ಪ್ರಧಾನ ಮಂತ್ರಿಯವರ ಕಛೇರಿ

ಆದಿತ್ಯ ಬಿರ್ಲಾ ಬಳಗದ ಸುವರ್ಣ ಮಹೋತ್ಸವ ಆಚರಣೆ ವೇಳೆ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ

Posted On: 03 NOV 2019 10:05AM by PIB Bengaluru

ಆದಿತ್ಯ ಬಿರ್ಲಾ ಬಳಗದ ಸುವರ್ಣ ಮಹೋತ್ಸವ ಆಚರಣೆ ವೇಳೆ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ
 

ಆದಿತ್ಯ ಬಿರ್ಲಾ ಬಳಗದ ಅಧ್ಯಕ್ಷರಾದ ಶ್ರೀ ಕುಮಾರ ಮಂಗಲಂ ಬಿರ್ಲಾಜಿ,

ಥೈಲ್ಯಾಂಡ್ ನ ಗೌರವಾನ್ವಿತ ಗಣ್ಯರೇ,

ಬಿರ್ಲಾ ಕುಟುಂಬ ಮತ್ತು ಆಡಳಿತ ಮಂಡಳಿಯ ಸದಸ್ಯರೇ,

ಥೈಲ್ಯಾಂಡ್ ಮತ್ತು ಭಾರತದ ಎಲ್ಲ ವಾಣಿಜ್ಯ ನಾಯಕರೇ

ಗೆಳೆಯರೇ,

ನಮಸ್ಕಾರ,

ಥೈಲ್ಯಾಂಡ್ ನ ಈ ಸುವರ್ಣ ಭೂಮಿಯಲ್ಲಿ ನಾವು ಸುವರ್ಣ ಜಯಂತಿ ಅಥವಾ ಆದಿತ್ಯಾ ಬಿರ್ಲಾ ಬಳಗದ ಸುವರ್ಣ ಮಹೋತ್ಸವ ಆಚರಣೆಗೆ ಇಲ್ಲಿ ಸೇರಿದ್ದೇವೆ. ಇದೊಂದು ನಿಜವಾಗಿಯೂ ವಿಶೇಷ ಸಂದರ್ಭ. ನಾನು ಆದಿತ್ಯ ಬಿರ್ಲಾ ಬಳಗದ ತಂಡವನ್ನು ಅಭಿನಂದಿಸುತ್ತೇನೆ. ನಾವು ಈಗಷ್ಟೇ ಶ್ರೀ ಕುಮಾರ ಮಂಗಲಂ ಬಿರ್ಲಾ ಅವರು ಥೈಲ್ಯಾಂಡ್ ನಲ್ಲಿ ಮಾಡುತ್ತಿರುವ ಮಹತ್ವದ ಶ್ಲಾಘನೀಯ ಕಾರ್ಯವನ್ನು ಕೇಳಿದ್ದೇವೆ, ಅದರಿಂದ ಈ ದೇಶದಲ್ಲಿ ಹಲವರಿಗೆ ಅವಕಾಶಗಳು ಸೃಷ್ಟಿಯಾಗುತ್ತಿವೆ ಮತ್ತು ಅವರು ಶ್ರೇಯೋಭಿವೃದ್ಧಿ ಹೊಂದುತ್ತಿದ್ದಾರೆ.

ಗೆಳೆಯರೇ,

ನಾವೆಲ್ಲಾ ಇಲ್ಲಿ ಥೈಲ್ಯಾಂಡ್ ನಲ್ಲಿ ಸೇರಿದ್ದೇವೆ. ಈ ರಾಷ್ಟ್ರದೊಂದಿಗೆ ಭಾರತ ಬಲಿಷ್ಠ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದೆ. ಈ ದೇಶದಲ್ಲಿ ಹೆಸರಾಂತ ಭಾರತೀಯ ಕೈಗಾರಿಕೆಗಳು ನೆಲೆಯೂರಿ ಸುಮಾರು 50 ವರ್ಷಗಳು ಪೂರೈಸಿವೆ. ಆ ಖಚಿತತೆಯ ನಂಬಿಕೆಯೊಂದಿಗೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳು ಒಗ್ಗೂಡಲು ತಾನಾಗಿಯೇ ಶಕ್ತಿ ಹೊಂದಿವೆ. ಶತಮಾನಗಳ ಕಾಲ ಸಂತರು ಮತ್ತು ವರ್ತಕರು ತಮ್ಮ ಸ್ಥಳಗಳಿಂದ ಹೊರಬಂದು, ಜಗತ್ತಿನ ಉದ್ದಗಲಕ್ಕೂ ಸುತ್ತಾಡುತ್ತಿರುತ್ತಾರೆ. ಅವರು ಮನೆಯಿಂದ ಹೊರಬಂದು ಪ್ರಯಾಣ ಬೆಳೆಸಿ, ಹಲವು ಸಂಸ್ಕೃತಿಗಳೊಂದಿಗೆ ಬೆರೆತಿದ್ದಾರೆ. ಸಾಂಸ್ಕೃತಿಕ ಸಂಬಂಧಗಳು ಮತ್ತು ವಾಣಿಜ್ಯ ಉತ್ಸಾಹ ಮುಂದಿನ ದಿನಗಳಲ್ಲಿ ವಿಶ್ವವನ್ನು ಇನ್ನಷ್ಟು ಸನಿಹಕ್ಕೆ ತರಲಿವೆ.

ಗೆಳೆಯರೇ,

ನಾನು ಇಂದು ಇಲ್ಲಿ ಭಾರತದಲ್ಲಿ ಆಗುತ್ತಿರುವ ಕೆಲವೊಂದು ಸಕಾರಾತ್ಮಕ ಬದಲಾವಣೆಗಳ ಚಿತ್ರಗಳನ್ನು ನೀಡಲು ಉತ್ಸುಕನಾಗಿದ್ದೇನೆ, ನಾನು ಪೂರ್ಣ ವಿಶ್ವಾಸದೊಂದಿಗೆ ಹೇಳುವುದೆಂದೆರೆ ಭಾರತದಲ್ಲಿ ಅತ್ಯುತ್ತಮ ಕಾಲ ಬಂದಿದೆ. ಇಂದಿನ ಭಾರತದಲ್ಲಿ ಹಲವು ಸಂಗತಿಗಳು ಉದಯಿಸುತ್ತಿವೆ ಮತ್ತು ಹಲವು ವಿಷಯಗಳಲ್ಲಿ ಕುಸಿಯುತ್ತಿವೆ, ‘ಉದ್ಯಮ ಸ್ನೇಹಿ ವಾತಾವರಣ’ ಶ್ರೇಯಾಂಕದಲ್ಲಿ ಏರಿಕೆಯಾಗುತ್ತಿದೆ ಮತ್ತು ಅದರಿಂದ ಬದುಕು ಸುಲಭವಾಗುತ್ತಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿದೆ. ನಮ್ಮ ಅರಣ್ಯ ವ್ಯಾಪ್ತಿಯೂ ಹೆಚ್ಚಾಗುತ್ತಿದೆ. ನಮ್ಮ ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂತೆಯೇ ನಮ್ಮ ಉತ್ಪಾದನೆ ಮತ್ತು ದಕ್ಷತೆ ಹೆಚ್ಚುತ್ತಿದೆ. ಮೂಲಸೌಕರ್ಯವೃದ್ಧಿ ವೇಗ ಹೆಚ್ಚಾಗುತ್ತಿದೆ. ದೇಶದಲ್ಲಿ ಉನ್ನತ ಗುಣಮಟ್ಟದ ಆರೋಗ್ಯ ರಕ್ಷಣೆ ಸೇವೆ ಪಡೆಯುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ವೇಳೆ ಹಲವು ತೆರಿಗೆಗಳು ಇಳಿಕೆಯಾಗುತ್ತಿವೆ, ತೆರಿಗೆ ದರಗಳು ಕುಸಿಯುತ್ತಿವೆ. ಅಧಿಕಾರಶಾಹಿ ತಗ್ಗುತ್ತಿದೆ, ಅಕ್ರಮಗಳು ಕಡಿಮೆಯಾಗುತ್ತಿವೆ, ಭ್ರಷ್ಟಾಚಾರ ತಗ್ಗುತ್ತಿದೆ. ಭ್ರಷ್ಟರು ರಕ್ಷಣೆಗಾಗಿ ಪಲಾಯನ ಮಾಡುತ್ತಿದ್ದಾರೆ. ಅಧಿಕಾರದ ಕಾರಿಡಾರ್ ಗಳಲ್ಲಿದ್ದ ಮಧ್ಯವರ್ತಿಗಳು ಇತಿಹಾಸ ಸೇರಿದ್ದಾರೆ.

ಗೆಳೆಯರೇ,

ಭಾರತ ಕಳೆದ ಐದು ವರ್ಷಗಳಿಂದೀಚೆಗೆ ಹಲವು ವಲಯಗಳಲ್ಲಿ ಹಲವು ಯಶೋಗಾಥೆಗಳನ್ನು ಕಂಡಿದೆ. ಇದಕ್ಕೆ ಕಾರಣ ಕೇವಲ ಸರ್ಕಾರ ಮಾತ್ರವಲ್ಲ, ಭಾರತ ಎಂದಿನಂತೆ ಆಡಳಿತಶಾಹಿ ಮನೋಭಾವದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಮಹತ್ವಾಕಾಂಕ್ಷೆ ಯೋಜನೆಗಳನ್ನು ಕೈಗೊಂಡಾಗ ಮಾತ್ರ ಪರಿವರ್ತನಾತ್ಮಕ ಬದಲಾವಣೆಗಳು ಹುಟ್ಟಿಕೊಳ್ಳುತ್ತಿವೆ. ಮಹತ್ವಾಕಾಂಕ್ಷೆ ಯೋಜನೆಗಳಿಗೆ ಜನರ ಸಹಭಾಗಿತ್ವ ಇನ್ನಷ್ಟು ಶಕ್ತಿ ದೊರೆತು, ಅವು ಪ್ರಭಾವಿ ಜನಾಂದೋಲನಗಳಾಗಿ ಮಾರ್ಪಟ್ಟಿವೆ. ಈ ಸಾಮೂಹಿಕ ಚಳವಳಿಗಳು ಚಮತ್ಕಾರಗಳನ್ನು ಸಾಧಿಸಿವೆ. ಹಿಂದೆ ಅಸಾಧ್ಯ ಎನ್ನಲಾಗುತ್ತಿದ್ದ ಸಂಗತಿಗಳು ಈಗ ಸಾಧ್ಯವಾಗುತ್ತಿವೆ. ಜೀವನಕ್ಕೆ ಅಗತ್ಯ ಮೂಲಸೌಕರ್ಯಗಳ ವ್ಯಾಪ್ತಿ ಬಹುತೇಕ ಶೇಕಡ ನೂರರಷ್ಟು ತಲುಪಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಜನ-ಧನ್ ಯೋಜನೆ ಒಟ್ಟಾರೆ ಹಣಕಾಸು ಸೇರ್ಪಡೆಯನ್ನು ಖಾತ್ರಿಗೊಳಿಸಿದೆ ಮತ್ತು ಸ್ವಚ್ಛ ಭಾರತ ಮಿಷನ್ ನಿಂದ ಬಹುತೇಕ ಎಲ್ಲ ಕುಟುಂಬಗಳು ನೈರ್ಮಲೀಕರಣ ವ್ಯಾಪ್ತಿಗೆ ಒಳಪಟ್ಟಿವೆ.

ಗೆಳೆಯರೇ,

ಸೇವಾ ವಿತರಣೆ ವಲಯಕ್ಕೆ ಬಂದರೆ ಭಾರತ ಅತಿದೊಡ್ಡ ಸಮಸ್ಯೆ ಎದುರಿಸುತ್ತಿದೆ, ಅದೆಂದರೆ ಸೋರಿಕೆ. ಬಡವರು ಇದೇ ಕಾರಣಕ್ಕಾಗಿ ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ನಿಮಗೆ ಆಶ್ಚರ್ಯವಾಗಬಹುದು. ಹಲವು ವರ್ಷಗಳ ಕಾಲ ಬಡವರಿಗಾಗಿ ಖರ್ಚು ಮಾಡುತ್ತಿದ್ದ ಹಣ ನಿಜಕ್ಕೂ ಬಡಜನರಿಗೆ ತಲುಪುತ್ತಲೇ ಇರಲಿಲ್ಲ. ನಮ್ಮ ಸರ್ಕಾರ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಸಂಸ್ಕೃತಿಗೆ ಅಂತ್ಯಹಾಡಿದೆ. ಡಿಬಿಟಿಗೆ ಧನ್ಯವಾದಗಳು. ಡಿಬಿಟಿ ಎಂದರೆ ನೇರ ನಗದು ವರ್ಗಾವಣೆ. ಡಿಬಿಟಿಯಿಂದಾಗಿ ಮಧ್ಯವರ್ತಿಗಳ ಸಂಸ್ಕೃತಿ ಮತ್ತು ಅಪ್ರಮಾಣಿಕತೆ ಕೊನೆಯಾಗಿದೆ. ಅದರಲ್ಲಿ ತಪ್ಪುಗಳಿಗೆ ಅತಿ ಕಡಿಮೆ ಅವಕಾಶವಿದೆ. ಡಿಬಿಟಿಯಿಂದ ಈವರೆಗೆ 20 ಬಿಲಿಯನ್ ಡಾಲರ್ ಉಳಿತಾಯವಾಗಿದೆ. ನೀವು ಮನೆಗಳಲ್ಲಿ ಎಲ್ಇಡಿ ಬಲ್ಬ್ ಉರಿಯುವುದನ್ನು ಕಂಡಿರಬಹುದು, ಅದು ಅತ್ಯಂತ ಪರಿಣಾಮಕಾರಿ ಹಾಗೂ ಇಂಧನ ಸಂರಕ್ಷಣಾ ವ್ಯವಸ್ಥೆ ಎಂಬುದು ನಿಮಗೆ ತಿಳಿದಿದೆ. ಆದರೆ ಅದರ ಪರಿಣಾಮ ಭಾರತದ ಮೇಲೆ ಏನಾಗುತ್ತಿದೆ ಎಂಬುದು ನಿಮಗೆ ಗೊತ್ತೆ ? ಕಳೆದ ಕೆಲವು ವರ್ಷಗಳಿಂದೀಚೆಗೆ ನಾವು 360 ಮಿಲಿಯನ್ ಗೂ ಅಧಿಕ ಎಲ್ಇಡಿ ಬಲ್ಬ್ ಗಳನ್ನು ವಿತರಿಸಿದ್ದೇವೆ. ನಾವು 10 ಮಿಲಿಯನ್ ಬೀದಿ ದೀಪಗಳನ್ನು ಎಲ್ಇಡಿ ದೀಪಗಳನ್ನಾಗಿ ಬದಲಾಯಿಸಿದ್ದೇವೆ. ಇದರಿಂದಾಗಿ ನಾವು 3.5 ಬಿಲಿಯನ್ ಡಾಲರ್ ಉಳಿತಾಯ ಮಾಡಿದ್ದೇವೆ. ಜೊತೆಗೆ ಇಂಗಾಲದ ಹೊರಸೂಸುವಿಕೆ ಪ್ರಮಾಣ ತಗ್ಗಿದೆ. ಉಳಿತಾಯ ಮಾಡಿದ ಹಣ ಗಳಿಕೆಯಂತೆ ಎಂದು ನಾನು ಬಲವಾಗಿ ನಂಬಿದ್ದೇನೆ. ಉಳಿತಾಯ ಮಾಡಿದ ಇಂಧನ, ಉತ್ಪಾದನೆ ಮಾಡಿದ ಇಂಧನಕ್ಕೆ ಸಮನಾದುದು, ಆ ಹಣವನ್ನು ಇದೀಗ ಸಮರ್ಪಕ ಪರಿಣಾಮಕಾರಿ ಕಾರ್ಯಕ್ರಮಗಳ ಮೂಲಕ ಸಹಸ್ರಾರು ಮಂದಿಯ ಸಬಲೀಕರಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಗೆಳೆಯರೇ,

ಇಂದಿನ ಭಾರತದಲ್ಲಿ ತೆರಿಗೆ ಪಾವತಿಸುವ ಶ್ರಮಜೀವಿಯ ಕೊಡುಗೆಯನ್ನು ನಾವು ಗುರುತಿಸಬೇಕಿದೆ. ತೆರಿಗೆ ವಲಯದಲ್ಲಿ ನಾವು ಅತ್ಯಂತ ಮಹತ್ವದ ಕೆಲಸ ಮಾಡಿರುವ ವಲಯವಾಗಿದೆ. ಜನಸ್ನೇಹಿ ತೆರಿಗೆ ಪದ್ಧತಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು ಎಂಬುದು ನಮಗೆ ಸಂತಸ ತಂದಿದೆ. ಅದನ್ನು ಮತ್ತಷ್ಟು ಸುಧಾರಿಸಲು ನಾವು ಬದ್ಧವಾಗಿದ್ದೇವೆ. ಕಳೆದ ಐದು ವರ್ಷಗಳಿಂದೀಚೆಗೆ ಮಧ್ಯಮ ವರ್ಗದವರ ಮೇಲಿನ ತೆರಿಗೆ ಹೊರೆಯನ್ನು ಗಮನಾರ್ಹವಾಗಿ ತಗ್ಗಿಸಲಾಗಿದೆ. ಇದೀಗ ನಾವು ಮುಖಚರ್ಯೆ ರಹಿತ ಮೌಲ್ಯಮಾಪನ ಮಾಡುವುದನ್ನು ಆರಂಭಿಸಿದ್ದೇವೆ. ಇದರಿಂದಾಗಿ ಏಕಪಕ್ಷೀಯ ಅಥವಾ ದೌರ್ಜನ್ಯದ ಹೊರೆಗೆ ಅವಕಾಶವಿಲ್ಲ. ಭಾರತದ ಆರ್ಥಿಕ ಒಗ್ಗೂಡುವಿಕೆಯ ಕನಸು ನಮ್ಮ ಜಿ ಎಸ್ ಟಿ ಮೂಲಕ ಪೂರ್ಣಗೊಂಡಿದೆ. ನಾವು ಇನ್ನಷ್ಟು ಜನಸ್ನೇಹಿಯಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ಈ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಿದ್ದೇವೆ. ಭಾರತವನ್ನು ಹೂಡಿಕೆಗೆ ವಿಶ್ವದ ಅತ್ಯಂತ ಆಕರ್ಷಕ ಆರ್ಥಿಕತೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಈಗಷ್ಟೇ ಕಾರ್ಯ ಆರಂಭಿಸಿದ್ದೇವೆ.

ಗೆಳೆಯರೇ,

ಕಳೆದ ಐದು ವರ್ಷಗಳಲ್ಲಿ ಭಾರತ 286 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ(ಎಫ್ ಡಿ ಐ) ಸ್ವೀಕರಿಸಿದೆ. ಇದು ಕಳೆದ 20 ವರ್ಷಗಳಲ್ಲಿ ಭಾರತ ಸ್ವೀಕರಿಸಿರುವ ಒಟ್ಟಾರೆ ಎಫ್ ಡಿ ಐನ ಅರ್ಧದಷ್ಟು. ಶೇಕಡ 90ರಷ್ಟು ಸಹಜ ಅನುಮೋದನೆಗಳ ಮೂಲಕ ಹರಿದುಬಂದಿದೆ ಮತ್ತು ಅದರಲ್ಲಿ ಶೇಕಡ 40ರಷ್ಟು ಹಸಿರು ಕ್ಷೇತ್ರ ಹೂಡಿಕೆ(ಗ್ರೀನ್ ಫೀಲ್ಡ್ ಇನ್ವೆಸ್ಟ್ ಮೆಂಟ್)ಆಗಿದೆ. ಇದು ಭಾರತದಲ್ಲಿ ದೀರ್ಘಕಾಲ ಉಳಿಯಲು ಹೂಡಿಕೆದಾರರು ಆಸಕ್ತಿ ವಹಿಸುತ್ತಿದ್ದಾರೆ ಎಂಬುದನ್ನು ತಿಳಿಸುತ್ತಿದೆ. ಭಾರತದ ಪ್ರಗತಿ ದರ ಹಲವು ಶ್ರೇಯಾಂಕಗಳಲ್ಲಿ ಪ್ರತಿಫಲನಗೊಂಡಿವೆ. ಯು ಎನ್ ಸಿ ಟಿ ಎ ಡಿ ಪ್ರಕಾರ ವಿಶ್ವದ ಹತ್ತು ಅಗ್ರ ಶ್ರೇಯಾಂಕ ಎಫ್ ಡಿ ಐ ಹೂಡಿಕೆ ತಾಣಗಳಲ್ಲಿ ನಾವು ಇದ್ದೇವೆ. ಐದು ವರ್ಷಗಳಲ್ಲಿ ಡಬ್ಲ್ಯೂಐಪಿಒ ಜಾಗತಿಕ ಆವಿಷ್ಕಾರಿ ಸೂಚ್ಯಂಕದಲ್ಲಿ 24 ಅಂಕ ಮೇಲೇರಿದ್ದೇವೆ. ಅವುಗಳಲ್ಲಿ ಎರಡು ಅಂಶಗಳನ್ನು ನಾನು ವಿಶೇಷವಾಗಿ ತಿಳಿಸಲು ಬಯಸುತ್ತೇನೆ. ವಿಶ್ವಬ್ಯಾಂಕ್ ನ ಉದ್ಯಮಸ್ನೇಹಿ ವಾತಾವರಣ ಸೂಚ್ಯಂಕದಲ್ಲಿ ಭಾರತ 79 ಸ್ಥಾನ ಮೇಲೇರಿದೆ. 2014ರಲ್ಲಿ 142ನೇ ಸ್ಥಾನದಲ್ಲಿದ್ದದ್ದು, 2019ರಲ್ಲಿ 63ನೇ ಸ್ಥಾನಕ್ಕೇರಿದೆ, ಇದು ಅತಿ ದೊಡ್ಡ ಸಾಧನೆಯಾಗಿದೆ. ಸತತ ಮೂರನೇ ವರ್ಷ ನಾವು ಅಗ್ರ ಹತ್ತು ಸುಧಾರಕ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತದಲ್ಲಿ ನಾನಾ ಬಗೆಯ ವಾಣಿಜ್ಯ ವಹಿವಾಟು ಮಾಡುತ್ತಿದ್ದೇವೆ. ನಮ್ಮದು ಅತಿದೊಡ್ಡ ಮತ್ತು ವಿಭಿನ್ನ ರಾಷ್ಟ್ರವಾಗಿದೆ. ಅಲ್ಲಿ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇರುತ್ತವೆ. ಆ ನಿಟ್ಟಿನಲ್ಲಿ ನಾವು ಸುಧಾರಣೆಗಳಿಗೆ ಬದ್ಧವಾಗಿದ್ದೇವೆ ಎಂಬ ನಮ್ಮ ದಿಕ್ಸೂಚಿಯನ್ನು ತೋರಿಸುತ್ತದೆ. ಜನರು ಮತ್ತು ಸರ್ಕಾರ ಒಟ್ಟಾಗಿ ಸೇರಿ ಉತ್ತಮ ವಾಣಿಜ್ಯ ವಹಿವಾಟು ವಾತಾವರಣ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ.

ಗೆಳೆಯರೇ,

ವಿಶ್ವ ಆರ್ಥಿಕ ವೇದಿಕೆ, ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲೂ ಭಾರತದ ಶ್ರೇಯಾಂಕ ಸುಧಾರಿಸಿದೆ. 2013ರಲ್ಲಿ 65ನೇ ಶ್ರೇಯಾಂಕದಲ್ಲಿದ್ದ ಭಾರತ ಇದೀಗ 2019ರಲ್ಲಿ 34ನೇ ಸ್ಥಾನಕ್ಕೇರಿದೆ. ಇದು ಅತಿದೊಡ್ಡ ಏರಿಕೆಯಾಗಿದೆ. ದೇಶಕ್ಕೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಶೇಕಡ 50ರಷ್ಟು ಹೆಚ್ಚಾಗಿದೆ. ನಿಮಗೆಲ್ಲಾ ಚೆನ್ನಾಗಿ ತಿಳಿದಿರಬಹುದು ಪ್ರವಾಸಿಗರು ಆತ ಅಥವಾ ಆಕೆ ತಮಗೆ ಅತ್ಯಂತ ಆರಾಮದಾಯಕ, ಸೂಕ್ತ ಮತ್ತು ಸುರಕ್ಷಿತ ಸ್ಥಳ ಎಂದು ಮನದಟ್ಟು ಆಗುವ ವರೆಗೆ ಅವರು ಭೇಟಿ ನೀಡುವುದಿಲ್ಲ. ಆದ್ದರಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ ಎಂದರೆ ಅದರರ್ಥ ನಮ್ಮ ಪ್ರಯತ್ನಗಳು ವಾಸ್ತವದಲ್ಲಿ ಫಲ ನೀಡುತ್ತಿವೆ ಎಂದು.

ಗೆಳೆಯರೇ, ಭಾರತದಲ್ಲಿ ಉತ್ತಮ ರಸ್ತೆಗಳಿವೆ, ಉತ್ತಮ ವಾಯು ಸಂಪರ್ಕವಿದೆ, ಹೆಚ್ಚಿನ ಶುಚಿತ್ವ ಕಾಪಾಡಿಕೊಳ್ಳಲಾಗುತ್ತಿದೆ ಮತ್ತು ಕಾನೂನು ಸುವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಇಡೀ ವಿಶ್ವವನ್ನೇ ಭಾರತ ಆಕರ್ಷಿಸುತ್ತಿದೆ ಎಂಬುದು ವಾಸ್ತವ ಸಂಗತಿಯಾಗಿದೆ.

ಗೆಳೆಯರೇ,

ಪರಿವರ್ತನೆಯ ಪರಿಣಾಮಗಳ ನಂತರ ಈ ಶ್ರೇಯಾಂಕಗಳು ಉತ್ತಮಗೊಂಡಿವೆ. ಈ ಶ್ರೇಯಾಂಕಗಳು ಕೇವಲ ಮುನ್ಸೂಚನೆಯಲ್ಲ, ಅವು ಈಗಾಗಲೇ ತಳಮಟ್ಟದಲ್ಲಿ ಆಗಿರುವ ಬದಲಾವಣೆಗಳಿಂದ ಎಂಬುದು ರುಜುವಾತಾಗಿದೆ.

ಗೆಳೆಯರೇ,

ಭಾರತ ಇದೀಗ ಮತ್ತೊಂದು ಕನಸು ಕಾಣುತ್ತಿದೆ – ಅದೆಂದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವುದು. 2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಭಾರತದ ಒಟ್ಟಾರೆ ಆರ್ಥಿಕತೆ 2 ಟ್ರಿಲಿಯನ್ ಡಾಲರ್ ಇತ್ತು. 65 ವರ್ಷಗಳಲ್ಲಿ 2 ಟ್ರಿಲಿಯನ್ ಡಾಲರ್ ಇತ್ತು. ಆದರೆ ಕಳೆದ 5 ವರ್ಷಗಳಲ್ಲಿ ನಾವು ಅದನ್ನು ಬಹುತೇಕ 3 ಟ್ರಿಲಿಯನ್ ಡಾಲರ್ ಗೆ ಏರಿಕೆ ಮಾಡಿದ್ದೇವೆ. ಹಾಗಾಗಿ ಭಾರತ ಸದ್ಯದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲಿದೆ ಎಂಬ ಕನಸು ನಮ್ಮದಾಗಿದೆ. ನಾವು ಮುಂದಿನ ತಲೆಮಾರಿನ ಮೂಲಸೌಕರ್ಯಕ್ಕಾಗಿ 1.5 ಟ್ರಿಲಿಯನ್ ಡಾಲರ್ ಹಣ ಹೂಡಿಕೆ ಮಾಡಲಿದ್ದೇವೆ.

ಗೆಳೆಯರೇ,

ಒಂದು ಸಂಗತಿಯ ಬಗ್ಗೆ ನನಗೆ ವಿಶೇಷ ಹೆಮ್ಮೆ ಇದೆ ಅದೆಂದರೆ ಭಾರತದ ಪ್ರತಿಭಾವಂತ ಮತ್ತು ಕೌಶಲ್ಯಹೊಂದಿದ ಮಾನವ ಸಂಪನ್ಮೂಲ. ಭಾರತ ವಿಶ್ವದ ಅತಿದೊಡ್ಡ ನವೋದ್ಯಮ ಪೂರಕ ವ್ಯವಸ್ಥೆಯನ್ನು ಹೊಂದಿರುವುದು ಆಶ್ಚರ್ಯಕರವೇನಲ್ಲ. ಡಿಜಿಟಲ್ ಗ್ರಾಹಕರ ವಿಭಾಗದಲ್ಲಿ ಭಾರತ ಅತಿದೊಡ್ಡ ಮತ್ತು ಅತಿವೇಗದ ಮಾರುಕಟ್ಟೆಯನ್ನು ಹೊಂದಿದೆ. ಭಾರತದಲ್ಲಿ ಸುಮಾರು ಒಂದು ಬಿಲಿಯನ್ ಸ್ಮಾರ್ಟ್ ಫೋನ್ ಬಳಕೆದಾರರಿದ್ದು, ಅರ್ಧ ಬಿಲಿಯನ್ ಗೂ ಅಧಿಕ ಮಂದಿ ಅಂತರ್ಜಾಲ ಬಳಕೆದಾರರಿದ್ದಾರೆ. 4.0ಯೊಂದಿಗೆ ಕೈಗಾರಿಕೆಯ ವೇಗಕ್ಕೆ ತಕ್ಕಂತೆ ನಡೆಯಲಾಗುತ್ತಿದ್ದು, ಸರ್ಕಾರದ ಅಗತ್ಯತೆಗಳು ಮತ್ತು ಅಭಿವೃದ್ಧಿ ಆಶಯಗಳನ್ನು ಈಡೇರಿಸಿಕೊಳ್ಳಲು ತಂತ್ರಜ್ಞಾನ ಅಳವಡಿಕೆಗೆ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಲಾಗುತ್ತದೆ. ಈ ಎಲ್ಲಾ ಅನುಕೂಲಗಳೊಂದಿಗೆ ನಾವು ಜಾಗತಿಕ ಉತ್ಪಾದನಾ ತಾಣವಾಗಿ ರೂಪುಗೊಳ್ಳುವ ಆಶಯವನ್ನು ಹೊಂದಿದ್ದೇವೆ.

ಗೆಳೆಯರೇ,

‘ಥೈಲ್ಯಾಂಡ್ 4.0’ ಥೈಲ್ಯಾಂಡ್ ಅನ್ನು ಮೌಲ್ಯ ಆಧಾರಿತ ಆರ್ಥಿಕತೆ, ವಿಜ್ಞಾನದ ಬೆಳವಣಿಗೆ, ತಂತ್ರಜ್ಞಾನ, ಆವಿಷ್ಕಾರ ಮತ್ತು ಕ್ರಿಯಾಶೀಲತೆ ಆಧಾರದಲ್ಲಿ ಪರಿವರ್ತನೆ ಹೊಂದಲು ಹೆಚ್ಚಿನ ಒತ್ತು ನೀಡಲಾಗಿದೆ. ಇದು ಭಾರತದ ಆದ್ಯತೆಗಳಿಗೂ ಹೊಂದಿಕೊಳ್ಳಲಿದೆ ಮತ್ತು ಪೂರಕವಾಗಿದೆ. ಭಾರತದ ಮಹತ್ವದ ಯೋಜನೆಗಳಾದ ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಗಂಗಾ ಪುನರುಜ್ಜೀವನ ಯೋಜನೆ, ಸ್ವಚ್ಛ ಭಾರತ ಮಿಷನ್, ಸ್ಮಾರ್ಟ್ ಸಿಟಿ ಮತ್ತು ಜಲ ಜೀವನ್ ಮಿಷನ್ ಯೋಜನೆಗಳು ಪಾಲುದಾರಿಕೆ ಹೊಂದಲು ಒಳ್ಳೆಯ ಅವಕಾಶಗಳಾಗಿವೆ.

ಗೆಳೆಯರೇ,

ಭಾರತ ಅಭಿವೃದ್ಧಿಹೊಂದಿದರೆ ವಿಶ್ವವೂ ಅಭಿವೃದ್ಧಿ ಹೊಂದುತ್ತದೆ. ಭಾರತದ ಅಭಿವೃದ್ಧಿಯ ನಮ್ಮ ದೃಷ್ಟಿಕೋನ ಇಡೀ ವಿಶ್ವದಲ್ಲಿ ಉತ್ತಮ ವಾತಾವರಣ ನೆಲೆಸುವಂತೆ ಮಾಡುವುದಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ನಾವು 500 ಮಿಲಿಯನ್ ಭಾರತೀಯರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟಕಬಹುದಾದ ಆರೋಗ್ಯ ರಕ್ಷಣಾ ಸೇವೆಗಳನ್ನು ನೀಡುತ್ತಿರುವುದರಿಂದ ಸಹಜವಾಗಿಯೇ ಅದು ಆರೋಗ್ಯಕರ ಭೂಮಿ ನಿರ್ಮಾಣಕ್ಕೆ ಕಾರಣವಾಗಿದೆ. ನಾವು ಕ್ಷಯ ರೋಗವನ್ನು 2025 ರೊಳಗೆ ನಿರ್ಮೂಲನೆ ಮಾಡಬೇಕೆಂದು ನಿರ್ಧರಿಸಿದ್ದೆವು, ಜಾಗತಿಕ ಗುರಿ 2030 ಆಗಿದ್ದರೂ 5 ವರ್ಷ ಮುಂಚೆಯೇ ನಾವು ಗುರಿ ಸಾಧಿಸಲಿದ್ದೇವೆ. ಇದು ಕ್ಷಯ ರೋಗದ ವಿರುದ್ಧ ಜಾಗತಿಕ ಹೋರಾಟವನ್ನು ಇನ್ನಷ್ಟು ಬಲವರ್ಧನೆಗೊಳಿಸುತ್ತದೆ. ಇದೇ ವೇಳೆ ನಮ್ಮ ಉತ್ತಮ ಪದ್ಧತಿಗಳನ್ನು ವಿಶ್ವದೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ದಕ್ಷಿಣ ಏಷ್ಯಾ ಉಪಗ್ರಹ ನಮ್ಮ ಪ್ರಾಂತ್ಯದ ಹಲವು ಜನರಿಗೆ ಉಪಯುಕ್ತವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಮೀನುಗಾರರಿಗೆ ನೆರವಾಗುತ್ತಿದೆ.

ಗೆಳೆಯರೇ,

ನಮ್ಮ ಪೂರ್ವ ಕ್ರಿಯಾ ನೀತಿ ಆಶಯದ ಅಡಿ ನಾವು ಈ ಪ್ರದೇಶದೊಂದಿಗೆ ಉತ್ತಮ ಸಂಪರ್ಕವನ್ನು ವೃದ್ಧಿಸಿಕೊಳ್ಳಲು ವಿಶೇಷ ಗಮನವನ್ನು ಹರಿಸುತ್ತಿದ್ದೇವೆ. ಥೈಲ್ಯಾಂಡ್ ನ ಪಶ್ಚಿಮ ಕರಾವಳಿಯ ಬಂದರು ಮತ್ತು ಭಾರತದ ಪೂರ್ವ ಕರಾವಳಿಯ ಬಂದರು – ಚೆನ್ನೈ, ವಿಶಾಖಪಟ್ಟಣಂ ಮತ್ತು ಕೋಲ್ಕತ್ತಾ ನಡುವೆ ನೇರ ಸಂಪರ್ಕ ಕಾಯ್ದುಕೊಳ್ಳಲು ಕ್ರಮ ಕೈಗೊಂಡಿದ್ದು, ಅದರಿಂದ ನಮ್ಮ ಆರ್ಥಿಕ ಪಾಲುದಾರಿಕೆ ವೃದ್ಧಿಯಾಗಲಿದೆ. ನಾವು ಈ ಎಲ್ಲಾ ಅನುಕೂಲಕರ ಅಂಶಗಳ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು. ಅಲ್ಲದೆ ನಾವು ನಮ್ಮ ಪೂರ್ವಜರಂತೆ ಭೌಗೋಳಿಕ ಸಾಮಿಪ್ಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು.

ಗೆಳೆಯರೇ,

ನಮ್ಮ ಆರ್ಥಿಕತೆಗಳು ಪರಸ್ಪರ ಸಮರ್ಥ ಹಾಗು ಪೂರಕವಾಗಿವೆ. ನಮ್ಮ ಸಂಸ್ಕೃತಿಗಳಲ್ಲಿ ಸಮಾನತೆ ಇದೆ. ಪರಸ್ಪರ ಸ್ವಾಭಾವಿಕ ಸದ್ಭಾವನೆ ಹೊಂದಿದ್ದೇವೆ. ಪರಸ್ಪರ ಗೆಲ್ಲುವ ಪರಿಸ್ಥಿತಿಯ ವ್ಯಾಪಾರ ಪಾಲುದಾರಿಕೆ ವೃದ್ಧಿಯಾಗುತ್ತಿದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನಾನು ಈ ಅಂಶವನ್ನು ಹೇಳುವುದರೊಂದಿಗೆ ಭಾಷಣವನ್ನು ಮುಕ್ತಾಯ ಮಾಡಲು ಬಯಸುತ್ತೇನೆ: ಬಂಡವಾಳ ಹೂಡಿಕೆ ಸುಗಮ ವಹಿವಾಟಿಗಾಗಿ, ಭಾರತಕ್ಕೆ ಬನ್ನಿ. ಆವಿಷ್ಕಾರ ಮತ್ತು ನವೋದ್ಯಮಕ್ಕಾಗಿ ಭಾರತಕ್ಕೆ ಬನ್ನಿ. ಉತ್ತಮ ಪ್ರವಾಸಿ ತಾಣಗಳು ಹಾಗೂ ಜನರ ಆತ್ಮೀಯ ಆತಿಥ್ಯಕ್ಕಾಗಿ ಭಾರತಕ್ಕೆ ಬನ್ನಿ. ಭಾರತ ಮುಕ್ತ ಕೈಗಳೊಂದಿಗೆ ನಿಮ್ಮನ್ನು ಸ್ವಾಗತಿಸಲು ಎದುರು ನೋಡುತ್ತಿದೆ.

ಧನ್ಯವಾದಗಳು,

ತುಂಬಾ ತುಂಬಾ ಧನ್ಯವಾದಗಳು



(Release ID: 1592608) Visitor Counter : 77