆ ವಿಸ್ತೃತ ವಿವರಣೆಯನ್ನು ನೀಡುವುದು. ಎರಡನೆಯದಾಗಿ, ಮೂಲ ಆಶಯಕ್ಕೆ ಪೂರಕವಾಗಿ ಕಾನೂನನ್ನೂ ಸಾಮಾನ್ಯ ಜನರಿಗೆ ರ‍್ಥವಾಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ವಿಶ್ಲೇಷಿಸುವುದು. ಹಾಗಾಗಿ ಕಾನೂನುಗಳನ್ನು ರೂಪಿಸುವಾಗ ಬಡವರಲ್ಲೇ ಕಡು ಬಡವರು ಸಹ ಹೊಸ ಶಾಸನವನ್ನು ಸರಿಯಾಗಿ ಆರ್ಥ ಮಾಡಿಕೊಳ್ಳುವಂತಿರಬೇಕು ಎಂಬುದು ನಮ್ಮ ಆದ್ಯತೆಯಾಗಿರಬೇಕು. ಹಾಗೆಯೇ ಕೆಲ ರಾಷ್ಟ್ರಗಳಲ್ಲಿ ಕಾನೂನು ರೂಪಿಸುವ ಸಂದರ್ಭದಲ್ಲೇ ಆ ಕಾನೂನು ಎಷ್ಟು ಕಾಲ ಜಾರಿಯಲ್ಲಿರಬೇಕು ಎಂಬುದನ್ನೂ ತೀರ್ಮಾನಿಸಲು ಅವಕಾಶ ಕಲ್ಪಿಸಿವೆ. ಅಂದರೆ, ಕಾನೂನು ರೂಪಿಸುವ ಹಂತದಲ್ಲೇ ಅದನ್ನು ಅನೂರ್ಜಿತಗೊಳಿಸುವ ಕಾಲವನ್ನು ಗೊತ್ತುಪಡಿಸುವ ವಿಧಾನವಾಗಿದೆ. ಆ ನಿರ್ದಿಷ್ಟ ಕಾನೂನು 5 ಅಥವಾ 10 ವರ್ಷಗಳ ಬಳಿಕ ರದ್ದಾಗಬೇಕು ಎಂದೂ ನಿರ್ಧರಿಸಲಾಗುತ್ತದೆ. ಆ ಕಾಲಮಿತಿ ಸಮೀಪಿಸುತ್ತಿದ್ದಂತೆ ಅಂದಿನ ಹೊಸ ಪರಿಸ್ಥಿತಿಯನ್ನು ಗಮದಲ್ಲಿಟ್ಟುಕೊಂಡು ಮತ್ತೊಮ್ಮೆ ಆ ಕಾನೂನನ್ನು ಪುನರ್‌ ಪರಾಮರ್ಶೆಗೆ ಒಳಪಡಿಸಲಾಗುತ್ತದೆ. ನಾವು ಸಹ ನಮ್ಮ ದೇಶದಲ್ಲೂ ಇದೇ ಆಶಯದೊಂದಿಗೆ ಮುಂದುವರಿಯಬೇಕಿದೆ.

ಕಾನೂನು ವ್ಯವಸ್ಥೆಯಲ್ಲಿ ಸುಗಮ ನ್ಯಾಯದಾನಕ್ಕೆ ಸ್ಥಳೀಯ ಭಾಷೆಯು ಮಹತ್ವದ ಪಾತ್ರ ವಹಿಸುತ್ತದೆ. ನಾನು ಈ ವಿಚಾರವನ್ನು ಆಗಾಗ್ಗೆ ನ್ಯಾಯಾಂಗದ ಪ್ರಮುಖರ ಬಳಿ ಪ್ರಸ್ತಾಪಿಸಿದ್ದೇನೆ. ಜತೆಗೆ ಆ ನಿಟ್ಟಿನಲ್ಲಿ ಹಲವು ಮಹತ್ವದ ಪ್ರಯತ್ನಗಳನ್ನು ರಾಷ್ಟ್ರ ಕೈಗೊಂಡಿದೆ. ಪ್ರತಿಯೊಂದು ರಾಜ್ಯವೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವ ಮೂಲಕ ಜನರಿಗೆ ಯಾವುದೇ ಕಾರಣಕ್ಕೂ ಭಾಷೆ ಅಡ್ಡಿಯಾಗದಂತೆ ಕ್ರಮ ವಹಿಸಬೇಕು. ಇದೇ ನಿಟ್ಟಿನಲ್ಲಿ, ಯುವಜನತೆಗೆ ಮಾತೃಭಾಷೆಯಲ್ಲೇ ಕಾನೂನು ಕಲಿಕೆಗೆ ನೆರವಾಗುವಂತೆ ಶೈಕ್ಷಣಿಕ ವ್ಯವಸ್ಥೆ ರೂಪಿಸಲು ಪೂರಕವಾದ ಮೂಲ ಸೌಕರ್ಯ, ಸಲಕರಣೆಗಳನ್ನು ಒದಗಿಸುವ ಅಗತ್ಯವಿದೆ. ಹಾಗೆಯೇ ಮಾತೃ ಭಾಷೆಯಲ್ಲೇ ಕಾನೂನು ಕೋರ್ಸ್  ಪಡೆಯಲು ಉತ್ತೇಜಿಸಬೇಕು. ಕಾನೂನುಗಳನ್ನು ಸರಳ ಭಾಷೆಯಲ್ಲಿ ಮುದ್ರಿಸುವ ಜತೆಗೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ ಮಹತ್ವದ ಪ್ರಕರಣಗಳು ಡಿಜಿಟಲ್‌ ಗ್ರಂಥಾಲಯಗಳಲ್ಲಿ ಸರಳ ಭಾಷೆಯಲ್ಲಿ ಲಭ್ಯವಾಗುವಂತೆ ಕ್ರಮ ವಹಿಸಬೇಕು. ಇದು ಸಾಮಾನ್ಯ ಜನರಲ್ಲಿ ಕಾನೂನು ಅರಿವು ಹೆಚ್ಚಿಸಲು ಸಹಕಾರಿಯಾಗುವ ಜತೆಗೆ ಸಂಕೀರ್ಣ ಕಾನೂನು ಪದಕೋಶಗಳ ಬಗೆಗಿನ ಭೀತಿಯನ್ನು ನಿವಾರಿಸಲು ನೆರವಾಗುತ್ತದೆ.

ಸ್ನೇಹಿತರೇ,

ನ್ಯಾಯಾಂಗ ವ್ಯವಸ್ಥೆಯು ಸಮಾಜದೊಂದಿಗೆ ವಿಸ್ತರಣೆಯಾದರೆ ಆಧುನೀಕತೆಯ ಅಳವಡಿಕೆಗೂ ಉತ್ತೇಜನ ಸಿಗುತ್ತದೆ. ಆಗ ಸಮಾಜದಲ್ಲಿನ ಸವಾಲುಗಳು ನ್ಯಾಯಾಂಗ ವ್ಯವಸ್ಥೆಗೆ ಸುಲಭವಾಗಿ ಗೋಚರಿಸುತ್ತವೆ. ಕೊರೊನಾ ಅವಧಿಯಲ್ಲಾದ ಸುಧಾರಿತ ತಂತ್ರಜ್ಞಾನದ ಬಳಕೆ ಪ್ರಯುತ್ನವು ಕ್ರಮೇಣ ಇಂದಿನ ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗವೆಂಬಂತೆ ರೂಪುಗೊಂಡಿವೆ. ಇಂದು ದೇಶದಲ್ಲಿ ಇ- ನ್ಯಾಯಾಲಯ ಮಿಷನ್‌ ವ್ಯಾಪಕವಾಗಿ ಪ್ರಗತಿ ಕಾಣುತ್ತಿದೆ. 'ವರ್ಚ್ಯುಯಲ್‌ ವಿಚಾರಣೆʼ ಹಾಗೂ 'ವರ್ಚ್ಯುಯಲ್‌ ಹಾಜರಿʼ (ವರ್ಚ್ಯುಯಲ್‌ ಅಪಿಯರೆನ್ಸ್‌) ವ್ಯವಸ್ಥೆಯು ಕ್ರಮೇಣ ನಮ್ಮ ಕಾನೂನು ವ್ಯವಸ್ಥೆಯ ಭಾಗವೇ ಆಗಿವೆ. ಇದರ ಹೊರತಾಗಿ, ಪ್ರಕರಣಗಳ ಇ- ಫೈಲಿಂಗ್‌ ವ್ಯವಸ್ಥೆಗೂ ಉತ್ತೇಜನ ಸಿಗುತ್ತಿದೆ. ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆಯನ್ನು ಪರಿಚಯಿಸಲಾಗಿದ್ದು, ಇದು ಮುಂದೆ ದೊಡ್ಡ ಮಟ್ಟದ ಸುಧಾರಣೆಗೆ ನಾಂದಿ ಹಾಡಲಿದೆ. ಆದ್ದರಿಂದ, ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ರಾಜ್ಯವೂ ಮೇಲ್ದರ್ಜೆಗೇರುವಂತಾಗಬೇಕು. ನಮ್ಮ ಕಾನೂನು ಶಿಕ್ಷಣವನ್ನು ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸುವುದು ಸಹ ನಮ್ಮ ಮುಖ್ಯ ಗುರಿಯಾಗಿದೆ. 

ಸ್ನೇಹಿತರೇ,

ಸೂಕ್ಷ್ಮ ಸಂವೇದನೆಯ ನ್ಯಾಯಾಂಗ ವ್ಯವಸ್ಥೆಯು ದೇಶದ ಹಿರಿಮೆ ಜತೆಗೆ ಮಾನವೀಯ ಸಮಾಜದ ಅಗತ್ಯ ಅಂಶವಾಗಿದೆ. ಹಾಗಾಗಿ ವಿಚಾರಣಾಧೀನರ ಕುರಿತಾದ ವಿಚಾರವನ್ನು ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದೆ. ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ತ್ವರಿತ ನ್ಯಾಯ ದಾನದ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ. ವಿಚಾರಣಾಧೀನ ಕೈದಿಗಳ ವಿಚಾರದಲ್ಲೂ ರಾಜ್ಯ ಸರ್ಕಾರಗಳು ಮಾನವೀಯ ನೆಲೆಗಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು.

ಸ್ನೇಹಿತರೇ,

ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಸಂವಿಧಾನ ಪರಮೋಚ್ಛವಾದುದು. ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗ ವ್ಯವಸ್ಥೆ ರೂಪುಗೊಂಡಿರುವುದೇ ಸಂವಿಧಾನದಿಂದ. ಸರ್ಕಾರ, ಸಂಸತ್ತು ಹಾಗೂ ನಮ್ಮ ನ್ಯಾಯಾಲಯಗಳು, ಇವು ಮೂರು ಸಂವಿಧಾನವೆಂಬ ತಾಯಿಯ ಮಕ್ಕಳಿದ್ದಂತೆ. ಸಂವಿಧಾನದ ಉದಾತ್ತ ಆಶಯವನ್ನು ನಾವು ಗಮನಿಸಿದರೆ ಈ ಮೂರು ಅಂಗಗಳು ವಿಭಿನ್ನವಾಗಿದ್ದರೂ ಅವುಗಳ ಜಾರ್ಯ ನಿರ್ವಹಣೆ ಸಂಬಂಧ ಯಾವುದೇ ಚರ್ಚೆ ಅಥವಾ ಸ್ಪರ್ಧೆಗೆ  ಅವಕಾಶವೇ ಇಲ್ಲದಂತಿದೆ. ತಾಯಿಯ ಮಗುವಿನಂತೆ ಈ ಮೂರು ಅಂಗಗಳು ಭಾರತ ಮಾತೆಯ ಸೇವೆಯ ಮಾಡುತ್ತಿದ್ದು, 21ನೇ ಶತಮಾನದಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿವೆ. ಈ ಸಮ್ಮೇಳನದಲ್ಲಿ ನಡೆಯುವ ವಿಚಾರ ಮಂಥನದ ಅಮೃತವು ದೇಶದಲ್ಲಿ ಕಾನೂನು ಸುಧಾರಣೆ ನೆರವಾಗಲಿದೆ ಎಂದು ನಾನು ಆಶಿಸುತ್ತೇನೆ. ತಾವೆಲ್ಲರೂ ಸಮಯ ಮಾಡಿಕೊಂಡು ಏಕತೆಯ ಪ್ರತಿಮೆ ಹಾಗೂ ಆ ಆವರಣದಲ್ಲಿ ಕೈಗೊಂಡಿರುವ ವಿಸ್ತರಣಾ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸುವಂತೆ ಮನವಿ ಮಾಡುತ್ತೇನೆ. ದೇಶವು ಈಗ ವ್ಯಾಪಕವಾಗಿ ಮುಂದುವರಿಯಲು ಸಜ್ಜಾಗಿದೆ. ನೀವೆಲ್ಲರೂ ನಿಮಗಿರುವ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ನಿರ್ವಹಿಸಲು ಶ್ರಮಿಸಬೇಕು. ನಿಮಗೆಲ್ಲಾ ನನ್ನ ಶುಭ ಕಾಮನೆಗಳು. ಎಲ್ಲರಿಗೂ ಧನ್ಯವಾದಗಳು.

*****



(Release ID: 1868503) Visitor Counter : 686