ಕೃಷಿ ಸಚಿವಾಲಯ

ಬೆಳೆ ವಿಮೆ ಯೋಜನೆಗಳ ಅನುಷ್ಠಾನದಲ್ಲಿ ಪ್ರಸ್ತುತ ಎದುರಾಗುತ್ತಿರುವ ಸವಾಲುಗಳನ್ನು ನಿವಾರಿಸಲು "ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ (ಪಿಎಂಎಫ್‌.ಬಿವೈ)" ಮತ್ತು "ಪುನಾರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಆರ್‌.ಡಬ್ಲ್ಯುಬಿಸಿಐಎಸ್)" ಅನ್ನು ಪುನರುಜ್ಜೀವನಗೊಳಿಸಲು ಸಂಪುಟದ ಅನುಮೋದನೆ

Posted On: 19 FEB 2020 4:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬೆಳೆ ವಿಮೆ ಯೋಜನೆಗಳ ಅನುಷ್ಠಾನದಲ್ಲಿ ಪ್ರಸ್ತುತ ಎದುರಾಗುತ್ತಿರುವ ಸವಾಲುಗಳನ್ನು ನಿವಾರಿಸಲು "ಪ್ರಧಾನ ಮಂತ್ರಿ ಬೆಳೆ ಬೀಮೆ ಯೋಜನೆ (ಪಿಎಂಎಫ್‌.ಬಿವೈ)" ಮತ್ತು "ಪುನಾರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಆರ್‌.ಡಬ್ಲ್ಯು.ಬಿಸಿಐಎಸ್)" ಅನ್ನು ಪುನರುಜ್ಜೀವನಗೊಸಲು ತನ್ನ ಅನುಮೋದನೆ ನೀಡಿದೆ.

ಇದು ಹಾಲಿ ಪಿಎಂಎಫ್.ಬಿ.ವೈ ಮತ್ತು ಆರ್.ಡಬ್ಲ್ಯು.ಬಿ.ಸಿ.ಐ.ಎಸ್. ಯೋಜನೆಗಳ ಕೆಲವೊಂದು ಮಾನದಂಡಗಳಿಗೆ ಈ ಕೆಳಕಂಡ ಮಾರ್ಪಾಡು ಪ್ರಸ್ತಾಪಿಸಿದೆ:

a. ವಿಮಾ ಕಂಪನಿಗಳಿಗೆ ವಾಣಿಜ್ಯ ಹಂಚಿಕೆಯನ್ನು (ಪಿಎಂಎಫ್.ಬಿ.ವೈ./ ಆರ್.ಡಬ್ಲ್ಯು.ಬಿ.ಸಿ.ಐ.ಎಸ್. ಎರಡೂ) ಮೂರು ವರ್ಷಗಳವರೆಗೆ ಹಂಚಿಕೆ ಮಾಡುವುದು.

b. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಯಾವುದೇ ಜಿಲ್ಲೆಯ ಬೆಳೆ ಸಂಯೋಜನೆಗೆ (ಪಿಎಂಎಫ್‌.ಬಿವೈ / ಆರ್‌.ಡಬ್ಲ್ಯುಬಿಸಿಐಎಸ್ ಎರಡಕ್ಕೂ) ವಿಮೆ ಮಾಡಿರುವ ರೀತಿಗೆ ಸಂಬಂಧಿಸಿದಂತೆ ಆರ್ಥಿಕ ನೆರವಿನ ಪ್ರಮಾಣ (ಸ್ಕೇಲ್ ಆಫ್ ಫೈನಾನ್ಸ್) ಅಥವಾ ಜಿಲ್ಲಾ ಮಟ್ಟದ ಸರಾಸರಿ ಇಳುವರಿ ಮೌಲ್ಯ (ಎನ್‌.ಎವೈ) ಅಂದರೆ ಎನ್.ಎ.ವೈ.* ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಫಾರಂ ಗೇಟ್ ದರವನ್ನು ಕನಿಷ್ಠ ಬೆಂಬಲ ಬೆಲೆ ಘೋಷಿಸದ ಇತರ ಬೆಳೆಗಳಿಗೆ ಪರಿಗಣಿಸಲಾಗುತ್ತದೆ.

c. ಪಿಎಂಎಫ್‌.ಬಿವೈ / ಆರ್‌.ಡಬ್ಲ್ಯುಬಿಸಿಐಎಸ್ ಅಡಿಯಲ್ಲಿ ಕೇಂದ್ರದ ಸಬ್ಸಿಡಿಯನ್ನು ನೀರಾವರಿಯಿಲ್ಲದ ಪ್ರದೇಶಗಳು/ಬೆಳೆಗಳಿಗೆ ಶೇ.30 ಮತ್ತು ನೀರಾವರಿ ಪ್ರದೇಶಗಳು / ಬೆಳೆಗಳಿಗೆ ಶೇ.25 ವರೆಗೆ ಪ್ರೀಮಿಯಂ ದರಗಳಿಗೆ ಸೀಮಿತಗೊಳಿಸಲಾಗುತ್ತದೆ. ಶೇ. 50 ಅಥವಾ ಅದಕ್ಕಿಂತ ಹೆಚ್ಚು ನೀರಾವರಿ ಪ್ರದೇಶವನ್ನು ಹೊಂದಿರುವ ಜಿಲ್ಲೆಗಳನ್ನು ನೀರಾವರಿ ಪ್ರದೇಶ / ಜಿಲ್ಲೆ ಎಂದು ಪರಿಗಣಿಸಲಾಗುತ್ತದೆ (ಪಿಎಂಎಫ್‌.ಬಿವೈ / ಆರ್‌.ಡಬ್ಲ್ಯೂಬಿಸಿಐಎಸ್ ಎರಡಕ್ಕೂ).

d. ಯಾವುದೇ ಅಥವಾ ಹಲವು ಹೆಚ್ಚುವರಿ ಅಪಾಯದ ವ್ಯಾಪ್ತಿ/ಸ್ವರೂಪದ ಆಯ್ಕೆ ಅಂದರೆ ನಿರ್ಬಂಧಿತ ಬಿತ್ತನೆ, ಸ್ಥಳೀಯ ಹವಾಮಾನ, ಋತುವಿನ ಮಧ್ಯದ ಪ್ರತಿಕೂಲಗಳು ಮತ್ತು ಸುಗ್ಗಿಯ ನಂತರದ ನಷ್ಟಗಳಿಗೆ ಸಂಬಂಧಿಸಿದಂತೆ ಯೋಜನೆಯ ಅನುಷ್ಠಾನಕ್ಕೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಮ್ಯತೆ ಒದಗಿಸಲಾಗಿದೆ. ಜೊತೆಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ನಿರ್ದಿಷ್ಟ ಏಕ ಗಂಡಾಂತರದ ಅಪಾಯ/ ವಿಮಾ ವ್ಯಾಪ್ತಿಗಳು, ಆಲಿಕಲ್ಲು ಮಳೆ ಮುಂತಾದವುಗಳಿಗೂ ಪಿಎಂಎಫ್‌ಬಿವೈ ಅಡಿಯಲ್ಲಿ ಮೂಲ ವ್ಯಾಪ್ತಿಯನ್ನು ಆಯ್ಕೆ ಮಾಡುವ ಅಥವಾ ಮಾಡದೇ ಇರಬಹುದು (ಪಿಎಂಎಫ್‌.ಬಿವೈ / ಆರ್‌.ಡಬ್ಲ್ಯುಬಿಸಿಐಎಸ್ ಎರಡಕ್ಕೂ).

e. ನಿಗದಿತ ಸಮಯದ ಮಿತಿಯನ್ನು ಮೀರಿ ಸಂಬಂಧಪಟ್ಟ ವಿಮಾ ಕಂಪನಿಗಳಿಗೆ ಅಗತ್ಯವಾದ ಪ್ರೀಮಿಯಂ ಸಬ್ಸಿಡಿಯನ್ನು ಬಿಡುಗಡೆ ಮಾಡುವಲ್ಲಿ ರಾಜ್ಯಗಳು ಸಾಕಷ್ಟು ವಿಳಂಬ ಮಾಡಿದರೆ ಮುಂದನ ಹಂಗಾಮುಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯಗಳಿಗೆ ಅವಕಾಶ ನೀಡಲಾಗುವುದಿಲ್ಲ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಈ ನಿಬಂಧನೆಯನ್ನು ಪ್ರಾರಂಭಿಸುವ ಗಡುವಿನ ದಿನಾಂಕಗಳು ಅನುಕ್ರಮವಾಗಿ ಮಾರ್ಚ್ 31 ಮತ್ತು ಸೆಪ್ಟೆಂಬರ್ 30 ಆಗಿರುತ್ತದೆ (ಪಿಎಂಎಫ್‌.ಬಿವೈ / ಆರ್‌.ಡಬ್ಲ್ಯೂಬಿಸಿಐಎಸ್ ಎರಡಕ್ಕೂ).

f. ಬೆಳೆ ನಷ್ಟ/ಅರ್ಹ ಕ್ಲೇಮುಗಳ ಅಂದಾಜಿಗಾಗಿ ಪ್ರತಿ ಪ್ರದೇಶಕ್ಕೆ ಸಾಮಾನ್ಯ ಶ್ರೇಣಿಗಳು ಮತ್ತು ಯಾವುದೇ ಮಾಪನದ ಫಲಿತಾಂಶ ಸರಾಸರಿಗಿಂತ ಭಿನ್ನವಾಗಿರುವ (ಡಿವಿಯೇಷನ್) ಶ್ರೇಣಿಗಳಿಗೆ ಹವಾಮಾನ ಸೂಚಕಗಳು, ಉಪಗ್ರಹ ಸೂಚಕಗಳು ಇತ್ಯಾದಿಗಳ ನಿರ್ದಿಷ್ಟ ಪ್ರಚೋದಕಗಳನ್ನು ಬಳಸಿಕೊಂಡು ವ್ಯಾಖ್ಯಾನಿಸಲಾದ ಡಿವಿಯೇಷನ್ ಮ್ಯಾಟ್ರಿಕ್ಸ್ ಅನ್ನು ಆಧರಿಸಿ ಎರಡು-ಹಂತದ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಡಿವಿಯೇಷನ್ ಹೊಂದಿರುವ ಪ್ರದೇಶಗಳು ಮಾತ್ರ ಇಳುವರಿ ನಷ್ಟದ ಮೌಲ್ಯಮಾಪನಕ್ಕಾಗಿ (ಪಿಎಂಎಫ್‌.ಬಿವೈ) ಬೆಳೆ ಕೊಯ್ಲು ಪ್ರಯೋಗಗಳಿಗೆ (ಸಿಸಿಇ) ಒಳಪಟ್ಟಿರುತ್ತದೆ.

g. ಸ್ಮಾರ್ಟ್ ಸ್ಯಾಂಪ್ಲಿಂಗ್ ಟೆಕ್ನಿಕ್ (ಎಸ್.ಎಸ್.ಟಿ.) ಮತ್ತು ಸಿಸಿಇಗಳನ್ನು (ಪಿಎಂಎಫ್‌ಬಿವೈ) ನಡೆಸುವಲ್ಲಿ ಸಿಸಿಇಗಳ ಸಂಖ್ಯೆಯನ್ನು ಉತ್ತಮಗೊಳಿಸುವಂಥ ತಾಂತ್ರಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು.

h. ಅನುಷ್ಠಾನಗೊಳಿಸುವ ವಿಮಾ ಕಂಪನಿಗಳಿಗೆ ರಾಜ್ಯಗಳು ಗಡುವಿನ ದಿನಾಂಕ ಮೀರಿದರೂ ಇಳುವರಿ ದತ್ತಾಂಶವನ್ನು ಒದಗಿಸದಿದ್ದಲ್ಲಿ, ತಂತ್ರಜ್ಞಾನ ಪರಿಹಾರದ (ಪಿಎಂಎಫ್‌ಬಿವೈ ಮಾತ್ರ) ಬಳಕೆಯ ಮೂಲಕ ಬರುವ ಇಳುವರಿಯನ್ನು ಆಧರಿಸಿ ಕ್ಲೇಮು ಇತ್ಯರ್ಥಪಡಿಸಲಾಗುವುದು.

i. ಎಲ್ಲ ರೈತರಿಗೂ ಯೋಜನೆಯ ಅಡಿಯಲ್ಲಿ ನೋಂದಮಿಯನ್ನು ಸ್ವಯಂ ಇಚ್ಛೆಗೆ ಬಿಡಲಾಗಿದೆ (ಪಿಎಂಎಫ್‌.ಬಿವೈ / ಆರ್‌.ಡಬ್ಲ್ಯೂಬಿಸಿಐಎಸ್ ಎರಡಕ್ಕೂ).

j. ಈಶಾನ್ಯ ರಾಜ್ಯಗಳಿಗೆ ನೀಡಲಾಗುವ ಕೇಂದ್ರದ ಪ್ರೀಮಿಯಂ ಸಬ್ಸಿಡಿ ಪಾಲನ್ನು ಹಾಲಿ ಇರುವ ಹಂಚಿಕೆಯ ಸ್ವರೂಪ50:50 ಕ್ಕೆ ಬದಲಾಗಿ ಶೇ.90ಕ್ಕೆ ಹೆಚ್ಚಳ ಮಾಡಲಾಗಿದೆ. (ಪಿಎಂಎಫ್‌.ಬಿವೈ / ಆರ್‌.ಡಬ್ಲ್ಯೂಬಿಸಿಐಎಸ್ ಎರಡಕ್ಕೂ).

j. ಯೋಜನೆ ಅನುಷ್ಠಾನ ಮಾಡುವ ರಾಜ್ಯ ಸರ್ಕಾರಗಳಿಗೆ ಆಡಳಿತಾತ್ಮಕ ವೆಚ್ಚಕ್ಕಾಗಿ ಭಾರತ ಸರ್ಕಾರವು ಯೋಜನೆಗೆ ಮಾಡಬೇಕಾದ ಒಟ್ಟು ಹಂಚಿಕೆಯ ಕನಿಷ್ಠ ಶೇ.3ರಷ್ಟು ಹಣವನ್ನು ಒದಗಿಸುತ್ತದೆ. ಇದು ಪ್ರತಿ ರಾಜ್ಯಕ್ಕೆ ಡಿಎಸಿ ಮತ್ತು ಎಫ್‌.ಡಬ್ಲ್ಯೂ ಅಡಿ ನಿಗದಿಪಡಿಸಿದ ಗರಿಷ್ಠ ಮಿತಿಗೆ ಒಳಪಟ್ಟಿರುತ್ತದೆ (ಪಿಎಂಎಫ್‌.ಬಿವೈ/ ಆರ್‌.ಡಬ್ಲ್ಯೂಬಿಸಿಐಎಸ್ ಎರಡಕ್ಕೂ).

k.ಮೇಲೆ ಹೇಳಲಾದವುಗಳ ಹೊರತಾಗಿ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಗಳು ಇತರ ಬಾಧ್ಯಸ್ಥರು/ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಹೆಚ್ಚಿನ ಪ್ರೀಮಿಯಂ ದರವನ್ನು ಹೊಂದಿರುವ ಬೆಳೆಗಳು / ಪ್ರದೇಶಗಳಿಗೆ ರಾಜ್ಯ ನಿರ್ದಿಷ್ಟ, ಪರ್ಯಾಯ ಅಪಾಯವನ್ನು ತಗ್ಗಿಸುವ ಕಾರ್ಯಕ್ರಮವನ್ನು ಸಿದ್ಧಪಡಿಸುತ್ತದೆ / ಅಭಿವೃದ್ಧಿಪಡಿಸುತ್ತದೆ. ಜೊತೆಗೆ ಎಲ್ಲಾ ರೈತರಿಗೆ ಈ ಯೋಜನೆಯನ್ನು ಸ್ವಯಂಇಚ್ಛೆಗೆ ಬಿಟ್ಟಿರುವುದರಿಂದ, ಬೆಳೆ ವಿಮೆಯ ಮೂಲಕ ಅತ್ಯಂತ ಕ್ಲಿಷ್ಟ ಜಲ ಸಂಕಷ್ಟಕ್ಕೆ ತುತ್ತಾಗಿರುವ, ಬರ ಮತ್ತು ರೈತರ ಕಡಿಮೆ ಆದಾಯದಿಂದ ದುಪ್ಪಟ್ಟು ಸಂಕಷ್ಟಕ್ಕೆ ಸಿಲುಕಿರುವ 29 ಜಿಲ್ಲೆಗಳೂ ಸೇರಿದಂತೆ ಜಲ ಸಂಕಷ್ಟದ 151 ಜಿಲ್ಲೆಗಳಿಗೆ ಹಣಕಾಸಿನ ನೆರವು ಮತ್ತು ಪರಿಣಾಮಕಾರಿ ಅಪಾಯವನ್ನು ತಗ್ಗಿಸುವ ಸಾಧನಗಳನ್ನು ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರತ್ಯೇಕ, ಯೋಜನೆಯನ್ನು ಸಹ ಸಿದ್ಧಪಡಿಸಲಾಗುತ್ತದೆ.

l. ಪಿಎಂಎಫ್‌.ಬಿವೈ ಮತ್ತು ಆರ್‌.ಡಬ್ಲ್ಯುಬಿಸಿಐಎಸ್‌ ಕಾರ್ಯಾಚರಣೆಯ ಮಾರ್ಗಸೂಚಿಗಳು ಮತ್ತು ಯೋಜನೆ ಸಂಬಂಧಿತ ನಿಬಂಧನೆಗಳು / ನಿಯತಾಂಕಗಳನ್ನು ಮೇಲೆ ತಿಳಿಸಲಾದ ಮಾರ್ಪಾಡುಗಳಲ್ಲಿ ಸೇರಿಸಲು ಮತ್ತು 2020 ಮುಂಗಾರು ಹಂಗಾಮಿನಿಂದಲೇ ಕಾರ್ಯಾನುಷ್ಠಾನಗೊಳಿಸಲು ಪರಿಷ್ಕರಿಸಲಾಗುವುದು.

ಪ್ರಯೋಜನಗಳು

ಈ ಬದಲಾವಣೆಗಳೊಂದಿಗೆ ರೈತರು ಉತ್ತಮ ರೀತಿಯಲ್ಲಿ ಕೃಷಿ ಉತ್ಪನ್ನದ ಅಪಾಯಗಳನ್ನು ನಿರ್ವಹಿಸಲು ಶಕ್ತರಾಗುತ್ತಾರೆ ಮತ್ತು ಇದು ಅವರ ಕೃಷಿ ಆದಾಯವನ್ನು ಸ್ಥಿರವಾಗಿಡಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಇದು ಈಶಾನ್ಯ ವಲಯದಲ್ಲಿ ವ್ಯಾಪ್ತಿಯನ್ನು ಹೆಚ್ಚಿಸಿ, ಈಶಾನ್ಯ ವಲಯದ ರೈತರಿಗೆ ತಮ್ಮ ಕೃಷಿ ಅಪಾಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ಎಲ್ಲ ಬದಲಾವಣೆಗಳು ತ್ವರಿತ ಮತ್ತು ನಿಖರ ಇಳುವರಿಯ ಅಂದಾಜಿಗೆ ಅವಕಾಶ ನೀಡಲಿದ್ದು, ಕ್ಲೇಮುಗಳ ಇತ್ಯರ್ಥ ತ್ವರಿತವಾಗಿ ನಡೆಯಲು ಇಂಬು ನೀಡುತ್ತದೆ. ಈ ಎಲ್ಲ ಬದಲಾವಣೆಗಳನ್ನೂ 2020ರ ಮುಂಗಾರು (ಖಾರಿಫ್) ಹಂಗಾಮಿನಿಂದ ದೇಶದಾದ್ಯಂತ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
 



(Release ID: 1603805) Visitor Counter : 171


Read this release in: English , Urdu , Hindi , Tamil , Telugu