ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಕೇಂದ್ರ ಸರ್ಕಾರದಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೊದಲ ಹಂತದ “ಉದ್ಯೋಗ ಮೇಳ”ಕ್ಕೆ ಪ್ರಧಾನ ಮಂತ್ರಿಯವರಿಂದ ಚಾಲನೆ


​​​​​​​ಪಟಿಯಾಲದ ಪಿಎಲ್ಡಬ್ಲ್ಯೂನಲ್ಲಿ ನಡೆದ “ಉದ್ಯೋಗ ಮೇಳ”ದ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು ಪಂಜಾಬ್ ಮತ್ತು ಪಕ್ಕದ ಪ್ರದೇಶಗಳಿಂದ ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು

Posted On: 22 OCT 2022 7:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶದಾದ್ಯಂತ 50 ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 10 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿ ಅಭಿಯಾನದ "ಉದ್ಯೋಗ ಮೇಳ"ದ ಮೊದಲ ಹಂತಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ನೂತನವಾಗಿ ನೇಮಕಗೊಂಡ 75 ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಹೊಸದಾಗಿ ನೇಮಕಗೊಂಡವರನ್ನು ವರ್ಚುವಲ್ ಮಾದರಿಯ ಮೂಲಕ ಉದ್ದೇಶಿಸಿ ಮಾತನಾಡಿದರು ಮತ್ತು ಹೊಸದಾಗಿ ನೇಮಕಗೊಂಡ ಸರ್ಕಾರಿ ನೌಕರರು ಸೇವಾ ಮನೋಭಾವದಿಂದ ಕೆಲಸ ಮಾಡುವಂತೆ ಕರೆ ನೀಡಿದರು.

ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಮತ್ತು ನಾಗರಿಕರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿಯವರ ನಿರಂತರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ "ಉದ್ಯೋಗ ಮೇಳ" ಒಂದು ಪ್ರಮುಖ ಹೆಜ್ಜೆಯಾಗಿದೆ. ಪ್ರಧಾನಮಂತ್ರಿಯವರ ಸೂಚನೆಯಂತೆ, ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಮಂಜೂರಾದ ಹುದ್ದೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕೆಲಸ ಮಾಡುತ್ತಿವೆ.

ಪಂಜಾಬ್ನಲ್ಲಿ, ಪಟಿಯಾಲಾದ ಪಟಿಯಾಲಾ ಲೋಕೋಮೋಟಿವ್ ವರ್ಕ್ಸ್ (ಪಿಎಲ್ಡಬ್ಲ್ಯೂ) ಮತ್ತು ಕಪುರ್ತಾಲಾದ ರೈಲ್ ಕೋಚ್ ಫ್ಯಾಕ್ಟರಿ (ಆರ್ಸಿಎಫ್) ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು ಪಟಿಯಾಲದ ಪಿಎಲ್ಡಬ್ಲ್ಯೂನಲ್ಲಿ ನಡೆದ "ಉದ್ಯೋಗ ಮೇಳ" ದಲ್ಲಿ ಪಂಜಾಬ್ ಮತ್ತು ಪಕ್ಕದ ಪ್ರದೇಶಗಳಿಂದ ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ಹೊಸದಾಗಿ ನೇಮಕಾತಿ ಪಡೆದವರನ್ನು ಪಟಿಯಾಲದ ಪಿಎಲ್ಡಬ್ಲ್ಯೂ, ಇಎಸ್ಐಸಿ, ಅಂಚೆ ಇಲಾಖೆ,ಬಿಎಸ್ಎಫ್, ಎಸ್ಎಸ್ಬಿ ಹಾಗೂ ವಿವಿಧ ರಾಷ್ಟ್ರೀಯ ಬ್ಯಾಂಕ್ಗಳಲ್ಲಿ ನೇಮಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಶ್ರೀ ಹರ್ದೀಪ್ ಎಸ್. ಪುರಿ, “ಭಾರತದ ಯುವಕರಿಗೆ ಸ್ಮರಣೀಯ ದಿನ! ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿಯವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ್ದಾರೆ, ಇದರಲ್ಲಿ 10 ಲಕ್ಷ ಯುವಜನರಿಗೆ ಸರ್ಕಾರಿ ಉದ್ಯೋಗಗಳನ್ನು ಒದಗಿಸಲಾಗುವುದು! ಮೊದಲ ಹಂತದಲ್ಲಿ 75,000 ಉದ್ಯೋಗಗಳು. ಪಟಿಯಾಲದಿಂದ ಆಯ್ಕೆಯಾದ ಒಟ್ಟು 75 ಅಭ್ಯರ್ಥಿಗಳಲ್ಲಿ 25 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದ್ದು ತುಂಬಾ ಸಂತೋಷವಾಗಿದೆ.” ಎಂದು ಹೇಳಿದ್ದಾರೆ.

ಈ ನೇಮಕಾತಿಯನ್ನು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಸ್ವತಃ ಮತ್ತು ಯುಪಿಎಸ್ಸಿ, ಎಸ್ಎಸ್ಸಿ, ರೈಲ್ವೇ ನೇಮಕಾತಿ ಮಂಡಳಿಯಂತಹ ನೇಮಕಾತಿ ಏಜೆನ್ಸಿಗಳ ಮೂಲಕ ಮಾಡಲಾಗುತ್ತದೆ. ತ್ವರಿತ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಮತ್ತು ತಾಂತ್ರಿಕವಾಗಿ ಪರಿಣಾಮಕಾರಿಯಾಗಿ ಮಾಡಲಾಗಿದೆ. ಪಟಿಯಾಲದ ಪಿಎಲ್ಡಬ್ಲ್ಯೂನಲ್ಲಿ ಜಮಾಯಿಸಿದ ಹೊಸದಾಗಿ ನೇಮಕಗೊಂಡ ಯುವಜನರು ಉತ್ಸಾಹದಿಂದ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಮತ್ತು ಸಂದರ್ಶನಗಳನ್ನು ನೀಡುತ್ತಿದ್ದರು. ನೇಮಕಾತಿ ಸಿಕ್ಕಿದ್ದಕ್ಕಾಗಿ ಅವರು ಪ್ರಧಾನಿಯವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸಿದರು.

*****



(Release ID: 1870357) Visitor Counter : 154


Read this release in: English , Urdu , Hindi