ಗೃಹ ವ್ಯವಹಾರಗಳ ಸಚಿವಾಲಯ

ದೇಶದ ಹಲವೆಡೆ ಮಾದಕವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಕಾರ್ಯಾಚರಣೆ; ಮಾದಕವಸ್ತುಗಳಿಗೆ ಮುಂಬೈ ಪ್ರಮುಖ ತಾಣ


ಮುಂಬೈನಲ್ಲಿ 1 ಕೆಜಿ ಕೊಕೇನ್, 2 ಕೆಜಿ ಪಿ.ಸಿ.ಪಿ. (ಫೆನ್ಸಿಕ್ಲಿಡಿನ್), 29.300 ಕೆಜಿ ಎಂಡಿಎ, 70 ಗ್ರಾಂ ಮೆಫೆಡ್ರೋನ್ ವಶಕ್ಕೆ

ಜಮ್ಮುವಿನಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 56 ಕೆಜಿ ಹಶೀಶ್ ವಶಕ್ಕೆ; ಈ ಸಂಬಂಧ ಮುಂಬೈನಲ್ಲಿ ಒಬ್ಬನ ಬಂಧನ

Posted On: 15 OCT 2020 7:35PM by PIB Bengaluru

ದೇಶದ ಮೆಟ್ರೋ ನಗರಗಳು ವಿವಿಧ ಮಾದಕವಸ್ತುಗಳ ಕಳ್ಳಸಾಗಣೆಯ ಪ್ರಮುಖ ತಾಣವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದಕ ವಸ್ತು ನಿಗ್ರಹ ಘಟಕ (ಎನ್‌ಸಿಬಿ) ಮುಂಬೈ ಮತ್ತು ದೇಶದ ಇತರೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ಪೂರೈಕೆ ಸರಪಳಿಯೊಂದಿಗೆ ಸಂಪರ್ಕ ಹೊಂದಿದ್ದವರನ್ನು ಬಂಧಿಸಿದೆ ಮತ್ತು ಹಲವು ಮಾದಕವಸ್ತುಗಳನ್ನು ವಶಕ್ಕೆ ಪಡೆದಿದೆ. 
ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ಎನ್‌ಸಿಬಿಯು ಭಾರಿ ಕಾರ್ಯಾಚರಣೆ ನಡೆಸುತ್ತಿದೆ. ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಗಳಲ್ಲಿ, ಎನ್‌ಸಿಬಿ ಮಾದಕವಸ್ತು ಕಳ್ಳಸಾಗಣೆದಾರರ ಸಂಭಾವ್ಯ ಅಡಗುತಾಣಗಳ ಮೇಲೆ ನಿಯಮಿತ ದಾಳಿಗಳನ್ನು ನಡೆಸುತ್ತಿದೆ.
ಕಾರ್ಯಾಚರಣೆ 1: 
ಖಚಿತ ಮಾಹಿತಿಯ ಆಧಾರದ ಮೇಲೆ, 12.10.2020 ರಂದು ಎನ್‌ಸಿಬಿಯ ಎಂಜಡ್‌ಯು ತಂಡವು ಪಾಲ್ಘರ್ ನ ವಾಸೈನಲ್ಲಿ ಎಂ. ಅಹ್ಮದ್ ಎಂಬುವವನಿಂದ 1 ಕೆಜಿ ಕೊಕೇನ್ ಮತ್ತು 2 ಕೆಜಿ ಪಿ.ಸಿ.ಪಿ. (ಫೆನ್ಸಿಕ್ಲಿಡಿನ್) ವಶಪಡಿಸಿಕೊಂಡಿದೆ. ಎಸ್.ಕೆ ಸೌರಭ್ ಎಂಬಾತ ಈ ಮಾದಕವಸ್ತುವನ್ನು ಮಾರಾಟಕ್ಕಾಗಿ ನೀಡಿದ್ದ ಎಂದು ವಿಚಾರಣೆಯ ಸಮಯದಲ್ಲಿ ಎಂ. ಅಹ್ಮದ್ ತಿಳಿಸಿದ್ದಾನೆ. ಎನ್‌ಸಿಬಿ ತಂಡವು ಮಾನವ ಗುಪ್ತಚರ ಮತ್ತು ತಾಂತ್ರಿಕ ಕಣ್ಗಾವಲು ತೀವ್ರಗೊಳಿಸಿ, ಎಸ್.ಕೆ.ಸೌರಭ್ ನನ್ನು 13.10.2020 ರಂದು ಪಾಲ್ಘರ್‌ನ ವಾಸೈನಲ್ಲಿ ಬಂಧಿಸಿತು. ಎಸ್.ಕೆ ಸೌರಭ್ ನನ್ನು ನಿರಂತರ ವಿಚಾರಣೆಗೊಳಪಡಿಸಿದ ನಂತರ 14.10.2020 ರಂದು ಅವನ ಅಂಗಡಿಯಿಂದ 29.300 ಕೆಜಿ ಎಂಡಿಎಯನ್ನು ವಶಪಡಿಸಿಕೊಳ್ಳಲಾಯಿತು. ಮಾದಕವಸ್ತು ಎ.ಖಾನಿವಾಡೆಕರ್ ಮತ್ತು ಆರ್.ಖಾನಿವಾಡೆಕರ್ ಎಂಬುವವರಿಗೆ ಸೇರಿದ್ದು ಎಂದು ವಿಚಾರಣೆಯ ಸಂದರ್ಭದಲ್ಲಿ ಎಸ್.ಕೆ.ಸೌರಭ್ ಬಹಿರಂಗಪಡಿಸಿದ್ದಾನೆ.
ಎ. ಖಾನಿವಾಡೆಕರ್ ನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯ ವೇಳೆ, 483 ಕೆಜಿ ಎಫಿಡ್ರೈನ್ ಡಿ ಆರ್ ಐ ಪ್ರಕರಣದಲ್ಲಿ ತನ್ನ ಸಹೋದರ ಆರ್. ಖಾನಿವಾಡೆಕರ್ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ ಎಂದು ಈತ ಬಹಿರಂಗಪಡಿಸಿದ್ದಾನೆ. ಡಿ ಆರ್ ಐ ದಾಳಿಗೆ ಮುಂಚಿತವಾಗಿ, ಅವರು ಎಸ್.ಕೆ.ಸೌರಭ್ನ ಅಂಗಡಿ/ ಗೋದಾಮಿಗೆ ಮಾದಕವಸ್ತುಗಳನ್ನು ಸ್ಥಳಾಂತರಿಸಿದ್ದರು ಮತ್ತು ಹೀಗೆ ಸ್ಥಳಾಂತರಿಸುವಾಗ ಎಸ್.ಕೆ.ಸೌರಭ್ ಮಾದಕವಸ್ತುಗಳನ್ನು ತೆಗೆದುಕೊಂಡಿದ್ದ. ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ 2: 
ಎನ್‌ಸಿಬಿಯ ಜಮ್ಮು ವಲಯ ಘಟಕವು 15.09.2019 ರಂದು ಜಮ್ಮುವಿನ ನಾಗ್ರೋಟಾದ ಬಾನ್ ಟೋಲ್ ಪ್ಲಾಜಾದಲ್ಲಿ 55 ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ ಸುಮಾರು 56.4 ಕೆಜಿ ಚರಸ್ ಅನ್ನು ವಶಪಡಿಸಿಕೊಂಡಿದೆ. ಮತ್ತು ದೆಹಲಿಯ ನಿವಾಸಿಗಳಾದ ಎಂ. ಗುಪ್ತಾ, ಎ. ಗಂಬೀರ್ ಮತ್ತು ಸೋನಿಯಾ ಎಂಬುವವರನ್ನು ಬಂಧಿಸಿದೆ. 1,91,000 ರೂ. ನಗದು ಮತ್ತು ಎಕ್ಸ್‌ಯುವಿ 500 ವಾಹನವನ್ನು ಎನ್‌ಸಿಬಿ ವಶಪಡಿಸಿಕೊಂಡಿದೆ. ಚರಸ್ ಅನ್ನು ಮುಂಬೈಗೆ ಸಾಗಿಸಲು ಉದ್ದೇಶಿಸಲಾಗಿತ್ತು. ಕಾರ್ಯಾಚರಣೆ ಘಟಕ ಮತ್ತು ಜಮ್ಮು ವಲಯ ಘಟಕದ ಸಂಯೋಜಿತ ಕಾರ್ಯಾಚರಣೆಯಲ್ಲಿ, 56 ಕೆಜಿ ಚರಸ್ ಪ್ರಕರಣದ ಪ್ರಮುಖ ಶಂಕಿತ (15.09.2020 ರಂದು ಜಮ್ಮುವಿನಲ್ಲಿ ವಶಪಡಿಸಿಕೊಳ್ಳಲಾಗಿದೆ) ಮುಂಬೈನ ಫಾರೂಕ್ ಚಾಂದ್ ಬಾದ್ಶಾ ಶೇಖ್ (ವಯಸ್ಸು ಸುಮಾರು 40 ವರ್ಷ) ಎಂಬಾತನನ್ನು ಮುಂಬೈ- ಪುಣೆ ಹೆದ್ದಾರಿಯಲ್ಲಿ ಬಂಧಿಸಲಾಯಿತು, ಜೊತೆಗೆ ಅವರ ಸಹಚರ ರಾಜಸ್ತಾನದ ಕುರ್ಬನ್ ಅಲಿ ಎಂಬಾತನನ್ನೂ ಬಂಧಿಸಲಾಗಿದೆ.
ಅವರ ವಿಚಾರಣೆಯ ಸಂದರ್ಭದಲ್ಲಿ, ಮುಂಬೈನಲ್ಲಿ 6 ಕೆಜಿ ಚರಸ್ ಅನ್ನು ಅವರ ಇತರ ಸಹವರ್ತಿಗಳಿಂದ ವಶಪಡಿಸಿಕೊಳ್ಳಲಾಗಿದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. 
ಕಾರ್ಯಾಚರಣೆ 3: 
ಮತ್ತೊಂದು ಕಾರ್ಯಾಚರಣೆಯಲ್ಲಿ, ಎನ್‌ಸಿಬಿ ಕಾರ್ಯಾಚರನೆ ತಂಡವು ಪ್ರದೀಪ್ ರಾಜಾರಾಮ್ ಸಾಹ್ನಿ ಎಂಬಾತನನ್ನು ಅಂಧೇರಿ ಪಶ್ಚಿಮ ಪ್ರದೇಶದಲ್ಲಿ 70 ಗ್ರಾಂ ಮೆಫೆಡ್ರೊನ್‌ನೊಂದಿಗೆ ಬಂಧಿಸಿದೆ. ಅಂಧೇರಿ ಮತ್ತು ಜುಹು ಪ್ರದೇಶದಲ್ಲಿ ಹಲವಾರು ವ್ಯಕ್ತಿಗಳಿಗೆ ಮೆಫೆಡ್ರೋನ್ ಸರಬರಾಜು ಮಾಡುತ್ತಿರುವುದಾಗಿ ಪ್ರದೀಪ್ ಬಹಿರಂಗಪಡಿಸಿದ್ದಾನೆ. ಬಾಲಾಜಿ ಟೆಲಿಫಿಲ್ಮ್ಸ್ ಸಂಸ್ಥೆಯಲ್ಲಿ ಈತ ಜವಾನನಾಗಿ ಕೆಲಸ ಮಾಡುತ್ತಿದ್ದ.  ಪ್ರದೀಪ್ ರಾಜಾರಾಮ್ ಸಾಹ್ನಿಯ ಹೆಚ್ಚಿನ ವಿತರಣಾ ಜಾಲದ ಬಗ್ಗೆ ತನಿಖೆ ಮಾಡಲಾಗುತ್ತಿದೆ. 
ಕಾರ್ಯಾಚರಣೆ 4: 
ಮಾದಕ ವಸ್ತುಗಳ ವಿತರಣಾ ಜಾಲ ವಿರುದ್ಧದ ಮತ್ತೊಂದು ಕಾರ್ಯಾಚರಣೆಯಲ್ಲಿ, ಎನ್‌ಸಿಬಿಯು ನೈಜೀರಿಯಾ ದೇಶದ ಉಕಾ ಎಮೆಕಾ ಅಲಿಯಾಸ್ ಗಾಡ್ವಿನ್ ಎಂಬಾತನನ್ನು ಬಂಧಿಸಿದೆ ಮತ್ತು ಅವನಿಂದ 04 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾದಕವಸ್ತು ದಕ್ಷಿಣ ಅಮೆರಿಕಾದಿಂದ ಬಂದಿದೆ ಮತ್ತು ಪಾಲಿ ಹಿಲ್ ಏರಿಯಾ, ಬಾಂದ್ರಾ, ಅಂಧೇರಿ, ಜುಹು ಮತ್ತು ಖಾರ್ ಪ್ರದೇಶಗಳಿಗೆ ಇದನ್ನು ವಿತರಿಸುತ್ತಿದ್ದನು ಎಂದು ಶಂಕಿಸಲಾಗಿದೆ.
ಈತನ ಸಂಪರ್ಕಗಳ ಹೆಚ್ಚಿನ ತನಿಖೆ ನಡೆಯುತ್ತಿದೆ.
ಮಾದಕವಸ್ತು ಕಳ್ಳಸಾಗಣೆಯನ್ನು ನಿರ್ಮೂಲನೆ ಮಾಡಲು ಎನ್‌ಸಿಬಿಯು ಕಂಕಣ ತೊಟ್ಟಿದೆ.

***



(Release ID: 1664941) Visitor Counter : 131


Read this release in: English , Urdu , Hindi