ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಜನವರಿ 12 ರಂದು, ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನಿಯವರಿಂದ ಭಾಷಣ


ಉತ್ಸವದ ಮೂವರು ವಿಜೇತರು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ

Posted On: 10 JAN 2021 3:45PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಜನವರಿ 12 ರಂದು ಬೆಳಿಗ್ಗೆ 10: 30 ಕ್ಕೆ ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಉತ್ಸವದ ಮೂವರು ರಾಷ್ಟ್ರೀಯ ವಿಜೇತರು ಸಹ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಲೋಕಸಭಾಧ್ಯಕ್ಷರು, ಕೇಂದ್ರ ಶಿಕ್ಷಣ ಸಚಿವರು ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ರಾಷ್ಟ್ರೀಯ ಯುವ ಸಂಸತ್ ಉತ್ಸವ
ಮುಂಬರುವ ವರ್ಷಗಳಲ್ಲಿ ಸಾರ್ವಜನಿಕ ಸೇವೆ ಒಳಗೊಂಡಂತೆ ವಿವಿಧ ವೃತ್ತಿಗಳಿಗೆ ಸೇರುವ 18 ರಿಂದ 25 ವಯೋಮಾನದ ಯುವಜನತೆಯ ಧ್ವನಿಯನ್ನು ಕೇಳುವುದು ರಾಷ್ಟ್ರೀಯ ಯುವ ಸಂಸತ್  ಉತ್ಸವದ ಉದ್ದೇಶವಾಗಿದೆ. 2017 ರ ಡಿಸೆಂಬರ್ 31 ರಂದು ಪ್ರಧಾನಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ನೀಡಿದ ಸಲಹೆಯಂತೆ ರಾಷ್ಟ್ರೀಯ ಯುವ ಸಂಸತ್ತು ಉತ್ಸವ (ಎನ್‌ವೈಪಿಎಫ್) ಆರಂಭಿಸಲಾಗಿದೆ. ಪ್ರಧಾನ ಮಂತ್ರಿಯವರ ಆಲೋಚನೆಯಿಂದ ಸ್ಫೂರ್ತಿ ಪಡೆದು, ಮೊದಲ ಎನ್‌ವೈಪಿಎಫ್ ಅನ್ನು 2019ರ ಜನವರಿ 12 ರಿಂದ ಫೆಬ್ರವರಿ 27 ರವರೆಗೆ ಆಯೋಜಿಸಲಾಗಿತ್ತು. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ “ನವ ಭಾರತದ ಧ್ವನಿಯಾಗಿ ಮತ್ತು ಪರಿಹಾರಗಳನ್ನು ಸೂಚಿಸಿ ಮತ್ತು ನೀತಿಗೆ ಕೊಡುಗೆ ನೀಡಿ”ಕಾರ್ಯಕ್ರಮದಲ್ಲಿ ಒಟ್ಟು 88,000 ಯುವಕರು ಭಾಗವಹಿಸಿದ್ದರು. ನವದೆಹಲಿಯಲ್ಲಿ ಫೆಬ್ರವರಿ 26, 2019 ರಂದು ರಾಷ್ಟ್ರೀಯ ಯುವ ಸಂಸತ್ತಿನಲ್ಲಿ 28 ರಾಜ್ಯಗಳ 56 ಮಂದಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಮತ್ತು 728 ಅಂತಿಮ ಸ್ಪರ್ಧಿಗಳು ಭಾಗವಹಿಸಿದ್ದರು. 2019 ರ ಫೆಬ್ರವರಿ 27 ರಂದು ನವದೆಹಲಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮೊದಲ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಮೂವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ವಿಜೇತರು  ತಮ್ಮ ಆಲೋಚನೆಗಳನ್ನು ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ ಹಂಚಿಕೊಂಡರು.
ಅದೇ ಉತ್ಸಾಹ ಮತ್ತು ಉದ್ದೇಶದಿಂದ ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವ 2021 ಡಿಸೆಂಬರ್ 23, 2020 ರಂದು ವರ್ಚುವಲ್ ಮೋಡ್ ಮೂಲಕ ಪ್ರಾರಂಭವಾಗಿದೆ. ಇದರಲ್ಲಿ ದೇಶಾದ್ಯಂತ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 23 ಲಕ್ಷಕ್ಕೂ ಹೆಚ್ಚು ಯುವಕರು ಮತ್ತು ಪಾಲುದಾರರು ಭಾಗಿಯಾಗಿದ್ದಾರೆ.
ಇದರ ನಂತರ ಜಿಲ್ಲಾ ಯುವ ಸಂಸತ್ತುಗಳ ಸಂಘಟನೆಯು 2020 ರ ಡಿಸೆಂಬರ್ 24 ರಿಂದ 29 ರವರೆಗೆ ವರ್ಚುವಲ್ ಮೋಡ್ ಮೂಲಕ ನಡೆಯಿತು. ಇದರಲ್ಲಿ, ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 698 ಜಿಲ್ಲೆಗಳ 2.34 ಲಕ್ಷ ಯುವಕರು (18-25 ವರ್ಷದವರು) 150 ಸ್ಥಳಗಳಿಂದ ಭಾಗವಹಿಸಿದರು. ಇದರ ನಂತರ 2021 ಜನವರಿ 01 ರಿಂದ 05 ರವರೆಗೆ ವರ್ಚುವಲ್ ಮೋಡ್ ಮೂಲಕ ರಾಜ್ಯ ಯುವ ಸಂಸತ್ತುಗಳು ನಡೆದವು. ಇದರಲ್ಲಿ ಜಿಲ್ಲೆಗಳ ಮೊದಲ ಹಾಗೂ ಎರಡನೇ ಸ್ಥಾನಗಳ 1,345 ಮಂದಿ ವಿಜೇತರು ಭಾಗವಹಿಸಿದರು. ಜಿಲ್ಲಾ ಮತ್ತು ರಾಜ್ಯ ಯುವ ಸಂಸತ್ತುಗಳಲ್ಲಿ ಭಾಗವಹಿಸುವವರು ನಿರ್ದಿಷ್ಟ ವಿಷಯಗಳ ಕುರಿತು ಗರಿಷ್ಠ 4 ನಿಮಿಷಗಳ ಕಾಲ ಮಾತನಾಡಿದರು. ಐವರು ಸದಸ್ಯರ ತೀರ್ಪುಗಾರ ಸಮಿತಿ ವಿಜೇತರನ್ನು ಆಯ್ಕೆ ಮಾಡಿತು.
2021 ರ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಅಂತಿಮ ಸ್ಪರ್ಧೆ 2021 ರ ಜನವರಿ 11 ರಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆಯಲಿದೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 84 ವಿಜೇತರು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಲೋಕಸಭಾ ಸ್ಪೀಕರ್, ರಾಜ್ಯ ಸಭೆ ಉಪಸಭಾಪತಿ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು ಮತ್ತಿತರ ಗಣ್ಯರ ಮುಂದೆ ಹಾಜರಾಗುವ ಅವಕಾಶವನ್ನು ಪಡೆಯುತ್ತಾರೆ. 29 ರಾಷ್ಟ್ರೀಯ ವಿಜೇತರಿಗೆ ರಾಜ್ಯಸಭಾ ಸದಸ್ಯೆ ಶ್ರೀಮತಿ ರೂಪಾ ಗಂಗೂಲಿ, ಲೋಕಸಭಾ ಸದಸ್ಯ ಶ್ರೀ ಪರ್ವೇಶ್ ಸಾಹಿಬ್ ಸಿಂಗ್ ಮತ್ತು ಖ್ಯಾತ ಪತ್ರಕರ್ತ ಶ್ರೀ ಪ್ರಫುಲ್ಲಾ ಕೇಟ್ಕರ್.ಅವರನ್ನೊಳಗೊಂಡ ರಾಷ್ಟ್ರೀಯ ತೀರ್ಪುಗಾರರ ಮುಂದೆ ಮಾತನಾಡಲು ಅವಕಾಶ ಸಿಗುತ್ತದೆ.
2021 ರ ಜನವರಿ 12 ರಂದು ರಾಷ್ಟ್ರೀಯ ಯುವ ಸಂಸತ್ ಉತ್ಸವ 2021 ರ ಸಮಾರೋಪ ಸಮಾರಂಭದಲ್ಲಿ ಪ್ರಧಾನಿಯವರು ಮಾತನಾಡಲಿದ್ದಾರೆ. ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರು ಪ್ರಧಾನ ಮಂತ್ರಿಯವರ ಮುಂದೆ ಮಾತನಾಡುವ ಅವಕಾಶ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನಿ ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ.
ರಾಷ್ಟ್ರೀಯ ಯುವಜನೋತ್ಸವ
ರಾಷ್ಟ್ರೀಯ ಯುವಜನೋತ್ಸವವನ್ನು ಪ್ರತಿವರ್ಷ ಜನವರಿ 12 ರಿಂದ 16 ರವರೆಗೆ ಆಚರಿಸಲಾಗುತ್ತದೆ. ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮ ದಿನವಾದ್ದರಿಂದ ಇದನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ, ರಾಷ್ಟ್ರೀಯ ಯುವ ಉತ್ಸವದ ಜೊತೆಗೆ ಎನ್‌ವೈಪಿಎಫ್ ಸಹ ಆಯೋಜಿಸಲಾಗುತ್ತಿದೆ.
ದೇಶದ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಗ್ಗೂಡಿಸುವುದು ರಾಷ್ಟ್ರೀಯ ಯುವ ಉತ್ಸವದ ಉದ್ದೇಶವಾಗಿದೆ. ಈ ಉತ್ಸವದಲ್ಲಿ ಮಿನಿ ಭಾರತವನ್ನು ಒಂದೆಡೆ ಸೇರಿಸುವ ಮೂಲಕ ಅವರಿಗೆ ಒಂದು ಅಖಾಡವನ್ನು ಒದಗಿಸಿ, ಅಲ್ಲಿ ಯುವಕರು ಔಪಚಾರಿಕ ಮತ್ತು ಅನೌಪಚಾರಿಕ ರೀತಿಯಲ್ಲಿ ಸಂವಹನ ನಡೆಸುತ್ತಾರೆ ಮತ್ತು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದು ರಾಷ್ಟ್ರೀಯ ಏಕೀಕರಣ, ಕೋಮು ಸೌಹಾರ್ದತೆ, ಭ್ರಾತೃತ್ವ, ಧೈರ್ಯ ಮತ್ತು ಸಾಹಸವನ್ನು ಉತ್ತೇಜಿಸುತ್ತದೆ. ಏಕ್ ಭಾರತ್ ಶ್ರೇಷ್ಠ ಭಾರತ್ ನ ಚೈತನ್ಯ, ಸಾರ ಮತ್ತು ಪರಿಕಲ್ಪನೆಯನ್ನು ಪ್ರಚಾರ ಮಾಡುವುದು ಇದರ ಮೂಲ ಉದ್ದೇಶವಾಗಿದೆ.
ಕೋವಿಡ್-19ರ ಹಿನ್ನೆಲೆಯಲ್ಲಿ, 24 ನೇ ರಾಷ್ಟ್ರೀಯ ಯುವ ಉತ್ಸವವನ್ನು ವರ್ಚುವಲ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ‘ಯುವ - ಉತ್ಸ ನಯೇ ಭಾರತ್ ಕಾ’ ಈ ವರ್ಷದ ಉತ್ಸವದ ವಿಷಯವಾಗಿದೆ, ಇದು ನವ ಭಾರತದ ಆಚರಣೆಯನ್ನು ಯುವಕರು ಜೀವಂತವಾಗಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ. 24 ನೇ ರಾಷ್ಟ್ರೀಯ ಯುವ ಉತ್ಸವದ ಉದ್ಘಾಟನಾ ಸಮಾರಂಭ ಮತ್ತು 2 ನೇ ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವದ ಸಮಾರೋಪ ಸಮಾರಂಭವು 2021 ರ ಜನವರಿ 12 ರಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆಯಲಿದೆ. 24 ನೇ ರಾಷ್ಟ್ರೀಯ ಯುವ ಉತ್ಸವದ ಸಮಾರೋಪ ಸಮಾರಂಭವು 2021 ರ ಜನವರಿ 16 ರಂದು ನವದೆಹಲಿಯ ಡಾ.ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆಯಲಿದೆ.

****



(Release ID: 1687598) Visitor Counter : 444