ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಐಎಫ್ಎಫ್ಐ 52 ಪ್ರತಿನಿಧಿಗಳಿಗೆ ನಗರ ಮತ್ತು ಹಳ್ಳಿಗಳ ನಡುವಿನ ಉದ್ವಿಗ್ನತೆಯ ಬಗ್ಗೆ ಮಗುವಿನ ಮುಗ್ಧ ನೋಟವನ್ನು ಕಟ್ಟಿಕೊಟ್ಟ ಗಣೇಶ್ ಹೆಗಡೆಯವರ ಚೊಚ್ಚಲ ನಿರ್ದೇಶನದ ಕನ್ನಡ ಚಲನಚಿತ್ರ "ನೀಲಿ ಹಕ್ಕಿ"


ಸ್ವತಂತ್ರ ಸಿನಿಮಾ ಅಥವಾ ಸಣ್ಣ ಕಥೆಗಳು ಕೇವಲ ಉತ್ಸವಗಳಿಗಷ್ಟೇ ಅಲ್ಲದೇ ಎಲ್ಲರಿಗಾಗಿ ಇವೆ. ಭವಿಷ್ಯದಲ್ಲಿ ಮುಖ್ಯವಾಹಿನಿ ಅಥವಾ ಸ್ವತಂತ್ರ ಸಿನಿಮಾಗಳೆಂಬುದಿಲ್ಲದೇ, ಕೇವಲ ಸಿನಿಮಾ ಮಾತ್ರ ಇರಲಿದೆ ಎಂದು ಆಶಿಸುತ್ತೇವೆ: ನಿರ್ದೇಶಕ ಗಣೇಶ್ ಹೆಗಡೆ

Posted On: 27 NOV 2021 5:31PM by PIB Bengaluru

ಷೇಕ್ಸ್‌ಪಿಯರ್‌ನ ಪ್ರಖ್ಯಾತ ನಾಟಕ ಹ್ಯಾಮ್ಲೆಟ್ ನಲ್ಲಿ ಏಳುವ ಬದುಕುವುದು ಅಥವಾ ಸಾಯುವುದು ಎಂಬ ಅಸ್ತಿತ್ವವಾದದ ಪ್ರಶ್ನೆಯು ಸ್ವಲ್ಪ ವಿಭಿನ್ನ ಅವತಾರದಲ್ಲಿ 10 ವರ್ಷದ ಹುಡುಗ ಸಿದ್ದನನ್ನು ಕಾಡುತ್ತದೆ. ತನ್ನ ಹಳ್ಳಿಯ ನಿರ್ಮಲ ಸೌಂದರ್ಯ ಮತ್ತು ಪ್ರಶಾಂತತೆಗೆ ಬಲವಂತವಾಗಿ ವಿದಾಯ ಹೇಳುವ ಚಿಕ್ಕ ಹುಡುಗ ಸಿದ್ಧ, ತನ್ನ ಕುಟುಂಬವು ಸ್ಥಳಾಂತರಗೊಂಡ ನಗರದ ಅಸ್ತವ್ಯಸ್ತ ಮತ್ತು ಪರಕೀಯಗೊಳಿಸುವ ಗಡಿಬಿಡಿಯ ಜೀವನವನ್ನು ಅನಿವಾರ್ಯವಾಗಿ ಎದುರಿಸುತ್ತಾನೆ. ಸಿದ್ದ ಎದುರಿಸುವ ಸಂಘರ್ಷದ ಪ್ರತಿಬಿಂಬಗಳು ಅವನಿಗೆ ಜೀವನದ ಕೆಲವು ಕಠೋರ ಸತ್ಯಗಳನ್ನು ಮಾತ್ರ ತಿಳಿಸುವುದಿಲ್ಲ, ಸ್ಥಿರತೆ ಮತ್ತು ನಗರೀಕರಣದ ಪ್ರಮುಖ ಪ್ರಶ್ನೆಗಳನ್ನು ಸಹ ಎತ್ತುತ್ತವೆ.

ಹೌದು, ಗಣೇಶ್ ಹೆಗಡೆಯವರ ಚೊಚ್ಚಲ ನಿರ್ದೇಶನದ ಕನ್ನಡ ಚಲನಚಿತ್ರ ನೀಲಿ ಹಕ್ಕಿ 52 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿನಿಧಿಗಳೊಂದಿಗೆ ಸಿದ್ದನ ಆಂತರಿಕ ತುಮುಲವನ್ನು ಹಂಚಿಕೊಳ್ಲುತ್ತದೆ ಮತ್ತು ನಮ್ಮ ವರ್ತಮಾನ ಮತ್ತು ಭವಿಷ್ಯದ ಬಗೆಗಿನ ಪ್ರಮುಖ ಪ್ರಶ್ನೆಗಳನ್ನು ಮುಂದಿಡುತ್ತದೆ. ಚಲನಚಿತ್ರವು ಐಎಫ್ಎಫ್ಐನಲ್ಲಿ ಭಾರತೀಯ ಪನೋರಮಾ ಫೀಚರ್ ಫಿಲ್ಮ್ ವಿಭಾಗದಲ್ಲಿ ಪ್ರದರ್ಶನಗೊಂಡಿದೆ.

ನಿನ್ನೆ, ನವೆಂಬರ್ 26, 2021 ರಂದು ಉತ್ಸವದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿರ್ದೇಶಕ ಗಣೇಶ್ ಹೆಗಡೆ, “ಈ ಚಲನಚಿತ್ರವನ್ನು ಭಾರತೀಯ ಪ್ರೇಕ್ಷಕರಿಗೆ ಐಎಫ್ಎಫ್ಐನಲ್ಲಿ ಪ್ರದರ್ಶಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಚಲನಚಿತ್ರವು ಪ್ರಖ್ಯಾತ ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲಿ ವಿಶ್ವದ ಪ್ರಥಮ ಪ್ರದರ್ಶನವನ್ನು ಕಂಡಿದೆ. ಈ ವರ್ಷ. ಇದು ಅಧಿಕೃತವಾಗಿ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಭಾರತದ ದೂರದ ದಕ್ಷಿಣ ಭಾಗದ ಸ್ವತಂತ್ರ ಚಲನಚಿತ್ರವು ವೀಕ್ಷಕರಿಂದ ಗುರುತಿಸಲ್ಪಡುವುದು ನಮಗೆ ಉತ್ತಮವಾಗಿ ಕೆಲಸ ಮಾಡುವ ವಿಶ್ವಾಸವನ್ನು ನೀಡಿದೆ” ಎಂದು ಹೇಳಿದರು.

ಈ ಚಲನಚಿತ್ರವನ್ನು ನಿರ್ದೇಶಕರ ಸ್ವಂತ ಊರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅತ್ಯಂತ ಚಿಕ್ಕ ತಾರಾಗಣ ಮತ್ತು ಸಿಬ್ಬಂದಿಯೊಂದಿಗೆ ಚಿತ್ರೀಕರಿಸಲಾಗಿದೆ, “ಒಂದು ಪ್ರಾಮಾಣಿಕ ಕಥೆಯನ್ನು ಹೇಳುವುದು ಮತ್ತು ನಮಗೆ ಅನಿಸಿದ್ದನ್ನು ವ್ಯಕ್ತಪಡಿಸುವುದು ನಮ್ಮ ಪ್ರಯತ್ನವಾಗಿತ್ತು. ಇತಿಮಿತಿಗಳ ನಡುವೆ ಈ ಚಿತ್ರವನ್ನು ನಿರ್ಮಿಸಿದ್ದು ಒಂದು ಕಠಿಣ ಮತ್ತು ಸುಂದರವಾದ ಪ್ರಯಾಣವಾಗಿತ್ತು.” ಎಂದು ಅವರು ಹೇಳಿದರು.

ಈ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ಬೆಂಬಲ ನೀಡಿದ್ದಾರೆ. ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿರುವ ಹೆಗ್ಡೆ ಇದರ ಬಗ್ಗೆ ಕುತೂಹಲಕಾರಿಯಾಗಿ ವಿವರಿಸುತ್ತಾರೆ. “ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಪ್ರತಿಯೊಬ್ಬರೂ ಮನೆಯಲ್ಲಿ ಕುಳಿತು ಹೊಸ ಚಲನಚಿತ್ರಗಳನ್ನು ವೀಕ್ಷಿಸಲು ಬಯಸಿದ್ದರು. ನಮಗೆ ಗೊತ್ತಿಲ್ಲದೆ ಹೇಗೋ ವಿಜಯ್ ಸೇತುಪತಿ ಸರ್ ಗೆ ನಮ್ಮ ಸಿನಿಮಾ ಬಗ್ಗೆ ತಿಳಿಯಿತು. ಅವರು ನಿಜವಾಗಿಯೂ ನಮ್ಮ ಪ್ರಯತ್ನಗಳನ್ನು ಮೆಚ್ಚಿದರು, ಅವರು ಚಿತ್ರವು ತಮ್ಮ ಸ್ವಂತ ಜೀವನದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದರು. ಹಾಗಾಗಿ ಅವರಾಗಿಯೇ ಯೋಜನೆಯ ಭಾಗವಾಗಲು ಮುಂದಾದರು. ನಾವು ಕರಾವಳಿ ಕರ್ನಾಟಕದ ದೂರದ ಹಳ್ಳಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ ಮತ್ತು ಸೇತುಪತಿ ದಕ್ಷಿಣದ ಸೂಪರ್‌ಸ್ಟಾರ್. ಆದ್ದರಿಂದ, ಅವರು ತಮ್ಮ ಸಹಾಯ ಹಸ್ತವನ್ನು ಚಾಚಿದಾಗ ನಮಗೆ ನಿಜವಾಗಿಯೂ ಹೆಮ್ಮೆಯಾಯಿತು. ಅಂತಹ ಸೂಪರ್‌ಸ್ಟಾರ್‌ಗಳು ಮತ್ತು ದೊಡ್ಡ ನಿರ್ಮಾಣ ಸಂಸ್ಥೆಗಳು ನಮ್ಮ ಬೆನ್ನು ತಟ್ಟಿದಾಗ, ಅದು ನಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.”

ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಸ್ವತಂತ್ರ ಚಲನಚಿತ್ರ ನಿರ್ಮಾಪಕರ ನಡುವಿನ ಸಹಯೋಗದ ಕುರಿತು ಹೆಗಡೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. “ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಪ್ರಾರಂಭಿಸಿದಾಗ, ಅದು ಸಿನಿಮಾವನ್ನು ಬೆಂಬಲಿಸುತ್ತದೆ ಎಂದು ನಾವು ಭಾವಿಸಿದೆವು. ಆದರೆ ಅದು ಮುಖ್ಯವಾಹಿನಿಯ ಸಿನಿಮಾವನ್ನು ಮಾತ್ರ ಬೆಂಬಲಿಸಿಲು ಪ್ರಾರಂಭಿಸಿತು. ನಾವು ಇನ್ನೂ ನಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ವೇದಿಕೆಯನ್ನು ಹುಡುಕುತ್ತಿದ್ದೇವೆ. ನಾವು ಪ್ರಾದೇಶಿಕ ಭಾಷೆಯಿಂದ ಬಂದವರಾಗಿದ್ದು, ಉತ್ಸವದ ಸಿನಿಮಾ ಎಂಬ ಹಣೆಪಟ್ಟಿ ಹೊತ್ತ ನಾವು ಸದಾ ನಿರ್ಲಕ್ಷ್ಯಕ್ಕೆ ಒಳಗಾಗುತ್ತೇವೆ. ಸ್ವತಂತ್ರ ಸಿನಿಮಾ ಅಥವಾ ಸಣ್ಣ ಕಥೆಗಳು ಉತ್ಸವಗಳಿಗೆ ಹಬ್ಬಗಳಿಗೆ ಮಾತ್ರವಲ್ಲದೇ ಎಲ್ಲರಿಗಾಗಿ ಇವೆ. ಭವಿಷ್ಯದಲ್ಲಿ ಮುಖ್ಯವಾಹಿನಿ ಅಥವಾ ಸ್ವತಂತ್ರ ಸಿನಿಮಾಗಳೆಂಬುದಿಲ್ಲದೇ, ಕೇವಲ ಸಿನಿಮಾ ಮಾತ್ರ ಇರಲಿದೆ ಎಂದು ಆಶಿಸುತ್ತೇವೆ.”

ಅಂತಹ ಚಲನಚಿತ್ರಗಳನ್ನು ಭಾರತದಲ್ಲಿ ಜನಸಾಮಾನ್ಯರಿಗೆ ತಲುಪಿಸುವಂತೆ ಅವರು ಒಟಿಟಿಗಳಿಗೆ ಮನವಿ ಮಾಡಿದರು. “ಸಿನಿಮಾ ಒಂದು ಕಲಾ ಪ್ರಕಾರ. ಸಣ್ಣ ಚಿತ್ರನಿರ್ಮಾಪಕರಿಗೆ ಹಾಕಿದ ಹಣ ವಾಪಸ್ ಪಡೆಯುವುದು ಕಷ್ಟ; ನಾವು ಬಹುಕೋಟಿಯ ಯಶಸ್ಸಿಗಾಗಿ ಬಂದಿಲ್ಲ, ಪ್ರಾಮಾಣಿಕ ಸಿನಿಮಾ ಮಾಡಲು ಬಂದಿದ್ದೇವೆ. ಆದ್ದರಿಂದ ಸಣ್ಣ ಊರಿನ ಕಥೆಗಳನ್ನು ಹೇಳಲು ಹೆಣಗಾಡುತ್ತಿರುವ ನಾವೆಲ್ಲರೂ ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ.” ಎಂದು ಅವರು ಹೇಳಿದರು.

ವಿವಿಧ ಸಮಯ ಮತ್ತು ಸ್ಥಳಗಳಲ್ಲಿ ಸಿನಿಮಾದ ಲಭ್ಯತೆಯನ್ನು ಒದಗಿಸುವ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಪ್ರಯೋಜನವನ್ನು ಅವರು ವಿವರಿಸಿದರು,. “ಮನರಂಜನಾ ಉದ್ಯಮವು ಹೇಗೆ ನಡೆಯುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ, ಆದರೆ ನಾನು ನನಗಾಗಿ ಸಿನಿಮಾ ಮಾಡುತ್ತಿಲ್ಲ. ನನ್ನ ಕಲೆಯನ್ನು ಸಿನಿಮಾ ಮೂಲಕ ವ್ಯಕ್ತಪಡಿಸುತ್ತಿದ್ದೇನೆ. ಆಶಾದಾಯಕವಾಗಿ ಒಟಿಟಿ ಗಳು ನಮಗೆ ಹೆಚ್ಚಿನ ಜನರನ್ನು ತಲುಪಲು ಒಂದು ಮಾರ್ಗವನ್ನು ಕಲ್ಪಿಸುತ್ತವೆ. ಉತ್ಸವಗಳು 10 ದಿನ ನಡೆಯುತ್ತವೆ, ಆದರೆ ಚಿತ್ರವು ಒಟಿಟಿಯಲ್ಲಿದ್ದಾಗ, ಜನರು ಯಾವಾಗ ಬೇಕಾದರೂ ವೀಕ್ಷಿಸಬಹುದು, ಅದು ದೊಡ್ಡ ಪ್ರಯೋಜನವಾಗಿದೆ. ಈ ವರ್ಷ, ಅಧಿಕೃತ ಆಸ್ಕರ್ ಪ್ರವೇಶವು ತಮಿಳು ಸ್ವತಂತ್ರ ಸಿನಿಮಾವಾಗಿದೆ, ಭವಿಷ್ಯದಲ್ಲಿ ಒಟಿಟಿಗಳು ಸ್ವತಂತ್ರ ಚಿತ್ರಗಳನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

***



(Release ID: 1775718) Visitor Counter : 163