ಕೃಷಿ ಸಚಿವಾಲಯ
azadi ka amrit mahotsav

ಡ್ರೈಲ್ಯಾಂಡ್ ಕಾಂಗ್ರೆಸ್ 2026 ಕ್ಕಾಗಿ ನವದೆಹಲಿಯಲ್ಲಿ ಜಾಗತಿಕ ಸಮುದಾಯದ ಸಮಾವೇಶ; ಆರು ಪ್ರಮುಖ ವಿಷಯಗಳ ಕುರಿತು 800ಕ್ಕೂ ಹೆಚ್ಚು ಜಾಗತಿಕ ತಜ್ಞರಿಂದ ಚರ್ಚೆ

ಪ್ರಕಟಣಾ ದಿನಾಂಕ: 09 SEP 2026 7:23PM by PIB Bengaluru

ಶುಷ್ಕ ಭೂಮಿ (ಒಣಭೂಮಿ) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ವೈಜ್ಞಾನಿಕ, ನೀತಿ ನಿರೂಪಣೆ ಮತ್ತು ಕೃಷಿ ಸಮುದಾಯಗಳು 2026ರ ಸೆಪ್ಟೆಂಬರ್ 10-12 ರವರೆಗೆ ನವದೆಹಲಿಯಲ್ಲಿ 'ದಕ್ಷಿಣ-ದಕ್ಷಿಣ ಸಹಕಾರದೊಂದಿಗೆ ಶುಷ್ಕಭೂಮಿ ಕೃಷಿಯ ರೂಪಾಂತರ' ಎಂಬ ವಿಷಯದ ಅಡಿಯಲ್ಲಿ ಮೂರು ದಿನಗಳ 'ಜಾಗತಿಕ ಶುಷ್ಕಭೂಮಿ ಕಾಂಗ್ರೇಸ್ 2026'  ಕ್ಕಾಗಿ ಸಮಾವೇಶಗೊಳ್ಳಲಿವೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಮತ್ತು ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ (ICRISAT) ಜಂಟಿಯಾಗಿ ಆಯೋಜಿಸಿರುವ ಈ ಕಾಂಗ್ರೆಸ್ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿ ನಡೆಯಲಿದ್ದು, ಇದು ಐಸಿಎಆರ್-ಇಕ್ರಿಸ್ಯಾಟ್ ಪಾಲುದಾರಿಕೆಯ 50 ವರ್ಷಗಳ ಐತಿಹಾಸಿಕ ಆಚರಣೆಯಾಗಿಯೂ ಕಾರ್ಯನಿರ್ವಹಿಸಲಿದೆ.

ಈ ಕಾಂಗ್ರೆಸ್ ಅತ್ಯಂತ ನಿರ್ಣಾಯಕ ಸಮಯದಲ್ಲಿ ಆಯೋಜನೆಗೊಳ್ಳುತ್ತಿದೆ. ಶುಷ್ಕ ಭೂಮಿಗಳು ವಿಶ್ವದ ಭೂಪ್ರದೇಶದ ಸುಮಾರು ಶೇಕಡಾ 45 ರಷ್ಟನ್ನು ಹೊಂದಿದ್ದು, ಎರಡು ಶತಕೋಟಿಗೂ ಹೆಚ್ಚು ಜನರಿಗೆ ನೆಲೆಯಾಗಿವೆ, ಅವರಲ್ಲಿ ಹೆಚ್ಚಿನವರು ಹವಾಮಾನ ವೈಪರೀತ್ಯ, ಭೂಮಿ ಕ್ಷೀಣಿಸುವಿಕೆ, ನೀರಿನ ಅಭಾವ ಮತ್ತು ಬದಲಾಗುತ್ತಿರುವ ಮಾರುಕಟ್ಟೆಗಳನ್ನು ಎದುರಿಸುತ್ತಿರುವ ಸಣ್ಣ ಹಿಡುವಳಿ ರೈತರಾಗಿದ್ದಾರೆ.

ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶದಲ್ಲಿ, ಏಷ್ಯಾ, ಆಫ್ರಿಕಾ ಮತ್ತು ಅಮೆರಿಕ ಖಂಡಗಳ 800 ಕ್ಕೂ ಹೆಚ್ಚು ವಿಜ್ಞಾನಿಗಳು, ನೀತಿ ನಿರೂಪಕರು, ರೈತ ಪ್ರತಿನಿಧಿಗಳು ಮತ್ತು ಅಭಿವೃದ್ಧಿ ಪಾಲುದಾರರು ಆರು ಪ್ರಮುಖ ವಿಷಯಗಳ ಮೇಲೆ — ತಳಿ ಅಭಿವೃದ್ಧಿ, ಹವಾಮಾನ ಸ್ಥಿತಿಸ್ಥಾಪಕತ್ವ, ಪೋಷಣೆ ಮತ್ತು ಮಾರುಕಟ್ಟೆಗಳು, ಕೃಷಿ ವ್ಯವಸ್ಥೆಗಳು, ಬಿತ್ತನೆ ಬೀಜ ವ್ಯವಸ್ಥೆಗಳು, ಮತ್ತು ಲಿಂಗ ಹಾಗೂ ಯುವಜನರ ಒಳಗೊಳ್ಳುವಿಕೆ — ಪ್ಯಾನಲ್ ಚರ್ಚೆಗಳು, ಪ್ರಮುಖ ಮತ್ತು ಪ್ರಮುಖ ಪ್ರಸ್ತುತಿಗಳು, ಸಮಾನಾಂತರ ಗೋಷ್ಠಿಗಳು ಮತ್ತು ಪೋಸ್ಟರ್ ಪ್ರದರ್ಶನಗಳ ಮೂಲಕ ಚರ್ಚಿಸಲಿದ್ದಾರೆ.

ಈ ಕಾಂಗ್ರೆಸ್ ತನ್ನ ಅಂತಿಮ ದಿನದಂದು ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ವಿಶ್ವಸಂಸ್ಥೆಯ ದಿನವನ್ನು ವಿಶೇಷ ಸಮಾರಂಭ ಮತ್ತು ಸಿಜಿಐಎಆರ್ (CGIAR) ನೊಂದಿಗೆ ಜಂಟಿಯಾಗಿ ಆಯೋಜಿಸಲಾದ ಕೃಷಿ ಸಂಶೋಧನೆಯಲ್ಲಿ ದಕ್ಷಿಣ-ದಕ್ಷಿಣ ಮತ್ತು ತ್ರಿಕೋನ ಸಹಕಾರವನ್ನು (SSTC) ಮುನ್ನಡೆಸುವ ಕುರಿತಾದ ನಿಗದಿತ ಗೋಷ್ಠಿಗಳೊಂದಿಗೆ ಆಚರಿಸಲಿದೆ.

ಸಮಾವೇಶದ ನಡಾವಳಿಗಳು 'ಶುಷ್ಕಭೂಮಿಯ ಮೇಲಿನ ದೆಹಲಿ ಘೋಷಣೆ' (3D) ಯನ್ನು ಅಳವಡಿಸಿಕೊಳ್ಳುವುದರೊಂದಿಗೆ, ಹೊಸ ಪಾಲುದಾರಿಕೆಗಳು, ತಿಳುವಳಿಕಾಪತ್ರಗಳು (MOUs) ಮತ್ತು ಶುಷ್ಕಭೂಮಿ ವಿಜ್ಞಾನಕ್ಕೆ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸುವ ಪ್ರಶಸ್ತಿಗಳ ಪ್ರಕಟಣೆಯೊಂದಿಗೆ ಮುಕ್ತಾಯಗೊಳ್ಳಲಿವೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಖ್ಯ ಅತಿಥಿಯಾಗಿ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರೊಂದಿಗೆ ಇಕ್ರಿಸ್ಯಾಟ್ ಮಹಾನಿರ್ದೇಶಕರಾದ ಡಾ. ಹಿಮಾಂಶು ಪಾಠಕ್, ಇಕ್ರಿಸ್ಯಾಟ್ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ. ಕ್ಯಾಥಿ ರೀಡ್, ಡಿಎಆರ್‌ಇ ಕಾರ್ಯದರ್ಶಿ ಮತ್ತು ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಮ್. ಎಲ್. ಜಾಟ್; ಸಿಜಿಐಎಆರ್ ಮುಖ್ಯ ವಿಜ್ಞಾನಿ ಡಾ. ಸ್ಯಾಂಡ್ರಾ ಮಿಲಾಚ್, ಐಸಿಎಆರ್ ಮಾಜಿ ಮಹಾನಿರ್ದೇಶಕರಾದ ಡಾ. ಆರ್. ಎಸ್. ಪರೋಡಾ, ಡಾ. ಪಂಜಾಬ್ ಸಿಂಗ್, ಡಾ. ಟಿ. ಮೊಹಾಪಾತ್ರ, ನೈಜೀರಿಯಾದ ಕಾನೊದಲ್ಲಿರುವ ಬಯೇರೊ ವಿಶ್ವವಿದ್ಯಾಲಯದ ಶುಷ್ಕಭೂಮಿ ಕೃಷಿ ಕೇಂದ್ರದ ನಿರ್ದೇಶಕರಾದ ಪ್ರೊ. ಎಸ್‌ . ಜಿ. ಮೊಹಮ್ಮದ್ ಮತ್ತು ಇಕ್ರಿಸ್ಯಾಟ್ ಮಾಜಿ ಮಹಾನಿರ್ದೇಶಕರಾದ ಡಾ. ವಿಲಿಯಂ ಡಾರ್ ಹಾಗೂ ಶುಷ್ಕಭೂಮಿ ಕೃಷಿಯನ್ನು ಮುನ್ನಡೆಸುತ್ತಿರುವ ವಿಶ್ವದಾದ್ಯಂತದ ಇತರ ವಿಶಿಷ್ಟ ನಾಯಕರು, ವಿಜ್ಞಾನಿಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2308523) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी