ಸಂಸದೀಯ ವ್ಯವಹಾರಗಳ ಸಚಿವಾಲಯ

ಆಡಳಿತದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮಾಡಿದೆ - ಶ್ರೀ ಪ್ರಲ್ಹಾದ್ ಜೋಶಿ

Posted On: 16 MAY 2023 5:16PM by PIB Bengaluru

       ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಆಡಳಿತದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದರು. ಈ ಕ್ರಮಗಳು ಶಿಕ್ಷಣ, ಕೌಶಲ್ಯ ತರಬೇತಿ, ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ಪ್ರವೇಶವನ್ನು ಸುಧಾರಿಸಲು ಸಹಾಯ ಮಾಡಿವೆ. ಪರಿಣಾಮವಾಗಿ ಭಾರತದ ಯುವಕರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಉತ್ತಮವಾಗಿ ಸಜ್ಜುಗೊಂಡಿದ್ದಾರೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ರೋಜ್ಗಾರ್ ಮೇಳದ ಅಂಗವಾಗಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರನ್ನುದ್ದೇಶಿಸಿ ಸಚಿವರು ಮಾತನಾಡಿದರು.

ಮಂಜೂರಾದ ಹುದ್ದೆಗಳಿಗೆ ಬದಲಾಗಿ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀ ಪ್ರಹ್ಲಾದ್ ಜೋಶಿ ಅವರು ಹೇಳಿದರು. ಕಲ್ಲಿದ್ದಲು ಮತ್ತು ಗಣಿ ಸಚಿವಾಲಯವು ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗಣಿಗಾರಿಕೆ ವಲಯಕ್ಕೆ ಸ್ವಲ್ಪ ಉತ್ತೇಜನವು ಇಡೀ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಎಲ್ಲೆಡೆ ಅವಕಾಶಗಳು ಸೃಷ್ಟಿಯಾಗುತ್ತಿವೆ. ಭಾರತದ ಭವಿಷ್ಯವು ಉಜ್ವಲವಾಗಿ ಕಾಣುತ್ತಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅವರ ನೀತಿಗಳ ನಿರಂತರ ಬೆಂಬಲದೊಂದಿಗೆ, ಭಾರತವು ತನ್ನ ಆರ್ಥಿಕ ಬೆಳವಣಿಗೆಯನ್ನು ಮುಂದುವರಿಸಲು ಮತ್ತು ವ್ಯಾಪಾರೋದ್ಯಮಗಳು ಮತ್ತು ಯುವಕರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಸಜ್ಜಾಗಿದೆ.

ಭಾರತವು ಈಗ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಸಚಿವರು ಹೇಳಿದರು. ಇದು ವಿದೇಶಿ ಹೂಡಿಕೆಗೆ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿದೆ. ಇಂದು ಸರ್ಕಾರಕ್ಕೆ ಸೇರುವ ಕರ್ಮಯೋಗಿಗಳಿಗೆ ಸರ್ಕಾರಿ ನೌಕರರಿಗಾಗಿ ʼಕರ್ಮಯೋಗಿʼ ಪ್ರಾರಂಭ ಎಂಬ ವಿಶೇಷ ಕೋರ್ಸ್ ನೊಂದಿಗೆ ತರಬೇತಿ ನೀಡಲಾಗುವುದು. ಇದು ಹೊಸದಾಗಿ ಸೇರ್ಪಡೆಗೊಂಡವರಿಗೆ ಕಾರ್ಯಸ್ಥಳದ ನೈತಿಕತೆ, ಸಮಗ್ರತೆ, ಮಾನವ ಸಂಪನ್ಮೂಲ ನೀತಿಗಳ ಕ್ಷೇತ್ರಗಳಲ್ಲಿ ತರಬೇತಿ ನೀಡುತ್ತದೆ ಮತ್ತು ಹೊಸ ಪಾತ್ರಗಳಿಗೆ ಸುಗಮವಾಗಿ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ರೋಜ್ಗಾರ್ ಮೇಳವನ್ನುದ್ದೇಶಿಸಿ ಭಾಷಣ ಮಾಡಿದರು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ  71,000 ನೇಮಕಾತಿ ಪತ್ರಗಳನ್ನು ವಿತರಿಸಿದರು.

ದೇಶಾದ್ಯಂತ 45 ಸ್ಥಳಗಳಲ್ಲಿ ರೋಜ್ಗಾರ್ ಮೇಳವನ್ನು ನಡೆಸಲಾಯಿತು, ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇಮಕಾತಿಗಳು ನಡೆದವು. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಹೊಸ ನೇಮಕಾತಿಗಳು ಗ್ರಾಮೀಣ ಡಾಕ್ ಸೇವಕರು, ಇನ್ಸ್ ಪೆಕ್ಟರ್ ಆಫ್ ಪೋಸ್ಟ್ , ವಾಣಿಜ್ಯ ಮತ್ತು ಟಿಕೆಟ್ ಕ್ಲರ್ಕ್, ಜೂನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್, ಜೂನಿಯರ್ ಅಕೌಂಟ್ಸ್ ಕ್ಲರ್ಕ್, ಟ್ರ್ಯಾಕ್ ಮೆಂಟೇನರ್, ಸಹಾಯಕ ಸೆಕ್ಷನ್ ಆಫೀಸರ್, ಲೋವರ್ ಡಿವಿಷನ್ ಕ್ಲರ್ಕ್, ಉಪ ವಿಭಾಗೀಯ ಅಧಿಕಾರಿ, ತೆರಿಗೆ ಸಹಾಯಕರು, ಸಹಾಯಕ ಜಾರಿ ಅಧಿಕಾರಿ, ಇನ್ಸ್ ಪೆಕ್ಟರ್ ಗಳು, ನರ್ಸಿಂಗ್ ಅಧಿಕಾರಿಗಳು, ಸಹಾಯಕ ಭದ್ರತಾ ಅಧಿಕಾರಿಗಳು, ಫೈರ್ ಮ್ಯಾನ್, ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್, ಅಸಿಸ್ಟೆಂಟ್ ಆಡಿಟ್ ಆಫೀಸರ್ ಮುಂತಾದ ವಿವಿಧ ಹುದ್ದೆಗಳಿಗೆ ಸೇರಲಿದ್ದಾರೆ. ವಿಭಾಗೀಯ ಲೆಕ್ಕಾಧಿಕಾರಿ, ಲೆಕ್ಕ ಪರಿಶೋಧಕ, ಕಾನ್ಸ್ ಸ್ಟೇಬಲ್, ಹೆಡ್ ಕಾನ್ಸ್ ಸ್ಟೇಬಲ್, ಸಹಾಯಕ ಕಮಾಂಡೆಂಟ್, ಪ್ರಾಂಶುಪಾಲರು, ತರಬೇತಿ ಪಡೆದ ಪದವೀಧರ ಶಿಕ್ಷಕರು, ಸಹಾಯಕ ರಿಜಿಸ್ಟ್ರಾರ್, ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಇತರರು ಇದ್ದರು.

ಉದ್ಯೋಗ ಸೃಷ್ಟಿಗೆ ಅತ್ಯುನ್ನತ ಆದ್ಯತೆ ನೀಡುವ ಪ್ರಧಾನಮಂತ್ರಿ ಅವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್ಗಾರ್ ಮೇಳ ಒಂದು ಹೆಜ್ಜೆಯಾಗಿದೆ. ಈ ಉಪಕ್ರಮವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಮತ್ತು ಯುವಕರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ.

ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಶ್ರೀ ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಶ್ರೀ ತೇಜಸ್ವಿ ಸೂರ್ಯ ಮತ್ತು ಕರ್ನಾಟಕ ವಲಯದ ಸಿಪಿಎಂಜಿಯ ಶ್ರೀ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು

******



(Release ID: 1924565) Visitor Counter : 69


Read this release in: English