ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ವಿಜ್ಞಾನ ಕಾಂಗ್ರೆಸ್ ನ 106 ನೇ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಭಾಷಣ.

Posted On: 03 JAN 2019 2:16PM by PIB Bengaluru

ಭಾರತೀಯ ವಿಜ್ಞಾನ ಕಾಂಗ್ರೆಸ್ ನ 106 ನೇ  ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಭಾಷಣ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ 106ನೇ ಅಧಿವೇಶನದಲ್ಲಿ ಉದ್ಘಾಟನಾ ಭಾಷಣ ಮಾಡಿದರು.

ಈ ವರ್ಷದ ವಿಷಯವಾದ “ ಭವಿಷ್ಯದ ಭಾರತ: ವಿಜ್ಞಾನ ಮತ್ತು ತಂತ್ರಜ್ಞಾನ” ಕುರಿತಂತೆ ಮಾತನಾಡಿದ ಪ್ರಧಾನ ಮಂತ್ರಿ ಅವರು ವಿಜ್ಞಾನ, ತಂತ್ರಜ್ಞಾನ,ಮತ್ತು ಅನ್ವೇಷಣೆಯನ್ನು ಜನತೆಯೊಂದಿಗೆ ಜೋಡಿಸುವುದರಲ್ಲಿ ಭಾರತದ ನಿಜವಾದ ಶಕ್ತಿ ಅಡಗಿದೆ ಎಂದರು.

ಆಚಾರ್ಯರಾದ ಜೆ.ಸಿ.ಬೋಸ್, ಸಿ.ವಿ.ರಾಮನ್, ಮೇಘನಾಥ ಶಾ, ಮತ್ತು ಎಸ್. ಎನ್. ಬೋಸ್ ಸಹಿತ ಭಾರತದ ಹಿಂದಿನ ಪ್ರಖ್ಯಾತ ವಿಜ್ಞಾನಿಗಳನ್ನು ಸ್ಮರಿಸಿದ ಅವರು ಇವರೆಲ್ಲ ’ಕನಿಷ್ಟ ಸಂಪನ್ಮೂಲಗಳು” ಮತ್ತು “ಗರಿಷ್ಟ ಹೋರಾಟ” ದ  ಮೂಲಕ ಜನಸೇವೆ ಮಾಡಿದರು ಎಂದರು.

“ನೂರಾರು ಭಾರತೀಯ ವಿಜ್ಞಾನಿಗಳ ಜೀವನ ಮತ್ತು ಕೆಲಸಗಳು ತಂತ್ರಜ್ಞಾನ ಅಭಿವೃದ್ಧಿ, ಮತ್ತು ರಾಷ್ಟ್ರ ನಿರ್ಮಾಣದ ಆಳವಾದ ಮೂಲಭೂತ ಒಳನೋಟಗಳ ಸಮಗ್ರತೆಯ ಇಷ್ಟಪತ್ರದಂತಿವೆ. ಇಂತಹ ನಮ್ಮ ವಿಜ್ಞಾನದ ಆಧುನಿಕ ದೇವಾಲಯಗಳ ಮೂಲಕ ಭಾರತ ತನ್ನ ವರ್ತಮಾನವನ್ನು ಪರಿವರ್ತಿಸಿಕೊಳ್ಳುತ್ತಿದೆ ಮತ್ತು ಅದರ ಭವ್ಯ ಭವಿತವ್ಯವನ್ನು  ಭದ್ರಗೊಳಿಸಲು ಕಾರ್ಯನಿರತವಾಗಿದೆ “ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.

ಮಾಜಿ ಪ್ರಧಾನ ಮಂತ್ರಿ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿಜೀ ಮತ್ತು ಅಟಲ್ ಬಿಹಾರಿ ವಾಜಪೇಯೀಜೀ ಅವರನ್ನು ಸ್ಮರಿಸಿಕೊಂಡ ಪ್ರಧಾನ ಮಂತ್ರಿ ಅವರು ಶಾಸ್ತ್ರೀಜಿಯವರು  ನಮಗೆ “ ಜೈ ಜವಾನ್ , ಜೈ ಕಿಸಾನ್” ಘೋಷಣೆ ಕೊಟ್ಟರೆ, ಅಟಲ್ ಜೀ ಅವರು “ ಜೈ ವಿಜ್ಞಾನ್ “ ಅದಕ್ಕೆ ಸೇರಿಸಿದರು ಎಂದರು. ಈಗ ಅದಕ್ಕೆ “ಜೈ ಅನುಸಂದಾನ್ “ ಸೇರಿಸಿ ಮುಂದಿನ ಹೆಜ್ಜೆ ಇಡುವ ಕಾಲ ಸನ್ನಿಹಿತವಾಗಿದೆ ಎಂದೂ ಪ್ರಧಾನ ಮಂತ್ರಿ ಹೇಳಿದರು.

ವಿಜ್ಞಾನದ ಬೆನ್ನಟ್ಟುವಿಕೆಯಿಂದ  ಎರಡು ಉದ್ದೇಶಗಳನ್ನು ಸಾಧಿಸಬಹುದು: ಅಗಾಧವಾದ ಅಥವಾ ನಾಶಕ ಗುಣದ ಜ್ಞಾನದ  ಉತ್ಪಾದನೆ ಮತ್ತು ಸಾಮಾಜಿಕ-ಆರ್ಥಿಕ ಒಳಿತಿಗಾಗಿ ಆ ಜ್ಞಾನದ ಬಳಕೆ  ಎಂದೂ ಪ್ರಧಾನ ಮಂತ್ರಿಗಳು ನುಡಿದರು.

ನಾವು ನಮ್ಮ ಶೋಧನಾ ವಿಜ್ಞಾನ ಪರಿಸರವ್ಯವಸ್ಥೆಯನ್ನು ಬಲಪಡಿಸಿದಂತೆ , ನಾವು ನವೋದ್ಯಮಗಳು ಮತ್ತು ಅನ್ವೇಷಣೆಯತ್ತಲೂ ಗಮನ ಕೊಡಬೇಕು . ಸರಕಾರ ನಮ್ಮ ವಿಜ್ಞಾನಿಗಳಲ್ಲಿ ಅನ್ವೇಷಣೆಯನ್ನು ಉತ್ತೇಜಿಸಲು ಅಟಲ್ ಇನ್ನೋವೇಶನ್ ಆಂದೋಲನವನ್ನು ಆರಂಭಿಸಿದೆ. ಕಳೆದ ನಾಲ್ಕೂ ವರ್ಷಗಳಲ್ಲಿ ಅದಕ್ಕಿಂತ ಹಿಂದಿನ ನಲವತ್ತು ವರ್ಷಗಳಲ್ಲಿ ಸ್ಥಾಪಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತಂತ್ರಜ್ಞಾನ ವ್ಯಾಪಾರೋದ್ಯಮ ಇನ್ಕ್ಯುಬೇಟರುಗಳನ್ನು ಸ್ಥಾಪಿಸಲಾಗಿದೆ ಎಂದವರು ಹೇಳಿದರು.

“ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೇವೆ , ಮನೆ, ಸ್ವಚ್ಚ ಗಾಳಿ, ನೀರು ಮತ್ತು ಇಂಧನ, ಕೈಗಾರಿಕಾ ಉತ್ಪಾದಕತೆ ಹಾಗು ಆಹಾರ ಸಂಸ್ಕರಣೆಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳು ತಮಗೆ ತಾವೇ ಕಟಿಬದ್ದರಾಗಬೇಕು. ವಿಜ್ಞಾನವು ವಿಶ್ವವ್ಯಾಪಿಯಾದರೂ , ತಂತ್ರಜ್ಞಾನ  ಸ್ಥಳೀಯ ಆವಶ್ಯಕತೆಗಳನ್ನು ಪೂರೈಸುವ ಮತ್ತು ಪರಿಸ್ಥಿತಿಗಳನ್ನು ನಿಭಾಯಿಸುವ  ಸೂಕ್ತ ಪರಿಹಾರಗಳನ್ನು ಒಳಗೊಂಡಿರಬೇಕು “ ಎಂದು ಪ್ರಧಾನ ಮಂತ್ರಿ ಹೇಳಿದರು.

ದೊಡ್ಡ ಪ್ರಮಾಣದ ದತ್ತಾಂಶ ವಿಶ್ಲೇಷಣೆ, ಕೃತಕ ಬುದ್ದಿಮತ್ತೆ, ಬ್ಲಾಕ್ ಚೈನ್ ಇತ್ಯಾದಿಗಳು ಕೃಷಿ ವಲಯದಲ್ಲಿಯೂ ಬಳಕೆಗೆ ಬರಬೇಕು, ವಿಶೇಷವಾಗಿ ಸಣ್ಣ ಹಿಡುವಳಿದಾರರ ಸಹಾಯಕ್ಕೆ ಅವುಗಳು ಒದಗಬೇಕು ಎಂದೂ ಪ್ರಧಾನ ಮಂತ್ರಿಗಳು ಅಭಿಪ್ರಾಯಪಟ್ಟರು.

ಜನರಿಗೆ ಜೀವಿಸಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು ಕೆಲಸ ಮಾಡಬೇಕು ಎಂದವರು ಮನವಿ ಮಾಡಿದರು. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಬರ ನಿರ್ವಹಣೆ, ವಿಪತ್ತುಗಳ ಬಗ್ಗೆ ಸಾಕಷ್ಟು ಮುಂಚಿತವಾಗಿ ಸೂಚನೆ ನೀಡುವ ವ್ಯವಸ್ಥೆಗಳು, ನ್ಯೂನ ಪೋಷಣೆ ನಿರ್ವಹಣೆ, ಮಕ್ಕಳಲ್ಲಿ ಮೆದುಳು ರೋಗದಂತಹ  ರೋಗಗಳ ನಿಭಾವಣೆ, ಸ್ವಚ್ಚ ಇಂಧನ, ಸ್ವಚ್ಚ ಕುಡಿಯುವ ನೀರು ಮತ್ತು ಸೈಬರ್ ಭದ್ರತೆಯಂತಹ ವಿಷಯಗಳನ್ನು ಅವರು ಈ ನಿಟ್ಟಿನಲ್ಲಿ ಪ್ರಸ್ತಾವಿಸಿದರು. ಈ ಕ್ಷೇತ್ರಗಳಲ್ಲಿ ಕಾಲ ಮಿತಿಯಾಧಾರದಲ್ಲಿ ಪರಿಹಾರಗಳನ್ನು ಹುಡುಕುವ ಸಂಶೋಧನೆಗಳು ನಡೆಯಬೇಕು ಎಂದರು. 

2018ರಲ್ಲ್ಲಿ ಭಾರತೀಯ ವಿಜ್ಞಾನದ ಪ್ರಮುಖ ಸಾಧನೆಗಳನ್ನು ಪ್ರಧಾನ ಮಂತ್ರಿಯವರು ಪ್ರಸ್ತಾಪಿಸಿದರು, ಅವುಗಳೆಂದರೆ :

·        ವಿಮಾನ ಯಾನ ಗುಣಮಟ್ಟದ ಜೈವಿಕ ಇಂಧನ ಉತ್ಪಾದನೆ.

·        ದಿವ್ಯ ನಯನ್- ದೃಷ್ಟಿ ಹೀನರಿಗೆ ಯಂತ್ರ.

·        ನಾಳದ ಕ್ಯಾನ್ಸರ್ , ಕ್ಷಯ ಮತ್ತು ಡೆಂಗ್ಯೂ ಪತ್ತೆಗೆ ಕಡಿಮೆ ಖರ್ಚಿನ ಉಪಕರಣಗಳು

·        ಸಿಕ್ಕಿಂ ಮತ್ತು ಡಾರ್ಜಿಲಿಂಗ್ ವಲಯದಲ್ಲಿ  ಭೂಕುಸಿತಕ್ಕೆ ಸಂಬಂಧಿಸಿ ರಿಯಲ್ ಟೈಮ್ ಎಚ್ಚರಿಕೆ ನೀಡುವ ವ್ಯವಸ್ಥೆ.

ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಸಾಧನೆಗಳನ್ನು ಕೈಗಾರಿಕಾ ಉತ್ಪನ್ನಗಳ ಮೂಲಕ ವಿಸ್ತರಿಸಲು ವಾಣಿಜ್ಯೀಕರಣದ ಬಲಿಷ್ಟ ವ್ಯವಸ್ಥೆಗಳು ಬೇಕು ಎಂದವರು ಪ್ರತಿಪಾದಿಸಿದರು.

ಸಂಶೋಧನೆ ಎಂದರೆ ಕಲೆ ಮತ್ತು ಮಾನವಿಕಗಳು, ಸಮಾಜ ವಿಜ್ಞಾನಗಳು, ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಮ್ಮಿಲನ ಎಂದು ಪ್ರಧಾನ ಮಂತ್ರಿ ಅವರು ಬಣ್ಣಿಸಿದರು. 

ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿಯ ಶಕ್ತಿಗಳು ನಮ್ಮ ರಾಷ್ಟ್ರೀಯ ಪ್ರಯೋಗಾಲಯಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು, ಐ.ಐ.ಟಿ.ಗಳು, ಐ.ಐ.ಎಸ್.ಸಿ.ಗಳು, ಟಿ.ಐ.ಎಫ್. ಆರ್.ಗಳು ಮತ್ತು ಐ.ಐ.ಎಸ್.ಇ.ಆರ್.ಗಳ ಬೆನ್ನೆಲುಬಿನ ಮೇಲೆ ನಿರ್ಮಾಣವಾಗಿರುವಂತಹವು ಎಂಬುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ರಾಜ್ಯದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಕೂಡಾ ಬಲಿಷ್ಟವಾದ ಸಂಶೋಧನಾ ಪರಿಸರ ವ್ಯವಸ್ಥೆ ಅಭಿವೃದ್ಧಿಗೊಳ್ಳಬೇಕಿದೆ ಎಂದರು.

ಕೇಂದ್ರ ಸರಕಾರವು 3,600  ಕೋ.ರೂ. ಹೂಡಿಕೆಯಲ್ಲಿ ಅಂತರಶಿಸ್ತೀಯ ಸೈಬರ್ ಭೌತಿಕ ವ್ಯವಸ್ಥೆ ರಾಷ್ಟ್ರೀಯ ಮಿಷನ್ನಿಗೆ ಅಂಗೀಕಾರ ನೀಡಿದೆ ಎಂದವರು ಪ್ರಕಟಿಸಿದರು. ಈ ಮಿಷನ್ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ, ಮಾನವ ಸಂಪನ್ಮೂಲಗಳು ಮತ್ತು ಕೌಶಲ್ಯಗಳು , ಅನ್ವೇಷಣೆ, ನವೋದ್ಯಮ ಪರಿಸರ ವ್ಯವಸ್ಥೆ ಮತ್ತು ಬಲಿಷ್ಟ ಕೈಗಾರಿಕಾ ಮತ್ತು ಅಂತಾರಾಷ್ಟ್ರೀಯ ಸಹಯೋಗಕ್ಕೆ ಹಾದಿಯನ್ನು ಸುಲಭಗೊಳಿಸಲಿದೆ ಎಂದರು.

ಬಾಹ್ಯಾಕಾಶ ವಲಯದಲ್ಲಿ ಸಾಧನೆಗಳ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ಅವರು ಕಾರ್ಟೋಸ್ಯಾಟ್ 2 ಮತ್ತು ಇತರ ಉಪಗ್ರಹಗಳ ಯಶೋಗಾಥೆಯನ್ನು ಉಲ್ಲೇಖಿಸಿದರು. 2022 ರಲ್ಲಿ ಗಗನಯಾನ ಮೂಲಕ ಮೂವರು ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ದತೆಗಳು ನಡೆಯುತ್ತಿವೆ ಎಂದ ಅವರು ಅನೇಮಿಯಾದ ರೋಗಿಷ್ಟ ಕೋಶಕ್ಕೆ ಪರಿಣಾಮಕಾರಿ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಸಂಶೋಧನೆಗಳು ಆರಂಭಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

“ಪ್ರಧಾನ ಮಂತ್ರಿಯವರ ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣಾ ಸಲಹಾ ಮಂಡಳಿ” ಯು ಸೂಕ್ತ ವಿಜ್ಞಾನ ಮತ್ತು ತಂತ್ರಜ್ಞಾನ ಮಧ್ಯಪ್ರವೇಶಗಳನ್ನು ರೂಪಿಸಲು, ಭಾಗೀದಾರ ಸಚಿವಾಲಯಗಳ ಜೊತೆ ಸಹಯೋಗಗಳನ್ನು ಚುರುಕುಗೊಳಿಸಲು ಮತ್ತು ಬಹುಭಾಗೀದಾರ ನೀತಿ ಉಪಕ್ರಮಗಳನ್ನು ಅನುಷ್ಟಾನಿಸಲು ನೆರವು ನೀಡುತ್ತದೆ ಎಂದರು.

ನಾವು “ಪ್ರಧಾನ ಮಂತ್ರಿ ಅವರ ಸಂಶೋಧನಾ ಫೆಲೋ ಯೋಜನೆಯನ್ನು “ ಆರಂಭಿಸಿದ್ದೇವೆ, ಇದರಡಿ ದೇಶದ ಅತ್ಯುತ್ತಮ ಸಂಸ್ಥೆಗಳ  ಸಾವಿರ ಪ್ರತಿಭಾವಂತ ಮನಸ್ಸುಗಳಿಗೆ ಐ.ಐ.ಟಿ.ಗಳು ಮತ್ತು ಐ.ಐ.ಎಸ್ಸಿ.ಗಳಲ್ಲಿ ಪಿ.ಎಚ್.ಡಿ. ಕಾರ್ಯಕ್ರಮಗಳಿಗೆ ನೇರ ಪ್ರವೇಶಾವಕಾಶ ಒದಗಿಸಲಾಗುತ್ತದೆ ಎಂದು ಪ್ರಧಾನಿಯವರು ನುಡಿದರು. ಈ ಯೋಜನೆಯಿಂದ ಗುಣಮಟ್ಟದ ಸಂಶೋಧನೆಗೆ ವೇಗ ದೊರೆಯಲಿದೆ ಮತ್ತು ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂಧಿಯ ಕೊರತೆ ನೀಗಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.



(Release ID: 1558543) Visitor Counter : 99