ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

Posted On: 14 JUL 2018 6:22PM by PIB Bengaluru

ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಾರಾಣಸಿಯಲ್ಲಿ ಒಟ್ಟಾರೆ 900 ಕೋಟಿ ರೂಪಾಯಿ ಮೌಲ್ಯದ ಮಹತ್ವದ ಯೋಜನೆಗಳಿಗೆ ಶಂಕುಸ್ಥಾಪನೆ ಅಥವಾ ಚಾಲನೆ ನೀಡಿದರು. ಉದ್ಘಾಟನೆಯಾದ ಯೋಜನೆಗಳಲ್ಲಿ ವಾರಾಣಸಿ ನಗರ ಅನಿಲ ವಿತರಣಾ ಯೋಜನೆ ಮತ್ತು ವಾರಾಣಸಿ – ಬಲ್ಲಿಯಾ ಮೆಮು ರೈಲು ಯೋಜನೆಯೂ ಸೇರಿತ್ತು. ಪಂಚಕೋಶಿ ಪರಿಕ್ರಮ ಮಾರ್ಗ, ಸ್ಮಾರ್ಟ್ ಸಿಟಿ ಮತ್ತು ನಮಾಮಿ ಗಂಗೆ ಯೋಜನೆಗಳ ಅಡಿಯಲ್ಲಿ ವಿವಿಧ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿಯವರು ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರಕ್ಕೂ ಶಿಲಾನ್ಯಾಸ ನೆರವೇರಿಸಿದರು.

 

ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆರಂಭದಲ್ಲೇ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನ 400 ಮೀಟರ್ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದ ಯುವ ಅಥ್ಲೀಟ್ ಹಿಮಾ ದಾಸ್ ಗೆ ಅಭಿನಂದನೆ ಸಲ್ಲಿಸಿದರು.

 

ಕಳೆದ ನಾಲ್ಕು ವರ್ಷಗಳಲ್ಲಿ ಕಾಶಿ ನಗರವನ್ನು ಅದರ ಪ್ರಾಚೀನತೆಯ ಛಾಪನ್ನು ಗಮನದಲ್ಲಿಟ್ಟುಕೊಂಡು 21ನೇ ಶತಮಾನದ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ನವಭಾರತಕ್ಕಾಗಿ ಹೊಸ ಬನಾರಸ್ ಆಧುನಿಕತೆ ಮತ್ತು ಆಧ್ಯಾತ್ಮಿಕತೆಯ ಸಮ್ಮಿಶ್ರಣವಾಗಿ ಅಭಿವೃದ್ಧಿಯಾಗಲಿದೆ ಎಂದರು.

 

ನವ ಬನಾರಸ್ ನ ಮೆರುಗು ಈಗ ಎಲ್ಲೆಡೆ ಗೋಚರಿಸುತ್ತಿದೆ ಎಂದು ಅವರು ಹೇಳಿದರು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬನಾರಸ್ ನಲ್ಲಿ ಗಣನೀಯ ಪ್ರಮಾಣದ ಹೂಡಿಕೆಯಾಗಿದೆ ಎಂದೂ ತಿಳಿಸಿದರು. ಈ ಪ್ರಯತ್ನದ ಭಾಗವಾಗಿ ಇಂದು ಸುಮಾರು 1000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಅಥವಾ ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.

 

ಸಾರಿಗೆಯ ಮೂಲಕ ಪರಿವರ್ತನೆಯ ಮುನ್ನೋಟವನ್ನು ವಿವರಿಸಿದ ಪ್ರಧಾನಮಂತ್ರಿಯವರು ಅಜಂಘರ್ ನಲ್ಲಿಂದು ಶಂಕುಸ್ಥಾಪನೆ ನೆರವೇರಿಸಲಾದ ಪೂರ್ವಾಂಚಲ ಎಕ್ಸ್ ಪ್ರೆಸ್ ಮಾರ್ಗ ಈ ಪ್ರಯತ್ನದ ಭಾಗವೇ ಎಂದು ಹೇಳಿದರು.

 

ವಾರಾಣಸಿ ಈ ವಲಯದಲ್ಲಿ ವೈದ್ಯಕೀಯ ವಿಜ್ಞಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ವಿಶ್ವದರ್ಜೆಯ ಆರೋಗ್ಯ ಸಂಸ್ಥೆ ಅಭಿವೃದ್ಧಿಪಡಿಸಲು ಎಮ್ಸ್ ನೊಂದಿಗೆ ಬಿ.ಎಚ್.ಯು. ಶ್ರಮಿಸಲಿದೆ ಎಂದರು.

 

ವಲಯದಲ್ಲಿ ಮತ್ತು ವಾರಾಣಸಿಯಲ್ಲಿ ಉತ್ತಮ ಸಂಪರ್ಕಕ್ಕಾಗಿ ಕೈಗೊಳ್ಳಲಾಗಿರುವ ಉಪಕ್ರಮಗಳ ಕುರಿತೂ ಪ್ರಧಾನಮಂತ್ರಿಯವರು ಮಾತನಾಡಿದರು. ಕಾಶಿ ಅಂತಾರಾಷ್ಟ್ರೀಯ ಪ್ರವಾಸಿಗರ ಒಂದು ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಲಾದ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದ ಬಗ್ಗೆ ಪ್ರಸ್ತಾಪಿಸಿದರು. ವಾರಾಣಸಿಯ ಜನತೆಗಾಗಿ ಉಡುಗೊರೆಯಾಗಿ ಇದನ್ನು ನೀಡಿದ ಜಪಾನ್ ಪ್ರಧಾನಮಂತ್ರಿ ಶ್ರೀ. ಶಿಂಜೋ ಅಬೆ ಅವರಿಗೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು. ಪ್ರವಾಸೋದ್ಯಮಕ್ಕಾಗಿ ಮತ್ತು ಸ್ವಚ್ಛಭಾರತ ಅಭಿಯಾನದ ಅಡಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಮತ್ತು ಅಲ್ಲಿನ ಜನತೆ ಕೈಗೊಂಡಿರುವ ಉಪಕ್ರಮಗಳನ್ನು ಪ್ರಧಾನಿ ಪ್ರಶಂಸಿಸಿದರು.

 

ನಾಲ್ಕು ವರ್ಷಗಳ ಹಿಂದೆ ವಾರಾಣಸಿಯಲ್ಲಿದ್ದ ಕೆಟ್ಟ ರಸ್ತೆ ಮತ್ತು ಇತರ ಕಳಪೆ ಮೂಲಸೌಕರ್ಯಗಳ ಬಗ್ಗೆ ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಹಿಂದೆ ನಗರದ ತ್ಯಾಜ್ಯ ಯಾವುದೇ ತಪಾಸಣೆ ಇಲ್ಲದೆ ನದಿ ಸೇರುತ್ತಿತ್ತು ಎಂದರು. ಆದರೆ ಇಂದು ಅದಕ್ಕೆ ವಿರುದ್ಧವಾಗಿ, ಗಂಗೋತ್ರಿಯಿಂದ ಸಮುದ್ರಕ್ಕೆ ಸೇರುವ ತನಕ ಗಂಗಾನದಿಯನ್ನು ಶುದ್ಧಗೊಳಿಸುವ ಪ್ರಯತ್ನಗಳು ನಡೆಯುತ್ತಲಿವೆ ಎಂದರು. ತ್ಯಾಜ್ಯ ನೀರು ಸಂಸ್ಕರಣೆಗಾಗಿ ಇರುವ ವಿವಿಧ ಯೋಜನೆಗಳ ಬಗ್ಗೆ ಅವರು ಮಾತನಾಡಿದರು. ಈ ಎಲ್ಲ ಪ್ರಯತ್ನಗಳ ಫಲ ಭವಿಷ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತವೆ ಎಂದು ಅವರು ಹೇಳಿದರು. ವಾರಾಣಸಿಯನ್ನು ಸ್ಮಾರ್ಟ್ ನಗರಿಯಾಗಿ ಮಾಡುವ ಇಂಟಿಗ್ರೇಟೆಡ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಕಾಮಗಾರಿ ಸಂಪೂರ್ಣ ಭರದಿಂದ ನಡೆದಿದೆ ಎಂದರು. ಸ್ಮಾರ್ಟ್ ಸಿಟಿ ಉಪಕ್ರಮ ನಗರಗಳ ಮೂಲಸೌಕರ್ಯ ಸುಧಾರಣೆಗೆ ಮಾತ್ರ ಇರುವ ಅಭಿಯಾನವಲ್ಲ, ಅದು ಭಾರತಕ್ಕೆ ಹೊಸ ಗುರುತು ತರುತ್ತದೆ ಎಂದರು. ಕೈಗಾರಿಕಾ ನೀತಿ ಮತ್ತು ಹೂಡಿಕೆಯ ವಾತಾವರಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಅವರು ಅಭಿನಂದನೆ ಸಲ್ಲಿಸಿ, ಇದರ ಫಲಿತಾಂಶ ಸ್ಪಷ್ಟವಾಗಿ ಕಾಣುತ್ತಿವೆ ಎಂದರು. ಪ್ರಧಾನಮಂತ್ರಿಯವರು, ನೋಯಿಡಾದಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ಸಮ್ ಸಂಗ್ ಮೊಬೈಲ್ ಉತ್ಪಾದನಾ ಘಟಕದ ಪ್ರಸ್ತಾಪ ಮಾಡಿ, ಮೊಬೈಲ್ ಉತ್ಪಾದನಾ ಘಟಕಗಳು ಲಕ್ಷಾಂತರ ಉದ್ಯೋಗ ಸೃಷ್ಟಿಸುತ್ತಿವೆ ಎಂದರು.

 

ನಗರದ ಅನಿಲ ಪೂರೈಕೆ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ವಾರಾಣಸಿಯ 8 ಸಾವಿರ ಮನೆಗಳು ಈಗಾಗಲೇ ಕೊಳವೆ ಮಾರ್ಗದ ಅಡುಗೆ ಅನಿಲ ಪೂರೈಕೆ ಸೌಲಭ್ಯ ಪಡೆದಿವೆ ಎಂದರು. ನಗರದ ಸಾರ್ವಜನಿಕ ಸಾರಿಗೆಗೆ ಸಿಎನ್.ಜಿಯನ್ನು ಇಂಧನವಾಗಿ ಬಳಸುತ್ತಿರುವುದನ್ನೂ ಪ್ರಸ್ತಾಪಿಸಿದರು.

 

ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯಲ್ ಮೆಕ್ರಾನ್ ಅವರನ್ನು ವಾರಾಣಸಿ ನಗರ ಹೇಗೆ ಸ್ವಾಗತಿಸಿತು ಎಂಬುದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. 2019ರ ಜನವರಿಯಲ್ಲಿ ಪ್ರವಾಸಿ ಭಾರತೀಯ ದಿವಸ್ ಸಂದರ್ಭದಲ್ಲಿ ಮತ್ತೊಮ್ಮೆ ತಮ್ಮ ಆತಿಥ್ಯವನ್ನು ಪ್ರದರ್ಶಿಸುವ ಅವಕಾಶ ವಾರಾಣಸಿಗೆ ಶೀಘ್ರ ಬರಲಿದೆ ಎಂದರು.

 *****



(Release ID: 1538716) Visitor Counter : 62