ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಏಕತಾ ದಿನದಂದು ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.

Posted On: 31 OCT 2021 10:49AM by PIB Bengaluru

ನಮಸ್ಕಾರ್!
ರಾಷ್ಟ್ರೀಯ ಏಕತಾ ದಿನದಂದು ಎಲ್ಲಾ ದೇಶವಾಸಿಗಳಿಗೆ  ಶುಭಾಶಯಗಳು!. ಇಂದು ದೇಶವು ರಾಷ್ಟ್ರೀಯ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸುತ್ತಿದೆ. ಪಟೇಲ್ ಅವರು “ಏಕ್ ಭಾರತ್, ಶ್ರೇಷ್ಠ ಭಾರತ್” ಗಾಗಿ ತಮ್ಮ ಬದುಕಿನ ಪ್ರತೀ ಕ್ಷಣವನ್ನೂ ಮುಡಿಪಾಗಿಟ್ಟಿದ್ದರು.  
ಸರ್ದಾರ್ ಪಟೇಲ್ ಜೀ ಬರೇ ಚಾರಿತ್ರಿಕ ವ್ಯಕ್ತಿ ಮಾತ್ರವಲ್ಲ ಅವರು ನಮ್ಮ ದೇಶವಾಸಿಗಳ ಹೃದಯದಲ್ಲಿ ಬದುಕಿದ್ದಾರೆ. ಇಂದು ದೇಶಾದ್ಯಂತ ಏಕತೆಯ ಸಂದೇಶ ಸಾರುತ್ತಾ ಮುನ್ನಡೆಯುತ್ತಿರುವ ನಮ್ಮ ಉತ್ಸಾಹಿ ಸ್ನೇಹಿತರು ಭಾರತದ ಸಮಗ್ರತೆಯತ್ತ ತಡೆರಹಿತ ಅರ್ಪಣಾಭಾವದ ಸಂಕೇತವಾಗಿದ್ದಾರೆ. ನಾವು ಈ ಉತ್ಸಾಹವನ್ನು, ಸ್ಫೂರ್ತಿಯನ್ನು ದೇಶಾದ್ಯಂತ ನಡೆದ ಮತ್ತು ಏಕತಾ ಪ್ರತಿಮೆಯ ಬಳಿ ನಡೆದ ರಾಷ್ಟ್ರೀಯ ಏಕತಾ ಪರೇಡ್ ನಲ್ಲಿ ಕಾಣಬಹುದು. 
ಸ್ನೇಹಿತರೇ, 
ಭಾರತ ಎಂದರೆ ಅದು ಬರೇ ಭೌಗೋಳಿಕ ಘಟಕ ಅಲ್ಲ. ಅದು ಚಿಂತನೆಗಳು ತುಂಬಿರುವ, ನಾಗರಿಕತೆಯ ಮುಕ್ತ ಗುಣಮಾನಕಗಳಿರುವ ಮತ್ತು ಸಂಸ್ಕೃತಿಯನ್ನು ಒಳಗೊಂಡಿರುವ ರಾಷ್ಟ್ರ. ಈ ಭೂಮಿಯ ಮೇಲೆ 130 ಕೋಟಿ ಭಾರತೀಯರು ತಮ್ಮ ಆತ್ಮ, ಕನಸು ಮತ್ತು ಆಶೋತ್ತರಗಳೊಂದಿಗೆ ವಾಸವಾಗಿದ್ದಾರೆ. ಪ್ರಜಾಪ್ರಭುತ್ವದ ಬಲಿಷ್ಠ ತಳಪಾಯವು ಭಾರತದ ಸಮಾಜ ಮತ್ತು ಸಂಪ್ರದಾಯಗಳನ್ನು ಸಾವಿರಾರು ವರ್ಷಗಳಿಂದ  ನಿರ್ಮಾಣ ಮಾಡುತ್ತಾ ಬಂದಿದೆ. ಮತ್ತು ಅದು “ಏಕ ಭಾರತ” ಸ್ಫೂರ್ತಿಯನ್ನು ಶ್ರೀಮಂತಗೊಳಿಸಿದೆ. ಆದರೆ ನಾವು ಒಂದು ಸಂಗತಿಯನ್ನು ನೆನಪಿಡಬೇಕು ಅದೆಂದರೆ ದೋಣಿಯಲ್ಲಿ ಕುಳಿತಿರುವ ಪ್ರತಿಯೊಬ್ಬರೂ ದೋಣಿಯ ಬಗ್ಗೆ ಗಮನ ಹರಿಸುತ್ತಿರಬೇಕು ಎಂಬ ಸಂಗತಿಯನ್ನು. ನಾವು ಒಗ್ಗಟ್ಟಾಗಿದ್ದರೆ, ಆಗ ಮಾತ್ರ ನಮಗೆ ಮುನ್ನಡೆಯಲು ಸಾಧ್ಯವಾಗುತ್ತದೆ. ಆಗ ಮಾತ್ರ ದೇಶಕ್ಕೆ ಅದರ ಗುರಿಗಳನ್ನು   ಈಡೇರಿಸಲು ಸಾಧ್ಯವಾಗುತ್ತದೆ. 
ಸ್ನೇಹಿತರೇ, 
ಸರ್ದಾರ್ ಪಟೇಲ್ ಅವರು ಸದಾ ಬಲಿಷ್ಠ, ಎಲ್ಲರನ್ನೂ ಒಳಗೊಳ್ಳುವ, ಸೂಕ್ಷ್ಮ ಸಂವೇದನೆಯ, ಜಾಗೃತ, ವಿನೀತ, ಪ್ರಾಮಾಣಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಆಶಿಸಿದ್ದರು. ಅವರು ಸದಾ ದೇಶದ ಹಿತಾಸಕ್ತಿಯನ್ನು ಮುಂಚೂಣಿಯಲ್ಲಿಡುತ್ತಿದ್ದರು. ಅವರ ಪ್ರೇರಣೆಯಿಂದಾಗಿ ಭಾರತವು ಬಾಹ್ಯ ಮತ್ತು ಒಳಗಣ ಸವಾಲುಗಳನ್ನು ಸಹಿತ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುವ ಪೂರ್ಣ ಸಾಮರ್ಥ್ಯವನ್ನು ಹೊಂದುತ್ತಿದೆ. ಕಳೆದ ಏಳು ವರ್ಷಗಳಲ್ಲಿ ದಶಕಗಳಷ್ಟು ಹಳೆಯದಾದ ಕಾನೂನುಗಳನ್ನು ತೆಗೆದು ಹಾಕಲಾಗಿದೆ ಮತ್ತು ರಾಷ್ಟ್ರೀಯ ಏಕತೆಯ ಚಿಂತನೆಗಳಿಗೆ ಹೊಸ ಎತ್ತರವನ್ನು ಒದಗಿಸಿದೆ. ಅದು ಜಮ್ಮು ಮತ್ತು ಕಾಶ್ಮೀರ ಇರಲಿ, ಈಶಾನ್ಯ ಇರಲಿ ಅಥವಾ ದೂರದ ಹಿಮಾಲಯದಲ್ಲಿರುವ ಯಾವುದೇ ಹಳ್ಳಿ ಇರಲಿ ಅವೆಲ್ಲವೂ ಇಂದು ಪ್ರಗತಿಯ ಪಥದಲ್ಲಿವೆ. ದೇಶದಲ್ಲಿ ಆಧುನಿಕ ಮೂಲಸೌಕರ್ಯಗಳ ನಿರ್ಮಾಣ ದೇಶದಲ್ಲಿ ಭೌಗೋಳಿಕ ಮತ್ತು ಸಾಂಸ್ಕೃತಿಕ ಅಂತರವನ್ನು ನಿವಾರಣೆ ಮಾಡುತ್ತಿದೆ. ದೇಶದ ಜನರು ಒಂದೆಡೆಯಿಂದ ಇನ್ನೊಂದೆಡೆ ಸಾಗುವುದಕ್ಕೆ ಮೊದಲು ನೂರು ಬಾರಿ ಯೋಚಿಸುವಂತಾದರೆ ಆಗ ಅದು ಏನು ಕೆಲಸ ಸಾಧ್ಯ ಮಾಡುತ್ತದೆ?. ದೇಶದ ಪ್ರತಿಯೊಂದು ಮೂಲೆಗಳನ್ನು ಸುಲಭದಲ್ಲಿ ತಲುಪುವಂತಹ ವ್ಯವಸ್ಥೆ ಇದ್ದರೆ, ಜನರ ಹೃದಯದ ನಡುವಿನ ಅಂತರವೂ ಕಡಿಮೆಯಾಗುತ್ತದೆ ಮತ್ತು ದೇಶದ ಏಕತೆ ಬಲಿಷ್ಠಗೊಳ್ಳುತ್ತದೆ. “ಏಕ ಭಾರತ್, ಶ್ರೇಷ್ಠ ಭಾರತ್” ಸ್ಫೂರ್ತಿಯನ್ನು ಬಲಪಡಿಸಲು ಸಾಮಾಜಿಕ, ಆರ್ಥಿಕ, ಮತ್ತು ಸಾಂವಿಧಾನಿಕ ಸಮಗ್ರತೆಯ “ಮಹಾ ಯಾಗ”ವೊಂದು ದೇಶದಲ್ಲಿ ನಡೆಯುತ್ತಿದೆ. ಪ್ರತೀ ರಂಗದಲ್ಲಿಯೂ,  ಜಲ-ಭೂಮಿ-ಆಕಾಶ-ಬಾಹ್ಯಾಕಾಶಗಳಲ್ಲಿ ಭಾರತದ ಸಾಮರ್ಥ್ಯ ಮತ್ತು ಬದ್ಧತೆ ಅಭೂತಪೂರ್ವವಾದುದು. ಭಾರತವು ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸ್ವಾವಲಂಬನೆಯ ಹೊಸ ಆಂದೋಲನವನ್ನು ನಡೆಸುತ್ತಿದೆ. 
ಮತ್ತು ಸ್ನೇಹಿತರೇ, 
ಇಂತಹ ಸಮಯದಲ್ಲಿ ನಾವು ಸರ್ದಾರ್ ಸಾಹೇಬ್ ಅವರ ಮಾತುಗಳನ್ನು ನೆನಪಿಸಿಕೊಳ್ಳಬೇಕು. “ಸಾಮಾನ್ಯ ಶ್ರಮದ, ಪ್ರಯತ್ನಗಳ  ಮೂಲಕ ನಾವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು, ಆದರೆ ಏಕತೆಯ ಕೊರತೆ ನಮ್ಮನ್ನು ಹೊಸ ವಿಪತ್ತುಗಳಿಗೆ ಈಡು ಮಾಡುತ್ತದೆ” 
ಏಕತೆಯ ಕೊರತೆ ಹೊಸ ಬಿಕ್ಕಟ್ಟನ್ನು ತಂದರೆ, ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನಗಳು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ. ಸ್ವತಂತ್ರ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪ್ರಯತ್ನಗಳೂ ಸ್ವಾತಂತ್ರ್ಯದ ಈ ಕಾಲಘಟ್ಟದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಸ್ವಾತಂತ್ರ್ಯದ ಈ ಶುಭ ಸಂದರ್ಭ ಅಭೂತಪೂರ್ವ ವೇಗದ ಅಭಿವೃದ್ಧಿಯ ಮತ್ತು ಕಠಿಣ ಗುರಿಗಳನ್ನು ಸಾದಿಸುವ ಕಾಲಘಟ್ಟ. ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಕನಸು ಕಂಡ ರೀತಿಯ ನವ ಭಾರತದ ನಿರ್ಮಾಣ
ಸ್ನೇಹಿತರೇ, 
ಸರ್ದಾರ್ ಸಾಹೇಬ್ ಅವರು ನಮ್ಮ ದೇಶವನ್ನು ದೇಹವಾಗಿ, ಜೀವಂತ ಘಟಕವೆಂದು ಭಾವಿಸಿ ನೋಡುತ್ತಿದ್ದರು. “ಏಕ ಭಾರತ್” ಎಂಬ ಅವರ ಮುನ್ನೋಟ ಎಂದರೆ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಅದೇ ಮಹತ್ವಾಕಾಂಕ್ಷೆಯ ಕನಸು ಕಾಣುವ ಹಕ್ಕು. ಹಲವು ದಶಕಗಳ ಹಿಂದೆ ಆ ಅವಧಿಯಲ್ಲಿ ಅವರ ಚಳವಳಿಯ ಬಲ, ಮಹಿಳೆಯರು ಮತ್ತು ಪುರುಷರ ಪಾಲುದಾರಿಕೆಯ ಸಾಮೂಹಿಕ ಶಕ್ತಿಯಲ್ಲಿತ್ತು, ಪ್ರತೀ ವರ್ಗ, ಪ್ರತೀ ಪಂಗಡ ಇದರಲ್ಲಿ ಒಳಗೊಂಡಿತ್ತು. ಆದುದರಿಂದ ನಾವು ಇಂದು “ಏಕ ಭಾರತ” ಕುರಿತು ಮಾತನಾಡುವಾಗ ಆ ’ಏಕ ಭಾರತ” ದ ಗುಣಲಕ್ಷಣಗಳು ಏನಿರಬೇಕು?.”ಏಕ ಭಾರತ”ದ ಗುಣಲಕ್ಷಣಗಳು ಎಂದರೆ ಭಾರತದ ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಅವಕಾಶಗಳಿರಬೇಕು!. ಆ ಭಾರತದಲ್ಲಿ ದಲಿತರು, ಅವಕಾಶ ವಂಚಿತರು, ಬುಡಕಟ್ಟು ಜನರು, ಮತ್ತು ಅರಣ್ಯ ವಾಸಿಗಳು ಹಾಗು ದೇಶದ ಪ್ರತೀ ನಾಗರಿಕರು ಸಮಾನರೆಂಬ ಭಾವನೆ ಇರಬೇಕು!. ಮನೆ, ವಿದ್ಯುತ್, ನೀರಿನ ಸೌಲಭ್ಯಗಳಲ್ಲಿ ಆ ಭಾರತದಲ್ಲಿ ಯಾವುದೇ ತಾರತಮ್ಯ ಇರಬಾರದು. ಮತ್ತು ಅಲ್ಲಿ ಸಮಾನ ಹಕ್ಕುಗಳಿರಬೇಕು!. 
ಇಂದು ದೇಶವು ಮಾಡುತ್ತಿರುವುದು ಅದನ್ನೇ. ಅದು ಈ ನಿಟ್ಟಿನಲ್ಲಿ ಹೊಸ ಗುರಿಗಳನ್ನು ನಿಗದಿ ಮಾಡುತ್ತಿದೆ. ಮತ್ತು ಇದೆಲ್ಲ ಆಗುತ್ತಿರುವುದು ದೇಶದ ಕೈಗೊಳ್ಳುತ್ತಿರುವ ಪ್ರತಿಯೊಂದು ದೃಢ ನಿರ್ಧಾರದಲ್ಲಿ.  ಇಂದು “ಸಬ್ ಕಾ ಪ್ರಯಾಸ್” ಅದಕ್ಕೆ ಜೋಡಣೆ ಯಾಗಿರುವುದರಿಂದ. 
ಸ್ನೇಹಿತರೇ, 
ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾಮೂಹಿಕ ಶಕ್ತಿಯ ಪರಿಣಾಮ ಏನು ಎಂಬುದನ್ನು ನಾವು ನೋಡಿದ್ದೇವೆ. ಹೊಸ ಕೋವಿಡ್ ಆಸ್ಪತ್ರೆಗಳಿಂದ ಹಿಡಿದು ವೆಂಟಿಲೇಟರುಗಳವರೆಗೆ, ಅವಶ್ಯಕ ಔಷಧಿಗಳ ತಯಾರಿಕೆಯಿಂದ ಹಿಡಿದು 100 ಕೋಟಿ ಲಸಿಕಾ ಡೋಸುಗಳ ಮೈಲಿಗಲ್ಲನ್ನು ದಾಟುವವರೆಗಿನ ಸಾಧನೆ, ಇವೆಲ್ಲ ಸಾಧ್ಯವಾದುದು ಪ್ರತಿಯೊಬ್ಬ ಭಾರತೀಯರ ಮತ್ತು ಪ್ರತೀ ಸರಕಾರ ಹಾಗು ಪ್ರತೀ ಉದ್ಯಮದ ಪ್ರಯತ್ನಗಳಿಂದಾಗಿ. ನಾವೀಗ ಈ “ಸಬ್ ಕಾ ಪ್ರಯಾಸ್” ಸ್ಫೂರ್ತಿಯನ್ನು ಅಬಿವೃದ್ಧಿಯ ವೇಗವನ್ನಾಗಿ ಮಾಡಿಕೊಳ್ಳಬೇಕು, ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಅದನ್ನು ಬಳಸಿಕೊಳ್ಳಬೇಕು. ಇತ್ತೀಚೆಗೆ ಸರಕಾರಿ ಇಲಾಖೆಗಳ ಸಾಮೂಹಿಕ ಶಕ್ತಿಯನ್ನು ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆ ರೂಪದಲ್ಲಿ ಒಂದೇ ವೇದಿಕೆಗೆ ತರಲಾಗಿದೆ. ವರ್ಷಗಳಿಂದ ಕೈಗೊಂಡ ಸುಧಾರಣೆಗಳ ಸಂಯೋಜಿತ ಫಲವಾಗಿ ಭಾರತವಿಂದು ಹೂಡಿಕೆಗೆ ಅತ್ಯಾಕರ್ಷಕ ತಾಣವಾಗಿದೆ.
ಸಹೋದರರೇ ಮತ್ತು ಸಹೋದರಿಯರೇ, 
ಸಮಾಜದ ಕ್ರಿಯಾಶೀಲತೆಯು ಸರಕಾರದೊಂದಿಗೆ ಸಂಯೋಜಿಸಲ್ಪಟ್ಟಿದ್ದರೆ ಯಾವುದೇ ಬೃಹತ್ ನಿರ್ಧಾರಗಳನ್ನು ಸಾಧಿಸುವುದು ಕಷ್ಟವೇನಲ್ಲ ಮತ್ತು ಎಲ್ಲವೂ ಸಾಧ್ಯವಾಗುತ್ತದೆ. ಆದುದರಿಂದ ನಾವು ಏನನ್ನಾದರೂ ಮಾಡುತ್ತಿರುವಾಗ, ಅದು ಹೇಗೆ ನಮ್ಮ ವಿಸ್ತಾರ ವ್ಯಾಪ್ತಿಯ ರಾಷ್ಟ್ರೀಯ ಗುರಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚಿಂತಿಸಬೇಕು. ಶಾಲೆ ಅಥವಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಯುವ ಜನರು ಯಾವುದೇ ವಲಯದಲ್ಲಿರುವ ಹೊಸ ಅನ್ವೇಷಣೆಯ ಸವಾಲನ್ನು ಕೈಗೆತ್ತಿಕೊಳ್ಳಬಹುದು. ಯಶಸ್ಸಾಗಲೀ, ವೈಫಲ್ಯವಾಗಲೀ ಪರಿಗಣಿಸಬೇಕಾಗಿಲ್ಲ, ಆದರೆ ಪ್ರಯತ್ನ ಬಹಳ ಮುಖ್ಯ. ಅದೇ ರೀತಿ ನಾವು ಮಾರುಕಟ್ಟೆಯಲ್ಲಿ ಖರೀದಿ ಮಾಡುವಾಗ, ನಾವು ಆತ್ಮ ನಿರ್ಭರ ಭಾರತಕ್ಕೆ ಬೆಂಬಲ ನೀಡುತ್ತಿರುವೆಯೋ ಎಂಬುದನ್ನು ನೋಡಬೇಕು ಅಥವಾ ಅದಕ್ಕೆ ನಾವು ವಿರೋಧವಾದುದನ್ನು ಮಾಡುತ್ತಿರುವೆಯೋ ಎಂಬುದನ್ನು ನೋಡಬೇಕು. ಭಾರತದ ಉದ್ಯಮ ಕೂಡ  ವಿದೇಶೀ ಕಚ್ಚಾ ವಸ್ತು ಅಥವಾ ಘಟಕ ಸಲಕರಣೆಗಳ ಅವಲಂಬನೆ ಕುರಿತಂತೆ ಗುರಿಯನ್ನು ನಿಗದಿ ಮಾಡಬಹುದು. ನಮ್ಮು ರೈತರು ಕೂಡಾ ಹೊಸ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಮತ್ತು ದೇಶದ ಅಗತ್ಯಕ್ಕೆ ತಕ್ಕಂತೆ ಹೊಸ ಬೆಳೆಗಳನ್ನು ಅಳವಡಿಸಿಕೊಂಡು ಆತ್ಮ ನಿರ್ಭರ ಭಾರತದಲ್ಲಿ ತಮ್ಮ ಪಾಲುದಾರಿಕೆಯನ್ನು ಬಲಪಡಿಸಬಹುದು. ನಮ್ಮ ಸಹಕಾರಿ ಸಂಸ್ಥೆಗಳು ಕೂಡಾ ದೇಶಕ್ಕಾಗಿ ಸಣ್ಣ ರೈತರನ್ನು ಬಲಪಡಿಸಬಹುದು. ನಮ್ಮ ಸಣ್ಣ ರೈತರ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸಿದಷ್ಟು ಮತ್ತು ಅವರ ಅಭ್ಯುದಯಕ್ಕೆ ಮುಂದಡಿ ಇಟ್ಟಷ್ಟೂ ದೂರದ ಹಳ್ಳಿಗಳಲ್ಲಿಯೂ ನಮಗೆ ಹೊಸ ನಂಬಿಕೆಯನ್ನು ಉಂಟು ಮಾಡಲು ಸಾಧ್ಯವಾಗುತ್ತದೆ. ಮತ್ತು ಆ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಳ್ಳಲು ನಾವು ಮುಂದೆ ಬರಬೇಕು.
ಸ್ನೇಹಿತರೇ, 
ಈ ಸಂಗತಿಗಳೆಲ್ಲಾ ಸಾಮಾನ್ಯ ಎಂದು ಕಾಣಬಹುದು, ಆದರೆ ಅವುಗಳ ಫಲಿತಾಂಶ ಅಭೂತಪೂರ್ವವಾದುದಾಗಿರುತ್ತದೆ. ಹಲವು ವರ್ಷಗಳಿಂದ ಸ್ವಚ್ಛತೆಯಂತಹ ಸಣ್ಣ ವಿಷಯಗಳಲ್ಲಿಯೂ ಜನರ ಸಹಭಾಗಿತ್ವ ಹೇಗೆ ದೇಶವನ್ನು ಬಲಿಷ್ಠಗೊಳಿಸಿದೆ ಎಂಬುದನ್ನು ನಾವು ನೋಡಿದ್ದೇವೆ. ನಾಗರಿಕರಾಗಿ ನಾವು “ಏಕ ಭಾರತ”ವಾಗಿ ಮುನ್ನಡೆದಾಗ ನಾವು ಯಶಸ್ಸನ್ನು ಸಾಧಿಸಿದ್ದೇವೆ ಮತ್ತು ನಾವು ಭಾರತದ ಸಾರ್ವಭೌಮತ್ವಕ್ಕೆ  ಕಾಣಿಕೆಯನ್ನೂ ನೀಡಿದ್ದೇವೆ. ಯಾವುದೇ ಕೆಲಸದ ಹಿಂದೆ ಉತ್ತಮ ಉದ್ದೇಶ ಇದ್ದರೆ ಮತ್ತು ಉತ್ಸಾಹ ಇದ್ದರೆ ಆಗ ಆ ಕೆಲಸ ಎಷ್ಟೇ ಸಣ್ಣದಾದರೂ ಅದು ಬಹಳ ಪ್ರಮುಖವಾಗಿರುತ್ತದೆ ಎಂಬುದನ್ನು ನಾವು ಸದಾ ನೆನಪಿಡಬೇಕು. ದೇಶಕ್ಕೆ ಸೇವೆ ಸಲ್ಲಿಸುವುದರಲ್ಲಿ ಸಂತೋಷ ಇರುತ್ತದೆ, ಅದನ್ನು ಶಬ್ದಗಳಲ್ಲಿ ವಿವರಿಸಲಾಗದು. ದೇಶದ ಸಮಗ್ರತೆ ಮತ್ತು ಏಕತೆಗಾಗಿ ನಮ್ಮ ಪ್ರತೀ ಪ್ರಯತ್ನಗಳೂ ನಮ್ಮ ನಾಗರಿಕ ಕರ್ತವ್ಯಗಳ ನಿಭಾವಣೆಯೊಂದಿಗೆ ನಡೆದರೆ ಅದು ಸರ್ದಾರ್ ಪಟೇಲ್ ಜೀ ಅವರಿಗೆ ಸಲ್ಲುವ ನೈಜ ಶ್ರದ್ಧಾಂಜಲಿ. ಈ ಆಶಯದೊಂದಿಗೆ ನಾವು ಮುನ್ನಡೆಯೋಣ, ಏಕತೆಗೆ ಹೊಸ ಎತ್ತರಗಳನ್ನು ಒದಗಿಸೋಣ,ಮತ್ತು ನಮ್ಮ ಸಾಧನೆಗಳಿಂದ ಪ್ರೇರಣೆ ಪಡೆದು ದೇಶದ ಶ್ರೇಷ್ಠತೆಯನ್ನು ಮೆರೆಯೋಣ. ರಾಷ್ಟ್ರೀಯ ಏಕತಾ ದಿನದಂದು ನಿಮಗೆಲ್ಲರಿಗೂ ಅನಂತ ಅಭಿನಂದನೆಗಳು. 
ಧನ್ಯವಾದಗಳು!
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1768349) Visitor Counter : 525