ಪ್ರಧಾನ ಮಂತ್ರಿಯವರ ಕಛೇರಿ

31.07.2022ರಂದು ‘ಮನ್ ಕಿ ಬಾತ್’ 91ನೇ ಸಂಚಿಕೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣದ ಅನುವಾದ

Posted On: 31 JUL 2022 11:35AM by PIB Bengaluru

ನನ್ನ ಆತ್ಮೀಯ ದೇಶವಾಸಿಗಳೇ, ನಮಸ್ಕಾರ..!

 

ಇದು 'ಮನ್ ಕಿ ಬಾತ್' ನ 91ನೇ ಸಂಚಿಕೆಯಾಗಿದೆ. ಈ ಹಿಂದೆ ನಾವು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೇವೆ, ನಾನಾ ವಿಷಯಗಳ ಬಗ್ಗೆ ನಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದೇವೆ, ಆದರೆ, ಈ ಬಾರಿಯ 'ಮನ್ ಕಿ ಬಾತ್' ಕಾರ್ಯಕ್ರಮ ತುಂಬಾ ವಿಶೇಷವಾಗಿದೆ. ಅದಕ್ಕೆ ಕಾರಣ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುತ್ತಿರುವುದು. ನಾವೆಲ್ಲರೂ ಈ ಒಂದು ಮಹತ್ವದ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ. ದೇವರು ನಮಗೆ ಈ ಸೌಭಾಗ್ಯ ಕರುಣಿಸಿದ್ದಾನೆ.

ನೀವು ಸಹ ಯೋಚಿಸಿ, ಒಂದು ವೇಳೆ, ನಾವು ಗುಲಾಮಗಿರಿಯ ಯುಗದಲ್ಲಿ ಜನಿಸಿದ್ದರೆ, ಈ ದಿನವನ್ನು ನಾವು ಹೇಗೆ ಊಹಿಸಿಕೊಳ್ಳ ಬಹುದಾಗಿತ್ತು? ಗುಲಾಮಗಿರಿಯಿಂದ ಮುಕ್ತವಾಗುವ ಆ ಹಂಬಲ, ಪರಾಧೀನತೆಯ ಸಂಕೋಲೆಯಿಂದ ಬಿಡಿಸಿಕೊಂಡು ಸ್ವಾತಂತ್ರ್ಯ ಪಡೆಯುವ ಕಾತುರ- ಎಷ್ಟು ದೊಡ್ಡದಾಗಿರಬಹುದು. ಆ ದಿನಗಳು, ಯಾವಾಗ ನಾವು ಪ್ರತಿದಿನ, ಲಕ್ಷಾಂತರ ದೇಶವಾಸಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ, ಸಂಘರ್ಷ ಮಾಡುವುದನ್ನು, ಬಲಿದಾನ ಮಾಡುವುದನ್ನು ನಾವು ನೋಡುತ್ತಿದ್ದುದಾರೆ, ನಾವು ಪ್ರತಿದಿನ ಬೆಳಗ್ಗೆ 'ನನ್ನ ಭಾರತ ಯಾವಾಗ ಸ್ವತಂತ್ರವಾಗುತ್ತದೆ ಮತ್ತು ಆಗಬಹುದು’ ಎಂಬ ಕನಸಿನೊಂದಿಗೆ ಏಳಬೇಕಾಗಿತ್ತು. ಅಲ್ಲದೆ ನಮ್ಮ ಜೀವನದಲ್ಲಿ ವಂದೇ ಮಾತರಂ ಮತ್ತು ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಾ, ಮುಂದಿನ ಪೀಳಿಗೆಗೆ ನಾವು ನಮ್ಮ ಜೀವ ಸಮರ್ಪಿಸಿಕೊಳ್ಳುವ ಆ ದಿನ ಎಂದು ಬರುತ್ತದೆ ಎಂದು ಮತ್ತು ನಮ್ಮ ಯೌವನವು ಹಾಗೆಯೇ ಕಳೆದುಹೋಗುತ್ತಿತ್ತು.

ಮಿತ್ರರೇ, ಜುಲೈ 31 ರಂದು, ಅಂದರೆ ಈ ಇಂದು ನಾವೆಲ್ಲ ದೇಶವಾಸಿಗಳು, ಹುತಾತ್ಮ ಯೋಧ ಶಹೀದ್ ಉಧಂ ಸಿಂಗ್ ಅವರಿಗೆ ನಮಿಸುತ್ತೇವೆ. ದೇಶಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಇತರ ಎಲ್ಲ ಮಹಾನ್ ಕ್ರಾಂತಿಕಾರಿಗಳಿಗೆ ನಾನು ವಿನಮ್ರ ಗೌರವ ನಮನವನ್ನು ಸಲ್ಲಿಸುತ್ತೇನೆ.

ಮಿತ್ರರೇ, ಸ್ವಾತಂತ್ರ್ಯದ ಅಮೃತ ಮಹೋತ್ಸವವು ಜನಾಂದೋಲನದ ರೂಪ ಪಡೆಯುತ್ತಿರುವುದನ್ನು ಕಂಡು ನನಗೆ ತುಂಬಾ ಸಂತೋಷವಾಗುತ್ತಿದೆ. ಎಲ್ಲಾ ಕ್ಷೇತ್ರದ ಮತ್ತು ಸಮಾಜದ ಎಲ್ಲಾ ವರ್ಗದ ಜನರು ಇದಕ್ಕೆ ಸಂಬಂಧಿಸಿದ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೇಘಾಲಯದಲ್ಲಿ ಅಂತಹುದೇ ಒಂದು ಕಾರ್ಯಕ್ರಮ ನಡೆದಿದೆ. ಮೇಘಾಲಯದ ವೀರ ಯೋಧ, ಯು. ತಿರೋತ್ ಸಿಂಗ್ ಅವರ ಪುಣ್ಯತಿಥಿಯಂದು ಜನರು ಅವರನ್ನು ನೆನಪಿಸಿಕೊಂಡರು. ತಿರೋತ್ ಸಿಂಗ್ ಅವರು ಖಾಸಿ ಬೆಟ್ಟಗಳನ್ನು ನಿಯಂತ್ರಿಸಲು ಮತ್ತು ಅಲ್ಲಿನ ಸಂಸ್ಕೃತಿಯನ್ನು ನಾಶಗೊಳಿಸಲು ಬ್ರಿಟಿಷರು ನಡೆಸಿದ ಸಂಚನ್ನು ಪ್ರಬಲವಾಗಿ ವಿರೋಧಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಸುಂದರ ಪ್ರದರ್ಶನ ನೀಡಿದರು. ಅವರು ಇತಿಹಾಸವನ್ನು ಜೀವಂತವಾಗಿರಿಸಿದರು. ಮೇಘಾಲಯದ ಶ್ರೇಷ್ಠ ಸಂಸ್ಕೃತಿಯನ್ನು ಅತ್ಯಂತ ಸುಂದರವಾಗಿ ಬಿಂಬಿಸುವ ಅತ್ಯಂತ ಸಂಭ್ರಮದ ಸಮಾರಂಭವನ್ನು ಕೂಡ ಆಯೋಜನೆಗೊಂಡಿತ್ತು. ಕೆಲವು ವಾರಗಳ ಹಿಂದೆ, ಕರ್ನಾಟಕದಲ್ಲಿ 'ಅಮೃತ ಭಾರತಿಗೆ ಕನ್ನಡದಾರತಿ' ಎಂಬ ವಿಶಿಷ್ಟ ಅಭಿಯಾನವನ್ನು ಆರಂಭಿಸಲಾಗಿದೆ. ಅದರಲ್ಲಿ ರಾಜ್ಯದ 75 ಸ್ಥಳಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ವೈಭವ್ಯದಿಂದ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಜೊತೆಗೆ ಸ್ಥಳೀಯ ಸಾಹಿತ್ಯ ಸಾಧನೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಯಿತು.

ಮಿತ್ರರೇ, ಇದೇ ಜುಲೈ ತಿಂಗಳಲ್ಲಿ 'ಸ್ವಾತಂತ್ರ್ಯದ ರೈಲುಗಾಡಿ ಮತ್ತು ರೈಲು ನಿಲ್ದಾಣ' ಎಂದು ಹೆಸರಿಡಲಾದ ಬಹಳ ಆಸಕ್ತಿದಾಯಕ ಪ್ರಯತ್ನವನ್ನು ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರೈಲ್ವೇಯ ಪಾತ್ರವನ್ನು ಜನರಿಗೆ ತಿಳಿಸಿಕೊಡುವುದು ಈ ಪ್ರಯತ್ನದ ಉದ್ದೇಶವಾಗಿದೆ. ಸ್ವಾತಂತ್ರ್ಯ ಚಳವಳಿಯ ಇತಿಹಾಸದೊಂದಿಗೆ ಸಂಬಂಧ ಹೊಂದಿರುವ ಇಂತಹ ಅನೇಕ ರೈಲು ನಿಲ್ದಾಣಗಳು ದೇಶದಲ್ಲಿ ಕಾಣಬಹುದು. ಈ ರೈಲು ನಿಲ್ದಾಣಗಳ ಬಗ್ಗೆ ತಿಳಿದರೆ ನಿಮಗೂ ಸಹ ಆಶ್ಚರ್ಯವಾಗಬಹುದು, ಜಾರ್ಖಂಡ್‌ನ ಗೋಮೋ ಜಂಕ್ಷನ್ ಅನ್ನು ಈಗ ಅಧಿಕೃತವಾಗಿ 'ನೇತಾಜಿ ಸುಭಾಸ್ ಚಂದ್ರ ಬೋಸ್ ಜಂಕ್ಷನ್ ಗೋಮೋ' ಎಂದು ಕರೆಯಲಾಗುತ್ತದೆ. ಅದು ಏಕೆ ಗೊತ್ತೇ? ವಾಸ್ತವವಾಗಿ ಈ ನಿಲ್ದಾಣದಲ್ಲಿ ನೇತಾಜಿ ಸುಭಾಷ್ ಅವರು ಕಾಲ್ಕಾ ಮೇಲ್ ರೈಲು ಹತ್ತಿ ಬ್ರಿಟಿಷ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಲಕ್ನೋ ಬಳಿಯ ಕಾಕೋರಿ ರೈಲು ನಿಲ್ದಾಣದ ಹೆಸರನ್ನು ನೀವೆಲ್ಲರೂ ಕೇಳಿರಬೇಕು. ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ಲಾ ಖಾನ್ ಅವರಂತಹ ವೀರರ ಹೆಸರುಗಳು ಈ ನಿಲ್ದಾಣದೊಂದಿಗೆ ಸಂಬಂಧ ಹೊಂದಿವೆ. ಇಲ್ಲಿಂದ ರೈಲಿನಲ್ಲಿ ಹೋಗುವ ಬ್ರಿಟಿಷರ ಖಜಾನೆಯನ್ನು ಲೂಟಿ ಮಾಡುವ ಮೂಲಕ ವೀರ ಕ್ರಾಂತಿಕಾರಿಗಳು ಬ್ರಿಟಿಷರಿಗೆ ತಮ್ಮ ಶಕ್ತಿಯನ್ನು ತೋರಿಸಿದ್ದರು. ನೀವು ತಮಿಳುನಾಡಿನ ಜನರೊಂದಿಗೆ ಮಾತನಾಡುವಾಗ, ತೂತುಕುಡಿ ಜಿಲ್ಲೆಯ ವಾಂಚಿ ಮಣಿಯಾಚ್ಚಿ ಜಂಕ್ಷನ್ ಬಗ್ಗೆ ತಿಳಿದುಕೊಳ್ಳಬಹುದು. ಈ ನಿಲ್ದಾಣಕ್ಕೆ ತಮಿಳು ಸ್ವಾತಂತ್ರ್ಯ ಹೋರಾಟಗಾರ ವಾಂಚಿನಾಥನ್ ಜಿ ಅವರ ಹೆಸರನ್ನು ಇಡಲಾಗಿದೆ. 25ರ ಹರೆಯದ ಯುವಕ ವಾಂಚಿ ಬ್ರಿಟಿಷ್ ಕಲೆಕ್ಟರ್‌ಗೆ ಆತನ ಕೃತ್ಯಗಳಿಗಾಗಿ ಶಿಕ್ಷೆ ನೀಡಿದ ಸ್ಥಳ ಇದಾಗಿದೆ.

ಮಿತ್ರರೇ, ಈ ಪಟ್ಟಿ ತುಂಬಾ ಉದ್ದವಾಗಿದೆ. ದೇಶದಾದ್ಯಂತ 24 ರಾಜ್ಯಗಳಲ್ಲಿ ಹರಡಿರುವ ಇಂತಹ 75 ರೈಲು ನಿಲ್ದಾಣಗಳನ್ನು ಗುರುತಿಸಲಾಗಿದೆ. ಈ 75 ನಿಲ್ದಾಣಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗುತ್ತಿದ್ದು, ಅಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ನೀವು ನಿಮ್ಮ ಸಮೀಪದ ಅಂತಹ ಐತಿಹಾಸಿಕ ನಿಲ್ದಾಣಕ್ಕೆ ಭೇಟಿ ನೀಡಲು ಸಮಯವನ್ನು ತೆಗೆದಿರಿಸಿ. ನಿಮಗೆ ತಿಳಿದಿಲ್ಲದ ಸ್ವಾತಂತ್ರ್ಯ ಚಳವಳಿಯ ಇತಿಹಾಸದ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಬಹುದು. ನಾನು ಅಂತಹ ನಿಲ್ದಾಣಗಳ ಹತ್ತಿರದ ಶಾಲೆಯ ವಿದ್ಯಾರ್ಥಿಗಳನ್ನು, ಶಿಕ್ಷಕರು ತಮ್ಮ ಶಾಲೆಯ ಸಣ್ಣ ಮಕ್ಕಳನ್ನು ಅಂತಹ ರೇಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಇಡೀ ಘಟನೆಯನ್ನು ಆ ಮಕ್ಕಳಿಗೆ ವಿವರಿಸಬೇಕು ಎಂದು ಒತ್ತಾಯಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ 'ಹರ್ ಘರ್ ತಿರಂಗಾ- ಹರ್ ಘರ್ ತಿರಂಗಾ, ಮನೆ ಮನೆಯಲ್ಲೂ ತ್ರಿವರ್ಣ ಧ್ವಜ' ವಿಶೇಷ ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ, ಆಗಸ್ಟ್ 13 ರಿಂದ 15 ರವರೆಗೆ, ಒಂದು ವಿಶೇಷ ಅಭಿಯಾನದಲ್ಲಿ ನೀವು ನಿಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು. ತ್ರಿವರ್ಣ ಧ್ವಜ ನಮ್ಮನ್ನು ಬೆಸೆಯುತ್ತದೆ. ದೇಶಕ್ಕಾಗಿ ಏನನ್ನಾದರೂ ಮಾಡಲು ಉತ್ತೇಜಿಸುತ್ತದೆ. ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ ನಾವೆಲ್ಲರೂ ನಮ್ಮ ಸಾಮಾಜಿಕ ಮಾಧ್ಯಮ ಜಾಲತಾಣಗಳ ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜ ಹಾಕಿಕೊಳ್ಳಬೇಕು ಎಂಬುದು ನನ್ನ ಸಲಹೆ. ಅಂದಹಾಗೆ, ನಿಮಗೆ ಗೊತ್ತೇ? ಆಗಸ್ಟ್ 2ಕ್ಕೂ ನಮ್ಮ ತ್ರಿವರ್ಣ ಧ್ವಜಕ್ಕೂ ವಿಶೇಷ ಸಂಬಂಧವಿದೆ. ಈ ದಿನ ನಮ್ಮ ರಾಷ್ಟ್ರಧ್ವಜ ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಜಿ ಅವರ ಜನ್ಮದಿನ. ಅವರಿಗೆ ನನ್ನ ಗೌರವಪೂರ್ವಕ ಶ್ರದ್ದಾಂಜಲಿ ಸಲ್ಲಿಸುತ್ತೇನೆ. ನಮ್ಮ ರಾಷ್ಟ್ರಧ್ವಜದ ಬಗ್ಗೆ ಮಾತನಾಡುವಾಗ, ನಾನು ಶ್ರೇಷ್ಠ ಕ್ರಾಂತಿಕಾರಿ ಮೇಡಂ ಕಾಮಾ ಅವರನ್ನೂ ನೆನಪಿಸಿಕೊಳ್ಳುತ್ತೇನೆ. ತ್ರಿವರ್ಣ ಧ್ವಜವನ್ನು ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಮಿತ್ರರೇ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಆಯೋಜಿಸಲಾಗುತ್ತಿರುವ ಈ ಎಲ್ಲಾ ಕಾರ್ಯಕ್ರಮಗಳ ದೊಡ್ಡ ಸಂದೇಶವೆಂದರೆ ದೇಶವಾಸಿಗಳಾದ ನಾವೆಲ್ಲರೂ ನಮ್ಮ ಕರ್ತವ್ಯವನ್ನು ಪೂರ್ಣ ನಿಷ್ಠೆಯಿಂದ ಪಾಲಿಸಬೇಕು. ಆಗ ಮಾತ್ರ ನಾವು ಆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸಾಗಿಸಲು ಸಾಧ್ಯ ಮತ್ತು ಅವರ ಕನಸಿನ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದಲೇ ನಮ್ಮ ಮುಂದಿನ 25 ವರ್ಷಗಳ ಈ ಅಮೃತ ಕಾಲವು ಪ್ರತಿಯೊಬ್ಬ ದೇಶವಾಸಿಯೂ ತಮ್ಮ ಕರ್ತವ್ಯ ನಿರ್ವಹಿಸಬೇಕಾದ ಅವಧಿಯಾಗಿದೆ.

ದೇಶವನ್ನು ವಿಮೋಚನೆಗೊಳಿಸಲು ನಮ್ಮ ವೀರ ಹೋರಾಟಗಾರರು ನಮಗೆ ಈ ಜವಾಬ್ದಾರಿ ನೀಡಿದ್ದಾರೆ ಮತ್ತು ಅದನ್ನು ನಾವು ಸಂಪೂರ್ಣ ಸಾಕಾರಗೊಳಿಸಬೇಕಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾ ವಿರುದ್ಧ ನಮ್ಮ ದೇಶವಾಸಿಗಳ ಹೋರಾಟ ಇನ್ನೂ ನಡೆಯುತ್ತಿದೆ. ಇಡೀ ಜಗತ್ತು ಇನ್ನೂ ಸೆಣೆಸುತ್ತಿದೆ. ಜನರಲ್ಲಿ ಸಮಗ್ರ ಆರೋಗ್ಯರಕ್ಷಣೆ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯು, ಪ್ರತಿಯೊಬ್ಬರಿಗೂ ಸಾಕಷ್ಟು ಸಹಾಯ ಮಾಡಿದೆ. ಇದರಲ್ಲಿ ಭಾರತೀಯ ಸಾಂಪ್ರದಾಯಿಕ ಪದ್ಧತಿಗಳು ಎಷ್ಟು ಉಪಯುಕ್ತ ಎಂದು ನಮಗೆಲ್ಲರಿಗೂ ತಿಳಿದಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ, 'ಆಯುಷ್' ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುವಂತಾಗಿದೆ. ಜಗತ್ತಿನಾದ್ಯಂತ ಆಯುರ್ವೇದ ಮತ್ತು ಭಾರತೀಯ ಔಷಧಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತಿದೆ. ಇದು ಆಯುಷ್ ರಫ್ತು ದಾಖಲೆಯ ಪ್ರಮಾಣ ಏರಿಕೆಯಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ ಮತ್ತು ಈ ವಲಯದಲ್ಲಿ ಅನೇಕ ಹೊಸ ನವೋದ್ಯಮಗಳು ಸಹ ಉದಯವಾಗುತ್ತಿರುವುದು ತುಂಬಾ ಸಂತೋಷಕರವಾಗಿದೆ. ಇತ್ತೀಚೆಗೆ, ಒಂದು ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ ನಡೆಯಿತು. ಅದರಲ್ಲಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಹೂಡಿಕೆ ಪ್ರಸ್ತಾವ ಬಂದಿವೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಕೊರೋನಾ ಅವಧಿಯಲ್ಲಿ ಔಷಧೀಯ ಗಿಡಮೂಲಿಕೆಗಳ ಸಂಶೋಧನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ ಎಂಬುದು ಮತ್ತೊಂದು ಪ್ರಮುಖ ಸಂಗತಿಯಾಗಿದೆ. ಈ ಕುರಿತು ಹಲವು ಸಂಶೋಧನಾ ಅಧ್ಯಯನಗಳು ಪ್ರಕಟವಾಗುತ್ತಿವೆ. ಇದು ಖಂಡಿತವಾಗಿಯೂ ಉತ್ತಮ ಆರಂಭವಾಗಿದೆ.

ಮಿತ್ರರೇ, ನಾನಾ ರೀತಿಯ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳ ಬಗ್ಗೆ ದೇಶದಲ್ಲಿ ಮತ್ತೊಂದು ದೊಡ್ಡ ಪ್ರಯತ್ನ ನಡೆದಿದೆ. ‘ಭಾರತೀಯ ವರ್ಚುವಲ್ ಹರ್ಬೇರಿಯಂ’ ಅನ್ನು ಜುಲೈ ತಿಂಗಳಲ್ಲಿ ಆರಂಭಿಸಲಾಗಿದೆ. ನಮ್ಮ ಬೇರುಗಳೊಂದಿಗೆ ಸಂಪರ್ಕ ಸಾಧಿಸಲು ನಾವು ಡಿಜಿಟಲ್ ಜಗತ್ತನ್ನು ಹೇಗೆ ಬಳಸಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ. ಭಾರತೀಯ ವರ್ಚುವಲ್ ಹರ್ಬೇರಿಯಂ, ಸಂರಕ್ಷಿತ ಸಸ್ಯಗಳು ಅಥವಾ ಸಸ್ಯದ ಭಾಗಗಳ ಡಿಜಿಟಲ್ ಚಿತ್ರಗಳ ಆಸಕ್ತಿದಾಯಕ ಸಂಗ್ರಹವಾಗಿದೆ, ಇದು ಜಾಲತಾಣದಲ್ಲಿ ಉಚಿತವಾಗಿ ಲಭ್ಯವಿದೆ. ಈ ವರ್ಚುವಲ್ ಹರ್ಬೇರಿಯಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಾದರಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿ ಇದೆ. ವರ್ಚುವಲ್ ಹರ್ಬೇರಿಯಂನಲ್ಲಿ, ಭಾರತದ ಸಸ್ಯಶಾಸ್ತ್ರೀಯ ವೈವಿಧ್ಯದ ಶ್ರೀಮಂತ ಚಿತ್ರಣವೂ ಗೋಚರಿಸುತ್ತದೆ. ಭಾರತೀಯ ಸಸ್ಯವರ್ಗದ ಸಂಶೋಧನೆಗೆ ಭಾರತೀಯ ವರ್ಚುವಲ್ ಹರ್ಬೇರಿಯಂ ಪ್ರಮುಖ ಸಂಪನ್ಮೂಲವಾಗಲಿದೆ ಎಂಬ ವಿಶ್ವಾಸ ನನಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿ ಬಾರಿಯೂ 'ಮನ್ ಕಿ ಬಾತ್' ನಲ್ಲಿ ನಮ್ಮ ಮುಖದಲ್ಲಿ ಮುಗುಳ್ನಗು ಮೂಡಿಸುವಂತಹ ದೇಶವಾಸಿಗಳ ಅಂತಹ ಯಶಸ್ಸಿನ ಬಗ್ಗೆ ನಾವು ಚರ್ಚಿಸುತ್ತೇವೆ. ಯಶಸ್ಸಿನ ಕಥೆಯು ಮುಗುಳ್ನಗೆ ಹರಡಿದರೆ ಮತ್ತು ಸಿಹಿಯಾಗಿ ರಚಿಸಿದರೆ, ನೀವು ಖಂಡಿತವಾಗಿಯೂ ಅದನ್ನು ಕೇಕ್ ಮೇಲೆ ಐಸ್ ಇಟ್ಟ ಹಾಗೆ ಎಂದು ಕರೆಯುತ್ತೀರಿ. ಇತ್ತೀಚಿನ ದಿನಗಳಲ್ಲಿ ನಮ್ಮ ರೈತರು ಜೇನು ಉತ್ಪಾದನೆಯಲ್ಲಿ ಇದೇ ರೀತಿಯ ಪವಾಡದಂತಹ ಸಾಧನೆ ಮಾಡುತ್ತಿದ್ದಾರೆ. ಜೇನಿನ ಸಿಹಿ ನಮ್ಮ ರೈತರ ಬದುಕನ್ನೂ ಸಹ ಬದಲಾಯಿಸುತ್ತಿದೆ, ಆದಾಯವೂ ಹೆಚ್ಚುತ್ತಿದೆ. ಹರಿಯಾಣದ ಯಮುನಾನಗರದಲ್ಲಿ, ಜೇನುಸಾಕಣೆ ಮಾಡುವ ಒರ್ವ ಮಿತ್ರ ಸುಭಾಷ್ ಕಂಬೋಜ್ ಜಿ ವಾಸಿಸುತ್ತಿದ್ದಾರೆ. ಸುಭಾಷ್ ಜಿ ಅವರು ಜೇನುಸಾಕಣೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ತರಬೇತಿ ಪಡೆದವರು. ಅವರು ಕೇವಲ ಆರು ಜೇನು ಪೆಟ್ಟಿಗೆಗಳೊಂದಿಗೆ ತಮ್ಮ ಕೃಷಿ ಆರಂಭಿಸಿದರು. ಇಂದು ಸುಮಾರು ಎರಡು ಸಾವಿರ ಪೆಟ್ಟಿಗೆಗಳಲ್ಲಿ ಜೇನು ಕೃಷಿ ಮಾಡುತ್ತಿದ್ದಾರೆ. ಅವರ ಜೇನುತುಪ್ಪ ಅನೇಕ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಜಮ್ಮುವಿನ ಪಲ್ಲಿ ಗ್ರಾಮದ ವಿನೋದ್ ಕುಮಾರ್ ಅವರು ಒಂದೂವರೆ ಸಾವಿರಕ್ಕೂ ಹೆಚ್ಚು ಕಾಲೋನಿಗಳಲ್ಲಿ ಜೇನುಸಾಕಣೆ ಮಾಡುತ್ತಿದ್ದಾರೆ. ಅವರು ಕಳೆದ ವರ್ಷ ರಾಣಿ ಜೇನುನೊಣ ಸಾಕಣೆ ತರಬೇತಿ ಪಡೆದಿದ್ದಾರೆ. ಅವರು ಇದರಿಂದ ವಾರ್ಷಿಕ 15 ರಿಂದ 20 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಮತ್ತೊಬ್ಬ ರೈತ ಕರ್ನಾಟಕದ ಮಧುಕೇಶ್ವರ ಹೆಗಡೆ ಜಿ ಅವರು. ಮಧುಕೇಶ್ವರ್ 50 ಜೇನುನೊಣಗಳ ಕಾಲೋನಿಗಳಿಗೆ ಭಾರತ ಸರ್ಕಾರದಿಂದ ಸಬ್ಸಿಡಿ ತೆಗೆದುಕೊಂಡಿದ್ದಾರೆಂದು ತಿಳಿಸಿದ್ದಾರೆ. ಅವರು ಇಂದು 800 ಕ್ಕೂ ಹೆಚ್ಚು ಜೇನು ಕಾಲೋನಿಗಳನ್ನು ಹೊಂದಿದ್ದಾರೆ ಮತ್ತು ಅವರು ಹಲವು ಟನ್ ಗಳಷ್ಟು ಜೇನುತುಪ್ಪ ಮಾರಾಟ ಮಾಡುತ್ತಾರೆ. ಅವರು ತಮ್ಮ ಕೃಷಿಯಲ್ಲಿ ಹೊಸತನ ಪರಿಚಯಿಸಿದರು ಮತ್ತು ಅವರು ನೇರಳೆ ಜೇನು, ತುಳಸಿ ಜೇನು, ನೆಲ್ಲಿ ಜೇನು ಮುಂತಾದ ವನಸ್ಪತಿಯುಕ್ತ ಜೇನುತುಪ್ಪಗಳನ್ನು ಸಹ ಮಾಡುತ್ತಿದ್ದಾರೆ. ಮಧುಕೇಶ್ವರ್ ಜಿ ಜೇನು ಕೃಷಿಯಲ್ಲಿ ನಿಮ್ಮ ನಾವೀನ್ಯ ಮತ್ತು ಯಶಸ್ಸು ಕೂಡ ನಿಮ್ಮ ಹೆಸರನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದೆ.

ಮಿತ್ರರೇ, ನಮ್ಮ ಸಾಂಪ್ರದಾಯಿಕ ಆರೋಗ್ಯ ವಿಜ್ಞಾನದಲ್ಲಿ ಜೇನುತುಪ್ಪಕ್ಕೆ ಎಷ್ಟು ಪ್ರಾಮುಖ್ಯ ನೀಡಲಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆಯುರ್ವೇದ ಗ್ರಂಥಗಳಲ್ಲಿ ಜೇನುತುಪ್ಪವನ್ನು ಮಕರಂದ ಅಥವಾ ಸಂಜೀವಿನಿ (ಪರಮೌಷಧ) ಎಂದು ವಿವರಿಸಲಾಗಿದೆ. ಜೇನುತುಪ್ಪವು ರುಚಿ ಮಾತ್ರವಲ್ಲ, ಆರೋಗ್ಯವನ್ನೂ ನೀಡುತ್ತದೆ. ಜೇನು ಉತ್ಪಾದನೆಯಲ್ಲಿ ಇಂದು ಹಲವು ಸಾಧ್ಯತೆಗಳಿದ್ದು, ವೃತ್ತಿಪರ ಶಿಕ್ಷಣ ಪಡೆಯುವ ಯುವಕರೂ ಅದನ್ನೇ ಸ್ವಯಂ ಉದ್ಯೋಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಯುವಕರಲ್ಲಿ ಉತ್ತರಪ್ರದೇಶದ ಗೋರಖ್‌ಪುರ ನಿವಾಸಿ ನಿಮಿತ್ ಸಿಂಗ್‌ ಒಬ್ಬರು. ನಿಮಿತ್ ಜಿ ಬಿ.ಟೆಕ್ ಮಾಡಿದ್ದಾರೆ.ಅವರ ತಂದೆ ಕೂಡ ವೈದ್ಯರಾಗಿದ್ದಾರೆ, ಆದರೆ ಅವರ ಅಧ್ಯಯನದ ನಂತರ, ನಿಮಿತ್ ಅವರು ಉದ್ಯೋಗದ ಬದಲು ಸ್ವಯಂ ಉದ್ಯೋಗ ಮಾಡಲು ನಿರ್ಧರಿಸಿದರು. ಅವರು ಜೇನು ಉತ್ಪಾದನೆ ಆರಂಭಿಸಿದರು. ಅದರ ಗುಣಮಟ್ಟದ ಪರಿಶೀಲನೆಗಾಗಿ ಲಕ್ನೋದಲ್ಲಿ ಅವರು ಸ್ವಂತ ಪ್ರಯೋಗಾಲಯ ಸ್ಥಾಪಿಸಿದರು. ನಿಮಿತ್ ಜಿ ಇದೀಗ ಜೇನು ಮತ್ತು ಜೇನಿನ ಮೇಣದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ ಮತ್ತು ವಿವಿಧ ರಾಜ್ಯಗಳಿಗೆ ಹೋಗಿ ರೈತರಿಗೆ ತರಬೇತಿ ನೀಡುತ್ತಿದ್ದಾರೆ. ಅಂತಹ ಯುವಕರ ಕಠಿಣ ಪರಿಶ್ರಮದಿಂದ ದೇಶ ಇಂದು ಭಾರಿ ದೊಡ್ಡ ಜೇನು ಉತ್ಪಾದಕ ರಾಷ್ಟ್ರವಾಗುತ್ತಿದೆ. ದೇಶದಿಂದ ಜೇನುತುಪ್ಪದ ರಫ್ತು ಕೂಡ ಹೆಚ್ಚಾಗಿದೆ ಎಂಬುದನ್ನು ತಿಳಿದರೆ ನಿಮಗೂ ಸಂತೋಷವಾಗುತ್ತದೆ. ದೇಶವು 'ರಾಷ್ಟ್ರೀಯ ಜೇನು ಸಾಕಣೆ ಮತ್ತು ಜೇನು ಮಿಷನ್‌' ನಂತಹ ಅಭಿಯಾನಗಳನ್ನು ಆರಂಭಿಸಿದೆ, ಅದಕ್ಕಾಗಿ ರೈತರು ಕಷ್ಟಪಟ್ಟು ದುಡಿದು ನಮ್ಮ ಜೇನುತುಪ್ಪದ ಸಿಹಿಯವನ್ನು ಜಗತ್ತಿನಾದ್ಯಂತ ಪಸರಿಸಲು ಆರಂಭಿಸಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನೂ ದೊಡ್ಡ ಸಾಧ್ಯತೆಗಳಿವೆ. ನಮ್ಮ ಯುವಕರು ಈ ಅವಕಾಶ ಜೊತೆ ಸೇರಬೇಕು ಮತ್ತು ಅವುಗಳನ್ನು ಬಳಸಿಕೊಂಡು ಲಾಭ ಪಡೆದುಕೊಳ್ಳಬೇಕು ಮತ್ತು ಹೊಸ ಸಾಧ್ಯತೆಗಳನ್ನು ಅರಿತು ಸಾಕಾರಗೊಳಿಸಿಕೊಳ್ಳ ಬೇಕೆಂದು ನಾನು ಬಯಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ನಾನು ಹಿಮಾಚಲ ಪ್ರದೇಶದ ನಿವಾಸಿ, ‘ಮನ್ ಕಿ ಬಾತ್‘ ಕೇಳುಗರಾದ ಶ್ರೀ ಆಶಿಷ್ ಬಲ್ ಜಿ ಅವರಿಂದ ಒಂದು ಸ್ವೀಕರಿಸಿದ್ದೇನೆ. ಅವರು ತಮ್ಮ ಪತ್ರದಲ್ಲಿ ಚಂಬಾದ “ಮಿಂಜರ್ ಮೇಳ’ ಕುರಿತು ಉಲ್ಲೇಖಿಸಿದ್ದಾರೆ. ವಾಸ್ತವದಲ್ಲಿ ಮಿಂಜರ್ ಎಂದು ಜೋಳದ ಹೂವನ್ನು ಕರೆಯುತ್ತಾರೆ. ಜೋಳದ ತೆನೆಯಲ್ಲಿ ಹೂವು ಮೂಡಿದಾಗ ಮಿಂಜರ್ ಮೇಳ ಆಯೋಜಿಸಲಾಗುತ್ತದೆ ಹಾಗೂ ಈ ಮೇಳದಲ್ಲಿ ದೇಶಾದ್ಯಂತ ಪ್ರವಾಸಿಗರು ದೂರದ ದೂರದ ಪ್ರದೇಶಗಳಿಂದ ಪಾಲ್ಗೊಳ್ಳಲು ಬರುತ್ತಾರೆ. ಕಾಕತಾಳೀಯವೆಂದರೆ, ಈಗ ಮಿಂಜರ್ ಜಾತ್ರೆ ನಡೆಯುತ್ತಿದೆ. ಒಂದು ವೇಳೆ ನೀವು ಹಿಮಾಚಲ ಪ್ರದೇಶಕ್ಕೆ ಈಗ ಪ್ರವಾಸಕ್ಕೆಂದು ಹೋಗಿದ್ದರೆ, ಈ ಮೇಳವನ್ನು ನೋಡಲು ಚಂಬಾಗೆ ಹೋಗಬಹುದು. ಚಂಬಾ ನಿಜಕ್ಕೂ ಎಷ್ಟೊಂದು ಸುಂದರ ಪ್ರದೇಶವೆಂದರೆ, ಇಲ್ಲಿನ ಜಾನಪದ ಗೀತೆಗಳಲ್ಲಿ ಹೀಗೆಂದು ಮತ್ತೆ ಮತ್ತೆ ಹೇಳಲಾಗುತ್ತದೆ –

“ಚಂಬೇ ಏಕ್ ದಿನ್ ಓನಾ ಕಾನೇ ಮಹೀನಾ ರೈನಾ”

ಅಂದರೆ, ಯಾರು ಕೇವಲ ಒಂದು ದಿನಕ್ಕೆಂದು ಚಂಬಾಗೆ ಬರುತ್ತಾರೋ, ಅವರು ಅದರ ಸೌಂದರ್ಯ ನೋಡಿ ತಿಂಗಳು ಪೂರ್ತಿ ಇಲ್ಲಿಯೇ ಉಳಿಯುತ್ತಾರೆಂಬುದು ಅದರ ಅರ್ಥ.

ಮಿತ್ರರೇ, ನಮ್ಮ ದೇಶದಲ್ಲಿ ಮೇಳ, ಜಾತ್ರೆಗಳಿಗೆ ಬಹು ದೊಡ್ಡ ಸಾಂಸ್ಕೃತಿಕ ಪ್ರಾಮುಖ್ಯ ಇದೆ. ಮೇಳ-ಜಾತ್ರೆ ಎನ್ನುವುದು ಜನ-ಮನ ಎರಡನ್ನೂ ಒಂದುಗೂಡಿಸುತ್ತದೆ. ಹಿಮಾಚಲ ಪ್ರದೇಶದಲ್ಲಿ ಮಳೆಗಾಲದ ನಂತರ ಮುಂಗಾರು ಬೆಳೆ ಕೊಯ್ಲಿಗೆ ಬಂದಾಗ, ಸೆಪ್ಟೆಂಬರ್ ತಿಂಗಳಿನಲ್ಲಿ ಶಿಮ್ಲಾ, ಮಂಡಿ, ಕುಲು, ಮತ್ತು ಸೋಲನ್ ನಲ್ಲಿ ಸೈರಿ ಅಥವಾ ಸೈರ್ ಆಚರಿಸಲಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿಯೇ ಜಾಗರಾ ಜಾತ್ರೆ ಕೂಡಾ ಬರಲಿದೆ. ಜಾಗರಾ ಜಾತ್ರೆಯಲ್ಲಿ ಮಹಸು ದೇವತೆಯ ಆವಾಹನೆ ಮಾಡಿ, ಬೀಸೂ ಹಾಡುಗಳನ್ನು ಹಾಡಲಾಗುತ್ತದೆ. ಮಹಾಸು ದೇವತೆಯ ಜಾತ್ರೆ ಹಿಮಾಚಲ ಪ್ರದೇಶದಲ್ಲಿ ಶಿಮ್ಲಾ, ಕಿನ್ನೌರ್ ಮತ್ತು ಸಿರಮೌರ್ ನಲ್ಲಿ ಹಾಗೂ ಉತ್ತರಾಖಂಡ್ ನಲ್ಲಿ ಏಕಕಾಲದಲ್ಲಿ ನಡೆಯುತ್ತದೆ.

ಮಿತ್ರರೇ, ನಮ್ಮ ದೇಶದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಆದಿವಾಸಿ ಸಮುದಾಯದ ಅನೇಕ ಪಾರಂಪರಿಕ ಜಾತ್ರೆ ನಡೆಯುತ್ತವೆ. ಅವುಗಳಲ್ಲಿ ಕೆಲವು ಜಾತ್ರೆಗಳು ಬುಡಕಟ್ಟು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದರೆ ಕೆಲವು ಜಾತ್ರೆಗಳು ಬುಡಕಟ್ಟು ಇತಿಹಾಸ ಹಾಗೂ ಪರಂಪರೆಗೆ ಸಂಬಂಧಿಸಿದ್ದಾಗಿವೆ. ಹಾಗೆಯೇ ನಿಮಗೆ ಅವಕಾಶ ಸಿಕ್ಕರೆ ತೆಲಂಗಾಣದ ಮೇದಾರಂನ ನಾಲ್ಕು ದಿವಸಗಳ ಸಮಕ್ಕಾ-ಸರಳಮ್ಮಾ ಜಾತ್ರೆ ನೋಡಲು ಖಂಡಿತಾ ಹೋಗಿ. ಈ ಜಾತ್ರೆಯನ್ನು ತೆಲಂಗಾಣದ ಮಹಾಕುಂಭವೆಂದು ಕರೆಯಲಾಗುವುದು. ಸರಳಮ್ಮ ಜಾತ್ರೆಯನ್ನು ಇಬ್ಬರು ಬುಡಕಟ್ಟು ಮಹಿಳಾ ನಾಯಕಿಯರಾದ ಸಮಕ್ಕಾ ಮತ್ತು ಸರಳಮ್ಮ ಅವರುಗಳ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಇದು ಕೇವಲ ತೆಲಂಗಾಣ ಮಾತ್ರವಲ್ಲ ಛತ್ತೀಸ್ ಗಢ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಕೋಯಾ ಅದಿವಾಸಿ ಸಮುದಾಯದ ನಂಬಿಕೆಯ ದೊಡ್ಡ ಆಚರಣೆಯಾಗಿದೆ. ಆಂಧ್ರಪ್ರದೇಶದಲ್ಲಿ ಮಾರಿದಮ್ಮ ಜಾತ್ರೆ ಕೂಡಾ ಬುಡಕಟ್ಟು ಸಮಾಜದ ನಂಬಿಕೆಗಳಿಗೆ ಸಂಬಂಧಿಸಿದ ದೊಡ್ಡ ಜಾತ್ರೆಯಾಗಿದೆ. ಮಾರಿದಮ್ಮ ಜಾತ್ರೆಯು ಜ್ಯೇಷ್ಠ ಮಾಸದ ಅಮಾವಾಸ್ಯೆಯಿಂದ ಆಷಾಢ ಮಾಸದ ಅಮಾವಾಸ್ಯೆಯವರೆಗೂ ನಡೆಯುತ್ತದೆ ಮತ್ತು ಅದನ್ನು ಅಲ್ಲಿನ ಆದಿವಾಸಿ ಸಮಾಜವು ಶಕ್ತಿ ಉಪಾಸನೆಯ ಕಾಲವೆಂದು ಕೂಡಾ ನಂಬಿ ಆಚರಿಸುತ್ತಾರೆ. ಇಲ್ಲಿಯೇ, ಪೂರ್ವ ಗೋದಾವರಿಯ ಪೆದ್ದಾಪುರಂದಲ್ಲಿ, ಮಾರಿದಮ್ಮಾ ದೇವಾಲಯ ಕೂಡಾ ಇದೆ. ಇದೇ ರೀತಿ ರಾಜಸ್ಥಾನದಲ್ಲಿ ಗರಾಸಿಯಾ ಜನಾಂಗದ ಜನರು ವೈಶಾಖ ಶುಕ್ಲ ಚತುರ್ದಶಿಯಂದು ‘ಸಿಯಾವಾ ಜಾತ್ರೆ’ ಅಥವಾ ‘ಮನಖಾಂ ರೋ ಮೇಳ’ ಆಯೋಜಿಸುತ್ತಾರೆ.

ಛತ್ತೀಸ್ ಗಢದ ಬಸ್ತಾರ್ ನಲ್ಲಿನ ನಾರಾಯಣಪುರದ ‘ಮಾವಲಿ ಜಾತ್ರೆ’ ತುಂಬಾ ವಿಶೇಷವಾಗಿರುತ್ತದೆ. ಸಮೀಪದಲ್ಲೇ, ಮಧ್ಯಪ್ರದೇಶದ ಭಗೋರಿಯಾ ಮೇಳ ಕೂಡಾ ಹೆಸರುವಾಸಿಯಾಗಿದೆ. ಭಗೋರಿಯಾಜಾತ್ರೆಯ ಆರಂಭ ಭೋಜ ಮಹಾರಾಜನ ಕಾಲದಲ್ಲಿ ಆಗಿದೆ ಎಂದು ಹೇಳಲಾಗುತ್ತದೆ. ಆಗ ಭೀಲ್ಲರ ದೊರೆ, ಕಸುಮರಾ ಮತ್ತು ಬಲುನ್ ಮೊದಲ ಬಾರಿಗೆ ತಮ್ಮ ತಮ್ಮ ರಾಜಧಾನಿಗಳಲ್ಲಿ ಇದನ್ನು ಆಯೋಜಿಸಿದ್ದರು. ಅಂದಿನಿಂದ ಇಂದಿನವರೆಗೂ, ಈ ಜಾತ್ರೆಯನ್ನು ಅಷ್ಟೇ ಉತ್ಸಾಹದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಂತೆಯೇ, ಗುಜರಾತ್ ನಲ್ಲಿ ತರಣೇತರ್ ಮತ್ತು ಮಾಧೋಪುರ್ ನಂತಹ ಅನೇಕ ಜಾತ್ರೆಗಳು ಬಹಳ ಪ್ರಸಿದ್ಧವಾಗಿದೆ.

ಜಾತ್ರೆಗಳು ನಮ್ಮ ಸಮಾಜಕ್ಕೆ,ನಮ್ಮ ಜೀವನಕ್ಕೆ ಶಕ್ತಿಯ ಬಹು ದೊಡ್ಡ ಮೂಲವಾಗಿದೆ. ನೀವು ವಾಸ ಮಾಡುವ ಪ್ರದೇಶದ ಸುತ್ತ ಮುತ್ತ ಕೂಡಾ ಇಂತಹ ಹಲವು ಜಾತ್ರೆಗಳಿರಬಹುದು. ಆಧುನಿಕ ಕಾಲದಲ್ಲಿ ಸಮಾಜದಲ್ಲಿನ ಈ ಹಳೆಯ ಕೊಂಡಿಗಳು, ಏಕ್ ಭಾರತ-ಶ್ರೇಷ್ಠ್ ಭಾರತ ಭಾವನೆ ಮತ್ತಷ್ಟು ಬಲಿಷ್ಠವಾಗಿ ಅತ್ಯಂತ ಪ್ರಮುಖವಾದವುಗಳಾಗಿವೆ. ನಮ್ಮ ಯುವಜನತೆ ಅವುಗೊಳೊಂದಿಗೆ ಬೆಎರೆಯಬೇಕು ಮತ್ತು ಅಲ್ಲಿನ ಭೇಟಿ ನೀಡಿದಾಗ ಅಲ್ಲಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು. ಅಗತ್ಯಬಿದ್ದರೆ ನೀವು ಯಾವುದಾದರೊಂದು ವಿಶೇಷ ಹ್ಯಾಶ್ ಟ್ಯಾಗ್ ಕೂಡಾ ಉಪಯೋಗಿಸಬಹುದು. ಇದರಿಂದಾಗಿ ಈ ಜಾತ್ರೆಗಳ ಬಗ್ಗೆ ಇತರರಿಗೆ ಕೂಡಾ ತಿಳಿಯುತ್ತದೆ. ನೀವು ಸಂಸ್ಕೃತಿ ಸಚಿವಾಲಯದ ಜಾಲತಾಣದಲ್ಲಿ ಕೂಡಾ ಚಿತ್ರಗಳನ್ನು ಅಪ್ಲೋಡ್ ಮಾಡಬಹುದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಸ್ಕೃತಿ ಸಚಿವಾಲಯ ಒಂದು ಸ್ಪರ್ಧೆಯನ್ನು ಕೂಡಾ ಆರಂಭಿಸಲಿದೆ. ಆಗ ಜಾತ್ರೆಗಳಿಗೆ ಸಂಬಂಧಿಸಿದ ಅತ್ಯುತ್ತಮ ಚಿತ್ರ ಕಳುಹಿಸಿಕೊಟ್ಟವರಿಗೆ ಬಹುಮಾನ ಕೂಡಾ ನೀಡಲಾಗುವುದು. ಹಾಗಿದ್ದರೆ ಇನ್ನು ತಡ ಮಾಡಬೇಡಿ, ಜಾತ್ರೆಗಳಲ್ಲಿ ಸುತ್ತಾಡಿ, ಅವುಗಳ ಚಿತ್ರಗಳನ್ನು ಹಂಚಿಕೊಳ್ಳಿ ಮತ್ತು ಇದಕ್ಕಾಗಿ ನಿಮಗೆ ಬಹುಮಾನ ಲಭಿಸಲೂ ಬಹುದು.

ನನ್ನ ಪ್ರಿಯ ದೇಶವಾಸಿಗಳೇ, ನಿಮಗೆ ನೆನಪಿರಬಹುದು, ಮನ್ ಕಿ ಬಾತ್ ನ ಒಂದು ಸಂಚಿಕೆಯಲ್ಲಿ ನಾನು ಹೇಳಿದ್ದೆ ಆಟಿಕೆಗಳ ರಫ್ತಿನಲ್ಲಿ ಶಕ್ತಿ ಕೇಂದ್ರ ಎನಿಸುವ ಎಲ್ಲ ಸಾಮರ್ಥ್ಯ ಭಾರತಕ್ಕಿದೆ ಎಂದು. ನಾನು ವಿಶೇಷವಾಗಿ ಕ್ರೀಡಾ ಮತ್ತು ಆಟಗಳಲ್ಲಿ ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ಚರ್ಚೆ ಮಾಡಿದ್ದೆ. ಭಾರತದ ಸ್ಥಳೀಯ ಆಟಿಕೆಗಳು ಪರಂಪರೆ ಹಾಗೂ ಪರಿಸರ ಸ್ನೇಹಿ ಎರಡಕ್ಕೂ ಹೊಂದಿಕೆಯಾಗುತ್ತದೆ. ಇಂದು ನಾನು ನಿಮ್ಮೊಂದಿಗೆ ಭಾರತೀಯ ಆಟಿಕೆಗಳ ಯಶಸ್ಸನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ಯುವಜನತೆ, ನವೋದ್ಯಮಗಳು, ಮತ್ತು ಉದ್ಯಮಿಗಳಿಂದಾಗಿ ನಮ್ಮ ಆಟಿಕೆ ಉದ್ಯಮ ಮಾಡಿರು ಸಾಧನೆಯನ್ನು, ಗಳಿಸಿರುವ ಯಶಸ್ಸನ್ನು ಯಾರೂ ಊಹಿಸಿರಲು ಸಾಧ್ಯವಿಲ್ಲ. ಭಾರತೀಯ ಆಟಿಕೆಗಳ ಮಾತು ಬಂದಾಗ ಇಂದು ಎಲ್ಲೆಲ್ಲೂ ಸ್ಥಳೀಯ ಉತ್ಪನ್ನಗಳಿಗೆ ಧ್ವನಿ (ವೋಕಲ್ ಫಾರ್ ಲೋಕಲ್ ನ) ಕೇಳಿ ಬರುತ್ತದೆ. ಭಾರತದಲ್ಲಿ ಈಗ ವಿದೇಶಗಳಿಂದ ಬರುವ ಆಟಿಕೆಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ ಎಂಬುದನ್ನು ತಿಳಿದು ನಿಮಗೆ ಸಂತೋಷವೆನಿಸುತ್ತದೆ. ಮೊದಲಿಗೆ 3 ಸಾವಿರ ಕೋಟಿ ರೂಪಾಯಿ ಮೌಲ್ಯಕ್ಕೂ ಅಧಿಕ ಆಟಿಕೆಗಳು ಹೊರದೇಶಗಳಿಂದ ಬರುತ್ತಿದ್ದವು, ಈಗ ಇವುಗಳ ಆಮದು ಶೇಕಡಾ 70 ರಷ್ಟು ಕಡಿತಗೊಂಡಿದೆ ಮತ್ತು ಇದೇ ಅವಧಿಯಲ್ಲಿ ಭಾರತವು ಎರಡು ಸಾವಿರದ ಆರುನೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಟಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ ಎಂಬುದನ್ನು ತಿಳಿಯಲು ಸಂತೋಷವಾಗುತ್ತಿದೆ. ಮೊದಲು ಕೇವಲ 300-400 ಕೋಟಿ ರೂಪಾಯಿ ಆಟಿಕೆಗಳು ಮಾತ್ರಾ ಭಾರತದಿಂದ ಹೊರದೇಶಗಳಿಗೆ ಹೋಗುತ್ತಿದ್ದವು ಮತ್ತು ಇದೆಲ್ಲವೂ ಕೊರೋನಾ ಅವಧಿಯಲ್ಲಿ ನಡೆಯಿತೆಂದು ನಿಮಗೆ ತಿಳಿದಿದೆ. ಭಾರತ ಆಟಿಕೆ ವಲಯವು ತನ್ನನ್ನು ತಾನು ಪರಿವರ್ತಿಸಿಕೊಂಡು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಭಾರತೀಯ ಆಟಿಕೆ ತಯಾರಕರು ಇದೀಗ ಭಾರತೀಯ ಪುರಾಣ, ಇತಿಹಾಸ ಮತ್ತು ಸಂಸ್ಕೃತಿ ಆಧಾರಿತ ಆಟಿಕೆಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ದೇಶದಲ್ಲಿ ಅಲ್ಲಲ್ಲಿ ಇರುವ ಆಟಿಕೆಗಳ ಕ್ಲಸ್ಟರ್ ಗಳು, ಆಟಿಕೆ ತಯಾರಿಸುವ ಸಣ್ಣ ಪುಟ್ಟ ಉದ್ಯಮಿಗಳಿಗೆ ಇದರಿಂದ ಹೆಚ್ಚಿನ ಲಾಭವಾಗುತ್ತಿದೆ. ಈ ಸಣ್ಣ ಪುಟ್ಟ ಉದ್ಯಮಿಗಳು ತಯಾರಿಸಿರುವ ಆಟಿಕೆಗಳು ಈಗ ಜಗತ್ತಿನೆಲ್ಲೆಡೆಗೆ ಹೋಗುತ್ತಿವೆ. ಭಾರತದ ಆಟಿಕೆ ತಯಾರಕರು, ಇದೀಗ ವಿಶ್ವದ ಪ್ರಮುಖ ಜಾಗತಿಕ ಆಟಿಕೆ ಬ್ರಾಂಡ್ ಗಳ ಜೊತೆ ಸೇರಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ನವೋದ್ಯಮ ವಲಯ ಕೂಡಾ ಆಟಿಕೆಗಳ ಪ್ರಪಂಚದತ್ತ ಸಾಕಷ್ಟು ಗಮನ ಹರಿಸುತ್ತಿದೆ ಎನ್ನುವುದು ನನಗೆ ಇಷ್ಟದ ಸಂಗತಿಯಾಗಿದೆ, ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ತಮಾಷೆಯ ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಶೂಮಿ ಆಟಿಕೆಗಳ ಹೆಸರಿನ ನವೋದ್ಯಮ, ಪರಿಸರ ಸ್ನೇಹಿ ಆಟಿಕೆಗಳತ್ತ ಗಮನ ಹರಿಸುತ್ತಿದೆ. ಗುಜರಾತ್ ನಲ್ಲಿ ಆರ್ಕಿಡ್ಜೂ ಕಂಪೆನಿಯು ಎಆರ್ ಆಧಾರಿತ ಫ್ಲ್ಯಾಶ್ ಕಾರ್ಡ್ ಗಳು ಮತ್ತು ಎಆರ್ ಆಧಾರಿತ ಕತೆ ಪುಸಕ್ತಗಳನ್ನು ತಯಾರಿಸುತ್ತಿದೆ. ಪೂನಾದ ಫನ್ವೆನ್ಷನ್ ಕಂಪನಿಯು ಕಲಿಕೆ, ಆಟಿಕೆ ಮತ್ತು ಪದಬಂಧ (ಪಜಲ್ಸ್) ನ ಮೂಲಕ ವಿಜ್ಞಾನ, ತಂತ್ರಜ್ಞಾನ, ಮತ್ತು ಗಣಿತದಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸುವ ಕೆಲಸದಲ್ಲಿ ತೊಡಗಿದೆ. ಆಟಿಕೆಗಳ ಜಗತ್ತಿನಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಇಂತಹ ಎಲ್ಲಾ ತಯಾರಕರಿಗೆ, ನವೋದ್ಯಮಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಬನ್ನಿ, ನಾವೆಲ್ಲರೂ ಸೇರಿ, ಭಾರತೀಯ ಆಟಿಕೆಗಳನ್ನು, ಜಗತ್ತಿನೆಲ್ಲೆಡೆ, ಮತ್ತಷ್ಟು ಜನಪ್ರಿಯಗೊಳಿಸೋಣ. ಇದರೊಂದಿಗೆ, ನಾನು ಹೆಚ್ಚು ಹೆಚ್ಚು ಭಾರತೀಯ ಆಟಿಕೆಗಳನ್ನು, ಪಧಬಂಧಗಳನ್ನು ಮತ್ತು ಕೀಡಾ ಆಟಿಕೆಗಳನ್ನು ಖರೀದಿಸಬೇಕೆಂದು ಪೋಷಕರನ್ನು ಒತ್ತಾಯಪಡಿಸುತ್ತೇನೆ.

ಮಿತ್ರರೇ, ಇಂದು ನಮ್ಮ ಯುವಜನತೆ, ತರಗತಿಯೇ ಆಗಲಿ ಅಥವಾ ಆಟದ ಮೈದಾನವೇ ಆಗಲಿ, ಪ್ರತಿಯೊಂದು ಕ್ಷೇತ್ರದಲ್ಲೂ, ದೇಶವೇ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಇದೇ ತಿಂಗಳು ಪಿವಿ ಸಿಂಧು ಅವರು ಸಿಂಗಾಪೂರ್ ಓಪನ್ ನಲ್ಲಿ ಚೊಚ್ಚಲ ಪ್ರಶಸ್ತಿಗಳಿಸಿದ್ದಾರೆ. ನೀರಜ್ ಛೋಪ್ರಾ ಅವರು ಕೂಡಾ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ದೇಶಕ್ಕಾಗಿ ರಜತ ಪದಕ ಗೆದ್ದುರು.ಐರ್ ಲ್ಯಾಂಡ್ ಪ್ಯಾರಾ ಬ್ಯಾಂಡ್ಮಿಟನ್ ಇಂಟರ್ ನ್ಯಾಷನಲ್ ನಲ್ಲಿ ಕೂಡಾ ನಮ್ಮ ಆಟಗಾರರು 11 ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ರೋಮ್ ನಲ್ಲಿ ನಡೆದ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್ ಷಿಪ್ ನಲ್ಲೂ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮ್ಮ ಅಥ್ಲೀಟ್ ಸೂರಜ್ ಅವರಂತೂ ಗ್ರೀಕೋ-ರೋಮನ್ ಸ್ಪರ್ಧೆಯಲ್ಲಿ ಪವಾಡವನ್ನು ಮಾಡಿ ತೋರಿಸಿದ್ದಾರೆ. ಅವರು 32 ವರ್ಷಗಳ ದೀರ್ಘ ಅಂತರದ ನಂತರ ಈ ಸ್ಪರ್ಧೆಯಲ್ಲಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಆಟಗಾರರಿಗಂತೂ ಈ ತಿಂಗಳೀಡಿ ಸಂಪೂರ್ಣ ಚಟುವಟಿಕೆಗಳಿಂದ ಕೂಡಿರುತ್ತದೆ. ಚೆನ್ನೈನಲ್ಲಿ 44 ನೇ ಚೆಸ್ ಒಲಿಂಪಿಯಾಡ್ ನ ಆತಿಥ್ಯ ವಹಿಸುವುದು ಕೂಡಾ ಭಾರತಕ್ಕೆ ದೊರೆತ ಅತಿದೊಡ್ಡ ಗೌರವವಾಗಿದೆ. ಜುಲೈ 28 ರಂದು ಈ ಪಂದ್ಯಾವಳಿಯ ಶುಭಾರಂಭವಾಯಿತು ಮತ್ತು ನನಗೆ ಅದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಸೌಭಾಗ್ಯ ದೊರಕಿತ್ತು. ಅದೇ ದಿನ ಯುನೈಟೆಡ್ ಕಿಂಗ್ ಡಂನಲ್ಲಿ ಕಾಮನ್ ವೆಲ್ತ್ ಕ್ರೀಡೆ ಕೂಡಾ ಆರಂಭವಾಯಿತು. ಯುವ ಉತ್ಸಾಹಿ ಭಾರತೀಯ ಆಟಗಾರರು ಅಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಎಲ್ಲಾ ಆಟಗಾರರಿಗೆ ಮತ್ತು ಅಥ್ಲೀಟ್ ಗಳಿಗೆ ದೇಶವಾಸಿಗಳ ಪರವಾಗಿ ನಾನು ಶುಭ ಕೋರುತ್ತೇನೆ. ಭಾರತ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ನ ಆತಿಥ್ಯ ವಹಿಸುತ್ತಿದೆ ಎಂಬ ವಿಷಯ ನನಗೆ ಆನಂದವನ್ನುಂಟು ಮಾಡಿದೆ. ಈ ಟೂರ್ನಿ ಬರುವ ಅಕ್ಟೋಬರ್ ತಿಂಗಳಿನಲ್ಲಿ ನಡೆಯುತ್ತದೆ, ಇದು ದೇಶದ ಹೆಣ್ಣುಮಕ್ಕಳ ಉತ್ಸಾಹವನ್ನುನೂರ್ಮಡಿಗೊಳಿಸುತ್ತದೆ.

ಮಿತ್ರರೇ, ಕೆಲ ದಿನಗಳ ಹಿಂದಷ್ಟೇ ದೇಶದೆಲ್ಲೆಡೆ 10ನೇ ಮತ್ತು 12ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ತಮ್ಮ ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಯಶಸ್ಸು ಗಳಿಸಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ನಾನು ಅಭಿನಂದಿಸುತ್ತೇನೆ. ಸಾಂಕ್ರಾಮಿಕದ ಕಾರಣದಿಂದ ಕಳೆದೆರಡು ವರ್ಷ ನಿಜಕ್ಕೂ ಸವಾಲಿನಿಂದ ಕೂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೂಡಾ ನಮ್ಮ ಯುವಜನತೆ ತೋರಿದ ಶೌರ್ಯ ಮತ್ತು ಸಂಯಮ ನಿಜಕ್ಕೂ ಶ್ಲಾಘನೀಯ. ನಾನು ಅವರೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ.

ನನ್ನ ಪ್ರೀಯ ದೇಶವಾಸಿಗಳೇ, ಇಂದು ನಾವು 75ನೇ ಸ್ವಾತಂತ್ರೋತ್ಸವದೊಂದಿಗೆ ನಮ್ಮ ಮಾತುಕತೆ ಆರಂಭಿಸಿ ದೇಶದ ಪಯಣ ಮಾಡಿದೆವು. ನಾವು ಮುಂದಿನ ಬಾರಿ ಭೇಟಿಯಾಗುವಷ್ಟರಲ್ಲಿ ನಮ್ಮ ಮುಂದಿನ 25 ವರ್ಷಗಳ ಪಯಣ ಆರಂಭವಾಗಿರುತ್ತದೆ. ನಮ್ಮ ಮತ್ತು ನಮ್ಮ ಪ್ರೀತಿಪಾತ್ರರ ಮನೆಗಳಲ್ಲಿ ನಮ್ಮ ಪ್ರೀತಿಯ ತ್ರಿವರ್ಣ ಧ್ವಜ ಹಾರಲಿ, ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕು. ನೀವು ಈ ಬಾರಿ ಸ್ವಾತಂತ್ರ್ಯ ದಿನವನ್ನು ಯಾವ ರೀತಿ ಆಚರಿಸಿದಿರಿ, ವಿಶೇಷವಾದುದು ಏನಾದರೂ ಮಾಡಿದಿರಾ, ಎಲ್ಲ ವಿಷಯವನ್ನು ನನ್ನೊಂದಿಗೆ ಹಂಚಿಕೊಳ್ಳಿ. ಮುಂದಿನ ಬಾರಿ, ನಾವು ನಮ್ಮ ಈ ಅಮೃತ ಪರ್ವದ ನಾನಾ ಬಣ್ಣಗಳ ಬಗ್ಗೆ ಮತ್ತೆ ಮಾತನಾಡೋಣ. ಅಲ್ಲಿಯವರೆಗೆ ನಿಮ್ಮಿಂದ ತೆರಳುತ್ತಿದ್ದೀನೆ. ತುಂಬಾ ತುಂಬಾ ಧನ್ಯವಾದಗಳು.

********

 

 



(Release ID: 1846785) Visitor Counter : 225