ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಯುವ ವೃತ್ತಿಪರರಿಗಾಗಿ "ಗ್ರ್ಯಾಂಡ್ ಆನಿಯನ್ ಚಾಲೆಂಜ್" ಆರಂಭಿಸಲಾಗಿದೆ


ಕೊಯ್ಲಿನ ನಂತರದ ಈರುಳ್ಳಿ ಫಸಲಿನಲ್ಲಿ ನಷ್ಟವನ್ನು ಕಡಿಮೆ ಮಾಡಲು ಉನ್ನತ ಶಿಕ್ಷಣ ಸಂಸ್ಥೆಗಳು, ವೃತ್ತಿಪರರು ಮತ್ತು ಸಂಶೋಧನಾ ಸಂಸ್ಥೆಗಳು “ಗ್ರ್ಯಾಂಡ್ ಆನಿಯನ್ ಚಾಲೆಂಜ್”ನಲ್ಲಿ ಭಾಗವಹಿಸುವಂತೆ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀ ರೋಹಿತ್ ಕುಮಾರ್ ಸಿಂಗ್ ಕೋರಿದ್ದಾರೆ

Posted On: 05 AUG 2022 5:52PM by PIB Bengaluru

ಗ್ರಾಹಕರ ವ್ಯವಹಾರಗಳ ಇಲಾಖೆಯು ಇಂದು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಉಪಕುಲಪತಿಗಳು, ಪ್ರಾಧ್ಯಾಪಕರು, ಹೆಸರಾಂತ ಸಂಸ್ಥೆಗಳ ಡೀನ್‌ಗಳು, ಹಿರಿಯ ಶಿಕ್ಷಣ ತಜ್ಞರು, ಸ್ಟಾರ್ಟ್‌ಅಪ್‌ಗಳ ಕಾರ್ಯನಿರ್ವಾಹಕರು, ಬಿ ಎ ಆರ್‌ ಸಿ ವಿಜ್ಞಾನಿಗಳು, ಪರಮಾಣು ಶಕ್ತಿ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಸಚಿವಾಲಯ, ಡಿಪಿಐಐಟಿ ಮತ್ತು ಕೃಷಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಕೆಲಸ ಮಾಡುವ ವೃತ್ತಿಪರರರೊಂದಿಗೆ “ಗ್ರ್ಯಾಂಡ್ ಆನಿಯನ್ ಚಾಲೆಂಜ್”ಕುರಿತು ವೀಡಿಯೊ ಕಾನ್ಫರೆನ್ಸ್ ನಡೆಸಿತು.

ಈ ಸವಾಲು ಕೊಯ್ಲಿಗೆ ಮುಂಚಿನ ತಂತ್ರಗಳನ್ನು ಸುಧಾರಿಸಲು ಮೂಲಮಾದರಿಗಳು, ಪ್ರಾಥಮಿಕ ಸಂಸ್ಕರಣೆ, ಸಂಗ್ರಹಣೆ ಮತ್ತು ದೇಶದಲ್ಲಿ ಕೊಯ್ಲು ಮಾಡಿದ ನಂತರದ ಈರುಳ್ಳಿಯನ್ನು ಸಾಗಿಸಲು ಯುವ ವೃತ್ತಿಪರರು, ಪ್ರೊಫೆಸರ್‌ಗಳು, ಉತ್ಪನ್ನ ವಿನ್ಯಾಸಗಳ ವಿಜ್ಞಾನಿಗಳಿಂದ ಆಲೋಚನೆಗಳನ್ನು ಬಯಸುತ್ತದೆ. ಈ ಸವಾಲು ನಿರ್ಜಲೀಕರಣ, ಈರುಳ್ಳಿಯ ಮೌಲ್ಯವರ್ಧನೆ ಮತ್ತು ಈರುಳ್ಳಿ ಆಹಾರ ಸಂಸ್ಕರಣಾ ತಂತ್ರಜ್ಞಾನದಲ್ಲಿ ಆಧುನೀಕರಣದ ಕಲ್ಪನೆಗಳನ್ನು ಸಹ ಬಯಸುತ್ತದೆ.

ಗ್ರಾಹಕ ವ್ಯವಹಾರಗಳ ಇಲಾಖೆಯು ಸ್ಥಾಪಿಸಿರುವ ಗ್ರ್ಯಾಂಡ್ ಆನಿಯನ್ ಚಾಲೆಂಜ್ ಅನ್ನು ದೇಶದ ಅತ್ಯುತ್ತಮ ಪ್ರತಿಭೆಗಳಿಂದ ಮೇಲಿನ ಎಲ್ಲಾ ಡೊಮೇನ್‌ಗಳಲ್ಲಿ ಹೊಸ ಆಲೋಚನೆಗಳನ್ನು ಪಡೆಯಲು 20.7.2022 ರಿಂದ 15.10.2022 ರವರೆಗೆ ತೆರೆಯಲಾಗಿದೆ. ಈ ಸವಾಲಿನ ಕುರಿತು ಹೆಚ್ಚಿನ ಮಾಹಿತಿಯು ಇಲಾಖೆಯ ವೆಬ್‌ಸೈಟ್ doca.gov.in/goi ನಲ್ಲಿ ಲಭ್ಯವಿದೆ.

ಗ್ರ್ಯಾಂಡ್ ಆನಿಯನ್ ಚಾಲೆಂಜ್ ನೋಂದಣಿ ವೆಬ್‌ಪುಟವು ಇದುವರೆಗೆ 122 ನೋಂದಣಿಗಳನ್ನು ಸ್ವೀಕರಿಸಿದೆ ಮತ್ತು ಕೆಲವರು ಈಗಾಗಲೇ ತಮ್ಮ ಆಲೋಚನೆಗಳನ್ನು ಸಲ್ಲಿಸಿದ್ದಾರೆ. ಸುಧಾರಣೆಗಳು ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಹುಡುಕುವ ನಾಲ್ಕು ವಿಷಯಗಳಲ್ಲಿ ಇಲಾಖೆಯು 40 ಉತ್ತಮ ಆಲೋಚನೆಗಳನ್ನು ಆಯ್ಕೆ ಮಾಡುತ್ತದೆ. ಆದ್ದರಿಂದ, ಈರುಳ್ಳಿಯ ಪೂರ್ವ ಕೊಯ್ಲು, ಪ್ರಾಥಮಿಕ ಸಂಸ್ಕರಣೆ, ಸಂಗ್ರಹಣೆ ಮತ್ತು ಸಾಗಣೆಯಲ್ಲಿನ ನಷ್ಟವನ್ನು ಉಳಿಸುವಲ್ಲಿ ವೆಚ್ಚ ಪರಿಣಾಮಕಾರಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಈ ಪ್ರಕ್ರಿಯೆಯಲ್ಲಿ ಆತ್ಮ ನಿರ್ಭರ ಭಾರತ ಕಾರ್ಯಕ್ರಮವನ್ನು ಬೆಂಬಲಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ಸಂಸ್ಥೆಗಳು ಆಲೋಚನೆಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

ವೀಡಿಯೊ ಕಾನ್ಫರೆನ್ಸ್ ಸಂದರ್ಭದಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆ ಸಹಾಯಕ ಕಾರ್ಯದರ್ಶಿ ಶ್ರೀ ಯೋಗೀಶ್ ಪಾಟೀಲ್, ಈರುಳ್ಳಿ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಣೆಯಲ್ಲಿ ದೇಶವು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳ ಕುರಿತು ಸಂಕ್ಷಿಪ್ತ ಪ್ರಸ್ತುತಿ ನೀಡಿದರು. ಸವಾಲಿನ ನಂತರ, ವಿನೂತನ ಆಲೋಚನೆಗಳಿಂದ ಈರುಳ್ಳಿ ಸಂಗ್ರಹಣೆಯಲ್ಲಿನ ನಷ್ಟವನ್ನು ಶೇ.5-10 ರಷ್ಟು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಶಿಕ್ಷಣ ಸಚಿವಾಲಯದ ನಾವೀನ್ಯತಾ ಘಟಕದ ಮುಖ್ಯ ನಾವೀನ್ಯ ಅಧಿಕಾರಿ ಡಾ. ಅಭಯ್ ಜೇರೆ ಅವರು ಸವಾಲಿನಲ್ಲಿ ಭಾಗವಹಿಸುವ ಮೂರು ಹಂತಗಳನ್ನು ವಿವರಿಸಿದರು ಮತ್ತು ಈ ಸವಾಲಿನಲ್ಲಿ ಎಲ್ಲರೂ ಭಾಗವಹಿಸುವಂತೆ ಕೋರಿದರು.

ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಅಣುಶಕ್ತಿ ವಿಭಾಗದ ವಿಜ್ಞಾನಿ ಡಾ.ಎಸ್.ಗೌತಮ್ ಅವರು ನಡೆಸಿದ ಅಧ್ಯಯನಗಳ ಆಧಾರದ ಮೇಲೆ ಸಂಗ್ರಹವಾಗಿರುವ ಈರುಳ್ಳಿಯ ಸಂಗ್ರಹ ಜೀವಿತಾವಧಿಯನ್ನು ಹೆಚ್ಚಿಸಲು ವಿಕಿರಣದ ಪರಿಣಾಮವನ್ನು ವಿವರಿಸಿದರು, ಇದು ನಷ್ಟವನ್ನು ತೀವ್ರವಾಗಿ ಕಡಿಮೆ ಮಾಡುವಲ್ಲಿ ತಂತ್ರಜ್ಞಾನದ ಪ್ರಯೋಜನಗಳ ಬಗ್ಗೆ ಬೆಳಕು ಚೆಲ್ಲಿತು.

ವಿವಿಧ ಸಂಸ್ಥೆಗಳು/ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ಮತ್ತು ಪ್ರಾಧ್ಯಾಪಕರು ಈರುಳ್ಳಿಯ ಸಂಗ್ರಹಣೆ ಮತ್ತು ಸಾಗಣೆಯ ಸಮಯದಲ್ಲಿ ಸಂಭವಿಸುವ ನಷ್ಟವನ್ನು ಕಡಿಮೆ ಮಾಡಲು ಅನೇಕ ವಿಶಿಷ್ಟ ವಿಚಾರಗಳನ್ನು ಪ್ರಸ್ತುತಪಡಿಸಿದರು.

ದೇಶಾದ್ಯಂತದ ವಿವಿಧ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಖಾಸಗಿ ವಲಯದ ಸ್ಟಾರ್ಟ್‌ಅಪ್‌ಗಳಿಂದ 282 ಕ್ಕೂ ಹೆಚ್ಚು ಮಂದಿ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು.

ಕಟಾವು ಮಾಡಿದ ನಂತರ ಈರುಳ್ಳಿಯ ನಷ್ಟವನ್ನು ಕಡಿಮೆ ಮಾಡಲು ಕಡಿಮೆ ವೆಚ್ಚದ ಮತ್ತು ಸುಲಭವಾಗಿ ಪುನರಾವರ್ತಿಸಬಹುದಾದ ತಂತ್ರಜ್ಞಾನ ಪರಿಹಾರಗಳನ್ನು ರೈತರಿಗೆ ಅಭಿವೃದ್ಧಿಪಡಿಸಲು ಮತ್ತು ದೇಶದಲ್ಲಿ ಅದನ್ನು ಸುಸ್ಥಿರವಾಗಿ ಬಳಸಿಕೊಳ್ಳಲು ಪ್ರತಿಯೊಬ್ಬರನ್ನು ಸವಾಲಿನಲ್ಲಿ ಭಾಗವಹಿಸುವಂತೆ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀ ರೋಹಿತ್ ಕುಮಾರ್ ಸಿಂಗ್ ಕೋರಿದರು.

 

********

 



(Release ID: 1848945) Visitor Counter : 105