ಕೃಷಿ ಸಚಿವಾಲಯ

ಗುಜರಾತ್‌ನಲ್ಲಿ ಜೇನುನೊಣ ವಿಶ್ವದಿನಾಚರಣೆ; ಕೇಂದ್ರ ಕೃಷಿ ಸಚಿವರ ಉಪಸ್ಥಿತಿ


5 ರಾಜ್ಯಗಳಲ್ಲಿ ಸ್ಥಾಪಿಸಿರುವ ಜೇನುತುಪ್ಪ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಸಂಸ್ಕರಣಾ ಘಟಕಗಳ ಉದ್ಘಾಟನೆ

ಸಣ್ಣ ರೈತರನ್ನು ಸಬಲೀಕರಣಗೊಳಿಸುವುದು ಪ್ರಧಾನಿ ಅವರ ಗುರಿಯಾಗಿದೆ:  ಜೇನು ಸಾಕಣೆದಾರರಿಗೆ ಕೃಷಿ ಸಚಿವರ ಅಭಯ
 
ಗ್ರಾಮೀಣ ಜನತೆಯ ಪ್ರಗತಿಯಿಂದ ಮಾತ್ರ ದೇಶದ ಪ್ರಗತಿ: ಶ್ರೀ ತೋಮರ್

Posted On: 20 MAY 2022 7:18PM by PIB Bengaluru

ಜೇನುನೊಣಗಳ ವಿಶ್ವದಿನವನ್ನು ಇಂದು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು, ದೇಶದಲ್ಲಿ “ಸಿಹಿ ಕ್ರಾಂತಿ” ತರಲು ಸರ್ಕಾರವು ಪ್ರಧಾನ ಮಂತ್ರಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರ ಉಪಸ್ಥಿತಿಯಲ್ಲಿ ಗುಜರಾತ್‌ನ ನರ್ಮದಾ ಏಕತಾ ನಗರದಲ್ಲಿ ಟೆಂಟ್ ಸಿಟಿ-2ರಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀ ತೋಮರ್ ಅವರು ಕಾರ್ಯಕ್ರಮ ಸ್ಥಳದಲ್ಲಿ ವಸ್ತು ಪ್ರದರ್ಶನ ಮತ್ತು ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ಪುಲ್ವಾಮಾ, ಕರ್ನಾಟಕದ ಬಂಡೀಪುರ ಮತ್ತು ತುಮಕೂರು, ಉತ್ತರ ಪ್ರದೇಶದ ಸಹರಾನ್‌ಪುರ, ಮಹಾರಾಷ್ಟ್ರದ ಪುಣೆ ಮತ್ತು ಉತ್ತರಾಖಂಡದಲ್ಲಿ ಸ್ಥಾಪಿಸಿರುವ ಜೇನು ಪರೀಕ್ಷಾ ಪ್ರಯೋಗಾಲಯಗಳು ಮತ್ತು ಸಂಸ್ಕರಣಾ ಘಟಕಗಳನ್ನು ಗುಜರಾತ್‌ನಿಂದ ವರ್ಚುವಲ್ ಮೋಡ್‌ನಲ್ಲಿ ಉದ್ಘಾಟಿಸಿದರು. ಸಣ್ಣ ರೈತರ ಸಬಲೀಕರಣವು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಗುರಿಯಾಗಿದೆ ಎಂದು ಶ್ರೀ ತೋಮರ್ ಹೇಳಿದರು. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 55ರಷ್ಟು ಗ್ರಾಮೀಣ ಜನರಿದ್ದು, ಗ್ರಾಮೀಣ ಜನಸಂಖ್ಯೆಯು ಪ್ರಗತಿಯಾದಾಗ ಮಾತ್ರ ದೇಶವು ಪ್ರಗತಿ ಹೊಂದುತ್ತದೆ ಎಂದು ಹೇಳಿದರು.

 
ಕೇಂದ್ರ ಅನುದಾನದ ಯೋಜನೆಯಾದ 'ರಾಷ್ಟ್ರೀಯ ಜೇನುಸಾಕಣೆ ಮತ್ತು ಹನಿ ಮಿಷನ್' 5 ದೊಡ್ಡ ಪ್ರಾದೇಶಿಕ ಮತ್ತು 100 ಸಣ್ಣ ಜೇನು ಮತ್ತು ಇತರ ಜೇನುಸಾಕಣೆ ಉತ್ಪನ್ನಗಳ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಇವುಗಳಲ್ಲಿ 3 ವಿಶ್ವ ದರ್ಜೆಯ ಅತ್ಯಾಧುನಿಕ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ, ಆದರೆ 25 ಸಣ್ಣ ಪ್ರಯೋಗಾಲಯಗಳನ್ನು ಸ್ಥಾಪಿಸುವ ಕಾರ್ಯವು ಪ್ರಕ್ರಿಯೆಯಲ್ಲಿದೆ. ಭಾರತ ಸರ್ಕಾರವು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ನೆರವು ನೀಡುತ್ತಿದೆ. ದೇಶದಲ್ಲಿ 1.25 ಲಕ್ಷ ಮೆಟ್ರಿಕ್ ಟನ್ ಗಿಂತ ಹೆಚ್ಚಿನ ಜೇನು ಉತ್ಪಾದನೆಯಾಗುತ್ತಿದ್ದು, ಈ ಪೈಕಿ 60 ಸಾವಿರ ಮೆಟ್ರಿಕ್ ಟನ್ ಗೂ ಹೆಚ್ಚು ನೈಸರ್ಗಿಕ ಜೇನು ರಫ್ತಾಗಿದೆ. ವಿಶ್ವ ಮಾರುಕಟ್ಟೆಯನ್ನು ಆಕರ್ಷಿಸಲು ದೇಶೀಯ ಜೇನುತುಪ್ಪದ ಗುಣಮಟ್ಟ ಹೆಚ್ಚಿಸಲು, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿವೆ. ವೈಜ್ಞಾನಿಕ ತಂತ್ರಗಳನ್ನು ಅಳವಡಿಸಿಕೊಂಡು ಜೇನು ಸಾಕಣೆದಾರರ ಸಾಮರ್ಥ್ಯ ಬಲವರ್ಧನೆಯತ್ತ ಗಮನ ಹರಿಸುತ್ತಿವೆ ಎಂದರು.

 

ಪ್ರಧಾನಿ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ, ಅವರು ಗುಜರಾತ್‌ ಅಭಿವೃದ್ಧಿಗೆ ಹೊಸ ಆಯಾಮಗಳನ್ನು ತಂದರು ಎಂದು ಶ್ರೀ ತೋಮರ್ ಸ್ಮರಿಸಿದರು. ಅವರ ಸರ್ಕಾರವು ಗುಜರಾತ್‌ನ ಬಡ ಮತ್ತು ಸಣ್ಣ ರೈತರ ಅಭಿವೃದ್ಧಿಗೆ ಸಂವೇದನಾಶೀಲವಾಗಿತ್ತು. ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಆರೋಗ್ಯ ಸೌಲಭ್ಯಗಳ ಅಭಿವೃದ್ಧಿ, ರೈತರಿಗೆ ನೀರಾವರಿಯ ಸಮರ್ಪಕ ಲಭ್ಯತೆ ಮುಂತಾದ ವಿಷಯಗಳಲ್ಲಿ ಮೋದಿ ಜಿ ನಾಯಕತ್ವದಲ್ಲಿ ಗುಜರಾತ್ ಅತ್ಯುತ್ತಮ ಸಾಧನೆ ಮಾಡಿದೆ, ರಾಜ್ಯವು ಅಭಿವೃದ್ಧಿಯಲ್ಲಿ ಮಾದರಿಯಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವರು ವಿವಿಧ ರಾಜ್ಯಗಳ ರೈತರು ಮತ್ತು ಇತರ ಗಣ್ಯರೊಂದಿಗೆ ಸಂವಾದ ನಡೆಸಿದರು. ಜೇನು ಸಾಕಣೆ ಚಟುವಟಿಕೆಯು ತಮ್ಮ ಆದಾಯವನ್ನು ಹೇಗೆ ಹೆಚ್ಚಿಸಿದೆ ಎಂಬುದರ ಕುರಿತು ತಮ್ಮ ಅನುಭವಗಳನ್ನು ವಿವರಿಸಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ ಮಾತನಾಡಿ, ಜೇನು ಸಾಕಾಣಿಕೆಗೆ ಸರ್ಕಾರ ವಿವಿಧ ಯೋಜನೆಗಳ ಮೂಲಕ ರೈತರಿಗೆ ಹೊಸ ತಂತ್ರಜ್ಞಾನದ ಜೊತೆಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಿದೆ. ಜೇನು ಸಾಕಣೆಯನ್ನು ಉತ್ತೇಜಿಸಲು ಸರ್ಕಾರವು ಕಾರ್ಯಾಚರಣೆ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ರೈತರ ಆದಾಯವು ಹೆಚ್ಚಾಗುತ್ತದೆ. ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ರೈತರ ಅಭ್ಯುದಯಕ್ಕಾಗಿ ನಿರಂತರ ಶ್ರಮಿಸಿದ್ದಾರೆ ಎಂದು ಶ್ರೀ ಚೌಧರಿ ಹೇಳಿದರು.
ಈ ಕಾರ್ಯಕ್ರಮ ಆಯೋಜಿಸಲು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಗುಜರಾತ್ ರಾಜ್ಯವನ್ನು ಆಯ್ಕೆ ಮಾಡಿದ ಬಗ್ಗೆ ಗುಜರಾತ್‌ನ ಕೃಷಿ ಸಚಿವ ಶ್ರೀ ರಾಘವ್‌ ಜಿ ಪಟೇಲ್ ಸಂತಸ ವ್ಯಕ್ತಪಡಿಸಿದರು. ಉತ್ತಮ ಆದಾಯಕ್ಕಾಗಿ ವೈಜ್ಞಾನಿಕ ಜೇನು ಸಾಕಣೆಯನ್ನು ಅಳವಡಿಸಿಕೊಳ್ಳುವಂತೆ ಅವರು ಗುಜರಾತ್‌ ರೈತರನ್ನು ಒತ್ತಾಯಿಸಿದರು.
ಸ್ಲೊವೇನಿಯಾ ಗಣರಾಜ್ಯದ ರಾಯಭಾರಿ ಶ್ರೀಮತಿ ಮಾತೆಜಾ ವೊಡೆಬ್, ಭಾರತದ ಎಫ್‌ಎಒ ಪ್ರತಿನಿಧಿ ಶ್ರೀ ಕೊಂಡ ರೆಡ್ಡಿ ಚವ್ವಾ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎ&ಎಫ್‌ಡಬ್ಲ್ಯೂ) ಕಾರ್ಯದರ್ಶಿ ಮನೋಜ್ ಅಹುಜಾ ಡಾ. ಅಭಿಲಕ್ಷ್ ಲಿಖಿ, ಡಿಎ ಮತ್ತು ಎಫ್‌ಡಬ್ಲ್ಯೂ ಹೆಚ್ಚುವರಿ ಕಾರ್ಯದರ್ಶಿ ಡಾ. ಪ್ರಭಾತ್ ಕುಮಾರ್, ತೋಟಗಾರಿಕೆ ಆಯುಕ್ತರು, (ಡಿಎ&ಎಫ್‌ಡಬ್ಲ್ಯೂ), ಶ್ರೀ. ಮೀನೀಶ್ ಷಾ, ಅಧ್ಯಕ್ಷರು, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಗುಜರಾತ್ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯ ರೈತರು ಮತ್ತು  ಜೇನು ಸಾಕಣೆದಾರರು ಮತ್ತು ಜೇನು ಉತ್ಪಾದನೆಗೆ ಸಂಬಂಧಿಸಿದ ಪಾಲುದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

 

****



(Release ID: 1827218) Visitor Counter : 166


Read this release in: English , Urdu , Hindi , Marathi , Odia