ಪ್ರಧಾನ ಮಂತ್ರಿಯವರ ಕಛೇರಿ

ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ  ಭಾಷಣ

Posted On: 16 SEP 2022 3:30PM by PIB Bengaluru

ಘನತೆವೆತ್ತವರೇ,

ಈ ವರ್ಷದ ಸವಾಲಿನ ಜಾಗತಿಕ ಮತ್ತು ಪ್ರಾದೇಶಿಕ ಪರಿಸರದಲ್ಲಿ ಎಸ್‌ಸಿಒದ ಪರಿಣಾಮಕಾರಿ ನಾಯಕತ್ವಕ್ಕಾಗಿ ನಾನು ಅಧ್ಯಕ್ಷ ಮಿರ್ಜಿಯೋಯೆವ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಇಂದು, ಇಡೀ ಜಗತ್ತು ಸಾಂಕ್ರಾಮಿಕ ರೋಗದ ನಂತರ ಆರ್ಥಿಕ ಚೇತರಿಕೆಯ ಸವಾಲುಗಳನ್ನು ಎದುರಿಸುತ್ತಿರುವಾಗ ಎಸ್‌ಸಿಒ ಪಾತ್ರವು ಬಹಳ ಮುಖ್ಯವಾಗಿದೆ. ಎಸ್‌ ಸಿ ಒ ಸದಸ್ಯ ರಾಷ್ಟ್ರಗಳು ಜಾಗತಿಕ ಜಿಡಿಪಿಯ  ಸುಮಾರು 30 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ ಮತ್ತು ವಿಶ್ವದ ಜನಸಂಖ್ಯೆಯ 40 ಪ್ರತಿಶತದಷ್ಟು ಜನರು ಎಸ್‌ಸಿಒ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತವು ಎಸ್‌ಸಿಒ ಸದಸ್ಯರ ನಡುವೆ ಹೆಚ್ಚಿನ ಸಹಕಾರ ಮತ್ತು ಪರಸ್ಪರ ನಂಬಿಕೆಯನ್ನು ಬೆಂಬಲಿಸುತ್ತದೆ. ಉಕ್ರೇನ್‌ನಲ್ಲಿನ ಸಾಂಕ್ರಾಮಿಕ ಮತ್ತು ಬಿಕ್ಕಟ್ಟು ಜಾಗತಿಕ ಪೂರೈಕೆ ಸರಪಳಿಯಲ್ಲಿ ಅನೇಕ ಅಡೆತಡೆಗಳನ್ನು ಉಂಟುಮಾಡಿತು, ಈ ಕಾರಣದಿಂದಾಗಿ ಇಡೀ ಪ್ರಪಂಚವು ಹಿಂದೆಂದೂ ಕಾಣದಂತಹ ಇಂಧನ ಮತ್ತು ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಮ್ಮ ಪ್ರದೇಶದಲ್ಲಿ ವಿಶ್ವಾಸಾರ್ಹ, ಚೇತರಿಸಿಕೊಳ್ಳಬಲ್ಲ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸಲು ಎಸ್‌ ಸಿ ಒ ಪ್ರಯತ್ನಗಳನ್ನು ಮಾಡಬೇಕು. ಇದಕ್ಕೆ ಉತ್ತಮ ಸಂಪರ್ಕದ ಅಗತ್ಯವಿರುತ್ತದೆ, ಜೊತೆಗೆ ನಾವೆಲ್ಲರೂ ಪರಸ್ಪರ ಸಾರಿಗೆಯ ಸಂಪೂರ್ಣ ಹಕ್ಕುಗಳನ್ನು ನೀಡುವುದು ಸಹ ಮುಖ್ಯವಾಗಿದೆ.

ಘನತೆವೆತ್ತವರೇ,

ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವಲ್ಲಿ ನಾವು ಪ್ರಗತಿ ಸಾಧಿಸುತ್ತಿದ್ದೇವೆ. ಭಾರತದ ಯುವ ಮತ್ತು ಪ್ರತಿಭಾವಂತ ಕಾರ್ಯಪಡೆಯು ನಮ್ಮನ್ನು ಸ್ವಾಭಾವಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ. ಭಾರತದ ಆರ್ಥಿಕತೆಯು ಈ ವರ್ಷ ಶೇಕಡಾ 7.5 ರಷ್ಟು ಬೆಳೆಯುವ ನಿರೀಕ್ಷೆಯಿದೆ, ಇದು ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ. ನಮ್ಮ ಜನಕೇಂದ್ರಿತ ಅಭಿವೃದ್ಧಿ ಮಾದರಿಯಲ್ಲಿ ತಂತ್ರಜ್ಞಾನದ ಸರಿಯಾದ ಬಳಕೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ನಾವು ಪ್ರತಿಯೊಂದು ವಲಯದಲ್ಲೂ ನಾವೀನ್ಯತೆಯನ್ನು ಬೆಂಬಲಿಸುತ್ತಿದ್ದೇವೆ. ಇಂದು, ಭಾರತದಲ್ಲಿ 70,000 ಕ್ಕೂ ಹೆಚ್ಚು ನವೋದ್ಯಮಗಳಿವೆ, ಅವುಗಳಲ್ಲಿ 100 ಕ್ಕೂ ಹೆಚ್ಚು ಯುನಿಕಾರ್ನ್‌ಗಳಿವೆ. ನಮ್ಮ ಅನುಭವವು ಅನೇಕ ಇತರ ಎಸ್‌ ಸಿ ಒ ಸದಸ್ಯರಿಗೆ ಸಹ ಉಪಯುಕ್ತವಾಗಬಹುದು. ಈ ಉದ್ದೇಶಕ್ಕಾಗಿ, ಸ್ಟಾರ್ಟ್-ಅಪ್‌ಗಳು ಮತ್ತು ನಾವೀನ್ಯತೆಗಳ ಕುರಿತು ಹೊಸ ವಿಶೇಷ ಕಾರ್ಯಕಾರಿ ಗುಂಪನ್ನು ಸ್ಥಾಪಿಸುವ ಮೂಲಕ ಎಸ್‌ ಸಿ ಒ ಸದಸ್ಯ ರಾಷ್ಟ್ರಗಳೊಂದಿಗೆ ನಮ್ಮ ಅನುಭವವನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ.

ಘನತೆವೆತ್ತವರೇ,

ಜಗತ್ತು ಇಂದು ಮತ್ತೊಂದು ಪ್ರಮುಖ ಸವಾಲನ್ನು ಎದುರಿಸುತ್ತಿದೆ   ಮತ್ತು ಅದು ನಮ್ಮ ನಾಗರಿಕರ ಆಹಾರ ಭದ್ರತೆಯನ್ನು ಖಾತ್ರಿಪಡಿಸುವುದಾಗಿದೆ.  ಈ ಸಮಸ್ಯೆಗೆ ಒಂದು ಸಂಭವನೀಯ ಪರಿಹಾರವೆಂದರೆ  ಆಹಾರ ಧಾನ್ಯಗಳ ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸುವುದು. ನವಣೆ  ಒಂದು ಸೂಪರ್‌ಫುಡ್ ಆಗಿದ್ದು, ಸಾವಿರಾರು ವರ್ಷಗಳಿಂದ ಎಸ್‌ ಸಿ ಒ ದೇಶಗಳಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ಭಾಗಗಳಲ್ಲಿ ಬೆಳೆಯಲಾಗುತ್ತದೆ ಮತ್ತು ಆಹಾರದ ಬಿಕ್ಕಟ್ಟನ್ನು ಎದುರಿಸಲು ಸಾಂಪ್ರದಾಯಿಕ, ಪೌಷ್ಟಿಕ ಮತ್ತು ಕಡಿಮೆ-ವೆಚ್ಚದ ಪರ್ಯಾಯ ಆಹಾರ ಧಾನ್ಯವಾಗಿದೆ. 2023ನೇ ವರ್ಷವನ್ನು ಯುಎನ್ ಅಂತರಾಷ್ಟ್ರೀಯ ಮಿಲ್ಲೆಟ್ ವರ್ಷ ಎಂದು ಆಚರಿಸಲಾಗುತ್ತದೆ. ನಾವು ಎಸ್‌ ಸಿ ಒ ಅಡಿಯಲ್ಲಿ 'ಮಿಲ್ಲೆಟ್‌ ಆಹಾರ ಉತ್ಸವ'ವನ್ನು ಆಯೋಜಿಸುವುದನ್ನು ಪರಿಗಣಿಸಬೇಕು.

ಭಾರತವು ಇಂದು ವಿಶ್ವದಲ್ಲಿ ವೈದ್ಯಕೀಯ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮಕ್ಕೆ ಅತ್ಯಂತ ಮಿತವ್ಯಯದ ತಾಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಅನ್ನು ಗುಜರಾತ್‌ನಲ್ಲಿ ಏಪ್ರಿಲ್ 2022 ರಲ್ಲಿ ಉದ್ಘಾಟಿಸಲಾಯಿತು. ಇದು ವಿಶ್ವ ಆರೋಗ್ಯ ಸಂಸ್ಥೆಯ ಮೊದಲ ಮತ್ತು ಸಾಂಪ್ರದಾಯಿಕ ಔಷಧದ ಏಕೈಕ ಜಾಗತಿಕ ಕೇಂದ್ರವಾಗಿದೆ. ನಾವು ಎಸ್‌ ಸಿ ಒ ದೇಶಗಳಲ್ಲಿ ಸಾಂಪ್ರದಾಯಿಕ ಔಷಧದ ಮೇಲೆ ಸಹಕಾರವನ್ನು ಹೆಚ್ಚಿಸಬೇಕು. ಇದಕ್ಕಾಗಿ ಭಾರತವು ಸಾಂಪ್ರದಾಯಿಕ ಔಷಧದ ಹೊಸ ಎಸ್‌ ಸಿ ಒ ವರ್ಕಿಂಗ್ ಗ್ರೂಪ್ ಅನ್ನು ಪ್ರಾರಂಭಿಸುತ್ತದೆ.

ನನ್ನ ಮಾತನ್ನುಮುಗಿಸುವ ಮೊದಲು, ಇಂದಿನ ಸಭೆಯ ಅತ್ಯುತ್ತಮವಾಗಿ ನಡೆಸಿದಕ್ಕಾಗಿ ಮತ್ತು ಆತ್ಮೀಯ ಆತಿಥ್ಯಕ್ಕಾಗಿ ನಾನು ಮತ್ತೊಮ್ಮೆ ಅಧ್ಯಕ್ಷ ಮಿರ್ಜಿಯೋಯೆವ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ತುಂಬಾ ಧನ್ಯವಾದಗಳು!
 
ಸೂಚನೆ : ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

*****



(Release ID: 1859856) Visitor Counter : 116