ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ದತ್ತಾಂಶ-ಆಧಾರಿತ ಆಡಳಿತದಲ್ಲಿ ಆಡಳಿತಾತ್ಮಕ ದತ್ತಾಂಶದ ಬಳಕೆಗಾಗಿ ದತ್ತಾಂಶ ಸಮನ್ವಯತೆಯ ಕುರಿತು ಕಾರ್ಯಾಗಾರವನ್ನು ಆಯೋಜಿಸಿತು


ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ-2: ಸಾಕ್ಷ್ಯಾಧಾರಿತ ನೀತಿ ನಿರೂಪಣೆ ಮತ್ತು ದತ್ತಾಂಶ ಆಧಾರಿತ ಆಡಳಿತಕ್ಕೆ ವಿಶ್ವಾಸಾರ್ಹ, ಸಕಾಲಿಕ ಹಾಗೂ ಪರಸ್ಪರ ಕಾರ್ಯಸಾಧ್ಯ ದತ್ತಾಂಶ ಅತ್ಯಗತ್ಯ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ: ಆಡಳಿತದಲ್ಲಿ ಕೃತಕ ಬುದ್ಧಿಮತ್ತೆಯ ಯಶಸ್ವಿ ಬಳಕೆಗೆ ಉತ್ತಮ ಗುಣಮಟ್ಟದ ದತ್ತಾಂಶದ ಲಭ್ಯತೆ ಮೂಲಭೂತ ಅಗತ್ಯವಾಗಿದೆ

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಕಾರ್ಯದರ್ಶಿ: ಸಮನ್ವಯಗೊಳಿಸಿದ, ಗುಣಮಟ್ಟ ಖಾತ್ರಿಪಡಿಸಿದ ಹಾಗೂ ಸಮರ್ಪಕವಾಗಿ ದಾಖಲಿಸಲಾದ ದತ್ತಾಂಶವು ಎಐ-ಸಿದ್ಧ ಸರ್ಕಾರಕ್ಕೆ ಮೂಲಭೂತವಾಗಿದೆ

ಪ್ರಕಟಣಾ ದಿನಾಂಕ: 08 SEP 2026 7:23PM by PIB Bengaluru

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ) ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ (ಎಮ್‌ ಡಿ ಒ) ಸಾಂಖ್ಯಿಕ ಸಲಹೆಗಾರರು ಮತ್ತು ಮುಖ್ಯ ದತ್ತಾಂಶ ಅಧಿಕಾರಿಗಳ ಕಾರ್ಯಾಗಾರವನ್ನು 2026ರ ಸೆಪ್ಟೆಂಬರ್ 08ರಂದು ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್‌ನ ಆಕಾಶವಾಣಿ ಭವನ, ಬ್ರಾಡ್‌ಕಾಸ್ಟಿಂಗ್ ಹೌಸ್‌ನ ರಂಗ್ ಭವನ್ ಸಭಾಂಗಣದಲ್ಲಿ “ದತ್ತಾಂಶ ಆಧಾರಿತ ಆಡಳಿತದಲ್ಲಿ ಆಡಳಿತಾತ್ಮಕ ದತ್ತಾಂಶದ ಬಳಕೆಗಾಗಿ ದತ್ತಾಂಶ ಸಮನ್ವಯತೆ” ಎಂಬ ವಿಷಯದ ಕುರಿತು ಆಯೋಜಿಸಿತು. ಈ ಕಾರ್ಯಾಗಾರವು ರಾಷ್ಟ್ರೀಯ ದತ್ತಾಂಶ ವ್ಯವಸ್ಥೆಯನ್ನು ಬಲಪಡಿಸುವುದು, ಆಡಳಿತಾತ್ಮಕ ದತ್ತಾಂಶದ ಪರಿಣಾಮಕಾರಿ ಬಳಕೆ ಮತ್ತು ಸಮನ್ವಯತೆಯನ್ನು ಉತ್ತೇಜಿಸುವುದು ಹಾಗೂ ಸರ್ಕಾರದಾದ್ಯಂತ ದತ್ತಾಂಶ ಆಧಾರಿತ ಆಡಳಿತ ಮತ್ತು ಸಾಕ್ಷ್ಯಾಧಾರಿತ ನೀತಿ ರೂಪಣೆಗೆ ಹೆಚ್ಚಿನ ಸಮನ್ವಯವನ್ನು ಬೆಳೆಸುವ ಉದ್ದೇಶವನ್ನು ಹೊಂದಿತ್ತು.

ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ-2 ಶ್ರೀ ಶಕ್ತಿಕಾಂತ ದಾಸ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಕಾರ್ಯದರ್ಶಿ ಡಾ. ಸೌರಭ್ ಗರ್ಗ್ ಮತ್ತು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಹಾನಿರ್ದೇಶಕ (ದತ್ತಾಂಶ ಆಡಳಿತ) ಶ್ರೀ ಪಿ. ಆರ್. ಮೆಶ್ರಾಮ್ ಉಪಸ್ಥಿತರಿದ್ದರು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳ ಸಾಂಖ್ಯಿಕ ಸಲಹೆಗಾರರು, ಮುಖ್ಯ ದತ್ತಾಂಶ ಅಧಿಕಾರಿಗಳು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮುಖ್ಯ ಅತಿಥಿ ಶ್ರೀ ಶಕ್ತಿಕಾಂತ ದಾಸ್ ಅವರು “ದತ್ತಾಂಶ ಸಮನ್ವಯತೆ” ಕುರಿತ ತ್ರೈಮಾಸಿಕ ಪ್ರಗತಿ ವರದಿ ಪೋರ್ಟಲ್‌ಗೆ (https://ಕ್ಯೂಪಿಆರ್.ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ.gov.in) ಚಾಲನೆ ನೀಡಿದರು. ಕ್ಯೂಪಿಆರ್ ಪೋರ್ಟಲ್ ಒಂದು ತಂತ್ರಜ್ಞಾನ ಆಧಾರಿತ ವೇದಿಕೆಯಾಗಿದ್ದು, ಎಲ್ಲ ಕೇಂದ್ರ ಎಮ್‌ ಡಿ ಒ ಗಳು ಪ್ರಸರಣಕ್ಕೆ ಸಿದ್ಧಗೊಳಿಸಲಾದ ದತ್ತಾಂಶ ಸಂಗ್ರಹಗಳ ಗುರುತಿಸುವಿಕೆ ಮತ್ತು ಪಟ್ಟಿ ತಯಾರಿಕೆ, ಅವುಗಳ ಮೆಟಾಡೇಟಾ ಸಿದ್ಧಪಡಿಸುವಿಕೆ, ಮಷೀನ್‌ ರೀಡಬಲ್‌ ದತ್ತಾಂಶದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳು, ವರ್ಗೀಕರಣಗಳು ಹಾಗೂ ಸಾಮಾನ್ಯ ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ಬಳಸುವುದು ಮತ್ತು ಆಯಾ ಎಮ್‌ ಡಿ ಒ ಗಳು ಸಾಂಖ್ಯಿಕ ಗುಣಮಟ್ಟ ಖಾತರಿ ಚೌಕಟ್ಟಿನ (ಎಸ್‌ ಕ್ಯೂ ಎ ಎಫ್) ಅನುಸಾರ ಗುಣಮಟ್ಟ ಪರಿಶೀಲನೆಗಳನ್ನು ನಡೆಸುವ ಕುರಿತು ಪ್ರಗತಿಯನ್ನು ವರದಿ ಮಾಡಲು ಬಳಸಬಹುದಾಗಿದೆ. ಕ್ಯೂಪಿಆರ್ ಪೋರ್ಟಲ್‌ನಲ್ಲಿ ಸ್ವಯಂಚಾಲಿತ ಮೌಲ್ಯಮಾಪನ ವ್ಯವಸ್ಥೆ, ಡ್ಯಾಶ್‌ಬೋರ್ಡ್‌ಗಳು, ಎನ್‌ ಎಮ್‌ ಡಿ ಎಸ್‌ ವೆಬ್ ಪೋರ್ಟಲ್‌ನೊಂದಿಗೆ ಪರಿಶೀಲನೆ ಸೌಲಭ್ಯಗಳಿದ್ದು, ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಾದ್ಯಂತ ವಿಶ್ಲೇಷಣಾತ್ಮಕ ಒಳನೋಟಗಳನ್ನು ಒದಗಿಸುತ್ತದೆ.

ಮುಖ್ಯ ಭಾಷಣ ಮಾಡಿದ ಶ್ರೀ ಶಕ್ತಿಕಾಂತ ದಾಸ್ ಅವರು, ವಿಶ್ವಾಸಾರ್ಹ, ಸಕಾಲಿಕ ಮತ್ತು ಪರಸ್ಪರ ಕಾರ್ಯಸಾಧ್ಯ ದತ್ತಾಂಶವು ಸಾಕ್ಷ್ಯಾಧಾರಿತ ನೀತಿ ರೂಪಣೆ ಮತ್ತು ದತ್ತಾಂಶ ಆಧಾರಿತ ಆಡಳಿತಕ್ಕೆ ಅತ್ಯಗತ್ಯ ಎಂದು ಒತ್ತಿಹೇಳಿದರು. ನೀತಿ ರೂಪಣೆ, ಮೇಲ್ವಿಚಾರಣೆ ಮತ್ತು ಫಲಿತಾಂಶಗಳ ಮೌಲ್ಯಮಾಪನಕ್ಕಾಗಿ ಸಚಿವಾಲಯಗಳು/ಇಲಾಖೆಗಳಲ್ಲಿ ಆಡಳಿತಾತ್ಮಕ ದತ್ತಾಂಶ ಮತ್ತು ಸಾಂಖ್ಯಿಕ ಪರಿಣತಿಯ ಹೆಚ್ಚಿನ ಬಳಕೆಗೆ ಅವರು ಕರೆ ನೀಡಿದರು. ಎನ್ ಎಮ್‌ ಡಿ ಎಸ್ 2.0, ಎಸ್‌ ಕ್ಯೂ ಎ ಎಫ್, ಸಾಂಖ್ಯಿಕ ವರ್ಗೀಕರಣಗಳು, ದತ್ತಾಂಶ ಜೀವಿತಾವಧಿ ಮಾರ್ಗಸೂಚಿಗಳು, ಇ-ಸಾಂಖ್ಯಿಕಿ, ಮೈಕ್ರೋಡೇಟಾ ಪೋರ್ಟಲ್ ಮತ್ತು ದತ್ತಾಂಶ ಸಮನ್ವಯ ಕುರಿತ ಕ್ಯೂಪಿಆರ್ ಸೇರಿದಂತೆ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಪ್ರಮುಖ ಉಪಕ್ರಮಗಳು ಬಲಿಷ್ಠ ಆಡಳಿತಾತ್ಮಕ ದತ್ತಾಂಶ ವ್ಯವಸ್ಥೆಗೆ ಪ್ರಮುಖ ನೆರವಾಗುವ ಅಂಶಗಳಾಗಿವೆ ಎಂದು ಅವರು ಹೇಳಿದರು. ಎಲ್ಲ ಸಚಿವಾಲಯಗಳು/ಇಲಾಖೆಗಳು ದತ್ತಾಂಶ ಆಡಳಿತ ಸಮಿತಿಗಳನ್ನು ರಚಿಸಬೇಕು, ದತ್ತಾಂಶ ಹಂಚಿಕೆ ಚೌಕಟ್ಟುಗಳನ್ನು ಪ್ರಕಟಿಸಬೇಕು, ಸದಾ ನವೀಕರಿಸಲ್ಪಡುವ ದತ್ತಾಂಶ ಸಂಗ್ರಹಗಳ ಪಟ್ಟಿಯನ್ನು ನಿರ್ವಹಿಸಬೇಕು ಹಾಗೂ ಎಪಿಐ ಸೇತು, data.gov.in, ಎನ್‌ ಡಿ ಎ ಪಿ, ಎಐ ಕೋಶ್, ಡಿಜಿಲಾಕರ್, ಎಂಟಿಟಿ ಲಾಕರ್, ಇ-ಸಾಂಖ್ಯಿಕಿ ಮತ್ತು ಮೈಕ್ರೋಡೇಟಾ ಪೋರ್ಟಲ್ ಮುಂತಾದ ಈಗಾಗಲೇ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ದತ್ತಾಂಶ ಹಂಚಿಕೆ ವೇದಿಕೆಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ವಿಕಸಿತ ಭಾರತ 2047ರ ದೃಷ್ಟಿಕೋನಕ್ಕೆ ಅನುಗುಣವಾಗಿ ಆಧುನಿಕ, ಸಮಗ್ರ, ಸ್ಪಂದನಶೀಲ ಮತ್ತು ಭವಿಷ್ಯಕ್ಕೆ ಸಿದ್ಧವಾದ ದತ್ತಾಂಶ ವ್ಯವಸ್ಥೆಯನ್ನು ನಿರ್ಮಿಸಲು ʼಸಂಪೂರ್ಣ ಸರ್ಕಾರʼದ ವಿಧಾನ ಅಗತ್ಯ ಎಂದು ಅವರು ಒತ್ತಿ ಹೇಳಿದರು.

ಶ್ರೀ ಎಸ್. ಕೃಷ್ಣನ್ ಅವರು ಮಾತನಾಡಿ, ಸಾಕ್ಷ್ಯಾಧಾರಿತ ನೀತಿ ರೂಪಣೆಯನ್ನು ಬಲಪಡಿಸಲು ಮತ್ತು ಆಡಳಿತವನ್ನು ಸುಧಾರಿಸಲು ಸಚಿವಾಲಯಗಳು/ಇಲಾಖೆಗಳ ನಡುವೆ ಪರಿಣಾಮಕಾರಿ ದತ್ತಾಂಶ ಹಂಚಿಕೆ, ಸಮನ್ವಯ ಮತ್ತು ಪರಸ್ಪರ ಕಾರ್ಯಸಾಧ್ಯತೆಯ ಮಹತ್ವವನ್ನು ಒತ್ತಿಹೇಳಿದರು. ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯ ಯಶಸ್ವಿ ಬಳಕೆಗೆ ಉತ್ತಮ ಗುಣಮಟ್ಟದ ದತ್ತಾಂಶ ಲಭ್ಯತೆ ಮೂಲಭೂತ ಅಗತ್ಯ ಎಂದು ಅವರು ಹೇಳಿದರು. ವೇಗವಾಗಿ ನಡೆಯುತ್ತಿರುವ ಡಿಜಿಟಲೀಕರಣ ಮತ್ತು ಆಡಳಿತಾತ್ಮಕ ದತ್ತಾಂಶದ ಹೆಚ್ಚುತ್ತಿರುವ ಲಭ್ಯತೆಯ ಹಿನ್ನೆಲೆಯಲ್ಲಿ ಸರ್ಕಾರಿ ದತ್ತಾಂಶವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿಹೇಳಿದರು. ಜನಕಲ್ಯಾಣದ ಉತ್ತಮ ಫಲಿತಾಂಶಗಳು, ನೀತಿ ರೂಪಣೆ ಮತ್ತು ಸರ್ಕಾರಿ ಸೇವೆಗಳ ವಿತರಣೆಯನ್ನು ಸುಧಾರಿಸಲು ಇಂತಹ ದತ್ತಾಂಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವತ್ತ ಪ್ರಯತ್ನಗಳು ಕೇಂದ್ರೀಕೃತವಾಗಬೇಕು ಎಂದು ಅವರು ಹೇಳಿದರು. ʼಸಂಪೂರ್ಣ ಸರ್ಕಾರʼದ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಸಚಿವಾಲಯಗಳು/ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಂಖ್ಯಿಕ ಅಧಿಕಾರಿಗಳು, ಇಂಡಿಯಾ ಎಐ ಮಿಷನ್‌ನ ತಜ್ಞರು, ಎನ್‌ ಐ ಸಿ ಸಿಬ್ಬಂದಿ ಮತ್ತು ಇತರ ದತ್ತಾಂಶ ವೃತ್ತಿಪರರು ಅಸ್ತಿತ್ವದಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಕಾರ್ಯದರ್ಶಿ ಡಾ. ಸೌರಭ್ ಗರ್ಗ್ ಅವರು ಸಭೆಯ ಹಿನ್ನೆಲೆಯನ್ನು ವಿವರಿಸುತ್ತಾ, ಪ್ರತ್ಯೇಕ ಇಲಾಖೆಗಳ ಪ್ರತ್ಯೇಕ ದತ್ತಾಂಶ ವ್ಯವಸ್ಥೆಗಳಿಂದ ಸಮಗ್ರ, ಪರಸ್ಪರ ಕಾರ್ಯಸಾಧ್ಯ ಹಾಗೂ ಸರ್ಕಾರವ್ಯಾಪಿ ದತ್ತಾಂಶ ವ್ಯವಸ್ಥೆಯತ್ತ ಸಾಗುವ ಅಗತ್ಯವನ್ನು ಒತ್ತಿಹೇಳಿದರು. ಇದು ವಿಕಸಿತ ಭಾರತ @2047ರ ದೃಷ್ಟಿಕೋನಕ್ಕೆ ಬೆಂಬಲ ನೀಡಲಿದೆ. ಪರಿಣಾಮಕಾರಿ ದತ್ತಾಂಶ ಬಳಕೆಗಾಗಿ ಪರಿಕಲ್ಪನೆಗಳು, ವ್ಯಾಖ್ಯಾನಗಳು, ವರ್ಗೀಕರಣಗಳು, ಗುರುತಿಸುವಿಕೆಗಳು, ಭೌಗೋಳಿಕ ವಿವರಗಳು, ಮೆಟಾಡೇಟಾ ಮತ್ತು ದತ್ತಾಂಶ ರಚನೆಗಳನ್ನು ಸಮನ್ವಯಗೊಳಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಸಾಂಖ್ಯಿಕ ಸಲಹೆಗಾರರು ಸಾಂಖ್ಯಿಕ ನಾಯಕತ್ವ ಮತ್ತು ಗುಣಮಟ್ಟ ಖಾತರಿಯಲ್ಲಿ ಹಾಗೂ ಮುಖ್ಯ ದತ್ತಾಂಶ ಅಧಿಕಾರಿಗಳು ದತ್ತಾಂಶ ಆಡಳಿತ ಮತ್ತು ಪರಸ್ಪರ ಕಾರ್ಯಸಾಧ್ಯತೆಯಲ್ಲಿ ವಹಿಸುವ ಪೂರಕ ಪಾತ್ರಗಳನ್ನು ಅವರು ವಿವರಿಸಿದರು. ರಾಷ್ಟ್ರೀಯ ದತ್ತಾಂಶ ಆಡಳಿತ ಸಮಿತಿ ಮತ್ತು ದತ್ತಾಂಶ ಸಮನ್ವಯತೆ ಕುರಿತ ಕ್ಯೂಪಿಆರ್ ಇವುಗಳಿಗೆ ಬೆಂಬಲ ನೀಡುತ್ತವೆ. “ದತ್ತಾಂಶಕ್ಕಾಗಿ ವಿನಂತಿಸುವ ಮೊದಲು ದತ್ತಾಂಶವನ್ನು ಪತ್ತೆಹಚ್ಚಿ” ಎಂಬ ವಿಧಾನವನ್ನು ಅನುಸರಿಸುವಂತೆ ಅವರು ಕರೆ ನೀಡಿದರು. ಸಮನ್ವಯತೆಯ, ಗುಣಮಟ್ಟ ಖಾತ್ರಿಪಡಿಸಿದ ಹಾಗೂ ಸಮರ್ಪಕವಾಗಿ ದಾಖಲಿಸಲಾದ ದತ್ತಾಂಶವು ಎಐ-ಸಿದ್ಧ ಸರ್ಕಾರಕ್ಕೆ ಮೂಲಭೂತ ಅಗತ್ಯ ಎಂದು ಅವರು ಹೇಳಿದರು. ನಿರಂತರ ಸಮನ್ವಯ, ಸಕ್ರಿಯ ದತ್ತಾಂಶ ಹಂಚಿಕೆ ಮತ್ತು ದತ್ತಾಂಶವನ್ನು ರಾಷ್ಟ್ರೀಯ ಆಸ್ತಿಯಾಗಿ ಸಾಮೂಹಿಕವಾಗಿ ಹೊಣೆಗಾರಿಕೆಯಿಂದ ನಿರ್ವಹಿಸುವಂತೆ ಅವರು ಕರೆ ನೀಡಿದರು.

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯಯದ ಮಹಾನಿರ್ದೇಶಕ (ದತ್ತಾಂಶ ಆಡಳಿತ) ಶ್ರೀ ಪಿ. ಆರ್. ಮೆಶ್ರಾಮ್ ಅವರು ಸ್ವಾಗತ ಭಾಷಣ ಮಾಡಿದರು. ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಾದ್ಯಂತ ದತ್ತಾಂಶ ಆಧಾರಿತ ಆಡಳಿತವನ್ನು ಬಲಪಡಿಸಲು ಮತ್ತು ಆಡಳಿತಾತ್ಮಕ ದತ್ತಾಂಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ದತ್ತಾಂಶ ಸಮನ್ವಯತೆ ಮತ್ತು ಪರಸ್ಪರ ಕಾರ್ಯಸಾಧ್ಯತೆಯ ಮಹತ್ವವನ್ನು ಅವರು ವಿವರಿಸಿದರು. ಸಾಂಪ್ರದಾಯಿಕ ದತ್ತಾಂಶ ಹಂಚಿಕೆಯನ್ನು ಮೀರಿ ಸಾಮಾನ್ಯ ವ್ಯಾಖ್ಯಾನಗಳು, ಮೆಟಾಡೇಟಾ, ವರ್ಗೀಕರಣಗಳು, ಗುರುತಿಸುವಿಕೆಗಳು ಮತ್ತು ಪರಸ್ಪರ ಕಾರ್ಯಸಾಧ್ಯ ವ್ಯವಸ್ಥೆಗಳ ಅಗತ್ಯವನ್ನು ಅವರು ಒತ್ತಿಹೇಳಿದರು. ಸಾಂಖ್ಯಿಕ ಗುಣಮಟ್ಟ, ದತ್ತಾಂಶ ಆಡಳಿತ ಮತ್ತು ಜವಾಬ್ದಾರಿಯುತ ದತ್ತಾಂಶ ನಿರ್ವಹಣೆಯನ್ನು ಖಚಿತಪಡಿಸುವಲ್ಲಿ ಸಾಂಖ್ಯಿಕ ಸಲಹೆಗಾರರು ಮತ್ತು ಮುಖ್ಯ ದತ್ತಾಂಶ ಅಧಿಕಾರಿಗಳ ಪೂರಕ ಪಾತ್ರಗಳನ್ನು ಅವರು ವಿವರಿಸಿದರು. ದತ್ತಾಂಶವನ್ನು ಎಐ ಗೆ ಸಿದ್ಧವಾಗುವಂತೆ ಮತ್ತು ಮಷೀನ್‌ ರೀಡಬಲ್ ರೀತಿಯಲ್ಲಿ ರೂಪಿಸುವ ಮಹತ್ವವನ್ನು ಅವರು ಒತ್ತಿಹೇಳಿದರು. ಮುಂದಿನ ಹಾದಿಯು ರಚನಾತ್ಮಕ ಪರಸ್ಪರ ಕಾರ್ಯಸಾಧ್ಯತೆಯಿಂದ ಅರ್ಥಪೂರ್ಣ ಪರಸ್ಪರ ಕಾರ್ಯಸಾಧ್ಯತೆಯತ್ತ, ಪ್ರತ್ಯೇಕ ದತ್ತಾಂಶ ಸಂಗ್ರಹಗಳಿಂದ ಪರಸ್ಪರ ಕಾರ್ಯಸಾಧ್ಯ ಮತ್ತು ಸಂಪರ್ಕಿತ ದತ್ತಾಂಶ ವ್ಯವಸ್ಥೆಗಳತ್ತ ಹಾಗೂ ದತ್ತಾಂಶ ಲಭ್ಯತೆಯಿಂದ ದತ್ತಾಂಶ ಸಿದ್ಧತೆಯತ್ತ ಸಾಗುವುದಾಗಿದೆ ಎಂದು ಅವರು ಹೇಳಿದರು.

ತಾಂತ್ರಿಕ ಅಧಿವೇಶನಗಳಲ್ಲಿ ಎನ್ ಎಮ್‌ ಡಿ ಎಸ್ ಮತ್ತು ಕ್ಯೂಪಿಆರ್ ಪೋರ್ಟಲ್‌ಗಳ ಮೂಲಕ ದತ್ತಾಂಶ ಸಮನ್ವಯತೆ; ಮಾದರಿ ದತ್ತಾಂಶ ಹಂಚಿಕೆ ಚೌಕಟ್ಟು ಮತ್ತು ಡಿಜಿಟಲ್ ದತ್ತಾಂಶ ಹಂಚಿಕೆ ವ್ಯವಸ್ಥೆಗಳು; ದತ್ತಾಂಶ ಪ್ರತ್ಯೇಕತೆಯನ್ನು ನಿವಾರಿಸುವ ಸಾಂಸ್ಥಿಕ ವಿಧಾನಗಳು; ಎಐ-ಸಿದ್ಧ ದತ್ತಾಂಶ ವ್ಯವಸ್ಥೆಗಳು; ಡೇಟಾ ಧಾರಾ ವಿಧಾನ; ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ; UPYOG; ಆರೋಗ್ಯ ದತ್ತಾಂಶ; ಮತ್ತು ಆರ್ಥಿಕತೆಯಲ್ಲಿ ಎಮ್‌ ಡಿ ಒ ಕೊಡುಗೆಯನ್ನು ಅಳೆಯಲು ವಿಷಯಾಧಾರಿತ ಹಾಗೂ ವಿಸ್ತೃತ ಸಿದ್ಧತೆ ಕುರಿತು ಪ್ರಸ್ತುತಿಗಳನ್ನು ನೀಡಲಾಯಿತು.

ಯಾವುದೇ ಸಚಿವಾಲಯದಿಂದ ಪ್ರಸಾರಗೊಳ್ಳುವ ಆಡಳಿತಾತ್ಮಕ ದತ್ತಾಂಶವನ್ನು ಎಐ-ಸಿದ್ಧ, ದತ್ತಾಂಶ ಆಧಾರಿತ ಆಡಳಿತಕ್ಕಾಗಿ ಎಲ್ಲ ಸಚಿವಾಲಯಗಳು ಸಮನ್ವಯಗೊಳಿಸಿ, ಹಂಚಿಕೊಂಡು ಮತ್ತು ಬಳಸಿಕೊಳ್ಳುವ ಮೂಲಕ ಭಾರತವು ಹೇಗೆ ತನ್ನ ವ್ಯವಸ್ಥೆಯನ್ನು ಬಲಪಡಿಸಬಹುದು ಎಂಬುದನ್ನು ಪ್ರಸ್ತುತಿಗಳು ವಿವರಿಸಿದವು. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತನ್ನ ಪ್ರಮುಖ ಉಪಕ್ರಮಗಳಾದ ಎನ್ ಎಮ್‌ ಡಿ ಎಸ್ 2.0, ಎಸ್‌ ಕ್ಯೂ ಎ ಎಫ್, ಸಾಮಾನ್ಯ ಗುರುತಿನ ಸಂಖ್ಯೆಗಳು ಮತ್ತು ಕ್ಯೂಪಿಆರ್ ಪೋರ್ಟಲ್‌ ಗಳನ್ನು ಪ್ರದರ್ಶಿಸಿತು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸುರಕ್ಷಿತ ದತ್ತಾಂಶ ಹಂಚಿಕೆಗಾಗಿ ಮಾದರಿ ದತ್ತಾಂಶ ಹಂಚಿಕೆ ಚೌಕಟ್ಟು ಮತ್ತು ಡಿಜಿಟಲ್ ವೇದಿಕೆಗಳನ್ನು ಪ್ರಸ್ತುತಪಡಿಸಿತು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಫಲಾನುಭವಿ ಪರಿಶೀಲನೆಯ ಬಳಕೆಯ ಉದಾಹರಣೆಗಳನ್ನು ಒಳಗೊಂಡಂತೆ ಎಪಿಐ ಆಧಾರಿತ ಪರಸ್ಪರ ಕಾರ್ಯಸಾಧ್ಯತೆಯನ್ನು ಪ್ರದರ್ಶಿಸಿತು. ರಾಷ್ಟ್ರೀಯ ನಗರ ಡಿಜಿಟಲ್ ಮಿಷನ್ ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರದ ಡೇಟಾ ಧಾರಾ ಸಮನನವಯತೆಯ ದತ್ತಾಂಶವು ನೈಜ-ಸಮಯದ ನಗರ ಆಡಳಿತ ಮತ್ತು ಸುಧಾರಿತ ಸೇವಾ ವಿತರಣೆಗೆ ಹೊಂದಿರುವ ಸಾಮರ್ಥ್ಯವನ್ನು ತೋರಿಸಿಕೊಟ್ಟವು. ಇತರ ಅಧಿವೇಶನಗಳಲ್ಲಿ ಪರಸ್ಪರ ಕಾರ್ಯಸಾಧ್ಯ ಗಡಿಯಾಚೆಗಿನ ವ್ಯಾಪಾರ ದತ್ತಾಂಶ, ಎಐಕೋಶ್, ಆರೋಗ್ಯ ದತ್ತಾಂಶದ ಸಮನ್ವಯತೆ ಮತ್ತು ಎಸ್‌ ಎನ್‌ ಎ 2025 ಚೌಕಟ್ಟಿಗೆ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯಯದ ಪರಿವರ್ತನೆ ಕುರಿತು ಚರ್ಚಿಸಲಾಯಿತು. ಮೌಲ್ಯ ಸೃಷ್ಟಿಸಲು ದತ್ತಾಂಶವನ್ನು ಕೇಂದ್ರೀಕೃತಗೊಳಿಸುವ ಅಗತ್ಯವಿಲ್ಲ; ಸಾಮಾನ್ಯ ಮಾನದಂಡಗಳು, ಸಾಮಾನ್ಯ ವಿಶಿಷ್ಟ ಗುರುತಿನ ಸಂಖ್ಯೆಗಳು, ಎಪಿಐಗಳು ಮತ್ತು ಆಡಳಿತ ವ್ಯವಸ್ಥೆಗಳ ಬಳಕೆಯಿಂದ ವಿಕೇಂದ್ರೀಕೃತ ದತ್ತಾಂಶ ವ್ಯವಸ್ಥೆಗಳ ನಡುವೆಯೂ ಪರಸ್ಪರ ಕಾರ್ಯಸಾಧ್ಯತೆಯನ್ನು ಸಾಧಿಸಬಹುದು ಎಂಬುದು ಪ್ರಮುಖ ಸಂದೇಶವಾಗಿತ್ತು. ಇಲಾಖೆಗಳ ದತ್ತಾಂಶದ ಮಾಲೀಕತ್ವವನ್ನು ಉಳಿಸಿಕೊಂಡು, ಅದರೊಂದಿಗೆ ಗೌಪ್ಯತೆ, ಭದ್ರತೆ ಮತ್ತು ಜವಾಬ್ದಾರಿಯುತ ದತ್ತಾಂಶ ಹಂಚಿಕೆಯನ್ನು ಖಚಿತಪಡಿಸುವ ಮಹತ್ವವನ್ನು ಚರ್ಚೆಗಳು ಒತ್ತಿಹೇಳಿದವು.

ಸಾಕ್ಷ್ಯಾಧಾರಿತ ಆಡಳಿತಕ್ಕಾಗಿ ಆಧುನಿಕ, ಸಮನ್ವಯತೆಯ, ಪರಸ್ಪರ ಕಾರ್ಯಸಾಧ್ಯವಾದ ಮತ್ತು ದತ್ತಾಂಶ ಆಧಾರಿತ ರಾಷ್ಟ್ರೀಯ ದತ್ತಾಂಶ ವ್ಯವಸ್ಥೆಯನ್ನು ನಿರ್ಮಿಸಲು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹಾಗೂ ಭಾಗವಹಿಸಿದ ಸಚಿವಾಲಯಗಳು/ಇಲಾಖೆಗಳು ಹೊಂದಿರುವ ಬದ್ಧತೆಯನ್ನು ಕಾರ್ಯಾಗಾರವು ಪುನರುಚ್ಚರಿಸಿತು.

 

*****

 


(ಪ್ರಕಟಣೆ ಐ.ಡಿ.: 2308099) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English