ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19  ನಿರ್ವಹಣೆ ಮತ್ತು ನಿಯಂತ್ರಣ ಪರಿಸ್ಥಿತಿ ಕುರಿತಂತೆ ಸಂಪುಟ ಕಾರ್ಯದರ್ಶಿ ಮತ್ತು ಮಾನ್ಯ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಿಂದ ಪರಿಶೀಲನೆ

Posted On: 22 MAR 2020 6:51PM by PIB Bengaluru

ಕೋವಿಡ್-19  ನಿರ್ವಹಣೆ ಮತ್ತು ನಿಯಂತ್ರಣ ಪರಿಸ್ಥಿತಿ ಕುರಿತಂತೆ ಸಂಪುಟ ಕಾರ್ಯದರ್ಶಿ ಮತ್ತು ಮಾನ್ಯ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಿಂದ ಪರಿಶೀಲನೆ


ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಿಂದು ಕೋವಿಡ್ -19 ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಪರಿಸ್ಥಿತಿ, ಕೈಗೊಂಡಿರುವ ಕ್ರಮಗಳು ಮತ್ತು ಸನ್ನದ್ಧತೆಯನ್ನು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ವೀಡಿಯೊ ಸಮ್ಮೇಳನದ ಮೂಲಕ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪರಾಮರ್ಶಿಸಿದರು. ಕಳೆದ ಕೆಲವು ದಿನಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆಯ ಹೆಚ್ಚಳದ ಕುರಿತಂತೆಯೂ ಚರ್ಚಿಸಲಾಯಿತು. ಕೇಂದ್ರ ಸರ್ಕಾರ ತುರ್ತು ಮತ್ತು ಪರಿಣಾಮಕಾರಿ ಮಧ್ಯಪ್ರವೇಶ ಕುರಿತಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತು.
ಸವಿವರವಾದ ಚರ್ಚೆಯ ಬಳಿಕ, ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು: 
a.    ಕೋವಿಡ್ -19 ದೃಢಪಟ್ಟಿರುವ ಜಿಲ್ಲೆಗಳಲ್ಲಿ ಕೇವಲ ಅಗತ್ಯ ಸೇವೆಗಳು ಮಾತ್ರವೇ ಕಾರ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬೇಕು. ಆಸ್ಪತ್ರೆಗಳು, ದೂರಸಂಪರ್ಕ, ಔಷಧದ ಅಂಗಡಿಗಳು, ದಿನಸಿ ಅಂಗಡಿ ಇತ್ಯಾದಿ ಹೊರತು ಪಡಿಸಿ ಮಿಕ್ಕೆಲ್ಲಾ ಚಟುವಟಿಕೆ ಬಂದ್ ಮಾಡಲು ಗಮನ ಹರಿಸಬೇಕು.
b.    ಅಗತ್ಯವಸ್ತುಗಳು ದರೆ ಔಷಧಗಳು, ಲಸಿಕೆಗಳು, ಸ್ಯಾನಿಟೈಸರ್ ಗಳು, ಮಾಸ್ಕ್, ವೈದ್ಯಕೀಯ ಸಲಕರಣೆ ಮತ್ತು ಅವುಗಳಿಗೆ ಪೂರಕವಾದ ವಸ್ತು ತಯಾರಿಸುವ ಉದ್ಯಮಗಳು/ಕಾರ್ಖಾನೆಗಳನ್ನು ಈ ನಿರ್ಬಂಧಗಳಿಂದ ಮುಕ್ತಗೊಳಿಸಬೇಕು.
c.    ರಾಜ್ಯ ಸರ್ಕಾರಗಳು ಈ ಪಟ್ಟಿಯನ್ನು ಪರಿಸ್ಥಿತಿಯನ್ನು ಅವಲೋಕಿಸಿ ವಿಸ್ತರಿಸಬಹುದು.
d.    ಉಪ ನಗರ ರೈಲು ಸೇವೆಗಳೂ ಸೇರಿದಂತೆ  ಎಲ್ಲ ರೈಲು ಸೇವೆಗಳನ್ನು 2020ರ ಮಾರ್ಚ್ 31ರವರೆಗೆ ರದ್ದು ಮಾಡಬೇಕು.
e.    ಅವಶ್ಯಕ ವಸ್ತುಗಳ ಲಭ್ಯತೆಯ ಖಾತ್ರಿಗಾಗಿ ಸರಕು ಸಾಗಣೆ ರೈಲುಗಳು ಎಂದಿನಂತೆ ಕಾರ್ಯಾಚರಣೆ ಮಾಡಬಹುದು.
f.     2020ರ ಮಾರ್ಚ್ 31ರವರೆಗೆ ಎಲ್ಲ ಮೆಟ್ರೋ ರೈಲುಗಳ ಸೇವೆಯನ್ನೂ ಸ್ಥಗಿತಗೊಳಿಸಬೇಕು.
g.    ಅಂತರ ರಾಜ್ಯ ಪ್ರಯಾಣಿಕರ ಸಾರಿಗೆ ಸಂಚಾರವನ್ನೂ 2020ರ ಮಾರ್ಚ್ 31ರವರೆಗೆ ಸ್ಥಗಿತಗೊಳಿಸಬೇಕು.
h.    ಸಾರಿಗೆ ಸೇವೆ ಅತಿ ಕಡಿಮೆ ಮಟ್ಟದಲ್ಲಿ ಕಾರ್ಯಾಚರಣೆ ಮಾಡಬಹುದು.
i.      ಈ ಎಲ್ಲ ಕ್ರಮಗಳೂ ತಾತ್ಕಾಲಿಕವಾಗಿದ್ದರೂ, ಸೋಂಕಿನ ಸರಪಳಿ ಕತ್ತರಿಸಲು ಅತ್ಯಂತ ಮಹತ್ವದ್ದಾಗಿದೆ.
j.      ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ, ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಆಗುವ ಅನಾನುಕೂಲತೆಯನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳುವಂತೆ ರಾಜ್ಯಗಳನ್ನು ಕೋರಲಾಗಿದೆ.
k.    ತಮ್ಮ ಉದ್ಯೋಗಿಗಳಿಗೆ ಮನೆಗಳಿಂದಲೇ ಕಾರ್ಯ ನಿರ್ವಹಿಸಲು ಮತ್ತು ಈ ಅವಧಿಯಲ್ಲಿ ಅವರಿಗೆ ಸಂಭಾವನೆ ನೀಡುವಂತೆ ಕೈಗಾರಿಕೆಗಳು, ಉದ್ದಿಮೆಗಳಿಗೆ ರಾಜ್ಯ ಸರ್ಕಾರಗಳು ಮನವಿ ಮಾಡಬೇಕು.
l.      ಈ ನಿಟ್ಟಿನಲ್ಲಿ ಸೂಕ್ತ ಸೂಚನೆಗಳನ್ನು ಹೊರಡಿಸುವಂತೆ ಕಾರ್ಮಿಕ ಸಚಿವಾಲಯ ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವಾಲಯಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಸೂಚಿಸಿದೆ.
m.   ಸೋಂಕು ದೃಢ ಪಟ್ಟ ಪ್ರರಣಗಳಲ್ಲಿ ಸೂಕ್ತ ಆರೋಗ್ಯ ಸೇವೆ ಒದಗಿಸಲು ರಾಜ್ಯಗಳು ಸಂಪೂರ್ಣ ಸನ್ನದ್ಧವಾಗಿರುವಂತೆಯೂ ಸೂಚಿಸಲಾಗಿದೆ.
n.    ಎಲ್ಲ ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಪ್ರತ್ಯೇಕೀಕರಣ ಮತ್ತು ಅವುಗಳ ಪ್ರಮಾಣ ಹೆಚ್ಚಿಸುವುದೂ ಸೇರಿದಂತೆ ವೈದ್ಯಕೀಯ ಸೇವೆಗಳ ಲಭ್ಯತೆಯನ್ನು ನಿರ್ಧರಿಸಲು ರಾಜ್ಯಗಳು ಕ್ರಮ ವಹಿಸಬೇಕು.
o.    ಕೋವಿಡ್ -19 ಪ್ರಕರಣಗಳನ್ನು ಮಾತ್ರವೇ ನಿರ್ವಹಣೆ ಮಾಡಲು ಸಂಪೂರ್ಣ ಸಮರ್ಪಿತವಾದ ಸೌಲಭ್ಯವನ್ನು ರೂಪಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.
p.    ಕೋವಿಡ್ -19 ಪ್ರಕರಣಗಳನ್ನು ನಿರ್ವಹಿಸಲು ಸಂಪೂರ್ಣ ಸಜ್ಜಾಗಿರುವ ಆಸ್ಪತ್ರೆಗಳನ್ನು ಖಾತ್ರಿಪಡಿಸಿಕೊಳ್ಳಲು ಪ್ರತಿಯೊಂದು ರಾಜ್ಯಕ್ಕೂ ಮನವಿ ಮಾಡಲಾಗಿದೆ.



(Release ID: 1607870) Visitor Counter : 132