ಗಣಿ ಸಚಿವಾಲಯ

ದೇಶದಲ್ಲಿ ಖನಿಜ ಸಂಪನ್ಮೂಲಗಳು ಮತ್ತು ಖನಿಜ ನಿಕ್ಷೇಪಗಳ ಪರಿಶೋಧನೆ ಹೆಚ್ಚಿಸಲು ಕ್ರಮ

Posted On: 11 AUG 2021 6:28PM by PIB Bengaluru

ಖನಿಜ ಮೌಲ್ಯಮಾಪನವು ಒಂದು ನಿರಂತರ ಪ್ರಕ್ರಿಯೆಯಾಗಿದೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (ಜಿಎಸ್‌ಐ), ಖನಿಜ ಪರಿಶೋಧನಾ ನಿಗಮ (ಎಂಇಸಿಎಲ್), ಪರಮಾಣು ಖನಿಜಗಳ ಪರಿಶೋಧನೆ ಮತ್ತು ಸಂಶೋಧನಾ ನಿರ್ದೇಶನಾಲಯ (ಎಎಂಡಿಇಆರ್), ರಾಜ್ಯ ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಗಳು, ರಾಜ್ಯ/ಕೇಂದ್ರ ಸರ್ಕಾರಗಳ ಸಂಸ್ಥೆಗಳು ದೇಶದಲ್ಲಿ ಖನಿಜ ನಿಕ್ಷೇಪಗಳ ಪರಿಶೋಧನೆಯಲ್ಲಿ ತೊಡಗಿಕೊಂಡಿವೆ.

ದೇಶದ ಖನಿಜ ಸಮೀಕ್ಷೆಗಳನ್ನು ನಡೆಸಲು ಜಿಎಸ್‌ಐ, ಕೇಂದ್ರ ಭೂವೈಜ್ಞಾನಿಕ ಕಾರ್ಯಕ್ರಮ ಮಂಡಳಿ ಮೂಲಕ ವಿವಿಧ ಏಜೆನ್ಸಿಗಳ ಪರಿಶೋಧನಾ ಕಾರ್ಯಕ್ರಮಗಳನ್ನು ರೂಪಿಸುವ ನೋಡಲ್ ಸಂಸ್ಥೆಯಾಗಿದೆ. ಜಿಎಸ್‌ಐ ವಿವಿಧ ಹಂತಗಳಲ್ಲಿ ವಿವಿಧ ಖನಿಜಗಳ ಮ್ಯಾಪಿಂಗ್ ಮತ್ತು ವ್ಯವಸ್ಥಿತ ಪರಿಶೋಧನೆಯನ್ನು ನಡೆಸುತ್ತದೆ. 'ಸ್ಥಳಾನ್ವೇಷಣೆ ಸಮೀಕ್ಷೆ' (ಜಿ4), 'ಪ್ರಾಥಮಿಕ ಪರಿಶೋಧನೆ' (ಜಿ3), ಮತ್ತು 'ಸಾಮಾನ್ಯ ಪರಿಶೋಧನೆ' (ಜಿ2), ಇವುಗಳಲ್ಲಿ ಸೇರಿವೆ. ವಿಶ್ವಸಂಸ್ಥೆಯ ಚೌಕಟ್ಟು ವರ್ಗೀಕರಣ (ಯು ಎನ್ ಎಫ್ ಸಿ) ಮತ್ತು ಖನಿಜ ಸಾಕ್ಷ್ಯ ಮತ್ತು ಖನಿಜ ವಿಷಯ ನಿಯಮ 2015 ರ ಮಾರ್ಗಸೂಚಿಗಳನ್ನು ಅನುಸರಿಸಿ ಖನಿಜ ಸಂಪನ್ಮೂಲವನ್ನು ಹೆಚ್ಚಿಸುವ ಗುರಿಯೊಂದಿಗೆ ಇವುಗಳನ್ನು ಕೈಗೊಳ್ಳಲಾಗುತ್ತದೆ.

ಜಿಎಸ್‌ಐ ಆನ್‌ಲೈನ್ ಕೋರ್ ಬ್ಯುಸಿನೆಸ್ ಇಂಟಿಗ್ರೇಟೆಡ್ ಸಿಸ್ಟಮ್ (ಒಸಿಬಿಐಎಸ್) ಅನ್ನು ಜಾರಿಗೊಳಿಸಿದ್ದು, ಇದು ವಿಶಾಲವಾದ ಭೂ ವೈಜ್ಞಾನಿಕ ಸಮುದಾಯ ಮತ್ತು ಇತರ ಪಾಲುದಾರರಿಗೆ ಜಿಎಸ್‌ಐ ಡೇಟಾ ಮತ್ತು ಖನಿಜ ಪರಿಶೋಧನೆ ಡೇಟಾ ಸೇರಿದಂತೆ ಇತರ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಲು, ವೀಕ್ಷಿಸಲು ಮತ್ತು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಜಿಎಸ್‌ಐ ನಿಂದ ಕಾರ್ಯಗತಗೊಳಿಸಿದ ಖನಿಜ ಪರಿಶೋಧನೆ ಕಾರ್ಯಕ್ರಮಗಳು ಸಾರ್ವಜನಿಕ ಡೊಮೇನ್‌ನಲ್ಲಿ (www.gsi.gov.in) ಭೂವೈಜ್ಞಾನಿಕ ವರದಿಗಳ ರೂಪದಲ್ಲಿ ಲಭ್ಯವಿರುತ್ತವೆ.

ಇದಲ್ಲದೆ, ಗಣಿ ಸಚಿವಾಲಯದ ಅಧೀನ ಕಚೇರಿಯಾದ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ (ಐಬಿಎಂ) ವಿವಿಧ ಏಜೆನ್ಸಿಗಳಿಂದ ಪರಿಶೋಧನೆಯ ಡೇಟಾವನ್ನು ಸಂಗ್ರಹಿಸುತ್ತದೆ. ಪರಿಶೋಧನೆಯ ಮಾಹಿತಿ ಮತ್ತು ವಿವಿಧ ಏಜೆನ್ಸಿಗಳು ಅಥವಾ ಪಾಲುದಾರರು ನೀಡಿದ ಫಲಿತಾಂಶಗಳ ಆಧಾರದ ಮೇಲೆ ಐಬಿಎಂ ಐದು ವರ್ಷಕ್ಕೊಮ್ಮೆ ದೇಶದ ಖನಿಜ ಸಂಪನ್ಮೂಲಗಳ ರಾಷ್ಟ್ರೀಯ ಖನಿಜ ದಾಸ್ತಾನು (ಎನ್ಎಂಐ) ಪ್ರಕಟಿಸುತ್ತದೆ. ಖನಿಜಗಳ ನಿಕ್ಷೇಪ/ಸಂಪನ್ಮೂಲಗಳ ಮಾಹಿತಿಯನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಪ್ರಕಟಿಸಲಾಗುತ್ತಿದೆ ಮತ್ತು ಐಬಿಎಂ ವೆಬ್‌ಸೈಟ್‌ನಲ್ಲಿ ಇದು ಲಭ್ಯವಿದೆ.

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ, 2015 ರ ಅಡಿಯಲ್ಲಿ, ಪ್ರಮುಖ ಖನಿಜಗಳಿಗೆ, ಹರಾಜು ಮೂಲಕ ಖನಿಜ ರಿಯಾಯಿತಿಯನ್ನು ನೀಡಬಹುದು. ಈ ಖನಿಜ ರಿಯಾಯಿತಿಗಳನ್ನು ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಖನಿಜಗಳ ಹೊರತೆಗೆಯುವಿಕೆಯು ರಾಜ್ಯ ಸರ್ಕಾರ ನೀಡಿದ ಖನಿಜ ರಿಯಾಯಿತಿಗಳನ್ನು ಮತ್ತು ಖನಿಜಗಳ ಬಳಕೆಯು ಖನಿಜಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಅವಲಂಬಿಸಿರುತ್ತದೆ.

ಈ ಮಾಹಿತಿಯನ್ನು ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ನೀಡಿದರು.

***



(Release ID: 1744940) Visitor Counter : 174


Read this release in: English , Urdu