ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಒಂದು ರಾಷ್ಟ್ರ, ಒಂದು ಸಮಯ - ಸಮಯ ಸಾರ್ವಭೌಮತ್ವದ ಕಡೆಗೆ ಭಾರತದ ಪಯಣ: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು


ನಿಖರ ಮತ್ತು ಪತ್ತೆಹಚ್ಚಬಹುದಾದ ಭಾರತೀಯ ಕಾಲಮಾನದ (IST) ಮೂಲಕ ರಾಷ್ಟ್ರೀಯ ಮೂಲಸೌಕರ್ಯದ ಭದ್ರತೆ: ಶ್ರೀ ಪ್ರಲ್ಹಾದ್ ಜೋಶಿ

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ 'ಸಮಯ ಪ್ರಸರಣ' ಕುರಿತು ದುಂಡುಮೇಜಿನ ಸಮ್ಮೇಳನ ಆಯೋಜನೆ

Posted On: 18 JUN 2025 4:26PM by PIB Bengaluru

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು, "ಒಂದು ರಾಷ್ಟ್ರ, ಒಂದು ಸಮಯ" ಎಂಬ ದೂರದೃಷ್ಟಿಯ ಧ್ಯೇಯವಾಕ್ಯದ ಅಡಿಯಲ್ಲಿ, ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ 'ಸಮಯ ಪ್ರಸರಣ' (Time Dissemination) ಕುರಿತು ಒಂದು ಮಹತ್ವದ ದುಂಡುಮೇಜಿನ ಸಮ್ಮೇಳನವನ್ನು ಆಯೋಜಿಸಿತು.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಗ್ರಾಹಕ ವ್ಯವಹಾರಗಳ ಇಲಾಖೆಯು CSIR-NPL ಮತ್ತು ISRO ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಸಮಯ ಪ್ರಸರಣ ಯೋಜನೆಯ ಕಾರ್ಯತಂತ್ರದ ಮಹತ್ವವನ್ನು ಒತ್ತಿ ಹೇಳಿದರು. ಮುಂಬರುವ ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2025 ಎಲ್ಲಾ ಕಾನೂನು, ವಾಣಿಜ್ಯ ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ಭಾರತೀಯ ಪ್ರಮಾಣಿತ ಸಮಯದೊಂದಿಗೆ (IST) ಸಿಂಕ್ರೊನೈಸ್ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ ಮತ್ತು ಸ್ಪಷ್ಟವಾಗಿ ಅನುಮತಿಸದ ಹೊರತು ಪರ್ಯಾಯ ಸಮಯ ಉಲ್ಲೇಖಗಳನ್ನು ಬಳಸುವುದನ್ನು ನಿಷೇಧಿಸುತ್ತದೆ ಎಂದು ಅವರು ತಿಳಿಸಿದರು.

ಹಣಕಾಸು ಮಾರುಕಟ್ಟೆಗಳು, ವಿದ್ಯುತ್ ಗ್ರಿಡ್ ಗಳು, ದೂರಸಂಪರ್ಕ, ಸಾರಿಗೆ ಮತ್ತು ಇತರ ವಲಯಗಳಲ್ಲಿ IST ಯ (ಭಾರತೀಯ ಕಾಲಮಾನ) ನಿಖರ ಮತ್ತು ಏಕರೂಪದ ಪ್ರಸರಣವು, ನ್ಯಾಯಸಮ್ಮತತೆ, ನಿಖರತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಲು ಅತ್ಯಗತ್ಯವಾಗಿದೆ ಎಂದು ಸಚಿವರು ಒತ್ತಿ ಹೇಳಿದರು. ಈ ಉಪಕ್ರಮವು, ಪರಮಾಣು ಗಡಿಯಾರಗಳು ಮತ್ತು NTP ಹಾಗೂ PTP ಯಂತಹ ಸುರಕ್ಷಿತ ಸಿಂಕ್ರೊನೈಸೇಶನ್ ಪ್ರೋಟೋಕಾಲ್ ಗಳನ್ನು ಹೊಂದಿದ ಐದು ಪ್ರಾದೇಶಿಕ ಉಲ್ಲೇಖ ಗುಣಮಟ್ಟ ಪ್ರಯೋಗಾಲಯಗಳ (RRSLs) ಮೂಲಕ, ಮಿಲಿಸೆಕೆಂಡ್ ನಿಂದ ಮೈಕ್ರೋಸೆಕೆಂಡ್ ವರೆಗಿನ ನಿಖರತೆಯೊಂದಿಗೆ ಐಎಸ್ಟಿಯನ್ನು ತಲುಪಿಸುವ ಗುರಿಯನ್ನು ಹೊಂದಿದೆ. "ಒಂದು ರಾಷ್ಟ್ರ, ಒಂದು ಸಮಯ" ದೃಷ್ಟಿಕೋನದ ಅಡಿಯಲ್ಲಿ, ಇದು ಡಿಜಿಟಲ್ ಮತ್ತು ಆಡಳಿತಾತ್ಮಕ ದಕ್ಷತೆಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅವರು ತಮ್ಮ ಪ್ರಸ್ತುತಿಯಲ್ಲಿ, ಕಾರ್ಯತಂತ್ರ ಮತ್ತು ಕಾರ್ಯತಂತ್ರ-ರಹಿತ ವಲಯಗಳಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು IST ಯ ನಿಖರ, ಸುರಕ್ಷಿತ ಮತ್ತು ಕಾನೂನುಬದ್ಧ ಪ್ರಸರಣದ ತುರ್ತು ಅಗತ್ಯವನ್ನು ಒತ್ತಿ ಹೇಳಿದರು. ಸಮಯ ಪ್ರಸರಣ ಯೋಜನೆ (Time Dissemination Project) ಅಡಿಯಲ್ಲಿ, ಇಲಾಖೆಯು CSIR-NPL ಮತ್ತು ISRO ಸಹಯೋಗದೊಂದಿಗೆ ಸುಧಾರಿತ ಮೂಲಸೌಕರ್ಯವನ್ನು ಸ್ಥಾಪಿಸುತ್ತಿದೆ. ಇದು ಅಹಮದಾಬಾದ್, ಬೆಂಗಳೂರು, ಭುವನೇಶ್ವರ, ಫರಿದಾಬಾದ್ ಮತ್ತು ಗುವಾಹಟಿಯಲ್ಲಿ ಐದು ಪ್ರಾದೇಶಿಕ ಉಲ್ಲೇಖ ಗುಣಮಟ್ಟದ ಪ್ರಯೋಗಾಲಯಗಳನ್ನು (RRSLs) ಒಳಗೊಂಡಿದೆ. ಮಿಲಿಸೆಕೆಂಡ್ ನಿಂದ ಮೈಕ್ರೋಸೆಕೆಂಡ್ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಈ ಕೇಂದ್ರಗಳನ್ನು ಪರಮಾಣು ಗಡಿಯಾರಗಳು ಮತ್ತು ನೆಟ್ವರ್ಕ್ ಟೈಮ್ ಪ್ರೋಟೋಕಾಲ್ (NTP) ಹಾಗೂ ಪ್ರಿಸಿಸನ್ ಟೈಮ್ ಪ್ರೋಟೋಕಾಲ್ (PTP) ಬಳಸುವ ಸುರಕ್ಷಿತ ಸಮಕಾಲೀನ ವ್ಯವಸ್ಥೆಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಮುಂಬರುವ ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2025 ಎಲ್ಲಾ ಕಾನೂನು, ಆಡಳಿತಾತ್ಮಕ ಮತ್ತು ವಾಣಿಜ್ಯ ಕಾರ್ಯಾಚರಣೆಗಳನ್ನು IST ಯೊಂದಿಗೆ ಸಿಂಕ್ರೊನೈಸ್ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ, ಇದರಿಂದ ಭಾರತದ ಸಮಯಪಾಲನಾ ಮೂಲಸೌಕರ್ಯವು ಕಾನೂನುಬದ್ಧವಾಗಿ ಜಾರಿಗೊಳಿಸಲ್ಪಡುತ್ತದೆ, ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರುತ್ತದೆ ಮತ್ತು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿರುತ್ತದೆ ಎಂದು ಕಾರ್ಯದರ್ಶಿ ಅವರು ಒತ್ತಿ ಹೇಳಿದರು. ಅವರ ಪ್ರಸ್ತುತಿಯು ಸ್ಪೂಫಿಂಗ್ ಮತ್ತು ಜ್ಯಾಮಿಂಗ್ ನಂತಹ ಸೈಬರ್ ಭದ್ರತಾ ದುರ್ಬಲತೆಗಳು ಸೇರಿದಂತೆ ವಿದೇಶಿ ಸಮಯ ಮೂಲಗಳ ಮೇಲಿನ ಪ್ರಸ್ತುತ ಅವಲಂಬನೆಯಿಂದ ಉಂಟಾಗುವ ಅಪಾಯಗಳನ್ನು ವಿವರಿಸಿದೆ. ಈ ನಿಯಮಗಳ ಅನುಷ್ಠಾನವು ಪತ್ತೆಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳಲು, ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಸಮಯ ಸಾರ್ವಭೌಮತ್ವವನ್ನು ಬೆಳೆಸಲು ಒಂದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು. ಈ ಉಪಕ್ರಮವು ದೇಶಾದ್ಯಂತ ವಿಶ್ವಾಸಾರ್ಹ ಮತ್ತು ಪ್ರಮಾಣೀಕೃತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಭರತ್ ಖೇರಾ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಸಮಯ ನಿರ್ವಹಣೆಗೆ ಸಮಗ್ರವಾದ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ಸರ್ಕಾರದ ಜಾರಿ ಚಟುವಟಿಕೆಗಳನ್ನು ಹೆಚ್ಚಿನ ದಕ್ಷತೆ, ನಿಖರತೆ ಮತ್ತು ಸಮನ್ವಯದೊಂದಿಗೆ ನಿರ್ವಹಿಸಲು ಸಾಧ್ಯವಾಗುತ್ತದೆ, ಇದರಿಂದಾಗಿ ಒಟ್ಟಾರೆ ಆಡಳಿತಾತ್ಮಕ ಪರಿಣಾಮಕಾರಿತ್ವ ಹೆಚ್ಚಾಗುತ್ತದೆ ಎಂದು ಒತ್ತಿ ಹೇಳಿದರು. ಈ ಸಮ್ಮೇಳನದಲ್ಲಿ ಸಮಯ ಸಿಂಕ್ರೊನೈಸೇಶನ್ ಸವಾಲುಗಳು ಮತ್ತು ಸ್ಪೂಫಿಂಗ್ ಮತ್ತು ಜ್ಯಾಮಿಂಗ್ ನಂತಹ ಅಪಾಯಗಳನ್ನುಂಟುಮಾಡುವ GPS ನಂತಹ ವಿದೇಶಿ ಸಮಯ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯತೆಯ ಕುರಿತು ತಜ್ಞರ ಪ್ರಸ್ತುತಿಗಳನ್ನು ಒಳಗೊಂಡಿತ್ತು. ಬ್ಯಾಂಕಿಂಗ್, ದೂರಸಂಪರ್ಕ, ಇಂಧನ, ಷೇರು ಮಾರುಕಟ್ಟೆಗಳು ಮತ್ತು ಸಾರಿಗೆ ಮುಂತಾದ ವಿವಿಧ ವಲಯಗಳ ಪಾಲುದಾರರು ಒಂದು ಸ್ವದೇಶಿ, ನಿಖರವಾದ ಮತ್ತು ಪರಿಶೀಲಿಸಬಹುದಾದ ಸಮಯ ಮಾನದಂಡದ ಪ್ರಾಮುಖ್ಯತೆಯನ್ನು ಪ್ರತಿಧ್ವನಿಸಿದರು.

ಕಾಲ ಪ್ರಸರಣ ಉಪಕ್ರಮವು 2018 ರಿಂದ ನಿರಂತರ ಅಂತರ-ಸಚಿವಾಲಯ ಸಮನ್ವಯ ಮತ್ತು ತಾಂತ್ರಿಕ ಸಮಾಲೋಚನೆಗಳ ಫಲಿತಾಂಶವಾಗಿದೆ. ಪ್ರಧಾನ ವೈಜ್ಞಾನಿಕ ಸಲಹೆಗಾರರು, ಉಪ NSA, ಕ್ಯಾಬಿನೆಟ್ ಸಚಿವಾಲಯ ಮತ್ತು NSCS ರೊಂದಿಗೆ ಸಭೆಗಳನ್ನು ನಡೆಸಲಾಗಿತ್ತು. ಗ್ರಾಹಕ ವ್ಯವಹಾರಗಳ ಇಲಾಖೆಯು CSIR-NPL, ISRO ಮತ್ತು ಇತರ ಪ್ರಮುಖ ಪಾಲುದಾರರೊಂದಿಗೆ ವ್ಯಾಪಕವಾದ ಸಹಯೋಗದೊಂದಿಗೆ 60 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ. ಈ ಸುಸ್ಥಿರ ಸಹಯೋಗವು 2025 ರ ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳ ಕರಡನ್ನು ರೂಪಿಸಲು ಕಾರಣವಾಯಿತು. ಸಾಮಾನ್ಯ ಜನರಿಗೆ, ಈ ಉಪಕ್ರಮವು ಹೆಚ್ಚು ಸುರಕ್ಷಿತ ಡಿಜಿಟಲ್ ವಹಿವಾಟುಗಳು, ಉಪಯುಕ್ತತೆಗಳಲ್ಲಿ ನಿಖರವಾದ ಬಿಲ್ಲಿಂಗ್, ಸೈಬರ್ ಕ್ರೈಮ್ ಅಪಾಯಗಳ ಕಡಿತ ಮತ್ತು ಸಾರಿಗೆ ಮತ್ತು ಸಂವಹನದಲ್ಲಿ ಸಿಂಕ್ರೊನೈಸ್ ಮಾಡಿದ ಸಮಯಪಾಲನೆಗೆ ಕಾರಣವಾಗುತ್ತದೆ, ಇದು ದಿನನಿತ್ಯದ ಸೇವೆಗಳಲ್ಲಿ ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ನಂಬಿಕೆಯನ್ನು ಖಚಿತಪಡಿಸುತ್ತದೆ.

ದುಂಡುಮೇಜಿನ ಸಮ್ಮೇಳನದಲ್ಲಿ ವಿವಿಧ ವಲಯಗಳನ್ನು ಪ್ರತಿನಿಧಿಸುವ 100 ಕ್ಕೂ ಹೆಚ್ಚು ಪಾಲುದಾರರು ಸಕ್ರಿಯವಾಗಿ ಭಾಗವಹಿಸಿದ್ದರು. ದೂರಸಂಪರ್ಕ ಇಲಾಖೆ, ವಿದ್ಯುತ್ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಹಣಕಾಸು ಸಚಿವಾಲಯ, ಸೆಬಿ (SEBI), ಎನ್ ಎಸ್ ಸಿ ಎಸ್ (NSCS), ರೈಲ್ವೆ, ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ನಂತಹ ಪ್ರಮುಖ ಸರ್ಕಾರಿ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳು ಇದರಲ್ಲಿ ಸೇರಿದ್ದರು. CSIR-NPL ಮತ್ತು ISRO ದ ತಾಂತ್ರಿಕ ಪಾಲುದಾರರು ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪವರ್ ಗ್ರಿಡ್ (Power Grid), ರೈಲ್ ಟೆಲ್ (RailTel), ಬಿ ಎಸ್ ಎನ್ ಎಲ್ (BSNL), ಎನ್ ಎಸ್ ಇ (NSE), ಬಿ ಎಸ್ ಇ (BSE) ಮತ್ತು ರಿಲಯನ್ಸ್ ಜಿಯೋ (Reliance Jio), ಏರ್ ಟೆಲ್ (Airtel), ಸಿಫಿ (Sify) ಮತ್ತು ಟಾಟಾ ಕಮ್ಯುನಿಕೇಷನ್ಸ್ (Tata Communications) ನಂತಹ ಪ್ರಮುಖ ದೂರಸಂಪರ್ಕ ಮತ್ತು ಇಂಟರ್ನೆಟ್ ಸೇವೆ ಒದಗಿಸುವ ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳು ಭಾಗವಹಿಸಿದ್ದವು. FICCI, CII, ASSOCHAM, PHD ಚೇಂಬರ್, COAI ಮತ್ತು TEMA ಸೇರಿದಂತೆ ಕೈಗಾರಿಕಾ ಸಂಘಗಳು ಉತ್ತಮವಾಗಿ ಪ್ರತಿನಿಧಿಸಲ್ಪಟ್ಟಿದ್ದವು, ಜೊತೆಗೆ CERT-In, NIC, NCIIPC ಮತ್ತು CCA ಯಂತಹ ಪ್ರಮುಖ ಸೈಬರ್ ಭದ್ರತೆ ಮತ್ತು ಡಿಜಿಟಲ್ ಮೂಲಸೌಕರ್ಯ ಪಾಲುದಾರರು ಭಾಗವಹಿಸಿದ್ದರು.  ಸ್ವಯಂಸೇವಾ ಗ್ರಾಹಕ ಸಂಸ್ಥೆಗಳು (VCOs) ಮತ್ತು ICICI, ಬ್ಯಾಂಕ್ ಆಫ್ ಬರೋಡಾ ಮತ್ತು ವಿವಿಧ ಇತರ ಪಾಲುದಾರರ ಪ್ರತಿನಿಧಿಗಳು ಸಹ ಚರ್ಚೆಗಳಿಗೆ ಕೊಡುಗೆ ನೀಡಿದರು, ಇದು ಎಲ್ಲಾ ವಲಯಗಳಲ್ಲಿ ಭಾರತೀಯ ಪ್ರಮಾಣಿತ ಸಮಯವನ್ನು ಅಳವಡಿಸಿಕೊಳ್ಳಲು ಸಾಮೂಹಿಕ ರಾಷ್ಟ್ರೀಯ ಬೆಂಬಲವನ್ನು ಪುನರುಚ್ಚರಿಸಿತು.

ಭಾಗವಹಿಸಿದ ಪಾಲುದಾರರಿಂದ ಉತ್ತಮ ಬೆಂಬಲದೊಂದಿಗೆ, ಈ ದುಂಡು ಮೇಜಿನ ಸಮ್ಮೇಳನವು ಮುಂಬರುವ ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು 2025 ರ ಅಧಿಸೂಚನೆಗೆ ದಾರಿ ಮಾಡಿಕೊಟ್ಟಿದೆ. ಈ ಮೈಲಿಗಲ್ಲು 'ಒಂದು ರಾಷ್ಟ್ರ, ಒಂದು ಸಮಯ' ಎಂಬ ಮಾರ್ಗದರ್ಶಿ ದೃಷ್ಟಿಕೋನದ ಅಡಿಯಲ್ಲಿ ಭಾರತದ ಸಮಯ ಸಾರ್ವಭೌಮತ್ವ, ತಾಂತ್ರಿಕ ಸ್ವಾತಂತ್ರ್ಯ ಮತ್ತು ಡಿಜಿಟಲ್ ಸ್ಥಿತಿಸ್ಥಾಪಕತ್ವದ ಕಡೆಗಿನ ಕಾರ್ಯತಂತ್ರದ ಬದಲಾವಣೆಯನ್ನು ಸೂಚಿಸುತ್ತದೆ.

 

*****


(Release ID: 2137522)
Read this release in: English , Urdu , Marathi , Hindi