ನೌಕಾ ಸಚಿವಾಲಯ

ನೌಕಾಯಾನ ಸಚಿವಾಲಯದ 2019 ರ ವರ್ಷಾಂತ್ಯದ ಪ್ರಗತಿ ವರದಿ

Posted On: 24 DEC 2019 11:37AM by PIB Bengaluru

ನೌಕಾಯಾನ ಸಚಿವಾಲಯದ 2019 ರ ವರ್ಷಾಂತ್ಯದ ಪ್ರಗತಿ ವರದಿ

 

ಹಡಗುಗಳ ಮರುಬಳಕೆ ಕಾಯ್ದೆ, 2019 ಜಾರಿಗೆ ಬರುವುದರೊಂದಿಗೆ ಮತ್ತು ಐ.ಎಂ.ಒ.ನ ಹಾಂಕಾಂಗ್ ಸಮಾವೇಶದಲ್ಲಿ ಸೇರ್ಪಡೆಗೊಂಡ ಬಳಿಕ ಪರಿಸರ ಸ್ನೇಹಿ ಹಡಗು ಮರುಬಳಕೆ ಪ್ರಮುಖ ತಾಣವಾಗಿ ಭಾರತವು ರೂಪುಗೊಂಡಿದೆ ಮತ್ತು ಭಾರತೀಯ ಕಡಲತಡಿಯ ಜನತೆಗಾಗಿ   ಕಡಲತಟದವರ ಬಯೋಮೆಟ್ರಿಕ್ ಗುರುತಿನ ದಾಖಲೆ ವ್ಯವಸ್ಥೆಯನ್ನು (ಬಿ.ಎಸ್.ಐ.ಡಿ.) ಜಾರಿಗೆ ತಂದ ದೇಶಗಳಲ್ಲಿ ಭಾರತವು ವಿಶ್ವದಲ್ಲಿಯೇ ಮೊದಲನೆಯದಾಗಿದೆ. ಭಾರತೀಯ ಕಡಲತಟದ ಜನತೆಗೆ ಉದ್ಯೋಗ ಮತ್ತು ಕೌಶಲ್ಯ ತರಬೇತಿಗಾಗಿ ಹೊಸ ಉಪಕ್ರಮಗಳು, ಜವಾಹರಲಾಲ್ ನೆಹರೂ ಬಂದರು ಮಂಡಳಿಯಲ್ಲಿ ನಾವಿಕ ಸಾರಿಗೆಯಲ್ಲಿ ಹೊಸ ಎಂ.ಎಸ್.ಡಿ.ಸಿ.ಯ ಉದ್ಘಾಟನೆ, ನೆರೆ ದೇಶಗಳೊಂದಿಗೆ ಸಂಪರ್ಕದ ಸುಧಾರಣೆ, ಎನ್.ಇ.ಆರ್.ಗೆ ಬಾಂಗ್ಲಾದೇಶದ ಚಟ್ಟೋಗ್ರಾಂ ಮತ್ತು ಮೋಂಗ್ಲಾ ಬಂದರುಗಳ ಮೂಲಕ ಇದೇ ಮೊದಲ ಬಾರಿಗೆ ಪರ್ಯಾಯ ಸಂಪರ್ಕ ವ್ಯವಸ್ಥೆ, ಭಾರತದ ಶ್ರೀಮಂತ ನಾವಿಕ ಪರಂಪರೆ ಪ್ರದರ್ಶನಕ್ಕೆ ವಿಶ್ವ ದರ್ಜೆಯ ರಾಷ್ಟ್ರೀಯ ನಾವಿಕ ಪರಂಪರೆ ಸಂಕೀರ್ಣ ಗುಜರಾತಿನ ಲೋಥಾಲ್ ನಲ್ಲಿ ಸ್ಥಾಪಿಸುವುದಕ್ಕೆ ಅನುಮೋದನೆ.

2019 ರಲ್ಲಿ ಸರಕಾರವು ಹಲವು ಪ್ರಮುಖ ಪ್ರಗತಿಪರ ನೀತಿ ಮಧ್ಯಪ್ರವೇಶಗಳನ್ನು ಕೈಗೊಂಡಿದೆ ಮತ್ತು ನೌಕಾಯಾನ ವಲಯದ ಸರ್ವತೋಮುಖ ಬೆಳವಣಿಗೆಗೆ ವೇಗ ದೊರಕಿಸಿಕೊಡಲು ಹೊಸ ಉಪಕ್ರಮಗಳನ್ನು ಆರಂಭಿಸಿದೆ.

ಬಹಳ ಮುಖ್ಯವಾದ “ಹಡಗುಗಳ ಮರುಬಳಕೆ ಕಾಯ್ದೆ 2019 ” ರ ಜಾರಿ, 2019 ರ ನವೆಂಬರ್ ತಿಂಗಳಲ್ಲಿ ಸುರಕ್ಷಿತ ಮತ್ತು ಪರಿಸರದ ದೃಷ್ಟಿಯಿಂದ ಬಲಿಷ್ಟವಾದ ಹಡಗುಗಳ ಮರುಬಳಕೆ ಕುರಿತ  ಐ.ಎಂ.ಒ.ದ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶ; ಕಡಲತಟದ ಜನತೆಗೆ ಉದ್ಯೋಗ ಒದಗಿಸಲು ಕ್ರಮಗಳು, ಸರಕು ಮತು ಪ್ರಯಾಣಿಕರ ಸಾರಿಗೆಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಲು ನೆರೆ ಹೊರೆಯ ಮತ್ತು ಇತರ ದೇಶಗಳ ಜೊತೆಗಿನ  ಸಂಪರ್ಕ ಸುಧಾರಣೆ; ಹಡಗು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು, ಸಾಗರಮಾಲಾ ಯೋಜನೆ ಅಡಿಯಲ್ಲಿ ಹೊಸ ಯೋಜನೆಗಳ ಕೈಗೆತ್ತಿಕೊಳ್ಳುವಿಕೆ ಇತ್ಯಾದಿ ಕ್ರಮಗಳು  2019 ರ ವರ್ಷದಲ್ಲಿ ಶಿಪ್ಪಿಂಗ್ ಸಚಿವಾಲಯದ ಸಾಧನೆಯ ಪ್ರಮುಖಾಂಶಗಳಾಗಿವೆ.

2019 ರಲ್ಲಿ ನೌಕಾಯಾನ ಸಚಿವಾಲಯದ ಪ್ರಮುಖ ಸಾಧನೆಗಳು ಈ ಕೆಳಗಿನಂತಿವೆ:

ಹಡಗುಗಳ ಮರುಬಳಕೆ ಕಾಯ್ದೆ 2019 ರ ಜಾರಿ ಮತ್ತು ಐ.ಎಂ.ಒ.ದ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಸೇರ್ಪಡೆ.

ಬಹು ಮುಖ್ಯವಾದ  ಹಡಗುಗಳ ಮರುಬಳಕೆ ಕಾಯ್ದೆ, 2019  ನ್ನು ಅಂಗೀಕರಿಸಿ ಜಾರಿಗೆ ತರುವ ಮೂಲಕ ಭಾರತವು ಹಸಿರು ಹಡಗು ಮರುಬಳಕೆಯ ಪ್ರಮುಖ ತಾಣವಾಗಿದೆ. ಸುರಕ್ಷೆ  ಮತ್ತು ಪಾರಿಸಾರಿಕವಾಗಿ ಸದೃಢವಾದ ಹಡಗುಗಳನ್ನು ಮರುಬಳಕೆ ಮಾಡುವ ಕುರಿತ ಐ.ಎಂ.ಒ. ದ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶಕ್ಕೆ  2019 ರ ನವೆಂಬರ್ ತಿಂಗಳಲ್ಲಿ ಬಾರತವು ಸೇರ್ಪಡೆಗೊಂಡಿದೆ .ಹೊಸ ಕಾಯ್ದೆಯು ಹಾಂಕಾಂಗ್ ಸಮಾವೇಶದ ಪ್ರಸ್ತಾವನೆಗಳ ಅನುಷ್ಟಾನಕ್ಕೆ ಶಾಸನಾತ್ಮಕ ಚೌಕಟ್ತನ್ನು ಒದಗಿಸುತ್ತದೆ. ಅದು ಹಡಗು ಒಡೆಯುವ ಸಂಹಿತೆ (ಪರಿಷ್ಕೃತ ) , 2013 ರ ಅಡಿಯಲ್ಲಿ ಅಡಕಗೊಳ್ಳದ   ಪ್ರಸ್ತಾವನೆಗಳನ್ನು ಕೂಡಾ ಒಳಗೊಂಡಿರುತ್ತದೆ. ಈ ಕಾಯ್ದೆಯ ಜಾರಿಯೊಂದಿಗೆ 2024 ರ ವೇಳೆಗೆ ಹಡಗು ಮರುಬಳಕೆ ಗಾತ್ರ ದುಪ್ಪಟ್ತಾಗುವ ನಿರೀಕ್ಷೆ ಇದೆ.

ಐ.ಎಂ.ಒ.ದ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಸೇರ್ಪಡೆಯಿಂದಾಗಿ ಭಾರತದಲ್ಲಿ ದೇಶೀಯ ಹಡಗು ಮರುಬಳಕೆಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಭಾರತವು ವಿಶ್ವದ ಐದು ಪ್ರಮುಖ ಹಡಗು ಮರುಬಳಕೆ ದೇಶಗಳಲ್ಲಿ ಒಂದಾಗಿದೆ.

ಕಡಲತಟದ ನಿವಾಸಿಗಳಿಗೆ ಬಯೋಮೆಟ್ರಿಕ್ ಗುರುತಿನ ದಾಖಲೆ (ಬಿ.ಎಸ್.ಐ.ಡಿ.)

ಕಡಲತಟದ  ನಿವಾಸಿಗಳ ಮುಖ ಭಾಗದ ಬಯೋಮೆಟ್ರಿಕ್ ದತ್ತಾಂಶಗಳನ್ನು ಒಳಗೊಂಡ ಬಯೋಮೆಟ್ರಿಕ್ ಗುರುತಿನ ದಾಖಲೆಯನ್ನು (ಬಿ. ಎಸ್.ಐ.ಡಿ.) ಕಡಲತಟವಾಸಿಗಳಿಗೆ ಒದಗಿಸಿದ ವಿಶ್ವದ ಮೊದಲ ರಾಷ್ಟ್ರ ಭಾರತ. ಹೊಸ ದಾಖಲೆ ನಮ್ಮ ಕಡಲತಟವಾಸಿಗಳ ಸಂಪೂರ್ಣ ಸುರಕ್ಷಿತ ಗುರುತಿನ ದಾಖಲೆಯಾಗಿದ್ದು, ಅದು ಅವರಿಗೆ ದೇಶಗಳ ನಡುವೆ ಯಾನಕ್ಕೆ ಅನುಕೂಲ ಮಾಡಿಕೊಡುತ್ತದೆ. ಉದ್ಯೋಗ ಪಡೆಯುವುದನ್ನು ಸರಳಗೊಳಿಸುತ್ತದೆ ಮತ್ತು ವಿಶ್ವದ ಯಾವ ಸ್ಥಳದಲ್ಲಾದರೂ ಗುರುತಿಸುವಿಕೆಗೆ ಸಹಾಯ ಮಾಡುತ್ತದೆ.

ಅಂತಾರಾಷ್ಟ್ರೀಯ ಸಹಕಾರ

2019 ರ ವರ್ಷದಲ್ಲಿ ಸರಣಿ ಅಂತಾರಾಷ್ಟ್ರೀಯ  ಸಹಕಾರ ಒಪ್ಪಂದಗಳು ಮತ್ತು ಕಾರ್ಯಕ್ರಮಗಳು ನಡೆದವು. ಇತರ ರಾಷ್ಟ್ರಗಳ ಜೊತೆ ದ್ವಿಪಕ್ಷೀಯ ವ್ಯಾಪಾರವನ್ನು ವರ್ಧಿಸಲು ಮತ್ತು ನಾವಿಕ ವಲಯದಲ್ಲಿ ಸಹಕಾರವನ್ನು ಖಾತ್ರಿಗೊಳಿಸಿ , ಸಮನ್ವಯ ಸಾಧಿಸುವುದಕ್ಕಾಗಿ ನೆರೆ ಹೊರೆಯ ರಾಷ್ಟ್ರಗಳು, ದಕ್ಷಿಣ ಏಶ್ಯಾ ಮತ್ತು ಇತರ ದೇಶಗಳಾದ ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಭೂತಾನ್, ಮಾಲ್ದೀವ್ಸ್, ಡೆನ್ಮಾರ್ಕ್ ಮತ್ತು ಸ್ವೀಡನ್ ಗಳ ಜೊತೆ ಹಲವಾರು ತಿಳುವಳಿಕಾ ಒಡಂಬಡಿಕೆಗಳಿಗೆ ಅಂಕಿತ ಹಾಕಲಾಯಿತು. ಭಾರತ ಮತ್ತು ಮಾಲ್ದೀವ್ಸ್ ನಡುವೆ ಅಂಕಿತ ಹಾಕಲಾದ ಪ್ರಮುಖ ತಿಳುವಳಿಕಾ ಒಡಂಬಡಿಕೆ ಮಾಲ್ದೀವ್ಸ್ ಮತ್ತು ಕೇರಳ ನಡುವೆ ನೌಕಾ ಸೇವೆಗೆ ಹಾದಿ ಮಾಡಿಕೊಡುತ್ತದೆ. 2019 ರ ಡಿಸೆಂಬರ್ ತಿಂಗಳಲ್ಲಿ ಸ್ವೀಡನ್ ಜೊತೆ ಅಂಕಿತ ಹಾಕಲಾದ ಇನ್ನೊಂದು ಒಪ್ಪಂದ ಪರಸ್ಪರ ಕಡಲತಡಿಯ ವಾಸಿಗಳ ಪ್ರಮಾಣಪತ್ರಗಳ ಮಾನ್ಯತೆಗೆ ಸಂಬಂಧಿಸಿದುದಾಗಿದೆ. ಇದು ಸ್ವೀಡಿಶ್ ಹಡಗುಗಳಲ್ಲಿ ಭಾರತೀಯ ಕಡಲತಟದ ಜನತೆಗೆ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ.

ಇನ್ನೊಂದು ಪ್ರಮುಖ ಬೆಳವಣಿಗೆಯಲ್ಲಿ, ಪ್ರಯಾಣಿಕರ ಸಾರಿಗೆಗಾಗಿ ಪ್ರಯಾಣಿಕ ಹಡಗುಗಳ (ಕ್ರೂಸ್) ಸೇವೆಯನ್ನು ಮತ್ತು ಸರಕು ಸಾಗಾಣಿಕೆಯನ್ನು ಈಶಾನ್ಯ ವಲಯದಲ್ಲಿ  (ಎನ್.ಇ.ಆರ್.) ಉತ್ತೇಜಿಸುವುದಕ್ಕಾಗಿ ಸರಕು ಸಾಗಾಣಿಕೆಗಾಗಿ ಬಾಂಗ್ಲಾ ದೇಶದ ಚಟ್ಟೋಗ್ರಾಂ ಮತ್ತು ಮೊಂಗ್ಲಾ ಬಂದರುಗಳನ್ನು ಮೊದಲ ಬಾರಿಗೆ ಪರ್ಯಾಯ ಸಂಪರ್ಕ ಮಾರ್ಗವಾಗಿ ಬಳಕೆ ಮಾಡಲಾಗಿದೆ.ಇದರಿಂದ ಸರಕು ವ್ಯಾಪಾರದ ಗಾತ್ರ ಹೆಚ್ಚಲಿದೆ ಮತ್ತು ಸಾಗಾಣಿಕೆ ವೆಚ್ಚದಲ್ಲಿ ಇಳಿಕೆಯಾಗಲಿದೆ. ಒಪ್ಪಂದದ ಅಡಿಯಲ್ಲಿ ಎಂಟು ಮಾರ್ಗಗಳನ್ನು ಒದಗಿಸಲಾಗಿದ್ದು, ಇದರಿಂದ ಬಾಂಗ್ಲಾದೇಶದ ಮೂಲಕ ಎನ್.ಇ.ಆರ್. ಸಂಪರ್ಕ ಸುಲಭ ಸಾಧ್ಯವಾಗುತ್ತದೆ.  

ಐ.ಐ.ಟಿ. ಖರಗ್ ಪುರದಲ್ಲಿ ಕೇಂದ್ರೀಯ ಒಳನಾಡು ಮತ್ತು ಕರಾವಳಿ ನೌಕಾ ತಂತ್ರಜ್ಞಾನ (ಸಿ .ಐ.ಸಿ.ಎಂ.ಟಿ.) ಕ್ಕಾಗಿ  ತಂತ್ರಜ್ಞಾನ ಸಹಯೋಗಕ್ಕೆ ಜರ್ಮನ್ ಚಾನ್ಸಲರ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಜರ್ಮನಿಯೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ.

ಭಾರತ ಮತ್ತು ನೇಪಾಳಗಳು ಒಳನಾಡು ಜಲಮಾರ್ಗಗಳ ಸಂಪರ್ಕವನ್ನು ಹೆಚ್ಚುವರಿ ಸಾರಿಗೆ ಮಾದರಿಗಳಾಗಿ ಸೇರಿಸಿಕೊಳ್ಳಲು ಸಾರಿಗೆ ಒಪ್ಪಂದದಲ್ಲಿ ಒಪ್ಪಿಕೊಂಡಿವೆ. ಬಾಂಗ್ಲಾ ದೇಶ ಮತ್ತು ಭೂತಾನ್  ನಡುವೆ  ಸರಕು ಸಾಗಾಣಿಕೆಗೆ ಭಾರತೀಯ ಜಲ ಮಾರ್ಗವನ್ನು  12-07-2019 ರಂದು ಇದೇ ಮೊದಲ ಬಾರಿಗೆ  ಬಳಸಿಕೊಳ್ಳಲಾಗಿದೆ.

ರನಾಂಗ್ ಬಂದರು (ಥೈಲ್ಯಾಂಡ್ ಬಂದರು ಪ್ರಾಧಿಕಾರ ) ಮತ್ತು ಚೆನ್ನೈ ಬಂದರು ಮಂಡಳಿ , ವಿಶಾಖಪಟ್ಟಣಂ ಮತ್ತು ಕೋಲ್ಕೊತ್ತಾ ನಡುವೆ ಮೂರು ತಿಳುವಳಿಕಾ ಒಡಂಬಡಿಕೆಗಳಿಗೆ (ಎಂ.ಒ.ಯು.) ಅಂಕಿತ ಹಾಕಲಾಗಿದೆ. ಈ ಎಂ.ಒ.ಯು.ಗಳು ಭಾರತ ಮತ್ತು ಥೈಲ್ಯಾಂಡ್ ನಡುವಿನ ಸಮುದ್ರಯಾನದ ಅವಧಿಯನ್ನು 10-15 ದಿನಗಳಿಂದ 7 ದಿನಗಳಿಗೆ ಇಳಿಸುತ್ತವೆ, ಆ ಮೂಲಕ ಆರ್ಥಿಕ ಸಹಭಾಗಿತ್ವವನ್ನು ಹೆಚ್ಚಿಸುತ್ತವೆ.

ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣ

ವಾಪಾರೋದ್ಯಮಕ್ಕೆ ಅನುಕೂಲಕರ ವ್ಯವಸ್ಥೆ (ಇ.ಒ.ಡಿ.ಬಿ.) ಗೆ  ಸಂಬಂಧಿಸಿ ಗಡಿಯಾಚೆ ವ್ಯವಹಾರಕ್ಕೆ ನಿಗದಿ ಮಾಡಿದ (ಟಿ.ಎ.ಬಿ.) ಮಾನದಂಡಗಳಡಿಯಲ್ಲಿ ಭಾರತದ ಸ್ಥಾನ ಮಾನ 80 ರಿಂದ 68 ಕ್ಕೆ ಸುಧಾರಣೆಗೊಂಡಿದೆ. ಪ್ರಮುಖ ಬಂದರುಗಳು ಕೈಗೊಂಡ ನೇರ ಬಂದರು ವಿತರಣೆ (ಡಿ.ಪಿ.ಡಿ.), ನೇರ ಬಂದರಿಗೆ ಪ್ರವೇಶ (ಡಿ.ಪಿ.ಇ.) , ಆರ್.ಎಫ್.ಐ.ಡಿ. ಅಳವಡಿಕೆ, ಸ್ಕ್ಯಾನರ್ ಗಳು /ಕಂಟೈನರ್ ಸ್ಕ್ಯಾನರ್ ಗಳ ಅಳವಡಿಕೆ, ಪ್ರಕ್ರಿಯೆಗಳ ಸರಳೀಕರಣ ಇತ್ಯಾದಿ ಕ್ರಮಗಳಿಂದ ಈ ಗಮನಾರ್ಹ ದಾಖಲೆ ಸಾಧ್ಯವಾಗಿದೆ.

ಕಡಲ ಪ್ರಯಾಣದ ಹಡಗುಗಳ ಕಾರ್ಯಾಚರಣೆ

ಕಡಲ ಪ್ರಯಾಣ ಪ್ರವಾಸೋದ್ಯಮವನ್ನು ಮತ್ತು ಕಡಲ ಹಡಗುಗಾರಿಕೆಯನ್ನು ಉತ್ತೇಜಿಸುವುದು ನೌಕಾಯಾನ ಸಚಿವಾಲಯದ ಈ ವರ್ಷದ ಅತ್ಯಂತ ಆದ್ಯತೆಯ ಪಟ್ಟಿಯ ಕಾರ್ಯಗಳಲ್ಲಿ  ಒಂದಾಗಿದೆ. ಕಡಲ ಪ್ರಯಾಣ ವ್ಯಾಪಕವಾದ ಅವಕಾಶಗಳನ್ನು ಒಳಗೊಂಡಿದೆಯಾದುದರಿಂದ ಸಚಿವಾಲಯವು ಭಾರತದಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಹಡಗು ಪ್ರಯಾಣ ಸೇವೆಯನ್ನು ಉತ್ತೇಜಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದೆ.

ದೇಶೀಯ ಪ್ರಯಾಣದ ಮೊದಲ ಪ್ರೀಮಿಯಂ ಐಶಾರಾಮಿ ಹಡಗು “ಕಾರ್ಣಿಕ” ಆಗಮಿಸಿದ ಬಳಿಕ ಭಾರತದ ದೇಶೀಯ ಹಡಗು ಪ್ರಯಾಣ ಪ್ರವಾಸೋದ್ಯಮದಲ್ಲಿ ಹೊಸತೊಂದು ಅಧ್ಯಾಯ ಆರಂಭವಾಗಿದೆ. “ಕಾರ್ಣಿಕ” ವು ಮುಂಬಯಿ-ಗೋವಾ, ಮುಂಬಯಿ-ಗಣಪತಿ ಪುಲೆ (ಜೈಗಡ್), ಮುಂಬಯಿ-ದಿವು, ಮುಂಬಯಿ-ಕೊಲ್ಲಿ ಮಾರ್ಗಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯರಿಗೆ ಹಡಗು ಪ್ರಯಾಣದ ಅನುಭವ ಸವಿಯುವ ಅವಕಾಶವನ್ನು ಒದಗಿಸುತ್ತಿದೆ.

ಮುಂಬಯಿ ಬಂದರಿನಲ್ಲಿ  ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದ್ದು, 2019 ರ ನವೆಂಬರ್ ತಿಂಗಳ ಒಂದೇ ದಿನ ನಾಲ್ಕು ಪ್ರಯಾಣಿಕ ಹಡಗುಗಳು ಅಲ್ಲಿ ತಂಗಿದ್ದು ಅದರ ಇತಿಹಾಸದಲ್ಲಿ ಸ್ಮರಣೀಯ ಸಂದರ್ಭ.

ಡಾಕ್ಕಾ ಮತ್ತು ಕೋಲ್ಕೊತ್ತಾ ನಡುವೆ ಈ ವರ್ಷದಲ್ಲಿ ಹಡಗು ಪ್ರಯಾಣ ಸೇವೆಯ ಉದ್ಘಾಟನಾ ಸೇವೆಯನ್ನು ಆರಂಭಿಸಲಾಗಿದೆ. ನಾಲ್ಕು ಪ್ರಯಾಣಿಕ ಹಡಗುಗಳು 2019ರಲ್ಲಿ ಈಗಾಗಲೇ ಭಾರತ ಮತ್ತು ಬಾಂಗ್ಲಾದೇಶದ ನಡುವೆ   ಸಂಚರಿಸಿವೆ.

ಕಡಲತಡಿಯ ಜನತೆಗೆ ಉದ್ಯೋಗಾವಕಾಶ ಮತ್ತು ಕೌಶಲ್ಯಾಭಿವೃದ್ದಿಗೆ ಕ್ರಮಗಳು

2017 ರಲ್ಲಿ ಕಡಲತಟವಾಸಿಗಳ ಸಂಖ್ಯೆ 1,54,349  ಇದ್ದು, 2018 ರಲ್ಲಿ ಇದು 2,08,799 ಕ್ಕೇರಿದೆ ಮತ್ತು 2019 ರಲ್ಲಿ ಇದು 2,31,776 ಕ್ಕೆ ಏರಿದೆ. ಭಾರತೀಯ ಮತ್ತು ವಿದೇಶಿ ಹಡಗುಗಳಲ್ಲಿ ಭಾರತೀಯ ಕಡಲತಟವಾಸಿಗಳ ಉದ್ಯೋಗ ನೇಮಕಾತಿಯು ಅಭೂತಪೂರ್ವವಾಗಿ ಹೆಚ್ಚಿದೆ. ಸರಕಾರವು ಜಾರಿಗೆ ತಂದ ನಾವಿಕ ತರಬೇತಿ ಗುಣಮಟ್ಟ ಹೆಚ್ಚಳ , ತರಬೇತಿ ಸಾಮರ್ಥ್ಯದ ಫಲವಾಗಿ , ತರಬೇತಿ ಬರ್ತ್ ಗಳ ಸಂಖ್ಯೆಯಲ್ಲಿ ಹೆಚ್ಚಳ, ತರಗತಿ ಪಠ್ಯಕ್ರಮದ ಸಾಮಾನ್ಯೀಕರಣ ಮತ್ತು ಪಠ್ಯದ ಸುಧಾರಣೆ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಹಾಗು ಇದೆಲ್ಲಕಿಂತ ಹೆಚ್ಚಿನದಾಗಿ  2019 ರಲ್ಲಿ ಅನುಷ್ಟಾನಿಸಿದ ಸರಳೀಕೃತ ಪ್ರಕ್ರಿಯೆಗಳು ಹಾಗು ಇ-ಆಡಳಿತ ಮಾದರಿಗಳ ಮೂಲಕ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವ್ಯವಸ್ಥೆಯಂತಹ  ಹಾಗು ಸಮಗ್ರ ಕ್ರಮಗಳ ನಿರ್ಧಾರದ ಫಲವಾಗಿ ಇದು ಸಾಧ್ಯವಾಗಿದೆ.

ಕಡಲತಟದ ನಿವಾಸಿಗಳಿಗೆ ಬಯೋಮೆಟ್ರಿಕ್ ಕಡಲತಟ ಗುರುತಿನ ದಾಖಲೆ (ಬಿ.ಎಸ್.ಐ.ಡಿ.) ನೀಡಿಕೆ ಈ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ.

2019 ರ ಡಿಸೆಂಬರ ತಿಂಗಳಲ್ಲಿ ಸ್ವೀಡನ್ ಜೊತೆ ಕಡಲತಟದ ಜನತೆಯ ಪ್ರಮಾಣಪತ್ರಗಳಿಗೆ ಪರಸ್ಪರ ಮಾನ್ಯತೆ ನೀಡುವಂತಹ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.

ನೌಕಾಯಾನ ಖಾತೆಯ  ಸಹಾಯಕ ಸಚಿವರಾದ (ಪ್ರಭಾರ) ಮತ್ತು ರಾಸಾಯನಿಕಗಳು ಹಾಗು ರಸಗೊಬ್ಬರ ಖಾತೆ ಸಹಾಯಕ ಸಚಿವರಾದ ಶ್ರೀ ಮನ್ ಸುಖ್ ಮಾಂಡವೀಯ ಅವರು ವಿಶ್ವದ ಮೊಟ್ಟ ಮೊದಲ “ಭಾರತದಲ್ಲಿ ಮುಖ ಗುರುತಿನ ಆಧಾರದಲ್ಲಿ  ಕಡಲತಟವಾಸಿಗಳ ಗುರುತಿನ ದಾಖಲೆ” ನೀಡಿಕೆಯನ್ನು ಹೊಸದಿಲ್ಲಿಯಲ್ಲಿ ಆರಂಭಿಸಿದರು. 

ಕೌಶಲ್ಯ ಅಭಿವೃದ್ದಿಗೆ ಸಾಗರಮಾಲಾ  ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನಾ ( ಡಿ.ಡಿ.ಯು.ಜಿ.ಕೆ.ವೈ.) ಎರಡನೆ ಹಂತವನ್ನು ಬಂದರು ,ಮತ್ತು ನಾವಿಕ  ವಲಯದಲ್ಲಿ ಕೌಶಲ್ಯ ಅಭಿವೃದ್ದಿಯನ್ನು ಸಮ್ಮಿಳಿತಗೊಳಿಸಲು ಆರಂಭಿಸಲಾಗಿದೆ. ಗುಜರಾತ್, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ಮತ್ತು ತಮಿಳು ನಾಡುಗಳಲ್ಲಿ ಇದನ್ನು ಅನುಷ್ಟಾನಿಸಲಾಗಿದೆ ಇದಲ್ಲದೆ ಜವಾಹರಲಾಲ್ ನೆಹರೂ ಬಂದರು ಮಂಡಳಿಯಲ್ಲಿ ನಾವಿಕ ಸಾರಿಗೆಗೆ ಸಂಬಂಧಿಸಿ ಬಹು ಕೌಶಲ್ಯ ಅಭಿವೃದ್ದಿ ಕೇಂದ್ರ (ಎಂ.ಎಸ್.ಡಿ.ಸಿ.) ವನ್ನು 2019 ರಲ್ಲಿ ಉದ್ಘಾಟಿಸಲಾಗಿದೆ. ಎಂ.ಎಸ್.ಡಿ.ಸಿ.ಯು ವರ್ಷಕ್ಕೆ 1050  ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಂದರು ಮತ್ತು ನಾವಿಕ ವಲಯದಲ್ಲಿ ನಾವಿಕ ಸಾರಿಗೆ ಕುರಿತಂತೆ ಕೌಶಲ್ಯ ಅಭಿವೃದ್ದಿಯ ಅವಕಾಶವನ್ನು ಒದಗಿಸಲಿದೆ. ಬಹು ಕೌಶಲ್ಯ ಅಭಿವೃದ್ದಿ ಕೇಂದ್ರಗಳನ್ನು (ಎಂ.ಎಸ್.ಡಿ.ಸಿ.) ಗಳನ್ನು ಎಲ್ಲಾ ಪ್ರಮುಖ ಬಂದರುಗಳಲ್ಲಿ ಸ್ಥಾಪಿಸಲಾಗುತ್ತಿದೆ.

ಕೇಂದ್ರೀಯ ಒಳನಾಡು ಮತ್ತು ಕರಾವಳಿ ನಾವಿಕ ತಂತ್ರಜ್ಞಾನ (ಸಿ.ಐ.ಸಿ.ಎಂ.ಟಿ.) ಸಂಸ್ಥೆಗೆ 2019 ರ ಮಾರ್ಚ್ ತಿಂಗಳಲ್ಲಿ ಖರಗ್ ಪುರ ಐ.ಐ.ಟಿ.ಯಲ್ಲಿ ಶಿಲಾನ್ಯಾಸ ಮಾಡಲಾಗಿದೆ. ಸಿ.ಐ.ಸಿ.ಎಂ.ಟಿ. ಯ ಸ್ಥಾಪನೆಯು ದೇಶೀಯ ಅನ್ವೇಷಣೆ ಮತ್ತು ಆಧುನಿಕ ತಂತ್ರಜ್ಞಾನ ಬೆಂಬಲವನ್ನು ಬಂದರು ಮತ್ತು ನಾವಿಕ ಕ್ಷೇತ್ರಕ್ಕೆ ನೇರವಾಗಿ ಒದಗಿಸಿ,  ಸಾಗರಮಾಲಾ ಕಾರ್ಯಕ್ರಮಕ್ಕೆ ಕೊಡುಗೆಯನ್ನು ನೀಡುತ್ತದೆ. ಮತ್ತು “ಮೇಕ್ ಇನ್ ಇಂಡಿಯಾ” ವನ್ನು ಬೆಂಬಲಿಸುತ್ತದೆ ಹಾಗು ಇದು ಸರಕಾರ , ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವೆ ಅತ್ಯಂತ ನಿಕಟ ಸಹಯೋಗದಲ್ಲಿ ಇಂದಿನ ದಿನ ಮಾನಕ್ಕೆ ಅವಶ್ಯವಾದ ಅನ್ವಯಿಕ ಸಂಶೋಧನೆಗಳನ್ನು  ಬಂದರು ಮತ್ತು ನಾವಿಕ ವಲಯದಲ್ಲಿ ಕೈಗೊಳ್ಳುತ್ತದೆ.

ಜರ್ಮನಿಯ ಚಾನ್ಸಲರ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರದ ತಾಂತ್ರಿಕ ಸಹಯೋಗಕ್ಕಾಗಿ ಜರ್ಮನಿಯ ಜೊತೆ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ.

ನೌಕಾಂಗಣ / ಹಡಗುಕಟ್ಟೆಗಳು ಮತ್ತು ಬಂದರುಗಳು

ಬಂದರುಗಳಿಗೆ ಸಂಬಂಧಿಸಿದ ಮೊಟ್ಟ ಮೊದಲ  ಬಿ.ಐ.ಎಂ.ಎಸ್.ಟಿ.ಇ.ಸಿ. (ಬಿಮ್ಸ್ಟೆಕ್ ) ಸಮಾವೇಶ  2019 ರಲ್ಲಿ ಭಾರತದಲ್ಲಿ ನಡೆಯಿತು. ಈ ಸಮಾವೇಶ ನಾವಿಕ ಸಂವಾದ ಬಲಪಡಿಸುವಿಕೆ , ಬಂದರು ಕೇಂದ್ರಿತ ಸಂಪರ್ಕ ಉಪಕ್ರಮಗಳು ಮತ್ತು ಸದಸ್ಯ ರಾಷ್ಟ್ರಗಳ ನಡುವೆ ಉತ್ತಮ ಪದ್ದತಿಗಳ ಹಂಚಿಕೊಳ್ಳುವಿಕೆಗೆ ವೇದಿಕೆ ಒದಗಿಸಿತು. 

2019ರಲ್ಲಿ ಮೇಲ್ದರ್ಜೆಗೇರಿಸಿದ ಬಂದರು ಸಮುದಾಯ ವ್ಯವಸ್ಥೆಯನ್ನು ಎಲ್ಲಾ ಬಂದರುಗಳಲ್ಲಿ ಆರಂಭಿಸಲಾಗಿದೆ. ಈ ವ್ಯವಸ್ಥೆಯು ವಿವಿಧ ಭಾಗೀದಾರರ ನಡುವೆ ಸಾಮಾನ್ಯ ಅಂತರ್ ಸಂಪರ್ಕ ಸಾಧನ  ಮೂಲಕ ಅಡೆತಡೆರಹಿತ ದತ್ತಾಂಶ ಹರಿಯುವಿಕೆಗೆ ಅನುಕೂಲ ಮಾಡಿಕೊಡುತ್ತದೆ. ಸಂಪೂರ್ಣ ಕಾಗದ ರಹಿತ ಆಡಳಿತ ಜಾರಿಗೆ ತರಲು , ಇ-ಡಿ.ಒ. (ಇಲೆಕ್ಟ್ರಾನಿಕ್ ವಿತರಣಾ ಆದೇಶ) ಗಳನ್ನು ಪಿ.ಸಿ.ಗಳ ಮೂಲಕ ನೀಡುವುದನ್ನು ಕಡ್ದಾಯ ಮಾಡಲಾಗಿದೆ. ಇದರ ಜೊತೆಗೆ ಇ-ಸರಕು ಪಟ್ಟಿ  ಮತ್ತು ಇ-ಪಾವತಿಯನ್ನೂ ಕಡ್ದಾಯ ಮಾಡಲಾಗಿದೆ .ಕೆ.ಡಿ.ಎಸ್.ನಲ್ಲಿ ಆರ್.ಎಫ್.ಐ.ಡಿ ವ್ಯವಸ್ಥೆ ಕಾರ್ಯಾಚರಣೆ, , ಕೋಲ್ಕೊತ್ತಾ ಡಾಕ್ ವ್ಯವಸ್ಥೆಯಲ್ಲಿ (ಕೆ.ಡಿ.ಎಸ್.) ಸಿ.ಸಿ.ಟಿ.ವಿ ಕಾರ್ಯಾಚರಣೆಗಳು ಮತ್ತು ರಬೀಂದ್ರ ಸೇತು ಮತ್ತು ಕೆ.ಡಿ.ಎಸ್. ನಲ್ಲಿ ಮೂರು ಟ್ರಕ್ ತಂಗುದಾಣ (ಪಾರ್ಕಿಂಗ್ ಟರ್ಮಿನಲ್ ) ಗಳನ್ನು ಕೂಡಾ 2019ರಲ್ಲಿ ಉದ್ಘಾಟಿಸಲಾಗಿದೆ. ಆರ್.ಎಫ್.ಐ.ಡಿ. ವ್ಯವಸ್ಥೆ ಬಂದರು ಬಳಕೆದಾರರಿಗೆ ನಗದು ರಹಿತ ವರ್ಗಾವಣೆ  ಮೂಲಕ ಪರ್ಮಿಟ್ ಪಡೆಯಲು/ ಪಾಸುಗಳನ್ನು ಪಡೆಯಲು ಏಕ ಗವಾಕ್ಷ ವ್ಯವಸ್ಥೆಯನ್ನು ಒದಗಿಸುತದೆ.

ಕಾಂಡ್ಲಾದ ದೀನದಯಾಳ್ ಬಂದರಿನಲ್ಲಿ ಎರಡು ಬಹು ಉದ್ದೇಶಿತ ಬರ್ತ್ ಗಳನ್ನು 2019 ರ ಮಾರ್ಚ್ ತಿಂಗಳಲ್ಲಿ ಉದ್ಘಾಟಿಸಲಾಯಿತು. ಹೊಸ ಬರ್ತ್ ಗಳು ಬಂದರಿನಲ್ಲಿ ದಟ್ಟಣೆಯನ್ನು ನಿವಾರಿಸಲಿವೆ. 2019 ರಲ್ಲಿ ಪಾರಾದೀಪ ಬಂದರಿನಲ್ಲಿ 200 ಕೋ.ರೂ. ಅಂದಾಜು ವೆಚ್ಚದಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು,  ಮುಂದಿನ ದಿನಗಳಲ್ಲಿ ಅದನ್ನು ವೈದ್ಯಕೀಯ ಕಾಲೇಜು ಆಗಿ ರೂಪಿಸಲು ಅವಕಾಶ ಇರುವಂತೆ ಮತ್ತು ಪಿ.ಪಿ.ಪಿ. ಮಾದರಿಯಲ್ಲಿ ವಿಸ್ತರಿಸಲು ಅನುಕೂಲ ಇರುವಂತೆ ರೂಪಿಸಲಾಯಿತು.

ಕರಾವಳಿ ನೌಕಾಯಾನ

ಸಾಗರಮಾಲಾ ಅಡಿಯಲ್ಲಿ ಕರಾವಳಿ ನೌಕಾಯಾನ ಸಚಿವಾಲಯದ ಆದ್ಯತಾ ವಿಷಯವಾಗಿದ್ದು, ಕರಾವಳಿ ಶಿಪ್ಪಿಂಗ್ ಗೆ ಉತ್ತೇಜನ ನೀಡಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವೇಗವನ್ನು ಮುಂದುವರೆಸಿಕೊಂಡು ಹೋಗಲು ಮತ್ತು ಕರಾವಳಿ ವ್ಯಾಪಾರೋದ್ಯಮದಲ್ಲಿ ಇನ್ನಷ್ಟು ಬೆಳವಣಿಗೆಯನ್ನು ಸಾಧಿಸಲು ಭಾರತದಲ್ಲಿ 2025 ರವರೆಗೆ ಕರಾವಳಿಯಲ್ಲಿ ಶಿಪ್ಪಿಂಗ್ ಅಭಿವೃದ್ದಿ ಕುರಿತ ಚಿಂತನಾ ಯೋಜನೆಯನ್ನು ಏಶ್ಯನ್ ಅಭಿವೃದ್ದಿ ಬ್ಯಾಂಕ್ ತಯಾರಿಸಿದೆ. ಕರಾವಳಿ ಶಿಪ್ಪಿಂಗ್ ನ ಸವಾಲುಗಳು ಮತ್ತು ಸಾಮರ್ಥ್ಯ ಕುರಿತಂತೆ ಮತ್ತು ಅವುಗಳನ್ನು ನಿಭಾಯಿಸಲು ಸೂಕ್ತ ಮೂಲಸೌಕರ್ಯ , ನಿಯಂತ್ರಣ ಹಾಗು ವಾಣಿಜ್ಯಿಕ ಮಧ್ಯಪ್ರವೇಶಗಳನ್ನು ಒಳಗೊಂಡ  ಸಮಗ್ರ ದೃಷ್ಟಿಯನ್ನು ಹೊಂದಿದ  ಯೋಜನೆ ಇದಾಗಿದೆ.

ನಾವಿಕ ಪರಂಪರೆ

ನೌಕಾಯಾನ ಸಚಿವಾಲಯವು ಲೋಥಾಲ್ ನಲ್ಲಿ ಒಟ್ಟು 478.9  ಕೋ.ರೂ. ವೆಚ್ಚದಲ್ಲಿ ರಾಷ್ಟ್ರೀಯ ಪರಂಪರೆ ಸಂಕೀರ್ಣವನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಇದು ದೇಶದಲ್ಲಿ ಹರಪ್ಪಾ ಕಾಲದಿಂದ ಭಾರತದ ಶ್ರೀಮಂತ ನಾವಿಕ ಪರಂಪರೆಯನ್ನು ಪ್ರದರ್ಶಿಸಲು ನಿರ್ಮಾಣಗೊಳ್ಳಲಿರುವ ಮೊದಲ ಅತ್ಯಾಧುನಿಕ ವಿಶ್ವದರ್ಜೆಯ ಸಂಕೀರ್ಣವಾಗಿರುತ್ತದೆ.

ಇತರ ಪ್ರಮುಖ ಕಾರ್ಯಕ್ರಮಗಳು

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಖಂಡದ ರಾಂಚಿಯಲ್ಲಿ ಸೆಪ್ಟೆಂಬರ್ 29 ರಂದು ಸಾಹಿಬ್ ಗಂಜ್ ನ ಬಹುಮಾದರಿ ಟರ್ಮಿನಲ್ ನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಮೂಲಸೌಕರ್ಯಗಳನ್ನು ಹೊಂದುವುದಕ್ಕಾಗಿ ಮತ್ತು ಸುರಕ್ಷೆ ಹಾಗು ಬಂದರುಗಳ ಭದ್ರತೆಗಾಗಿ, ಎಕ್ಸಿಂ ವ್ಯಾಪಾರೋದ್ಯಮದಲ್ಲಿ ಬಂದರುಗಳು ಮಹತ್ವದ ಪಾತ್ರ ವಹಿಸುವುದರಿಂದಾಗಿ 2019 ರ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ  ಸರಕಾರ ಮತ್ತು ನಾವಿಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ  ಸಕ್ರಿಯ ಮತ್ತು ನಿಕಟ ಸಂವಾದಕ್ಕಾಗಿ 17 ನೇ ನಾವಿಕ ರಾಜ್ಯ ಅಭಿವೃದ್ದಿ ಮಂಡಳಿ ಸಭೆಯನ್ನು

ಭಾರತವು ಐ.ಎಂ.ಒ. ಮಂಡಳಿಗೆ “ಬಿ” ವರ್ಗದಲ್ಲಿ ಪುನರಾಯ್ಕೆಯಾಗಿದೆ. ಅಂತಾರಾಷ್ಟ್ರೀಯ ಸಮುದ್ರ ವ್ಯಾಪಾರದಲ್ಲಿ ವ್ಯಾಪಕ ಆಸಕ್ತಿಯನ್ನು ಹೊಂದಿರುವುದನ್ನು ಇದು ತೋರಿಸುತ್ತದೆ. ಅಂತಾರಾಷ್ಟ್ರೀಯ ನಾವಿಕ ಸಂಘಟನೆ (ಐ.ಎಂ.ಒ.)  ಐ.ಎಂ.ಒ.ಸಿ ಮಂಡಳಿಗೆ ಹೊಸ ಸದಸ್ಯರನ್ನು 2020-21 ರ ಅವಧಿಗೆ ಆಯ್ಕೆ ಮಾಡಿದೆ.

ಆರ್.ಒ.ಎಫ್.ಆರ್.ಗೆ ಅರ್ಹತೆ ಗಳಿಸಲು ಹಡಗುಕಟ್ಟೆಗಳಿಗೆ (ಶಿಪ್ ಯಾರ್ಡ್ ) ಇದ್ದ ಅರ್ಹತಾ ಮಾಪನವನ್ನು ಭಾರತ ಸರಕಾರವು 2019ರಲ್ಲಿ ಸಡಿಲಿಕೆ ಮಾಡಿದೆ. ಸರಕಾರಿ ಇಲಾಖೆಗಳು ಅಥವಾ ಏಜೆನ್ಸಿಗಳು ಹಡಗುಗಳನ್ನು ತಮ್ಮ ಬಳಕೆಗಾಗಿ ಅಥವಾ ಸರಕಾರದ ಬಳಕೆಗಾಗಿ ಖರೀದಿಸಲು ಭಾರತೀಯ ಹಡಗುಕಟ್ಟೆಗಳಿಗೆ ಮೊದಲ ನಿರಾಕರಣೆಯ ಹಕ್ಕು ನೀಡಿಕೆಗೆ  ಸಂಬಂಧಿಸಿದ ಮಾರ್ಗದರ್ಶಿಗಳನ್ನು ನೌಕಾಯಾನ ಸಚಿವಾಲಯವು ತಿದ್ದುಪಡಿ ಮಾಡಿದೆ.

2002-2007 ರ ಹಡಗು ನಿರ್ಮಾಣ ಯೋಜನೆಯಡಿ ನೀಡಲಾದ ಗುತ್ತಿಗೆಯಡಿ ಅನುಷ್ಟಾನಿಸಲಾದ ಹಡಗು ನಿರ್ಮಾಣದ ಸಹಾಯಧನಕ್ಕೆ ಸಂಬಂಧಿಸಿ ಧೀರ್ಘಾವಧಿಯಿಂದ ಬಾಕಿಯಾಗಿದ್ದ ಕೋರಿಕೆಗಳನ್ನು ಬಗೆಹರಿಸಲು ಪ್ರಸ್ತಾವವೊಂದಕ್ಕೆ 2019 ರ ಅಕ್ಟೋಬರ್ ತಿಂಗಳಲ್ಲಿ ಅನುಮೋದನೆ ನೀಡಲಾಗಿದೆ. ಇದು ಸುಮಾರು 153 ಕೋ.ರೂ.ಗಳ ಬಜೆಟ್ ಬೆಂಬಲದ ಮೂಲಕ ಹಡಗು ನಿರ್ಮಾಣಕ್ಕೆ ಸಂಬಂಧಿಸಿದ ಸಹಾಯಧನದ ಬದ್ದತಾ ಹೊಣೆಗಾರಿಕೆಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಒಟ್ಟು 51 ಹಡಗುಗಳಲ್ಲಿ , 47 ಹಡಗುಗಳ ಬಾಕಿ ಸಹಾಯಧನ ಮತ್ತು 4 ಹಡಗುಗಳ ಪೂರ್ಣ ಸಹಾಯಧನ ಇದರಿಂದ ಬಿಡುಗಡೆಯಾಗಲಿದೆ. ಈ ಸಚಿವಾಲಯವು ಸಹಾಯಧನ ಬಿಡುಗಡೆಗೆ ಸಂಬಂಧಿಸಿದ ಮಾರ್ಗದರ್ಶಿಗಳನ್ನು ರೂಪಿಸುತ್ತಿದೆ.

ಹಡಗು ನಿರ್ಮಾಣಕ್ಕೆ ಈಗಿನ (2016-2026)  ಹಣಕಾಸು ನೆರವಿನ ಯೋಜನೆಯಲ್ಲಿ 17 ಹಡಗುಗಳಿಗೆ 39.7 ಕೋ.ರೂ.ಗಳ ಹಣಕಾಸು ನೆರವನ್ನು ನಾಲ್ಕು ಭಾರತೀಯ ಹಡಗುಕಟ್ಟೆಗಳಿಗೆ (ಶಿಪ್ ಯಾರ್ಡ್) ಬಿಡುಗಡೆ ಮಾಡಲಾಗಿದೆ. ಇದಲ್ಲದೆ 2019 ರ ಫೆಬ್ರವರಿಯಲ್ಲಿ ತಿದ್ದುಪಡಿ ಮಾಡಲಾದ , ಸಮಗ್ರ ಮಾರ್ಗದರ್ಶಿಗಳನ್ನು ಹೊರಡಿಸಲಾಗಿದೆ. ಇವು ಭಾರತೀಯ ಹಡಗುಕಟ್ಟೆಗಳು ಅಂತಾರಾಷ್ಟ್ರೀಯವಾಗಿ ಹೆಚ್ಚು ಸ್ಪರ್ಧಾತ್ಮಕವಾಗಲು ಅನುಕೂಲತೆಗಳನ್ನು ಒದಗಿಸುತ್ತವೆ ಮತ್ತು 10 ಮೀ ಮತ್ತು ಹೆಚ್ಚಿನ ನದಿ ನೀರಿನಿಂದ ಹೂಳೆತ್ತುವ ಯಂತ್ರಗಳನ್ನು (ಡ್ರೆಜರ್) ಗಳನ್ನು ನಿರ್ಮಾಣ ಮಾಡುವುದಕ್ಕೆ ಉತ್ತೇಜನ ನೀಡಲಿವೆ.

***



(Release ID: 1597979) Visitor Counter : 229


Read this release in: English , Hindi , Bengali , Tamil