ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಅಕ್ಟೋಬರ್ 2 ರಿಂದ ಅಕ್ಟೋಬರ್ 31 2021 ರವರೆಗೆ ನಡೆಯುವ ಭಾರತ ಸರ್ಕಾರದಲ್ಲಿ ಬಾಕಿ ಕಡತ ವಿಲೇವಾರಿಯ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದರು.


ಅಭಿಯಾನದಲ್ಲಿ ನಾಗರಿಕ ಕೇಂದ್ರಿತ ಆಡಳಿತವನ್ನು ಗಮನದಲ್ಲಿಟ್ಟುಕೊಂಡು ಬಾಕಿ ಇರುವ ಕುಂದುಕೊರತೆಗಳನ್ನು ಪರಿಹರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು:
ಡಾ. ಜಿತೇಂದ್ರ ಸಿಂಗ್

ಕೆಲಸದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಸುಧಾರಿಸಲು ಅನಗತ್ಯವಾದ ಮತ್ತು ಬಳಕೆಯಲ್ಲಿಲ್ಲದ ವಸ್ತುಗಳ ನಿರ್ಮೂಲನೆಗೆ ಅಭಿಯಾನದಲ್ಲಿ ಗಮನಹರಿಸಲಾಗುತ್ತದೆ: ಡಾ. ಜಿತೇಂದ್ರ ಸಿಂಗ್

Posted On: 01 OCT 2021 5:28PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ನಿರ್ವಹಣೆ) ಸಚಿವರು; ಭೂ ವಿಜ್ಞಾನ ಖಾತೆ (ಸ್ವತಂತ್ರ ನಿರ್ವಹಣೆ) ಸಚಿವರು; ಪ್ರಧಾನಮಂತ್ರಿಗಳ ಕಾರ್ಯಾಲಯದ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವರು; ಅಣು ಇಂಧನ ಖಾತೆ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್
ಇಂದು  ಅಕ್ಟೋಬರ್ 2 ರಿಂದ ಅಕ್ಟೋಬರ್ 31 2021 ರವರೆಗೆ  ನಡೆಯುವ ಭಾರತ ಸರ್ಕಾರದಲ್ಲಿ ಬಾಕಿ ಕಡತ ವಿಲೇವಾರಿಯ ವಿಶೇಷ ಅಭಿಯಾನಕ್ಕಾಗಿ ಮೀಸಲಾದ ಪೋರ್ಟಲ್ ಗೆ ಚಾಲನೆ ನೀಡಿದರು. ಸಾಮಾನ್ಯ ಜನರಿಗೆ "ಈಸ್ ಆಫ್ ಲಿವಿಂಗ್" - “ಸುಗಮ ಜೀವನ” ತರಲು ಅಭಿಯಾನದಲ್ಲಿ ನಾಗರಿಕ ಕೇಂದ್ರಿತ ಆಡಳಿತವನ್ನು ಕೇಂದ್ರೀಕರಿಸಿ ಬಾಕಿ ಇರುವ ಕುಂದುಕೊರತೆಗಳನ್ನು ಪರಿಹರಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು. 
ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳು ಮತ್ತು ಅಭಿಯಾನಕ್ಕಾಗಿ ನಿಯೋಜಿತ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು ಜೊತೆಗೆ ಅಧೀನ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಹಲವಾರು ವಿಭಾಗದ ಮುಖ್ಯಸ್ಥರು ಸೇರಿದ್ದರು.

ಡಾ. ಜಿತೇಂದ್ರ ಸಿಂಗ್ ಅವರು ಮೋದಿ ಸರ್ಕಾರವು "ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ"ದೊಂದಿಗೆ ಒಂದು ಮಾದರಿ ಬದಲಾವಣೆಯನ್ನು ತಂದಿತು, ಪಾರದರ್ಶಕತೆಯ ಪ್ರಗತಿಪರ ಏರಿಕೆಯು ಇದರ ಮುಖ್ಯ ಉದ್ದೇಶವಾಗಿದ್ದು  2014 ರಿಂದ 1500ಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಕಾನೂನುಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು.

ಈ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕ ಕುಂದುಕೊರತೆ ಪ್ರಕರಣಗಳಲ್ಲಿ 10 ಪಟ್ಟು ಹೆಚ್ಚಳವಾಗಿದೆ ಮತ್ತು ಇದು ವಾಸ್ತವವಾಗಿ ಸರ್ಕಾರದಲ್ಲಿ ನಾಗರಿಕರು ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಸಚಿವರು ಹೇಳಿದರು. ಸಾರ್ವಜನಿಕ ಕುಂದುಕೊರತೆಗಳು 2014 ರಲ್ಲಿ 2 ಲಕ್ಷದಿಂದ ಪ್ರಸ್ತುತ 22 ಲಕ್ಷಕ್ಕೆ ಹೆಚ್ಚಾಗಿದ್ದು, ಶೇಕಡಾ 96 ಕ್ಕಿಂತ ಹೆಚ್ಚು ಪ್ರಕರಣಗಳ ವಿಲೇವಾರಿಯಾಗಿದೆ. ಮೋದಿ ಸರ್ಕಾರದ ಮುಖ್ಯ ಮಂತ್ರವೆಂದರೆ ಕಲ್ಯಾಣ ಯೋಜನೆಗಳ ಎಲ್ಲಾ ಪ್ರಯೋಜನಗಳೊಂದಿಗೆ  ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವುದಾಗಿದೆ.


ಡಾ ಜಿತೇಂದ್ರ ಸಿಂಗ್ ಅವರು ವಿಶೇಷ ಅಭಿಯಾನದ ಅವಧಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಇದು ಸಂಸತ್ ಸದಸ್ಯರಿಂದ ಪರಾಮರ್ಶೆಗಳು, ರಾಜ್ಯ ಸರ್ಕಾರಗಳು, ಅಂತರ ಸಚಿವಾಲಯದ ಸಮಾಲೋಚನೆಗಳು ಮತ್ತು ಪ್ರತಿ ಸಚಿವಾಲಯ / ಇಲಾಖೆ ಮತ್ತು / ಅಧೀನ ಕಚೇರಿಗಳಿಂದ ಸಂಸದೀಯ ಭರವಸೆಗಳನ್ನು ಒಳಗೊಂಡಿರುತ್ತವೆ.
 
ಭಾರತದ ಎಲ್ಲ ನಗರಗಳನ್ನು ಕಸಮುಕ್ತಗೊಳಿಸಲು ಸ್ವಚ್ಛ ಭಾರತ್ ಮಿಷನ್-ಅರ್ಬನ್ ನ ಎರಡನೇ ಹಂತವನ್ನು ಪ್ರಧಾನಮಂತ್ರಿಯವರು ಆರಂಭಿಸಿದ ನಂತರ ಈ ಅಭಿಯಾನವು ನಡೆಯುತ್ತಿರುವುದರಿಂದ, ಈ ವಿಶೇಷ ಅಭಿಯಾನದಲ್ಲಿ ತಾತ್ಕಾಲಿಕ ಕಡತಗಳನ್ನು ಅಸ್ತಿತ್ವದಲ್ಲಿರುವ ಸೂಚನೆಗಳ ಪ್ರಕಾರ  ಗುರುತಿಸಿ ಮತ್ತು ಕೆಲಸದ ಸ್ಥಳದಲ್ಲಿ ಸ್ವಚ್ಛತೆಯನ್ನು ಸುಧಾರಿಸಲು ತ್ಯಾಜ್ಯ ಅನಗತ್ಯವಾದ  ಮತ್ತು ಬಳಕೆಯಲ್ಲಿಲ್ಲದ ವಸ್ತುಗಳನ್ನು ನಿರ್ಮೂಲನೆ ಮಾಡಬೇಕಾಗಿರುವುದು  ಅಗತ್ಯವಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.

ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ಡಿ ಎ ಆರ್ ಪಿ ಜಿ) ಈ ಅಭಿಯಾನದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ನೋಡಲ್ ಸಚಿವಾಲಯವಾಗಿರುತ್ತದೆ. ಈ ಉದ್ದೇಶಕ್ಕಾಗಿ ಸಚಿವಾಲಯವು ಮೀಸಲಾದ ಡ್ಯಾಶ್‌ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದೆ ಮತ್ತು ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು/ಇಲಾಖೆಗಳಿಗೆ ಈ ಕುರಿತು ವಿವರವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪ್ರತಿ ಸಚಿವಾಲಯ/ಇಲಾಖೆಯು ವಿಶೇಷ ಅಭಿಯಾನಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಪ್ರಗತಿಯನ್ನು ಕಾರ್ಯದರ್ಶಿಗಳು/ಎಚ್‌ಒಡಿ ಪ್ರತಿದಿನ ಮೇಲ್ವಿಚಾರಣೆ ಮಾಡಬೇಕು. Https://pgportal.gov.in/scdpm ನಲ್ಲಿ ಮೀಸಲಾದ ಪೋರ್ಟಲ್ ಅನ್ನು ರಚಿಸಲಾಗಿದೆ ಮತ್ತು 22 ಸೆಪ್ಟೆಂಬರ್ 2021 ರಿಂದ ಸಚಿವಾಲಯಗಳು ಗುರುತಿಸಿದ ನಿಯತಾಂಕಗಳಲ್ಲಿ ದತ್ತಾಂಶವನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.

ವಿಶೇಷ ಅಭಿಯಾನದ ಪೂರ್ವಸಿದ್ಧತಾ ಹಂತವನ್ನು ಸೆಪ್ಟೆಂಬರ್ 13, 2021 ರಿಂದ ಸೆಪ್ಟೆಂಬರ್ 30, 2021 ರವರೆಗೆ ನಡೆಸಲಾಯಿತು. ಪೂರ್ವಸಿದ್ಧತಾ ಹಂತದಲ್ಲಿ, ಸಚಿವಾಲಯಗಳು ಮತ್ತು ಇಲಾಖೆಗಳು ಬಾಕಿ ಇರುವ ಸ್ಥಿತಿಯನ್ನು ಗುರುತಿಸಿವೆ. ಬಾಕಿ ಇರುವ ಸಾರ್ವಜನಿಕ ಕುಂದುಕೊರತೆಗಳ 2 ಲಕ್ಷ ಪ್ರಕರಣಗಳು ಮತ್ತು  ನಿರ್ಮೂಲನೆ ಮಾಡಲು 4.5 ಲಕ್ಷ ಭೌತಿಕ ಕಡತಗಳನ್ನು ಅಭಿಯಾನದಲ್ಲಿ ವಿಲೇವಾರಿ ಮಾಡಲು ಗುರುತಿಸಲಾಗಿದೆ. 2179 ಅಭಿಯಾನದ ತಾಣಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುವುದು ಮತ್ತು ಸರಳೀಕರಣಕ್ಕಾಗಿ 301 ನಿಯಮಗಳು/ ಪ್ರಕ್ರಿಯೆಗಳನ್ನು ಗುರುತಿಸಲಾಗಿದೆ.

***



(Release ID: 1760183) Visitor Counter : 193


Read this release in: English , Hindi , Punjabi , Tamil