ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಕೇಂದ್ರ ಎಂಎಸ್ಎಂಇ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ದೇವನಹಳ್ಳಿಯಲ್ಲಿ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಿದರು
₹156 ಕೋಟಿ ಹೂಡಿಕೆಯಲ್ಲಿ 10 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾದ ಈ ಕೇಂದ್ರವು ವಾರ್ಷಿಕವಾಗಿ 10,000 ಮಂದಿಗೆ ತರಬೇತಿ ನೀಡಲಿದೆ
ಕೇಂದ್ರದ ಪ್ರಮುಖ ಗಮನದ ಕ್ಷೇತ್ರ: ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ESDM)
ಪ್ರಕಟಣಾ ದಿನಾಂಕ:
10 SEP 2026 7:54PM by PIB Bengaluru
ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು 2026 ರ ಸೆಪ್ಟೆಂಬರ್ 10 ರಂದು ಬೆಂಗಳೂರಿನ ದೇವನಹಳ್ಳಿಯಲ್ಲಿ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರ್ಕಾರದ ಎಂಎಸ್ಎಂಇ ಸಚಿವಾಲಯ, ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಉದ್ಯಮದ ಪ್ರತಿನಿಧಿಗಳು ಹಾಗೂ ಇತರ ಸ್ಥಳೀಯ ಪಾಲುದಾರರು ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಅಂಗವಾಗಿ ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ESDM) ವಲಯಗಳಿಗೆ ಭಾರತೀಯ ಎಂಎಸ್ಎಂಇಗಳ ಕೊಡುಗೆಯನ್ನು ಕುರಿತ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.




ಎಂಎಸ್ಎಂಇಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಮೂಲಕ ಅವುಗಳ ತಾಂತ್ರಿಕ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಎಂಎಸ್ಎಂಇ ಸಚಿವಾಲಯವು ದೇಶಾದ್ಯಂತ ತಂತ್ರಜ್ಞಾನ ಕೇಂದ್ರಗಳ ಜಾಲವನ್ನು ನಿರ್ವಹಿಸುತ್ತಿದೆ. ವರ್ಷಗಳಿಂದ ಈ ಕೇಂದ್ರಗಳು ತಂತ್ರಜ್ಞಾನ ಅಭಿವೃದ್ಧಿ, ಕೈಗಾರಿಕಾ ಗುಣಮಟ್ಟದ ತರಬೇತಿ, ವಿನ್ಯಾಸ, ಮಾದರಿ ಅಭಿವೃದ್ಧಿ, ಪರೀಕ್ಷೆ ಮತ್ತು ಎಂಎಸ್ಎಂಇಗಳಿಗೆ ಉತ್ಪಾದನಾ ಬೆಂಬಲ ಒದಗಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ.
ಎಂಎಸ್ಎಂಇ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ತಂತ್ರಜ್ಞಾನ ಕೇಂದ್ರದ ಉದ್ಘಾಟನೆಗೆ ಶುಭ ಹಾರೈಸಿದರು ಮತ್ತು ನೂತನ ಕೇಂದ್ರಕ್ಕೆ ವಿದ್ಯಾರ್ಥಿಗಳು, ಉದ್ಯಮ ಸಂಘಗಳು ಮತ್ತು ಇತರ ಪಾಲುದಾರರನ್ನು ಸ್ವಾಗತಿಸಿದರು.


ಸಚಿವರು ಮಾತನಾಡಿ, “ಈ ಕೇಂದ್ರವು ತರಬೇತಿ, ಉತ್ಪಾದನೆ ಹಾಗೂ ಯುವ ಪ್ರತಿಭೆಯನ್ನು ಪೋಷಿಸುವ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಎಂಎಸ್ಎಂಇ ಸಚಿವಾಲಯ ನಡೆಸುತ್ತಿರುವ ತಂತ್ರಜ್ಞಾನ ಕೇಂದ್ರಗಳ ಜಾಲವು ಯುವ ಮನಸ್ಸುಗಳ ಸಾಮರ್ಥ್ಯವನ್ನು ಬೆಳೆಸುವಲ್ಲಿ ಮತ್ತು ಅವರಿಗೆ ಉದ್ಯಮ ಆಧಾರಿತ ಕೌಶಲ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ” ಎಂದು ಹೇಳಿದರು. ಕರ್ನಾಟಕದ ಬೆಳಗಾವಿಯಲ್ಲಿ ₹178 ಕೋಟಿ ವೆಚ್ಚದಲ್ಲಿ ಮುಂದಿನ ತಂತ್ರಜ್ಞಾನ ಕೇಂದ್ರ ಸ್ಥಾಪನೆಯಾಗುತ್ತಿದೆ ಎಂದೂ ಅವರು ಘೋಷಿಸಿದರು.
ಉದ್ಯಮಶೀಲತೆಯ ಮಹತ್ವವನ್ನು ಒತ್ತಿಹೇಳಿದ ಸಚಿವರು, ವಿದ್ಯಾರ್ಥಿಗಳು ಮತ್ತು ಯುವ ನಾವೀನ್ಯಕಾರರು ನವೋದ್ಯಮಗಳನ್ನು ಆರಂಭಿಸಿ ದೇಶದ ಬೆಳವಣಿಗೆಗೆ ಕೊಡುಗೆ ನೀಡುವಂತೆ ಕರೆ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ ದೃಷ್ಟಿಕೋನಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನ, ತರಬೇತಿ ಹಾಗೂ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ಕಲ್ಪಿಸುವತ್ತ ಸಚಿವಾಲಯ ಗಮನಹರಿಸಿದೆ ಎಂದು ಅವರು ಹೇಳಿದರು.
ಕೃಷಿಯ ನಂತರ ಎಂಎಸ್ಎಂಇ ವಲಯವು ಭಾರತೀಯ ಅರ್ಥವ್ಯವಸ್ಥೆಗೆ ಪ್ರಮುಖ ಕೊಡುಗೆಯಾಗಿದೆ ಎಂದು ಅವರು ಹೇಳಿದರು ಮತ್ತು ದೇಶದ ಬೆಳವಣಿಗೆಗೆ ಅದರ ಕೊಡುಗೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು.


ಭಾರತ ಸರ್ಕಾರದ ಎಂಎಸ್ಎಂಇ ಸಚಿವಾಲಯದ ಕಾರ್ಯದರ್ಶಿ ಶ್ರೀ ಭರತ್ ಖೇರಾ ಅವರು ಮಾತನಾಡಿ, ಎಂಎಸ್ಎಂಇಗಳಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಎಂಎಸ್ಎಂಇಡಿ ಕಾಯಿದೆ, 2026ಕ್ಕೆ ಇತ್ತೀಚೆಗೆ ತರಲಾದ ತಿದ್ದುಪಡಿಗಳನ್ನು ವಿವರಿಸಿದರು. ಪ್ರತಿಭೆಯನ್ನು ಪೋಷಿಸುವ ಮತ್ತು ಉದ್ಯಮ-ಸಿದ್ಧ ಕೌಶಲ್ಯಗಳನ್ನು ಬೆಳೆಸುವ ಪ್ರಮುಖ ಉಪಕ್ರಮವಾಗಿ ಬೆಂಗಳೂರು ತಂತ್ರಜ್ಞಾನ ಕೇಂದ್ರವು ಹೊಂದಿರುವ ಮಹತ್ವವನ್ನು ಅವರು ವಿವರಿಸಿದರು. ಈ ಕೇಂದ್ರದಲ್ಲಿ ಪ್ರತಿ ವರ್ಷ ಸುಮಾರು 10,000 ಮಂದಿಗೆ ತರಬೇತಿ ನೀಡುವ ನಿರೀಕ್ಷೆಯಿದ್ದು, ಅವರಿಗೆ ಸುಧಾರಿತ ತಾಂತ್ರಿಕ ಕೌಶಲ್ಯಗಳನ್ನು ಒದಗಿಸುವುದರ ಜೊತೆಗೆ ಎಂಎಸ್ಎಂಇ ವಲಯದ ಬೆಳವಣಿಗೆಗೆ ಕೊಡುಗೆ ನೀಡುವ ಅವಕಾಶಗಳನ್ನು ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.


ಎಂಎಸ್ಎಂಇ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ರಜನೀಶ್ ಅವರು ಎಂಎಸ್ಎಂಇ ವಲಯದ ಬೆಳವಣಿಗೆಯನ್ನು ವಿವರಿಸಿದರು. 9.4 ಕೋಟಿಗೂ ಅಧಿಕ ನೋಂದಾಯಿತ ಎಂಎಸ್ಎಂಇಗಳು ಭಾರತೀಯ ಆರ್ಥಿಕತೆಗೆ ಶೇ.31ರಷ್ಟು ಕೊಡುಗೆ ನೀಡುತ್ತಿದ್ದು, 41.6 ಕೋಟಿಗೂ ಅಧಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ ಎಂದು ಅವರು ತಿಳಿಸಿದರು. ಎಂಎಸ್ಎಂಇಗಳು ಬೆಳವಣಿಗೆಯ ಚಾಲಕ ಶಕ್ತಿಗಳಾಗಿವೆ ಎಂದ ಅವರು, ಎಂಎಸ್ಎಂಇಗಳಿಗೆ ಹಣಕಾಸು ಮತ್ತು ತಂತ್ರಜ್ಞಾನವನ್ನು ಸುಲಭವಾಗಿ ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಬೆಂಗಳೂರಿನ ತಂತ್ರಜ್ಞಾನ ಕೇಂದ್ರವು ದೇಶಾದ್ಯಂತ ಎಂಎಸ್ಎಂಇ ಸಚಿವಾಲಯ ಸ್ಥಾಪಿಸಿರುವ ತಂತ್ರಜ್ಞಾನ ಕೇಂದ್ರಗಳ ಜಾಲಕ್ಕೆ ಇತ್ತೀಚಿನ ಸೇರ್ಪಡೆಯಾಗಿದೆ ಎಂದು ಅವರು ಹೇಳಿದರು.
TReDS, ಸಾಲ ಖಾತರಿ ಯೋಜನೆ ಮತ್ತು ಎಂಎಸ್ಎಂಇ ವಲಯವನ್ನು ಬಲಪಡಿಸುವ ಉದ್ದೇಶದ ವಿವಿಧ ಇತರ ಕಾರ್ಯಕ್ರಮಗಳು ಸೇರಿದಂತೆ, ಇತ್ತೀಚಿನ ವರ್ಷಗಳಲ್ಲಿ ಸಚಿವಾಲಯ ಸಾಧಿಸಿರುವ ಮಹತ್ವದ ಪ್ರಗತಿಯನ್ನು ಅವರು ವಿವರಿಸಿದರು.
ದೇಶಾದ್ಯಂತ ಇರುವ ತಂತ್ರಜ್ಞಾನ ಕೇಂದ್ರಗಳು ಎಂಎಸ್ಎಂಇಗಳಿಗೆ ತಾಂತ್ರಿಕ, ಉತ್ಪಾದನಾ ಮತ್ತು ಸಲಹಾ ಬೆಂಬಲವನ್ನು ಒದಗಿಸುವುದರ ಜೊತೆಗೆ ಯುವಜನರಿಗೆ ಉದ್ಯಮ ಆಧಾರಿತ ತರಬೇತಿ ನೀಡುವಲ್ಲಿ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಅವರು ವಿವರಿಸಿದರು.
ಭಾರತ ಸರ್ಕಾರದ ಎಂಎಸ್ಎಂಇ ಸಚಿವಾಲಯವು ಕರ್ನಾಟಕ ಸರ್ಕಾರ ಒದಗಿಸಿದ 10 ಎಕರೆ ಭೂಮಿಯಲ್ಲಿ ₹156 ಕೋಟಿ ಹೂಡಿಕೆಯೊಂದಿಗೆ ಬೆಂಗಳೂರು ತಂತ್ರಜ್ಞಾನ ಕೇಂದ್ರವನ್ನು ಅಭಿವೃದ್ಧಿಪಡಿಸಿದೆ. ಕೇಂದ್ರದ ಪ್ರಮುಖ ಗಮನದ ವಲಯ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ESDM) ಆಗಿದೆ. ಅತ್ಯಾಧುನಿಕ ಯಂತ್ರಗಳು ಮತ್ತು ಪ್ರಯೋಗಾಲಯಗಳನ್ನು ಹೊಂದಿರುವ ಈ ಕೇಂದ್ರವು ಎಂಎಸ್ಎಂಇಗಳಿಗೆ ಸರ್ಫೇಸ್-ಮೌಂಟ್ ಟೆಕ್ನಾಲಜಿ (SMT) ಲೈನ್, ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, ಸಿ ಎನ್ ಸಿ 5 ಆಕ್ಸಿಸ್ ಮತ್ತು 3 ಆಕ್ಸಿಸ್ ಯಂತ್ರಗಳು, ಎಲೆಕ್ಟ್ರಿಕ್ ಡಿಸ್ಚಾರ್ಜ್ ಮೆಷಿನ್ (EDM) ಇತ್ಯಾದಿ ಸುಧಾರಿತ ತಂತ್ರಜ್ಞಾನಗಳ ಲಭ್ಯತೆಯನ್ನು ಒದಗಿಸುತ್ತದೆ.


ಸುಧಾರಿತ ವಿನ್ಯಾಸ, ಮಾದರಿ ತಯಾರಿ, ಉತ್ಪಾದನೆ, ತರಬೇತಿ ಮತ್ತು ಸಲಹಾ ಸೇವೆಗಳನ್ನು ಒದಗಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಏರೋಸ್ಪೇಸ್ ವಲಯಗಳಲ್ಲಿ ಎಂಎಸ್ಎಂಇ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಬೆಂಗಳೂರು ತಂತ್ರಜ್ಞಾನ ಕೇಂದ್ರವು ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಡಾ. ರಜನೀಶ್ ಹೇಳಿದರು. ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಹಾಗೂ ತಯಾರಿಕೆ (ESDM) ಯಲ್ಲಿ ಎಂಎಸ್ಎಂಇಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬೆಂಬಲವನ್ನು ಒದಗಿಸುವಲ್ಲಿ ಈ ಕೇಂದ್ರವು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಇರುವ ಎಂಎಸ್ಎಂಇಗಳಿಗೆ ಉದ್ಯೋಗ ಸೃಷ್ಟಿಸಲು, ಕೌಶಲ್ಯಪೂರ್ಣ ಪ್ರತಿಭೆಯನ್ನು ಪೋಷಿಸಲು ಮತ್ತು ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸಲು ನೆರವಾಗುತ್ತದೆ.
*****
(ಪ್ರಕಟಣೆ ಐ.ಡಿ.: 2308932)
ವಿಸಿಟರ್ ಕೌಂಟರ್ : 23