ಪ್ರಧಾನ ಮಂತ್ರಿಯವರ ಕಛೇರಿ

16ನೇ ಪ್ರವಾಸಿ ಭಾರತೀಯ ದಿನ ಸಮಾವೇಶ ಉದ್ಘಾಟಿಸಿ ಪ್ರಧಾನಮಂತ್ರಿ ಭಾಷಣ

Posted On: 09 JAN 2021 1:54PM by PIB Bengaluru

ನಮಸ್ತೆ, ದೇಶ ಮತ್ತು ವಿದೇಶದ ನನ್ನೆಲ್ಲಾ ಭಾರತೀಯರ ಸಹೋದರ ಮತ್ತು ಸಹೋದರಿಯರೇ ನಮಸ್ಕಾರಗಳು. ನಿಮಗೆಲ್ಲಾ 2021ನೇ ಹೊಸ ವರ್ಷದ ಶುಭಾಶಯಗಳು. ಇಂದು ಅಂತರ್ಜಾಲ ನನ್ನೆಲ್ಲಾ ಜಗತ್ತಿನ ಯಾವುದೇ ಮೂಲೆ ಮೂಲೆಯಲ್ಲಿದ್ದರೂ ಸಹ ಸಂಪರ್ಕಿಸುವಂತೆ ಮಾಡಿದೆ, ಆದರೆ ನಾವೆಲ್ಲಾ ತಾಯಿ ಭಾರತ ಮಾತೆಯೊಂದಿಗೆ ಬೆಸೆದುಕೊಂಡಿದ್ದೇವೆ ಮತ್ತು ಪರಸ್ಪರ ಪ್ರೀತಿಯ ಬಾಂಧವ್ಯವನ್ನು ಹೊಂದಿದ್ದೇವೆ.

ಮಿತ್ರರೇ,

ಪ್ರತಿವರ್ಷ ‘ಪ್ರವಾಸಿ ಭಾರತೀಯ ಸಮ್ಮಾನ’ದ ಮೂಲಕ ವಿಶ್ವದಲ್ಲಿ ತಾಯಿ ಭಾರತ ಮಾತೆಯ ಹೆಮ್ಮೆ ಹೆಚ್ಚಿಸುತ್ತಿರುವ ನನ್ನೆಲ್ಲಾ ಸಹೋದ್ಯೋಗಿಗಳನ್ನು ಗೌರವಿಸುವ ಸಂಪ್ರದಾಯವಿದೆ. ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿ ಅವರ ಮಾರ್ಗದರ್ಶನದಲ್ಲಿ ಈ ಪಯಣ ಆರಂಭವಾದ ನಂತರ ಇಲ್ಲಿಯವರೆಗೆ ಸುಮಾರು 60 ನಾನಾ ರಾಷ್ಟ್ರಗಳ 240ಕ್ಕೂ ಅಧಿಕ ಗಣ್ಯರನ್ನು ಗೌರವಿಸಿದ್ದೇವೆ. ಈ ಭಾರಿ ಪ್ರಶಸ್ತಿ ವಿಜೇತರನ್ನು ಪ್ರಕಟಿಸಲಾಗುವುದು. ಅದೇ ರೀತಿ ಭಾರತ್ ಕೊ ಜಾನಿಯೇ (ಭಾರತದ ಬಗ್ಗೆ ತಿಳಿಯಿರಿ) ಕ್ವಿಜ್ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ ಸಾವಿರಾರು ಸಹೋದ್ಯೋಗಿಗಳು ಭಾಗವಹಿಸಿದ್ದರು. ಈ ಸಂಖ್ಯೆಯನ್ನು ಗಮನಿಸಿದರೆ, ಅವರು ಬೇರುಗಳಿಂದ ದೂರವಿದ್ದರೂ ಸಹ ಹೊಸ ಪೀಳಿಗೆಗಳ ಬಾಂಧವ್ಯ ಹೆಚ್ಚುತ್ತಿದೆ. ಇಂದಿನ ವರ್ಚುವಲ್ ಕಾರ್ಯಕ್ರಮದಲ್ಲಿ ಕ್ವಿಜ್ ಸ್ಪರ್ಧೆ ವಿಜೇತ 15 ಮಂದಿಯೂ ಸಹ ಉಪಸ್ಥಿತರಿದ್ದಾರೆ.

ಇಂದಿನ ಎಲ್ಲ ವಿಜೇತರಿಗೆ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು, ಈ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಿಮ್ಮೆರಿಗೂ ಚಪ್ಪಾಳೆ ಮೂಲಕ ಅಭಿನಂದಿಸುತ್ತೇನೆ.  ಮುಂದಿನ ಕ್ವಿಜ್ ಸ್ಪರ್ಧೆ ವೇಳೆಗೆ ನೀವು ಮತ್ತೆ ಇತರೆ 10 ಮಂದಿಯನ್ನು ಭಾಗವಹಿಸುವಂತೆ ಮಾಡಬೇಕು ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಈ ಸರಪಳಿ ಮುಂದುವರಿಯಬೇಕು ಮತ್ತು ಬೆಳೆಯಬೇಕು ಹಾಗೂ ನೀವು ಹೆಚ್ಚಿನ ಜನರನ್ನು ಸೇರ್ಪಡೆ ಮಾಡಬೇಕು. ಹಲವು ವಿದೇಶಿಯರು ಅಧ್ಯಯನಕ್ಕಾಗಿ ಭಾರತಕ್ಕೆ ಬರುತ್ತಾರೆ ಮತ್ತು ಅಧ್ಯಯನದ ನಂತರ ಅವರು ತಮ್ಮ ದೇಶಕ್ಕೆ ವಾಪಸ್ಸಾಗುತ್ತಾರೆ, ಅವರು ಕ್ವಿಜ್ ನಲ್ಲಿ ಭಾಗವಹಿಸುವಂತೆ ಅವರಿಗೆ ಮನವಿ ಮಾಡಬೇಕು, ಅವರು ರಾಯಭಾರಿಗಳಾಗುವಂತೆ ಮಾಡಬೇಕು, ಏಕೆಂದರೆ ಭಾರತದ ಬಗ್ಗೆ ಹೊಸ ಪೀಳಿಗೆಯಲ್ಲಿ ತಿಳಿಸಲು ಕುತೂಹಲವನ್ನು ಹೆಚ್ಚಿಸಲು ತಂತ್ರಜ್ಞಾನ ಅತ್ಯಂತ ಸುಲಭ ವಿಧಾನವಾಗಿದೆ. ಆ ಮೂಲಕ ವಿಶ್ವದಲ್ಲಿ ಭಾರತಕ್ಕೆ ತನ್ನದೇ ಆದ ಹೆಗ್ಗರುತನ್ನು ಮೂಡಿಸಬಹುದಾಗಿದೆ. ಮತ್ತು ಆದ್ದರಿಂದ ನಾನು ಇದನ್ನು ಮುಂದುವರಿಸಿಕೊಂಡು ಹೋಗಿ ಎಂದು ಕರೆ ನೀಡುತ್ತೇನೆ.

ಮಿತ್ರರೇ,

ಕಳೆದ ವರ್ಷ ನೆಮ್ಮಲ್ಲರಿಗೂ ಹಲವು ಸವಾಲುಗಳ ವರ್ಷವಾಗಿತ್ತು. ಆದರೆ ಆ ಸವಾಲುಗಳ ನಡುವೆಯೂ, ನಮ್ಮ ಅನಿವಾಸಿ ಭಾರತೀಯರು ಹೇಗೆ ಕಾರ್ಯನಿರ್ವಹಿಸಿದರು ಮತ್ತು ಜಗತ್ತಿನಾದ್ಯಂತ ಅವರು ಹೇಗೆ ತಮ್ಮ ಕರ್ತವ್ಯ ನಿರ್ಹಿಸಿದರು ಎಂಬುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.  ಇದು ನಮ್ಮ ಸಂಪ್ರದಾಯ ಮತ್ತು ಅದು ನಮ್ಮ ನೆಲದ ಪರಂಪರೆಯಾಗಿದೆ. ಸಾಮಾಜಿಕ ಮತ್ತು ರಾಜಕೀಯ ನಾಯಕತ್ವದಲ್ಲಿ ಜಗತ್ತಿನೆಲ್ಲೆಡೆ ಭಾರತೀಯ ಮೂಲದ ಸಹೋದ್ಯೋಗಿಗಳಲ್ಲಿ ಬಲಿಷ್ಠ ವಿಶ್ವಾಸ ಮೂಡಿದೆ.

ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ ಭಾಗವಹಿಸಿರುವ ಸುರಿನಾಮೆ ಗಣರಾಜ್ಯದ ನೂತನ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಚಂದ್ರಿಕಾ ಪೆರ್ಸಾದ್ ಸಂತೋಖಿ , ಸೇವಾ ಸ್ಪೂರ್ತಿಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ವಿದೇಶದಲ್ಲಿ ನೆಲೆಸಿರುವ ನಮ್ಮ ಸಹೋದರ ಮತ್ತು ಸಹೋದರಿಯಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾನು ಹೇಳಬಯಸುತ್ತೇನೆ. ನಾನು ಅವರಿಗೆ ಸಂತಾಪಗಳನ್ನು ಹೇಳಬಯುಸುತ್ತೇನೆ ಮತ್ತು ದೇವರು ಆವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಇಂದು ಸುರಿನಾಮೆ ಅಧ್ಯಕ್ಷರ ಆತ್ಮೀಯ ಹೇಳಿಕೆ ಮತ್ತು ಭಾರತದ ಬಗೆಗಿನ ಅವರು ಮಮತೆ ನಮ್ಮೆಲ್ಲರ ಹೃದಯತಟ್ಟಿದೆ. ಪ್ರತಿಯೊಂದು ಪದಗಳಲ್ಲೂ, ಪ್ರತಿಯೊಂದು ವಿಷಯಗಳಲ್ಲೂ ಭಾರತದ ಬಗೆಗಿನ ಅವರ ಭಾವನೆಗಳು ಪ್ರತಿಫಲನಗೊಂಡವು ಮತ್ತು ಅವು ನಮ್ಮಲ್ಲಿ ಸ್ಪೂರ್ತಿಯನ್ನು ತುಂಬಿದವು. ಅವರಂತೆ ನಾನೂ ಸಹ ಆದಷ್ಟು ಶೀಘ್ರ ಭೇಟಿ ಮಾಡುತ್ತೇನೆ ಎಂಬ ಭರವಸೆ ವ್ಯಕ್ತಪಡಿಸುತ್ತೇನೆ ಮತ್ತು ಭಾರತದಲ್ಲಿ ಸುರಿನಾಮೆ ಅಧ್ಯಕ್ಷರಿಗೆ ಭವ್ಯ ಸ್ವಾಗತ ಸಮಾರಂಭದಲ್ಲಿ ಭಾಗವಹಿಸುವ ಅವಕಾಶವಿದೆ. ಕಳೆದ ವರ್ಷ, ಸಾಗರೋತ್ತರ ಭಾರತೀಯರು ಪ್ರತಿಯೊಂದು ವಿಭಾಗದಲ್ಲೂ ಸಹ ಭಾರತದ ಅಸ್ಮಿತೆಯನ್ನು ಬಲವರ್ಧನೆಗೊಳಿಸಿದ್ದಾರೆ.

ಮಿತ್ರರೇ,

ಕಳೆದ ಕೆಲವು ತಿಂಗಳಿಗಳಿಂದೀಚೆಗೆ ನನಗೆ ಹಲವು ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಆ ದೇಶಗಳ ಮುಖ್ಯಸ್ಥರು ವಿಶೇಷವಾಗಿ ಹೇಗೆ ಸಾಗರೋತ್ತರ ರಾಷ್ಟ್ರಗಳಲ್ಲಿನ ಭಾರತೀಯ ವೈದ್ಯರು, ಅರೆವೈದ್ಯ ಸಿಬ್ಬಂದಿ ಮತ್ತು ಸಾಮಾನ್ಯ ಭಾರತೀಯ ಪ್ರಜೆಗಳು ತಮ್ಮ ತಮ್ಮ ದೇಶಗಳಲ್ಲಿ ಜನರಿಗೆ ಸೇವೆ ಸಲ್ಲಿಸಿದರು ಎಂಬುದನ್ನು ಉಲ್ಲೇಖಿಸಿದರು. ಇದು ದೇವಾಲಯಗಳಲ್ಲಾಗಿರಬಹುದು ಅಥವಾ ಗುರುದ್ವಾರಗಳಲ್ಲಾಗಿರಬಹುದು ಅಥವಾ ಶ್ರೇಷ್ಠ ಲಂಗರು(ಸಮುದಾಯ ಅಡುಗೆ ಕೋಣೆ) ಸಂಪ್ರದಾಯ, ನಮ್ಮ ಹಲವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಸ್ಥೆಗಳು ಈ ಸೇವಾ ಸ್ಫೂರ್ತಿ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತಿವೆ ಮತ್ತು ಈ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅವು ಸೇವೆ ಸಲ್ಲಿಸಿವೆ. ಜಗತ್ತಿನ ಎಲ್ಲ ರಾಷ್ಟ್ರಗಳಿಂದ ಇಂತಹ ವಿಷಯಗಳನ್ನು ಕೇಳುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ನೀವು ಊಹಿಸಿಕೊಳ್ಳಿ ದೂರವಾಣಿ ಮೂಲಕ ಜಗತ್ತಿನ ಪ್ರತಿಯೊಬ್ಬ ರಾಷ್ಟ್ರಗಳ ನಾಯಕರು ನಿಮ್ಮ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದಾರೆ ಮತ್ತು ಈ ವಿಷಯಗಳನ್ನೆಲ್ಲಾ ನಾನು ನನ್ನ ಸಂಪುಟ ಸಹೋದ್ಯೋಗಿಗಳ ಬಳಿ ಹಂಚಿಕೊಂಡಾಗ ಪ್ರತಿಯೊಬ್ಬರ ಹೃದಯ ಆನಂದ ಮತ್ತು ಹೆಮ್ಮೆಯಿಂದ ತುಂಬಿ ಹೋಗುತ್ತದೆ. ನಮ್ಮ ಸಂಸ್ಕೃತಿ ಕುರಿತು ಜಗತ್ತಿನ ಎಲ್ಲ ಭಾಗದಲ್ಲಿ ಮಾತನಾಡಲಾಗುತ್ತಿದೆ. ಇದರಿಂದ ಯಾವ ಭಾರತೀಯರಿಗೆ ಆನಂದವಾಗುವುದಿಲ್ಲ ಹೇಳಿ. ನೀವು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಪ್ರತಿಯೊಂದು ರೀತಿಯಲ್ಲೂ ಭಾರತಕ್ಕೆ ಮಾತ್ರ ಸಹಕಾರ ನೀಡಿಲ್ಲ, ನೀವು ಎಲ್ಲೆಲ್ಲಿ ನೆಲೆಸಿದ್ದೀರೋ ಅಲ್ಲೆಲ್ಲಾ ಸಹಕಾರ ನೀಡಿದ್ದೀರಿ. ಪ್ರಧಾನಮಂತ್ರಿಗಳ ಕೇರ್ಸ್ ನಿಧಿಗೆ ನೀವು ನೀಡಿರುವ ಕೊಡುಗೆಯಿಂದಾಗಿ ಭಾರತದಲ್ಲಿ ಆರೋಗ್ಯ ಮೂಲಸೌಕರ್ಯ ಬಲವರ್ಧನೆಗೆ ಸಹಕಾರಿಯಾಗಿದೆ. ಅದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳುತ್ತೇನೆ.

ಮಿತ್ರರೇ,

ಭಾರತದ ಶ್ರೇಷ್ಠ ಸಂತ ಮತ್ತು ತತ್ವಜ್ಞಾನಿ ತಿರುವಳ್ಳವರ್ ಅವರು ಜಗತ್ತಿನ ಅತ್ಯಂತ ಹಳೆಯ ಭಾಷೆಯಾಗಿರುವ ತಮಿಳಿನಲ್ಲಿ ಹೆಮ್ಮೆಯಿಂದ ಹೀಗೆ ಹೇಳಿದ್ದಾರೆ. 

केए-डरीयाक केट्टअ इड्डत्तुम वड़न्गुन्ड्रा।

नाडेन्प नाट्टिन तलई।

ಅದರ ಅರ್ಥ ಜಗತ್ತಿನ ಅತ್ಯುತ್ತಮ ಜಾಗ  ಎಂದರೆ, ಶತೃಗಳಿಂದ ದುರಾಚಾರವನ್ನು ಕಲಿಯುವುದಲ್ಲ, ಆದರೆ ಬಿಕ್ಕಟ್ಟಿನಲ್ಲಿರುವ ಇತರರಿಗೆ ನೆರವು ನೀಡುವುದನ್ನು ಕಲಿಯುವುದು ಎಂದು.

ಮಿತ್ರರೇ,

ನೀವೆಲ್ಲಾ ಈ ಮಂತ್ರದೊಂದಿಗೆ ಬದುಕುತ್ತಿದ್ದೀರಿ. ಇದು ನಮ್ಮ ಭಾರತದ ಸದಾ ಸ್ಮರಿಸುವ ಅಂಶವಾಗಿದೆ. ಶಾಂತಿ ಅಥವಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯರಾದ ನಾವೆಲ್ಲಾ ಪ್ರತಿಯೊಂದು ಸಂದರ್ಭವನ್ನು ಸಹನೆಯಿಂದ ಎದುರಿಸುತ್ತೇವೆ. ಅದರಿಂದಾಗಿಯೇ ನಾವು ವಿಭಿನ್ನ ನಡವಳಿಕೆಯನ್ನು ಹೊಂದಿದ್ದು, ಈ ಶ್ರೇಷ್ಠ ನೆಲದ್ದೇ ಆಗಿದೆ. ಭಾರತ ವಸಾಹತುಷಾಹಿ ವಿರುದ್ಧ ಸಮರ ಆರಂಭಿಸಿದಾಗ ಜಗತ್ತಿನ ಹಲವು ರಾಷ್ಟ್ರಗಳಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಅದು ಸ್ಫೂರ್ತಿ ನೀಡಿತು. ಅಂತೆಯೇ ಭಾರತ ಭಯೋತ್ಪಾದನೆ ವಿರುದ್ಧ ಎದ್ದು ನಿಂತು ಸಮರ ಸಾರಿದಾಗ ವಿಶ್ವಕ್ಕೆ ಕೂಡ ಆ ಸವಾಲಿನ ವಿರುದ್ಧ ಸೆಣೆಸಲು ಹೊಸ ಧೈರ್ಯ ಸಿಕ್ಕಿತು.

ಮಿತ್ರರೇ,

ಇಂದು ಭಾರತ ಭ್ರಷ್ಟಾಚಾರ ನಿರ್ಮೂಲನೆಗೆ ಗರಿಷ್ಠ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದೆ. ಹಲವು ನ್ಯೂನತೆಗಳಿಂದಾಗಿ ಈ ಹಿಂದೆ ಕೋಟ್ಯಾಂತರ ರೂಪಾಯಿ ಹಣ ಕೆಲವು ದುಷ್ಟ ವ್ಯಕ್ತಿಗಳ ಕೈಸೇರುತ್ತಿತ್ತು. ಇದೀಗ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆಯಾಗುತ್ತಿದೆ. ನೀವು ಇದನ್ನೆಲ್ಲಾ ನೋಡಿದ್ದೀರಿ. ಕೊರೊನಾ ಸಂದರ್ಭದಲ್ಲಿ ಭಾರತ ಅಭಿವೃದ್ಧಿಪಡಿಸಿದ ಹೊಸ ವ್ಯವಸ್ಥೆಗೆ ಜಗತ್ತಿನ ಎಲ್ಲ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿವೆ. ಬಡವರಲ್ಲಿ ಅತಿ ಕಡುಬಡವರಿಗೆ ಆಧುನಿಕ ತಂತ್ರಜ್ಞಾನದೊಂದಿಗೆ ಸಬಲೀಕರಣಗೊಳಿಸುವ ಭಾರತದ ಇಂದಿನ ಈ ಅಭಿಯಾನದ ಬಗ್ಗೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಎಲ್ಲ ಹಂತಗಳಲ್ಲಿ ಚರ್ಚೆಯಾಗುತ್ತಿದೆ.

ಸಹೋದರ ಮತ್ತು ಸಹೋದರಿಯರೇ

ನವೀಕರಿಸಬಹುದಾದ ಇಂಧನ ವಲಯದಲ್ಲಿ ನಾವು ಯಾವುದೇ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಮುಂಚೂಣಿಯಲ್ಲಿ ನಿಲ್ಲಬಹುದು ಎಂದು ತೋರಿಸಿಕೊಟ್ಟಿದ್ದೇವೆ. ಇಂದು ಭಾರತದ ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ ಮಂತ್ರ ಇಡೀ ವಿಶ್ವದ ಗಮನ ಸೆಳೆದಿದೆ.

ಮಿತ್ರರೇ,

ಭಾರತದ ಇತಿಹಾಸದಲ್ಲಿ ಯಾವುದೇ ಸಂದರ್ಭದಲ್ಲಿ ಭಾರತದ ದಕ್ಷತೆ ಮತ್ತು ಭಾರತೀಯರ ಸಾಮರ್ಥ್ಯದ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದಾಗ ಅವುಗಳೆಲ್ಲಾ ಸುಳ್ಳು ಎಂಬುದನ್ನು ಸಾಕ್ಷೀಕರಿಸಿರುವ ಉದಾಹರಣೆಗಳಿವೆ. ಗುಲಾಮಗಿರಿ ವೇಳೆ ವಿದೇಶದ ಶ್ರೇಷ್ಠ ವಿದ್ವಾಂಸರು ಭಾರತ ವಿಮೋಚನೆ ಆಗುವುದಿಲ್ಲ, ಏಕೆಂದರೆ ಅದು ವಿಭಜನೆಗೊಂಡಿದೆ ಎಂದು ಹೇಳುತ್ತಿದ್ದರು, ಅವರ ಅನಿಸಿಕೆಗಳೆಲ್ಲಾ ಸುಳ್ಳಾದವು ಮತ್ತು ನಾವು ಸ್ವಾತಂತ್ರ್ಯವನ್ನು ಗಳಿಸಿದೆವು.

ಮಿತ್ರರೇ,

ಭಾರತ ಸ್ವಾತಂತ್ರ್ಯ ಪಡೆದಾಗ ಇಂತಹ ಬಡ ಮತ್ತು ಅನಕ್ಷರ ಭಾರತ ಕುಸಿದು ಹೋಗಲಿದೆ ಮತ್ತು ಹರಿದು ಹಂಚಿ ಹೋಗಲಿದೆ ಹಾಗೂ ಅಲ್ಲಿ ಪ್ರಜಾಪ್ರಭುತ್ವ ಅಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ನಿಜ ಅಂಶವೆಂದರೆ ಇಡೀ ಭಾರತ ಒಗ್ಗೂಡಿದೆ ಮತ್ತು ಇಡೀ ವಿಶ್ವದಲ್ಲಿ ಯಾವುದೇ ರಾಷ್ಟ್ರದಲ್ಲಿ ಇಲ್ಲದಂತಹ ಬಲಿಷ್ಠ, ಕ್ರಿಯಾಶೀಲ ಮತ್ತು ಜೀವಂತ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿದೆ.

ಸಹೋದರ ಮತ್ತು ಸಹೋದರಿಯರೇ,

ಸ್ವಾತಂತ್ರ್ಯಾ ನಂತರ ಹಲವು ದಶಕಗಳ ಕಾಲ ಭಾರತವನ್ನು ಬಡ ಮತ್ತು ಅನಕ್ಷರ ಎಂದು ಬಣ್ಣಿಸಲಾಗುತ್ತಿತ್ತು. ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೂಡಿಕೆ ಸಾಧ್ಯತೆಗಳು ಕ್ಷೀಣವಾಗಿದ್ದವು. ಇಂದು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ನಮ್ಮ ತಂತ್ರಜ್ಞಾನ ನವೋದ್ಯಮ ಪೂರಕ ವ್ಯವಸ್ಥೆ ಇಡೀ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಕೋವಿಡ್ ನ ಈ ಸವಾಲಿನ ವರ್ಷದಲ್ಲೂ ಸಹ ಹಲವು ಹೊಸ ಯೂನಿಕಾರ್ನ್ ಗಳು ಮತ್ತು ನೂರಾರು ಹೊಸ ತಂತ್ರಜ್ಞಾನ ನವೋದ್ಯಮಗಳು ಭಾರತದಲ್ಲಿ ತಲೆ ಎತ್ತಿವೆ. 

ಮಿತ್ರರೇ,

ಸಾಂಕ್ರಾಮಿಕದ ಸಮಯದಲ್ಲೂ ಭಾರತ ತನ್ನ ಸಾಮರ್ಥ್ಯ ಮತ್ತು ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತೋರಿರುವ ಐಕ್ಯತೆ ಜಗತ್ತಿಗೆ ಒಂದು ಉದಾಹರಣೆಯಾಗಿದೆ. ಭಾರತ ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್, ಪರೀಕ್ಷಾ ಕಿಟ್ ಇತ್ಯಾದಿಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ಕೊರೊನಾ ಸಮಯದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ ಮತ್ತು ಇಂದು ಭಾರತ ಕೇವಲ ಸ್ವಾವಲಂಬನೆ ಸಾಧಿಸಿರುವುದೇ ಅಲ್ಲದೆ, ಇಂತಹ ಹಲವು ಉತ್ಪನ್ನಗಳನ್ನು ರಫ್ತು ಮಾಡಲಾರಂಭಿಸಿದೆ. ಇಂದು ಭಾರತದಲ್ಲಿ ವಿಶ್ವದಲ್ಲೇ ಅತಿ ಕಡಿಮೆ ಸೋಂಕಿತ ಜನರ ಸಾವಿನ ಪ್ರಮಾಣವಿದೆ ಮತ್ತು ಅತ್ಯಧಿಕ ಚೇತರಿಕೆಯ ಪ್ರಮಾಣವಿದೆ.

ಭಾರತ ಮಾನವೀಯತೆ ರಕ್ಷಣೆಗೆ ಇಂದು ಸಿದ್ಧವಾಗಿದೆ. ಅದು ಒಂದೇ ಅಲ್ಲ ಎರಡು ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಗಳ ಮೂಲಕ. ಜಾಗತಿಕ ಔಷಧ ತಾಣವಾಗಿ ರೂಪುಗೊಂಡಿರುವ ಭಾರತ ಜಗತ್ತಿನ ಪ್ರತಿಯೊಂದು ಅಗತ್ಯ ರಾಷ್ಟ್ರಗಳಿಗೂ ನೆರವು ನೀಡಿದೆ ಮತ್ತು ನೀಡುತ್ತಲಿದೆ. ವಿಶ್ವ ಇಂದು ಕೇವಲ ಭಾರತದ ಲಸಿಕೆಗಾಗಿ ಮಾತ್ರ ಕಾಯುತ್ತಿಲ್ಲ. ಅವು ಭಾರತ ಹೇಗೆ ವಿಶ್ವದ ಅತಿ ದೊಡ್ಡ ಲಸಿಕೆ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ ಎಂದು ಕುತೂಹಲದಿಂದ ಕಾಯುತ್ತಿವೆ.

ಮಿತ್ರರೇ,

ಈ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ ಏನು ಕಲಿತಿದೆ ಎಂದರೆ ಸ್ವಾವಲಂಬಿ ಭಾರತ ಅಭಿಯಾನದಿಂದ ಸ್ಫೂರ್ತಿ ಪಡೆದಿರುವುದು. ನಮ್ಮ ದೇಶದಲ್ಲಿ ಹೀಗೆ ಹೇಳಲಾಗುತ್ತಿದೆ. शतहस्त समाह सहस्रहस्त सं किर

ಅಂದರೆ ನೂರಾರು ಕೈಗಳಿಂದ ದುಡಿಯಿರಿ. ಆದರೆ ಸಾವಿರಾರು ಕೈಗಳಿಂದ ಅದನ್ನು ಹಂಚಿಕೊಳ್ಳಿ ಎಂದು. ಇದು ಭಾರತದ ಸ್ವಾವಲಂಬನೆಯ ಹಿಂದಿನ ಸ್ಫೂರ್ತಿಯಾಗಿದೆ. ಮಿಲಿಯನ್ ಗಟ್ಟಲೆ ಭಾರತೀಯರ ಶ್ರಮದಿಂದಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಪರಿಹಾರಗಳಿಂದ ಇಡೀ ಜಗತ್ತಿಗೆ ಅನುಕೂಲವಾಗುತ್ತಿದೆ. ವೈ-2-ಕೆ ಸಂದರ್ಭದಲ್ಲಿ ಭಾರತದ ಪಾತ್ರವನ್ನು ವಿಶ್ವ ಮರೆಯಲು ಸಾಧ್ಯವಿಲ್ಲ ಮತ್ತು ಹೇಗೆ ಜಗತ್ತಿನ ಆತಂಕಗಳನ್ನು ದೂರ ಮಾಡಿದೆ ಎಂಬುದನ್ನು. ಇಂತಹ ಕಷ್ಟಕರ ಸಂದರ್ಭದಲ್ಲೂ ನಮ್ಮ ಫಾರ್ಮಾ ಉದ್ಯಮದ ಪಾತ್ರ ಇಡೀ ಜಗತ್ತಿನಲ್ಲಿ ಯಾವುದೇ ವಲಯದಲ್ಲಿ ಭಾರತದ ಸಾಮರ್ಥ್ಯಗಳ ಲಾಭ ಇಡೀ ವಿಶ್ವಕ್ಕೆ ಸಿಗುತ್ತಿದೆ ಎಂಬುದು ಸಾಬೀತಾಗಿದೆ.

ಮಿತ್ರರೇ,

ಇಂದು ವಿಶ್ವ, ಭಾರತದ ಬಗ್ಗೆ ಇಷ್ಟೊಂದು ವಿಶ್ವಾಸ ತೋರುತ್ತಿರುವುದಕ್ಕೆ ಕಾರಣ ಎಲ್ಲಾ ಅನಿವಾಸಿ ಭಾರತೀಯರು ನೀಡಿರುವ ಶ್ರೇಷ್ಠ ಕೊಡುಗೆ. ನೀವು ಎಲ್ಲೆಲ್ಲಿ ಹೋಗಿದ್ದೀರೋ ಅಲ್ಲೆಲ್ಲಾ ಭಾರತವನ್ನು ಕೊಂಡೊಯ್ದಿದ್ದೀರಿ. ಜೊತೆಗೆ ಭಾರತೀಯತೆಯನ್ನು ಕೊಂಡೊಯ್ದಿದ್ದೀರಿ. ನೀವು ಭಾರತೀಯತೆಯನ್ನು ಉಸಿರಾಡಿದ್ದೀರಿ. ನೀವು ಭಾರತೀಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದೀರಿ. ಅದು ಆಹಾರ ಅಥವಾ ಫ್ಯಾಷನ್ ನಲ್ಲಾಗಿರಬಹುದು, ಕೌಟುಂಬಿಕ ಮೌಲ್ಯಗಳು ಮತ್ತು ವ್ಯಾಪಾರಿ ಮೌಲ್ಯಗಳಲ್ಲಾಗಿರಬಹುದು, ನೀವು ಭಾರತೀಯತೆಯನ್ನು  ಪಸರಿಸಿದ್ದೀರಿ. ಭಾರತದ ಸಂಸ್ಕೃತಿ ಜಗತ್ತಿನೆಲ್ಲೆಡೆ ಜನಪ್ರಿಯವಾಗಲು ಪುಸ್ತಕಗಳು ಖಾದ್ಯದ ಬಗ್ಗೆ ತಿಳಿಸುವ ಪುಸ್ತಕಗಳು ಅಥವಾ ಮ್ಯಾನುಯಲ್ ಗಳಿಗಿಂತ ಹೆಚ್ಚಾಗಿ ನಿಮ್ಮ ಸಮುದಾಯದ ನಡವಳಿಕೆ ಮತ್ತು ವರ್ತನೆ ಪ್ರಮುಖ ಕಾರಣ ಎಂದು ನಂಬಿದ್ದೇನೆ. ಭಾರತ ಎಂದಿಗೂ ವಿಶ್ವದ ಮೇಲೆ ಯಾವುದನ್ನೂ ಬಲವಂತವಾಗಿ ಹೇರಿಲ್ಲ ಮತ್ತು ಹೇರುವ ಪ್ರಯತ್ನವನ್ನೂ ಸಹ ಮಾಡಿಲ್ಲ. ಆ ಬಗ್ಗೆ ಚಿಂತನೆಯನ್ನೂ ಸಹ ಮಾಡಿಲ್ಲ. ಆದರೆ ನೀವೆಲ್ಲಾ ಜಗತ್ತಿನಲ್ಲಿ ಭಾರತದ  ಬಗ್ಗೆ ಕುತೂಹಲ ಮತ್ತು ಆಸಕ್ತಿಯನ್ನು ಸೃಷ್ಟಿಸಿದ್ದೀರಿ. ನೀವು ಈ ಕುತೂಹಲವನ್ನು ಆರಂಭಿಸಿದ್ದೀರಿ. ಆದರೆ ಇಂದು ಅದು ದೃಢ ಹಂತ ತಲುಪಿದೆ.

ಭಾರತ ಇಂದು ಸ್ವಾವಲಂಬನೆ ನಿಟ್ಟಿನಲ್ಲಿ ಸಾಗಿದ್ದು, ಇದರಲ್ಲಿ ಬ್ರ್ಯಾಂಡ್ ಇಂಡಿಯಾದ ಅಸ್ಮಿತೆ ಬಲವರ್ಧನೆಯಲ್ಲಿ ನಿಮ್ಮ ಪಾತ್ರವೂ ಕೂಡ ಅತಿಮುಖ್ಯವಾಗಿದೆ. ನೀವು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಿದರೆ ನಿಮ್ಮ ಸುತ್ತಮುತ್ತಲಿನ ಜನರೂ ಸಹ ಅವುಗಳ ಮೇಲೆ ವಿಶ್ವಾಸವಿಡುತ್ತಾರೆ. ಅವುಗಳನ್ನು ನೀವು ಹೆಮ್ಮೆಯಿಂದ ನೋಡಬಹುದು. ನೀವು ನಿಮ್ಮ ಸಹೋದ್ಯೋಗಿಗಳ ಬಳಿ, ಸ್ನೇಹಿತರ ಬಳಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಬಗ್ಗೆ ಮಾತನಾಡಿ. ಅದು ಚಹಾದಿಂದ ಹಿಡಿದು, ಜವಳಿಯವರೆಗೆ ಮತ್ತು ಥೆರಪಿವರೆಗೆ ಯಾವ ವಿಷಯದ ಬಗ್ಗೆಯಾದರೂ ಆಗಿರಬಹುದು. ಖಾದಿ ಇಂದು ವಿಶ್ವದಲ್ಲಿ ಅತ್ಯಂತ ಪ್ರಮುಖ ಆಕರ್ಷಣೆಯಾಗಿರುವುದು ನನಗೆ ಖುಷಿ ತಂದಿದೆ. ಇದು ಭಾರತದ ರಫ್ತು ಗಾತ್ರವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಭಾರತದ ಶ್ರೀಮಂತ ವೈವಿಧ್ಯತೆಯನ್ನು ಇಡೀ ವಿಶ್ವಕ್ಕೆ ತಲುಪಿಸಲಿದೆ. ಅದೆಲ್ಲದ್ದಿಕ್ಕಿಂತ ಮುಖ್ಯವಾಗಿ ಆತ್ಮನಿರ್ಭರ ಭಾರತ ಅಭಿಯಾನದಡಿ ಜಗತ್ತಿನ ಬಡವರಿಗೆ ಗುಣಮಟ್ಟದ ಮತ್ತು ಕೈಗೆಟಕಬಹುದಾದ ಪರಿಹಾರಗಳನ್ನು ನೀಡುವಲ್ಲಿ ನೀವು ಅತ್ಯಂತ ಪ್ರಮುಖ ಪಾತ್ರವಹಿಸುತ್ತೀರಿ.

ಮಿತ್ರರೇ,

ಭಾರತದಲ್ಲಿ ಹೂಡಿಕೆ ಮಾಡುವುದಾಗಿರಬಹುದು, ಅಥವಾ ಸ್ವೀಕೃತಿಯಾಗಿರಬಹುದು. ನಿಮ್ಮ ಕೊಡುಗೆಗೆ ಸರಿಸಮಾನವಿಲ್ಲ. ಪ್ರತಿಯೊಬ್ಬ ಭಾರತೀಯರು ಮತ್ತು ಇಡೀ ಭಾರತ ಇದರಲ್ಲಿ ಹೆಮ್ಮೆ ಪಡುತ್ತದೆ ಮತ್ತು ನಿಮ್ಮ ನೆರವು, ನಿಮ್ಮ ಅನುಭವ, ಹೂಡಿಕೆ ಮತ್ತು ನಿಮ್ಮ ಸಂಪರ್ಕ ಜಾಲವನ್ನು ಬಳಸಿಕೊಳ್ಳಲು ಕಾತುರದಿಂದ ಕಾಯುತ್ತಿದೆ. ಆ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗಾಗಿ ನಿಮಗೆ ಅವಕಾಶಗಳು ಲಭ್ಯವಾಗಲಿವೆ ಮತ್ತು ನಿಮ್ಮ ಆಶೋತ್ತರಗಳೂ ಕೂಡ ಈಡೇರಲಿವೆ.

ನಿಮ್ಮಲ್ಲಿ ಹಲವರು ‘ವೈಶ್ವಿಕ್ ಭಾರತೀಯ ವೈಜ್ಞಾನಿಕಿ’ ಅಂದರೆ ‘ವೈಭವ್’ ಶೃಂಗಸಭೆಯನ್ನು ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ನಡೆಸಲಾಗಿತ್ತು. 70 ರಾಷ್ಟ್ರಗಳ 25,000ಕ್ಕೂ ಅಧಿಕ ವಿಜ್ಞಾನಿಗಳು ಮತ್ತು ತಜ್ಞರು ಸಮಾವೇಶದಲ್ಲಿ ಭಾಗವಹಿಸಿ, ಸುಮಾರು 750 ಗಂಟೆಗಳ ಕಾಲ ಸಮಾಲೋಚನೆಗಳನ್ನು ನಡೆಸಿದರು. ಇದರಿಂದಾಗಿ 80 ವಿಷಯಗಳಲ್ಲಿ 100 ವರದಿಗಳನ್ನು ಸಿದ್ಧಪಡಿಸಲಾಗಿದ್ದು, ಇದರಿಂದ ಹಲವು ವಲಯಗಳಲ್ಲಿ ತಂತ್ರಜ್ಞಾನ ಮತ್ತು ವ್ಯವಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಸಹಾಯಕವಾಗಿದೆ. ಆ ಸಮಾಲೋಚನೆಗಳು ಇದೀಗ ಮುಂದುವರಿಯಲಿವೆ. ಅಲ್ಲದೆ ಕಳೆದ ಕೆಲವು ತಿಂಗಳಿನಿಂದೀಚೆಗೆ ಹೆಚ್ಚುವರಿಯಾಗಿ ಭಾರತದಲ್ಲಿ ಶಿಕ್ಷಣದಿಂದ ಉದ್ಯಮದವರೆಗೆ ಹಲವು ಸಾಂಸ್ಥಿಕ ಸುಧಾರಣೆಗಳನ್ನು ತರಲಾಗಿದ್ದು, ಆ ಮೂಲಕ ಅರ್ಥಪೂರ್ಣ ಬದಲಾವಣೆಗಳಿಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ನಮ್ಮ ಹೂಡಿಕೆಯ ಅವಕಾಶಗಳು ವಿಸ್ತರಣೆಯಾಗಿವೆ. ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಅತ್ಯಲ್ಪ ಅವಧಿಯಲ್ಲಿಯೇ ಉತ್ಪಾದನೆ ಆಧರಿತ ಪ್ರೋತ್ಸಾಹ ಧನ ಯೋಜನೆ ಅತ್ಯಂತ ಜನಪ್ರಿಯವಾಗಿದೆ. ನೀವು ಕೂಡ ಇದರ ಸಂಪೂರ್ಣ ಲಾಭ ಮಾಡಿಕೊಳ್ಳಬಹುದು.

ಮಿತ್ರರೇ,

ಭಾರತ ಸರ್ಕಾರ ಪ್ರತಿಯೊಂದು ಸಂದರ್ಭದಲ್ಲೂ ಪ್ರತಿಯೊಂದು ಸಮಯದಲ್ಲೂ ನಿಮ್ಮೊಡನಿರುತ್ತದೆ. ಕೊರೊನಾ ಲಾಕ್ ಡೌನ್ ನಿಂದಾಗಿ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 45 ಲಕ್ಷಕ್ಕೂ ಅಧಿಕ ಭಾರತೀಯರನ್ನು ರಕ್ಷಿಸಿ, ವಂದೇ ಭಾರತ್ ಮಿಷನ್ ಅಡಿ ಸ್ವದೇಶಕ್ಕೆ ವಾಪಸ್ ಕರೆತರಲಾಗಿದೆ. ವಿದೇಶದಲ್ಲಿನ ಭಾರತೀಯ ಸಮುದಾಯಕ್ಕೆ ಸಕಾಲದಲ್ಲಿ ಎಲ್ಲ ನೆರವನ್ನು ಖಾತ್ರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ವಿದೇಶದಲ್ಲಿ ಭಾರತೀಯರ ಉದ್ಯೋಗ ರಕ್ಷಣೆಗೆ ರಾಜತಾಂತ್ರಿಕ ಮಟ್ಟದಲ್ಲಿ ಎಲ್ಲಾ ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೊಲ್ಲಿ ಮತ್ತು ಇತರೆ ರಾಷ್ಟ್ರಗಳಿಂದ ಆಗಮಿಸುವ ವಲಸೆ ಕಾರ್ಮಿಕರಿಗೆ ‘ಉದ್ಯೋಗ ಬೆಂಬಲಕ್ಕಾಗಿ ಕೌಶಲ್ಯ ಹೊಂದಿದ ಕಾರ್ಮಿಕರ ಆಗಮನ ದತ್ತಾಂಶ’ (ಸ್ವದೇಶ್) ಉಪಕ್ರಮವನ್ನು ಹೊಸದಾಗಿ ಆರಂಭಿಸಲಾಯಿತು. ಇದರ ಉದ್ದೇಶವೆಂದರೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಾಪಸ್ ಆಗಿರುವ ಕೆಲಸಗಾರರ ಕೌಶಲ್ಯವನ್ನು ಗುರುತಿಸುವುದು ಮತ್ತು ಅವರನ್ನು ಭಾರತೀಯ ಹಾಗೂ ವಿದೇಶಿ ಕಂಪನಿಗಳ ಜೊತೆ ಸಂಪರ್ಕಿಸುವುದಾಗಿದೆ.

ಅಂತೆಯೇ ಜಗತ್ತಿನಾದ್ಯಂತ ಇರುವ ಭಾರತೀಯ ಸಮುದಾಯದೊಂದಿಗೆ ಉತ್ತಮ ಸಂಪರ್ಕ ಮತ್ತು ಸಂವಹನ ಕಾಯ್ದುಕೊಳ್ಳಲು ಜಾಗತಿಕ ರಿಸ್ತಾ ಪೋರ್ಟಲ್  ಆರಂಭಿಸಲಾಗಿದೆ. ಈ ಪೋರ್ಟಲ್ ಸಂಕಷ್ಟಗಳ ಸಂದರ್ಭದಲ್ಲಿ ಸಂವಹನ ನಡೆಸಲು ಮತ್ತು ಅವರನ್ನು ತ್ವರಿತವಾಗಿ ತಲುಪಲು ಸಹಾಯಕವಾಗಲಿದೆ. ಈ ಪೋರ್ಟಲ್ ಭಾರತದ ಅಭಿವೃದ್ಧಿಗೆ ನೆರವಾಗಲಿದ್ದು, ಜಗತ್ತಿನಾದ್ಯಂತ ಇರುವ ನಮ್ಮ ಸಹೋದ್ಯೋಗಿಗಳ ಪರಿಣಿತಿಯನ್ನು ಬಳಸಿಕೊಳ್ಳಲಾಗುವುದು.

ಮಿತ್ರರೇ,

ಇದೀಗ ನಾವು 75ನೇ ಸ್ವಾತಂತ್ರ್ಯೋತ್ಸವದತ್ತ ಸಾಗುತ್ತಿದ್ದೇವೆ. ಮುಂದಿನ ಪ್ರವಾಸಿ ಭಾರತೀಯ ದಿವಸ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಬೆಸೆದುಕೊಳ್ಳಲಿದೆ. ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದರಂತಹ ಅಸಂಖ್ಯಾತ ಶ್ರೇಷ್ಠ ವ್ಯಕ್ತಿಗಳ ಸ್ಫೂರ್ತಿಯಿಂದಾಗಿ ಜಗತ್ತಿನಾದ್ಯಂತ ಇರುವ ಭಾರತೀಯ ಸಮುದಾಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ. ಭಾರತದ ಹೊರಗೆ ಇದ್ದುಕೊಂಡು ಭಾರತದ ಸ್ವಾತಂತ್ರ್ಯಕ್ಕಾಗಿ ದುಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಲು ಇದು ಸಕಾಲವಾಗಿದೆ.

ಜಗತ್ತಿನೆಲ್ಲೆಡೆ ಹರಡಿರುವ ನಮ್ಮ ಭಾರತೀಯ ಸಮುದಾಯವನ್ನು ಮತ್ತು ನಮ್ಮ ರಾಯಭಾರ ಕಚೇರಿಗಳನ್ನು ಡಿಜಿಟಲ್ ವೇದಿಕೆಯನ್ನು ಸೃಷ್ಟಿಸುವಂತೆ ನಾನು ಕರೆ ನೀಡುತ್ತೇನೆ. ಆ ಪೋರ್ಟಲ್ ನಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಶೇಷ ಪಾತ್ರವಹಿಸಿದ ಪ್ರತಿಯೊಬ್ಬ ಅನಿವಾಸಿ ಭಾರತೀಯರ ವಿವರಗಳು ಒಳಗೊಂಡಿರಬೇಕು. ಲಭ್ಯವಿರುವೆಡೆ ಛಾಯಾಚಿತ್ರಗಳನ್ನೂ ಸಹ ಬಳಕೆ ಮಾಡಿಕೊಳ್ಳಬೇಕು. ಜಗತ್ತಿನಾದ್ಯಂತ ಯಾರು ಯಾವ ರೀತಿಯಲ್ಲಿ ಕೊಡುಗೆ ನೀಡಿದರು ಎಂಬ ಬಗ್ಗೆ ಸಂಕ್ಷಿಪ್ತ ವಿವರಣೆಗಳಿರಬೇಕು. ಭಾರತ ಮಾತೆಗಾಗಿ ಶೌರ್ಯ, ತ್ಯಾಗ, ಬಲಿದಾನ, ಬದ್ಧತೆ ಮತ್ತು ಪ್ರಯತ್ನಗಳನ್ನು ನಡೆಸಿದ ಎಲ್ಲ ವಿವರಗಳನ್ನು ದಾಖಲಿಸಬೇಕು. ವಿದೇಶಗಳಲ್ಲಿದ್ದುಕೊಂಡು ಭಾರತದ ವಿಮೋಚನೆಗಾಗಿ ಕೊಡುಗೆ ನೀಡಿದವರ ಆತ್ಮಚರಿತ್ರೆಗಳನ್ನು ಒಳಗೊಂಡಿರಬೇಕು.

ಮುಂದಿನ ಕ್ವಿಜ್ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ ಇರುವ ಭಾರತೀಯ ಸಮುದಾಯದವರ ಕೊಡುಗೆಯ ಒಂದು ಪಾಠವನ್ನು ಕ್ವಿಜ್ ನಲ್ಲಿ ಸೇರಿಸಬೇಕು ಎಂದು ನಾನು ಬಯಸುತ್ತೇನೆ. ಅದರಲ್ಲಿ 500-700-1000 ಪ್ರಶ್ನೆಗಳನ್ನು ಒಳಗೊಂಡಿರಬೇಕು. ಅದರಲ್ಲಿ ವಿಶ್ವದಾದ್ಯಂತ ಇರುವ ಅನಿವಾಸಿ ಭಾರತೀಯರ ಬಗ್ಗೆ ಕುತೂಹಲಭರಿತ ಮಾಹಿತಿ ಹಾಗೂ ಉತ್ತಮ ಜ್ಞಾನವನ್ನು ನೀಡುವಂತಿರಬೇಕು. ಈ ಎಲ್ಲ ಕ್ರಮಗಳು ನಮ್ಮ ಬಾಂಧವ್ಯವನ್ನು ಬಲವರ್ಧನೆಗೊಳಿಸಲಿವೆ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿವೆ.

ನೀವೆಲ್ಲಾ ಇಂದು ವರ್ಚುವಲ್ ರೂಪದಲ್ಲಿ ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇರಿದ್ದೀರಿ. ಕೊರೊನಾದಿಂದಾಗಿ ನಾವು ಮುಖತಃ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸದಾ ನೀವು ಆರೋಗ್ಯದಿಂದ ಮತ್ತು ಸುರಕ್ಷತೆಯಿಂದ ಇರಬೇಕು ಹಾಗೂ ವ್ಯಕ್ತಿಗತವಾಗಿ ಹಾಗೂ ದೇಶಕ್ಕಾಗಿ ಸಾಧನೆಯನ್ನು ಮಾಡಬೇಕು ಎಂದು ಬಯಸುತ್ತಾರೆ.

ಈ ಶುಭಾಶಯದೊಂದಿಗೆ ನಾನು ಮತ್ತೊಮ್ಮೆ ಸುರಿನಾಮೆ ಅಧ್ಯಕ್ಷರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಅವರು ನಮಗೆ ಸ್ಫೂರ್ತಿ ನೀಡಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ, ನಮ್ಮೊಂದಿಗೆ ಬಾಂಧವ್ಯ ಹೊಂದಿದ್ದಾರೆ ಮತ್ತು ನಿಜಕ್ಕೂ ಭಾರತದ ಹೆಮ್ಮೆಯನ್ನು ವೃದ್ಧಿಸಿದ್ದಾರೆ. ಅವರಿಗೆ ನನ್ನ ವಿಶೇಷ ಧನ್ಯವಾದಗಳು. ಮತ್ತು ಈ ಶುಭಾಶಯದೊಂದಿಗೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲ.  ಅವರುಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

***



(Release ID: 1687639) Visitor Counter : 238