ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಸಾಕಷ್ಟು ಈರುಳ್ಳಿ ಲಭ್ಯತೆ; ಋತುಮಾನದ ಬೆಲೆ ಒತ್ತಡವನ್ನು ಕಡಿಮೆ ಮಾಡಲು ಹೆಚ್ಚುವರಿ ದಾಸ್ತಾನಿನ ಯೋಜಿತ ಮತ್ತು ಉದ್ದೇಶಿತ ಬಿಡುಗಡೆಯನ್ನು ಕೈಗೊಂಡ ಸರ್ಕಾರ


ನಾಸಿಕ್‌ನಿಂದ ನವದೆಹಲಿಗೆ ಈರುಳ್ಳಿ ಹೊತ್ತ ಮೊದಲ 'ಕಾಂದಾ ಎಕ್ಸ್‌ಪ್ರೆಸ್' ನಿರ್ಗಮನ

ಪ್ರಮುಖ ಬಳಕೆ ಕೇಂದ್ರಗಳಿಗೆ ಪೂರೈಸಲು ರೈಲ್ವೆ ರೇಕ್ ಮತ್ತು ರಸ್ತೆ ಸಾರಿಗೆಯನ್ನು ಒಳಗೊಂಡ ಹೈಬ್ರಿಡ್ ಸಾರಿಗೆ ಮಾದರಿ

ಎನ್‌ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ್ ಮತ್ತು ಇತರ ಚಿಲ್ಲರೆ ಮಳಿಗೆಗಳ ಮೂಲಕ ಕೆಜಿಗೆ ₹35 ರಂತೆ ಈರುಳ್ಳಿ ಮಾರಾಟ

ಪ್ರಕಟಣಾ ದಿನಾಂಕ: 26 AUG 2026 8:49PM by PIB Bengaluru

ಬರುವ ತಿಂಗಳುಗಳಲ್ಲಿ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಋತುಮಾನದ ಬೆಲೆ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರವು ಹೆಚ್ಚುವರಿ ದಾಸ್ತಾನಿನಿಂದ ಈರುಳ್ಳಿಯ ಯೋಜಿತ ಮತ್ತು ಉದ್ದೇಶಿತ ಬಿಡುಗಡೆಯನ್ನು ಪ್ರಾರಂಭಿಸಿದೆ. ಪ್ರಚಲಿತ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಬೆಲೆ ಪ್ರವೃತ್ತಿಗಳ ಆಧಾರದ ಮೇಲೆ ಪ್ರಮುಖ ಬಳಕೆ ಕೇಂದ್ರಗಳಿಗೆ ಪೂರೈಕೆಗಳನ್ನು ನಿರ್ದೇಶಿಸುವುದರೊಂದಿಗೆ, ರೈಲ್ವೆ ರೇಕ್‌ಗಳು ಮತ್ತು ರಸ್ತೆ ಸಾರಿಗೆಯನ್ನು ಒಳಗೊಂಡ ಸಾರಿಗೆಯ ಹೈಬ್ರಿಡ್ ಮಾದರಿಯ ಮೂಲಕ ಈ ಮಧ್ಯಪ್ರವೇಶವನ್ನು ಕೈಗೊಳ್ಳಲಾಗುತ್ತಿದೆ.

ಸಾಕಷ್ಟು ಈರುಳ್ಳಿ ಲಭ್ಯತೆ ಮತ್ತು ಅಗಾಧ ಉತ್ಪಾದನೆ

2025-26 ರಲ್ಲಿ ಅಂದಾಜಿಸಲಾದ 307.37 ಎಲ್‌ಎಂಟಿ ಉತ್ಪಾದನೆಯ ಬೆಂಬಲದೊಂದಿಗೆ ಮುಂಬರುವ ತಿಂಗಳುಗಳಲ್ಲಿ ದೇಶೀಯ ಬೇಡಿಕೆಯನ್ನು ಪೂರೈಸಲು ಈರುಳ್ಳಿ ಲಭ್ಯತೆಯು ಅನುಕೂಲಕರವಾಗಿದೆ, ಇದು ಹಿಂದಿನ ವರ್ಷದ 307.67 ಎಲ್‌ಎಂಟಿ ಉತ್ಪಾದನೆಗೆ ಅನುಗುಣವಾಗಿದೆ. ಹೆಚ್ಚಿನ ಉತ್ಪಾದನೆ, ಹೆಚ್ಚುವರಿ ದಾಸ್ತಾನುಗಳ ಲಭ್ಯತೆ ಮತ್ತು ಸಕ್ರಿಯ ಮಾರುಕಟ್ಟೆ ಮಧ್ಯಪ್ರವೇಶಗಳು ಬರುವ ತಿಂಗಳುಗಳಲ್ಲಿ ಸಾಕಷ್ಟು ಪೂರೈಕೆಗಳನ್ನು ಖಚಿತಪಡಿಸುವ ಮತ್ತು ಋತುಮಾನದ ಬೆಲೆ ಒತ್ತಡವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಅನುಕೂಲಕರ ಉತ್ಪಾದನಾ ಮುನ್ನೋಟದ ದೃಷ್ಟಿಯಿಂದ, 2026-27 ರ ಅವಧಿಯಲ್ಲಿ ಬೆಲೆ ಸ್ಥಿರೀಕರಣ ನಿಧಿ (PSF) ಬಫರ್‌ಗಾಗಿ ಸರ್ಕಾರವು 2.00 ಎಲ್‌ಎಂಟಿ ರಬಿ ಈರುಳ್ಳಿಯ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಿದೆ. ನಾಫೆಡ್ (NAFED) ಮತ್ತು ಎನ್‌ಸಿಸಿಎಫ್ (NCCF) ಮೂಲಕ 15 ಮೇ 2026 ರಂದು ಸಂಗ್ರಹಣೆ ಕಾರ್ಯಾಚರಣೆಯು ಪ್ರಾರಂಭವಾಯಿತು. ಹೆಚ್ಚುವರಿ ದಾಸ್ತಾನಿಗಾಗಿ ಸುಮಾರು 1.21 ಎಲ್‌ಎಂಟಿ ಈರುಳ್ಳಿಯನ್ನು ಸಂಗ್ರಹಿಸಲಾಗಿದೆ.

ದಾಸ್ತಾನು ನಿರ್ವಹಣೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಬಲಪಡಿಸಲು, 2026-27 ರ ಅವಧಿಯಲ್ಲಿ ಪಿಎಸ್‌ಎಫ್ (PSF) ಹೆಚ್ಚುವರಿ ಈರುಳ್ಳಿ ದಾಸ್ತಾನಿಗಾಗಿ ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (CWC) ಅನ್ನು ಮೊದಲ ಬಾರಿಗೆ ದಾಸ್ತಾನು ಏಜೆನ್ಸಿಯಾಗಿ ತೊಡಗಿಸಿಕೊಳ್ಳಲಾಗಿದೆ. ಓಣಂ, ಗಣೇಶ ಚತುರ್ಥಿ, ದುರ್ಗಾ ಪೂಜೆ, ದಸರಾ, ದೀಪಾವಳಿ ಮತ್ತು ಮದುವೆಯ ಋತು ಸೇರಿದಂತೆ ಹಬ್ಬದ ಋತುವಿನ ಆರಂಭದೊಂದಿಗೆ, ಹೆಚ್ಚಿನ ಬೇಡಿಕೆ ಮತ್ತು ಪೂರೈಕೆ-ಸರಪಳಿ ಅಂಶಗಳಿಂದಾಗಿ ಈರುಳ್ಳಿ ಬೆಲೆಗಳು ಸಾಮಾನ್ಯವಾಗಿ ಋತುಮಾನದ ಏರಿಕೆಗೆ ಸಾಕ್ಷಿಯಾಗುತ್ತವೆ.

ಹೆಚ್ಚುವರಿ ಈರುಳ್ಳಿಯ ಯೋಜಿತ ಮತ್ತು ಉದ್ದೇಶಿತ ಬಿಡುಗಡೆ

ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅನಗತ್ಯ ಬೆಲೆ ಏರಿಳಿತವನ್ನು ತಡೆಯಲು, ಸರ್ಕಾರವು ಹೆಚ್ಚುವರಿ ದಾಸ್ತಾನಿನಿಂದ ಈರುಳ್ಳಿಯ ಯೋಜಿತ ಮತ್ತು ಉದ್ದೇಶಿತ ಬಿಡುಗಡೆಯನ್ನು ಪ್ರಾರಂಭಿಸಿದೆ. ಈರುಳ್ಳಿಯ ಬಿಡುಗಡೆಯು ರೈಲ್ವೆ ರೇಕ್‌ಗಳು ಮತ್ತು ರಸ್ತೆ ಸಾರಿಗೆಯನ್ನು ಒಳಗೊಂಡ ಸಾರಿಗೆಯ ಹೈಬ್ರಿಡ್ ಮಾದರಿಯ ಮೂಲಕ ನಡೆಯುತ್ತದೆ, ಇದು ಪ್ರಮುಖ ಬಳಕೆ ಕೇಂದ್ರಗಳಿಗೆ ಈರುಳ್ಳಿ ಚಲನೆಯನ್ನು ಸಕ್ರಿಯಗೊಳಿಸುತ್ತದೆ. ಪ್ರಚಲಿತ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಬೆಲೆ ಪ್ರವೃತ್ತಿಗಳ ಆಧಾರದ ಮೇಲೆ ಈರುಳ್ಳಿ ಬಿಡುಗಡೆಯ ಪ್ರಮಾಣ, ವ್ಯಾಪ್ತಿ ಮತ್ತು ಮಾರ್ಗಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು.

ಕೆಜಿಗೆ ₹35 ರಂತೆ ಈರುಳ್ಳಿ ಮಾರಾಟ

ಎನ್‌ಸಿಸಿಎಫ್ (NCCF) ಮತ್ತು ನಾಫೆಡ್ (NAFED) ನ ಮೊಬೈಲ್ ವ್ಯಾನ್‌ಗಳು ಮತ್ತು ಚಿಲ್ಲರೆ ಮಳಿಗೆಗಳ ಮೂಲಕ, ಹಾಗೂ ಸಫಲ್ ಮತ್ತು ಕೇಂದ್ರೀಯ ಭಂಡಾರ್ ಮಳಿಗೆಗಳ ಮೂಲಕ ಕೆಜಿಗೆ ₹35 ರಂತೆ ಈರುಳ್ಳಿಯ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಲಾಗುವುದು. ಚಿಲ್ಲರೆ ಮಾರಾಟವನ್ನು ಇವುಗಳ ಮೂಲಕ ನಡೆಸಲಾಗುವುದು:

NCCF: 9 ಮಳಿಗೆಗಳು ಮತ್ತು 40 ಮೊಬೈಲ್ ವ್ಯಾನ್‌ಗಳು

NAFED: 13 ಮಳಿಗೆಗಳು ಮತ್ತು 50 ಮೊಬೈಲ್ ವ್ಯಾನ್‌ಗಳು

ಕೇಂದ್ರೀಯ ಭಂಡಾರ್: ಸುಮಾರು 100 ಮಳಿಗೆಗಳು

ಉದ್ದೇಶಿತ ಚಿಲ್ಲರೆ ಮಧ್ಯಸ್ಥಿಕೆ, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಲಭ್ಯತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.

ಕಾಂದಾ ಎಕ್ಸ್‌ಪ್ರೆಸ್ ಹೆಚ್ಚುವರಿ ಈರುಳ್ಳಿ ಚಲನೆಗೆ   ಪುಷ್ಟಿ ನೀಡುತ್ತದೆ

ಕಾಂದಾ ಎಕ್ಸ್‌ಪ್ರೆಸ್ ಉಪಕ್ರಮವು ಬಫರ್ ಈರುಳ್ಳಿಯನ್ನು ಉತ್ಪಾದನಾ ಪ್ರದೇಶಗಳಿಂದ ಬಳಕೆ ಕೇಂದ್ರಗಳಿಗೆ ಸಾಗಿಸಲು ಒಂದು ಪರಿಣಾಮಕಾರಿ ಲಾಜಿಸ್ಟಿಕ್ಸ್ ಮಧ್ಯಸ್ಥಿಕೆಯಾಗಿ  ಹೊರಹೊಮ್ಮಿದೆ. 2024-25 ರ ಅವಧಿಯಲ್ಲಿ, ಹೆಚ್ಚುವರಿ ಈರುಳ್ಳಿ ದಾಸ್ತಾನನ್ನು 14 ರೈಲ್ವೆ ರೇಕ್‌ಗಳ ಮೂಲಕ ಐದು ನಗರಗಳಿಗೆ ಸುಮಾರು 12,000 ಮೆಟ್ರಿಕ್ ಟನ್ ಈರುಳ್ಳಿಯನ್ನು ಸಾಗಿಸಲಾಯಿತು. 2025-26 ರ ಕಾರ್ಯಾಚರಣೆಯು ಗಣನೀಯವಾಗಿ ವಿಸ್ತರಿಸಿದ್ದು, 86 ರೈಲ್ವೆ ರೇಕ್‌ಗಳ ಮೂಲಕ ದೇಶಾದ್ಯಂತ 16 ನಗರಗಳಿಗೆ ಸುಮಾರು 88,000 ಮೆಟ್ರಿಕ್ ಟನ್ ಈರುಳ್ಳಿಯನ್ನು ಸಾಗಿಸಲಾಗಿದೆ.

ಪ್ರಸ್ತುತ ಆರ್ಥಿಕ ವರ್ಷದಲ್ಲಿ, ನಾಸಿಕ್‌ನಿಂದ ನವದೆಹಲಿಗೆ ಕಾಂದಾ ಎಕ್ಸ್‌ಪ್ರೆಸ್ ಮೂಲಕ ಈರುಳ್ಳಿ ರವಾನೆ ಸಾಗಣೆ ಪ್ರಾರಂಭವಾಗಿದೆ. ಮೊದಲ ಕಾಂದಾ ಎಕ್ಸ್‌ಪ್ರೆಸ್ ನಾಸಿಕ್‌ನಿಂದ ನಿರ್ಗಮಿಸಿದ್ದು, ದೆಹಲಿ ಎನ್‌ಸಿಆರ್ (NCR) ತಲುಪುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಚೆನ್ನೈ, ಕೋಲ್ಕತ್ತಾ, ಎರ್ನಾಕುಲಂ, ಗುವಾಹಾಟಿ, ವಾರಾಣಸಿ, ಲಕ್ನೋ, ಪಾಟ್ನಾ, ಚಂಡೀಗಢ, ಜಮ್ಮು ಮತ್ತು ಅಮೃತಸರ ಮುಂತಾದ ಇತರ ಪ್ರಮುಖ ಬಳಕೆ ಕೇಂದ್ರಗಳಿಗೆ ರಸ್ತೆ ಸಾರಿಗೆಯ ಮೂಲಕ ಪೂರೈಕೆಯನ್ನು ಸ್ಥಳಾಂತರಿಸಲಾಗುತ್ತಿದೆ. ಪ್ರಚಲಿತ ಮಾರುಕಟ್ಟೆ ಅಗತ್ಯಗಳ ಆಧಾರದ ಮೇಲೆ ಬಳಕೆ ಕೇಂದ್ರಗಳಿಗೆ ಬಫರ್ ಈರುಳ್ಳಿಯನ್ನು ಸಮಯೋಚಿತವಾಗಿ ಸಾಗಿಸಲು ಹೈಬ್ರಿಡ್ ಸಾರಿಗೆ ಮಾದರಿಯು ಅನುಕೂಲ ಮಾಡಿಕೊಡುತ್ತದೆ.

ಈರುಳ್ಳಿ ರಫ್ತು ಮತ್ತಷ್ಟು ಪ್ರಬಲವಾಗಿ ಮುಂದುವರೆದಿದೆ

ಈರುಳ್ಳಿ ರಫ್ತು ಮತ್ತಷ್ಟು ಪ್ರಬಲವಾಗಿ ಮುಂದುವರೆದಿದೆ. ಏಪ್ರಿಲ್-ಜೂನ್ 2026 ಅವಧಿಯಲ್ಲಿ, ರಫ್ತು ಸರಿಸುಮಾರು 3.82 ಎಲ್‌ಎಂಟಿ ನಷ್ಟಿತ್ತು, ಮಲೇಷ್ಯಾ, ಶ್ರೀಲಂಕಾ, ಯುಎಇ ಮತ್ತು ನೇಪಾಳ ಸೇರಿದಂತೆ ಪ್ರಮುಖ ತಾಣಗಳಿಗೆ ರಫ್ತಾಗಿದ್ದು, ಇದು ಅನುಕೂಲಕರ ದೇಶೀಯ ಲಭ್ಯತೆಯನ್ನು ಪ್ರತಿಬಿಂಬಿಸುತ್ತದೆ.

579 ಕೇಂದ್ರಗಳಲ್ಲಿ ದಿನನಿತ್ಯದ ಮೇಲ್ವಿಚಾರಣೆ

ಗ್ರಾಹಕ ವ್ಯವಹಾರಗಳ ಇಲಾಖೆಯು ದೇಶಾದ್ಯಂತ 579 ಕೇಂದ್ರಗಳಲ್ಲಿ ಈರುಳ್ಳಿ ಸೇರಿದಂತೆ 41 ಅತ್ಯಗತ್ಯ ಸರಕುಗಳ ದಿನನಿತ್ಯದ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಈ ಮಾರುಕಟ್ಟೆ ಪ್ರವೃತ್ತಿಗಳು, ಆಗಮನಗಳು ಮತ್ತು ಬೇಡಿಕೆಯ ಪರಿಸ್ಥಿತಿಗಳೊಂದಿಗೆ, ಹೆಚ್ಚುವರಿ ದಾಸ್ತಾನು ಬಿಡುಗಡೆಯ ಪ್ರಮಾಣ ಮತ್ತು ತಾಣಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಮುಖ ಆಧಾರವಾಗಿ ಕಾರ್ಯನಿರ್ವಹಿಸುತ್ತವೆ. ರಾಜ್ಯಾದ್ಯಂತ ಈರುಳ್ಳಿ ಬೆಲೆಗಳು, ಆಗಮನಗಳು ಮತ್ತು ಲಭ್ಯತೆಯನ್ನು ಸರ್ಕಾರವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಸಾಕಷ್ಟು ಪೂರೈಕೆಗಳನ್ನು ಖಚಿತಪಡಿಸಿಕೊಳ್ಳಲು ಹಾಗೂ ಅನಗತ್ಯ ಬೆಲೆ ಏರಿಕೆಯನ್ನು ತಡೆಯಲು ಅಗತ್ಯವಿರುವ ಕಡೆಯಲ್ಲಿ ಹೆಚ್ಚಿನ ಮಧ್ಯಪ್ರವೇಶಗಳನ್ನು ಕೈಗೊಳ್ಳುತ್ತದೆ.

ಪ್ರಮುಖ ಅತ್ಯಗತ್ಯ ಸರಕುಗಳ ಬೆಲೆಗಳು ಸ್ಥಿರವಾಗಿ ಮತ್ತು ಮಿತಿಯಲ್ಲಿವೆ

ತೊಗರಿ ಬೇಳೆ, ಕಡಲೆ ಬೇಳೆ, ಚನ್ನಂಗಿ ಬೇಳೆ, ಉದ್ದಿನ ಬೇಳೆ ಮತ್ತು ಹೆಸರು ಬೇಳೆ ಸೇರಿದಂತೆ ಪ್ರಮುಖ ಬೇಳೆಕಾಳುಗಳ ಬೆಲೆಗಳು ಹಾಗೂ ಟೊಮೆಟೊ ಮತ್ತು ಆಲೂಗಡ್ಡೆಯಂತಹ ಅತ್ಯಗತ್ಯ ತರಕಾರಿಗಳ ಬೆಲೆಗಳು ಪ್ರಸ್ತುತ ರವಾಗಿ ಮತ್ತು ಮಿತಿಯಲ್ಲಿವೆ.

26.08.2026 ರಂತೆ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆಗಳು ಕೆಳಗಿನಂತಿವೆ:

ಸರಕು

ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ

ಟೊಮೆಟೊ

₹38.33/ಕೆಜಿ

ಆಲೂಗಡ್ಡೆ

₹22.63/ಕೆಜಿ

ಕಡಲೆ ಬೇಳೆ

₹86.71/ಕೆಜಿ

ಗೋಧಿ ಹಿಟ್ಟು (ಅಟ್ಟಾ)

₹40.48/ಕೆಜಿ

ತೊಗರಿ ಬೇಳೆ

₹123.30/ಕೆಜಿ

ಹಾಲು

₹60.82/ಲೀಟರ್

ಈರುಳ್ಳಿ

₹37.87/ಕೆಜಿ

ವಿಶೇಷವೆಂದರೆ, ಟೊಮೆಟೊ, ಆಲೂಗಡ್ಡೆ ಮತ್ತು ಕಡಲೆ ಬೇಳೆ ಬೆಲೆಗಳು ಒಂದು ವರ್ಷದ ಹಿಂದಿಗಿಂತ ಕಡಿಮೆಯಿವೆ.

ಗ್ರಾಹಕರ ಹಿತಾಸಕ್ತಿಗಳನ್ನು ಕಾಯಲು ನಿರಂತರ ಮೇಲ್ವಿಚಾರಣೆ

ಸಮತೋಲಿತ ಮತ್ತು ಪುರಾವೆ ಆಧಾರಿತ ಬೆಲೆ ಸ್ಥಿರೀಕರಣ ವಿಧಾನದ ಮೂಲಕ ರೈತರಿಗೆ ಲಾಭದಾಯಕ ಆದಾಯವನ್ನು ಖಚಿತಪಡಿಸುವ ಜೊತೆಗೆ ಗ್ರಾಹಕರ ಹಿತಾಸಕ್ತಿಗಳನ್ನು ಕಾಯಲು ಸರ್ಕಾರ ಬದ್ಧವಾಗಿದೆ. ಸರ್ಕಾರವು ಈರುಳ್ಳಿ ಬೆಲೆಗಳು, ಆಗಮನಗಳು, ಲಭ್ಯತೆ ಮತ್ತು ಬೇಡಿಕೆಯ ಪರಿಸ್ಥಿತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ. ಸಾಕಷ್ಟು ಪೂರೈಕೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಋತುಮಾನದ ಬೆಲೆ ಒತ್ತಡವನ್ನು ಕಡಿಮೆ ಮಾಡಲು ಹೆಚ್ಚುವರಿ ದಾಸ್ತಾನು ಬಿಡುಗಡೆಯ ಪ್ರಮಾಣ, ವ್ಯಾಪ್ತಿ ಮತ್ತು ಮಾರ್ಗಗಳನ್ನು ಪ್ರಚಲಿತ ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ.

*********

 


(ಪ್ರಕಟಣೆ ಐ.ಡಿ.: 2303607) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , Odia