ಸಂಪುಟ

ಪ್ರಧಾನ ಮಂತ್ರಿ ವಯ ವಂದನಾ ಯೋಜನಾ (ಪಿ.ಎಂ. ವಿ.ವಿ.ವೈ.) ಅಡಿಯಲ್ಲಿ ಹಿರಿಯ ನಾಗರಿಕರಿಗೆ ಹೂಡಿಕೆ ಮಿತಿಯನ್ನು 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ದುಪ್ಪಟ್ಟು ಮಾಡುವುದಕ್ಕೆ ಕೇಂದ್ರ ಸಂಪುಟವು ಅಂಗೀಕಾರ ನೀಡಿದೆ.

Posted On: 02 MAY 2018 3:40PM by PIB Bengaluru

ಪ್ರಧಾನ ಮಂತ್ರಿ ವಯ ವಂದನಾ ಯೋಜನಾ (ಪಿ.ಎಂ. ವಿ.ವಿ.ವೈ.) ಅಡಿಯಲ್ಲಿ ಹಿರಿಯ ನಾಗರಿಕರಿಗೆ ಹೂಡಿಕೆ ಮಿತಿಯನ್ನು 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ದುಪ್ಪಟ್ಟು ಮಾಡುವುದಕ್ಕೆ ಕೇಂದ್ರ ಸಂಪುಟವು ಅಂಗೀಕಾರ ನೀಡಿದೆ. 
 

ಪಿ.ಎಂ. ವಿ.ವಿ.ವೈ. ಅಡಿಯಲ್ಲಿ ಹಿರಿಯ ನಾಗರಿಕರಿಗೆ  ತಿಂಗಳಿಗೆ 10,000 ರೂ. ನಿವೃತ್ತಿ ವೇತನಕ್ಕೆ ಅನುಕೂಲ ಮಾಡಿಕೊಡುವ ಚಂದಾದಾರಿಕೆಯ ಅವಧಿಯನ್ನು  2018 ರ ಮೇ 4 ರಿಂದ  2020 ರ ಮಾರ್ಚ್ 31ರ ವರೆಗೆ ವಿಸ್ತರಿಸಿರುವುದು ಹಣಕಾಸು ಸೇರ್ಪಡೆ ಮತ್ತು ಸಾಮಾಜಿಕ ಸುರಕ್ಷೆಗೆ ಸಂಬಂಧಿಸಿ ಸರಕಾರದ ಬದ್ಧತೆಯನ್ನು ಪ್ರತಿನಿಧಿಸುತ್ತದೆ. 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಪ್ರಧಾನ ಮಂತ್ರಿ ವಯ ವಂದನ ಯೋಜನೆಯಡಿ (ಪಿ.ಎಂ.ವಿ.ವಿ.ವೈ.) ಅಡಿಯಲ್ಲಿ ಚಂದಾದಾರಿಕೆ ಕಾಲ ಮಿತಿಯನ್ನು 2018 ರ ಮೇ 4 ರಿಂದ 2020 ರ ಮಾರ್ಚ್ 31 ರವರೆಗೆ ವಿಸ್ತರಿಸಿತು ಮತ್ತು ಹೂಡಿಕೆ ಮಿತಿಯನ್ನು 7.5 ಲಕ್ಷ ರೂ.ಗಳಿಂದ ದುಪ್ಪಟ್ಟು ಮಾಡಿ  15 ಲಕ್ಷ ರೂ.ಗಳಿಗೇರಿಸುವುದಕ್ಕೆ  ಅನುಮೋದನೆ ನೀಡಿತು. ಹಣಕಾಸು ಸೇರ್ಪಡೆ ಮತ್ತು ಸಾಮಾಜಿಕ ಭದ್ರತೆಗೆ ಸಂಬಂಧಿಸಿ ಸರಕಾರದ ಬದ್ಧತೆಯನ್ನು ಈ ಕ್ರಮ ಪ್ರತಿಫಲಿಸುತ್ತದೆ. 

ಇದಲ್ಲದೆ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆಯನ್ನು ಉತ್ತೇಜಿಸುವ ಕ್ರಮವಾಗಿ ಈಗಿರುವ ಯೋಜನೆಯಲ್ಲಿ ಕುಟುಂಬವೊಂದಕ್ಕೆ ಇದ್ದ 7.5 ಲಕ್ಷ ರೂ. ಹೂಡಿಕೆ ಮಿತಿಯನ್ನು ಪರಿಷ್ಕರಿಸಲ್ಪಟ್ಟ  ಪಿ.ಎಂ.ವಿ.ವಿ.ವೈ ಯೋಜನೆಯಡಿಯಲ್ಲಿ 15 ಲಕ್ಷ ರೂ.ಗಳಿಗೆ ಏರಿಸಲಾಗಿದೆ. , ಆ ಮೂಲಕ ಹಿರಿಯ ನಾಗರಿಕರಿಗೆ ವಿಸ್ತರಿತ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಹಿರಿಯ ನಾಗರಿಕರಿಗೆ ತಿಂಗಳೊಂದಕ್ಕೆ 10,000 ರೂ.ಗಳವರೆಗೆ ನಿವೃತ್ತಿವೇತನ ಪಡೆಯಲು ಅವಕಾಶವಾಗುತ್ತದೆ. 

 ಪಿ.ಎಂ.ವಿ.ವಿ.ವೈ ಯೋಜನೆಯಡಿಯಲ್ಲಿ 2018 ರ ಮಾರ್ಚ್ ವರೆಗೆ ಒಟ್ಟು 2.23 ಲಕ್ಷ ಹಿರಿಯ ನಾಗರಿಕರು ಪ್ರಯೋಜನ ಪಡೆಯುತ್ತಿದ್ದಾರೆ. ಹಿಂದಿನ ಯೋಜನೆಯಾದ ವರಿಷ್ಟ ಪೆನ್ಶನ್  ಬೀಮಾ ಯೋಜನಾ -2014 ರಡಿಯಲ್ಲಿ ಒಟ್ಟು 3.11 ಲಕ್ಷ ಹಿರಿಯ ನಾಗರಿಕರು ಪ್ರಯೋಜನ ಪಡೆಯುತ್ತಿದ್ದಾರೆ. 

ಹಿನ್ನೆಲೆ: 

ಅನಿರೀಕ್ಷಿತ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಬಡ್ಡಿ ಆದಾಯ ಕುಸಿದು ತೊಂದರೆ ಅನುಭವಿಸುವುದನ್ನು ತಡೆಯುವುದಕ್ಕಾಗಿ  ಪಿ.ಎಂ.ವಿ.ವಿ.ವೈ.ಯನ್ನು ವಯಸ್ಸಾದ ನಾಗರಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಭಾರತೀಯ ವಿಮಾ ನಿಗಮ (ಎಲ್.ಐ.ಸಿ.) ಮೂಲಕ ಅನುಷ್ಟಾನಿಸಲಾಗುತ್ತಿದೆ. ಈ ಯೋಜನೆ  ಹತ್ತು ವರ್ಷ ಕಾಲ ವರ್ಷಕ್ಕೆ ಖಚಿತ 8% ಬಡ್ಡಿದರದ ಪ್ರತಿಫಲದ ಆಧಾರದ ಮೇಲೆ ಪಿಂಚಣಿಯನ್ನು ನೀಡುತ್ತದೆ. ಇದರಲ್ಲಿ ತಿಂಗಳಿಗೊಮ್ಮೆ, ಅಥವಾ ಮೂರು ತಿಂಗಳಿಗೊಮ್ಮೆ, ಇಲ್ಲವೇ ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಆಯ್ಕೆಯ ಅವಕಾಶ ಇರುತ್ತದೆ. ಎಲ್.ಐ.ಸಿ.ಯು ಕೊಡಮಾಡುವ ಪ್ರತಿಫಲ ಮತ್ತು ಮೊದಲೇ ಆಶ್ವಾಸನೆ ಕೊಟ್ಟ  8 % ಖಚಿತ ಪ್ರತಿಫಲದ ನಡುವಿನ ವ್ಯತ್ಯಾಸ ಮೊತ್ತವನ್ನು ವಾರ್ಷಿಕ ಆಧಾರದ ಮೇಲೆ ಭಾರತ ಸರಕಾರ ಸಹಾಯಧನವಾಗಿ ಭರಿಸುತ್ತದೆ.

 

*****



(Release ID: 1531282) Visitor Counter : 118