ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀರಾಮ್ ವಾಣಿಜ್ಯ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಹಲವು ವರ್ಷಗಳಿಂದ, ಈ ಸಂಸ್ಥೆಯು ತಲೆಮಾರುಗಳ ವಿದ್ಯಾರ್ಥಿಗಳಿಗೆ ಕಲಿಯಲು, ಬೆಳೆಯಲು ಮತ್ತು ಬದಲಾವಣೆಯನ್ನು ತರಲು ಅವಕಾಶವನ್ನು ನೀಡಿದೆ: ಪ್ರಧಾನಮಂತ್ರಿ

ನೀತಿ ಪಾರ್ಶ್ವವಾಯುವಿನಿಂದ ನೀತಿ ಚಲನಶೀಲತೆಯವರೆಗೆ, ಭಾರತವು ಬಹಳ ದೂರ ಸಾಗಿ ಬಂದಿದೆ: ಪ್ರಧಾನಮಂತ್ರಿ

ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಶೇ.7.8ರಷ್ಟು ಬೆಳವಣಿಗೆ ಅದರ ಆರ್ಥಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ

140 ಕೋಟಿ ಭಾರತೀಯರು ಒಟ್ಟಾಗಿ ಭಾರತವನ್ನು ವಿಕಸಿತ ಮತ್ತು ಆತ್ಮನಿರ್ಭರ ಇವೆರಡನ್ನೂ ಮಾಡಲಿದ್ದಾರೆ: ಪ್ರಧಾನಮಂತ್ರಿ

ಭಾರತ ಹೊಸ ವೇಗದಲ್ಲಿ ಮುನ್ನಡೆಯುತ್ತಿದೆ ಒಂದು ಕಾಲದಲ್ಲಿ ದಶಕಗಳನ್ನು ತೆಗೆದುಕೊಳ್ಳುತ್ತಿದ್ದಂತಹವು ಈಗ ಕೆಲವೇ ವರ್ಷಗಳಲ್ಲಿ ಸಾಧ್ಯವಾಗುತ್ತಿದೆ: ಪ್ರಧಾನಮಂತ್ರಿ

ಭಾರತೀಯರು ವಿಶ್ವದ ಉನ್ನತ ಕಂಪನಿಗಳನ್ನು ಮುನ್ನಡೆಸಲು ಸಾಧ್ಯವಾದರೆ, ಭಾರತೀಯ ಕಂಪನಿಗಳು ಸಹ ಜಗತ್ತನ್ನು ಮುನ್ನಡೆಸಬಲ್ಲವು, ಇವೆಲ್ಲವೂ ಸಾಧ್ಯ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 05 SEP 2026 9:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ (ಎಸ್.ಆರ್.ಸಿ.ಸಿ.) ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂದರ್ಭವು ಕಾಲೇಜು ಮತ್ತು ರಾಷ್ಟ್ರದ ಶಿಕ್ಷಣ ಕ್ಷೇತ್ರ ಎರಡಕ್ಕೂ ಐತಿಹಾಸಿಕವಾಗಿದೆ, ಏಕೆಂದರೆ ಅನೇಕ ತಲೆಮಾರುಗಳು ಇಲ್ಲಿ ಒಟ್ಟುಗೂಡಿವೆ ಎಂದರು. "ನಾನು ಸಂಸ್ಥಾಪಕ ಶ್ರೀ ರಾಮ್ ಜೀ ಅವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ದೂರದೃಷ್ಟಿಗೆ ನಮಿಸುತ್ತೇನೆ" ಎಂದು ಶ್ರೀ ಮೋದಿ ಹೇಳಿದರು.

ಕಾಲೇಜು ಮತ್ತು ರಾಷ್ಟ್ರದ ಶಿಕ್ಷಣ ಕ್ಷೇತ್ರಗಳೆರಡಕ್ಕೂ 100 ವರ್ಷಗಳ ಮೈಲಿಗಲ್ಲಿನ ಆಳವಾದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಂಸ್ಥಾಪಕ ಶ್ರೀ ರಾಮ್ ಜೀ ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ಅವರ ದೂರದೃಷ್ಟಿಗೆ ನಮಸ್ಕರಿಸಿದರು. "ಒಂದು ಸಂಸ್ಥೆಯು 100 ವರ್ಷಕ್ಕೆ ಕಾಲಿಟ್ಟಾಗ, ಅದು ಸಾಧನೆಗಳು ಮತ್ತು ಸ್ಫೂರ್ತಿಗಳ ಸಾಗರವಾಗುತ್ತದೆ" ಎಂದು ಶ್ರೀ ಮೋದಿ ಹೇಳಿದರು.

ದರಿಯಾಗಂಜ್ ಸಾಧಾರಣ ಸಂಸ್ಥೆಯಿಂದ ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿರುವ ಕಾಲೇಜಿನ ಭವ್ಯ ವಿಕಾಸವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಇದು ತಲೆಮಾರುಗಳನ್ನು ರೂಪಿಸಿದೆ ಎಂದರು. ಇಂದು ಸಂಸ್ಥೆಯ ಹೆಸರಿನೊಂದಿಗೆ ಅಪಾರ ಹೆಮ್ಮೆ ಜೋಡಣೆಯಾಗಿರುವುದನ್ನು  ಅವರು ಗುರುತಿಸಿದರು. "ಇಂದಿಗೂ ದೆಹಲಿ ವಿಶ್ವವಿದ್ಯಾಲಯದಲ್ಲಿ, ನೀವು ಎಸ್ ಆರ್ ಸಿಸಿಯಿಂದ ಬಂದಿದ್ದೀರಿ ಎಂದು ಹೇಳುವುದೇ ಸ್ವತಃ ಒಂದು ಹೆಮ್ಮೆಯಾಗಿದೆ" ಎಂದು ಶ್ರೀ ಮೋದಿ ದೃಢಪಡಿಸಿದರು.

ಕಾಲೇಜಿನ ಅದ್ಭುತ ಪರಂಪರೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಎಸ್‌ಆರ್‌ಸಿಸಿ ಹಳೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆಯನ್ನು ಜಾಗತಿಕವಾಗಿ ಉನ್ನತೀಕರಿಸಿದ ಮೂಲ ಮಾರ್ಗದರ್ಶಕರು ಎಂದು ಶ್ಲಾಘಿಸಿದರು. ದಿವಂಗತ ಅರುಣ್ ಜೇಟ್ಲಿ ಮತ್ತು ಸಂಜೀವ್ ಸನ್ಯಾಲ್ ಅವರಂತಹ ಗಮನಾರ್ಹ ಹಳೆಯ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿದ ತಮ್ಮ ವೈಯಕ್ತಿಕ ಅನುಭವಗಳನ್ನು ಸ್ಮರಿಸಿದ ಅವರು, ಇಲ್ಲಿಯ ಪದವೀಧರರು ಕಲಾವಿದರಾಗಿ, ರಾಜಕಾರಣಿಗಳಾಗಿ ಮತ್ತು ನ್ಯಾಯಾಧೀಶರಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. "ಇದರರ್ಥ, ಎಸ್ಆರ್ಸಿಸಿಯ ಹಳೆಯ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ" ಎಂದು ಶ್ರೀ ಮೋದಿ ಹೇಳಿದರು.

ಪ್ರಸ್ತುತ ಸಮಾರಂಭದ ಸುತ್ತಲಿನ ವ್ಯಾಪಕ ನೆನಪುಗಳ ಭಾವನಾ ಪ್ರಪಂಚವನ್ನು (ನಾಸ್ಟಾಲ್ಜಿಯಾವನ್ನು) ಪ್ರತಿಬಿಂಬಿಸಿದ ಪ್ರಧಾನಮಂತ್ರಿಯವರು, ಕಾಲೇಜಿನಲ್ಲಿ ತಮ್ಮ ಹಿಂದಿನ 2013 ರ ಭಾಷಣವನ್ನು ಜನರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ ಮತ್ತು ಪುನರಾವರ್ತಿಸುತ್ತಿದ್ದಾರೆ ಎಂದರು. ಭಾಷಣವು ಬಹಳ ದೊಡ್ಡ ಶಾಶ್ವತ ಅಲೆಯನ್ನು ಸೃಷ್ಟಿಸಿತು, ಅದರ ಸಕಾರಾತ್ಮಕ ಪರಿಣಾಮವು 13 ರಿಂದ 14 ವರ್ಷಗಳ ನಂತರವೂ ಸಂಪೂರ್ಣವಾಗಿ ಹಾಗೇ ಉಳಿದಿದೆ ಎಂದು ಅವರು ಉಲ್ಲೇಖಿಸಿದರು. "ದೇಶಕ್ಕಾಗಿ ನನ್ನನ್ನು ಹೃತ್ಪೂರ್ವಕವಾಗಿ ಸಮರ್ಪಿಸಿಕೊಳ್ಳುವುದು ದಿನದ ನನ್ನ ಮಾತುಗಳಲ್ಲಿ ವ್ಯಕ್ತವಾದ ಆಂತರಿಕ ಭಾವನೆಯಾಗಿದೆ" ಎಂದು ಶ್ರೀ ಮೋದಿ ದೃಢಪಡಿಸಿದರು.

ಹಿಂದಿನ ಹೋರಾಟಗಳನ್ನು ಇಂದಿನ ಸಾಧನೆಗಳೊಂದಿಗೆ ಹೋಲಿಸಿದ ಪ್ರಧಾನಮಂತ್ರಿಯವರು, ಸಶಸ್ತ್ರ ಪಡೆಗಳು ಆತ್ಮವಿಶ್ವಾಸದಿಂದ ಶತ್ರುಗಳ ಮೇಲೆ ಅವರ  ಮನೆಗಳ ಮೇಲೆ  ದಾಳಿ ಮಾಡಿವೆ ಮತ್ತು ಜಮ್ಮು ಹಾಗು ಕಾಶ್ಮೀರದಿಂದ ಈಶಾನ್ಯದವರೆಗೆ ಶಾಂತಿಯನ್ನು ಪುನಃಸ್ಥಾಪಿಸುವುದರೊಂದಿಗೆ ಭಯೋತ್ಪಾದನೆಯನ್ನು ಸೋಲಿಸಲಾಗಿದೆ ಎಂದು ಒತ್ತಿ ಹೇಳಿದರು. ಭಾರತದ ನೀತಿ ಚಲನಶೀಲತೆ ಮತ್ತು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ಸ್ಥಾನಮಾನವನ್ನು ಜಗತ್ತು ಈಗ ಶ್ಲಾಘಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. "ಪಶ್ಚಿಮ ಏಷ್ಯಾ ಯುದ್ಧ ಮತ್ತು ಜಾಗತಿಕ ವ್ಯಾಪಾರ ಅಡೆತಡೆಗಳ ನಡುವೆ ಶೇಕಡಾ 7.8 ರಷ್ಟು ತ್ರೈಮಾಸಿಕ ಬೆಳವಣಿಗೆಯನ್ನು ಸಾಧಿಸಿರುವುದು ಭಾರತದ ಆಂತರಿಕ ಸಾಮರ್ಥ್ಯವನ್ನು ತೋರಿಸುತ್ತದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ನಿರಂತರ ಟೀಕಾಕಾರರ ಹೇಳಿಕೆಗಳನ್ನು ಖಂಡಿಸಲು  ಆರ್ಥಿಕ ದತ್ತಾಂಶವನ್ನು ಪ್ರಸ್ತುತಪಡಿಸಿದ ಪ್ರಧಾನಮಂತ್ರಿಯವರು, ಏಪ್ರಿಲ್ ಮತ್ತು ಜೂನ್ ನಡುವೆ ವಿದ್ಯುತ್ ಉತ್ಪಾದನೆಯು ಶೇಕಡಾ 9 ರಷ್ಟು ಹೆಚ್ಚಾಗಿದೆ,  ಒಟ್ಟಾರೆ ವಾಹನ ಮಾರಾಟವು ಶೇಕಡಾ 20 ಕ್ಕಿಂತ ಹೆಚ್ಚಾಗಿದೆ, ಇದು ದ್ವಿಚಕ್ರ ವಾಹನಗಳಲ್ಲಿ ಶೇಕಡಾ 20 ರಷ್ಟು ಮತ್ತು ತ್ರಿಚಕ್ರ ವಾಹನಗಳಲ್ಲಿ ಸುಮಾರು 30 ಪ್ರತಿಶತದಷ್ಟು ಬೆಳವಣಿಗೆಯಿಂದ ಪ್ರೇರಿತವಾಗಿದೆ ಎಂದು ವಿವರಿಸಿದರು. ಉಕ್ಕು ಮತ್ತು ಸಿಮೆಂಟ್ ಬಳಕೆಯಲ್ಲಿ ಶೇಕಡಾ 8 ರಷ್ಟು ಹೆಚ್ಚಳವು ನಿರ್ಮಾಣ, ವಸತಿ ಮತ್ತು ವಾಣಿಜ್ಯ ಚಟುವಟಿಕೆಗಳು ವೇಗವಾಗಿ ವಿಸ್ತರಿಸುತ್ತಿವೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ವಾದಿಸಿದರು. "ಇದರ ಹೊರತಾಗಿಯೂ, 2013 ರಲ್ಲಿ ಗಾಜು ಅರ್ಧ ಖಾಲಿ ಎಂದು ನೋಡುತ್ತಿದ್ದವರ ಮನಸ್ಥಿತಿ ಇಂದಿಗೂ ಅದೇ ಜಾಡಿನಲ್ಲಿದೆ" ಎಂದು ಶ್ರೀ ಮೋದಿ ಹೇಳಿದರು.

2013ರ ಜನಪರ ಉತ್ತಮ ಆಡಳಿತದ (ಪಿ2ಜಿ2) ಭರವಸೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಹಿಂದಿನ ಆಡಳಿತಗಳ ಪ್ರತಿಕ್ರಿಯಾತ್ಮಕ ವಿಧಾನವನ್ನು ತಮ್ಮ ಸರ್ಕಾರ ಶಾಶ್ವತವಾಗಿ ತ್ಯಜಿಸಿದೆ ಎಂದು ಹೇಳಿದರು. ಜನ್ ಧನ್ ಯೋಜನೆಯ 12 ವರ್ಷಗಳ ಯಶಸ್ಸನ್ನು ಅವರು ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದರು, ಮಾರ್ಚ್ 2014 ರವರೆಗೆ, ಭಾರತದ 1.25 ಶತಕೋಟಿ ಜನಸಂಖ್ಯೆಯಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಜನರು ಬ್ಯಾಂಕ್ ಖಾತೆಗಳನ್ನು ಹೊಂದಿರಲಿಲ್ಲ, ಆದರೆ ಯೋಜನೆಯು ಈಗ ಸುಮಾರು 60 ಕೋಟಿ ನಾಗರಿಕರನ್ನು ಸಂಯೋಜಿಸಿದೆ ಎಂದು ನೆನಪಿಸಿಕೊಂಡರು. "ಇಂದು ದೇಶದ ಪ್ರತಿಯೊಂದು ಕುಟುಂಬವೂ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದಿದೆ, ಇದು ಭಾರತದ ಫಿನ್ಟೆಕ್ ಕ್ರಾಂತಿಗೆ ಅಡಿಪಾಯವನ್ನು ರೂಪಿಸಿದೆ" ಎಂದು ಶ್ರೀ ಮೋದಿ ದೃಢಪಡಿಸಿದರು.

'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಅಪಹಾಸ್ಯ ಮಾಡಿದ್ದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಉಪಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರಲ್ಲದೆ ರಾಷ್ಟ್ರವನ್ನು ಬೃಹತ್ ಆಮದುದಾರನಿಂದ ಪ್ರಮುಖ ರಫ್ತುದಾರನಾಗಿ ಪರಿವರ್ತಿಸುವಲ್ಲಿ ಅದರ ಸ್ಮರಣೀಯ ಯಶಸ್ಸನ್ನು ಸಂಭ್ರಮದಿಂದ ಉಲ್ಲೇಖಿಸಿದರು. ಸ್ಮಾರ್ಟ್ಫೋನ್ ರಫ್ತು ಈಗ 2.5 ಲಕ್ಷ ಕೋಟಿ ರೂ.ಗಳನ್ನು ಮೀರಿದೆ, ಆದರೆ ದೇಶೀಯ ರಕ್ಷಣಾ ಉತ್ಪಾದನೆಯು ಸಾರ್ವಕಾಲಿಕ ಗರಿಷ್ಠ ಸುಮಾರು 2 ಲಕ್ಷ ಕೋಟಿ ರೂ.ಗಳನ್ನು ತಲುಪಿದೆ, 2013-14ರ ರಕ್ಷಣಾ ರಫ್ತು ಕೇವಲ 600-700 ಕೋಟಿ ರೂ.ಗಳಷ್ಟಿದ್ದುದು ಇಂದು 40,000 ಕೋಟಿ ರೂ.ಗಳ ಬೃಹತ್ ಉದ್ಯಮವಾಗಿ ಪರಿವರ್ತನೆಯಾಗಿದೆ ಎಂದು ಅವರು ಹೆಮ್ಮೆಯಿಂದ ಹಂಚಿಕೊಂಡರು. "ನಾನು ಸಣ್ಣ ಮತ್ತು ಸುಲಭ ಗುರಿಗಳೊಂದಿಗೆ ನಡೆಯುವ ವ್ಯಕ್ತಿಯಲ್ಲ; ನಾನು ದೇಶಕ್ಕಾಗಿ ದೊಡ್ಡ ಗುರಿಗಳನ್ನು ನಿಗದಿಪಡಿಸಿದ್ದೇನೆ ಮತ್ತು ಅವುಗಳನ್ನು ಸಾಧಿಸಲು ನನ್ನ ಹೃದಯ ಮತ್ತು ಆತ್ಮವನ್ನು ಹಾಕಿದ್ದೇನೆ" ಎಂದು ಶ್ರೀ ಮೋದಿ ದೃಢಪಡಿಸಿದರು.

ಯುವಜನರು ಮತ್ತು 140 ಕೋಟಿ ಭಾರತೀಯರ ಸಾಮರ್ಥ್ಯದ ಬಗ್ಗೆ ಅಪಾರ ನಂಬಿಕೆಯನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಸ್ವಾವಲಂಬಿ ಮತ್ತು ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ದಿಟ್ಟ ದೃಷ್ಟಿಕೋನವನ್ನು ಮಂಡಿಸಿದರು. ಕೃಷಿ ರಫ್ತಿನಲ್ಲಿ ಸೂಪರ್ ಪವರ್ ಆಗುವುದು, ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವುದು ಮತ್ತು ಅಂತಿಮವಾಗಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವುದು ಸೇರಿದಂತೆ ಮಹತ್ವಾಕಾಂಕ್ಷೆಯ ಭವಿಷ್ಯದ ಮೈಲಿಗಲ್ಲುಗಳನ್ನು ಅವರು ವಿವರಿಸಿದರು. "ಇವು ಕೇವಲ ಆಡು ಮಾತುಗಳಲ್ಲ, ಇವು ನಮ್ಮ ದೃಢ ನಿರ್ಣಯಗಳು" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಕೋ-ಆಪ್, ಕ್ರಾಸ್ರೋಡ್ಸ್ ಮತ್ತು ಬಿಸಿನೆಸ್ ಕಾನ್ಕ್ಲೇವ್ನಲ್ಲಿ ಚಹಾದ ಉತ್ಸಾಹಭರಿತ ಕ್ಯಾಂಪಸ್ ಜೀವನದಿಂದ ಹೊರಗಿನ ಪ್ರಪಂಚದ ವಾಸ್ತವತೆಗಳಿಗೆ ಮಾತುಗಳನ್ನು ಹೊರಳಿಸಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಪ್ರಗತಿಯನ್ನು ಕಡ್ಡಾಯವಾಗಿ, ಬಲವಂತವಾಗಿ ವಿರೋಧಿಸುವ ಸಿನಿಕ ವ್ಯಕ್ತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು. ವಿಶ್ವದ ಅತಿ ಎತ್ತರದ ಪ್ರತಿಮೆ, ಹೈಸ್ಪೀಡ್ ರೈಲುಗಳು, ಯುಪಿಐ ಮತ್ತು ಹೊಸ ಸಂಸತ್ ಕಟ್ಟಡದಂತಹ ಪ್ರಮುಖ ಯೋಜನೆಗಳನ್ನು ಟೀಕೆಕಾರರು ಅಭ್ಯಾಸ ಬಲದಿಂದ ಹೇಗೆ ಪ್ರಶ್ನಿಸುತ್ತಿದ್ದರು ಎಂಬುದರತ್ತ ಅವರು ಗಮನಸೆಳೆದರು. "ಆದರೆ ಭಾರತವು ಉತ್ತರವನ್ನು ನೀಡಿತು: ದೇಶಕ್ಕೆ ಅಗತ್ಯವಾದುದನ್ನು ಮಾಡುವುದನ್ನು ತಡೆಯಲು ಭಾರತಕ್ಕೆ ಯಾರಿಂದಲೂ ಸಾಧ್ಯವಿಲ್ಲ" ಎಂದು ಶ್ರೀ ಮೋದಿ ಹೇಳಿದರು.

ಮೂಲಸೌಕರ್ಯ ಮತ್ತು ನೀತಿ ಅನುಷ್ಠಾನದ ಅಭೂತಪೂರ್ವ ವೇಗವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಹಿಂದೆ ದಶಕಗಳನ್ನು ತೆಗೆದುಕೊಂಡ ಯೋಜನೆಗಳು ಈಗ ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳುತ್ತಿವೆ ಎಂದರು. 1925 ರಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ರೈಲು ಚಾಲನೆಯಾಗಿದ್ದರೂ, 2014 ರ ವೇಳೆಗೆ ಶೇಕಡಾ 30 ಕ್ಕಿಂತ ಕಡಿಮೆ ರೈಲ್ವೆ ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿತ್ತು, ಆದರೆ ತಮ್ಮ ಸರ್ಕಾರವು ಕೇವಲ 12 ವರ್ಷಗಳಲ್ಲಿ ಸುಮಾರು ಶೇಕಡಾ 100 ರಷ್ಟು ವಿದ್ಯುದ್ದೀಕರಣವನ್ನು ಸಾಧಿಸಿದೆ, ಜೊತೆಗೆ ಚರ್ಮ, ಜವಳಿ ಮತ್ತು ಸಂಸ್ಕರಿಸಿದ ಆಹಾರಗಳನ್ನು ಒಳಗೊಂಡು 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಅವರು ಉಲ್ಲೇಖಿಸಿದರು. "ಇದು ಭಾರತದ ಯುವಜನರಿಗೆ ಅವಕಾಶಗಳ ಹೊಸ ಆಕಾಶವನ್ನು ಸೃಷ್ಟಿಸುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.

ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗ ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ತೀವ್ರ ಆಧುನಿಕ ಬಿಕ್ಕಟ್ಟುಗಳನ್ನು ತಮ್ಮ ಆಡಳಿತವು ಸ್ಥಿತಿಸ್ಥಾಪಕತ್ವದಿಂದ ನಿಭಾಯಿಸಿದ್ದನ್ನು ಶ್ರೀ ಮೋದಿ ಸ್ಮರಿಸಿದರು. "ನನ್ನ ದೇಶದ ಜನರ ಆಶೀರ್ವಾದದಲ್ಲಿ ಎಷ್ಟು ಶಕ್ತಿ ಇದೆಯೆಂದರೆ, ಭಾರತದ ಮೇಲೆ ಕೆಟ್ಟದ್ದನ್ನು ಬಯಸುವವರ ಪ್ರತಿಯೊಂದು ಆಸೆಯೂ ವಿಫಲವಾಗುತ್ತಿದೆ" ಎಂದು ಶ್ರೀ ಮೋದಿ ದೃಢವಾಗಿ ನುಡಿದರು.

21ನೇ ಶತಮಾನದ ಯುವಜನರ ಮಹತ್ವಾಕಾಂಕ್ಷೆಯ ಮನೋಭಾವವನ್ನು ಉತ್ತೇಜಿಸಿದ ಪ್ರಧಾನಮಂತ್ರಿಯವರು, ಯುನಿಕಾರ್ನ್ಗಳನ್ನು ನಿರ್ಮಿಸಲು, ಡ್ರೋನ್ ತಂತ್ರಜ್ಞಾನದಲ್ಲಿ ಆವಿಷ್ಕಾರ ಮತ್ತು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಪರಿಹಾರಗಳನ್ನು ರೂಪಿಸುವ ಅವರ ಅಭಿಯಾನವನ್ನು ಸಂಭ್ರಮದಿಂದ ಉಲ್ಲೇಖಿಸಿದರು. ಹಿಂದಿನ ಪೀಳಿಗೆಗಿಂತ ದೊಡ್ಡದಾಗಿ ಕನಸು ಕಾಣುವಂತೆ ಅವರು ಆಗ್ರಹಿಸಿದರು, ಜಗತ್ತನ್ನು ಮುನ್ನಡೆಸಬಲ್ಲ ಜಾಗತಿಕ ಸಲಹಾ ಸಂಸ್ಥೆಗಳು, ಲೆಕ್ಕಪತ್ರ, ಹಣಕಾಸು ಮತ್ತು ಕಾನೂನು ಸಂಸ್ಥೆಗಳನ್ನು ನಿರ್ಮಿಸುವಂತೆ  ಅವರಿಗೆ ಸವಾಲೆಸೆದರು. "ಇಂದು, ಭಾರತೀಯರು ವಿಶ್ವದ ಉನ್ನತ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ, ಹಾಗಾದರೆ ಭಾರತೀಯರು ನಿರ್ಮಿಸಿದ ಕಂಪನಿಗಳು ಜಗತ್ತನ್ನು ಏಕೆ ಮುನ್ನಡೆಸಲು ಸಾಧ್ಯವಿಲ್ಲ?" ಎಂದು ಶ್ರೀ ಮೋದಿ ಪ್ರಶ್ನಿಸಿದರು.

ಎಸ್‌ಆರ್‌ಸಿಸಿ ಕಾಲೇಜಿನ ಹೆಮ್ಮೆಯ ಶಿಖರದಿಂದ ಸ್ಫೂರ್ತಿ ಪಡೆದ ಪ್ರಧಾನಮಂತ್ರಿಯವರು, ಯುವಜನರ ಪ್ರಯಾಣವನ್ನು ಮಾರ್ಗದರ್ಶಿ ಸೂರ್ಯನ ಕಡೆಗೆ ಸಾಗುವ ಹಡಗಿಗೆ ಸುಂದರವಾಗಿ ಹೋಲಿಸಿದರು. ಧೈರ್ಯ, ಕನಸುಗಳು ಮತ್ತು ಅಂತಿಮ ಗೆಲುವು ಸಂಪೂರ್ಣವಾಗಿ ಇಡೀ ಭಾರತಕ್ಕೆ ಸೇರಿದ ಸ್ವಾವಲಂಬನೆಯ ಹೊಸ ಮಾರ್ಗದಲ್ಲಿ ಸಾಗುವಂತೆ ಅವರು ಪ್ರತಿಯೊಬ್ಬರಿಗೂ ಕರೆ ನೀಡಿದರು. "ವಿಕಸಿತ ಭಾರತದ ಹಾದಿಯಲ್ಲಿ, ವೇಗವಾಗಿ ಬೆಳೆಯುತ್ತಿರುವ ಪ್ರತಿಯೊಂದು ಹೆಜ್ಜೆಯೂ ನಮ್ಮದಾಗಿರಬೇಕು" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

 

*****


(ಪ್ರಕಟಣೆ ಐ.ಡಿ.: 2307540) ವಿಸಿಟರ್ ಕೌಂಟರ್ : 13