ಪ್ರಧಾನ ಮಂತ್ರಿಯವರ ಕಛೇರಿ

'ಏಕತಾ ಪ್ರತಿಮೆ'ಯನ್ನು ದೇಶಾರ್ಪಣೆ ಮಾಡಿದ ಪ್ರಧಾನಮಂತ್ರಿ 

Posted On: 31 OCT 2018 6:52PM by PIB Bengaluru

'ಏಕತಾ ಪ್ರತಿಮೆ'ಯನ್ನು ದೇಶಾರ್ಪಣೆ ಮಾಡಿದ ಪ್ರಧಾನಮಂತ್ರಿ 
 

ಪ್ರಪಂಚದ ಅತಿದೊಡ್ಡ ಪ್ರತಿಮೆ ಎಂಬ ಹೆಗ್ಗಳಿಕೆಯ ‘ಏಕತಾ ಪ್ರತಿಮೆ’ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಾರ್ಪಣೆ ಮಾಡಿದರು.

ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನೋತ್ಸವದಂದು ಅವರ 182 ಅಡಿ ಎತ್ತರದ ಪ್ರತಿಮೆಯನ್ನು ದೇಶಾರ್ಪಣೆ ಮಾಡಲಾಯಿತು.

'ಏಕತಾ ಪ್ರತಿಮೆ’ಯ ದೇಶಾರ್ಪಣೆಯ ಸಂಕೇತವಾಗಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಹಾಗೂ ಇತರ ಗಣ್ಯರು, ಮಣ್ಣು ಮತ್ತು ನರ್ಮದಾ ಜಲವನ್ನು ಕಲಶಕ್ಕೆ ಸುರಿದರು. ಪ್ರತಿಮೆಗೆ ಪ್ರಧಾನಮಂತ್ರಿ ಅವರು ಅಭಿಷೇಕ ಮಾಡಿದರು. 

ಪ್ರಧಾನಮಂತ್ರಿ ಅವರು ‘ಏಕತೆಯ ಗೋಡೆ’ಯನ್ನು ಉದ್ಘಾಟಿಸಿದರು. 'ಏಕತಾ ಪ್ರತಿಮೆ'ಯ ಪಾದಗಳಿಗೆ ಅವರು ವಿಶೇಷ ಪೂಜೆ ಸಲ್ಲಿಸಿದರು. ವಸ್ತು ಸಂಗ್ರಹಾಲಯ , ವಸ್ತು ಪ್ರದರ್ಶನ ಮತ್ತು ವೀಕ್ಷಕರ ಗ್ಯಾಲರಿಗೆ ಅವರು ಭೇಟಿ ನೀಡಿದರು. 

153 ಮೀಟರ್ ಎತ್ತರದ ವೀಕ್ಷಕರ ಗ್ಯಾಲರಿಯಲ್ಲಿ ಏಕಕಾಲಕ್ಕೆ 200 ಮಂದಿ ವೀಕ್ಷಕರಿಗೆ ಸ್ಥಳಾವಕಾಶವಿದೆ. ಸರ್ದಾರ್ ಸರೋವರದ ಅಣೆಕಟ್ಟು , ಅದರ ಜಲಾಶಯ, ಮತ್ತು ಸತ್ಪುರ ಹಾಗೂ ವಿಂಧ್ಯಾ ಪರ್ವತ ಸಾಲು ಮುಂತಾದ ವಿಹಂಗಮ ದೃಶ್ಯಾವಳಿಗಳನ್ನು ವೀಕ್ಷಕರ ಗ್ಯಾಲರಿಯಿಂದ ನೋಡಬಹುದು. 

ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಐಎಎಫ್ ವಿಮಾನಗಳ ಹಾರಾಟ ಪ್ರದರ್ಶನ ಮತ್ತು ಸಾಂಸ್ಕೃತಿಕ ತಂಡಗಳ ಪ್ರದರ್ಶನಗಳು ಜರುಗಿದವು.

ಈ ಸಂದರ್ಭದಲ್ಲಿ ಭಾರತದ ಜನರಿಗೆ ಶುಭಾಶಯವನ್ನು ಕೋರಿದ ಪ್ರಧಾನಮಂತ್ರಿ ಅವರು, ಇಂದು ಇಡೀ ದೇಶವೇ ರಾಷ್ಟ್ರೀಯ 'ಏಕತಾ ದಿವಸ' ವನ್ನು ಆಚರಿಸುತ್ತಿದೆ ಎಂದು ಹೇಳಿದರು. ಭಾರತದ ಇತಿಹಾಸದಲ್ಲಿ ಇಂದಿನ ದಿನ ವಿಶೇಷತೆಯನ್ನು ಹೊಂದಿದೆ. ಏಕತೆಯ ಪ್ರತಿಮೆ ಮೂಲಕ ಮುಂಬರುವ ದಿನಗಳಿಗಾಗಿ ಬೃಹತ್ ಪ್ರೇರಣೆಯನ್ನು ಭಾರತ ನೀಡಿದೆ. ಈ ಪ್ರತಿಮೆ ಸರ್ದಾರ್ ಪಟೇಲ್ ಅವರ ಧೈರ್ಯ, ಸಾಮರ್ಥ್ಯ ಮತ್ತು ನಿರ್ಣಯಗಳನ್ನು ಮುಂದಿನ ಜನಾಂಗಕ್ಕೆ ಸದಾ ನೆನಪಿಸುತ್ತದೆ. ಸರ್ದಾರ್ ಪಟೇಲರಿಂದಾದ ಭಾರತದ ಏಕೀಕರಣದ ಫಲವಾಗಿ ಇಂದು ದೇಶ ಬೃಹತ್ ಆರ್ಥಿಕ ಮತ್ತು ವ್ಯೂಹಾತ್ಮಕ ಶಕ್ತಿಯಾಗಿ ಮುನ್ನಡೆಯಲು ಸಾಧ್ಯವಾಗಿಸಿದೆ. 

ಆಡಳಿತಾತ್ಮಕ ಸೇವೆಗಳಲ್ಲಿ ಸರ್ದಾರ್ ಪಟೇಲ್ ಅವರ ಸಂಕಲ್ಪವು ಉಕ್ಕಿನಂತ್ತಿತ್ತು ಎಂದು ಪ್ರಧಾನಮಂತ್ರಿ ಅವರು ನೆನಪಿಸಿಕೊಂಡರು. 

ಪ್ರತಿಮೆಗಾಗಿ ತಮ್ಮ ಭೂಮಿಯಿಂದ ಮಣ್ಣು ಮತ್ತು ಕೃಷಿ ಉಪಕರಣಗಳಿಂದ ಉಕ್ಕನ್ನು ನೀಡಿದ ರೈತರ ಸ್ವಾಭಿಮಾನದ ಸಂಕೇತವಾಗಿದೆ ಈ ‘ ಏಕತಾ ಪ್ರತಿಮೆ ’ ಎಂದು ಅವರು ಹೇಳಿದರು. “ಏಕ ಭಾರತ , ಶ್ರೇಷ್ಠ ಭಾರತ” ಎಂಬ ಮಂತ್ರದಿಂದ ಮಾತ್ರ ಭಾರತದ ಯುವಜನತೆಯ ಆಕಾಂಕ್ಷೆಗಳನ್ನುಸಾಧಿಸಲು ಸಾಧ್ಯವಾಗಬಹುದು ಎಂದು ಅವರು ಹೇಳಿದರು. ಈ ಪ್ರತಿಮೆಯ ನಿರ್ಮಾಣ ಕಾರ್ಯದಲ್ಲಿ ಜೊತೆಯಾದ ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿ ಅವರು ಅಭಿನಂದನೆಗಳನ್ನು ಸಲ್ಲಿಸಿದರು. ಈ ಪ್ರದೇಶದಲ್ಲಿ ಅಧಿಕ ಪ್ರಮಾಣದ ಪ್ರವಾಸೋದ್ಯಮ ಅವಕಾಶಗಳನ್ನು ಪ್ರತಿಮೆ ಸೃಷ್ಠಿಸಲಿದೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಪ್ರಸಿದ್ಧ ನಾಯಕರ ಕೊಡುಗೆಗಳನ್ನು ನೆನಪಿಸುವ ಹಲವಾರು ಸ್ಮಾರಕಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ “ ಏಕತಾ ಪ್ರತಿಮೆ” ಮಾತ್ರವಲ್ಲದೆ, ದೆಹಲಿಯಲ್ಲಿ ಸರ್ದಾರ್ ಪಟೇಲ್ ಅವರಿಗೆ ಸಮರ್ಪಿತ ವಸ್ತು ಸಂಗ್ರಹಾಲಯ, ಗಾಂಧಿನಗರದಲ್ಲಿ ಮಹಾತ್ಮ ಮಂದಿರ ಮತ್ತು ದಂಡಿ ಕುಟೀರ, ಪಂಚತೀರ್ಥ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರಿಗೆ ಸಮರ್ಪಿತ, ಹರ್ಯಾಣದಲ್ಲಿ ಸರ್ ಛೋಟು ರಾಮ್ ಪ್ರತಿಮೆ ಮತ್ತು ಕಚ್ ನಲ್ಲಿ ಶ್ಯಾಮ್ಜಿ ಕೃಷ್ಣ ವರ್ಮಾ ಮತ್ತು ವೀರ್ ನಾಯಕ್ ಗೋವಿಂದ ಗುರುಗಳ ಸ್ಮಾರಕಗಳು ಮುಂತಾದವುಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ದೆಹಲಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಮರ್ಪಿತ ವಸ್ತುಸಂಗ್ರಹಾಲಯ, ಮುಂಬಯಿಯಲ್ಲಿ ಶಿವಾಜಿ ಪ್ರತಿಮೆ ಮತ್ತು ದೇಶದಾದ್ಯಂತ ಬುಡಕಟ್ಟು ವಸ್ತುಸಂಗ್ರಹಾಲಯ ಮುಂತಾದವುಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.



(Release ID: 1551712) Visitor Counter : 158