ಕೃಷಿ ಸಚಿವಾಲಯ

ಪ್ರಧಾನಿ-ಕಿಸಾನ್ ಯೋಜನೆಯಡಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳಿಗೆ ಮತ್ತು ಜಿಲ್ಲೆಗಳಿಗೆ ಪ್ರಶಸ್ತಿಗಳನ್ನು ವಿತರಿಸಿದ ಕೇಂದ್ರ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್


ರೈತರ ಪರಿಶ್ರಮವು ದೇಶವನ್ನು ಸಂಕಷ್ಟದಿಂದ ಪಾರುಮಾಡುವ ಸಾಮರ್ಥ್ಯವನ್ನು ಹೊಂದಿದೆ: ಶ್ರೀ ನರೇಂದ್ರ ಸಿಂಗ್ ತೋಮರ್

ಕರ್ನಾಟಕಕ್ಕೆ ಶೇಕಡಾವಾರು ಅತ್ಯಧಿಕ ಆಧಾರ್ ಪ್ರಮಾಣೀಕೃತ ಫಲಾನುಭವಿಗಳ ಸೇರ್ಪಡೆಗಾಗಿ ಪ್ರಶಸ್ತಿ

ಮಹಾರಾಷ್ಟ್ರಕ್ಕೆ ಭೌತಿಕ ಪರಿಶೀಲನೆ ಹಾಗೂ ಕುಂದುಕೊರತೆ ನಿವಾರಣೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿ

ಪ್ರದಾನ ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಅತ್ಯಂತ ವೇಗವಾಗಿ ಜಾರಿಗೊಳಿಸಿದ್ದಕ್ಕಾಗಿ ಉತ್ತರ ಪ್ರದೇಶಕ್ಕೆ ಪ್ರಶಸ್ತಿ

Posted On: 24 FEB 2021 5:42PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ತೋರಿದ ರಾಜ್ಯ ಮತ್ತು ಜಿಲ್ಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪಿಎಂ-ಕಿಸಾನ್ ಯೋಜನೆಯ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವರು ಪ್ರಶಸ್ತಿಗಳನ್ನು ವಿತರಿಸಿದರು. ದತ್ತಾಂಶಗಳ ತಿದ್ದುಪಡಿ, ರೈತರ ಕುಂದುಕೊರತೆಗಳ ಪರಿಹಾರ, ಸಕಾಲಿಕ ಭೌತಿಕ ಪರಿಶೀಲನೆಯ ಇತ್ಯಾದಿ ಮಾನದಂಡಗಳ ಆಧಾರದ ಮೇಲೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಶಸ್ತಿ ನೀಡಲಾಯಿತು.

ಪಿಎಂ-ಕಿಸಾನ್ ಒಂದು ಐತಿಹಾಸಿಕ ಯೋಜನೆ ಎಂದು ಬಣ್ಣಿಸಿದ ಶ್ರೀ ತೋಮರ್, ಯೋಜನೆ ಆರಂಭದಿಂದ ಹಿಡಿದು 24-02-2021ರ ವರೆಗೆ 10.75 ಕೋಟಿ ಫಲಾನುಭವಿಗಳಿಗೆ 1,15,638.87 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಉಪಕ್ರಮವನ್ನು ಕೃಷಿ ಕ್ಷೇತ್ರದ ಒಂದು ಮೈಲಿಗಲ್ಲು ಎಂದು ಮುಂದಿನ ಪೀಳಿಗೆಯು ಸ್ಮರಿಸಲಿದೆ ಎಂದು ಹೇಳಿದರು.

ರೈತರ ಪರಿಶ್ರಮವನ್ನು ಶ್ಲಾಘಿಸಿದ ಸಚಿವರು, ಕೋವಿಡ್‌ ಸಮಯದಲ್ಲಿ ರೈತರ ಕೊಡುಗೆಯನ್ನು ಸ್ಮರಿಸಿದರು. ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ, ರೈತರ ಪರಿಶ್ರಮವು ದೇಶವನ್ನು ಬಿಕ್ಕಟ್ಟಿನಿಂದ ಪಾರು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದರು.

ರೈತರು ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಶ್ರೀ ತೋಮರ್ ಧನ್ಯವಾದ ಅರ್ಪಿಸಿದರು. ತಮ್ಮ ರಾಜ್ಯದಲ್ಲಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡ ಎಲ್ಲ ರಾಜ್ಯ ಸರ್ಕಾರಗಳಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದರು.

ಯೋಜನೆಗೆ ಸಾಕಷ್ಟು ಅನುದಾನ ಮೀಸಲಿರಿಸಲಾಗಿದೆ ಎಂದ ಸಚಿವರು, ರಾಜ್ಯ ಸರಕಾರಗಳು ಫಲಾನುಭವಿಗಳ ನೋಂದಣಿಗಾಗಿ ವಿಶೇಷ ಅಭಿಯಾನ ನಡೆಸಬೇಕು ಮೂಲಕ ಯಾವೊಬ್ಬ ಅರ್ಹ ರೈತ ಸಹ ಯೋಜನೆಯ ಪ್ರಯೋಜನದಿಂದ ವಂಚಿತರಾಗದಂತೆ ತಡೆಯಬೇಕು ಎಂದು ಮನವಿ ಮಾಡಿದರು.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಅಗರ್ವಾಲ್‌ ಅವರು ಯೋಜನೆ ಮತ್ತು ದತ್ತಾಂಶ ಸಂಗ್ರಹ ಅಭಿಯಾನದ ಅನುಷ್ಠಾನ ಹಾಗೂ ದತ್ತಾಂಶ ಸಂಗ್ರಹ ಅಭಿಯಾನಕ್ಕೆ ರಾಜ್ಯ ಸರಕಾರಗಳು ನೀಡಿದ ಸಹಕಾರಕ್ಕಾಗಿ ಆಭಾರಿ ಎಂದರು. ಯೋಜನೆ ಆರಂಭವಾದ 18 ದಿನಗಳಲ್ಲಿ 1 ಕೋಟಿಗೂ ಹೆಚ್ಚು ಫಲಾನುಭವಿಗಳ ಸೇರ್ಪಡೆಯಾಗಿರುವುದು ಐತಿಹಾಸಿಕ ದಾಖಲೆ ಎಂದರು.

ಸಂದರ್ಭದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ಸಹಾಯಕ ಸಚಿವರು, ಕರ್ನಾಟಕ, ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶದ ಸಚಿವರು, ಜಂಟಿ ಕಾರ್ಯದರ್ಶಿ ಮತ್ತು ಪಿಎಂ ಕಿಸಾನ್ ಸಿಇಒ, ವಿವಿಧ ರಾಜ್ಯ ಸರಕಾರಗಳ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾನದಂಡ

ವಿಭಾಗ

ರಾಜ್ಯ

ವಿವರಣೆ

ಅತ್ಯಧಿಕ ಶೇಕಡಾವಾರು ಆಧಾರ್ ಪ್ರಮಾಣೀಕೃತ ಫಲಾನುಭವಿಗಳ ಸೇರ್ಪಡೆ

ಇತರ ರಾಜ್ಯಗಳು

ಕರ್ನಾಟಕ

97% ಆಧಾರ್ ಪ್ರಮಾಣೀಕೃತ ದತ್ತಾಂಶ. ಕರ್ನಾಟಕದಲ್ಲಿ ಶೇ.90ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಧಾರ್ ಆಧಾರಿತ ಪಾವತಿ ವಿಧಾನದ ಮೂಲಕ ಯೋಜನೆಯ ಪ್ರಯೋಜನ ನೀಡಲಾಗುತ್ತಿದೆ.

ಭೌತಿಕ ಪರಿಶೀಲನೆ ಮತ್ತು ಕುಂದುಕೊರತೆ ನಿವಾರಣೆಯಲ್ಲಿ ಉತ್ತಮ ಕಾರ್ಯನಿರ್ವಹಣೆ

 

ಮಹಾರಾಷ್ಟ್ರ

ಪೂರ್ಣಗೊಂಡ ಭೌತಿಕ ಪರಿಶೀಲನೆ - 99%

ಕುಂದುಕೊರತೆ  ನಿವಾರಣೆ – 60%

ಅತ್ಯಂತ ವೇಗವಾಗಿ ಯೋಜನೆ ಅನುಷ್ಠಾನ

 

ಉತ್ತರ ಪ್ರದೇಶ

2018ರ ಡಿಸೆಂಬರ್‌ನಿಂದ 2019ರ ಮಾರ್ಚ್‌ವರೆಗಿನ ಅವಧಿಯಲ್ಲಿ ಸುಮಾರು 1.53 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಅತ್ಯಧಿಕ ಪ್ರಮಾಣದ ಶೇಕಡಾವಾರು ಆಧಾರ್ ಪ್ರಮಾಣೀಕೃತ ಫಲಾನುಭವಿಗಳು

ಈಶಾನ್ಯ ರಾಜ್ಯಗಳು & ಗುಡ್ಡಗಾಡು ಪ್ರದೇಶ

ಅರುಣಾಚಲ ಪ್ರದೇಶ

ಆಧಾರ್ ದೃಢೀಕರಣ 98%

ಭೌತಿಕ ಪರಿಶೀಲನೆ ಮತ್ತು ಕುಂದುಕೊರತೆ ನಿವಾರಣೆಯಲ್ಲಿ ಉತ್ತಮ ಕಾರ್ಯನಿರ್ವಹಣೆ

 

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

ಪೂರ್ಣಗೊಂಡ ಭೌತಿಕ ಪರಿಶೀಲನೆ- 75 %

ಕುಂದುಕೊರತೆ ನಿವಾರಣೆ - 56%

ಜಿಲ್ಲೆಗಳಿಗೆ ಪ್ರಶಸ್ತಿಗಳು

ಮಾನದಂಡ

ವಿಭಾಗ

ಜಿಲ್ಲೆ

ಆಧಾರ್ ದೃಢೀಕೃತ ಮತ್ತು ಪ್ರಯೋಜನ ಪಡೆದ ರೈತರು (ಮೌಲ್ಯದ ಸರಾಸರಿ)

ಇತರ ರಾಜ್ಯಗಳು

  1. ರೂಪನಗರ (ಪಂಜಾಬ್)
  2. ಕುರುಕ್ಷೇತ್ರ (ಹರಿಯಾಣ)
  3. ಬಿಲಾಸ್‌ಪುರ್ (ಛತ್ತೀಸ್ ಗಢ)
 

ಈಶಾನ್ಯ/ಗುಡ್ಡಗಾಡು ಪ್ರದೇಶಗಳು

  1. ಲಾಹೌಲ್ ಮತ್ತು ಸ್ಪಿತಿ (ಹಿಮಾಚಲ ಪ್ರದೇಶ)
  2. ಉಧಮ್‌ಸಿಂಗ್ ನಗರ (ಉತ್ತರಾಖಂಡ)

ಕುಂದುಕೊರತೆ ನಿವಾರಣೆ

ಇತರ ರಾಜ್ಯಗಳು

  1. ಪುಣೆ (ಮಹಾರಾಷ್ಟ್ರ)
  2. ದೋಹಾದ್ (ಗುಜರಾತ್)
  3. ಎಸ್‌ಪಿಎಸ್‌ಆರ್ ನೆಲ್ಲೂರು (ಆಂಧ್ರ ಪ್ರದೇಶ)
 

ಈಶಾನ್ಯ/ಗುಡ್ಡಗಾಡು ಪ್ರದೇಶಗಳು

  1. ನೈನಿತಾಲ್ (ಉತ್ತರಾಖಂಡ್)
  2. ಸಿರ್ಮೌರ್ (ಹಿಮಾಚಲ ಪ್ರದೇಶ)

ಭೌತಿಕ ಪರಿಶೀಲನೆ

ಇತರ ರಾಜ್ಯಗಳು

  1. ಅಹ್ಮದ್‌ನಗರ್ (ಮಹಾರಾಷ್ಟ್ರ)
  2. ಅನಂತಪುರ (ಆಂಧ್ರ ಪ್ರದೇಶ)
  3. ಔರಂಗಾಬಾದ್ (ಬಿಹಾರ)
 

ಈಶಾನ್ಯ/ ಗುಡ್ಡಗಾಡು ಪ್ರದೇಶಗಳು

  1. ಕಂಗ್ರಾ (ಹಿಮಾಚಲ ಪ್ರದೇಶ)
  2. ಡೆಹ್ರಾಡೂನ್ (ಉತ್ತರಾಖಂಡ)

 

ಯೋಜನೆಯ ಕುರಿತು:

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ  (ಪಿಎಂ-ಕಿಸಾನ್) ಯೋಜನೆಯನ್ನು 24 ಫೆಬ್ರವರಿ 2019 ರಂದು ಆರಂಭಿಸಲಾಯಿತು. ದೇಶಾದ್ಯಂತ ಎಲ್ಲಾ ಸಣ್ಣ ಮತ್ತು ಮಧ್ಯಮ ಗಾತ್ರದ ಭೂ ಹಿಡುವಳಿದಾರ ರೈತರ (ಎಸ್‌ಎಂಎಫ್‌) ಕುಟುಂಬಗಳಿಗೆ ಆದಾಯದ ನೆರವು ನೀಡುವುದು, ಆ ಮೂಲಕ ಅವರಿಗೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಹಾಗೂ ದೈನಂದಿನ ಕೌಟುಂಬಿಕ ಅಗತ್ಯಗಳ ಖರ್ಚು-ವೆಚ್ಚಗಳನ್ನು ಭರಿಸಲು ಸಹಾಯ ಮಾಡುವುದು ಯೋಜನೆಯ ಉದ್ದೇಶ.  1.12.2018ರಿಂದ ಜಾರಿಗೆ ಬಂದ ಯೋಜನೆಯಡಿ 2 ಹೆಕ್ಟೇರ್‌ವರೆಗೆ ಸಾಗುವಳಿ ಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಕೆಲವೊಂದು ವಿನಾಯಿತಗಳ ಹೊರತಾಗಿ ರೈತರಿಗೆ ವಾರ್ಷಿಕ 6000 ರೂ. ನೆರವು ನೀಡುವ ಗುರಿ ಹೊಂದಲಾಗಿದೆ. ಕೇಂದ್ರ ಸರಕಾರ ನಗದು ನೇರ ವರ್ಗಾವಣೆ ಯೋಜನೆಯಡಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ತಲಾ 2000 ರೂ.ಗಳನ್ನು ವರ್ಗಾವಣೆ ಮಾಡುತ್ತದೆ.

ಅರ್ಹತೆ ಆಧಾರದ ಮೇಲೆ ಫಲಾನುಭವಿಗಳನ್ನು ಗುರುತಿಸಲು 01-02-2019 ಕಡೆಯ ದಿನಾಂಕವಾಗಿತ್ತು. ಫಲಾನುಭವಿಗಳನ್ನು ಗುರುತಿಸುವ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ವಹಿಸಲಾಗಿದೆ. ಈ ಯೋಜನೆಗಾಗಿ www.pmkisan.gov.in ಎಂಬ ಪ್ರತ್ಯೇಕ ವೆಬ್‌-ಪೋರ್ಟಲ್ ಆರಂಭಿಸಲಾಗಿದೆ. ಪಿಎಂ-ಕಿಸಾನ್ ವೆಬ್- ಪೋರ್ಟಲ್‌ನಲ್ಲಿ ರೈತರು ಸಿದ್ಧಪಡಿಸಿದ ಮತ್ತು ಅಪ್‌ಲೋಡ್ ಮಾಡಿದ ಮಾಹಿತಿ ಆಧರಿಸಿ ಫಲಾನುಭವಿಗಳಿಗೆ ಆರ್ಥಿಕ ಅನುಕೂಲಗಳನ್ನು ಬಿಡುಗಡೆ ಮಾಡಲಾಗುತ್ತದೆ. ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ರಾಜ್ಯ ನೋಡಲ್ ಅಧಿಕಾರಿ (ಎಸ್‌ಎನ್‌ಎ) ರೈತರ ಹೆಸರನ್ನು ಅಪ್‌ಲೋಡ್ ಮಾಡುತ್ತಾರೆ. ಹೀಗೆ ಹೆಸರು ಅಪ್‌ಲೋಡ್‌ ಆದ ಫಲಾನುಭವಿಗಳು 4 ತಿಂಗಳ ಅವಧಿಯಲ್ಲಿ ಪ್ರಯೋಜನಪಡೆಯಲು ಅರ್ಹರಾಗಿರುತ್ತಾರೆ.

ಪಿಎಂ-ಕಿಸಾನ್ ಯೋಜನೆಯು ಅನುಷ್ಠಾನ ಹಾಗೂ ಕಾರ್ಯನಿರ್ವಹಣೆ ಮುಂದುವರಿದಂತೆ, ಯೋಜನೆಯ ಸ್ವರೂಪ, ವಿಧಾನ ಮತ್ತು ಕಾರ್ಯವಿಧಾನದಲ್ಲಿ ನಿರಂತರ ಸುಧಾರಣೆ/ಬದಲಾವಣೆಗಳನ್ನು ಕಾಣುತ್ತಿದೆ. ರೈತ ಸಮುದಾಯದಿಂದ ಅಗಾಧ ಸ್ಪಂದನೆ ಹಿನ್ನೆಲೆಯಲ್ಲಿ, ಭೂಹಿಡುವಳಿಯ ಗಾತ್ರದ ಮಾನದಂಡವನ್ನು ಪರಿಗಣಿಸದೆ ಎಲ್ಲಾ ರೈತರಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ. ಆದರೆ, ಚಾಲ್ತಿಯಲ್ಲಿರುವ ಹಲವು ವಿನಾಯ್ತಿ ಮಾನದಂಡಗಳು ಮುಂದುವರಿದಿವೆ. ಪರಿಷ್ಕೃತ ಯೋಜನೆ 01-04-2019ರಿಂದ ಜಾರಿಗೆ ಬಂದಿದೆ.

***



(Release ID: 1700725) Visitor Counter : 197